ಶುಕ್ರವಾರ, ಮೇ 11, 2018

ದಿನೇಶ ಉಪ್ಪೂರ:

*ನನ್ನೊಳಗೆ- 96*

ಸವಿ ನೆನಪುಗಳು ಬೇಕು ಸವಿಯಲೀ ಬದುಕು. ನಮ್ಮ ಜೀವನದಲ್ಲಿ ನಡೆದುಹೋದ ಅದೆಷ್ಟೋ ಸಣ್ಣ ಸಣ್ಣ ವಿಷಯಗಳು ಕೆಲವೊಮ್ಮೆ ದುತ್ತೆಂದು ಎದುರಿಗೆ ಬಂದು ನಿಲ್ಲುತ್ತದೆ. ಮುಖದಲ್ಲಿ ಸಣ್ಣ ಮಂದಹಾಸ ಮಿಂಚಿ ಮಾಯವಾಗುತ್ತದೆ.

ನನಗೆ ಮದುವೆಯಾದ ಹೊಸತು. ಹುಡುಗಾಟಿಕೆಯ ಕಾಲ. ನನ್ನ ಹೆಂಡತಿಯ ಮನೆಯಲ್ಲಿ ಆಗ ತಾನೇ ಟೆಲೆಪೋನ್ ಬಂದಿತ್ತು. ಪೋನ್ ಎಂದರೆ ಆಗ ನಮಗೆಲ್ಲ ಒಂದು ಕುತೂಹಲದ ವಿಷಯ. ಅದರಲ್ಲಿ ಮಾತಾಡುವುದೆಂದರೆ ಏನೋ ಒಂದು ತರಹದ ಖುಷಿ. ನಾನೊಮ್ಮೆ ಅಲ್ಲಿಗೆ ಹೋಗಿದ್ದಾಗ, ಸುಮ್ಮನೇ ಹೊಸ ಪೋನ್ ನ್ನು ನೋಡುತ್ತಾ ಇದ್ದೆ. ಇವಳ ಅಣ್ಣನ ಮಗ "ಇದರಲ್ಲಿ ಭವಿಷ್ಯ ಬರುತ್ತದೆ ಮಾಮ" ಅಂದ. ನಾನು ಹೌದಾ ಎಂದು ಹತ್ತಿರ ಹೋಗಿ ಕುತೂಹಲದಿಂದ ಪರಿಶೀಲಿಸಲು ಶುರುಮಾಡಿದೆ.

ಸುಮ್ಮನೇ ರಿಸೀವರ್ ಕಿವಿಯ ಹತ್ತಿರ ಹಿಡಿದು ಯಾವುದೋ ಬಟನ್ ಒತ್ತಿದೆ. ಆಗ ಭವಿಷ್ಯಕ್ಕಾಗಿ ಒಂದನ್ನು ಒತ್ತಿ... ಕನ್ನಡದಲ್ಲಿ ಕೇಳಲು ಎರಡನ್ನು ಒತ್ತಿ ಅಂತ ಅದೇನೋ ಬರುತ್ತಿತ್ತಪ. ನನಗೆ ಸರಿಯಾಗಿ ನೆನಪಿಲ್ಲ. ಆದರೆ ನಾನೂ, ಅವನು ಮತ್ತು ಅವನ ತಂಗಿಯೂ ಸೇರಿ ಎಲ್ಲರೂ ಪೋನಿನಲ್ಲಿ ಭವಿಷ್ಯ ಕೇಳಿದ್ದೇ ಕೇಳಿದ್ದು. ಅದು ಬಹುಷ್ಯ ರೆಕಾರ್ಡ್ ಮಾಡಿ ಇಟ್ಟಿದ್ದು ಪೋನಿನಲ್ಲಿ ಬರುತ್ತಿತ್ತು ಅಂತ ಈಗ ಅನ್ನಿಸುವುದು. ನಮಗೆ ಸಾಕೆನಿಸುವಷ್ಟು ಕೇಳಿ ದಣಿದೆವು.

ಇಷ್ಠೇ ಆಗಿದ್ದರೆ ಇಲ್ಲಿ ಅದನ್ನು ಹೇಳುವ ಅಗತ್ಯ ಇರಲಿಲ್ಲ. ಮುಂದಿನ ಸಾರಿ ಅವರಿಗೆ ಟೆಲಿಪೋನ್ ಬಿಲ್ಲು ಬಂದಾಗ ಮಾತ್ರ ನಮ್ಮ ಭಾವನಿಗೆ ಶಾಕ್! ಮುನ್ನೂರು, ನಾನೂರು ಬಿಲ್ಲು ಬರುವಲ್ಲಿ ಒಮ್ಮೆಲೇ ನಾಲ್ಕು ಸಾವಿರ ಚಿಲ್ಲರೆ ಬಿಲ್ಲು!. ಅದನ್ನು ನೋಡಿ ಹೌಹಾರಿದ ಅವರು, ಇಷ್ಟು ಬಿಲ್ಲು ಬರಲು ಸಾಧ್ಯವೇ ಇಲ್ಲ. ಅದರಲ್ಲಿ ಏನೋ ತಪ್ಪಾಗಿದೆ ಎಂದು ಟೆಲಿಪೋನ್ ಎಕ್ಸ್ ಚೇಂಜ್ ಗೆ ಓಡಿದರು. ಬಿಲ್ಲನ್ನು ತೋರಿಸಿ ನಿಮ್ಮದು ಎಂತಹ ಟೆಲಿಪೋನ್ ಮರ್ರೆ? ಯಾರಿಗಾದರೂ ಹಾರ್ಟ್ ಫೈಲ್ ಆಪುದೇ ಸೈ. ಈ ಬಿಲ್ಲು ನೋಡಿ. ಕಂಡಾಪಟ್ಟೆ ಬಂದಿದೆ. ಅದನ್ನು ಸರಿಮಾಡಿಕೊಡಿ ಎಂದು ಹೇಳಿದರು. ಅದರೆ ಅಲ್ಲಿಯ ಜೆಇಯವರು ಅವರ ಪರಿಚಯದವರಾಗಿದ್ದು, ಬಿಲ್ಲನ್ನು ನೋಡಿ ರೀಡಿಂಗ್ ಎಲ್ಲ ಪರಿಶೀಲಿಸಿ "ಬಿಲ್ಲು ಸರಿಯಾಗಿದೆ. ಮರ್ರೆ. ಇದನ್ನು ಕಟ್ಟಲೇಬೇಕಲ್ಲ" ಅಂದುಬಿಟ್ಟರು.

ನಮ್ಮ ಭಾವ "ಅದು ಆಗುವುದಿಲ್ಲ. ಅಷ್ಟು ಬಿಲ್ಲು ಹೇಗೆ ಆಯಿತು ಅಂತ ಬೇಕಲ್ಲ? ಅಷ್ಟೆಲ್ಲ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಮೀಟರ್ ಸಮಾ ಇರಲಿಕ್ಕಿಲ್ಲ, ನಾನು ಬೇಕಾದರೆ ಒಂದು ಅರ್ಜಿಕೊಡುತ್ತೇನೆ. ಇನ್ನೊಮ್ಮೆ ಪರಿಶೀಲಿಸಿ ನೋಡಿ" ಎಂದು ಅನುನಯಿಸಿ ಹೇಳಿದರು. ಜೆಇಯವರು ಎಷ್ಟು ಹೇಳಿದರೂ ಇವರು ಕೇಳಲಿಲ್ಲ. ಅವರೂ ಗುರುತಿನವರಾದ್ದರಿಂದ, "ಆಗಲಿ, ನೋಡುವ" ಎಂದು, ಇವರ ಹತ್ತಿರ ಒಂದು ಅರ್ಜಿ ಪಡೆದುಕೊಂಡು, ಹಿಂದಿನ ತಿಂಗಳ ಬಿಲ್ಲಿನ ಪ್ರಕಾರ ಒಂದು ಅಂದಾಜು ಬಿಲ್ಲನ್ನು ಕಟ್ಟಿಸಿಕೊಂಡರು.

