ಮಂಗಳವಾರ, ಸೆಪ್ಟೆಂಬರ್ 25, 2018

ದಿನೇಶ ಉಪ್ಪೂರ:

ಕಥನದೊಳಗೆ - 5

*ತೀರ್ಪು*

ಆವತ್ತು ಶಾರದಾ ಕಲ್ಯಾಣ ಮಂಟಪದಲ್ಲಿ ಊರಿನ ಸಂಬಂಧಿಕರ ಮನೆಯವರೊಬ್ಬರ ಮಗನ ಮದುವೆ. ಆಫೀಸಿನ ಕೆಲಸದ ಮಧ್ಯ ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ಹೋಗಿ ಒಂದು ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬರಬೇಕಾಗಿತ್ತು. ಗಡಿಬಿಡಿಯಲ್ಲಿ ಎದುರಿಗೆ ಸಿಕ್ಕ ಪರಿಚಯದವರನ್ನು, "ಹ್ವಾಯ್ ಹ್ಯಾಂಗಿದ್ರಿ? ಎಲ್ಲ ಸೌಖ್ಯವಾ?" ಎಂದು ನಕ್ಕು ಮಾತಾಡಿಸುತ್ತಾ, ಅವರು ಉತ್ತರಕೊಡುವ ಮೊದಲೇ ಕೈ ಎತ್ತಿ, "ಬತ್ತೆ ಅಕಾ" ಅಂತ ಹೇಳಿ, ಮಂಟಪಕ್ಕೆ ಹೋಗಿ ಅಲ್ಲಿಯ ಪೋಟೋಗ್ರಾಫರ್ ಮಧ್ಯ ನುಸುಳಿ ಮದುಮಗನ ತಲೆಯ ಮೇಲೆ ಅಕ್ಷತೆಕಾಳು ಹಾಕಿದೆ.
ಊಟಕ್ಕೆ ಇನ್ನೂ ರೆಡಿ ಆಗಿಲ್ಲ ಎಂಬುದನ್ನು ತಿಳಿದು,ಅಲ್ಲಿಯೇ ಹಾಲ್ ನ ಬದೀಯ ಒಂದು ಕುರ್ಚಿಯಲ್ಲಿ ಕುಳಿತು ಸುಮ್ಮನೇ ಸುತ್ತಲೂ ನೋಡಿದೆ.
ಒಬ್ಬರು ಸುಮಾರು ಎಪ್ಪತ್ತರ ಪ್ರಾಯದ ಮುದುಕರತ್ತ ನನ್ನ ದೃಷ್ಠಿ ನೆಟ್ಟಿತು. ಹೌದು! ಅವರೇ ಐತಾಳರು, ಪುಟ್ಟಯ್ಯ ಐತಾಳರು. ನಮ್ಮ ಮನೆಗೆ ಪುರೋಹಿತ್ಯಕ್ಕೆ ಆಗಾಗ ಬರುತ್ತಿದ್ದರು. ಸೊಂಟಕ್ಕೆ ಒಂದು ಪಾಣಿಪಂಚೆ, ಹೆಗಲಿನ ಮೇಲೆ ಒಂದು ಮಸುಕು ಪಾಣಿಪಂಚೆ. ಎದೆಗೂಡು ಕಾಣುವಂತಹ ತೆಳ್ಳಗಿನ ಶರೀರ. ಆದರೆ ಕಂಚಿನ ಕಂಠ. ಬ್ರಾಹ್ಮಣ ಕಳೆಬೀರುವ ತೇಜೋಪುಂಜ ಕಣ್ಣುಗಳು. ನೋಡಿದರೇ ಕಾಲು ಮುಟ್ಟಿ ನಮಸ್ಕರಿಸಬೇಕು ಎನ್ನುವಷ್ಟು ಗೌರವಮೂಡುವ ಆಕೃತಿ.
ಈಗ ವಯಸ್ಸಾಗಿದೆ. ಒಂದು ವೇಷ್ಠಿಯನ್ನು ಉಟ್ಟು ಮಸುಕಾದ ಅಂಗಿ ತೊಟ್ಟು ಮೂಲೆಯ ಕುರ್ಚಿಯಲ್ಲಿ ಎರಡೂ ಕೈಯಿಂದ ಒಂದು ಜಲ್ಲಿನ್ನು ಹಿಡಿದು ಆಧರಿಸಿ ಕುಳಿತಿದ್ದಾರೆ.
ಮುಖದಲ್ಲಿ ಬಿಳಿಕುರುಚಲು ಗಡ್ಡ. ಕಳಾಹೀನ ಕಣ್ಣುಗಳು . ಬಾಯಿಯ ಹಲ್ಲು ಹೋಗಿದ್ದರಿಂದ ಒಳಸರಿದ ಕಫೋಲಗಳು. ಅದು ಅವರೇ ಐತಾಳರು.
ನಾನು ಮೆಲ್ಲನೇ ಎದ್ದು ಒಮ್ಮೆ ಮಾತಾಡಿಸಿ ಬರುವ ಎಂದು ಅವರಿದ್ದಲ್ಲಿಗೆ ಹತ್ತಿರ ಹೋಗಿ, "ನಮಸ್ಕಾರಾ, ಎಂದು ಅವರ ಮುಂದೆ ಬಾಗಿ ಕಾಲು ಮುಟ್ಟಿ ನಮಸ್ಕರಿಸಿ, "ನನ್ನ ಗುರುತಾಯ್ತಾ?" ಎಂದೆ.
ಅವರು ನಿಧಾನವಾಗಿ ತಿರುಗಿ ಕೈಯನ್ನು ಎತ್ತಿ ಹಣೆಗೆ ಅಡ್ಡ ಹಿಡಿದು , "ಯಾರು? ನಂಗ್ ಈಗ ಕಣ್ಣ್ ಸಮಾ ಕಾಂತಿಲ್ಯೆ" ಎಂದು ಕಣ್ಣು ಕಿರಿದು ಮಾಡಿ ನೋಡಿ,ನಗಾಡಿ,"ನನಗೆ ನೆನಪು ಸಾಲ ಮರ್ರೆ. ಯಾರು ಹೇಳಿ" ಎಂದರು.
ನಾನು ನನ್ನ ಅಪ್ಪಯ್ಯನ ಹೆಸರು ಹೇಳಿ ಅವರ ಮಗ ಎಂದು ಪರಿಚಯ ಮಾಡಿಕೊಂಡ ಕೂಡಲೇ,
"ಹೋ,  ನೀನಾ? ನಿಮ್ಮ ಮನೆಗೆ ನಾನು ಎಷ್ಟು ಸಲ ಬಂದಿದ್ದೆ? ಆಗ ನೀನು ಸಣ್ಣ ಮಾಣಿ. ಮನ್ಯಲ್ ಎಲ್ಲ ಸೌಖ್ಯಾವಾ? "ಹೌದನಾ ನೀನ್ ಈಗ ಎಲ್ಲಿಪ್ದ್?"
ಎಂದು ನನ್ನ ಎಲ್ಲ ವಿಚಾರವನ್ನು ಕೇಳಿ ಕೇಳಿ ತಿಳಿದುಕೊಂಡರು.
ನಾನು ಮೆಲ್ಲನೇ, "ನೀವು ಮುಡಾರಿ ಗಣಪತಿ ದೇವಸ್ಥಾನದಲ್ಲಿ ಇದ್ದಾಗ ನಾನೂ ನಿಮ್ಮ ಮನೆಗೆ ತುಂಬಾ ಸಲ ಬಂದಿದ್ದೆ"
ಎಂದೆ. ಅವರ ಮುಖ ಒಮ್ಮೆಲೇ ಕಪ್ಪಿಟ್ಟಿತು.
"ನಾನು ಆ ಊರ್ ಬಿಟ್ಟ್ ಸುಮಾರು ಸಮಯ ಆಯ್ತಲ್ಲಾ" ಅಂದರು. ನಾನು ಮೆಲ್ಲನೆ, "ಗೊತ್ತಿತ್" ಅಂದೆ.
"ಆ ಗಣಪತಿಗ್ ನಾನ್ ಬ್ಯಾಡಾ ಅಂತಾಯ್ತ್ . ಇನ್ ಅಲ್ ಇಪ್ಕಾಗ ಅಂತ ಊರ್ ಬಿಟ್ಟೆ. ಯಾರ್ಯಾರಿಗೆ ಎಲ್ಲಿ ಅನ್ನ ನೀರಿನ್ ಋಣ ಇತ್ತೋ ಅಷ್ಟ್ ದಿನ ಮಾತ್ರಾ ಇಪ್ಕಾಪ್ದ್. ಈಗ ಇಲ್ಲೇ ಉಡ್ಪೀಯಲ್ ಹೆರಿಮಗನ್ ಮನ್ಯಲ್ ಇದ್ದೆ" ಅಂದರು.
ಅವನ್ ಹೆಸ್ರ್ ಸುರೇಶ ಅಲ್ದಾ? ಅಂತ ನೆನಪು ಮಾಡಿಕೊಂಡು ಹೇಳಿ, "ಅವ ಇಲ್ ಎಂತ ಮಾಡ್ತಿದ್ದ?"  ಅಂದೆ
ಅವ ಇಲ್ಲೇ ಬ್ಯಾಂಕಲ್ ಇದ್ದ. ಒಂದ್ ಸಣ್ ಮಾಣಿ ಅವ್ನಿಗೆ. ಎರಡನೇ ಮಗ ಅಮೇರಿಕದಲ್ ಇಪ್ದ್. ಕಿರ್ದ್ ಒಂದ್ ಮಾಣಿ ಶಂಕ್ರ. ಅಲ್ಲ್ ಇಲ್ಲ್ ಪೌರೋಹಿತ್ಯ ಅದ್ ಇದ್ ಮಾಡ್ಕಂಡಿತ್ . ಅದ್ಕೊಂದ್ ಮದ್ವಿ ಮಾಡೀರ್ ನನ್ ಜವಾಬ್ಧಾರಿ ಮುಗೀತ್ ಕಾಣ್. "ನಿಮ್ಮ್ ಬದಿಯಲ್ ಎಲ್ಲಾರ್ ಒಂದ್ ಹುಡ್ಗಿ ಇದ್ರೆ ಹೇಳ್ ಕಾಂಬ"  ಅಂದರು.
ನಮ್ಮ ಊರು ಬಿಟ್ಟು ಬಂದ ನೋವನ್ನು ಮಾತಿನಲ್ಲಿ ತೋರ್ಪಡಿಸಬಾರದು ಎಂದು ಪ್ರಯತ್ನಿಸುತ್ತಿರುವುದು ಗೊತ್ತಾಗುತ್ತಿತ್ತು.
"ನೀವು ಬಿಟ್ಬಂದ್ ಮೇಲೆ ಆ ದೇವಸ್ಥಾನಕ್ ಸರೀಕಟ್ ಪೂಜೆಯವ್ರೇ ಇಲ್ಲದ ಹಾಂಗಾಯ್ತ್ ಮಾರಾಯ್ರೆ. ಎಷ್ಟೋ ಜನ ಬಂದ್ ಬಂದ್ ಬಿಟ್ಟ ಹ್ಯೋತಿದ್ರ್. ಈಗ ಅಲ್ಲಿಯೇ ಪಕ್ಕದ ಮನಿ ಸತ್ಯ ಭಟ್ರೇ ಹೋಗಿ ಒಂದ್ ಹೊತ್ ದೇವ್ರ ತಲೆಮೇಲೆ ಒಂದ್ ಸೌಂಟ್ ನೀರ್ ಹಾಕಿ ಬತ್ರಂಬ್ರ್ , ನಾನು ಮೊನ್ನೆ ಊರಿಗ್ ಹೋದಾಗ ಅಲ್ಲಿಗ್ ಹೋಯಿ ಬಂದಿದ್ದೆ"  ಅಂದೆ.
ಅವರು ಮಾತಾಡಲಿಲ್ಲ. ಪುನಃ ಹೇಳಿದೆ.
"ಇತ್ತೀಚೆಗೆ ಅಲ್ಲಿ ಒಂದ್ ಆರೋಡ ಪ್ರಶ್ನೆ ಅಂತ ಮಾಡಿರಂಬ್ರ್. ದೇವಸ್ಥಾನಕ್ ಬರ್ಕತ್ ಇಲ್ಲೆ. ಇನ್ನೂ ಒಂದ್ ಜೀರ್ಣೋದ್ಧಾರ ಮಾಡೂಕಾಯ್ಲಿಲ್ಲೆ. ಯಾಕೆ ಅಂತ ಪ್ರಶ್ನೆ. ಪ್ರಶ್ನೆ ಇಟ್ಟಾಗ ಎಂತ ಬಂತ್ ಗೊತ್ತಾಯ್ತಾ? ದೇವಸ್ಥಾನದ್ ಜೀರ್ಣೋದ್ಧಾರ ಮಾಡೂಕ್ ಮೋದ್ಲು ಅಲ್ಲಿ ಒಬ್ಬ ಬ್ರಾಹ್ಮಣ ಶಾಪ ಕಾಂತಾ ಇದೆ. ಉಟ್ಟ ಬಟ್ಯಲ್ಲೇ ಅವ್ರನ್ ಓಡ್ಸೀರ್. ಹಾಂಗ್ ಬೇಜಾರಾಗಿ ಹೋದ್  ಭಟ್ರ್ ಎಲ್ಲಿದ್ರ್ ಅಂತ ಕಂಡ್ ಹಿಡ್ದ್ ಅವ್ರನ್ ಸಮಾಧಾನ ಮಾಡಿ ಕರ್ಸಿ. ಇಲ್ಲೇ ಒಂದು ಮನೆ ಕಟ್ಟಿ ಕೊಡಿ. ಆಮೇಲೇ ಉಳಿದ ಕೆಲ್ಸ ಅಂತ ದೇವರು ಹೇಳ್ತಂಬ್ರ್" ಅಂದೆ.
ಸ್ವಲ್ಪ ಹೊತ್ತು ಮೌನವಾಗಿದ್ದ ಐತಾಳರು,
"ಹೌದು. ಗೊತ್ತಾಯ್ತ್. ಊರಿನಿಂದ ಬಚ್ಚು ಶೆಟ್ರು , ಜನಾರ್ದನ ಕೊಡ್ಲಾಯರು ಎಲ್ಲ ಸೇರ್ಕಂಡ್ ನನ್ನನ್ನ್ ಹುಡುಕಿಕೊಂಡ್ ಒಂದ್ಸಲ ಬಂದಿದ್ರ್ . ನಂಗೂ ವಯಸ್ಸಾಯ್ತ್ ಅಲ್ದನಾ? ಇನ್ ನಾನ್ ಅಲ್ಲಿಗ್ ಬಬ್ದ್ ಹೌದಾ? ಅಂದೆ. ಆದ್ರೆ ನಂಗ್ ಹಿಂದ್ ಆದ್ ಬಗ್ಗೆ ಏನೂ ಬೇಜಾರಿಲ್ಲೆ . ಇವತ್ ನನ್ನನ್ನು ಈ ಮಟ್ಟಕ್ ತಂದವ ಅವನೇ, ಆ ಗಣಪತಿ ಅಲ್ದಾ? ನೀವು ದೇವಸ್ಥಾನದ್ ಜೀರ್ಣೋದ್ಧಾರ ಮಾಡೂದಾರೆ ನಾನೂ ನನ್ ಕೈಲಾದ ಸಹಾಯ ಮಾಡ್ತೆ ಅಂದೆ" ಅಂದರು.
ನನ್ನ ಮನಸ್ಸು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಓಡಿತು. ಅವರೇ ಹೇಳಿದ ಕತೆ ಅದು.
*******
ನಮ್ನ ಊರಿನ ಸಮೀಪದ ಮುಡಾರಿಯ ಗಣಪತಿ ದೇವಸ್ಥಾನ ಅಂದರೆ ಅದು ಅಂತಹಾ ಭಾರೀ ಹಿನ್ನೆಲೆ ಇರುವ ದೊಡ್ಡ ದೇವಸ್ಥಾನವೇನೂ ಅಲ್ಲ. ತೀರ ಹಳ್ಳಿಯೇ ಆದ್ದರಿಂದ ಅಲ್ಲಿ ಊರ ಪರವೂರ ಭಕ್ತರು ಬಂದು ಕಾಣಿಕೆ ಕೊಟ್ಟು ಒಳ್ಳೆಯ ಉತ್ಪತ್ತಿ ಇರುವ ಕಾರಣಿಕ ದೇವಸ್ಥಾನವೂ ಅದಲ್ಲ. ಭಕ್ತರು ಬಂದರೆ ಬಂದರು. ಇಲ್ಲದಿದ್ದರೆ ಇಲ್ಲ. ಆದರೆ ಈ ಪುಟ್ಟಯ್ಯ ಐತಾಳ್ರು ಅಲ್ಲಿ ಇರುವವರೆಗೆ ಆ ದೇವಸ್ಥಾನದ ಮೂರೂ ಹೊತ್ತು ಪೂಜೆಯನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದರು. ದೇವಸ್ಥಾನದ ಎದುರಿನ ಎರಡು ಮುಡಿ ಗದ್ದೆ, ದೇವಸ್ಥಾನದ ಪಶ್ಚಿಮ ಭಾಗದಲ್ಲಿ ಅವರೇ ಬೆವರು ಸುರಿಸಿ ಮಾಡಿದ ಒಂದು ಹತ್ತಿಪ್ಪತ್ತು ತೆಂಗು ಅಡಿಕೆ ಇರುವ ತೋಟವೇ ಅವರ ಬದುಕಾಗಿತ್ತು.‌ ಮತ್ತೆ ನಮ್ಮ ಕುಲಪುರೋಹಿತರಾದ ಕಿಟ್ಟಯ್ಯ ಅಡಿಗರ ಒಟ್ಟಿಗೆ ಅಥವ ಅವರಿಗೆ ಏನಾದರೂ ತೊಂದರೆ ಇದ್ದಾಗ ಇವರೇ ಊರಿನ ಬ್ರಾಹ್ಮಣರ ಮನೆಗೆ ಶ್ರಾದ್ಧಕ್ಕೆ, ಪೂಜೆ ಪಾರಾಯಣಕ್ಕೆ ಅಂತ ಪೌರೋಹಿತ್ಯಕ್ಕೆ ಹೋಗುತ್ತಿದ್ದರು. ದೇವಸ್ಥಾನದಲ್ಲಿ ಏನೂ ಉತ್ಪತ್ತಿ ಇಲ್ಲದ್ದರಿಂದ ಅದರಲ್ಲೇ ಅವರ ಮೂರು ಗಂಡು ಮಕ್ಕಳು, ಹೆಂಡತಿ, ವಿಧವೆ ಅಕ್ಕ ಇರುವ ಅವರ ಸಂಸಾರರಥ ನಡೆಯಬೇಕಿತ್ತು.
ದೇವಸ್ಥಾನದ ಹೊರಪೌಳಿಯಲ್ಲೇ ಈಶಾನ್ಯದ ಮೂಲೆಯಲ್ಲಿ ಒಂದು ಅಡಿಗೆಮನೆ ಇದ್ದು, ಹೊರ ಪೌಳಿಯೇ ಇವರ ಬೆಡ್ ರೂಮು ಕಮ್ ಚಾವಡಿ ಆಗಿತ್ತು. ಹೊರ ಪೌಳಿಯ ದಕ್ಷಿಣಭಾಗದ ಗೋಡೆಯೂ ಅಲ್ಲಲ್ಲಿ ಕುಸಿದು ಹೋಗಿರುವುದರಿಂದ ಅವರೇ ಒಂದು ತಟ್ಟಿಯನ್ನು ಕಟ್ಟಿಕೊಂಡಿದ್ದರು. ಅಲ್ಲಿಯೇ ಅನತಿ ದೂರದಲ್ಲಿ ಒಂದು ಕೊಟ್ಟಿಗೆ ಮಾಡಿ ಕರಾವಿಗೆ ಒಂದು ದನವನ್ನೂ ಸಾಕಿಕೊಂಡಿದ್ದರು. ಮೂರುಹೊತ್ತೂ ಗಣಪತಿಯ ಪೂಜೆಯನ್ನು ನಿಷ್ಠೆಯಿಂದ ಭಕ್ತಿಯಿಂದ ಮಾಡುತ್ತಿದ್ದರು.
*********
ಇಂತಿಪ್ಪ ಕಾಲದ ಒಂದು ದಿನ ಅಂತಹ ಪಾಳುಬಿದ್ದ ದೇವಸ್ಥಾನವನ್ನು ಉದ್ಧಾರ ಮಾಡಬೇಕೆಂದು ಆ ಊರಿನ ದೊಡ್ಡ ಕುಳವಾದ ಅಂತು ಶೆಟ್ರು ಎಂಬವರಿಗೆ ಒಮ್ಮೆಲೇ ಅನ್ನಿಸಿಬಿಟ್ಟಿತು. ಊರಿನ ಪ್ರತಿಷ್ಠಿತರಲ್ಲಿ ಒಬ್ಬರಾದ ಶೆಟ್ಟರು. ಅವರ ತಲೆಗೆ ಒಂದು ವಿಚಾರ ಹೊಕ್ಕಮೇಲೆ ತಡಬಡ ಇಲ್ಲ. ಊರವರನ್ನೆಲ್ಲ ಸೇರಿಸಿ ಒಂದು ಮೀಟಿಂಗ್ ಮಾಡಿಯೇ ಬಿಟ್ಟರು. ಊರಿನ ದೇವಸ್ಥಾನ ಜೀರ್ಣೋದ್ಧಾರ ಆಗಲೇ ಬೇಕು ಅಂತ ತೀರ್ಮಾನವು ಆಯಿತು.
ಅಂದು ರಾತ್ರಿ ದೇವಸ್ಥಾನ ಕ್ಕೆ ಬಂದ ಆ ಶೆಟ್ಟರು ತಮ್ಮ ಶೆಟ್ಟರ ಗತ್ತಿನಿಂದಲೇ,
"ಐತಾಳ್ರೆ ವಿಷ್ಯ ಗೊತ್ತಾಯ್ತಾ? ನಾವು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡ್ವಾ ಅಂತ ಎಣ್ಸ್ ಕಂಡಿತ್. ಇವತ್ ಒಂದ್ ಮೀಟಿಂಗೂ ಮಾಡ್ತ್" ಎಂದು ಪೀಠಿಕೆ ಹಾಕಿದರು.
ಐತಾಳರಿಗೆ ತುಂಬಾ ಖುಷಿ ಆಯಿತು.
"ಹೋ ಓಳ್ಳೇ ಸುದ್ಧಿ ಹೇಳಿದ್ರಿ ಶೆಟ್ರೆ . ನಾನ್ ಯಾವತ್ತಿಂದ ಹೇಳ್ತಿದ್ನಲೆ. ದೇವ್ರಿಗೆ ಕಳೆ ಬರ್ಕರೆ ಒಂದು ಜೀರ್ಣೋದ್ಧಾರ ಮಾಡಿ, ಒಂದ್ ಸಣ್ಣಕ್ಕಾದ್ರೂ ಬ್ರಹ್ಮಕಲಶ ಅಂತ ಮಾಡ್ಕೆ. ಆಮೇಲೆ ನಮ್ ಗಣಪತಿಯ ಕಾರಣಿಕ ಕಾಣಿ ಅಂದೇಳಿ"; ಎಂದು ನಗುತ್ತಾ ಹೇಳಿದರು.
ಆಗ ಶೆಟ್ರು ನಗುತ್ತಾ, "ಅದೆಲ್ಲ ಸಮ. ಆದ್ರೆ ಜೀರ್ಣೋದ್ಧಾರ ಅಂದ್ರ್ ಸುಮ್ನೇ ಆತ್ತಾ? ದುಡ್ , ಜನ ಎಲ್ಲ ಆಯ್ಕಲೆ. ಇಲ್ ಜಾಗವೂ ಸ್ವಲ್ಪ ಅಚ್ಕಟ್ ಅಲ್ದೆ? ಹಾಂಗಾಯಿ ಈ ಸಲ ಈ ಹೊರ ಪೌಳಿ ಎಲ್ಲ ತೆಗ್ದ್ ಹೊಸ್ತಾಗಿ ಮಾಡ್ವಾ ಅಂತ ಎಣ್ಸೀತೆ. ಹಾಂಗಾಯಿ ನೀವ್ ಇಲ್ಲಿಂದ ಜಾಗ ಖಾಲಿ ಮಾಡ್ಕಾತ್ತಲೆ" ಅಂದರು.
ಐತಾಳರಿಗೆ ಒಮ್ಮೆಲೇ ಶಾಕ್ ಆಯ್ತು.
"ನಾನಾ? ಅಯ್ಯೋ ನಾನ್ ಎಲ್ಲಿಗ್ ಹ್ವಾಪ್ದ್ ? ಅಪ್ಪಯ್ಯನ್ ಕಾಲ್ದಿಂದ ಇಲ್ಲೇ ಇದ್ದವ ನಾನ್" ಎಂದರು ಭಯದಿಂದ.
"ಅದನ್ ನಾವ್ ಹೇಳೂಕಾತ್ತಾ? ಎಲ್ಲಾರೂ ಗುಡ್ಡೀ ಮ್ಯಾಲೆ ಒಂದ್ ಕೊಗ್ಳ್ ಕಟ್ಕಂಡ್ ಆಯ್ಕಣಿ. ದಿನಾ ಬಂದ್ ಪೂಜಿ ಮಾಡಿ ಹ್ವಾರ್ ಸೈ" ಅಂದರು ಶೆಟ್ಟರು ಗತ್ತಿನಿಂದ.
"ನಾನ್ ಇನ್ನೂ ಹುಡ್ಗಾ ಅಂದೇಳಿ ಮಾಡಿರ್ಯಾ? ವರ್ಷ ಐವತ್ತರ ಮೇಲ್ ಆಯ್ತ್ . ದಿನಾ ಗುಡ್ಡಿ ಇಳ್ದ್ ಹತ್ತೀ ಮಾಡೂಕಾತ್ತಾ ನಂಗೆ ಇನ್?"  ಐತಾಳರು ಇನ್ನೂ ಚೇತರಿಸಿಕೊಳ್ಳಲಿಲ್ಲ. ಗಣಪತಿಯ ಸಾನ್ನಿದ್ಯವನ್ನು ಬಿಟ್ಟು ದೂರ ಹೋಗುವುದನ್ನು ಅವರಿಗೆ ಕಲ್ಪಿಸಿಕೊಳ್ಳಲು ಆಗಲಿಲ್ಲ.
"ಅದೆಲ್ಲ ಗೊತ್ತಿಲ್ಲೆ ನಂಗೆ. ಇದು ಊರವರ್ ಎಲ್ಲ ಸಭೆ ಸೇರಿ ಮಾಡಿದ್ ತೀರ್ಮಾನ. ನೀವ್ ಏನಾರೂ ಮಾಡ್ಕಣಿ. ಈ ಜಾಗ ಖಾಲಿ ಮಾಡಿ ಅಷ್ಟೆ"ಶೆಟ್ಟರಿಗೆ ಐತಾಳರ ಮುಖವನ್ನು ನೋಡುವ ವ್ಯವಧಾನವೂ ಇರಲಿಲ್ಲ. ಐತಾಳರು ಕಂಗಾಲಾದರು.
"ಹೀಗ್ ಉಟ್ಟಬಟ್ಯಲ್ಲೆ ಹೋಯ್ಕ್ ಅಂದ್ರೆ ಎಲ್ಲಿಗ್ ಹ್ವಾಪದ್ ಶೆಟ್ರೆ? ನಾನ್ ಇದೇ ಜಾಗದಲ್ ಹುಟ್ಟಿ ಓಡಾಡ್ಕಂಡ್ ಬೆಳೆದವ. ಸ್ವಲ್ಪ ಯೋಚ್ನೆ ಮಾಡೂಕ್ ಟೈಮ್ ಕೊಡಿ" ಎಂದು ಐತಾಳರು ಅಂಗಲಾಚಿದರು.
"ಅದೆಲ್ಲ ನಂಗ್ ಗೊತ್ತಿಲ್ಲೆ . ಹೇಳೂದ್ ಹೇಳಿದಿ. ಇನ್ ನಿಮಗ್ ಬಿಟ್ಟದ್" ಎಂದು ಶೆಟ್ರು ಹೇಳಿ ಬಿರಬಿರನೇ ಹೊರಟುಹೋದರು.
ಐತಾಳರಿಗೆ ಕಣ್ಣು ಕತ್ತಲು ಬಂದ ಹಾಗಾಯ್ತು. ಹೀಗೆ ಇದ್ದಕ್ಕಿದ್ದ ಹಾಗೆ ಎದ್ದು ಹೋಗಿಬಿಡಿ ಎಂದರೆ ಎಲ್ಲಿಗೆ ಹೋಗುವುದು? "ಗಣಪತೀ ನಿನಗೂ ನನ್ನ ಸೇವೆ ಪೂಜೆ ಸಾಕು ಅನ್ನಿಸಿತಾ" ಎಂದು ಅಲ್ಲಿಯೇ ಕುಸಿದು ಕುಳಿತರು. ಕತ್ತಲೆಯಲ್ಲಿ ಕಾಲದ ಪರಿವೆಯೇ ಅವರಿಗೆ ಇರಲಿಲ್ಲ.
ರಾತ್ರಿ ಎಷ್ಟು ಹೊತ್ತಿಗೋ ಗಂಡ ಎಲ್ ಹೋದ್ರು ? ಎಂದು ಚಿಮಣಿ ಬೆಳಕಲ್ಲಿ ಹುಡುಕುತ್ತಾ ಬಂದ ಅವರ ಹೆಂಡತಿ ;ಐತಾಳರನ್ನು ನೋಡಿ,, ಮೈ ಮುಟ್ಟಿ ಏಳಿಸಿದಾಗಲೇ ಮತ್ತೆ ಎಚ್ಚರವಾದದ್ದು.
ಆಗಲೇ ಅವರು ಒಂದು ತೀರ್ಮಾನಕ್ಕೆ ಬಂದಿದ್ದರು.
"ಹ್ವಾ ನಮ್ಗೆ ಇನ್ ಈ ಊರಿನ ನೀರಿನ್ ಋಣ ತೀರ್ತಾ ಕಾಂತ್" ಎಂದರು.
ಸಂಜೆಯಿಂದ ಎಲ್ಲ ಮಾತನ್ನೂ ಕೇಳಿಸಿಕೊಂಡಿದ್ದ ಅವರ ಹೆಂಡತಿ "ಎಲ್ಲ ಅವನೇ ಕಂಡ್ಕಂತ. ನೀವು ತಲೆಬಿಸಿ ಮಾಡ್ಕ್ಯಂಬೇಡಿ" ಅಂದರು ಮುಸಿಮುಸಿ ಅಳುತ್ತಾ.
ರಾತ್ರಿ ಎಂದೂ ಐತಾಳರು ಊಟ ಮಾಡುವವರಲ್ಲ. ಹಾಗೆಯೇ ಅಡಿಗೆ ಮನೆಗೆ ಹೋಗಿ ಒಂದು ಚೊಂಬು ನೀರನ್ನು ಗಟಗಟನೇ ಕುಡಿದುಬಂದು  ಚಾಪೆ ಹಾಕಿ ಸುತ್ತಪೌಳಿಯಲ್ಲಿ ಅಂಗಾತ ಮಲಗಿದರು.
ನಿದ್ದೆ ಬರುತ್ತಿಲ್ಲ. ಎದ್ದು ಗರ್ಭಗುಡಿಗೆ ಹೋಗಿ ಗಣಪತಿಯ ಮುಂದೆ ಕಣ್ಣುಮುಚ್ಚಿ ಕುಳಿತರು. ಎಷ್ಟು ಹೊತ್ತು ಹಾಗೆ ಕುಳಿತಿದ್ದರೋ ? ಅವರಿಗೆ ಗೊತ್ತಿಲ್ಲ.
ಒಮ್ಮೆಲೇ ಎಚ್ಚರವಾಗಿ ಎದ್ದು ಸೀದಾ ಹೊರಗೆ ಬಂದು ಹೆಂಡತಿಯನ್ನು, ಅಕ್ಕನನ್ನು ಕರೆದು ಹೇಳಿದರು.
"ಹೊರಡಿ. ಮಕ್ಕಳನ್ನು ಕರ್ಕಂಡ್ ಹೊರಡಿ"
ಅವರ ಆಜ್ಞೆಗೆ ಎಲ್ಲರೂ ಬದ್ಧರು. ಎಲ್ಲರೂ ದಡಬಡ ಎದ್ದರು. ಮಕ್ಕಳನ್ನೂ ಎಬ್ಬಿಸಿ ಅಂಗಿಚಡ್ಡಿ ಹಾಕಿ ಸಿದ್ದಮಾಡಿಯಾಯಿತು. ನಸುಕು ನಸುಕು ಬೆಳಕಿನಲ್ಲಿ ಹೊರಟೇ ಬಿಟ್ಟರು.
ಎಲ್ಲಿಗೆ? ಅಂತ ಯಾರೂ ಕೇಳಲಿಲ್ಲ. ಕೇಳಿದ್ದರೆ ಐತಾಳರಿಗೆ ಗೊತ್ತೂ ಇರಲಿಲ್ಲ.

ಅವರದ್ದೊಂದು ಕಬ್ಬಿಣದ ಟ್ರಂಕು. ಅದರ ಒಳಗೆ ಅವರ ಅಪ್ಪಯ್ಯನ ಒಂದಷ್ಟು ತಾಳೆಗರಿ ಪುಸ್ತಕಗಳು, ಪಾರಾಯಣದ, ಪೂಜೆಯ ಪುಸ್ತಕಗಳು. ಹೆಂಡತಿಯ ಕೈಯಲ್ಲಿ, ವಿಧವೆ ಅಕ್ಕನ ಕೈಯಲ್ಲಿ ಅವರವರದೇ ಒಂದು ಹಳೆಸೀರೆಗಳ ಒಂದೊಂದು ಗಂಟು. ಜೊತೆಗೆ ಕೌಳಗೀ ಸೌಟು, ಹರಿವಾಣ ತಟ್ಟೆ ಇರುವ ಒಂದು ಕೈಚೀಲ. ಒಳಗಿನ ಪಾತ್ರೆ ಪಗಡಿ ಅವರದ್ದಲ್ಲ. ಕುರ್ಚಿ ಕಪಾಟು ದೇವಸ್ಥಾನದ್ದೆ.
ಹೊರಡುವ ಮುಂಚೆ, ಗಣಪತಿಯ ಮುಂದೆ ಬಂದು ಐತಾಳರು ಭಕ್ತಿಯಿಂದ " ಗಣಪತೀ, ನಿನಗೆ ನನ್ನ ಸೇವೆ ಸಾಕು ಅನ್ನಿಸಿತಲ್ಲ. ಅದಕ್ಕೇ ಹೊರಟೇ ಬಿಟ್ಟೆ. ಆದರೆ ನಿನ್ನನ್ನೇ ನಂಬಿದವ ನಾನು. ಎಲ್ಲಾದರೂ ದಡಕಾ"ಎಂದು ಎದ್ದು ಹೊರಟೇಬಿಟ್ಟರು. ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.

ಕಾಲು ಹೋದತ್ತ ಮನಸ್ಸು ತಿಳಿಸಿದತ್ತ ನಡೆದರು. ಗದ್ದೆ ಬೈಲು ದಾಟಿದರು. ಹಾಡಿ ಹೊಳೆಸಂಕಗಳನ್ನು ಉತ್ತರಿಸಿದರು. ಮೂರು ಸಣ್ಣಸಣ್ಣ ಮಕ್ಕಳು. ಒಂದಂತೂ ಹಾಲುಕುಡಿಯುವ ಮಗು ಹೆಂಡತಿಯ ಬಗಲಲ್ಲಿ. ಸರೀ ಬೆಳಕು ಮೂಡುವಷ್ಟರಲ್ಲಿ ಹಾಲಾಡಿಪೇಟೆಗೆ ಬಂದರು. ಮುಂದೆ? ಏನೂ ತಿಳಿಯದೇ ಸುಮ್ಮನೇ ನಿಲ್ಲಲೂ ಆಗದೇ, ಕುಂದಾಪುರದ ಕಡೆಗೆ ನಡೆಯತೊಡಗಿದರು.
ಬಸ್ಸಿನ ಸಂಚಾರ ಇನ್ನೂ ಶುರುವಾಗಿರಲಿಲ್ಲ.ಬಸ್ಸು ಬಂದರೂ ಎಲ್ಲಿಗೆ ಹೋಗುವುದು ಎಂದು ನಿರ್ಣಯವಾಗದೇ ಯಾವ ಬಸ್ಸಿಗೇ ಅಂತ ಹತ್ತುವುದು? ಕೈಯಲ್ಲಿದ್ದ ನಾಲ್ಕು ಕಾಸು ಖರ್ಚಾಗಿ ಹೋದರೆ ನಾಳೆ ಊಟಕ್ಕೆ ಏನು ಮಾಡುವುದು? ಅಂತು ಸುಮಾರು ಬಿದ್ಕಲ್ ಕಟ್ಟೆಯ ಹತ್ತಿರ ಹತ್ತಿರ ಬರುತ್ತಿರುವಾಗ ಮಕ್ಕಳು ಹಸಿವೆ ಎಂದು ಕಿರಿಕಿರಿ ಮಾಡಲು ಶುರುಮಾಡಿದವು. ಅರ್ಧಂಬರ್ಧ ನಿದ್ದೆಕಣ್ಣು ಅವುಗಳಿಗೆ ಅಲ್ಲಿ ರಸ್ತೆಯ ಪಕ್ಕದಲ್ಲಿ ಒಂದು ಮೋರಿಯ ಹತ್ತಿರ ಎಲ್ಲರೂ ಕುಳಿತರು. ಐತಾಳರ ಹೆಂಡತಿ ಮನೆಯಿಂದ ತಂದ ಅವಲಕ್ಕಿಯ ಗಂಟು ಬಿಚ್ಚಿ ಅದನ್ನೇ ಮಕ್ಕಳಿಗೆ ಕೊಟ್ಟರು. ರಸ್ತೆಯ ಪಕ್ಕದಲ್ಲಿಯೇ ಇದ್ದ ಒಂದು ನಲ್ಲಿಯಲ್ಲಿ ನೀರು ಬರುತ್ತಿತ್ತು. ಎಲ್ಲರೂ ಅದನ್ನು ಕುಡಿದು ಮತ್ತೆ ಹೊರಟರು.
ಕೊನೆಗೆ ನಡೆದೂ ನಡೆದೂ ಹುಣಸೆ ಮಕ್ಕಿಯನ್ನು ದಾಟಿ ಸುಣ್ಣಾರಿಯಲ್ಲಿ ಎಡಕ್ಕೆ ತಿರುಗಿ ಉಳ್ತೂರಿನ ರಸ್ತೆಗೆ ತಿರುಗಿದರು. ಮಧ್ಯಾಹ್ನದ ಹೊತ್ತಿಗೆ ಯಾರದೋ ಬ್ರಾಹ್ಮಣರ ಮನೆಯ ಹೆಬ್ಬಾಗಿಲ ಹೊರಗಿನ ಜಗಲಿಯನ್ನು ಸೇರಿ ಆಯಾಸದಿಂದ ಬಳಲಿ ಕುಳಿತು,
"ಅಮ್ಮಾ, ಒಂದು ಚೊಂಬು ನೀರು ಕೊಡಿ" ಎಂದರು.
************
ಅವರು ಗಣಪತಿಯನ್ನು ಬಿಟ್ಟರೂ, ಅವರು ನಂಬಿಕೊಂಡು ಕೊಂಡು ಬಂದ ಗಣಪತಿ ಅವರನ್ನು ಬಿಡಲಿಲ್ಲ.
ಆ ಮನೆಯೇ ಅವರಿಗೆ ಆಶ್ರಯ ಕೊಟ್ಟಿತು. ಆ ಮನೆಯ ಕುಪ್ಪಯ್ಯ ಕಾರಂತರು ಅವರ ಸ್ಥಿತಿಯನ್ನು ನೋಡಿ ಪಾಪ ಅನ್ನಿಸಿ, ಗುರುತು ಪರಿಚಯ ಕೇಳಿ ಕನಿಕರಿಸಿ ಅವರಿಗೆ ಆಶ್ರಯಕೊಟ್ಟರು.
ವಾರದ ಒಳಗೆ ಅವರ ಮನೆಯ ಪಡಸಾಲೆಯಲ್ಲಿಯೇ ಒಂದು ಒಲೆಯನ್ನು ಹೂಡಿ ಅಡಿಗೆ ಮಾಡಿ ಐತಾಳರು ಸಂಸಾರ ಪ್ರಾರಂಭಿಸಿದರು. ಅವರಿವರ ಪರಿಚಯ ಮಾಡಿಕೊಂಡು ಅಲ್ಲಿ ಇಲ್ಲಿ ಪೌರೋಹಿತ್ಯ ಮಾಡಿ ಮಕ್ಕಳನ್ನು ಓದಿಸಿ ಬೆಳೆಸಿದರು. ಆ ಕಾರಂತರ ಮನೆಯ ಹತ್ತಿರದಲ್ಲಿಯೇ ಒಂದು ಜಾಗವನ್ನು ತೆಗೆದುಕೊಂಡು ಒಂದು ಸಣ್ಣ ಮನೆಯನ್ನೂ ಕಟ್ಟಿಸಿದರು. ಕಾಲಗತಿಗನುಸಾರವಾಗಿ ಅವರ ವಿಧವೆ ಅಕ್ಕನನ್ನೂ , ಹೆಂಡತಿಯನ್ನು ಅಗಲಿದರು.
ನಾನೂ ಒಂದೆರಡು ಸಲ ಅವರ ಮನೆಗೆ ಹುಡುಕಿಕೊಂಡು ಹೋಗಿ ಮಾತಾಡಿಸಿ ನಮ್ಮ ಮನೆಯ ಯಾವುದೋ ಕಾರ್ಯಕ್ರಮಕ್ಕೆ ಹೇಳಿಕೆ ಹೇಳಿ ಆಮಂತ್ರಿಸಿ ಬಂದಿದ್ದೆ. ಈಗ ಸುಮಾರು ಹತ್ತಾರು ವರ್ಷದಿಂದ ನಮ್ಮ ಸಂಪರ್ಕ ಇರಲಿಲ್ಲ.
ಈಗ ಬ್ಯಾಂಕ್ ನಲ್ಲಿ ಕೆಲಸಮಾಡುವ ಮಗನೊಂದಿಗೆ ಸುಖವಾಗಿ ಉಡುಪಿಯ ಮಗನ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.
********
ನಾನು ಅವರ ಮುಖ ನೋಡಿದೆ. ನಿರ್ಲಿಪ್ತವಾಗಿತ್ತದು.
ಅಷ್ಟರಲ್ಲಿ, "ಊಟಕ್ಕಾಯಿತು. ಎಲ್ಲ ಬನ್ನಿ"ಎಂದು ಯಾರೋ ಕರೆದರು. ಎಲ್ಲರೂ ದಡಬಡ ಎದ್ದು ಡೈನಿಂಗ್ ಹಾಲಿಗೆ ಹೊರಟರು. ನಾನು ನಿಧಾನವಾಗಿ ಅವರ ಕೈ ಹಿಡಿದು "ಬನ್ನಿ ಹೋಗುವ"ಎಂದು ಊಟದ ಮನೆಯತ್ತ ಕರೆದುಕೊಂಡು ಹೊರಟೆ.
*********
-ಮುಗಿಯಿತು-

ಶುಕ್ರವಾರ, ಆಗಸ್ಟ್ 31, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 5ನಾನು ಇವಳ...

ಗಾಂಧಾರ ಗಾನ: ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 5


ನಾನು ಇವಳ...
: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 5 ನಾನು ಇವಳಿಗೆ ಹೇಳಬೇಕು. ಇದು ನಾನು ಬರೆಯುವುದಲ್ಲ. ಯಾರೊ ನನ್ನಿಂದ ಇದನ್ನು ಬರೆಸುತ್ತಿದ್ದಾರೆ . ತಡೆಯೇ ಇ...

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 6ಇರಲಿ. ...

ಗಾಂಧಾರ ಗಾನ: ದಿನೇಶ ಉಪ್ಪೂರ:


*#ನನ್ನೊಳಗೆ - 2*


ಭಾಗ - 6


ಇರಲಿ. ...
: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 6 ಇರಲಿ.  ಮತ್ತೆ ದೊಡ್ಡವರ ಜೀವನ ಚರಿತ್ರೆಯ ಹುಡುಕಾಟ. ಏನು ಮತ್ತು ಹೇಗೆ ಬರೆಯುತ್ತಾರೆ ಇವರೆಲ್ಲ ? *******...
ದಿನೇಶ ಉಪ್ಪೂರ:


*#ನನ್ನೊಳಗೆ - 2*


ಭಾಗ - 7


ಹೌದು.

ಆತ್ಮ ಕತೆ ಬರೆಯುವುದು ಅಷ್ಟು ಸುಲಭ ಅಲ್ಲ.

ತನ್ನನ್ನೇ ತೆರದಿಡುವುದು ಕಷ್ಟ.

ಆದರೂ ಒಮ್ಮೊಮ್ಮೆ ಮೋಸವಾಗಿ ಬಿಡುತ್ತದೆ

ಸುಳ್ಳು ನುಸುಳಿ ಬಿಡುತ್ತದೆ. ಅದು ಆತ್ಮ ವಂಚನೆ. ಅದಾಗಬಾರದು.

ಆದಷ್ಟು ಪ್ರಾಮಾಣಿಕವಾಗಿಯೇ ಬರೆಯಬೇಕು.

********

ನನಗೋ “ಏಕತಾನತೆ ಇದ್ದ ಆ ಒಳ್ಳೆಯ ಕೆಲಸ ಬೇಡ” ಎಂದು ಬಿಟ್ಟುಬಿಟ್ಟಿದ್ದೆ .

ನಾನು ಮಹತ್ವಾಕಾಂಕ್ಷಿಯಲ್ಲ.  ಅಲ್ಪ ತೃಪ್ತನೆ.

ಇಷ್ಟು ಸಾಕು ನನಗೆ.  ಆದರೂ ಮಾಡಲು ಕೆಲಸ ಬೇಕು. ಸುಮ್ಮನೇ ಇರಲಾರೆ.

ಸುತ್ತಬೇಕು . ಅರ್ಧದಷ್ಟಾದರೂ ದುಡಿದದ್ದನ್ನು ಕಳೆಯಬೇಕು. ಮಗನಿಗೆ ಕೆಲಸ ಸಿಕ್ಕಿದೆ. ಅವನು ನನ್ನನ್ನು ನಂಬಿ ಇಲ್ಲ..

ಅವನಿಗೆ ಹೇಳಿ ಬಿಟ್ಟಿದ್ದೇನೆ “ನಿನ್ನದನ್ನು ನೀನು ಉಳಿಸಿಕೊ”

ಆದರೆ ಜಾಗ್ರತೆ. ದುಡಿದದ್ದನ್ನು ಹಾಳುಮಾಡಬೇಡ . 

ಅತೀ ಆಸೆ ಬೇಡ” ಅಂತ.

ಅವನೂ ಜಾಣ. ನನ್ನನ್ನು ಅರ್ಥಮಾಡಿಕೊಂಡವನು.

