ಶನಿವಾರ, ಜುಲೈ 19, 2014



ನನ್ನ ಮನಸ್ಸಿಗೆ ಅನ್ನಿಸಿದ್ದು
      ನನಗೆ ಅನ್ನಿಸುವುದು ಹೀಗೆ. ಇತ್ತೀಚೆಗೆ ಯಕ್ಷಗಾನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತಿದೆ, ಆಟ ನೋಡುತ್ತಿದ್ದರೆ ನಾನು ಏನನ್ನು ನೋಡುತ್ತಾ ಇದ್ದೇನೆ ಎಂಬುದು ಮರೆತುಹೋಗುವಷ್ಟು.ಮುಖ್ಯವಾಗಿ ಕುಣಿತ ಭಾಗವತಿಕೆಯ ಭಾಗಗಳಲ್ಲಿ. ಇದೆಲ್ಲಾ ಅನಿವಾರ್ಯವಾಗಿತ್ತೇ? ಆಗಿತ್ತಾದರೆ ಯಾರಿಗೆ? ಯಾಕೆ? ಅದೂ, ಹೇಗೆ ಬೇಕಾದರೂ ಕುಣಿಯಬಹುದು, ಏನು ಬೇಕಾದರೂ ಹಾಡಬಹುದು ಎಂಬಷ್ಟರ ಮಟ್ಟಿಗೆ.
        ಕಲೆ ನಿಂತ ನೀರಾಗಬಾರದು ಬದಲಾವಣೆಯಾಗುತ್ತಲೇ ಇರಬೇಕು ಹೊಸಹೊಸ ದೃಷ್ಟಿ ಸೃಷ್ಟಿಗಳು  ಇರಲೇಬೇಕು ಆದರೆ ಅದು ಆ ಕಲೆಗೆ ಪೂರಕವಾಗಿರಬೇಕು ಅಂತಹಾ ಬದಲಾವಣೆಗಳಲ್ಲಿ ಗಟ್ಟಿತನ ಇದ್ದರೆ ಸತ್ವ ಇದ್ದರೆ ಅದು ಬಹು ಕಾಲ ಉಳಿದು ಕಲೆಯ ಜೊತೆಗೇ ಬೆರೆತುಹೋಗಿ ಉಳಿದು ಬಿಡುತ್ತದೆ. ಇಲ್ಲದಿದ್ದರೆ ಅದೊಂದು ಕೇವಲ ಪ್ರಯೋಗವೋ ಪ್ರಯತ್ನವೋ ಆಗಿಬಿಟ್ಟು ಸ್ವಲ್ಪ ಕಾಲದಲ್ಲಿಯೇ ಅಳಿದುಹೋಗಿ ನೆನಪಾಗಿ ಉಳಿದು ಬಿಡುತ್ತದೆ. ಹಾಗಾದರೆ ಇತ್ತೀಚಿನ ಈ  ಆರೇಳು ವರ್ಷಗಳಲ್ಲಿ ಯಕ್ಷಗಾನದಲ್ಲಿ ಆದ ಬದಲಾವಣೆಗಳು ಇಷ್ಟು ಕಾಲ ಉಳಿದು ಮುಂದುವರಿಯುತ್ತಿದೆ ಎಂದ ಮಾತ್ರಕ್ಕೆ ಅವು ಯಕ್ಷಗಾನ ಒಳಿತಿಗೆ ಬೇಕಾದ ಬದಲಾವಣೆಗಳೇ? ಯಕ್ಷಗಾನಕ್ಕೆ ಅದರದ್ದೆ ಆದ ರಾಗಗಳಿವೆ ಮಟ್ಟುಗಳಿವೆ ಎಂದು ಪ್ರತಿಪಾದಿಸಿದ ವಿದ್ವಾಂಸರು ನಾಚಿ ತಲೆ ತಗ್ಗಿಸುವಂತೆ ಮಾಡುವ ಅದೆಷ್ಟೋ ರಾಗಗಳು ಹಿಂದುಸ್ಥಾನಿ ಕರ್ನಾಟಕ ಸಂಗೀತ ಹೆಚ್ಚೇಕೆ ಹೊಸಹೊಸ ಸಿನಿಮಾದ ರಾಗಗಳು ಜನಪದ ಪದಗಳು ಅನಾಮತ್ತಾಗಿ ಆಟಗಳಲ್ಲಿ ಬಳಸಲಾಗುತ್ತಿದೆ. ಈವರೆಗೆ ಕಾಣದ ಮನಸ್ಸಿಗೆ ಒಪ್ಪದ ಯಕ್ಷಗಾನಕ್ಕೆ ಹೊಂದದ ವಿಕಾರವಾದ, ನಾಟ್ಯಶಾಸ್ತ್ರದಲ್ಲೂ ಸಿಕ್ಕದ ಕುಣಿತಗಳು ಇಂದು ಪ್ರೇಕ್ಷಕರನ್ನು ದಂಗುಬಡಿಸುತ್ತಿದೆ. ಬೇಕಾದವರು ನೋಡಲಿ ಬೇಡದವರು ಬಿಡಲಿ ಎಂಬ ದೋರಣೆ. ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ವಸ್ತುಗಳು ಸುಲಭವಾಗಿ ಜನರನ್ನು ತಲುಪುತ್ತದೆ. ಅಂತಹವರಿಗೋಸ್ಕರ ತಾವು ಕಲಿತಿರುವುದನ್ನು ಗಾಳಿಗೆ ತೂರಿ ಹೊಸತು ಕೊಡುವ ಹುಚ್ಚಿನಿಂದ ಭ್ರಮೆಯಿಂದ  ಇಷ್ಟೆಲ್ಲಾ ಮಾಡಬೇಕೆ?
          ಇಂತಹಾ ಕಲಾವಿದರನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ? ಒಪ್ಪಿಕೊಳ್ಳದಿದ್ದರೆ ಏನು ಮಾಡಬೇಕು? ಹೇಗೆ ಸರಿಪಡಿಸಬೇಕು. ಕಲೆ ಒಬ್ಬರ ಸ್ವತ್ತಲ್ಲ ಯಕ್ಷಗಾನದಲ್ಲಿಯಂತೂ ಏನು ಬೇಕಾದರೂ ಮಾಡಬಹುದು. ಒಮ್ಮೆ ತೀರಾ ಗ್ರಾಮ್ಯವಾಗಿದ್ದ ಜಾಳುಜಾಳಾಗಿದ್ದ ಈ ಕಲೆಯನ್ನು ಸುಮಾರು ೧೯೬೮- ೭೨ ರ ಹಾಗೆ ಎಲ್ಲ ಕಲಾವಿದರನ್ನು ಕಲೆಹಾಕಿ ಸಮಾಲೋಚನೆ ಮಾಡಿ ಒಂದು ಶಿಸ್ತುಬದ್ದ ವ್ಯವಸ್ಥೆಗೆ ತಂದ ಶಿವರಾಮ ಕಾರಂತರಂತವರು ಇನ್ನೊಮ್ಮೆ ಹುಟ್ಟಿ ಬರುವುದು ಸಾಧ್ಯವೇ?.ಬಂದರೂ ಇನ್ನೊಮ್ಮೆ ಅಂತಹಾ ಸಂಘಟನೆ ಸಾಧ್ಯವೇ? ಅಥವಾ ನಾವು ಕಾಣುವ ಕಣ್ಣಿನಲ್ಲೇ ದೋಷವಿದೆಯೇ? ಅಥವಾ…