ಮುಂದಿನ ಸಲ ನಾನು ಅವರ ಮನೆಗೆ ಹೋದಾಗ ಹೀಗೆ ಯಾವುದೋ ವಿಷಯವನ್ನು ಮಾತಾಡುತ್ತಾ ಟೆಲಿಪೋನ್ ಬಿಲ್ಲಿನ ಬಗ್ಗೆ ಹೇಳಿದರು. ನನಗೆ ಆಗ ನೆನಪಾಯಿತು. "ಹೋ ಅಂದು ನಾವು ಪೋನಿನಲ್ಲಿ ಕೇಳಿದ ಭವಿಷ್ಯ ಕತೆ ಇಷ್ಟೆಲ್ಲ ಮಾಡಿತಲ್ಲ" ಎಂದು ಪಶ್ಚಾತ್ತಾಪವಾಯಿತು. ಆದರೆ ಅವರ ಮಕ್ಕಳು ಆ ವಿಷಯವನ್ನು ಮರೆತು ಬಿಟ್ಟದ್ದರು. ನಾನೂ ಮತ್ತೆ ಅದನ್ನು ಹೇಳಿ ಸಿಕ್ಕಿಹಾಕಿಕೊಳ್ಳಲು ಮನಮಾಡಲಿಲ್ಲ. ಮತ್ತೆ ಅವರಿಗೂ ಮುಂದೆ ಅದರ ವ್ಯತ್ಯಾಸದ ಬಿಲ್ಲು ಬಂದಿರಲಿಕ್ಕಿಲ್ಲ ಅಂತ ಕಾಣುತ್ತದೆ. ಆ ನಂತರ ಎಲ್ಲರಿಗೂ ಅದು ಮರೆತು ಹೋಯಿತು.

ಇನ್ನೊಮ್ಮೆ ಅಂತಹುದೇ ಆದ ಮತ್ತೊಂದು ಎಡವಟ್ಟು ಆಯಿತು. ನಮ್ಮ ಮಾವನವರ ಹುಟ್ಟುಹಬ್ಬ ಮತ್ತು ರಾಮನವಮಿ ಪ್ರತೀ ವರ್ಷವೂ ಒಂದೇ ದಿನ ಬರುತ್ತಿದ್ದು ಅದನ್ನು ಅವರ ಮನೆಯಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದರು. ಒಮ್ಮೆ ನಾವು ಹಿಂದಿನ ದಿನವೇ ಅಲ್ಲಿಗೆ ಹೋಗಿದ್ದೆವು. ಹುಟ್ಟುಹಬ್ಬದ ಶುಭಾಶಯದ ವಿಷಯವನ್ನು ಗೋಡೆಯ ಮೇಲೆ ಎದ್ದು ಕಾಣುವಂತೆ ಬರೆಯುವ ಎಂದು ಯಾರಿಗೋ ಹಂಬಲವಾಯಿತು. ಒಬ್ಬರು ಅದನ್ನು ಪ್ರಾಸ್ಥಾಪಿಸಿದ್ದೇ, ಮಕ್ಕಳೆಲ್ಲ ಸೇರಿ ನನ್ನನ್ನು ಒತ್ತಾಯಿಸಿದರು. ನನಗೂ ಉಮೇದು. ಮನೆಯ ಒಳಗೆ ಪ್ರವೇಶಿಸುವಾಗ ಹೆಬ್ಬಾಗಿಲಿನ ಎದುರಿಗೇ  ಮುಂದೆ ಕಾಣುವ ಗೋಡೆಯ ಮೇಲೆ ಬಣ್ಣದ ಕಾಗದವನ್ನು ಕತ್ತರಿಸಿ ಅಬ್ಬಲಿಗೆ ಹೂವುಗಳನ್ನು ಮಧ್ಯ ಮಧ್ಯ , ಗಮ್ಮು ಹಾಕಿ ಗೋಡೆಗೆ ಹಚ್ಚಿ ಅಂಟಿಸಿ, ದೊಡ್ಡದಾಗಿ "ಹುಟ್ಟುಹಬ್ಬದ ಶುಭಾಶಯಗಳು" ಎಂಬ ಬರಹವನ್ನು ರಾರಾಜಿಸುವಂತೆ ಬರೆದೆವು. ಮರುದಿನ ಅದನ್ನು ನೋಡಿದ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಬಹಳ ಚಂದ ಆಯಿತು ಎಂದು.

ಹುಟ್ಟುಹಬ್ಬ ಮುಗಿದು ಎರಡು ದಿನದ ನಂತರ ಅದನ್ನು ತೆಗೆಯಲು ನೋಡಿದರೆ, ಬಣ್ಣದ ಕಾಗದದೊಂದಿಗೆ ಗೋಡೆಗೆ ಹಾಕಿದ ಸುಣ್ಣವೂ ಎದ್ದು ಬರಲು ಶುರುವಾದಾಗ, ನನ್ನ ಮುಖ ನೋಡಬೇಕಿತ್ತು.  "ಹೋ ಇದು ಕೆಲಸ ಕೆಟ್ಟಿತು. ಗೋಡೆ ಅಲ್ಲಲ್ಲಿ ಹರಿದು ತಿಂದಂತೆ ಕಲೆಯಾಗುತ್ತದೆ" ಅನ್ನಿಸಿತು. ಏನು ಮಾಡುವುದು? ತೆಗೆಯದೇ ಹಾಗೆಯೇ ಬಿಡುವ ಹಾಗೂ ಇರಲಿಲ್ಲ. ಮುಂದಿನ ದಿನಗಳಲ್ಲಿ ಅದು ಪ್ರಸ್ತುತವಲ್ಲದ್ದರಿಂದ ಅದನ್ನು ತೆಗೆಯುವುದೇ ಒಳ್ಳೆಯದು ಎಂತ ಎಲ್ಲರೂ ಹೇಳಿದರು. ಅಂತೂ ಏನೆಲ್ಲ ಒದ್ದಾಡಿ ನೀರು ಹಾಕಿ ಬಣ್ಣದ ಕಾಗದವನ್ನೆಲ್ಲ ತೆಗೆದು ಮತ್ತೆ ಗೋಡೆ ನೋಡುವಾಗ, ಅಲ್ಲಲ್ಲಿ ಗೋಡೆಯ ಸುಣ್ಣ ಬಣ್ಣವೆಲ್ಲ ಕಿತ್ತುಹೋಗಿ ನೋಡಲಾಗದ ಸ್ಥಿತಿ ಉಂಟಾಗಿತ್ತು.

ಪುಣ್ಯಕ್ಕೆ ಅಳಿಯನೆಂಬ ದಾಕ್ಷಿಣ್ಯದಿಂದಲೋ ಏನೋ, ನನ್ನ ಎದುರಿಗೆ ಒಂದು ಬೈಯಲಿಲ್ಲ. ನಾನೂ ಮತ್ತೆ ಮುಂದಿನ ದಿನಗಳಲ್ಲಿ, ಅಲ್ಲಿಗೆ ಹೋದಾಗ, ಆ ಗೋಡೆಯನ್ನೂ ನೋಡಿಯೂ ನೋಡದವನಂತೆ ಇದ್ದು, ಅದರ ಸುದ್ದಿ ಎತ್ತುತ್ತಲೇ ಇರಲಿಲ್ಲ. ಮತ್ತೆ ಮುಂದಿನ ಸಲ ಮನೆಗೆ ಪೈಂಟಿಂಗ್ ಮಾಡುವಾಗಲೇ ಅದು ಸರಿಯಾಯಿತು ಅನ್ನಿ.