ಸಾಕು ನನಗೆ

******

ಆವತ್ತು ಶಿರಡಿ ನಾಸಿಕ್ ಎಲ್ಲೋರಾ ಟೂರನ್ನು ನನ್ನ ಸ್ನೇಹಿತರೊಂದಿಗೆ ಮುಗಿಸಿಕೊಂಡು ವಾಪಾಸು ಬರುತ್ತಿದ್ದೆ. ನನ್ನ ಅಣ್ಣಯ್ಯನ ಮಗನ ಮಾವನ ಫೋನ್,

“ ನಿಮ್ಮ ಅಣ್ಣನ ಮಗ, ಜ್ಞಾನ ತಪ್ಪಿದೆ . ಕೋಮಾದಲ್ಲಿದ್ದಾನೆ. ಬನ್ನಿ”

ನಾನು ಮನೆಗೆ ಬಂದವನೇ ಓಡಿದೆ.

ನನಗೆ ಅವನ ಹೆಚ್ಚು ಎಟ್ಯಾಚ್ ಮೆಂಟ್ ಇಲ್ಲ . ಬೆಂಗಳೂರಿನಲ್ಲಿ ಅಣ್ಣನೊಂದಿಗೆ ಇದ್ದವನು,

ಅದು ಏನೋ ಆಗಿ ಊರಿಗೆ ಬಂದು ಇಲ್ಲಿಯೇ ಮಣಿಪಾಲದಲ್ಲಿ, ಯಾವುದೋ ಕೆಲಸದಲ್ಲಿ ಇದ್ದ.

ಆಗಾಗ ಸಿಗುತ್ತಲೂ ಇದ್ದ.

“ಚಿಕ್ಕಪ್ಪ, ನಿಮ್ಮಲ್ಲಿ ಎಲ್ಲ ಲಂಚ. ದೊಡ್ಡ ಆಫೀಸಿನಲ್ಲಿ ಕಷ್ಟ. ನಿಮಗಿದು ಕಷ್ಟ”

ಹೌದು. ನನಗೂ ಹಾಗೆಯೇ ಅನ್ನಿಸಿತ್ತು ಬಹುಷ್ಯ. ಇರಲಿ

*********

ಅವನಿಗೆ ರಕ್ತ ಹೆಪ್ಪುಗಟ್ಟುವ ಅದೇನೋ ಕಾಯಿಲೆ.

ದಿನವೂ ಮದ್ದು ತೆಗೆದು ಕೊಳ್ಳಬೇಕು.

ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇದ್ದ.

ಪ್ರತೀ ದಿನ ಹೋಗುತ್ತಿದ್ದೆ .

ಮಣಿಪಾಲ ಆಸ್ಪತ್ರೆಗೆ ಅವನ ಜೊತೆಗೆ ಇರಲು.

ಅವರು ಹೇಳಲಿ ಬಿಡಲಿ.

ಒಮ್ಮೆ ಕರೆದರಲ್ಲ. ಅದು ನನಗೆ ಕರ್ತವ್ಯ.

ನನಗೆ ಮಾಡಲು ಬೇರೆ ಕೆಲಸವಾದರೂ ಏನಿದೆ?.

ಅವನಿಗೆ ಡಿಸ್ಚಾರ್ಜ್ ಆಗುವವರೆಗೂ ಹೋಗುತ್ತಿದ್ದೆ.

ನನ್ನ ಕೆಲಸವಾಯಿತು.

*******

ಆ ಒಂದು ಸಮಯದಲ್ಲೇ ಶುರು ಮಾಡಿದ್ದು, ನಾನು ಹೀಗೆ ಬರೆಯಲಿಕ್ಕೆ . ಮೊಬೈಲಿನಲ್ಲಿ.

ಎಂದೋ ಬಿಟ್ಟುಹೋಗಿತ್ತು.  ಬರೆಯುವುದು.

ಸುಮ್ಮನೇ ಅವನ ಪಕ್ಕದಲ್ಲಿ ಕುಳಿತುಕೊಳ್ಳಬೇಕಲ್ಲ.

ಅವನು ಮಾತಾಡುವುದಿಲ್ಲ. ಹಾಗೆ ಶುರುವಾದದ್ದು ಇದು “ನನ್ನೊಳಗೆ” ಮಥನ.

***

ಯಾಕೋ ನಮ್ಮ ಗೋಪಾಲ ಮಾಸ್ಟ್ರು ನೆನಪಾದರು.

ಅವರು ನಾನು ಉಡುಪಿಯಲ್ಲಿ ಕೆಲಸಕ್ಕೆ ಸೇರಿ,  ನನ್ನ ಭಾವ ಸುಬ್ರಮಣ್ಯ ಉಡುಪರಿದ್ದ ರೂಮಿಗೆ ಬಂದಾಗ ಅಲ್ಲಿಯೇ ಕೆಳಗಿನ ಮನೆಯಲ್ಲಿದ್ದರು. ಅವರ ಬಗ್ಗಹಿಂದೆಯೂ ಹೇಳಿದ್ದೆ.

ನಮಗೆಲ್ಲ ತುಂಬಾ ಆತ್ಮೀಯರು.

ಬಹಳ ಸಮಯದ ನಂತರ ಒಮ್ಮೆ ರಥಬೀದಿಯಲ್ಲಿ ಸಿಕ್ಕಿದ್ದರು.

ನಾನು ಆಗ ನನ್ನ ಕೆಲಸದಲ್ಲಿ ಪ್ರೊಮೋಶನ್ ಆಗಿ ಮುಲ್ಕಿಗೆ ಹೋಗಿದ್ದೆ ಅಂತ ನೆನಪು.

ಯಾಕೆಂದರೆ ನಾನು ಉಡುಪಿಯಲ್ಲಿ ಇದ್ದಿದ್ದರೆ,  ಅವರು ನಮ್ಮ ಮನೆಗೆ ಬಂದೇ ಅವರ ಮಗಳ ಮದುವೆಯ ಹೇಳಿಕೆ ಹೇಳುತ್ತಿದ್ದರು.

“ಉಪ್ಪೂರರೆ, ಬೇಸರಿಸಬಾರದು.

ನನಗೆ ಮನೆಗೆ ಬಂದು ಹೇಳಿಕೆ ಮಾಡಲು ಸಮಯವಿಲ್ಲ. ಇಲ್ಲಿಯೇ ಹೇಳುತ್ತೇನೆ. ನನ್ನ ಮಗಳ ಮದುವೆಗೆ ಬರಲೇಬೇಕು”.

ನಾನು ಹೇಳಿದೆ.

“ಅಡ್ಡಿಲ್ಲ. ಇಲ್ಲಿಯೇ ಹೇಳಿ ಖಂಡಿತಾ ಬರುತ್ತೇನೆ”. ಅದು ಹೇಳುವವರ ಮದುವೆಗೆ ಕರೆಯುವವರ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ.

ನಾನು ಆ ಮದುವೆಗೆ ಹೋದೆನೋ ಬಿಟ್ಟೆನೋ ನೆನಪಿಲ್ಲ

ಆದರೆ ಅವರು ಹೇಳುವಾಗ ಮನೆಗೆ ಬಂದು ಹೇಳಲಿಲ್ಲ ಎಂಬ ಅಪರಾಧದ ಭಾವತುಂಬಿದ ಮುಖ ಇನ್ನೂ ನನ್ನ ಕಣ್ಣಮುಂದೆ ಇದೆ.

******

ಆ ಮಾಸ್ಟರಿಗೂ ಸಾವು ಬಂತು.

ಕುಂದಾಪುರದ ಒಂದು ಹೋಟೆಲಿನಲ್ಲಿ ವೆಂಕಟರಮಣ ಅಡಿಗರು ಎಂಬ ಅವರ ಹಳೆಯ ಸ್ನೇಹಿತರನ್ನು ಕಂಡು ಮಾತಾಡಿಸಲು ಹೋದಾಗ ಅವರಿಗೆ ಹೃದಯಾಘಾತದಿಂದ ನಿಧನರಾದರು ಅಂತ ಕೇಳಿದೆ.

ಸಾವು ಎಲ್ಲರಿಗೂ ಬರುತ್ತದೆ.

*********

ಆದರೆ ಬದುಕಿದಾಗ ಮಾಡಿದ್ದೇನು ಎಂಬುದು ಮುಖ್ಯವಾಗುತ್ತದೆ.

ಸತ್ತ ಮೇಲೆ ಹೇಗೋ ಯಾರಿಗೆ ಗೊತ್ತು?

ಹೌದು.

ಎಂಬತ್ತಮೂರರ ವರೆಗೂ ಯಕ್ಷಗಾನದಲ್ಲಿ ತಾನೇ ತಾನಾಗಿ ಮೆರೆದ ಚಿಟ್ಟಾಣಿಯವರನ್ನೂ ಸಾವು ಬಿಡಲಿಲ್ಲ.

ಸತ್ತ ಮೇಲೆ ಎಲ್ಲರೂ ಅವರನ್ನು ಹೊಗಳುವವರೆ.

****


ಹೌದು. ಸತ್ತ ಮೇಲೆ ಎಲ್ಲರೂ ಅವರ ಗುಣಗಾನ ಮಾಡುವವರೆ.

ಭಟ್ಟರು ಒಮ್ಮೆ ಹೇಳಿದ್ದರು.

ಅಷ್ಟಮಠದ ಒಬ್ಬರು ಸ್ವಾಮಿಗಳು ಒಮ್ಮೆ ಹೇಳಿದ್ದರಂತೆ.

ಸತ್ತಮೇಲೆ ಸತ್ತವರನ್ನು ಹೊಗಳಬಾರದು.

ಅದರಿಂದ ಅವರ ಆತ್ಮಕ್ಕೆ ನಷ್ಟವೆ.

ಸತ್ತ ಮೇಲೆ ಅವರ ಅವಗುಣಗಳನ್ನು ಎತ್ತಿ ಆಡಿದರೆ ಅವರ ಆತ್ಮಕ್ಕೆ ಪ್ರಾಯಶ್ಚಿತ್ತವಾಗುತ್ತದೆ.

*******

ಸ್ವರ್ಗಾರೋಹಣದಲ್ಲಿ ಧರ್ಮರಾಯ ಹಾಗೆ ಅಂತೆ.

ಮೊದಲು ದ್ರೌಪದಿ ಬಿದ್ದಾಗ ಹೇಳಿದನಂತೆ.

“ಅಳಬೇಡಿ. ಅವಳ ಒಳ್ಳೆಯ ಗುಣಗಾನ ಮಾಡಬೇಡಿ.

ಅವಳು ಪಾಪಿ ಅದಕ್ಕೆ ಹೀಗಾಯಿತು”.

ಸಹದೇವ ಬಿದ್ದಾಗಲೂ ಧರ್ಮರಾಯ ಹೇಳಿದನಂತೆ.

ನೋಡಿ. ಪಾಪಿ ಇವನು. ಬಿದ್ದ.

ಇವನಿಗೆ ಮುಂದಾಗುವುದು ಗೊತ್ತಿತ್ತು.

ನಾಟಕ ಮಾಡಿದ.

ಮಹಾಭಾರತ ಯುದ್ಧವನ್ನೇ ತಪ್ಪಿಸಬಹುದಿತ್ತು.

ನಮ್ಮೊಡನೆ ಏನೂ ಗೊತ್ತಿಲ್ಲದವನಂತೆ ಇದ್ದು ನಾಟಕ ಮಾಡಿದ.

******

*ಮುಂದುವರಿಯುವುದು………*

ಗುರುವಾರ, ಆಗಸ್ಟ್ 30, 2018

ಗಾಂಧಾರ ಗಾನ: ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 5ನಾ...

ಗಾಂಧಾರ ಗಾನ: ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 5ನಾ...: ಗಾಂಧಾರ ಗಾನ: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 5 ನಾನು ಇವಳ... : ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 5 ನಾನು ಇವಳಿಗೆ ಹೇಳಬೇಕು. ...
ದಿನೇಶ ಉಪ್ಪೂರ:


*#ನನ್ನೊಳಗೆ - 2*


ಭಾಗ - 6


ಇರಲಿ.  ಮತ್ತೆ ದೊಡ್ಡವರ ಜೀವನ ಚರಿತ್ರೆಯ ಹುಡುಕಾಟ.

ಏನು ಮತ್ತು ಹೇಗೆ ಬರೆಯುತ್ತಾರೆ ಇವರೆಲ್ಲ ?

*******


ಅನಂತ ಮೂರ್ತಿಯ ಸುರಗಿ ಸಿಕ್ಕಿತ್ತು.

ಲೈಬ್ರರಿಯಿಂದ ತಂದು ಓದಿದೆ.

ತುಂಬಾ ಆಧುನಿಕವಾಗಿ ಯೋಚಿಸುವ ಬರಹಗಾರರು.  ಇದ್ದದ್ದನ್ನು ಇದ್ದಂತೆ ಹೇಳುವವರು.

ನಾನೂ ಅವರ ಹಲವು ಭಾಷಣಗಳನ್ನು  ಕೇಳಿದ್ದೆ. ಇಂಟರ್ ನೆಟ್ ನಲ್ಲಿ ಕಂಡಿದ್ದೆ.

ಅಂತಹ ಒಳ್ಳೆಯ ಪುಸ್ತಕ ಅನ್ನಿಸಲಿಲ್ಲ.

ಬರೆಯುವುದು ಅಂದರೆ ಎಲ್ಲಿಯವರೆಗೆ ?

ಹೇಳಬಾರದ , ಹೇಳಲಾಗದ ತೀರಾ ಖಾಸಗಿ ವಿಷಯಗಳನ್ನು ಬರೆದು ಬಿಟ್ಟಿದ್ದಾರೆ.

“ ಆತ್ಮ ಚರಿತ್ರೆ ಅಂದರೆ ಅದಾ?”

ಅದು ಅಪೂರ್ಣ.

ಬಹಳಷ್ಟು ಬರೆಯದೇ ಬಿಟ್ಟಿದ್ದಾರೆ.

***********



ಮತ್ತೆ ಹುಡುಕಾಡಿದೆ.

ಆಗ ಸಿಕ್ಕಿದ್ದು ಪಾಪು ಆತ್ಮಕತೆ.

ಎಲ್ಲವೂ, ಎಲ್ಲೆಲ್ಲಿಯೂ ತಾನು ತಾನು ಅಂತ  ಬರೆದುಕೊಂಡಿದ್ದಾರೆ.

ನೀವೂ ಓದಿರಬಹುದು.

ಅದೂ ಇಷ್ಟವಾಗಲಿಲ್ಲ.

*******



ಮುಂದೆ ಅ.ನ.ಕೃ.ರವರ ಆತ್ಮ ಚರಿತ್ರೆ ಸಿಕ್ಕಿತು.

ತನ್ನ ಬದುಕನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಬಹಳ ಪ್ರಾಮಾಣಿಕವಾಗಿ.

ದಿನಾಂಕ ಘಳಿಗೆ ಸಹಿತ.

ಡೈರಿ ಬರೆಯುತ್ತಿದ್ದಿರಬೇಕು .

ಎಲ್ಲವನ್ನೂ ದಾಖಲು ಮಾಡುವ ಧಾವಂತ.

ನಾನು ಸಣ್ಣವ.

ಅವರೆಲ್ಲರಷ್ಟು ತಿಳಿದವನಲ್ಲ.

*********



ಮುಂದೆ ನನಗೆ ಸಿಕ್ಕಿದ್ದು ರವಿ ಬೆಳೆಗೆರೆಯ ಖಾಸ್ ಬಾತ್ .

ಅವರ ಬರವಣಿಗೆಯ ಶೈಲಿ ನಿರರ್ಗಳ. ಯಾರನ್ನೂ ಹುಚ್ಚು ಹಿಡಿಸೀತು. ಆದರೆ

ಅವರು ಬರೆದದ್ದಕ್ಕಿಂತ ಹೊರಗೆ ಮಾಡಿಕೊಂಡ ರಾದ್ದಾಂತಗಳೆ ಹೆಚ್ಚು.

ಯುಟ್ಯೂಬ್ ಹುಡುಕಿದರೆ ಸಿಗುತ್ತದೆ.

ಬೆಳೆಗೆರೆಯ ಬದುಕು,  ಇರಲಿ.

************



ಭೈರಪ್ಪ ನವರ ಭಿತ್ತಿಯನ್ನು ಮೊದಲೇ ಓದಿದ್ದೆ.

ಮತ್ತೆ ತಂದು ಓದಿದೆ.

ಬಹಳ ಆಪ್ತವೆಂದು ಅನಿಸಿದರೂ, ಅದೆಲ್ಲ  ಸತ್ಯ ಅನ್ನಿಸಲಿಲ್ಲ.

*********


ರಾಮದಾಸರ

“ಎಳೆನಿಂಬೆ” ಯನ್ನೂ ಓದಿದೆ…….

ಅದೂ ಅಪೂರ್ಣ.

ಅಸಮರ್ಥನೀಯ.

ಬಹುಷ್ಯ ಅವರು,  ಅವರ ಎಳವೆಯಲ್ಲಿ ಬರೆದಿರಬೇಕು.

******



ಸಂಜೀವರ “ಸಂಜೀವನ” ನೋಡಿದೆ.

ಬರವಣಿಗೆಯ ಆ ಶೈಲಿ, ಹೊಸತನ ಗಮನ ಸೆಳೆಯುತ್ತದೆ.

ಸಂಜೀವರು ಬಹಳ ಭಾವುಕರಾಗಿ ತನ್ನನ್ನು ತೆರೆದುಕೊಂಡಿದ್ದಾರೆ. ಆದರೆ,

ಉಹೂಂ.

ಅಲ್ಲೊಂದು ಇಲ್ಲೊಂದು ನೆನಪುಗಳನ್ನು ಗುಂಪಾಗಿ ಇಟ್ಟಂತೆ ಇದೆ.

ಅದೂ ಹಿತವಾಗಲಿಲ್ಲ.

*********


ಮೊಗೇರಿ ಗೋಪಾಲ ಕೃಷ್ಣ ಅಡಿಗರ

“ನೆನಪಿನ ಘಣಿಯಿಂದ”

ಎಸ್. ವಿ. ಭಟ್ಟರ ಮನೆಯಿಂದ ಅವರನ್ನು ಕೇಳಿ, ಓದಲು ತಂದೆ.

ಓದಲೇ ಇಲ್ಲ.

*******


ಸಾಕು.

ನಾನು ಇನ್ನು ಓದಬೇಕಾಗಿಲ್ಲ .

ಬರೆಯಬೇಕು.

ಆದರೆ ಅದು ಜನ “ಸಾಕು”. ಅನ್ನುವಷ್ಟು ಆಗಬಾರದು.

ಹೌದು ಎಸ್. ವಿ. ಭಟ್ಟರು ಆವತ್ತು ಯಾವುದೋ ವಿಷಯಕ್ಕೆ ಹೇಳಿದ್ದರು.

“ನಿನಗೆ ಮಾಡಲು ಬಹಳ ಇದೆ. ನೀನು ಬರೆಯಬೇಕು. ಬರೆಯಬಲ್ಲೆ. ಓದಬೇಕು .

ಅವರು ಸಾಕಷ್ಟು ವಿವಿಧ ರೀತಿಯ ಜನರನ್ನು ಕಂಡವರು.

******


*ಮುಂದುವರಿಯುವುದು……….*

ಬುಧವಾರ, ಆಗಸ್ಟ್ 29, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 5ನಾನು ಇವಳ...

ಗಾಂಧಾರ ಗಾನ: ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 5


ನಾನು ಇವಳ...
: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 5 ನಾನು ಇವಳಿಗೆ ಹೇಳಬೇಕು. ಇದು ನಾನು ಬರೆಯುವುದಲ್ಲ. ಯಾರೊ ನನ್ನಿಂದ ಇದನ್ನು ಬರೆಸುತ್ತಿದ್ದಾರೆ . ತಡೆಯೇ ಇ...
ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 5


ನಾನು ಇವಳಿಗೆ ಹೇಳಬೇಕು.

ಇದು ನಾನು ಬರೆಯುವುದಲ್ಲ.

ಯಾರೊ ನನ್ನಿಂದ ಇದನ್ನು ಬರೆಸುತ್ತಿದ್ದಾರೆ .

ತಡೆಯೇ ಇಲ್ಲ ಪುಂಖಾನುಪುಂಖವಾಗಿ ಬಾಣ ಬಿಟ್ಟಹಾಗೆ ಸರಾಗವಾಗಿ ಬರೆಯುತ್ತಿದ್ದೇನೆ .

*****

ರಾತ್ರಿ ಈಗ.

ಇವಳು ಆಗ ಕಣ್ಣು ಬಿಟ್ಟು, ನೋಡಿ ಹೇಳಿದಳು,

“ಸಾಕು ಮಲಗಿ. ಬೆಳಿಗ್ಗೆ ಬರೆದರಾಯಿತು .

“ಆಯಿತು”. ನಾನೆಂದೆ, “ ನೀನು ಮಲಗು”.
***


ವೈದೇಹಿ , ಇಂದು ಬಹು ದೊಡ್ಡ ಬರಹಗಾರರು. ಕಾರಂತರನ್ನು ಹೊರತುಪಡಿಸಿ. ಲೈಬ್ರರಿಯಲ್ಲಿ ಒಂದು ಕಪಾಟಿನಲ್ಲಿ ಬರೆದು ಬಿಟ್ಟಿದ್ದಾರೆ.

“ವೈದೇಹಿ ಬರಹಗಳು”

ನಾನು ಕುತೂಹಲದಿಂದ ಆ ಕಪಾಟು ತೆರೆದು ನೋಡಿದರೆ, ಅಲ್ಲಿ ಅವರ ಬರಹಗಳು ಇರಲೇ ಇಲ್ಲ .

ಯಾರ್ಯಾರದೋ ಸಾಮಾನ್ಯ ಪುಸ್ತಕಗಳು. ಕಾರಂತ ಕುವೆಂಪುರವರದೂ ಹಾಗೆಯೆ.

ಒಮ್ಮೆ ವೈದೇಹಿಯವರಿಗೆ ಹೇಳಬೇಕು.

******


ಒಮ್ಮೆ ಅವರು ನನಗೆ ಫೋನ್ ಮಾಡಿದ್ದರು.

ಅವರೂ ನಮ್ಮ ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ಇದ್ದರು.

“ನಾನು ವೈದೇಹಿ,  ನನಗೆ ಮೊಬೈಲಿನಲ್ಲಿ ಬರೆಯಲು ಬರುವುದಿಲ್ಲ”.

ಹಾಗಾಗಿ ಫೋನ್ ನಲ್ಲಿ.   “ನಿಮ್ಮ ಬರಹಗಳು ತುಂಬಾ ಚೆನ್ನಾಗಿದೆ”

ನನಗೆ ರೋಮಾಂಚನ!.

ಅವರೆಲ್ಲಿ ನಾನೆಲ್ಲಿ ?

***********


ನನ್ನ ಪುಸ್ತಕ ತೊಂಬತ್ತೈದು ಕಂತು ತಲುಪಿದಾಗ,  ಅದನ್ನು ಪರಿಷ್ಕರಿಸಿ ಅರವತ್ತೈದಕ್ಕೆ ಇಳಿಸಿ, ಇಷ್ಟು ಸಾಕು ಎಂದು ಒಂದು ಪುಸ್ತಕ ಮಾಡಿ ಅವರಿಗೆ ಫೋನ್ ಮಾಡಿದೆ.

“ಮೇಡಂ,  ಆವತ್ತು ನೀವು ನನ್ನ “ನನ್ನೊಳಗೆ” ಬರಹವನ್ನು ಮೆಚ್ಚಿ ಎರಡು ಮಾತು ಹೇಳಿದ್ದೀರಿ. ಈಗ ಮುಗಿದಿದೆ.

ಒಮ್ಮೆ ತಂದು ಕೊಡಲೇ?   ಓದಿ ಅಭಿಪ್ರಾಯ ತಿಳಿಸಬಹುದೇ?

“ಏನು ಪುಸ್ತಕ ಮಾಡುತ್ತೀರಾ ?  ತನ್ನಿ . ನೋಡುತ್ತೇನೆ”

ಅಂದರು ನಮ್ರನಾಗಿ.