         ಇತ್ತೀಚೆಗೆ ಯಕ್ಷಗಾನದ ಒಳ್ಳೆಯ ಸಂಸ್ಕಾರ ಇರುವ ಒಂದು ಗುಂಪು ಎಲ್ಲಿಯೋ ನಡೆಯುತ್ತಿರುವ ಒಂದು ಯಕ್ಷಗಾನ ಸ್ಪರ್ಧೆಯನ್ನು ಬಹಿಷ್ಕರಿಸಿ ಪ್ರತಿಭಟಿಸುವ ಹವಣಿಕೆಯಲ್ಲಿ ಇದೆ ಎಂದು ಕೇಳಿ,ತೀರಾ ಬೇಸರವಾಯಿತು. ಯಾಕೆಂದರೆ ಜಗತ್ತಿನ ಎಲ್ಲಾಕ್ಷೇತ್ರಗಳಲ್ಲೂ ಸ್ಪರ್ಧೆ, ಬಹುಮಾನ ಇತ್ಯಾದಿಗಳು ಇರುತ್ತವೆ. ಅದರ ನಿಯಮಾವಳಿಗಳನ್ನು ಆಯೋಜಿಸುವವರು ಮಾಡಿಕೊಂಡು ಸ್ಪರ್ಧಿಗಳಿಗೆ ಆಹ್ವಾನ ನೀಡುತ್ತಾರೆ, ಒಪ್ಪಿಗೆ ಇರುವವರು ಸ್ಪರ್ಧಿಸಬಹುದು. ಸ್ಪರ್ಧಿಗಳೆಲ್ಲಾ ಬಹುಮಾನ ಸಿಗಲೇ ಬೇಕೆಂದರೆ ಅದು ಸ್ಪರ್ಧೆ ಅಂತ ಆಗುವುದೇ ಇಲ್ಲ. ಒಂದು ಮುಖ್ಯವಾದ ಅಂಶವೆಂದರೆ ಆ ಸ್ಪರ್ಧೆ ನಿಸ್ಪಕ್ಷಪಾತವಾಗಿ ನಡೆಯಬೇಕು ಎಂಬುದು. ಸ್ಪರ್ಧೆಯ ನಿಯಮಾವಳಿ ಅಸ್ಪಷ್ಟವಿದ್ದರೆ ಒಪ್ಪಿಗೆ ಇಲ್ಲ ಅಂತದರೆ ಅವರು ಭಾಗವಹಿಸದಿದ್ದರಾಯಿತು. ಅಷ್ಟಕ್ಕೇ ಆ ಸ್ಪರ್ಧೆಯಿಂದ ಆ ಕಲೆಗೇ ಅನ್ಯಾಯವಾಗುತ್ತದೆ ಎಂದು ತಿಳಿಯಬೇಕಾಗಿಲ್ಲ. ಯಾಕೆಂದರೆ ಯಾವುದೇ ಒಂದು ಕಲೆ ಕಾಲಾವಿದರ ಸ್ವತ್ತಲ್ಲ. ಅದರ ಬದಲು ಆ ಕಲೆಯನ್ನು ಅದರಂತೆ ಉಳಿಸುವುದು ಅಥವಾ ತನ್ನ ಕೊಡುಗೆ ನೀಡಿ ಇನ್ನೂ ವಿಜ್ರಂಭಿಸುವಂತೆ ಮಾಡುವುದು ಕಲಾವಿದನ ಪ್ರೇಕ್ಷಕನ ಜವಾಬ್ದಾರಿಯಾಗಿರುತ್ತದೆ. ಆದರೆ ಇಂತಹಾ ಸ್ಪರ್ಧೆಗಳು ಒಂದು ಘಟನೆ, ಒಂದು ಕಾಲಘಟ್ಟಕ್ಕೆ ಸೀಮಿತವಾಗಿರುತ್ತದೆ. ಅದರಿಂದ ಕಲೆಗೆ ನಷ್ಟವಾಗುವುದಿಲ್ಲ ಕೆಡುವುದಿಲ್ಲ. ಇಂತಹಾ ಸ್ಪರ್ಧೆಗೆ ಕಲಾವಿದರು ದುಡ್ಡು ಹಾಕುವುದಿಲ್ಲ . ಒಂದು ಕೇಸೆಟ್ಟೋ ಪ್ರೋಗ್ರಾಮೋ ಮಾಡಿದಂತೆ ಅದರ ಲಾಭ ನಷ್ಟಗಳು ಸಂಘಟಕನ ತಲೆಯ ಮೇಲೆ ಬೀಳುತ್ತದೆ. ಅಷ್ಟಾಗಿ ಈ ಜಗತ್ತಿನಲ್ಲಿ ಒಂದು ಸ್ಪರ್ಧೆಯನ್ನು ಎಲ್ಲರಿಗೂ ಒಪ್ಪಿತವಾಗುವಂತೆ ನಡೆಸುವುದು ಅಸಾಧ್ಯವೇ ಸರಿ.ವಿರೋದ ಆಬಾಸಗಳು ಇದ್ದೇ ಇರುತ್ತವೆ.