ಮಂಗಳವಾರ, ಮೇ 8, 2018

ದಿನೇಶ ಉಪ್ಪೂರ:

*ನನ್ನೊಳಗೆ-95*

ನಾನು ಹಾಲಾಡಿ ಶಾಲೆಗೆ ಹೋಗುತ್ತಿದ್ದ ಕಾಲ. ಆಗ ನನಗೆ ಐದನೇ ಕ್ಲಾಸೋ, ಆರನೆಯ ಕ್ಲಾಸೋ ಇರಬಹುದು. ಶಾಲೆಯಲ್ಲಿ ಪ್ರತೀ ವಾರದಲ್ಲಿ ಒಂದೊಂದು ದಿನ  ಭಜನೆ, ಡಿಬೆಟ್, ಪ್ರತಿಭಾ ಪ್ರದರ್ಶನ, ಹಾಡು ಅಂತ, ಶಾಲೆಯ ಅವಧಿ ಮುಗಿದ ನಂತರ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಅದರಲ್ಲಿ ಮಕ್ಕಳಾದ ನಮ್ಮನ್ನು ಬಲವಂತವಾಗಿ ಪಾಲ್ಗೊಳ್ಳಲು ಹೇಳುತ್ತಿದ್ದರು. ನಾನು ಅದರಲ್ಲಿ ಉಮೇದಿನಿಂದಲೇ ಭಾಗವಹಿಸುತ್ತಿದ್ದೆ. ಆದ್ದರಿಂದ ಎಲ್ಲ ಮಕ್ಕಳಿಗೂ ನಾನೆಂದರೆ ಪರಿಚಿತ ವ್ಯಕ್ತಿಯಾಗಿದ್ದೆ.

ಒಮ್ಮೆ ನಾನು ಒಂದು ಪುಟ್ಟ ನಾಟಕವನ್ನು ನನ್ನದೇ ನಿರ್ದೇಶನದಲ್ಲಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ರಕ್ತಜಂಘ, ಸತ್ಯಶೀಲೆ ಮತ್ತು ರುದ್ರಕೋಪ ಎಂಬ ಮೂರು ಪಾತ್ರಗಳು. ನನ್ನದು ರಕ್ತಜಂಘ. ರಕ್ತಜಂಘನು ಸತ್ಯಶೀಲೆಯನ್ನು ಹುಡುಕುತ್ತಾ ಬರುವುದು, ತಪಸ್ಸು ಮಾಡುತ್ತಿದ್ದ ಅವಳನ್ನು ಬಲಾತ್ಕಾರ ಮಾಡಲು ಬರುವುದು. ಸತ್ಯಶೀಲೆಯು ತಪ್ಪಿಕೊಂಡು ಓಡುತ್ತಾ ಹೋಗಿ, ಕೈಯಲ್ಲಿದ್ದ ಪಿಂಡವನ್ನು ಬಿಸಾಡಿದಾಗ ರುದ್ರಕೋಪ ಹುಟ್ಟಿಬರುವುದು. ಅವನಿಗೂ ರಕ್ತಜಂಘನಿಗೂ ಯುದ್ಧವಾಗಿ, ರಕ್ತ ಜಂಘನನ್ನು ಕೊಲ್ಲುವುದು. ರುದ್ರಕೋಪನು ತಾಯಿಯನ್ನು ಸಮಾಧಾನ ಮಾಡುವುದು. ಅಲ್ಲಿಗೆ ನಾಟಕ ಮುಕ್ತಾಯ. ನಾವು ಮೂವರು ( ಹೆಸರು ನೆನಪಾಗುವುದಿಲ್ಲ) ಟ್ರಯಲ್ ಮಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು.

 ನಾಟಕದ ದಿನದಂದು, ಮನೆಯಲ್ಲಿದ್ದ ಅಪ್ಪಯ್ಯನ ಹಳೆಯ ವೇಸ್ಟಿ, ಅವರಿಗೆ ಸನ್ಮಾನ ಮಾಡಿದಾಗ ನೀಡಿದ್ದ ಝರಿ ಝರಿ ಇರುವ ಉಲ್ಲನ್ ಶಾಲು, ರಟ್ಟಿನ ಕಿರೀಟ, ಪ್ಲಾಸ್ಟಿಕ್ ಹೂವಿನಿಂದ ಮಾಡಿದ ಕೈಯ ಆಭರಣಗಳು, ಬಿದಿರು ಕೋಲಿನ ಬಿಲ್ಲು ಬಾಣಗಳು, ಅಲ್ಯುಮಿನಿಯಂ ತಂಬಿಗೆಗೆ ದಪ್ಪದ ಕೋಲು ಸಿಕ್ಕಿಸಿ ಮಾಡಿದ ಗದೆ ಇತ್ಯಾದಿಗಳನ್ನು ಮೊದಲೇ ಸಿದ್ಧಮಾಡಿ ಇಟ್ಟುಕೊಂಡು ಆ ದಿನ ಬೆಳಿಗ್ಗೆ ಕೆಳಶಾಲೆಯ ಕ್ರಾಪ್ಟ್ ರೂಮಿನಲ್ಲಿ ಇಟ್ಟಿದ್ದೆವು.

ನಮ್ಮ ಶಾಲೆಯ ನಾಟಕದ ಕಾರ್ಯಕ್ರಮದ ದಿನದಂದೇ, ಹಾಲಾಡಿಯ ಬಸ್ ನಿಲ್ದಾಣದ ಪಶ್ಚಿಮ ಬದಿಯ ಎತ್ತರದ ಜಾಗದಲ್ಲಿ ಅಮೃತೇಶ್ವರಿ ಮೇಳದ ಆಟ ಇತ್ತು. ಮೇಳದವರ ಬಿಡಾರ ನಮ್ಮ ಶಾಲೆಯ ಹತ್ತಿರ ಇರುವ ಮಾರಿಕಾನು ದೇವಸ್ಥಾನದಲ್ಲಿ. ಬೆಳಿಗ್ಗೆ  ಅಲ್ಲಿಗೇ ಎಲ್ಲ ಕಲಾವಿದರೂ ಬಂದು ಉಳಿದುಕೊಂಡು ವಿಶ್ರಾಂತಿಮಾಡಿ, ಸಂಜೆ ಆಟದ ಗರಕ್ಕೆ ಹೋಗುತ್ತಿದ್ದರು.

ನಮ್ಮ ಶಾಲೆ ಅಂದರೆ ಒಂದರಿಂದ ಏಳನೇ ತರಗತಿಯವರೆಗೆ ಇದ್ದು, ಸ್ಥಳಾವಕಾಶ ಕಡಿಮೆಯಾಗಿರುವುದರಿಂದ, ರಸ್ತೆಯ ಉತ್ತರದ ಭಾಗದಲ್ಲಿ ಒಂದರಿಂದ ಆರನೆಯ ಕ್ಲಾಸ್ ನ ವರೆಗೆ ಇದ್ದರೆ, ಏಳನೇ ಕ್ಲಾಸ್, ಟೀಚರ್ಸ್ ರೂಮು ಮತ್ತು ಕ್ರಾಫ್ಟ್ ರೂಮುಗಳು, ರಸ್ತೆಯ ಈಚೆ ಬದಿಯ ಒಂದು ಹಳೆಯ ಕಟ್ಟಡದಲ್ಲಿ ಇತ್ತು. ನಾನು ಅಲ್ಲಿ ಬೆಳಿಗ್ಗೆ ಮನೆಯಿಂದ ಬರುವಾಗ ತಂದು ಇಟ್ಟಿದ್ದ ನಮ್ಮ ನಾಟಕದ ಪರಿಕರಗಳನ್ನು ಹಾಕಿದ ಚೀಲವನ್ನು ಹಿಡಿದುಕೊಂಡು ರಸ್ತೆಯನ್ನು ದಾಟುವಾತ್ತಿರುವಾಗ, ನಗರ ಜಗನ್ನಾಥ ಶೆಟ್ಟರು ಬಿಡಾರಕ್ಕೆ ಹೋಗುವವರು, ಎದುರಿಗೆ ಬಂದರು. ನನ್ನನ್ನು ನೋಡಿದ ಕೂಡಲೆ ಅವರು, ಪಕ್ಕನೆ ನನ್ನ ಕೈಯನ್ನು ಹಿಡಿದುಕೊಂಡು "ಹೊ, ನೀವು ಭಾಗ್ವತ್ರ ಮಗ ಅಲ್ದಾ? ಇದೆಲ್ಲ ಎಂತ ಮಾರಾಯ್ರೆ? ಎಲ್ಲಿಗ್ ಹೊರ್ಟದ್? ನಮ್ ಆಟಕ್ ಬತ್ತಿಲ್ಯಾ?" ಅಂತ ಮಾತಾಡಿಸಿದರು.