ಓಡಿದೆ.  ಅವರ ಮಣಿಪಾಲದ ಅನಂತಪುರದ ಮನೆಗೆ ಹುಡುಕಿಕೊಂಡು ಹೋದೆ. ಅವರಿದ್ದರು .

*********



ನನಗೆ ಪುಸ್ತಕ ಮಾಡುವ ಉದ್ದೇಶ ಇಲ್ಲ.

ಆದರೆ , ನೀವೂ ಒಮ್ಮೆ ಓದಿನೋಡಿದರೆ ನನಗೆ ಸಮಾಧಾನ.

ಅದರಲ್ಲಿ ತೀರಾ ಖಾಸಗಿಯಾದ ವಿಷಯಗಳು ಇವೆ . ಅದೆಲ್ಲ ಯಾಕೆ? ಎಲ್ಲರ ಜೀವನದಲ್ಲೂ ಇರುತ್ತದೆ. ಇರುವುದೆಲ್ಲವ ಬಿಟ್ಟು….  ಸಾಕು ಬಿಡಿ ” ಅಂದವರಿದ್ದಾರೆ.

ನೋಡುವ ಎಂದೆ.

ಅವರಿಗೆ ಎಲ್ಲವೂ ವಿಸ್ಮಯಗಳೆ ?

*********



ಮುಗ್ದ ಮನಸ್ಸಿನ ಮಗಳು.

ಕುಂದಾಪುರ ಕನ್ನಡವನ್ನೇ ಮಾತಾಡುವವರು. ಬರೆಯುವವರು. ಅವರು.

ಯುಟ್ಯೂಬ್ ನಲ್ಲಿ ಅವರ ಯಾವುದೋ  ಸಂದರ್ಶನ ನೋಡಿದ್ದೆ.

ಅಲ್ಲಿಯೂ ಮುಜುಗರವಾಗುವಷ್ಟು ಕುಂದಾಪುರ ಕನ್ನಡ.

ನನಗೆ ಯಾಕೋ ಗೌರವ. ಆಕೆಯ ಮೇಲೆ.

********



ಒಂದು ಹದಿನೈದು ದಿನದಲ್ಲಿ ನನಗೆ ಫೋನ್ ಮಾಡಿದರು.

“ಒಂದು ಪೇಜು ಬರೆದಿಟ್ಟಿದ್ದೇನೆ. ಪುಸ್ತಕ ಚೆನ್ನಾಗಿದೆ. ನೀವು ಪುಸ್ತಕ ಮಾಡುವಾಗ ಮುನ್ನುಡಿಯ ಬಗ್ಗೆ ಬರೆಯಲು ನೋಡುವೆ. ಅಂದರು. ಹೋದೆ.

“ಈ ನಿಮ್ಮ ಪುಸ್ತಕ ನನಗೆ. ಇಗೊ ಈ ಒಂದು ಹಾಳೆ ನಿಮಗೆ”.

ನನಗೆ ಮುಜುಗರವಾಯಿತು.

ಅವರೆಲ್ಲಿ ?  ನಾನೆಲ್ಲಿ?

*”****



“ನಿಮ್ಮ ಪುಸ್ತಕ ಯಾವುದಾದರೂ ಇದೆಯ?

ನಾನು ಈಗ ತಾನೆ ಓದಲಿಕ್ಕೆ ಶುರು ಮಾಡಿದ್ದೇನೆ”

ಅವರದು ಆ ಮಟ್ಟಿಗೆ ನಿಷ್ಠುರ. ಈಗ ನನ್ನಲ್ಲಿ ಯಾವುದೂ ಇಲ್ಲ.

ಇದ್ದರೆ ಕೊಡುತ್ತಿದ್ದೆ . ನನಗೆ ಕೊಡಬಾರದೆಂದೇನೂ ಇಲ್ಲ.

ನನ್ನ ಸಮಗ್ರ ಕತೆಗಳು ಪ್ರಕಟವಾಗಿದೆ. ರಿಯಾಯಿತಿ ದರದಲ್ಲಿ ಸಿಗುತ್ತದೆ.

ನೀವು ಬುಕ್ ಮಾಡಿ ಹಣ ಕೊಟ್ಟು ತರಿಸಿಕೊಳ್ಳಬಹುದು.

“ಇಗೊಳ್ಳಿ ನೀವು ಕೇಳಿದ್ದಕ್ಕೆ . ನಾನೇ ಬರೆದದ್ದು.

“ಅಮ್ಮಚ್ಚಿ ಯೆಂಬ ನೆನಪು ” ಅವರ ಪುಸ್ತಕ ಕೊಟ್ಟರು…….

ಮನೆಗೆ ತಂದು ಓದಿದೆ.

ಹಳ್ಳಿಯ ಸೊಗಡು ಇರುವ ಬರಹಗಳು.

ಆಪ್ತವಾದವುಗಳು.

ಅದರಲ್ಲಿ ಒಂದು ಸಿನಿಮಾ ಆಗುತ್ತಿದೆಯಂತೆ.

ಅದನ್ನೂ ಹೇಳಲಿಲ್ಲ ಅವರು.

“************


ನಿನ್ನೆ , ಭೀಮಣ್ಣ ತಹಶೀಲ್ದಾರ್ ಎನ್ನುವ ನನ್ನ ಜೀವನದ ದಿಕ್ಕನ್ನು ಬದಲಿಸಿದ ಶಿವಮೊಗ್ಗದ ಒಬ್ಬ ಡಾಕ್ಟರ್ ಮಹಾನುಭಾವರು ಅದು  ಹೇಗೋ ನಂಬರ್ ಹುಡುಕಿ ತೆಗೆದು ಫೋನ್ ಮಾಡಿದ್ದರು.

ಅವರು ಯಾರೆಂದು ನಿಮಗೆ ನನ್ನ “ನನ್ನೊಳಗೆ-1” ಓದಿದ್ದರೆ ಖಂಡಿತಾ ನೆನಪಿರಬಹುದು.

ಅವರ ಒಂದೇ ಒಂದು ಸಹಿಯಿಂದ ನನಗೆ ಕೆಲಸ ಸಿಕ್ಕಿತ್ತು ,ನಮ್ಮ ಆಗಿನ ಕೆಇಬಿಯಲ್ಲಿ.

******

ಹೌದು ಅವರಿಗೂ ಆತ್ಮ ಕತೆ ಬರೆಯಬೇಕು ಎನ್ನಿಸಿತ್ತಂತೆ.

“ನೀವು ಬರೆಯುವ ಭಾಷೆ ಸರಳವಾಗಿದೆ. ಚೆನ್ನಾಗಿದೆ. ಒಮ್ಮೆ ನಿಮ್ಮನ್ನು ಭೇಟಿಯಾಗುವೆ. ಮಾತಾಡೋಣವೇ?  ಸಹಾಯ ಮಾಡುವಿರಾ?”

ಎಂದು ವಿನಯದಿಂದ ಕೇಳಿದರು.

ಅಬ್ಬಾ ಅದಕ್ಕಿಂತ ಧನ್ಯತೆ ಇನ್ನು ಬೇರೆ ಇದೆಯಾ?

‘ಬನ್ನಿ” ಎಂದಿದ್ದೇನೆ.



*ಮುಂದುವರಿಯುವುದು…………..*

ಮಂಗಳವಾರ, ಆಗಸ್ಟ್ 28, 2018

ದಿನೇಶ ಉಪ್ಪೂರ:


*#ನನ್ನೊಳಗೆ - 2*

ಭಾಗ - 4


ಆದರೆ ವಿಧಿ.

ಹಾಗೆಯೇ ಆಯಿತು. ಯಾರೋ ಈ ಹುಡುಗ ಎರಡು ಕಡೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಇವನ ಬಾಸ್ ಗೆ ತಿಳಿಸುವುದಾಗಿ ಹೆದರಿಸಬೇಕು.

. ಆರ್ ಎಂ ಎಸ್ ನ ಇವನ ಬಾಸ್ ಗೆ , ಇವನೇ ಹೋಗಿ ಹೇಳಿದ.

“ಏನು ಮಾಡುವುದು? ಸರ್ ಹೇಳಿ “ ಎಂದು

ಪಿಪಿಸಿಯಲ್ಲಿ ಇವನು ಕೆಲಸ ಮಾಡುವುದು ಅವರಿಗೂ ಗೊತ್ತಿತ್ತು.

ಅವರು ಹೇಳಿದರಂತೆ “ನಿನಗೆ ಈ ಕೆಲಸ ಅಲ್ಲ. ನೀನು ಪ್ರತಿಭಾವಂತ. ನಿನಗೆ ಒಳ್ಳೆಯ ಭವಿಷ್ಯವಿದೆ. ಓದು”.

ಇವನ ವಿರುದ್ಧ ಯಾರೂ ದೂರು ದಾಖಲಿಸಲಿಲ್ಲ.

ಮುಂದೆ ಒಳ್ಳೆಯದಾಗುತ್ತದೆ, ಎಂದದ್ದೇ, “ನಿಮ್ಮ ಆಶೀರ್ವಾದ” ಎಂದು ಆ ಖಾಯಂ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಿಟ್ಟ. ಧೈರ್ಯ ವಂತ.

*****


ಹೆದರಲಿಲ್ಲ. ಬದುಕು ಕೊಡುವ ಖಾಯಂ ಕೆಲಸ. ಸೆಂಟ್ರಲ್ ಗವರ್ನ್ ಮೆಂಟ್ ಕೆಲಸ. ಇವನಿಗೆ ತುಚ್ಚವಾಗಿ ಕಂಡಿತು.

ನನಗಿನ್ನೂ ದೊಡ್ಡ ಭವಿಷ್ಯವಿದೆ. ಕನಸು ಕಂಡ ಹುಡುಗ,

ಪಿ ಎಚ್ ಡಿ ಮಾಡಿದ.ಡಾಕ್ಟರೇಟ್ ಪಡೆದ.

********




ಈಗ ಪಾರ್ಟ್ ಟೈಮ್ ಕಡಿಮೆ ಸಂಬಳ. ತಿಂಗಳಿಗೆ ನಾನೂರೋ ಐನೂರೋ ಸಂಬಳ. ಅವನಿಗೆ ಅದು ಕೆಡುಕು ಅನ್ನಿಸಲಿಲ್ಲ .

ಕಮಲಶಿಲೆ ಮೇಳಕ್ಕೆ ಹೋಗಿ ಭಾಗವತನಾಗಿ ಕುಳಿತು ತಾಳ ಹಿಡಿದ. ಆದರೆ ಅದು ಅವನನ್ನು ಹಿಡಿಯಲಿಲ್ಲ. ಅದನ್ನೂ ಬಿಟ್ಟ.

*********



ರಾಜಕೀಯದವರ ಜೊತೆಗೆ ಸೇರಿ ಚುನಾವಣಾ ಪ್ರಚಾರದ ಭಾಷಣ ಮಾಡಿದ.

ಅದು ಬದುಕಿಗೆ ಅನ್ನ ಕೊಡಲಿಲ್ಲ.

ಓದುವ ದಾಹ. ಅಲ್ಲಿಯೇ ಇದ್ದು ಅದೇ ಸಂಬಳದಲ್ಲಿ ಪಿಹೆಚ್ ಡಿ ಯನ್ನು ಮಾಡಿದ . ಮುಂದೆ ಅದೇ ಕೆಲಸ ಖಾಯಂ ಆಯಿತು.

ಈಗ ಬಹುಷ್ಯ ಯುಜಿಸಿ ಸ್ಕೇಲ್. ಒಂದು ಲಕ್ಷಕ್ಕೆ ಕಡಿಮೆ ಇಲ್ಲದಂತೆ ತೆಗೆದು ಕೊಳ್ಳುತ್ತಿರಬಹುದು. ನನ್ನ ಸಮಪ್ರಾಯ ಅವನಿಗೆ . ಇನ್ನೂ ಸರ್ವೀಸ್ ಇದೆ.

ಈಗ ಅವನೇ ಪಿಪಿಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಂತೆ

********



“ನೀವು ಚೆನ್ನಾಗಿ ಬರೆಯುತ್ತೀರಿ. ಸರಳವಾಗಿ. ಕಾರಂತರಂತೆ.

ನಿಜಕ್ಕೂ, ನನಗೆ  ಕಾರಂತರ ‘ಅಳಿದ ಮೇಲೆ’ ನೆನಪಾಯಿತು”.

“ಒಳ್ಳೆಯ ಹುಡುಗಾಟ ನಿಮ್ಮದು’.

ವಾಟ್ಸಾಪ್ ನಲ್ಲಿ ಬಂದ ನನ್ನ “ನನ್ನೊಳಗೆ”

ಓದಿ ಅವನ ಉದ್ಘಾರ ಅದು. ಕಾರಂತರೆಲ್ಲಿ ನಾನೆಲ್ಲಿ !

ನಾನು ಈಗಷ್ಟೆ ಕಣ್ಣು ಬಿಟ್ಟವನು. ಬರೆಯಲು ಪ್ರಾರಂಭಿಸಿದವನು. ಬದುಕಿನ ಕೊನೆಯಲ್ಲಿ. ಇದ್ದ ಸರಕಾರಿ ಉದ್ಯೋಗವನ್ನು ಬಿಟ್ಟು. ನಾನೇನು ಸಾಧಿಸಬಲ್ಲೆ?.

ಪಾಪ . ಅವರ ಮನಸ್ಸು ದೊಡ್ಡದು.

********




ಹೌದು. ಲೈಬ್ರೆರಿಯಲ್ಲಿ ನಾನು ಮೊದಲು ಓದತೊಡಗಿದ್ದು ಕಾರಂತರ ಪುಸ್ತಕಗಳನ್ನು.

ಶ್ರೀಧರ ಅಣ್ಣಯ್ಯನಲ್ಲೂ ಕೆಲವು ಪುಸ್ತಕ ಇತ್ತು .

ಕೇಳಿ ತಂದೆ ಓದಿದೆ. ಒಂದೊಂದೆ.

ಅದೊಂದು ಭಾವಲೋಕ. ಯಾರೂ ಬರೆಯಲಾರದಷ್ಟು ಬರೆದಿದ್ದಾರೆ. ಮೈಮನಗಳ ಸುಳಿಯಲ್ಲಿ,  ಮರಳಿ ಮಣ್ಣಿಗೆ , ಧರ್ಮರಾಯನ ಸಂಸಾರ, ಬೆಟ್ಟದ ಜೀವ, ಕರುಳಿನ ಕರೆ.ಶನೀಶ್ವರನ ನೆರಳಿನಲ್ಲಿ,, ಸ್ವಪ್ನದ ಹೊಳೆ, ಮುಗಿದ ಯುದ್ಧ,  ಸನ್ಯಾಸಿಯ ಬದುಕು, ಔದಾರ್ಯದ ಉರುಳಲ್ಲಿ, ಸರಸಮ್ಮನ ಸಮಾಧಿ. ಕುಡಿಯರ ಕೂಸು. ಮೂಕಜ್ಜಿಯ ಕನಸುಗಳು……..ಇನ್ನೂ..

ಅವರು ಸಾವಿರದಷ್ಟು ಬರೆದಿರಬಹುದು.

ಒಂದಾ ಎರಡಾ? ಎಲ್ಲ ಕ್ಷೇತ್ರದಲ್ಲಿ ಯೂ ಇದ್ದಾರೆ.

******



ಅವರ ಆತ್ಮಕತೆ ಹುಚ್ಚು ಮನಸ್ಸಿನ ಹತ್ತು ಮುಖಗಳು.ಓದಬೇಕು.

ಅದೊಂದೇ ಸಾಕು. ಅವರ ವಿರಾಟ್ ರೂಪವನ್ನು ತಿಳಿಯುವುದಕ್ಕೆ.

ಅದು ಅವರಿಗೆ ಸಾಕಾಗಲಿಲ್ಲ ಮತ್ತೂ ಬರೆದರು. ಮತ್ತೆ  ನಾಲ್ಕಾರು ಪುಸ್ತಕಗಳು.

ಸ್ಮೃತಿ ಪಟಲದಲ್ಲಿ……

ಒಂದು ಜೋಳಿಗೆ ಚೀಲ ಬಗಲಲ್ಲಿ.

ಅದರಲ್ಲಿ‌ ಗೋದಿ ಹಿಟ್ಟು. ಅವಲಕ್ಕಿ. ಇಷ್ಟೆ. ದಿನದ ಹಸಿವಿನ ಶಮನಕ್ಕೆ

ಅವಧೂತನಂತೆ ಊರೂರು ತಿರುಗಿದರು. ಬರೆದರು.

ಕುಣಿದರು ವಿದೇಶಕ್ಕೆ ಹಾರಿದರು. ಇತರರಿಗೆ ಕಲಿಸಿದರು.

ಯಕ್ಷಗಾನ ಬಯಲಾಟಕ್ಕೆ ಪ್ರಶಸ್ತಿಯ ಗರಿ.

*****




ಮತ್ತೆ  ದೊಡ್ಡ ದೊಡ್ಡವರ ಆತ್ಮ ಚರಿತ್ರೆ ಓದಬೇಕು.

ಲೈಬ್ರೆರಿಯಲ್ಲಿ ಹುಡುಕಾಡಿದಾಗ ಕೈಗೆ ಸಿಕ್ಕಿದ್ದು.

ಬಿ.ವಿ.ಕಾರಂತರ ಬದುಕು.

ವೈದೇಹಿಯವರು, ಅವರ ಜೊತೆಗೆ ಇದ್ದು, ಬರೆದದ್ದು ತಿಂಗಳು ಗಟ್ಟಳೆ .

ಮತ್ತೂ ದೀರ್ಘ ಅವಧಿ.

 ಕೊನೆಗೆ ಬಿವಿ ಕಾರಂತರ ಅನಾರೋಗ್ಯ.

ರಾತ್ರಿಯೂ ಪೋನ್ ಮಾಡುತ್ತಿದ್ದರಂತೆ.

“ವೈದೇಹಿ, ಬೇಸರ ಮಾಡಬೇಡ. ಇದೊಂದು ಹೇಳುವುದು ಬಿಟ್ಟು ಹೋಯಿತು”.

ಇವರು “ಇಲ್ಲ ತೊಂದರೆ ಇಲ್ಲ . ಹೇಳಿ”  ಎಂದು ಆಗಲೇ ನೋಟ್ ಮಾಡಿಕೊಳ್ಳುತ್ತಿದ್ದರು. ಅವರೂ ಒಂದು ಅದ್ಭುತ.

ಅವರು ಮಾತನಾಡುವುದು, ಇಂದಿಗೂ ಕುಂದಾಪುರ ಕನ್ನಡದಲ್ಲಿ.

*********


*ಮುಂದುವರಿಯುವುದು….*

ಸೋಮವಾರ, ಆಗಸ್ಟ್ 27, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 3ಮೊಬೈಲಲ್ಲ...

ಗಾಂಧಾರ ಗಾನ:
ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 3

ಮೊಬೈಲಲ್ಲ...
: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 3 ಮೊಬೈಲಲ್ಲಿ ಬರೆಯುವುದೇ ನನಗೆ ಇಷ್ಟ. ಕೈಯಿಂದ ಪೇಪರಲ್ಲಿ ಬರೆಯುವುದು ಯಾವಾಗಲೋ ಬಿಟ್ಟು ಹೋಯಿತು. ಕಂಪ್ಯೂಟರ್ ಮುಂ...

ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 3

ಮೊಬೈಲಲ್ಲಿ ಬರೆಯುವುದೇ ನನಗೆ ಇಷ್ಟ.
ಕೈಯಿಂದ ಪೇಪರಲ್ಲಿ ಬರೆಯುವುದು ಯಾವಾಗಲೋ ಬಿಟ್ಟು ಹೋಯಿತು. ಕಂಪ್ಯೂಟರ್ ಮುಂದೆ ಕುಳಿತರೆ ಬರೆಯಬಹುದು.
ಆದರೆ ಇತ್ತೀಚೆಗೆ ಅದೂ ಟಚ್ಚು ಬಿಟ್ಟು ಹೋಗಿದೆ.
*******

ಮೊಬೈಲಲ್ಲಾದರೆ ಬರೆಯಬಹುದು.
ಕುಳಿತು . ನಿಂತು. ಮಲಗಿ. ಇದಕ್ಕೆ ಒಂದೇ ಬೆರಳು ಸಾಕು.
ಪಟಪಟಾ ಅಂತ ಬರೆಯಬಲ್ಲೆ.
ನನಗೆ ಅದು ಅಭ್ಯಾಸವಾಗಿ ಹೋಗಿದೆ. ಮನಸ್ಸಿನಲ್ಲಿ ಇದ್ದದ್ದು ಕೂಡಲೇ ಮೊಬೈಲಿಗೆ ಇಳಿಸಬಹುದು.
ಕೊನೆಗೆ ಎಲ್ಲ ಆದ ಮೇಲೆ ವಾಕ್ಯ ಶಬ್ಧ ಸರಿಮಾಡಬಹುದು.
********

ಹೌದು. ಎಲ್ಲಿಗೆ ನಿಲ್ಲಿಸಿದೆ?
ಹೌದು ಲೈಬ್ರೆರಿಗೆ ಹೋಗುತ್ತಿದ್ದೆ . ಪ್ರತೀದಿನ ಯಾವು ಯಾವುದೋ ಪುಸ್ತಕ ತರುತ್ತಿದ್ದೆ . ಓದುತ್ತಿದ್ದೆ ಮರಳಿಸುತ್ತಿದ್ದೆ.
ಹಿಂದೆ ಆಫೀಸಿನ ಜಂಜಾಟದಲ್ಲಿ ಬರೆಯುವುದು, ಓದುವುದೇ ಬಿಟ್ಟುಹೋಗಿತ್ತು.
***********

ಮೊದಲಿಗೆ ಕಾರಂತರ ಪುಸ್ತಕ ಓದುವ ಅಂತ ಅನ್ನಿಸಿತು.
ಅದು ಅಡೀ ಇತ್ತು. ಅದನ್ನು ಓದುವವರು ಕಡಿಮೆ.
 ಲೈಬ್ರೆರಿಯಿಂದ ಸಿಕ್ಕಿದ್ದು ತಂದು ಓದಿದೆ ಓದಿದೆ. ಅದು ಎಂತದ್ದು !
ಕಾರಂತರು ಒಬ್ಬ ಮನುಷ್ಯ ಅಲ್ಲ .ದೈತ್ಯ ಅಲ್ಲ.  ಆ ಹೋಲಿಕೆ ಬೇಡ. ವಿರಾಟ್ ಆಗಿ ಬೆಳೆದ ದೈವ ಅಲ್ಲ ದೇವ ಶಕ್ತಿ ಅವರು.
ಒಂದು ಭಂಡಾರ .
ಕಾರಂತರು ಮುಟ್ಟದ ವಿಷಯ ಇಲ್ಲ . ಹಿತ್ತಲ ಗಿಡ ಮದ್ದಲ್ಲ.
ಆಡು ಮುಟ್ಟದ ಸೊಪ್ಪಿಲ್ಲ . ಯಾರೋ ಬರೆದಿದ್ದರು .
ಹೌದು ಕಾರಂತರು ಈಗಲೂ ಇದ್ದಿದ್ದರೆ ಇನ್ನೂ ಬರೆಯುತ್ತಿದ್ದರು. ನೀವು ಬೇಕಾದರೆ ಓದಿ . ಬೇಡದಿದ್ದರೆ ಬಿಡಿ.  ನನಗೆ ಬರೆಯಬೇಕು ಅನ್ನಿಸಿದೆ. ಬರೆಯುತ್ತೇನೆ.
ಬೇಡ ಅನ್ನಿಸಿದರೆ ಬಿಡುತ್ತೇನೆ.
ಇದು ಕಾರಂತರ ಮಾತು .
ನನಗೂ ಹಾಗೆಯೇ.
ನಾನು ಸಣ್ಣವ.
*********