        ಹಾಗಾಗಿ ನನಗೆ ಅನ್ನಿಸುವುದೇನೆಂದರೆ  ಇಂತಹಾ ಪ್ರತಿಭಟನೆ ಮಾಡುವ ಉತ್ಸಾಹವಿರುವವರು ಯಕ್ಷಗಾನಕ್ಕೆ ಶಾಶ್ವತವಾಗಿ ಹಾನಿ ಮಾಡುವ ಮೇಲೆಹೇಳಿದಂತಹಾ ಕಲಾವಿದರ ಭಾಗವತರ ವಿರುದ್ಧ ಪ್ರತಿಭಟನೆ ಮಾಡಬಹುದು. ಇಂತಹಾ ಗುಂಪು ದೊಡ್ಡದಿದ್ದಷ್ಟು ಕಲೆಯ ಕುಲಗೆಡಿಸುವವರನ್ನು ಎದುರಿಸುವುದು ಸುಲಬ. ಒಂದಷ್ಟು ಸಮರ್ಥರು ಕಲಾವಿದರು ಗೌರವಿಸುವಂತವರು ಇದರಲ್ಲಿ ಸೇರಿಕೊಂಡರೆ ಮತ್ತಷ್ಟು ಅನುಕೂಲ. ಕಲಾವಿದರನ್ನು ಕರೆಸಿ ಮನವೊಲಿಸುವುದು ಸರಳ. ಪಠ್ಯಮಾಡುವುದು ಮತ್ತೊಂದು ಮಾಡುವುದಕ್ಕಿಂತ ಇದು ಈಗ ಹೆಚ್ಚು ಪ್ರಸ್ತುತ. ಪ್ರದರ್ಶನದ ವೇಳೆಯೇ ಅದನ್ನು ನಿಲ್ಲಿಸಿ ತಪ್ಪನ್ನು ಹೇಳುವವರು ಹಿಂದೆ ಇದ್ದರೆಂದು ಕೇಳಿದ್ದೇನೆ. ಆದರೆ ಈಗ ಎಲ್ಲಿದ್ದಾರೆ? ಯಾರಿದ್ದಾರೆ ? ಹೇಳಿದರೆ ಯಾರು ಕೇಳುತ್ತಾರೆ?.  ಹೇಳುವವರಿಗೂ ಗೊತ್ತಿರಬೇಕಾದದ್ದು ಅಷ್ಟೇ ಮುಖ್ಯ. ಮತ್ತು ಅವರಿಗೆ ತನಗೆ ಗೊತ್ತಿದ್ದದ್ದೇ ಸರಿ ಎಂಬ ಧೋರಣೆಯೂ ಇರಬಾರದು. ಅಗತ್ಯದ ಬದಲಾವಣೆಯನ್ನು ಒಪ್ಪಿಕೊಂಡು ಒಟ್ಟಿಗೇ ಸಮಾಲೋಚನೆ ಮಾಡಿ ತೀರ್ಮಾನ ಮಾಡುವ ಅದನ್ನು ಎಲ್ಲರೂ ಒಪ್ಪುವಂತೆ ಮಾಡುವ ತಾಕತ್ತು ಇರುವವರಾಗಬೇಕಾದ್ದು ಮುಖ್ಯ. ಇದಮಿತ್ತಂ ಅಂತ ಮಾಡಬೇಕಾಗಿಲ್ಲ. ಇದಕ್ಕೆ ಎಷ್ಟುಮಂದಿ ಜೊತೆಗೂಡಲು ಸಿದ್ಧರಿದ್ದೀರಿ? ಅಭಿಯಾನಕ್ಕೆ ಸಿದ್ಧರಾಗಿ. ನಾನೂ ನಿಮ್ಮನ್ನು ಸೇರಿಕೊಳ್ಳುತ್ತೇನೆ. ಮುಂದೆ ಬನ್ನಿ ನೋಡುವ.
ನಿಮ್ಮ
ದಿನೇಶ ಉಪ್ಪೂರ