ನಾನು ಸ್ವಲ್ಪ ಜಂಭದಿಂದಲೇ "ನಮ್ಮ ಶಾಲೆಯಲ್ಲಿ ನಾಟಕ ಇತ್ತು". ಅಂದೆ. "ಎಂತಾ ನಾಟ್ಕ? ನಿಮ್ದ್ ಪಾರ್ಟ್ ಇತ್ತಾ?" ಅಂದರು ಅವರು. "ಹೌದು, ನಾನು ರಕ್ತಜಂಘ ಮಾಡ್ತೆ. ಇದೇ ಕಿರೀಟ" ಎಂದು ಚೀಲದಲ್ಲಿ ಇದ್ದ ರಟ್ಟಿನ ಕಿರೀಟವನ್ನು, ಮೀಸೆಯನ್ನೂ ಅವರಿಗೆ ತೋರಿಸಿದೆ. ಅವರು, "ಆಂ, ನೀವು ರಕ್ತಜಂಘ ಮಾಡೂದಾ? ಅದು ನನ್ನ ಪಾರ್ಟ್ ಮರ್ರೆ" ಅಂದರು. ನಾನು ನಕ್ಕು ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದ, ನನ್ನ ಕೈಯನ್ನು ಬಿಡಿಸಿಕೊಂಡು ಶಾಲೆಯತ್ತ ಓಡಿದೆ.

ನಾಟಕ ಆಯಿತು. ಒಂದು ಹತ್ತು ನಿಮಿಷದ ನಾಟಕ ಇರಬಹುದು. ಮುಖಕ್ಕೆ ದಪ್ಪ ಪೌಡರ್ ಹಾಕಿಕೊಂಡು, ಕುಂಕುಮದ ಕೆಂಪು ನಾಮ ಹಾಕಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಇಟ್ಟುಕೊಂಡದ್ದಿರಬೇಕು. ಅಪ್ಪಯ್ಯನ ವೇಸ್ಟಿಯನ್ನು ಕಚ್ಚೆಪಂಚೆ ಹಾಕಿ ನಮ್ಮ ಮಾಸ್ಟ್ರು ಉಡಿಸಿದ್ದರು. ತಲೆಗೆ ರಟ್ಟಿನ ಕಿರೀಟ. ರಟ್ಟಿನ ಮೇಲೆ ಕಪ್ಪು ಬಳಿದ ದಪ್ಪ ಮೀಸೆ. ಝರಿ ಶಾಲನ್ನು ಹಿಂದೆ ಕಟ್ಡಿ ಉದ್ದಕ್ಕೆ ಇಳಿಬಿಟ್ಟಿದ್ದೆ. ಶಾಲೆಯ ಪಶ್ಚಿಮ ಬದಿಯ ಎತ್ತರದ ಸ್ಟೇಜಿನಲ್ಲಿ ನಮ್ಮ ನಾಟಕ.

ಮತ್ತೆ ನಾಟಕ ಹೇಗಾಯಿತು? ಅಂತ ನನಗೆ ನೆನಪಿಲ್ಲ. ಅಂತೂ ನಾಟಕ ಮುಗಿಸಿ, ಮೂರು ಮೈಲಿ ನಡೆದು ನಮ್ಮ ಮನೆಗೆ ಬಂದು, ಶಾಲೆಯ ಚೀಲವನ್ನು ಇಟ್ಟು, ರಾತ್ರಿ ಊಟವನ್ನು ಮಾಡಿ ಮತ್ತೆ ಹಾಲಾಡಿಯ ಆಟಕ್ಕೆ ಮನೆಯವರ ಜೊತೆಗೆ ಬಂದೆ.

ಆವತ್ತು "ಮಧುರಾ ಮಹೀಂದ್ರ" ಆಟ. ಆ ವರ್ಷ ಆ ಪ್ರಸಂಗದ ತುಂಬಾ ಆಟ ಆಗಿತ್ತು. ನಗರ ಜಗನ್ನಾಥ ಶೆಟ್ರು ಮೊದಲು ಉಗ್ರಸೇನ ಪಾತ್ರವನ್ನು ಮಾಡಿ, ಕೊನೆಗೆ ಕಂಸವಧೆಯ ಕಂಸನನ್ನು ಮಾಡುತ್ತಿದ್ದರು. ಕೋಟ ವೈಕುಂಠನ ರುಚಿಮತಿ. ಮೊದಲು ದೃಮಿಳ ಗಂಧರ್ವ ಹಳ್ಳಾಡಿ ಮಂಜಯ್ಯ ಶೆಟ್ರದ್ದಾದರೆ, ಗೋಡೆಯವರ ದೃಮಿಳ ರಾಕ್ಷಸ, ವಾಸುದೇವ ಸಾಮಗರ ಬಾಲಕಂಸ, ಅಂಬಾತನಯರ ನಾರದ. ಜೊತೆಗೆ ವಿಶೇಷ ಆಕರ್ಷಣೆಯಾಗಿ ಉಗ್ರಸೇನ ಮತ್ತು ರುಚಿಮತಿಯರಿಗೆ ದ್ವಂದ್ವ ಹಿಮ್ಮೇಳ ಇತ್ತು. ಅಪ್ಪಯ್ಯ ಮತ್ತು ಕಾಳಿಂಗ ನಾವಡರದ್ದು.

ನಾನು ಅ ದಿನ ಚೌಕಿಗೆ ಹೋಗುತ್ತಲೇ ನನ್ನನ್ನು ಕಂಡು, "ಹೋ ರಕ್ತಜಂಘ" ಎಂದು ನಗರ ಜಗನ್ನಾಥ ಶೆಟ್ಟರು ಗಟ್ಟಿಯಾಗಿ ಹೇಳಿದರು. "ಏನು? ಏನು?" ಅಂತ ಎಲ್ಲರೂ ಕೇಳಿದಾಗ, ನಾನು ಪಾರ್ಟು ಮಾಡಿದ್ದು ಹೇಳಿದೆ. ಆಗ ಅಲ್ಲಿಯೇ ಇದ್ದ ವೈಕುಂಠ, "ನಮ್ಮ ಮೇಳಕ್ಕೆ ಒಬ್ರು ಕಲಾವಿದ್ರು ಬೇಕಿತ್ತ್ ಮರ್ರೆ. ಮುಂದಿನ ವರ್ಷ ಬತ್ರ್ಯಾ?" ಎಂದರು. ನಾನು ನಕ್ಕು ಸುಮ್ಮನಾದೆ.