 ನಾನು ಕಾರಂತರನ್ನು ಆವಾಹಿಸಿಕೊಂಡವನು.
ಯಾರು ಓದದಿದ್ದರೂ ನಾನು ಬರೆಯ ಬೇಕು ಅನ್ನಿಸಿದರೆ, ಬರೆಯುತ್ತೇನೆ . ಈಗ ಮೊದಲಿನ ಹಾಗೆ ಅಲ್ಲ.  ಪ್ರಕಟಿಸುವವರು ಅಂತ ಪತ್ರಿಕೆ ಬೇಕಿಲ್ಲ . ಸಂಪಾದಕರ ಹಂಗಿಲ್ಲ.
ಮನಸ್ಸಿಗೆ ತೋಚಿದಂತೆ ಫೇಸ್ ಬುಕ್ಕಿನಲ್ಲಿ ಬರೆದುಬಿಡಬಹುದು.
ವಾಟ್ಸಾಪ್ ನಲ್ಲಿ ಹರಿದು ಬಿಡಬಹುದು.
ಬರೆಯಬೇಕು ಅನ್ನಿಸಿದರೆ ಬರೆದು ಬಿಡುತ್ತೇನೆ ನಾನು.
ನಾನು ನನ್ನ ಕುಷಿಗೆ ಬರೆಯುವವನು.
*****************


ಅವನು ಶ್ರೀಕಾಂತ.
 ನನಗೆ ಯಾವಾಗಲಾದರೊಮ್ಮೆ ನೆನಪಾಗುತ್ತಾನೆ . ನಾನು ಎಂಟನೇ ಕ್ಲಾಸಿನಿಂದ ಅವನನ್ನು ಬಲ್ಲೆ.
 ಬಹಳ ಹಠವಾದಿ. ಅವನಿಗೆ ಪಿಯುಸಿ ಯಾಗುವಾಗಲೇ ಕೆಲಸ ಸಿಕ್ಕಿತ್ತು. ಆರ್ ಎಮ್ ಎಸ್ ನಲ್ಲಿ ಕೆಲಸ.
 ಅವನಿಗೆ ಆಗಿನ ಕಾಲಕ್ಕೆ ಅದು ಒಳ್ಳೆಯ ಕೆಲಸವೆ. ಆದರೆ ಹುಡುಗನಿಗೆ ಓದುವ ಹುಚ್ಚು.
ಮನೆಯಲ್ಲಿ ಅಂತಹ ಅನುಕೂಲವೇನಿಲ್ಲ.  ಉಡುಪಿಯಲ್ಲಿ ಕಾಲೇಜು ಸೇರಿ ಓದಿದ.
ಮಾಸ್ಟರ್ ಡಿಗ್ರಿ ಪಡೆದೂ ಆಯಿತು.
ಮತ್ತೆ ಅವನಿಗೆ ಪಾಠ ಮಾಡುವ ಹುಚ್ಚು. ಆರ್ ಎಂ ಎಸ್ ನಲ್ಲಿ ಕುಳಿತು ಬರೆಯುವುದು ನನಗೆ ಸಾಧ್ಯವಿಲ್ಲ ಅನ್ನಿಸಿರಬೇಕು.
ಪಿಪಿಸಿಯಲ್ಲಿ ಪಾರ್ಟ್ ಟೈಮ್ ಆಗಿ ಕೆಲಸ ಸಿಕ್ಕಿಯೇ ಬಿಟ್ಟಿತು. ಹಗಲಿನಲ್ಲಿ ಪಾಠ ಮಾಡುವುದು. ರಾತ್ರಿ ಆರ್ ಎಂ ಎಸ್ ನಲ್ಲಿ ದುಡಿಯುವುದು. ಆರೂರು ಕಂಪೌಂಡ್ ನಲ್ಲಿ ವಾಸ.
 ನನಗೂ ಆಗಿನ ಕೆಇಬಿಯಲ್ಲಿ ಕೆಲಸ ಇತ್ತಲ್ಲ?. ಆಗಾಗ ಎದುರು ಸಿಗುತ್ತಿದ್ದ. “ಉಪ್ಪೂರರೆ, ನನಗೆ ರೀಸರ್ಚ್ ಮಾಡಬೇಕು”
 ನಾನು,
“ ಮಾಡಿ ಮರ್ರೆ . ರೀಸರ್ಚ್ ಮಾಡಿ. ಇನ್ನೇನೇ ಮಾಡಿ.  ಆದರೆ ಹೀಗೆ ಮಾಡಿ ಎರಡು ದೋಣಿಗೆ ಕಾಲು ಹಾಕಿಕೊಂಡು, ಇರುವ ಕೆಲಸ ಕಳೆದುಕೊಳ್ಳಬೇಡಿ. ಹೊಟ್ಟೆಯ ಹಿಟ್ಟಿಗೆ ಮೋಸ ಮಾಡಿಕೊಳ್ಳಬೇಡಿ” ಎಂದೆ.
*****************

*ಮುಂದುವರಿಯುವುದು……….*

ಭಾನುವಾರ, ಆಗಸ್ಟ್ 26, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ-2*ಭಾಗ - 2ಕೆಲವರು ಆಗ ಹೇ...

ಗಾಂಧಾರ ಗಾನ: ದಿನೇಶ ಉಪ್ಪೂರ:

*#ನನ್ನೊಳಗೆ-2*
ಭಾಗ - 2

ಕೆಲವರು ಆಗ ಹೇ...
: ದಿನೇಶ ಉಪ್ಪೂರ: *#ನನ್ನೊಳಗೆ-2* ಭಾಗ - 2 ಕೆಲವರು ಆಗ ಹೇಳಿದ್ದರು. “ಹೋ , ಮುಗಿಸಿಯೇ ಬಿಟ್ಟಿರಾ? ಬೇಡ ಮುಂದುವರಿಸಿ. ನಾವು ಓದುತ್ತೇವೆ” ಅಂದರು. ಏನು ಬರೆಯು...
ದಿನೇಶ ಉಪ್ಪೂರ:

*#ನನ್ನೊಳಗೆ-2*
ಭಾಗ - 2

ಕೆಲವರು ಆಗ ಹೇಳಿದ್ದರು.

“ಹೋ , ಮುಗಿಸಿಯೇ ಬಿಟ್ಟಿರಾ? ಬೇಡ ಮುಂದುವರಿಸಿ. ನಾವು ಓದುತ್ತೇವೆ” ಅಂದರು.

ಏನು ಬರೆಯುವುದು? ಬರೆಯಲು ಒಳಗಿನಿಂದ ಒತ್ತಡ ಬರಬೇಕು.
ಬರೆಯದೇ ಇರಲಾರದಷ್ಟು .

 ಬರೆಯದಿದ್ದರೆ ಆಗುವುದೇ ಇಲ್ಲ ಅನ್ನುವಷ್ಟು ಒತ್ತಡ ಬರಬೇಕು.
ಇಲ್ಲದಿದ್ದರೆ ನನಗೆ ಬರೆಯಲು ಅಗುವುದಿಲ್ಲ.
**********


ಆವತ್ತು ಇನ್ ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಹೋಗಿದ್ದೆ.

ಕುಂದಾಪುರಕ್ಕೆ .
 ಅವರೂ ನನ್ನ ಒಬ್ಬ ಸ್ನೇಹಿತರು ರಾಮಕೃಷ್ಣ ಐತಾಳರು.  ಅವರಲ್ಲಿಗೆ ಹೋಗಿದ್ದೆ.

ಅವರೂ ನನಗೆ ಮೊದಲಿನಿಂದಲೂ ಪರಿಚಯ. ಅದು ಹೇಗೋ ಮತ್ತೆ ಕುಂದಾಪುರಕ್ಕೆ ಹೋದ ಮೇಲೆ ಪರಿಚಯವಾಯಿತು.

ನನ್ನ ಆಫೀಸಿನ ಟ್ಯಾಕ್ಸ್ ಫೈಲ್ ಮಾಡುತ್ತಿದ್ದುದು ಅವರೆ.

ಈಗಲೂ ಮುಂದುವರಿದಿಸಿದ್ದಾರೆ.
***********

ನಾನು ಅಲ್ಲಿಗೆ ಹೋಗಿದ್ದೆ.

ಅವನು ಅವರ ಆಫೀಸಿನಲ್ಲಿ ಇರುವ ಒಬ್ಬ ನನ್ನನ್ನು ಮಾತಾಡಿಸಿದ.

ಅವನು ಅರುಣ,

 ನನ್ನನ್ನು ನೋಡಿದ ಕೂಡಲೆ ಹೇಳಿದ.

“ಸರ್, ನೀವು ನನ್ನೊಳಗೆ ಬರೆಯುವಾಗ ನಮಗೆ ಬೆಳಿಗ್ಗೆ ಎದ್ದಕೂಡಲೇ ಅದೇ ಕೆಲಸ. ಅದನ್ನು ಓದಿಯೇ ಮುಂದಿನ ಕೆಲಸ. ಈಗ ಬರೆಯುವುದಿಲ್ಲವೇ? ಬರೆಯಿರಿ ಸರ್.”

ನನ್ನ ಹೃದಯ ತುಂಬಿ ಬಂತು.

ಇವರಿಗೆಲ್ಲ ನಾನು ಏನಾಗಬೇಕು?
*******


ಮತ್ತೆ ಎಲ್ಲರೂ ಆತ್ಮ ಚರಿತ್ರೆ ಬರೆಯುತ್ತೇವೆ ಅಂತ ಬರೆಯುತ್ತಾರಲ್ಲ .
ಏನಿರುತ್ತದೆ ಅದರಲ್ಲಿ?

ಸರಿ. ಹುಡುಕಾಟ ಶುರುವಾಯಿತು.
ನಾನು ನಿವೃತ್ತನಾದ ಮೇಲೆ ಪ್ರತೀ ದಿನ ಉಡುಪಿಯ ಜಿಲ್ಲಾ ಲೈಬ್ರರಿಗೆ ಹೋಗುತ್ತಿದ್ದೆ.

 ಬೇರೆ ಯಾವ ಪುಸ್ತಕವೂ ನನಗೆ ಬೇಡ.
ಸುಮ್ಮನೇ ಯಾಕೆ ಎಲ್ಲರೂ ಬರೆಯುತ್ತಾರೆ ?

ಲೈಬ್ರೆರಿ ತುಂಬಾ ಪುಸ್ತಕಗಳೆ.
ಆದರೆ ಅಲ್ಲಿಯ ವ್ಯವಸ್ಥೆ ಸರಿ ಇಲ್ಲ . ಅಲ್ಲಿ ಪುಸ್ತಕದ ಬಗ್ಗೆ ಸರಿಯಾಗಿ ಗೊತ್ತಿದ್ದವರು ಇಲ್ಲ.

ಸಾಧ್ಯವಾದರೆ ನಾನೇ ಅದನ್ನು ಸರಿ ಮಾಡಬೇಕು ಅಂತ ಒಮ್ಮೊಮ್ಮೆ ಅನ್ನಿಸಿ ಬಿಡುತ್ತದೆ.

ಆದರೆ ನಾನು ಈಗ ಅಲ್ಲಿಯ ನೌಕರ ಅಲ್ಲ. ಅಧಿಕಾರವೂ ಇಲ್ಲ.
**********


ಈಗ ರಾತ್ರಿ ಹನ್ನೆರಡು ಗಂಟೆ.
ಫಕ್ಕನೆ ಎಚ್ಚರ‌ವಾಯಿತು.

ಈತ್ತೀಚೆಗೆ ಪ್ರತೀದಿನ ಹಾಗೆ.
ರಾತ್ರಿ ಎಚ್ಚರವಾಗುತ್ತದೆ.
ಇವಳು,

 “ರಾತ್ರಿ ಅಂತ ನೋಡದೇ ನೀವು ಯಾರು ಯಾರಿಗೋ ಮೆಸೇಜು ಮಾಡುತ್ತೀರಿ.
 ಇಲ್ಲದ ತೊಂದರೆ ತಂದುಕೊಳ್ಳುತ್ತೀರಿ. ಮತ್ತೆ ತಲೆಬಿಸಿ ಮಾಡಿಕೊಳ್ಳುವುದು.”
ಎಂದು ನನ್ನ ಮೊಬೈಲನ್ನು ಅಡಗಿಸಿ ಇಟ್ಟಿದ್ದಳು.

ನಾನು ಮೆಲ್ಲಗೆ ಅವಳು ಮಗ್ಗುಲಾದಾಗ ಎಚ್ಚರಾಯಿತು ಎಂದು ತಿಳಿದು, ಕೇಳಿದೆ

“ನನ್ನ ಮೊಬೈಲು ಎಲ್ಲಿ?”

ಅವಳು ಜೋರುಮಾಡಿದಳು

 “ಸುಮ್ಮನೇ ಮಲಗಿಕೊಳ್ಳಿ. ನಿದ್ದೆ ಬರುತ್ತದೆ”.

“ಇಲ್ಲ.  ನಾನು ಯಾರಿಗೂ ಮೆಸೇಜು ಮಾಡುವುದಿಲ್ಲ . ಸ್ವಲ್ಪ ಬರೆಯಬೇಕಿತ್ತು”

ನಾನು ಹಾಗೆಯೇ. ಕೆಲವು ಸಲ ಭಾವೋದ್ವೇಗಕ್ಕೆ ಒಳಗಾಗಿ ಹಾಗೆ ಮಾಡಿದ್ದೆ.

“ಇಲ್ಲ  ಈಗ ರಾತ್ರಿ . ಬೇಡ . ಏನಿದ್ದರು ಬೆಳಗಾದ ಮೇಲೆ”

ನಾನು ಮತ್ತೆ ಗೋಗರೆದೆ.

“ ಬೇಡ . ಈಗಲೇ ಬರೆಯುತ್ತೇನೆ “
ಅವಳಿಗೆ ಏನೆನ್ನಿಸಿತೋ ?

ತನ್ನ ಹಾಸಿಗೆಯ ಅಡಿಯಲ್ಲಿ ಅಡಗಿಸಿ ಇಟ್ಟ ನನ್ನ ಮೊಬೈಲನ್ನು ನನಗೆ ಕೊಟ್ಟು
ಹೇಳಿದಳು,

“ತಗೊಳ್ಳಿ.  ಏನು ಬೇಕಾದರೂ ಮಾಡಿ. ನೀವು ಹೇಳಿದ್ದು ಕೇಳುವವರಲ್ಲ”

“ಇಲ್ಲ ನಾನು ಏನೂ ಮಾಡುವುದಿಲ್ಲ . ಸುಮ್ಮನೇ ಬರೆಯುತ್ತೇನೆ”.
********


ಮುಂದುವರಿಯುತ್ತದೆ…………..

ಶನಿವಾರ, ಆಗಸ್ಟ್ 25, 2018

ದಿನೇಶ ಉಪ್ಪೂರ:
#ಸಂಸ್ಕಾರ
ಕತೆಗೊಂದು ಕೊಂಡಿ

ಬೆಳಿಗ್ಗೆ ಬೆಳಿಗ್ಗೆ ಪೋನ್ ಕಿರುಚಿತು.

“ಹಲೋ……”

ಯಾರ್ರೀ ಅದು?  ಫೇಸ್ ಬುಕ್ ಲ್ಲಿ ದೊಡ್ಡದಾಗಿ ಒಂದು ಕತೆ ಬರ್ದು ಬಿಟ್ಟು, ಅದು ನಿಮ್ದೇ ಕತೆ ಅಂತ ಬೇರೆ ಹಾಕಿದ್ದೀರಲ್ಲ? ನಿಮಗೆ ತಲೆಗಿಲೆ ಸರಿ ಇಲ್ವಾ?

“ಯಾವ ಕತೆ ಸರ್? ನೀವು ಯಾರು ಮಾತಾಡುವುದು? ನಿಮಗೆ ಯಾರು ಬೇಕಿತ್ತು?”

“ನನಗೆಲ್ಲಾ ಗೊತ್ರಿ. ನನಗೆ ಅವಮಾನ ಮಾಡಬೇಕಂತಾನೆ ನೀವು ಹೀಗೆ ಬರೆದಿದ್ದು. ನಾನು ನಿಮ್ಮನ್ನು ಹೀಗೆ ಬಿಡುವುದಿಲ್ಲ. ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕ್ತೇನೆ. ಕೋರ್ಟ್ಗೆ ಮನೆಗೆ ಓಡಾಡ್ಸ್ ತೇನೆ.”

ಕೋರ್ಟ್ ನ ಸುದ್ದಿ ಕೇಳಿ ನನಗೆ ಸರಿಯಾಗಿ ಎಚ್ಚರವಾಯಿತು.

“ಸರ್, ನೀವು ಯಾರು? ನಿಮಗೆ ಏನು ಬೇಕು?”

“ಅದೇ ಸಂಸ್ಕಾರ ಅಂತ ಫೇಸ್ ಬುಕ್ ಕತೆ ಬರ್ದೀದಿರಲ್ಲ ನೀವೇ ತಾನೆ?”

“ಹೌದು.”

“ಮತ್ತೆ ನನ್ನದೇ ಕತೆ ಅಂತ ಬರ್ದಿದ್ದೀರಿ?”

ನನಗೆ ವಿಷಯ ಅರ್ಥವಾಯಿತು.

“ ಅದು ಹಾಗಲ್ಲ ಸಾರ್, ನೀವು ಇದನ್ನು ಇನ್ನೂ ಚೆನ್ನಾಗಿ…..”

“ಅದೆಲ್ಲ ಗೊತ್ತಿಲ್ಲರೀ ನಂಗೆ. ಅಲ್ಲ, ನನ್ನನ್ನು ಅಷ್ಟು ಕೆಟ್ಟದಾಗಿ ಚಿತ್ರಣ ಮಾಡೋದೇನ್ರಿ? ಕಾಲಕ್ಕೆ ಸರಿಯಾಗಿ ಹೊಂದ್ಕೋಬೇಕಪ್ಪಾ”

“ ಸರ್ , ನೀವು ಯಾವ ಪಾತ್ರ…..ಸರ್?

“ಅದೇ ಮಗ …… ಸದಾಶಿವ..”

“ಬೇಡ ಸರ್,  ನೀವು ಅಡಿಗರ ಪಾತ್ರ ತಗೊಳ್ಳಿ. ಅವರೇ ಕತೆಯ ಕೇಂದ್ರ ಬಿಂದು... ಅಲ್ವಾ?”

“ಬೇಡಾರಿ. ಅವರನ್ನು ನೀವು ಕೊಂದೇ ಬಿಟ್ರಲ್ಲ . ಇನ್ನೇನು ಮಾಡೋಕಾಗತ್ತೆ?”

ಹಾಗಾದ್ರೆ ಸೊಸೆಯ ಪಾತ್ರ…..

“ಬೇಡಾರಿ, ಈಗಿನ್ ಕಾಲದಲ್ಲಿ ಹೆಣ್ಮಕ್ಕಳನ್ನು ಬದಲಾಯಿಸುವುದು ಕಷ್ಷ. ಅದು ಬೇಡ”

“ಹಾಗಾದ್ರೆ ಆ ಅಡಿಗರ ಮೊಮ್ಮಗಳು ? …...‌ಆದು ಅಮೇರಿಕಾದಿಂದ ಅಮ್ಮನೊಟ್ಟಿಗೆ ಕೈ ಹಿಡಿದು ಬರತ್ತಲ್ಲಾ . ಅದು …?”

“ಅದ್ಯಾಕ್ರಿ ? ಮಣ್ಣಿಗೆ.  ಒಂದೇ ಒಂದು ಡೈಲಾಗಿಲ್ಲ”

“ಇಲ್ಲ ಸರ್, ಅದಕ್ಕೆ ಮುಂದೆ ಒಳ್ಳೆಯ ಅವಕಾಶ ಇದೆ.”

ಪೋನ್ ಕಟ್ಟಾಯ್ತು.

“ಅಯ್ಯಬ್ಬ”

ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.


**************

ದಿನೇಶ ಉಪ್ಪೂರ

ಕಥನದೊಳಗೆ.

*#ಸಂಸ್ಕಾರ* ಕತೆಗೆ

*ಎರಡನೇ ಕೊಂಡಿ*

ಪೋನ್ ರಿಂಗ್ ಆಯ್ತು.

ನಾನು ಪುನಃ ಇದೇನಪ್ಪಾ ಅಂತ ಹೆದರುತ್ತಲೇ ಎತ್ತಿಕೊಂಡೆ.

“ಸರ್ , ನಾನು ಫೇಸ್ ಬುಕ್ ಲ್ಲಿ ನೀವು ಬರೆದ ನಿಮ್ಮ ಸಂಸ್ಕಾರ ಕತೆ ಓದಿದೆ. ನಾನೂ ಅದರಲ್ಲಿ ಬಂದ ಸದಾಶಿವನ ಪಾತ್ರದ ಹಾಗೆ. ತುಂಬಾ ಆಸಲೇಶನ್ ಸರ್ . ನನ್ನ ಅಪ್ಪ ಅಮ್ಮ ಊರಲ್ಲಿ ಇಬ್ಬರೇ ಇದ್ದಾರೆ. ನನ್ನ ಜೊತೆಗೆ ಬಂದು ಇರಲು ಒಪ್ಪುವುದಿಲ್ಲ. ನನಗೂ ಅಲ್ಲಿ ಹೋಗಿ ಇರಲಿಕ್ಕೆ ಆಗುತ್ತಿಲ್ಲ. ನನ್ಬ ಹೆಂಡತಿಯೂ ದುಡಿಯುತ್ತಾ ಇದ್ದಾಳೆ. ತುಂಬಾ ಕಾಂಪಿಟೀಶನ್ ಯುಗ ಅಲ್ವಾ ಸರ್. ನೀವು ಒಟ್ಟಾರೆ ಏನೋ ಬರೆದ್ರಿ ಅಂತ ನಾನು ಹೇಳುವುದಲ್ಲ. ನೋಡಿ ಸರ್ , ನಾನು ನನ್ನ ಮಗನಿಗೆ ಎಲ್ ಕೆ ಜಿ ಗೆ ಸೇರಿಸ್ಲಿಕ್ಕೆ ಎರಡು ಲಕ್ಷ ಡೆಪೋಸಿಟ್ ಮಾಡಿ ಬಂದೆ. ಮತ್ತೆ ಒಬ್ಬ ಮಗಳು ಇದ್ದಾಳೆ.ಅವಳ ಅವಶ್ಯಕತೆ ಪೂರೈಸಲಿಕ್ಕೆ ಈಗಲೇ ಕಷ್ಟ ಆಗ್ತಿದೆ. ಇಂತಹ ಕಂಡೀಶನ್ ನಲ್ಲಿ ಅಪ್ಪ ಅಮ್ಮ ಇದ್ದಲ್ಲಿಗೆ ಹೋಗಿ ಇರುವುದು ಸಾಧ್ಯವಾ? “

ನಾನು ಸುಮ್ಮನಿದ್ದೆ.

“ಪ್ರಯತ್ನಿಸಿದರೆ ಭಾವನಾತ್ಮಕವಾಗಿ ಬರೆಯುವುದು ಸುಲಭ. ಅಲ್ವ ಸರ್.”

“…………..”

“ಬೇಸರಿಸಬೇಡಿ”

“ನೋಡಿ,  ನನ್ನ ಹತ್ರ ಇದಕ್ಕೂ ಒಂದು ಸಲಹೆ ಇದೆ. ಆದರೆ ಅದು ನಿಮಗೆ ಹೊಂದಿಕೆ ಆಗುತ್ತಾ ಇಲ್ವಾ ಗೊತ್ತಿಲ್ಲ”

“ಹೇಳಿ ಸರ್,  ಅದರಿಂದ ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಅನ್ನಿಸಿದರೆ ಖಂಡಿತಾ ಮಾಡ್ತೇನೆ”

“ನಿಮ್ಮ ಹೆಂಡ್ತಿಯೂ ದುಡಿಯುತ್ತಾ ಇದ್ದಾರೆ ಅಂದ್ರಿ ಅಲ್ವಾ?”
“ಹೌದು.”

“ಹಾಗಾದರೆ ನೀವು ನಿಮ್ಮ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಅವರನ್ನು ಕನ್ವಿನ್ಸ್ ಮಾಡಿ ಊರಿಗೆ ಬಂದು ಬಿಡಿ. ನಿಮ್ಮ ತಂದೆತಾಯಿಗಳ ಸೇವೆ ಮಾಡಿ. ಅವರ ಕಾಲದ ನಂತರ ಪುನಃ ಹೋಗಿ ನಿಮ್ಮವರನ್ನು ಕೂಡಿಕೊಂಡರೆ ಆಯ್ತು.”

“ಸಲಹೆ ಒಳ್ಳೆಯದೇ. ಆದರೆ ಅನುಸರಿಸುವುದು ಅಷ್ಟು ಸುಲಭ ಅಲ್ಲ ಸರ್”

ನಾನೇ ಪೋನ್ ಇಟ್ಟು ಬಿಟ್ಟೆ.


******************


*ಮೂರನೇ ಕೊಂಡಿ*

ಮತ್ತೆ ಪೋನ್

ಎತ್ತಿಕೊಂಡೆ

“ ಹಲೋ ಅಂಕಲ್ , ನಾನು ವರುಣ್ ಅಂತ ಬೆಂಗಳೂರ್ ನಿಂದ ಮಾತಾಡ್ತಿದೀನಿ. ನಿಮ್ಮ ಸಂಸ್ಕಾರ ಕತೆ ಹೇಗೋ ಕಣ್ಣಿಗೆ ಬಿತ್ತು. ಓದಿದೆ.”

“…,.............”

“ತುಂಬಾ ಭಾವುಕನಾಗಿದೀನಿ ಅಂಕಲ್. ನಮ್ಮಪ್ಪ ಹಳ್ಳಿಯಲ್ಲಿದ್ದ ನಮ್ಮ ಹಿರಿಯರ ಆಸ್ತಿಯನ್ನೆಲ್ಲ ಮಾರಿಬಿಟ್ಟ. ನಾವು ಚಿಕ್ಕವರಿರುವಾಗ ಅಲ್ಲೆಲ್ಲ ಹೋಗಿ ಬರ್ತಿದ್ವಿ. ನಂಗೆ ಬಹಳ ಇಷ್ಟವಾದ ಜಾಗ ಅದು. ಏನೋ ಅಪ್ಪ ಹಣದ ವಿಷಯದಲ್ಲಿ ದೊಡ್ಡಪ್ಪನ ಜೊತೆಗೆ ಜಗಳ ಮಾಡಿಬಿಟ್ಟು , ಪಾಲು ತಗೊಂಡು ಅದನ್ನೆಲ್ಲ ಮಾರಿಬಿಟ್ಟರು. ದೊಡ್ಡಪ್ಪನೂ ಆ ಹಳ್ಳಿಬೇಡ ಅಂತ ಅದನ್ನು ಮಾರಿಬಿಟ್ಟು ಪೇಟೆ ಹತ್ರ ಮನೆ ಮಾಡ್ಕೊಂಡ್ ಇದಾರೆ.
ನಿಮ್ಮ ಕತೆ ಓದುತ್ತಾ ಇದ್ದಹಾಗೆ ಅದೆಲ್ಲ ಇದ್ದಿದ್ರೆ …. ಅಂತ ಅನ್ನಿಸಿ ನಂಗೆ ಕಣ್ಣಲ್ಲಿ ನೀರು ಬಂತು.

“ಮಗೂ, ಇದಕ್ಕೆ ನನ್ನ ಹತ್ರ ಒಂದು ಪರಿಹಾರ ಇದೆ.”

“ಏನು ಅಂಕಲ್?”

“ನಿಮ್ಮ ತಂದೆಯವರು ಮುಂದೆ ರೇಟ್ ಬರುತ್ತದೆ ಅಂತ ಬೆಂಗಳೂರಲ್ಲೋ ಆಸುಪಾಸಲ್ಲೋ ಒಂದಷ್ಟು ಸೈಟ್ ತೆಗೆದು ಹಾಕಿಟ್ಟಿರಬಹುದು ಅಲ್ವಾ?”

“ಹೌದು. ಇದೆ ಅಂಕಲ್”

“ಸ್ವಲ್ಪ ಪ್ರೆಶರ್ ಹಾಕು. ಅದನ್ನು ಮಾರಿಬಿಟ್ಟು ನಿಮ್ಮ ಹಿರಿಯರು ಇದ್ದ ಜಾಗ ಮನೆ ಮತ್ತೆ ಕೊಂಡುಕೊಳ್ಳುಕ್ಕೆ ಆಗುತ್ತಾ ನೋಡು.ಆದ್ರೆ ಈಗ ಅದಕ್ಕೆ ಬೆಲೆ ಇರದೇ ಇರಬಹುದು. ಹಳ್ಳಿ ಕೊಂಪೆ ಆಗಿರಬಹುದು. ನೀನು ಮುದುಕ ಆದಾಗ ಅದರ ನಿಜವಾದ ಬೆಲೆ ನಿಂಗೆ ಗೊತ್ತಾಗುತ್ತದೆ”

“ಆಯ್ತು ಅಂಕಲ್ . ತುಂಬಾ ಥ್ಯಾಂಕ್ಸ್”


*************

*ಕೊನೆಯ ಕೊಂಡಿ*

ಕಾಲಿಂಗ್ ಬೆಲ್ ಆಯ್ತು.

ಹೋಗಿ ಬಾಗಿಲು ತೆರೆದೆ.

ನಮ್ಮ ಕಾಲೋನಿಯಲ್ಲೇ ನಾಲ್ಕು ಮನೆ ಆಚೆಗೆ ಇದ್ದ ಮುದುಕರೊಬ್ಬರು ನಗುತ್ತಾ ನಿಂತಿದ್ದರು.

“ಬನ್ನಿ , ಬನ್ನಿ “

ಅಂತ ಒಳಗೆ ಕರೆದೆ.

“ಇರಲಿ,  ಇರಲಿ”

ಅನ್ನುತ್ತಾ ಅವರು ಬಂದು ಸೋಫಾದ ಮೇಲೆ ಕುಳಿತರು.

“ನಾನು ನಿಮ್ಮ ಕತೆ ಓದಿದ್ದೆ.

“ಹೌದಾ ? ತುಂಬಾ ಕುಷಿಯಾಯ್ತು ಸರ್”

“ನೀವು ಹೇಳುವುದೆಲ್ಲ ಸರಿ. ಆದರೆ ಈಗ ನನ್ನನ್ನೇ ನೋಡಿ. ಸರಕಾರಿ ಕೆಲಸ. ಬೇರೆ ಬೇರೆ ಊರು, ಟ್ರಾನ್ಸಫರ್,  ತಿರುಗಾಟ. ಈ ಹಿರಿಯರ ಆಚಾರ ಅನುಷ್ಟಾನ ಅಂದ್ರೆ ಕಷ್ಟವೇ. ಅಲ್ವ. ನಮಗೆ ಮಾಡಬೇಕು ಅಂತಿರುತ್ತದೆ. ಆದರೆ ಹೋದಲ್ಲೆಲ್ಲ ಅದಕ್ಕೆ ಅನುಕೂಲ ಬೇಕಲ್ಲ.ಈಗ ವಯಸ್ಸಾಯ್ತು.

“………..”

“ಬೇಸರ ಮಾಡಬೇಡಿ. ತುಂಬಾ ಭಾವುಕವಾಗಿ ಬರೆದಿದ್ದೀರಿ. ನನಗೂ ಫೀಲ್ ಆಯ್ತು. ಹೇಳಿ.  ನಿಮ್ಮ ದೃಷ್ಟಿಯಲ್ಲಿ ನನ್ನಂತವನು ಏನು ಮಾಡಬಹುದು”

ಪಾಪ . ಸುಮಾರು ಎಪ್ಪತ್ತರ ಗಡಿದಾಟಿದ ಮುದುಕರು
“ಬೇಸರಪಡಿಸಿದನೇ” ಅನ್ನಿಸಿತು.

ಆದರೂ ಸ್ವಲ್ಪ ಕೂಲಾಗಿ ಹೇಳಿದೆ.

“ಯಾಕೆ ಸರ್ ? ನಿಮಗೆ ಇನ್ನು ಆಯಸ್ಸೂ ಇದೆ. ಅವಕಾಶವೂ ಇದೆ. ಮನಸ್ಸು ತೆರೆಯಬೇಕಷ್ಟೆ.”

ಅವರು ಗಟ್ಟಿಯಾಗಿ ನಕ್ಕರು.

“ನಿಮ್ಮನ್ನು ಸೋಲಿಸುವವರಿಲ್ಲಪ್ಪ”

ಎನ್ನುತ್ತಾ ಎದ್ದರು.

ನಾನು ,

“ಸ್ವಲ್ಪ ಕಾಫಿ ಕುಡಿದು ಹೋಗಿ”

ಎಂದು ಒತ್ತಾಯಿಸಿದೆ.

******************

*ಮುಗಿಯಿತು*.




ದಿನೇಶ ಉಪ್ಪೂರ:
*#ನನ್ನೊಳಗೆ-2*
ಭಾಗ - 1


ಹೌದು.  ನಾನು ನನ್ನ ಬದುಕಿನ ಅನುಭವದ ಕ್ಷಣಗಳನ್ನು ಎಳೆ ಎಳೆಯಾಗಿ ಬರೆದಿಡಲು ತೊಡಗಿ ಸುಮಾರು ಒಂದು ವರ್ಷವಾಯಿತು. ಹೌದಲ್ಲ ಒಂದು ವರ್ಷದ ಅವಧಿ ಅಷ್ಟು ಸಣ್ಣದೇನಲ್ಲ. ಸುಮಾರು ಅರವತ್ತೈದು ಕಂತುಗಳಲ್ಲಿ ಹರಿದು ಬಂದ ನನ್ನೊಳಗೆ ಯನ್ನು ಒಂದು ವೃತದಂತೆ ಬರೆದೆ.  ದಕ್ಷಿಣ ಭಾರತ ಪ್ರವಾಸ ಹೋದಾಗಲೂ ನಿಲ್ಲಿಸಲಿಲ್ಲ. ಏಳು ದಿನ ನನ್ನ ಮೊಬೈಲಲ್ಲಿ ಅಷ್ಟೂ ಕಂತುಗಳನ್ನು ಹಾಕಿಕೊಂಡು ಹೋಗಿ ದಿನ ದಿನ ಹಾಕುತ್ತಿದ್ದೆ. ಓದುಗರಿಗೆ ಅನ್ಯಾಯ ಆಗಬಾರದು.
*************

ಮಧ್ಯ ಎಲ್ಲಿಯೋ, ಯಾರೋ “ಇದೆಲ್ಲ ಬಂಡಲ್, ನಿಜ ಅಲ್ಲ “ ಅಂತ ಹೇಳಿದರು ಅಂತ ತಟ್ಟನೇ ನಿಲ್ಲಿಸಿ ಬಿಟ್ಟೆ.
“ನೀವು ಕಣ್ಣುತೆರೆಸಿದಿರಿ” ಅಂದೆ.ಮತ್ತೆ ಪ್ರಾರಂಭಿಸಿದೆ.

ನಾನು ಬರೆಯಲು ಹೊರಟದ್ದು , ನನ್ನ ಜೀವನದ ಕ್ಷಣಗಳನ್ನು. ಹಾಗಂತ ಇದರ ಬಗ್ಗೆ ಯಾವುದೇ ದಾಖಲೆಗಳನ್ನು ನಾನು ಇಟ್ಟುಕೊಂಡವನಲ್ಲ. ಡೈರಿ ಬರೆದವನಲ್ಲ. ಬರೀ ನೆನಪಿನ ಶಕ್ತಿಯ ಮೇಲೆ, ಅದನ್ನೇ ನಂಬಿ ಬರೆಯತೊಡಗಿದವನು.
ಇದ್ದಕ್ಕಿದ್ದಂತೆ ಮತ್ತೆ ಬರೆಯಬೇಕು, ಬರೆಯಲೇ ಬೇಕು ಅನ್ನಿಸಿತು.
ಎಲ್ಲರೂ ಹೇಳಿದರು. ಮತ್ತೆ ಪ್ರಾರಂಭಿಸಿ.
ನಿಲ್ಲಿಸಬೇಡಿ ಅಂದರು.
ಬರೆಯತೊಡಗಿದೆ.
ಮತ್ತೆ ಅದೊಂದು ಧ್ಯಾನವೆಂದು ಬಗೆದು ಬರೆದೆ . ನೀವು ಓದಬೇಕು.
******”

ಅಥವ ಆಗ
ಯಾರು ಓದಲಿ ಬಿಡಲಿ . ನನಗೆಂದೆ ನನ್ನ ಮನಸ್ಸಿನ ತುಡಿತಕ್ಕೆ ಬರೆದೆ.
ಅದು ಅರವತ್ತೈದಕ್ಕೆ ನಿಲ್ಲಬೇಕಾಗಿತ್ತು . ಆದರೆ ನನಗೂ ಮತ್ತೆ ಹೇಳಬೇಕಿತ್ತು. ಆದ್ದರಿಂದ ನಿಲ್ಲಲಿಲ್ಲ. ಹೊ ಇದೊಂದು ಬಿಟ್ಟು ಹೋಯಿತು. ಇದೊಂದು ಅನುಭವ ಬರೆಯಬೇಕಿತ್ತು ಅಂತ ಬರೆದೆ .
ಅದು ತೊಂಬತ್ತೈದರವರೆಗೂ ಹೋಯಿತು .
ಇದ್ದಕ್ಕಿದ್ದಂತೆ ಮತ್ತೆ ನಿಲ್ಲಿಸಿದೆ .
ಕೆಲವರು “ಆಯಿತಾ ?” ಅಂದರು.
ಇಲ್ಲ . ಮತ್ತೆ ಬರೆಯಬೇಕೆನಿಸಲಿಲ್ಲ.
ಬರೆಯಬೇಕು ಅನ್ನಿಸಿದರೆ ಮತ್ತೆ ಬರೆಯುತ್ತೇನೆ ಅಂದೆ.
ಅದು ಹಾಗೆಯೆ.
*******”*”


ಹಲವರು ನನ್ನ ಬರಹಗಳನ್ನು ಮೆಚ್ಚಿದ್ದಾರೆ. ಧನ್ಯ ನಾನು.
“ನೀವು ಬರೆದ ಕತೆಗಳು ಚೆನ್ನಾಗಿವೆ . ನಿಜವಾಗಿ ಕಣ್ಣಮುಂದೆ ನಡೆದಂತೆ ಬರೆಯುತ್ತೀರಿ” ಎಂದರು .
ಅದು ಅವರ ಅಭಿಮಾನ.
ನೀವು ಆವತ್ತು ಬರೆಯುತ್ತಿದ್ದೀರಲ್ಲ . “ನನ್ನೊಳಗೆ” ಅದನ್ನೂ ನಾನೂ ಓದಿದ್ದೇನೆ ಎಂದರು ಹಲವರು. ಕೆಲವರು ನನ್ನನ್ನು ಕಂಡಾಗ ನೆನಪಿಟ್ಟು ಹರಸಿದರು.
******

ರಮೇಶ ಬೇಗಾರ್,
ಯಕ್ಷಗಾನದಲ್ಲಿ ಒಂದು ಹೆಸರು ಇರುವವರು. ಕಾಳಿಂಗ ನಾವಡರ ಆಪ್ತರು.
ಒಮ್ಮೆ ಅವರ ಜೀವನದ ಕ್ಷಣಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರು.
ವಾಟ್ಸಾಪ್ ನಲ್ಲಿ ನಾನು ನೋಡಿದೆ.
“ಚೆನ್ನಾಗಿದೆ”  ಅಂದೆ.
ಅವರು “ನೀವೇ ನನಗೆ ಇನ್ಸ್ಪಿರೇಶನ್ ಅನ್ನುವುದೇ ?”
ಮತ್ತೆ ಮೃದುವಾಗುತ್ತದೆ ಮನಸ್ಸು.
ಹೌದು . ಈಗ ಮತ್ತೆ ಶುರುಮಾಡಬೇಕು ಅನ್ನಿಸುತ್ತದೆ.
ಹೇಳಲಿಕ್ಕೆ ಏನು ಇಲ್ಲದಿದ್ದರೂ ….
***********

ಆದರೆ ಹಿಂದಿನದ್ದು ಉಕ್ಕಿ ಹರಿಯುವ ಪ್ರವಾಹ!
ಇದು ನಿಂತಲ್ಲೇ ಗಂಭೀರವಾಗಿ ಭೋರ್ಗರೆಯುವ ಕಡಲು.
*********

ಓದುತ್ತೀರಾ?
ಪಿಡಿಎಫ್ ಲಗತ್ತಿಸಿದ್ದೇನೆ.
ಓದಲು ದುಡ್ಡಿಲ್ಲ.
ಅದಕ್ಕೆ ಬೇಕಾದ್ದು ,  ನಿಮ್ಮ ಸಮಯ.
ಒಳ್ಳೆಯ ಹೃದಯ.    ಮತ್ತು ಇಂಟರ್ನೆಟ್

ಲಿಂಕ್

https://drive.google.com/file/d/15LzRVZYRscBVT-7HdUSY45LC0t905UIx/view?usp=drivesdk

ಮುಂದುವರಿಯುತ್ತದೆ…………..

ಶುಕ್ರವಾರ, ಆಗಸ್ಟ್ 24, 2018



ದಿನೇಶ ಉಪ್ಪೂರ
ಕಥನದೊಳಗೆ -4
*#ಆಘಾತ*

ಪುಟ 1

ಅಗ್ರಹಾರದ ಮೂಲೆಮನೆಯ ವೆಂಕಮ್ಮ ತಮ್ಮ ಸಂಬಂಧಿಕರೊಬ್ಬರ ಮದುವೆಗೆ ಹೋಗುವ ಗಡಿಬಿಡಿಯಲ್ಲಿದ್ದರು. ಸೊಸೆ ಕನಕಮ್ಮ ಆಗಲೇ ಎದ್ದು ಅಂಗಳವನ್ನು ಗುಡಿಸಿ, ಮೇಲೆ ಚೆನ್ನಾಗಿ ನೀರು ಚಿಮುಕಿಸಿ ಹೆಬ್ಬಾಗಿಲಿನ ಎದುರು ರಂಗೋಲಿಯನ್ನು ಹಾಕಿ ಹೊಸ್ತಿಲು ಬರೆಯುತ್ತಿದ್ದಳು.

ಅವಳು ಸಣ್ಣಗೆ ಗುಣುಗುತ್ತಿದ್ದ ಹಾಡನ್ನು ಆಲಿಸಿದ ವೆಂಕಮ್ಮ "ಪಾಪ ತನ್ನ ಆಸೆಗಳನ್ನೆಲ್ಲ ತನ್ನಲ್ಲೇ ಅಮುಕಿ ಹಿಡಿದು ಒದ್ದಾಡುತ್ತಿದೆ ಈ ಮಗು. ಇದರ ಭವಿಷ್ಯ ಹೇಗೋ ಏನೋ” ಎಂದುಕೊಂಡು ಮನಸ್ಸಿನಲ್ಲಿಯೇ ಹೇಳಿಕೊಂಡರು.

ಅವರು ಬೆಳಿಗ್ಗೆ ಬೇಗ ಎದ್ದು ನಿತ್ಯಾಹ್ನಿಕಗಳನ್ನೆಲ್ಲಾ ಮುಗಿಸಿ ಬಾವಿಕಟ್ಟೆಯಲ್ಲಿ ಬಾವಿಯಿಂದ ನೀರನ್ನು ಸೇದಿ ಎತ್ತಿ ತಲೆಗೆ ಹೊಯ್ದುಕೊಂಡು, ತಣ್ಣೀರಿನ ಸ್ನಾನ ಮಾಡಿದರು. ಮಡಿಯಲ್ಲಿ ದೇವರ ಮನೆಯನ್ನು ಸೇರಿ ಒಂದು ಗಂಟೆ ಭಕ್ತಿಯಿಂದ ಕುಳಿತು ಹಲವಾರು ಶ್ಲೋಕಗಳನ್ನು, ದೇವರ ನಾಮಗಳನ್ನು ಹೇಳಿದರು. ಬಾಯಿಯಿಂದ ಅದನ್ನು ಸಲೀಸಾಗಿ ಹೇಳುತ್ತಿದ್ದರೂ ಅವರ ಮನಸ್ಸು ಮದುವೆ ಮನೆಯ ನೆಂಟರು ಇಷ್ಟರನ್ನು ಕಾಣುವ ಆತುರದಿಂದ ತುಂಬಾ ಉಲ್ಲಸಿತವಾಗಿತ್ತು.

ತನಗೆ ವರ್ಷ ಅರವತ್ತಾದರೂ ಬದುಕು ಬೇಡವೆನಿಸಿದ್ದೇ ಇಲ್ಲ. ತನ್ನ ಬದುಕಿನ ಇಡೀ ಬಡತನದ ಬೇಗೆಯಲ್ಲಿ ಬೆಂದಿದ್ದರೂ ತಾನು ಮರ್ಯಾದೆಯಿಂದ ಬದುಕಿದ್ದೇನೆ ಎಂಬ ತೃಪ್ತಿ ಅವರಲ್ಲಿತ್ತು. ಹಿಂದೆ ಗಂಡ ಅಗ್ರಹಾರದ ಅನಂತಯ್ಯ ಐತಾಳರು ಅವರಿವರ ಮನೆಗೆ ಹೋಗಿ ಪೌರೋಹಿತ್ಯ ಮಾಡಿ ಜೀವನ ನಡೆಸುತ್ತಿದ್ದರು. ಅದರಿಂದ ಆಗುವ ಸಂಪಾದನೆ ಅಷ್ಟಕ್ಕಷ್ಟೆ. ಖಾಯಂ ಆಗಿ ಶ್ರಾದ್ಧಕ್ಕೋ ಮತ್ತೊಂದಕ್ಕೋ ಕರೆಯುವ ಮನೆಯವರು, ಹತ್ತು ವರ್ಷದ ಹಿಂದೆ ಎಷ್ಟು ದಕ್ಷಿಣೆ ಕೊಡುತ್ತಿದ್ದರೋ ಅಷ್ಟನ್ನೇ ದಕ್ಷಿಣೆ ಎಂದು  ಕೊಡುತ್ತಿದ್ದಾಗ, ಅಸಮಾಧಾನವಾಗುತ್ತಿದ್ದರೂ, ಗಟ್ಟಿಯಾಗಿ ಮಾತನಾಡಲೂ ಆಗದ ದಾಕ್ಷಿಣ್ಯ ಸ್ವಭಾವದ ಅನಂತಯ್ಯ, ಮನೆಯಲ್ಲಿ ಊಟಕ್ಕೆ ಕಷ್ಟವಿದ್ದರೂ ,

"ಇಷ್ಟು ಸಾಕಾಗುವುದಿಲ್ಲ  ಹೆಚ್ಚಿಗೆ ಕೊಡಿ'

ಎಂದು ಹೇಳುತ್ತಿರಲಿಲ್ಲ.