ನಗರ ಜಗನ್ನಾಥ ಶೆಟ್ರು ಹಳೆಯ ಕಡತದ ಒಬ್ಬ ಉತ್ತಮ ವೇಷಧಾರಿಯಾಗಿದ್ದರು. ಒಂದು ಸ್ವಲ್ಪವೂ ವಿಕಾರವಿಲ್ಲದ ಕುಣಿತ, ಒಳ್ಳೆಯ ಜಾಪಿನ ಎಷ್ಟು ಬೇಕೋ ಅಷ್ಟೇ ಮಾತಿನ, ಭರ್ಜರಿ ಆಳಿನ ಯಾವ ಪಾತ್ರವನ್ನೂ ಸಮರ್ಥವಾಗಿ ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು. ತಲೆಯ ಮೇಲೆ ಸದಾ ಒಂದು ಕಪ್ಪು ಟೊಪ್ಪಿ. ಬಗಲಲ್ಲಿ ಒಂದು ಚೀಲ.

ಅವರು ರಕ್ತಜಂಘ ಮಾಡಿಕೊಂಡು ಶಿವ ಶಿವ ಎಂಬ ಒಂದು ದುಃಖದ ಪದ್ಯಕ್ಕೆ, ಅಪ್ಪಯ್ಯ ಪದ್ಯವನ್ನು ಹೇಳಿದ ನಂತರ, ಅರ್ಥವನ್ನು ಎರಡೇ ವಾಕ್ಯದಲ್ಲಿ ಹೇಳಿ ಮುಗಿಸುತ್ತಿದ್ದರು. "ಅದ್ಯಾಕೆ?" ಎಂದರೆ "ಅದಕ್ಕೆ ಮತ್ತೆ ಅರ್ಥಯಾಕೆ ಹೇಳುವುದು? ಪದ್ಯ ಕೇಳಿಯೇ ಪ್ರೇಕ್ಷಕರು ದುಃಖದ ಭಾವದಲ್ಲಿ ಮುಳುಗಿರುತ್ತಾರೆ" ಅನ್ನುತ್ತಿದ್ದರು. ಅಪ್ಪಯ್ಯನನ್ನು ತುಂಬಾ ಗೌರವಿಸುತ್ತಿದ್ದ, ಹಾಗೂ ಅಪ್ಪಯ್ಯನ ಮೆಚ್ಚಿನ ಕಲಾವಿದರೂ ಆಗಿದ್ದರು. ಆದರೆ ಕೆಲವೊಮ್ಮೆ ರಜೆಹಾಕಿ ಮನೆಗೆ ಹೋದರೆ ನಾಲ್ಕಾರು ದಿನ ಬರುತ್ತಲೇ ಇರಲಿಲ್ಲ.

ಅಪ್ಪಯ್ಯನ ವೃತ್ತಿ ಜೀವನದ ಕೊನೆಯ ಭಾಗವತಿಕೆಯ  ಉಡುಪಿಯ ಜೋಡಾಟದಲ್ಲಿ, ನಮ್ಮ ಅಮೃತೇಶ್ವರಿ ಮೇಳದ ಕರ್ಣಾರ್ಜುನ ಕಾಳಗ ಪ್ರಸಂಗದಲ್ಲಿ, ಗೋಡೆಯವರ ಕರ್ಣನ ಎದುರಿಗೆ, ಮುಲ್ಕಿ ಮೇಳದಲ್ಲಿ ಅವರೇ ಕರ್ಣನ ಪಾತ್ರ ಮಾಡಿದ್ದರು. ಆ ಕಾಲದಲ್ಲಿ ಅವರ ಭರ್ಜರಿ ಆಳ್ತನ ಆ ದೊಡ್ಡ ಮುಂಡಾಸು, ಗತ್ತು, ರೂಪ, ಕರ್ಣನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಜಗನ್ನಾಥ ಶೆಟ್ರು, ಆ ದಿನದ ಜೋಡಾಟದ ತೀವ್ರ ಸ್ಪರ್ಧೆಯ, ತಿಕ್ಕಾಟದಲ್ಲಿ, ಅಮೃತೇಶ್ವರಿ ಮೇಳದವರು ಆಟ ಓಡಿಸಿ, ಓಡಿಸಿ, ಎಳೆದು ಎದುರಿನ ಮೇಳದವರಿಗೆ ಗೊಂದಲವನ್ನು ಉಂಟು ಮಾಡಿದಾಗ, ಅವರ ಮುಲ್ಕಿ ಮೇಳದಲ್ಲಿ ಕರ್ಣನ ಅವಸಾನವೇ ಆಗದೇ ಗಡಿಬಿಡಿಯಲ್ಲಿ ಆ ಪ್ರಸಂಗ ಮುಗಿದು ಮುಂದಿನ ಪ್ರಸಂಗ ಶುರುಮಾಡಿದ್ದು ಯಕ್ಷಗಾನದ ಇತಿಹಾಸದಲ್ಲಿ ಮತ್ತೊಂದು ಅಪೂರ್ವ ಸಂಗತಿ.

ಶನಿವಾರ, ಮೇ 5, 2018

ದಿನೇಶ ಉಪ್ಪೂರ:

*ನನ್ನೊಳಗೆ - 94*

ನನ್ನ ಜೀವನದಲ್ಲಿ ಕಲ್ಲಟ್ಟೆಯ ಮನೆಯಲ್ಲಿದ್ದ ಅವಧಿಯನ್ನು ನಾನು ಎಂದೂ ಮರೆಯಲಾರೆ. ಆಗ ಗಂಟಿಯನ್ನು ಮೇಯಿಸಿಕೊಂಡು ಗುಡ್ಡದಲ್ಲಿ ಅಲೆಯುತ್ತಿದ್ದ ಆ ಕಾಲದಲ್ಲಿ, ಎತ್ತು ದನ ಹೆಂಗರು ಗುಡ್ಡ ಅಂತ ಹತ್ತು ಹನ್ನೆರಡು ಗಂಟಿಗಳು ಹಟ್ಟಿಯಲ್ಲಿ ಇದ್ದವು. ಕೈಲ್ತಿ ಎಂಬ ಒಂದು ದನ ಒಮ್ಮೆ ಒಂದು ಚಂದದ ಕಪ್ಪು ಹೆಣ್ಣು ಕರುವನ್ನು ಹಾಕಿತ್ತು.

ಆಗ ಬೈಲಿನ ಗದ್ದೆಯ ಕಂಟದಲ್ಲಿ ಬೆಳೆದ ಹಸಿಹುಲ್ಲು, ಬೆರಕೆ ಸೊಪ್ಪುಗಳನ್ನು, ಲೆಕ್ಕಾಚಾರದ ಒಣಹುಲ್ಲನ್ನು ಮಾತ್ರ ನಾವು ಹಾಕುತ್ತಿದ್ದು, ರಾತ್ರಿ ಹುಲ್ಲು ಬೇಯಿಸಿ ಮಾಡಿದ ಬಾಯ್ರನ್ನು ಬೆಳಿಗ್ಗೆ ಹಾಕುತ್ತಿದ್ದೆವು. ದಿನಕ್ಕೆ ಒಮ್ಮೆ ಮನೆಯ ಹಿಂದಿನ ಗುಡ್ಡಕ್ಕೋ, ಮಕ್ಕಿಗೋ ಅಟ್ಟಿ ಮೇಯಿಸಿಕೊಂಡು ಬರುತ್ತಿದ್ದುದು ಹಿಂಡಿ ಗಿಂಡಿ ಅಂತ ಪೌಷ್ಟಿಕವಾದ ಯಾವುದೇ ಆಹಾರವನ್ನು ಹಾಕದೇ ಇರುವುದರಿಂದ, ಇರುವ ಗಂಟಿಗಳು ಅಷ್ಟೇನೂ ಮೈತುಂಬಿಕೊಂಡು ಹುಷಾರಾಗಿ ಇರುತ್ತಿರಲಿಲ್ಲ. ಸಣ್ಣಸಣ್ಣಕರುಗಳಂತೂ ಮೈಯ ಕಾಂತಿಯನ್ನು ಕಳೆದುಕೊಂಡು, ಮೂಳೆಯೆಲ್ಲ ಕಾಣುವಷ್ಟು ಬಡಕಲಾಗಿರುತ್ತಿದ್ದವು. 