ಆಚೀಚೆಯ ಪುರೋಹಿತರಿಗೆ ಹೆಚ್ಚು ಹಣ ಕೊಡುತ್ತಿದ್ದರೂ ಅದು ಗೊತ್ತಿದ್ದರೂ ಇವರು

"ಖಾಯಂ ಪುರೋಹಿತರು ದಕ್ಷಿಣೆ ಹೆಚ್ಚು ಮಾಡಿದರೆ ಮುಂದಿನ ವರ್ಷ ಅದಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ"

ಎಂದು ಲೆಕ್ಕಾಚಾರ ಹಾಕುತ್ತಿದ್ದರು. ಇವರ ಸಣ್ಣ ಬುದ್ದಿ ಗೊತ್ತಾಗಿ ಕೊನೆಗೆ ಬೇಸರ ಬಂದು ತಾನಿನ್ನು ಪೌರೋಹಿತ್ಯವನ್ನೇ ಮಾಡುವುದಿಲ್ಲ ಎಂದು ನಿರ್ಧರಿಸಿ ಎಲ್ಲ ಮನೆಗಳ ಪೌರೋಹಿತ್ಯಕ್ಕೆ ಕರೆದಾಗ, ಬೇರೆಯವರಿಗೆ ತಿಳಿಸಲು ಹೇಳಿದರು.

**********





ಆದರೆ ಬದುಕಬೇಕಲ್ಲ. ಬ್ಯಾಂಕಿನಲ್ಲಿ ಸಾಲ ಮಾಡಿ ನಾಲ್ಕು ದನಗಳನ್ನು ತಂದು ಸಾಕಿದರು. ದಿನಾ ಅದರ ಹಾಲನ್ನು ಶಂಕರನಾರಾಯಣದ ಹಾಲು ಡೈರಿಗೆ ಕೊಟ್ಟುಬರತೊಡಗಿದರು. ಒಟ್ಟಿನಲ್ಲಿ ತಲೆಗೆ ಎಳೆದರೆ ಕಾಲಿಗೆ ಇಲ್ಲ, ಕಾಲಿಗೆ ಎಳೆದರೆ ತಲೆಗಿಲ್ಲ ಎಂಬ ಪರಿಸ್ಥಿತಿ.  ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಿದರೂ, ಬುದ್ದಿ ಮಾಂದ್ಯನಾದ ಅವನು ಸ್ವಲ್ಪ ದಿನದಲ್ಲಿಯೇ ಹೇಳದೇ ಕೇಳದೇ ಮನೆಯನ್ನು ಬಿಟ್ಟು ಹೋದ.

ಇದೇ ಚಿಂತೆಯಲ್ಲಿ ಅನಂತಯ್ಯನವರು ಒಂದು ದಿನ ರಾತ್ರಿ ಉಂಡು ಮಲಗಿದವರು ಬೆಳಿಗ್ಗೆ ಏಳುವಾಗ ಹೆಣವಾಗಿದ್ದರು. ಅತ್ತೆ ಸೊಸೆಯರಿಬ್ಬರೇ ಉಳಿದರು. ಏನು ಮಾಡುವುದು? ತಮ್ಮ ಜೀವವನ್ನೇ ಹೋರಾಟಕ್ಕೆ ಒಡ್ಡಿ  ಬದುಕುವಂತಾಯಿತು. ಇದೆಲ್ಲ ಅವರ ಮನಃಪಟಲದಲ್ಲಿ ಹಾದುಹೋದ ಅವರ ಎರಡು ಮೂರು ವರ್ಷಗಳಷ್ಟು ಹಿಂದಿನ ಚರಿತ್ರೆ.

 ವೆಂಕಮ್ಮ ಯೋಚಿಸಿದರು. ಮನೆಯಲ್ಲಿದ್ದುದು  ಒಂದೇ ಒಂದು ಜರಿಸೀರೆ. ಒಂದೋ ತಾನು ಮದುವೆಗೆ ಹೋಗಬೇಕು ಅಥವ ಸೊಸೆಯನ್ನು ಕಳಿಸಬೇಕು. ತನ್ನ ಆಸೆಯನ್ನು ಅದುಮಿ ಹಿಡಿದುಕೊಂಡು ವೆಂಕಮ್ಮ ಸೊಸೆಯನ್ನು ಕರೆದು ಹೇಳಿದರು,
"ಹೆಣೆ, ಎಂತ ಮದ್ವಿಗೆ ನೀನು ಹ್ಯಾತ್ಯಾ ನಾನು ಹ್ವಾಪ್ದಾ?"

ಎಂದಾಗ ಆ ಸೊಸೆ ,
"ನೀವೇ ಹೋಯ್ನಿ ಅಕಾ"

ಎಂದು ಹೇಳಿದಾಗ ಅವರಿಗೆ ಆದ ಖುಷಿ ಅಷ್ಟಿಷ್ಟಲ್ಲ.

ಅಪರೂಪಕ್ಕೆ ಜರಿ ಸೀರೆಯನ್ನು ಉಟ್ಟು ಶೃಂಗಾರ ಮಾಡಿಕೊಂಡು ಮದುವೆಗೆ ಹೊರಟು ನಿಂತ ವೆಂಕಮ್ಮ ಸೊಸೆಯನ್ನು ಕರೆದು, "ಹಂಗಾರೆ ನಾನ್ ಹೋಯಿ ಬತ್ತೆ. ಮನೆಯ ಕಡೆ ಸ್ವಲ್ಪ ಜಾಗ್ರತೆ" ಎಂದು ಹೇಳುತ್ತಾ ಸೆರಗನ್ನು ಸರಿಮಾಡಿಕೊಳ್ಳುತ್ತಾ ಚಾವಡಿಗೆ ಬಂದರು. ಅಚಾನಕ್ಕಾಗಿ ಅವರ ಕಣ್ಣು ಗೋಡೆಯ ಮೇಲಿದ್ದ ಅವರ ಗಂಡನ ಭಾವಚಿತ್ರದ ಮೇಲೆ ಹೋಯಿತು.

ವೆಂಕಮ್ಮ ಕ್ಷಣ ಹೊತ್ತು ತನ್ನ ಗಂಡನ ಭಾವಚಿತ್ರವನ್ನೇ ತದೇಕದೃಷ್ಟಿಯಿಂದ ನೋಡಿದರು. ಅರಿವಿಲ್ಲದಂತೆಯೇ ಅವರ ಬಾಯಿಯಿಂದ ಮಾತು ಹೊರಟಿತು.

"ಅದೆಂತಕೆ ಹಾಂಗ್ ನೀವು ನನ್ನನ್ ಕಾಂಬುದೆ? ಛೀ ಹಾಂಗ್ ಕಾಣ್ಬೇಡಿ. ನಾನ್ ಇಷ್ಟ್ ಬೇಗ ಬತ್ತಿಲ್ಯೆ. ನನ್ ಜಂಬ್ರ ಇನ್ನೂ ಮುಗೀಲಿಲ್ಲೆ. ಸ್ವಲ್ಪ ದಿನ ಇಲ್ಲೇ ಇರ್ತೆ ಅಕ್ಕಾ ? ನಾನ್ ಇನ್ನೂ ಇಲ್ಲೇ ಅನುಭವಿಸುದ್ ಇತ್ತೆ".

ಎಂದು ಹೇಳಿ ನಾಚಿಕೆಯಿಂದ ಮುಖವನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಂಡರು. ಈಗ ಅವರ ವಯಸ್ಸು ಸುಮಾರು ಎಪ್ಪತ್ತರ ಸಮೀಪವೇ ಇರಬಹುದು.

ಹಾಗೆಯೇ, ಅಂಗಳಕ್ಕಿಳಿದು ಮದುವೆಯ ಮನೆಯ ದಾರಿ ಹಿಡಿದರು.

ಮುಂಡ್ಕೋಡು ಸೀತಾರಾಮ ಅಡಿಗರ ಮನೆಯಲ್ಲಿ ಮದುವೆ. ಮದುವೆಯ ಮನೆಯೂ ಅಂತಹ ದೂರವೇನೂ ಇರಲಿಲ್ಲ. ಮೂರು ಮೈಲು ಹಾಡಿಯಲ್ಲಿ ನಡೆದು ಹೋಗಿ,  ಕಟ್ಟೆಮಕ್ಕಿಯ ಗುಡ್ಡೆಯನ್ನು ಹತ್ತಿ ಇಳಿದು ನಂತರ ಸಣ್ಣ ಹಾಡಿಯನ್ನು ಹಾದು ಹಾಲಾಡಿ ಹೊಳೆಯನ್ನು ದಾಟಿದರೆ ಅದರ ಆಚೆಯ ಮಗ್ಗುಲಲ್ಲೇ ಸೀತಾರಾಮಯ್ಯನ ಮನೆ.

ಅವನ ಮಗನ ಮಗಳಿಗೇ ಮದುವೆ. ಸೀತಾರಾಮಯ್ಯ ಅಂದರೆ ಅನಂತಯ್ಯನವರ ತಂಗಿಯ ಗಂಡ. ಮೊದಲು ಯಾವುದೋ ಮನೆಯ ಪೌರೋಹಿತ್ಯದ ವಿಷಯದಲ್ಲಿ ಅನಂತಯ್ಯನವರಿಗೂ, ಸೀತಾರಾಮಯ್ಯನಿಗೂ ಜಗಳವಾಗಿದ್ದು ಅವರ ಮತ್ತು ಇವರ ಮನೆಗೆ ಹೊಕ್ಕು ಬರುವ ಬಳಕೆ ನಿಂತು ಹೋಗಿತ್ತು,

ಅಂತೂ ಇಷ್ಟು ಸಮಯದ ನಂತರ ಅದನ್ನೆಲ್ಲ ಮರೆತು ಸೀತಾರಾಮಯ್ಯನೇ ಮನೆಯವರೆಗೂ ಸ್ವತಹ ಬಂದು, ಮಾಡಿದ ಉಪಚಾರವನ್ನು ಸ್ವೀಕರಿಸಿ, "ಮದುವೆಗೆ ಬರಬೇಕು" ಎಂದು ಹೇಳಿಕೆ ಕೊಟ್ಟು ಹೋಗಿದ್ದ. ಈ ಮದುವೆಯ ನೆಪದಿಂದಲಾದರೂ ಮತ್ತೆ ಅವರನ್ನೆಲ್ಲ ಕಾಣುವ ಅವಕಾಶವಾಯಿತಲ್ಲ ಎಂದು ವೆಂಕಮ್ಮನಿಗೆ ಸಂತೋಷವಾಗಿತ್ತು.

********







ಮದುವೆಯೂ ಯಾರ್ಯಾರದ್ದೋ ಅಲ್ಲ. ತನ್ನ ಯಜಮಾನರ ತಂಗಿಯ ಗಂಡ ಅಂದರೆ ಭಾವನ ಮಗನ ಮಗಳಿಗೆ ಮದುವೆ. ತನಗೆ ಕರೆಬಂದಾಗ ತಾನು ಅಜ್ಜಿಯ ಸ್ಥಾನದಲ್ಲಿ ನಿಂತು ಎಲ್ಲರನ್ನೂ ಒಮ್ಮೆ ನೋಡಿ ಮಾತಾಡಿಸಬೇಕು, ಬಂದ ಬಂಧುಬಾಂಧವರಲ್ಲಿ ಸುಖಕಷ್ಟಗಳನ್ನು ಹಂಚಿಕೊಳ್ಳಬೇಕು ಎನ್ನಿಸಿ ವೆಂಕಮ್ಮ ಖುಷಿಯಾಗಿದ್ದರು. ತನ್ನ ಸೊಸೆಯ ಮನಸ್ಸು ಹೇಗೋ? ಅವಳಿಗೆ ಮದುವೆಗೆ ಹೋಗಲು ಆಸೆ ಇತ್ತೋ ಏನೋ ಎಂದು ತಿಳಿಯಲು, ಅವಳನ್ನು ಹತ್ತಿರ ಕರೆದು "ಹೆಣೆ, ನೀನೇ ಮದ್ವೆಗೆ ಹೋಪ್ದಾದ್ರೆ ಹೋಯಿ ಬಾ" ಎಂದು ಹೇಳಿದ್ದು, ಅವಳು ತನಗೇ ಆ ಪಟ್ಟ ಕಟ್ಟಿಬಿಟ್ಟಳಲ್ಲ.

"ನೀವೇ ಹೋಗಿ ಬನ್ನಿ, ಅತ್ತೆ"

ಎಂದಳಲ್ಲ.
ಭಾರಿ ಖುಷಿಯಾಯಿತು. ಎಂತಾ ಒಳ್ಳೆಯ ಸೊಸೆ. ಪಾಪದ ಹೆಣ್ಣು. ಒಂದು ಮಾತಾಡದೇ ನನ್ನನ್ನು ಅನುಸರಿಸಿಕೊಂಡು ಹೋಗುತ್ತಿದೆ. ಒಂದು ಗೊಣಗಾಟ ಇಲ್ಲ ಸಿಟ್ಟುಶಡ ಇಲ್ಲ. ಕತ್ತೆಯ ಹಾಗೆ ದುಡಿಯುತ್ತದೆ. ಅದು ಬೇಕು ಇದು ಬೇಕು ಎಂದು ಒಂದು ದಿನವೂ ಹೇಳಿದವಳಲ್ಲ. ಮಗ ರಾಮಯ್ಯನಿಗೆ ಬುದ್ದಿ ಇಲ್ಲ. ಇಂತಹ ಚಿನ್ನದಂತಹ ಹೆಂಡತಿಯನ್ನು ಬಾಳಿಸುವ ಅದೃಷ್ಟ ಇಲ್ಲದೇ ಊರುಬಿಟ್ಟು ಹೋದನಲ್ಲ. ಎಲ್ಲಿ ಇದ್ದನೋ ಏನೋ.

ಮಗನ ನೆನಪು ಆಗುತ್ತಿದ್ದಂತೆ ವೆಂಕಮ್ಮನಿಗೆ ಗಂಟಲು ಒತ್ತಿ ಬಂತು. ತಾನು ಸಾಯುವುದರ ಒಳಗೆ ಈ ಹೆಣ್ಣಿಗೊಂದು ನೆಲೆ ಕಾಣಿಸಬೇಕು. ಮಗನನ್ನು ಎಲ್ಲಿಯಾದರೂ ಹುಡುಕಿಸಿ ತರಬೇಕು. ಮದುವೆಯ ಮನೆಯಲ್ಲಿ ಯಾರಿಗಾದರೂ ಅವನ ಸುದ್ದಿ ತಿಳಿದಿದ್ದರೆ ಒಳ್ಳೆಯದಾಯಿತು. ಹುಡುಕುತ್ತಿರುವ ಬಳ್ಳಿ ಕಾಲಿಗೆ ಸಿಕ್ಕಿದಂತೆ. ವೆಂಕಮ್ಮ ನಡೆಯುವ ವೇಗವನ್ನು ಹೆಚ್ಚಿಸಿದರು.

ತೋಟದ ಮಧ್ಯದಲ್ಲಿರುವ ದೊಡ್ಡ ಮದುವೆಯ ಮನೆಯ ಮುಂದಿನ ದೊಡ್ಡ ಅಂಗಳದಲ್ಲಿ ಮಡಲಿನ ಚಪ್ಪರವನ್ನು ಸುತ್ತ ದಿಡಕಿಯನ್ನು ಹಾಕಿದ್ದರು. ಎದುರಿಗೇ ಮಾವಿನ ಎಲೆಯ ತೋರಣ. ಚಪ್ಪರದ ಒಳಗೆ ಒಂದು ಬದಿಯಲ್ಲಿ ಮಂಟಪವನ್ನೂ ಕಟ್ಟಿದ್ದರು. ಹಿಂದೆ ಒಂದು ಜಮಖಾನವನ್ನು ಕಟ್ಟಿ ಸೇವಂತಿಗೆ ಹೂವಿನಹಾರವನ್ನು ಮೇಲಿನಿಂದ ಇಳಿಬಿಟ್ಟು ಅಲಂಕರಿಸಿದ್ದರು. ಮಂಟಪದ ನಾಲ್ಕೂ ದಿಕ್ಕಿನಲ್ಲಿ ಕಂಬವನ್ನು ಹೊಯಿಗೆಯ ಡಬ್ಬದಲ್ಲಿ ಹುಗಿದು ಬಾಳೆಯ ದಿಂಡನ್ನು ಆ ಕಂಬಗಳಿಗೆ ಕಟ್ಟಿ ಮೇಲಿನಿಂದ ಸುತ್ತಲೂ ಮಾವಿನ ಎಲೆಯ ತೋರಣವನ್ನು ಮಾಡಿ ಸಿಂಗರಿಸಿದ್ದರು.

ಮನೆಯ ಹೆಬ್ಬಾಗಿಲಿನ ಎರಡೂ ಬದಿಯಲ್ಲಿ ಎರಡು ಕಂಬಗಳನ್ನು ಊರಿ ಅದಕ್ಕೂ ಎಳೆಯ ಮಾವಿನಕುಡಿಯ ತುಂಡನ್ನು ಹಗ್ಗದಲ್ಲಿ ಕಟ್ಟಿ ಸುತ್ತಿ ಹಾರದಂತೆ ಮಾಡಿ ಅಲಂಕರಿಸಿದ್ದರು. ಚಪ್ಪರದಲ್ಲಿ ಅಲ್ಲಲ್ಲಿ ಬಣ್ಣಬಣ್ಣದ ಬೆಲೂನ್ ಗಳನ್ನು ನೇತುಹಾಕಿ ಕಟ್ಟಿದ್ದು ಅದು ಗಾಳಿಯಲ್ಲಿ ಓಲಾಡುತ್ತಿತ್ತು. ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರು. ವೆಂಕಮ್ಮನನ್ನು ಕಂಡ ಒಬ್ಬರು,

"ಬನ್ನಿ ಬನ್ನಿ. ಬಹಳ ಅಪರೂಪ"

ಎಂದು ಕರೆದು ಕುಳ್ಳಿರಿಸಿ, ಉಪಚಾರ ಮಾಡಿ ಕುಡಿಯಲು ಪಾನಕವನ್ನು ಕೊಟ್ಟರು. ವೆಂಕಮ್ಮ ಪಾನಕ ಕುಡಿದು ಪ್ರಯಾಣ ಮಾಡಿ ಆದ ದಣಿವನ್ನು ಪರಿಹರಿಸಿಕೊಂಡರು.

ನಂತರ ವೆಂಕಮ್ಮನೂ ಖುಷಿಯಿಂದ ಮನೆಯವರೊಂದಿಗೆ ಬೆರೆತು ಗುರುತಿನವರನ್ನೆಲ್ಲ ಕಂಡು ಹೋಗಿ ಹೋಗಿ ಮಾತಾಡಿಸಿದರು. ಸಂಭ್ರಮಪಟ್ಟರು.

ಮದುವೆ ಶಾಸ್ತ್ರಗಳೆಲ್ಲ ಮುಗಿಯಿತು. ಊಟವೂ ಆಯಿತು. ವೆಂಕಮ್ಮ ಒಂದು ಬದಿಯಲ್ಲಿ ಕುಳಿತು ಯಾರ ಹತ್ತಿರವೋ ಮಗನ ವಿಷಯ ಹೇಳಿಕೊಂಡು ಅವನನ್ನು ಹುಡುಕಿಸುವ ವಿಷಯದ ಬಗ್ಗೆ ಮಾತಾಡುತ್ತಿದ್ದರು.

ಆಗ ಸೀತಾರಾಮಯ್ಯ,

"ಅತ್ತೆ, ಸ್ವಲ್ಪ ಇಲ್ಲಿ ಬನ್ನಿ"

ಎಂದು ಕರೆದ.

***********






ಹಿರಿಯರಾದ ವೆಂಕಮ್ಮ ಏನೋ ಶಾಸ್ತ್ರದ ಬಗ್ಗೆ ಕೇಳಲಿಕ್ಕಿದೆಯೋ ಎಂದು ದಡಕ್ಕನೇ ಎದ್ದು ಲಗುಬಗೆಯಿಂದ ಬಂದು,

"ಎಂತ ಮಾರಾಯಾ? ಎಲ್ಲಾ ಮುಗೀತಲ್ಲ. ಇನ್ನೇನು"

ಎನ್ನುತ್ತಾ ಅವನು ಇದ್ದಲ್ಲಿಗೆ ಹೋದರು.

ಅವನ ಮುಖ ವ್ಯಗ್ರವಾಗಿತ್ತು.

ವೆಂಕಮ್ಮ ಹತ್ತಿರ ಬರುತ್ತಲೇ,
“ಅತ್ತೆ ನೀವು ಆಗ ಕೋಣೆಗೆ ಹೋದ್ರಲ್ಲ.
ಅಲ್ಲಿ ಸರಸು ಒಂದು ಉಂಗುರ ಇಟ್ಟಿದ್ಲಂತೆ . ಈಗ ಕಾಣ್ತಾ ಇಲ್ಲ. ನೀವು ತೆಗೆದ್ರಾ? ಎಂದ.

ವೆಂಕಮ್ಮ ಬಾಯಿ ತೆರೆಯುವಷ್ಟರಲ್ಲೆ ,
"ಈ ನಾಟಕ ಸಾಕು ಅತ್ತೆ, ಎಲ್ಲಿ ನಮ್ಮ ಆ ಉಂಗುರ ಕೊಟ್ಟುಬಿಡಿ"
ಅಂದ.
ವೆಂಕಮ್ಮನಿಗೆ ಏನು ಎಂದು ಅರ್ಥವಾಗುವುದರ ಒಳಗೆ ಅವನು,
"ಊಂ" ಎಂದು ಗುಟುರು ಹಾಕಿದ.

"ನಂಗೆ ಗೊತ್ತಿತ್ತು ನೀವೇ ತಗಂಡದ್ದು. ನಿಮ್ಮ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ನೀವು ಆ ಕೋಣೆಗೆ ಹೋದದ್ದು ನಾನು ನೋಡಿದ್ದೇನೆ".
“ಆ ಉಂಗುರ ಇಟ್ಟಲ್ಲಿ ಇಲ್ಲದೇ ಇರಬೇಕಾದರೆ ಮತ್ತೆಲ್ಲಿ ಹೋಗುತ್ತದೆ? ಅದು ನಿಮ್ಮದೇ ಕೆಲಸ. ಎಲ್ಲಿದೆ ಉಂಗುರ ಹೇಳಿ?"
ಎಂದು ಸೀತಾರಾಮಯ್ಯನ ಹೆಂಡತಿ ಸರಸುವೂ ಗಟ್ಟಿಯಾಗಿ ಹೇಳಿದಾಗ ವೆಂಕಮ್ಮನಿಗೆ ಅದರ ಅರ್ಥ ಆಗುತ್ತಾ ಹೋದಂತೆ ಮೈಯೆಲ್ಲ ಬೆವರಲು ಶುರುವಾಗಿ ಕಣ್ಣು ಕತ್ತಲೆ ಬಂದ ಹಾಗಾಯಿತು.
"ಅಯ್ಯೋ ದೇವರೆ, ಉಂಗುರವಾ? ನನಗೆ ಗೊತ್ತಿಲ್ಲ. ನಾನು ತಗೊಂಡಿದ್ದಾ? ನಂಗ್ಯಾಕೆ ನಿನ್ನ ಉಂಗ್ರ? ಸುಮ್ಮನೇ ನನ್ನ ಮೇಲೆ ಕಳ್ಳತನದ ಆರೋಪ ಮಾಡಬೇಡ. ನಾನು ಯಾವ ಉಂಗುರವನ್ನು ನೋಡಲೂ ಇಲ್ಲ. ನನಗೆ ಗೊತ್ತೇ ಇಲ್ಲ"

ಎಂದು ಗದ್ಗದಿತರಾಗಿ ಹೇಳಿದರು.

ಸಿಟ್ಟಿಗೆದ್ದ ಆಳಿಯ ಸೀತಾರಾಮಯ್ಯ ,
"ಮೊದಲಿಂದ ನಿಮ್ಮನ್ನು ಬಲ್ಲೆ ನಾನು. ನಿಮ್ಮ ಮನೆತನವೇ ಹಾಂಗೆ. ಒಳ್ಳೆಯ ಮಾತಿನಿಂದ ಉಂಗುರ ಕೋಡ್ತೀರಾ ಇಲ್ಯಾ?"
ಎಂದು ಅಬ್ಬರಿಸಿದ ಸೀತಾರಾಮಯ್ಯನನ್ನೇ ದೀನಳಾಗಿ ನೋಡಿದರು.
"ಮಗೂ, ನನಗೇನು ಗೊತ್ತಿಲ್ಲ. ನಾವು ಬಡವರಿರಬಹುದು. ಆದರೆ ಕಳ್ಳತನ ಮಾಡುವಷ್ಟು ನೀಚರಲ್ಲ".

ಎಂದು ಹೇಳಿ ಬಿಕ್ಕಿದರು.
ಆದರೆ ಸೀತಾರಾಮಯ್ಯ ಇದರಿಂದ ಕರಗುವ ಸ್ಥಿತಿಯಲ್ಲಿರಲಿಲ್ಲ.
"ಅತ್ತೆ, ನನಗೆಲ್ಲ ಗೊತ್ತು. ನೀವು ಆ ಕೋಣೆಗೆ ಹೋದದ್ದನ್ನು ಕಂಡವರಿದ್ದಾರೆ. ಉಂಗುರ ಎಲ್ಲಿ ಅಡಗಿಸಿಟ್ಟಿದ್ದೀರಿ? ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮ ಬಟ್ಟೆಯನ್ನು ಬಿಚ್ಚಿ ಉಂಗುರ ಉದುರಿಸಬೇಕಾಗುತ್ತದೆ"
ಎಂದಾಗಲಂತೂ ವೆಂಕಮ್ಮ ಹೌಹಾರಿದರು.
"ನಾನು ಕದಿಯಲಿಲ್ಲ ನಾನು ಕಳ್ಳಿ ಅಲ್ಲ"

ಎಂದು ಪರಿಪರಿಯಾಗಿ ಅಂಗಲಾಚಿದರು. ಆದರೆ ಯಾರೂ ಕನಿಕರ ಸಹ ತೋರಿಸುವಂತೆ ಕಾಣಲಿಲ್ಲ. ನೆಂಟರೆಲ್ಲ ಸುತ್ತನೆರೆದು ನಾಟಕ ನೋಡುತ್ತಿದ್ದರು. ಕೆಲವರು ಅವರವರಷ್ಟಕ್ಕೇ ಏನೇನೋ ಮಾತಾಡುವುದು ವೆಂಕಮ್ಮನಿಗೆ ಕೇಳಿಸುತ್ತಿತ್ತು.
"ಅಯ್ಯೋ ದೇವರೆ, ಇಂತಹ ಮಾತನ್ನು ಕೇಳಲು ಇಲ್ಲಿಯವರೆಗೆ ಬರಬೇಕಾಯಿತೇ?. ನನಗೆ ಸಾವು ಬರಬಾರದೇ"

ಎಂದು ವೆಂಕಮ್ಮ ಹಲುಬಿದರು.

********





"ಇದೆಲ್ಲ ನಾಟಕ. ಬಡತನ ಏನು ಬೇಕಾದರೂ ಮಾಡಿಸುತ್ತದೆ"
ಎಂದು ಯಾರೋ ಹಿಂದಿನಿಂದ ಹೇಳಿದರು.

ಛೆ ನಾನು ಯಾಕಾದರೂ ಇಲ್ಲಿಗೆ ಬಂದೆನೋ ಎನ್ನಿಸಿ ,
"ನಾನು ಕಳ್ಳಿಯಲ್ಲ, ಕಳ್ಳಿಯಲ್ಲ. ಎಲ್ಲಿ ಬೇಕಾದರೂ ಹೇಳುತ್ತೇನೆ ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ ನನ್ನನ್ನು ನಂಬಿ"

ಎಂದು ಹಲುಬಿ ಕೂಗಿಕೊಳ್ಳುತ್ತಿರುವಾಗಲೇ ಯಾರೋ ಗಟ್ಟಿಯಾದ ದಢೂತಿ ಹೆಂಗಸೊಬ್ಬಳು ಅವರ ರಟ್ಟೆಯನ್ನು ಹಿಡಿದು ಧರಧರ ಹತ್ತಿರದ ಕೋಣೆಗೆ ಎಳೆದೊಯ್ದರು.

ಅವರು ಹೌಹಾರಿ, ತನ್ನ ಸೀರೆಯ ನೆರಿಗೆಯನ್ನು ಗಟ್ಟಿಯಾಗಿ ಹಿಡಿದು,
"ಬಿಡಿ ಬಿಡಿ"
ಎನ್ನುತ್ತಿರುವಾಗಲೇ ಅವರ ಸೀರೆಯನ್ನು ಆ ಹೆಂಗಸು ‘ದರಾದರಾ ‘ ಎಳೆದೇ ಬಿಟ್ಟರು.


ಕೊನೆಗೂ ವೆಂಕಮ್ಮನ ಸೀರೆ, ಅವರ ದೇಹದಿಂದ ಬೇರ್ಪಟ್ಟು ನೆಲಕ್ಕೆ ಬಿದ್ದಾಗ ವೆಂಕಮ್ಮ ಗೋಳಾಡುತ್ತಾ ನೆಲಕ್ಕೆ ಬಿದ್ದರು. ಆದರೆ ಉಂಗುರ ಸಿಕ್ಕದೇ ಇದ್ದಾಗ ನಿರಾಶರಾದ ಆ ಹೆಂಗಸು ವೆಂಕಮ್ಮನನ್ನು ತುಳಿದುಕೊಂಡೇ ಏನೇನೋ ಬೈಯುತ್ತಾ ಹೊರಗೆ ಹೋದಾಗ ವೆಂಕಮ್ಮ ಹತಾಶರಾಗಿ ಮೆಲ್ಲನೇ ಎದ್ದು ಸೀರೆಯನ್ನು ಸುತ್ತಿಕೊಂಡು ಮೂಲೆಯಲ್ಲಿ ಮುರುಟಿಕೊಂಡು ಕುಳಿತುಕೊಂಡರು.

ರಾತ್ರಿ ಬೆಳಕು ನೀಡಲು ತಂದು ಸಾಲಾಗಿ ಇಟ್ಟ ಹತ್ತಾರು ಪೆಟ್ರೋಮ್ಯಾಕ್ಸ್ ಗಳು ಇವರ ಪರಿಸ್ಥಿತಿಯನ್ನು ಕಂಡು ನಗುತ್ತಾ ಇದ್ದಂತೆ ಅವರಿಗೆ ಭಾಸವಾಯಿತು.

ಆದರೆ ಸೀತಾರಾಮಯ್ಯ ಉಂಗುರ ಕಳೆದುಕೊಂಡ ಹತಾಶೆಯಿಂದ ಇನ್ನೂ ಹೊರಬಂದಿರಲಿಲ್ಲ. ಅವನು ಮತ್ತೆ ಒಳಗೆ ಬಂದು, ಒಂದು ತೆಂಗಿನ ಕಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ವೆಂಕಮ್ಮನ ಮುಂದೆ ಚಾಚಿ
" ಹೇಳಿ, ಇದನ್ನು ಮುಟ್ಟಿ ಹೇಳಿ. ಉಂಗುರ ಕದಿಯಲಿಲ್ಲ ಎಂದು"
ಎಂದು ಕೂಗಿದಾಗ,
ವೆಂಕಮ್ಮನಿಗೆ ದುಃಖದ ಬದಲು ರೋಷ ಉಕ್ಕಿಬಂತು. ಒಮ್ಮೆಲೆ ಸೀರೆಯ ಸೆರಗನ್ನು ಕೈಯಲ್ಲಿ ಹಿಡಿದು ಸೊಂಟಕ್ಕೆ ಬಿಗಿದು ಕಟ್ಟಿ ಎದ್ದು ನಿಂತು ಅಬ್ಬರಿಸಿದರು.
"ಏನೋ, ಬೋ… ಮಗನೆ ಇಷ್ಟು ಮಾಡಬೇಕಂತ ನನ್ನನ್ನು ಕರೆಸಿದ್ದಾ? ಏನಂತ ಮಾಡಿದ್ದಿ? ನಿನ್ನ ಮಗಳ ಮದುವೆ ಮಾಡಿ ನನಗೆ ಇಷ್ಟು ಅವಮಾನ ಮಾಡ್ಬೇಕು ಅಂತ ನನ್ನ ಇಲ್ಲಿಗೆ ಕರೆಸಿದ್ಯಾ? ನನ್ನನ್ನು ಜೀವಂತ ಹೊಂಡ ತೆಗೆದು ಹುಗಿಯಬೇಕು ಅಂತ ಮಾಡಿದ್ಯೇನೋ. ನಿನ್ನ ಬುದ್ದಿ ಗೊತ್ತಿದ್ದೂ ಗೊತ್ತಿದ್ದು ಹಿಂದಿನದ್ದೆಲ್ಲ ಮರೆತು, ಆ ಹೆಣ್ಣಿಗೆ ಒಂದು ಆಶೀರ್ವಾದ ಮಾಡಿ ಹೋಗುವ ಅಂತ ಬಂದೆನಲ್ಲೋ, ನನಗೆ ಸರಿಯಾಗಿ ಮಂಗಳಾರತಿ ಮಾಡಿದ್ಯಲ್ಲ. ಆದರೆ ಇದು ಇಷ್ಟಕ್ಕೇ ಮುಗೀತು ಅಂತ ತಿಳೀಬ್ಯಾಡ. ನನಗೆ ಇಂದು ಮಾಡಿದ ಅವಮಾನಕ್ಕೆ ನಿನಗೆ ಶಿಕ್ಷೆ ಆಗಿಯೇ ಆಗುತ್ತದೆ"

ಎಂದು ಒಂದೇ ಉಸಿರಿನಲ್ಲಿ ಒರಲುತ್ತಾ ಹುಚ್ಚು ಆವೇಶದಿಂದ ಎದುರಿಗಿದ್ದವರನ್ನು  ದೂಡಿಕೊಂಡು ಅಂಗಳ ಇಳಿದು ಹೊರಟೇ ಬಿಟ್ಟರು.

ಅವರ ಕಣ್ಣು ಕೆಂಡದ ಉಂಡೆಯಾಗಿತ್ತು.
ಅವರ ಅವತಾರವನ್ನು ಕಂಡು, ತಡೆಯುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ.

ಓಡಿಕೊಂಡೇ ಮನೆಗೆ ಬಂದ ವೆಂಕಮ್ಮನಿಗೆ ಮೈಮೇಲೆ ಜ್ಞಾನವೇ ಇದ್ದಂತಿರಲಿಲ್ಲ. ಏದುಸಿರು ಬಿಡುತ್ತಾ ಚಾವಡಿಯನ್ನು ಏರಿ ಗಂಡನ ಭಾವ ಚಿತ್ರದ ಮುಂದೆ ಮಂಡಿಯೂರಿ ಕುಳಿತು,ಹೇಗೆ ಬಂದರೊ ಬಹುಷ್ಯ ಅವರಿಗೂ ಗೊತ್ತಿಲ್ಲ . ಮೈಯ ಮೇಲೆ ಜ್ಞಾನ ಅವರಿಗೂ ಇರಲಿಲ್ಲ.

"ಕಂಡ್ರ್ಯಾ? ಕಂಡ್ರ್ಯಾ? ಇವತ್ ಬೆಳಿಗ್ಗೆ ಹೇಳಿದ್ನಲೆ. ನಾನು ಇಷ್ಟ್ ಬೇಗ ಬತ್ತಿಲ್ಲೆ, ಸ್ವಲ್ಪ ದಿನ ಇರ್ತೆ. ಜಂಬ್ರ ಇತ್ತು ಅಂತ. ಸಾಕು. ಮರ್ರೆ ಸಾಕು. ಎಲ್ಲ ಕಂಡಾಯ್ತು. ಇನ್ನೂ ಯಾಕೆ ಬದ್ಕಿ ಇಪ್ಪುದ್?. ನನ್ನನ್ನೂ ಬೇಗ ಕರ್ಕಂಡ್ ಹೋಯ್ನಿ.  ನಂಗ್ ಈ ಜನ್ಮವೇ ಸಾಕ್. ಇನ್ನು ಈ ಜನ್ಮದಲ್ಲಿ ನಾನು ಯಾರಿಗೂ ಮುಖ ತೋರ್ಸುಕಿತ್ತಾ?. ಇಷ್ಟು ದಿನ ಬದುಕಿದ್ದು ಇಂತಹ ಅವಮಾನವನ್ನು ಅನುಭವಿಸುವದಕ್ಕೆ ಅಂತ ಆಯಿತಲ್ಲ. ನಾನ್ ಬರ್ತೆ, ನನ್ನನ್ನ್ ಕರ್ಕಂಡ್ ಹೋಯ್ನಿ ಕರ್ಕಂಡ್ ಹೋಯ್ನಿ"

ಎಂದು ನೆಲಕ್ಕೆ ಬಾಗಿ ಹಣೆಯನ್ನು ಮತ್ತೆ ಮತ್ತೆ ಬಡಿದುಕೊಂಡು ಗೋಳಾಡಿದರು.

ಕೊನೆಗೆ ಬಳಲಿಕೆಯಿಂದ ಎಂಬಂತೆ ಹಾಗೆಯೇ ಕುಸಿದು ಒಂದು ಬದಿಗೆ ಬಾಗಿ ಮಲಗಿಕೊಂಡರು.

***********




ಸೊಸೆ ಅದನ್ನು ಕಂಡು ಗಾಬರಿಯಾಗಿ ಚಾವಡಿಗೆ ಓಡಿಬಂದು,

"ಏನಾಯ್ತು ಅತ್ತೇ? ಯಾಕೆ ಹಾಂಗ್ ಮಲ್ಕಂಡಿದ್ರಿ? ಏಳಿ ಏಳಿ. ನಂಗೆ ಹೆದರಿಕೆ ಆತ್ "

ಎಂದು ಹತ್ತಿರ ಬಂದು ಅಳುತ್ತಾ ಹೇಳಿದಾಗ, ಅವಳನ್ನು ಸಿಟ್ಟಿನಿಂದ ದುರುದುಟ್ಟಿ ನೋಡಿದ ವೆಂಕಮ್ಮ,

" ದೂರ ಹೋಗು, ನನ್ನನ್ನು ಮುಟ್ಟಬ್ಯಾಡ. ದೂರ ಹೋಗು. ನಾನು ಈಗ ಒಬ್ಳೇ ಇರ್ಕ್. ಮಾತಾಡಿಸ್ಬ್ಯಾಡ ಹೋಗು"

ಎಂದು ಕಣ್ಣು ಕೆಂಪು ಮಾಡಿಕೊಂಡು ಅಬ್ಬರಿಸಿದರು.

ವೆಂಕಮ್ಮನ ಸ್ಥಿತಿಯನ್ನು ನೋಡಿ ಅವಳಿಗೆ ಹೆದರಿಕೆಯಾಗಿ ಹಿಂದೆ ಹಿಂದೆ ಹೋದವಳು, ಅತ್ತೆಯ ಮನಸ್ಸಿಗೆ ಶಾಂತಿ ಸಿಗುವುದಾದರೆ ಹಾಗೆ ಮಲಗಿರಲಿ ಎಂದುಕೊಂಡಳು. ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿದ್ದ ಅವಳು ಅಲ್ಲಿಯೇ ಜಗಲಿಯ ಮೇಲೆ ಒಂದು ಗೋಣಿಯ ಚೀಲವನ್ನು ಗೋಡೆಗೆ ಆನಿಸಿ ತಲೆದಿಂಬು ಮಾಡಿಕೊಂಡು ಒರಗಿಕೊಂಡಳು. ಹಾಗೇ ಜೊಂಪು ಹತ್ತಿತು. ಮತ್ತೆ ಎಚ್ಚರಾಗಿ ಅತ್ತೆಯನ್ನು ಕಂಡದ್ದು ಮುಸ್ಸಂಜೆಯ ಕತ್ತಲಾಗುವ ಹೊತ್ತಿಗೆ.

ಅತ್ತ ಮದುವೆಯ ಮನೆಯಲ್ಲಿ, ಇಂತಹ ಒಂದು ಅಹಿತಕರ ಘಟನೆ ನಡೆದದ್ದರಿಂದ ಮದುವೆಯ ಮನೆಯ ಸಂಭ್ರಮವೇ ಹಾಳಾಗಿಹೋಗಿತ್ತು. ಯಾರಿಗೂ ಉತ್ಸಾಹವೇ ಇರಲಿಲ್ಲ. ಅಂತೂ ಸೀತಾರಾಮಯ್ಯ ಮದುವೆಗೆ ಬಂದ ನೆಂಟರನ್ನೆಲ್ಲ ಕಳಿಸಿ, ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಟ್ಟು,

"ಅಯ್ಯಬ್ಬ ಅಂತೂ ಮುಗಿಯಿತಲ್ಲ"

ಎಂದು ಸ್ವಲ್ಪ ಒರಗಿದರು.

ಸಂಜೆ ಕತ್ತಲು ಕವಿಯುವ ಹೊತ್ತಿಗೆ ಎದ್ದು, ಮನೆಯ ಹೊರಗಡೆ ತೋಟಕ್ಕೆ ಹೋಗಿದ್ದಾಗ ಬಚ್ಚಲ ಮನೆಯ ನೀರು ಹರಿದು ಹೋಗುವ ಜಾಗದ ತೆಂಗಿನ ಹೊಂಡದ ಬುಡದಲ್ಲಿ ಏನೋ ಹೊಳೆಯುತ್ತಿದ್ದುದನ್ನು ನೋಡಿದರು.  ಪುನಃ ಮನೆಗೆ ಹೋಗಿ ಬ್ಯಾಟರಿ ತಂದು, ಅದರ ಬೆಳಕಿನಲ್ಲಿ ಹತ್ತಿರ ಹೋಗಿ ಇಣುಕಿ ನೋಡಿದರೆ,

ಅದೇ ಉಂಗುರ!

ಬಚ್ಚಲ ನೀರಿನೊಂದಿಗೆ ಹರಿದುಕೊಂಡು ಬಂದಿರಬೇಕು. ಅದು ಆ ಕಪ್ಪು ಕೆಸರಿನ ಮಧ್ಯದಲ್ಲಿ ಹುಗಿದು ಹೋಗಿತ್ತು, ಅದನ್ನು ಒಂದು ಕೋಲಿಗೆ ಸಿಕ್ಕಿಸಿ ಎತ್ತಿ ಹಿಡಿದು ನೋಡಿದರು.

ಹೌದು ಅದೇ ಉಂಗುರ.

ಮಧ್ಯಾಹ್ನ ನಡೆದ ಒಂದೊಂದು ಘಟನೆಯೂ ಕಣ್ಣಮುಂದೆ ಹಾದುಹೋಯಿತು.

ತಾನು ಎಲ್ಲರ ಮುಂದೆ ಎಷ್ಟು ಕಠೋರವಾಗಿ ವರ್ತಿಸಿದೆ ಎಂದು ನೊಂದುಕೊಂಡರು.

ಸುತ್ತಲೂ ಕತ್ತಲು ಕವಿಯುತ್ತಿತ್ತು. ಮದುವೆಯ ಮನೆಯಲ್ಲಿ ಮಕ್ಕಳೆಲ್ಲ ಗ್ಯಾಸ್ ಲೈಟಿನ ಬೆಳಕಿನಲ್ಲಿ ಆಡುತ್ತಿದ್ದವು.

***********






ಸೀತಾರಾಮಯ್ಯನಿಗೆ ಏಕೋ ಉಂಗುರ ಸಿಕ್ಕಿದ್ದು ಖುಷಿಯಾಗಲಿಲ್ಲ. ಆದರೂ ಅದನ್ನು ಹೆಂಡತಿಗೆ ತೋರಿಸಲು ಕೂಗಿ ಕರೆಯಬೇಕು ಎನ್ನುವಷ್ಟರಲ್ಲಿ,

ಯಾರೋ ಒಬ್ಬ ಒಕ್ಕಲು ಆಳು ಅಡಿಕೆ ಸೋಗೆಯ ಸೂಡಿಯನ್ನು ಬೀಸುತ್ತಾ ಅದರ ಬೆಳಕಿನಲ್ಲಿ ಏದುಸಿರು ಬಿಡುತ್ತಾ ಬಂದವನು ದೂರದಿಂದಲೇ,

"ಅಯ್ಯಾ, ವೆಂಕಮ್ಮನೋರು ತೀರಿಕೊಂಡರಂತೆ"

ಎಂದು ಕೂಗಿ ಸುದ್ದಿ ಮುಟ್ಟಿಸಿದ.

ಸೀತಾರಾಮಯ್ಯನಿಗೆ ತೀರಾ ಆಘಾತವಾಯಿತು.

“ಈ ಉಂಗುರದಿಂದಲೇ ಇಷ್ಟೆಲ್ಲ ಆಯಿತು”

ಎಂದು ಅದನ್ನೇ ತದೇಕದೃಷ್ಟಿಯಿಂದ ನೋಡಿದರು. ಅವರ ಕಣ್ಣಿನಲ್ಲಿ ನೀರು.
ಇಷ್ಟಕ್ಕೆಲ್ಲ ಕಾರಣ ಆ ಉಂಗುರ, ಅದು ತನಗೆ ಸಿಕ್ಕಲೇ ಇಲ್ಲ ಅಂತ ಮಾಡಿದರೆ?

ಅವರು ತಡ ಮಾಡಲಿಲ್ಲ.ಅವರದೂ ಒಳ್ಳೆಯ ಹೃದಯವೆ
ಕಾವೇರಮ್ಮನ ಎದುರು ತಾನು ಮತ್ತೊಮ್ಮೆ ತೀರ  ಚಿಕ್ಕವನಾದೆ ಎನ್ನಿಸಿತು ಅವರಿಗೆ. ಹಿಂದಿನ ವೈಷಮ್ಯ ಮರೆತು ನಾನು ಮದುವೆ ಹೇಳಿಕೆ ಹೇಳಲು ಹೋದಾಗ ಅವರ ಮಗನೇ ಬಂದ ಅಂತ ಸಂಭ್ರಮ ಪಟ್ಟರಲ್ಲ. ಎಷ್ಟೊ ವರ್ಷದಿಂದ ಮಾತುಕತೆ ಇರಲಿಲ್ಲ. ಯಾರದೋ ಹಿಂದಿನವರ ದ್ವೇಷ. ಅದೇನೋ ಆಣೆ ಭಾಷೆ ಅಂತೆ. ಹಿಂದೆಲ್ಲ ಹಾಗೆಯೇ ಇತ್ತು. ತಾನು ಅಂದು ನಡೆಯಲಿಲ್ಲ ಎಂದ ಕೂಡಲೇ ಧರ್ಮಸ್ಥಳ ಭೂತ ದೇವರು ಎಲ್ಲವೂ ಎದುರು ಸಾಕ್ಷಿಯಾಗಿ ಬಂದು ಬಿಡುತ್ತದೆ.

ನಾನು ಸರಿ ಮಾಡಲು ಹೊರಟೆ. ಹೀಗಾಯಿತು.

ಸೀದಾ ಬಾವಿಯ ಕಟ್ಟೆಗೆ ಬಂದು ಉಂಗುರವನ್ನು ತೆಗೆದು ಬಾವಿಗೆ ಎಸೆದುಬಿಟ್ಟರು.

ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಲೇ ಬೇಕು ಎಂದು ಹೆಗಲಿನ ಮೇಲಿನ ಪಾಣಿ ಪಂಚೆಯನ್ನು ಒಮ್ಮೆ ನೆಲಕ್ಕೆ ಕೊಡವಿ ತಲೆಯಡಿ ಮಾಡಿಕೊಂಡು ಏನೋ ಒಂದು ದೃಢನಿಶ್ಚಯಕ್ಕೆ ಬಂದವರಂತೆ, ಅಲ್ಲಿಂದಲೇ ವೆಂಕಮ್ಮನ ಮನೆಯತ್ತ ವೇಗವಾಗಿ ನಡೆಯತೊಡಗಿದರು.

*#ಮುಗಿಯಿತು.*