ಆದ್ದರಿಂದ ನಾನು ಹತ್ತರ ಜೊತೆ ಹನ್ನೊಂದಾಗುವ ಆ ಹೆಂಗರುವನ್ನು ಹಾಗೆಯೇ ಸಾಕುವ ಬದಲು ಯಾರಾದರೂ ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ಸಾಕುವವರಿಗೆ ಕೊಡಬಹುದಲ್ಲ ಎಂದು ಯೋಚಿಸುತ್ತಿದ್ದೆ. ಹಾಲಾಡಿಯ ದಾಸ ಭಟ್ಟರು ಎನ್ನುವ ಅಡುಗೆ ಭಟ್ಟರೊಬ್ಬರಿಗೆ ಮನೆಯಲ್ಲಿ ಕರಾವು ಇರಲಿಲ್ಲ. ಒಂದು ಬತ್ತುಗಂದಿ ದನ ಹಾಗೂ ಅದರ ಒಂದು ಗುಡ್ಡ ಮಾತ್ರಾ ಇತ್ತು. ಆ ಗುಡ್ಡನನ್ನು ಏನು ಮಾಡುವುದು? ಸಾಕುವುದು ಕಷ್ಟ ಎಲ್ಲಾದರೂ ದೇವಸ್ಥಾನದ ಹತ್ತಿರ ಬಿಟ್ಟು ಬಸವನ ಹಾಗೆ ಊರು ತಿರುಗುವ ಹಾಗೆ ಮಾಡುವುದೇ ಸೈ ಎಂದು ಯೋಚಿಸುತ್ತಿದ್ದ ಅವರು, ಒಮ್ಮೆ ನಮ್ಮ ಮನೆಯಲ್ಲಿ ನಡೆಯುವ ರಾಘವೇಂದ್ರ ಆರಾಧನೆಗೆ ಅಡುಗೆ ಮಾಡಲು ಬಂದಿದ್ದರು. ನಾನು ಹೀಗೆ ಮಾತಿಗೆ "ಇಷ್ಟೆಲ್ಲ ಗಂಟಿಗಳು ಇದ್ದರೂ ನಮಗೆ ಎಲ್ಲವನ್ನೂ ಚೆನ್ನಾಗಿ ಸಾಕಲು ಆಗುತ್ತಿಲ್ಲ. ಅದರ ಮೇಲೆ ಈಗ ಒಂದು ಹೆಂಗರು ಬೇರೆ ಹುಟ್ಟಿಕೊಂಡಿದೆ. ಯಾರಾದ್ರೂ ಸಾಕುವವರಿದ್ರೆ ಕೊಡಬಹುದಿತ್ತು ಮಾರಾಯ್ರೆ" ಎಂದೆ.

ಆಗ ಅವರು "ಎಂತ ಹೆಂಗರುವಾ?  ನಿಮಗೆ ಬೇಡದಿದ್ದರೆ ನಮಗೆ ಕೊಡಿ ಮಾರಾಯ್ರೆ ನಿಮ್ಮ ಹೆಸರು ಹೇಳಿ ಸಾಕ್ತೆ. ಬೇಕಾದ್ರೆ ಅದಕ್ಕೆ ಏನು ಅಂತ ಕೊಡುವ" ಎಂದರು. ನಾನು "ಕೊಡುವುದು ಬಿಡುವುದು ಬೇಡ ಮಾರಾಯ್ರೆ. ನಮಗೆ ಈಗ ಹಟ್ಟಿಯಲ್ಲಿರುವ ಗಂಟಿಗಳನ್ನೇ ಚೆನ್ನಾಗಿ ಸಾಕಲು ಆಗುತ್ತಿಲ್ಲ. ನಿಮಗೆ ಬೇಕಾದರೆ ಹೊಡೆದುಕೊಂಡು ಹೋಗಿ" ಎಂದು ಬಿಟ್ಟೆ.

ಅವರು ನನ್ನ ಅಮ್ಮನ ಮುಖ ನೋಡಿದರು. ಅಮ್ಮ ಮಾತಾಡಲಿಲ್ಲ. "ಹೆಂಗರುವನ್ನು ಹಾಗೆ  ಸುಮ್ಮನೇ ದಾನ ಮಾಡುವವರುಂಟೇ?" ಎಂದು ದಾಸ ಭಟ್ಟರು ಮೌನವಾದರು. ನಾನು ಹಟ್ಟಿಗೆ ಹೋಗಿ ಆ ಕರುವಿನ ಕುತ್ತಿಗೆಗೆ ಬಳ್ಳಿ ಹಾಕಿ, ಎಳೆದು ತಂದು, "ನೀವು ಹೊಡೆದುಕೊಂಡು ಹೋಗಿ ಮಾರಾಯ್ರೆ. ನಮಗೆ ನೋಡಬೇಕು ಅನ್ನಿಸಿದರೆ ನಿಮ್ಮ ಮನೆಗೇ ಬಂದು ನೋಡಿಕೊಂಡು ಹೋಗುತ್ತೇವೆ" ಅಂದೆ. ಕೊನೆಗೆ ಅಮ್ಮನೂ ಒಪ್ಪಿದಳು. ಅವರು "ಹಾಗಾದರೆ ಹೀಗೆ ಮಾಡುವ. ನಮ್ಮ ಮನೆಯಲ್ಲಿ ಒಂದು ಗುಡ್ಡ ಇತ್. ಮಾರಾಯ್ರೆ. ನಮಗೆ ಅದನ್ನು ನೋಡಿಕೊಳ್ಳುವುದು ಕಷ್ಟ. ಅದನ್ನು ನೀವು ಕರೆದುಕೊಂಡು ಬನ್ನಿ. ಅಕಾ" ಎಂದರು. ನಾನು "ಹಾಂಗಾರೂ ಅಡ್ಡಿಲ್ಲ. ನಿಮಗೂ ಬರ್ದೇ ಕರುವನ್ನು ತಕೊಂಡುಹೋದೆ ಎನ್ನಿಸದ ಹಾಗೆ ಆಯಿತಲ್ಲ. ನಾನು ಈಗಲೇ ನಿಮ್ಮ ಮನೆಗೆ ಬರುತ್ತೇನೆ. ಹೋಗುವ" ಎಂದೆ. "ಆಯ್ತು" ಎಂದು ಭಟ್ಟರು ನಮ್ಮ ಮನೆಯ ಕರುವನ್ನು ಹೊಡೆದುಕೊಂಡು ಹೊರಟರು. ನಾನೂ ಹಿಂದಿನಿಂದಲೇ ಅವರ ಮನೆಗೆ ಹೋದೆ.

ನಮ್ಮ ಕರುವನ್ನು ಕಟ್ಟಿದ ಹಗ್ಗವನ್ನೇ ಅವರ ಮನೆಯ ಗುಡ್ಡದ ಕುತ್ತಿಗೆಗೆ ಕಟ್ಟಿ, ನಾನು ಅದನ್ನು ಕರೆದುಕೊಂಡು ಬಂದೆ. ಆಗಲೇ ಕತ್ತಲಾಗುತ್ತಾ ಬಂದಿತ್ತು. ನನ್ನ ಜೊತೆಗೆ ಬಂದ ಆ ಗುಡ್ಡ ಮನೆಯಿಂದ ಹೊರಗೆ ಹೋಗಿಯೇ ಇರಲಿಲ್ಲ ಅಂತ ಕಾಣುತ್ತದೆ. ದಾಸ ಭಟ್ಟರ ಮನೆಯು ಹಾಲಾಡಿ ಪೇಟೆಯ ಹತ್ತಿರವೇ, ರಸ್ತೆಯ ಬದಿಯಲ್ಲೇ ಇದ್ದುದರಿಂದ ಹಾಗೂ ಅವರಿಗೆ ಮನೆ ಅಡಿಯ ಜಾಗ ಬಿಟ್ಟರೆ ಬೇರೆ ಗದ್ದೆ ಬಯಲು ಇಲ್ಲದಿರುವುದರಿಂದ, ಹುಲ್ಲು ಹಿಂಡಿ ವಗೈರೆ ದುಡ್ಡುಕೊಟ್ಟೇ ತಂದು ಹಾಕಬೇಕಾಗಿದ್ದು, ಮನೆಯಿಂದ ಹೊರಗೆ ಸ್ವಲ್ಪ ಹೊತ್ತು ಕಟ್ಟಿಹಾಕಿ ಮೇಯಿಸುತ್ತಿದ್ದರೇ ಹೊರತು, ಮತ್ತೆ ಅದು ಹಟ್ಡಿಯಲ್ಲೇ ಇರುತ್ತಿತ್ತು. ನಮ್ಮ ದೊಡ್ಡ ಹಟ್ಟಿಯನ್ನು, ಹತ್ತಾರು ದನಕರುಗಳನ್ನು ನೋಡಿದ ಆ ಕರುವಿಗೆ ಗಾಬರಿಯಾಗಿರಬೇಕು. ಹಗ್ಗದಿಂದ ಅದನ್ನು ಎಳೆದು ಹಟ್ಟಿಗೆ  ಕರೆದುಕೊಂಡು ಹೋದರೆ, ಅದು ಸುತರಾಮ್ ಹಟ್ಟಿಗೆ ಇಳಿಯಲು ಕೇಳಲೇ ಇಲ್ಲ. ಜೊತೆಗೆ "ಅಂಬಾ" ಎನ್ನುವ ಆರ್ತನಾದದ ಕೂಗು ಬೇರೆ.

 ನನಗೂ ಪಾಪ ಅನ್ನಿಸಿತು. "ಹಾಂಗಾರೆ ಇವತ್ತು ಒಳ ಅಂಗಳದಲ್ಲಿ ಕಟ್ಟುವ. ನಾಳೆ ಮತ್ತೆ ಕಂಡ" ಅಂತ ಅಮ್ಮನೂ ಹೇಳಿದ್ದರಿಂದ, ನಮ್ಮ ಒಳ ಅಂಗಳದ ಒಂದು ಬದಿಯಲ್ಲಿ, ಕಿಟಕಿಯ ಕಂಬಕ್ಕೆ ಅದನ್ನು ಕಟ್ಟಿ ಹಾಕಿ, ಒಳಗೆ ಬಂದೆ. ಅಮ್ಮ "ಅದು ಹೆದ್ರ ಕಂಡಿತ್ ಕಾಣತ್ ಮಾಣಿ?" ಎಂದಳು. ನಾನು ರಾತ್ರಿ ಊಟ ಮಾಡಿದ ಮೇಲೆ ಪುನಃ ಟಾರ್ಚು ಹಿಡಿದು, ಹೊರಗೆ ಹೋಗಿ ಅದರ ಎದುರು ಒಂದಷ್ಟು ಒಣಹುಲ್ಲನ್ನು ಹಾಕಿ ಅದರ ಮುಖವನ್ನು ಉಗುರಿನಿಂದ ಸವರಲು ಶುರುಮಾಡಿದೆ. ಅದು ಅಲ್ಲಿಯೇ ಮೂತ್ರ ಮಾಡಿ, ಸೆಗಣಿಯನ್ನೂ ಹಾಕಿಯಾಗಿತ್ತು. ಇರಲಿ ಎಂದು ಅದನ್ನು ಅಲ್ಲಿಯೇ ಬಿಟ್ಟು ಬಂದು ಮಲಗಿಕೊಂಡೆ. ರಾತ್ರಿಯೂ ಅದು ನಾಲ್ಕಾರು ಭಾರಿ ಎಚ್ಚೆತ್ತು "ಅಂಬಾ" ಎಂದು ಕೂಗುತ್ತಿದ್ದುದು ಕೇಳಿದ್ದರೂ, ನಾನು ಹೋಗಲಿಲ್ಲ.

 ಬೆಳಿಗ್ಗೆ ಎದ್ದ ಕೂಡಲೇ ಹೋಗಿ ಆ ಗುಡ್ಡನನ್ನು ನೋಡಿದೆ. ಅದರ ಮೈಯನ್ನು ತಡವರಿಸಿದೆ. ಅದಕ್ಕೊಂದು ಹೆಸರು ಇಡಬೇಕಲ್ಲಾ ಎಂದು ಯೋಚನೆ ಮಾಡುತ್ತಿದ್ದಾಗಲೇ, ಕೆಲಸದ ರಾಮ, ಗಂಟಿಗಳಿಗೆ ಅಕ್ಕಚ್ಚು ಹಾಕಲು ಬಂದವನು "ಇದೆಂತಕೆ ಅಯ್ಯಾ,  ಬೀಜದ ಗುಡ್ಡ. ಎಂದು ಸಸಾರದಿಂದ ಮಾತಾಡಿದ. ನಾನು "ಇರಲಿ ಮಾರಾಯಾ, ಬೀಜಕ್ಕಾದರೆ ಬೀಜಕ್ಕೆ ಹೂಡಲಿಕ್ಕಾದರೆ ಹೂಡಲಿಕ್ಕೆ" ಅಂದೆ. ಅವನು, "ಹಾಂಗಾರೆ ಇನ್ನೊಂದು ಗುಡ್ಡ ತತ್ರ್ಯಾ?" ಎಂದು ನಗೆಯಾಡಿದ. ನಾನು ಉತ್ತರಿಸಲಿಲ್ಲ.

 ಪಾಪದ ಗುಡ್ಡ. ಮುಖ ಮುದ್ದು ಮುದ್ದಾಗಿತ್ತು. ಕೆಂಚು ಬಣ್ಣ. ಕೋಡು ಇನ್ನೂ ಮೂಡಿರಲಿಲ್ಲ. ಆಗಲೇ ಅದರ ಭುಜ ಎತ್ತರವಾಗಿದ್ದು, ಬೆನ್ನಿನ ಮೇಲೆ ದೊಡ್ಡ ಸುಳಿ ಇತ್ತು. ನಾನು ಅದರ ಬೆನ್ನು ಚಪ್ಪರಿಸಿ "ಇದು ನಮ್ಮ ಶಂಭು ಗುಡ್ಡ" ಎಂದೆ. ಅದರ ಹೆಸರು ಶಂಭು ಎಂದೆ ಆಯಿತು.

ಆ ಗುಡ್ಡನನ್ನು ನಾನು ಮರುದಿನವೂ ದೊಡ್ಡ ಹಟ್ಟಿಯಲ್ಲಿ ಬೇರೆ ಗಂಟಿಗಳ ಜೊತೆಗೆ ಕಟ್ಟಲು ಆಗಲಿಲ್ಲ. ನಮ್ಮ ಮನೆಯಲ್ಲಿ ಕರುಗಳನ್ನು ಹಾಕುವುದಕ್ಕಾಗಿಯೇ ಒಂದು ದೊಡ್ಡ ಮರದ ಗೂಡು ಮಾಡಿದ್ದರು. ಮತ್ತೊಂದು ಕರುವಿನ ಜೊತೆಗೆ ಶಂಭುವನ್ನೂ ಅದೇ ಮರದ ಗೂಡಿಗೆ ಹಾಕಿದೆ. ಮರದ ಗೂಡು ಅಂದರೆ ನಾಲ್ಕೂ ಬದಿಯಲ್ಲಿ ಮರದ ಹಲಗೆಯನ್ನು ಕಿಂಡಿಯ ಹಾಗೆ ನಿಲ್ಲಿಸಿದ ಒಂದು ಚೌಕಾಕಾರ ಗೂಡು ಅದು. ಅದರ ಒಂದು ಬದಿಯಲ್ಲಿ ಮಧ್ಯ ಎರಡು ಹಲಗೆಯನ್ನು ಮೇಲಕ್ಕೆ ದೂಡಿ ಹೊರಗೆ ತೆಗೆಯಲು ಬರುತ್ತಿದ್ದು ಗೂಡಿನ ಒಳಗೆ ಕರುಗಳನ್ನು ದೂಡಿ ಹಲಗೆಯನ್ನು ಸಿಕ್ಕಿಸಿದರೆ ಆಯಿತು. ಕರುಗಳು ಅಲ್ಲಿಯೇ ಮಲಗುತ್ತಿದ್ದವು.

ನಾನು ಆ ಶಂಭುವನ್ನು ಬಹಳ ಮುದ್ದಿಸುತ್ತಿದ್ದೆ. ಹೋದಲ್ಲಿ ಬಂದಲ್ಲಿ ಶಂಭೂ ಎಂದು ಕೂಗುತ್ತಿದ್ದೆ. ಅದು ತಲೆ ಎತ್ತಿ ಕಿವಿಯನ್ನು ಮುಂದೆ ಮಾಡಿ ನನ್ನನ್ನು ನೋಡುತ್ತಿತ್ತು. ಅದರ ಮುಖವನ್ನು ನನ್ನ ತಲೆಗೆ ಒತ್ತಿ ಹಿಡಿದು ದೂಡುತ್ತಿದ್ದೆ. ಅದರ ಎದುರು ಗಟ್ಟಿಯಾಗಿ ನಿಂತುಕೊಂಡು ಕಿವಿಯನ್ನು ಹಿಡಿದುಕೊಂಡು ನನ್ನ ಕಾಲುಗಳಮಧ್ಯೆ ಅದರ ಮಂಡೆಯನ್ನು ತಂದು ಅದಕ್ಕೆ ಗುದ್ದಲು ಹೇಳಿ ಕೊಡುತ್ತಿದ್ದೆ. ಅದನ್ನು ಅಂಗಳದಲ್ಲೆಲ್ಲಾ ಓಡಿಸುತ್ತಿದ್ದೆ. ಆ ಕರುವೂ ನನ್ನನ್ನು ತುಂಬಾ ಹಚ್ಚಿಕೊಳ್ಳತೊಡಗಿತು.ಬೆಳಿಗ್ಗೆ ಗುಡ್ಡಕ್ಕೆ ಎಲ್ಲಾ ಗಂಟಿಗಳನ್ನು ಎಬ್ಬಿಕೊಂಡು ಹೋಗುವಾಗ ಅದು ಮಾತ್ರಾ ಆ ಗಂಟಿಗಳ ಜೊತೆಗೆ ಹೆಚ್ಚು ಬೆರೆಯದೇ ನಾನು ಹೋದಲ್ಲಿ ಬಂದಲ್ಲಿ ಬರುತ್ತಿತ್ತು. ನಾನೂ ಅದಕ್ಕೆ ಸೊಪ್ಪುಗಳನ್ನು ನ್ಯಾಗಳ್ ಬೀಳು ಅದೂ ಇದೂ ಕಿತ್ತು ಕಿತ್ತು ಕೊಡುತ್ತಿದ್ದೆ. ಮನೆಗೆ ಬಂದರೆ ಅದು ಎಲ್ಲ ಗಂಟಿಗಳ ಜೊತೆಗೆ ಹಟ್ಟಿಗೆ ಹೋಗದೇ ನನ್ನ ಹಿಂದೆಯೇ ಜಗುಲಿಗೇ ಬರುತ್ತಿತ್ತು. ನಾನು "ಇಲ್ಲಿಗ್ಯಾಕೆ ಬಂದೆ?" ಎಂದು ಅದರ ಮುಖ ಹಿಡಿದು ಮುದ್ದಿಸಿ, ಹಾಗೆಯೇ ಅದರ ಕಿವಿಯನ್ನು ಹಿಡಿದು ದೂಡಿಕೊಂಡೇ ಅದರ ಗೂಡಿನ ತನಕಹೋಗಿ ಬಿಟ್ಟು ಬರುತ್ತಿದ್ದೆ. ನಂತರ ಅದರ ಕುತ್ತಿಗೆಗೆ ಒಂದು ಹುರಿಹಗ್ಗದಿಂದ ನೇಯ್ದು ಮಾಡಿದ ಒಂದು  ಚಂದದ ಗಗ್ಗರವನ್ನು ಕಟ್ಟಿದೆ.

ಒಮ್ಮೆ ವಂಡಾರು ಕಂಬಳಕ್ಕೆ ಅದನ್ನು ಕರೆದುಕೊಂಡು ಹೋಗಲು ಮನಸ್ಸಾಯಿತು. ವಂಡಾರು ಕಂಬಳದ ಗದ್ದೆ ನಮ್ಮ ಮನೆಯಿಂದ ಮೂರು ಮೈಲಿಯ ದೂರದಲ್ಲಿ ಇತ್ತು. ಕಂಬಳದ ಗದ್ದೆಗೆ ಎತ್ತುಗಳನ್ನು ಇಳಿಸಿದರೆ ಒಳ್ಳೆಯದು ಎಂದು ಯಾರೋ ಹೇಳಿದ್ದರು. ಕಂಬಳದ ಗದ್ದೆ ಅಂದರೆ ಅದು ಹತ್ತಾರು ಎಕರೆ ವಿಸ್ತೀರ್ಣದ ದೊಡ್ಡ ಗದ್ದೆ ಅದು ನಮ್ಮ ರೈತರಿಗೆ ಒಂದು ಪವಿತ್ರವಾದ ಸ್ಥಳ. ಮೈಯಲ್ಲಿ ತೊನ್ನು ಆದರೆ, ಗಂಟಿಕರುಗಳಿಗೆ ಒಣಗು ಕಾಯಿಲೆ ಆದರೆ, ಆ ಕಂಬಳ ಗದ್ದೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುತ್ತೇನೆ ಎಂದು ಹರಕೆ ಹೊತ್ತರೆ ಕಾಯಿಲೆ ಗುಣವಾಗುತ್ತದಂತೆ ಅಂತ ಜನ ಹೇಳುತ್ತಿದ್ದರು. ಆ ಕಂಬಳದ ಗದ್ದೆಗೆ ಒಂದು ಸುತ್ತು ಬರಲು ಮೂರ್ನಾಲ್ಕು ಮೈಲಿಯಾದರೂ ನಡೆಯಬೇಕಿತ್ತು. ಆ ಕಂಬಳದ ಗದ್ದೆಯ ಒಂದು ಬದಿಯಲ್ಲಿದ್ದ ಬಾವಿಯಲ್ಲಿ  ಒಂದು ಮೊಸಳೆಯೂ ಇದೆ ಎಂದೂ ಪ್ರತೀತಿ.

ಬಹಳ ಹಿಂದಿನ ಕಾಲದಲ್ಲಿ ಆ ಕಂಬಳ ಗದ್ದೆಯನ್ನು ನಟ್ಟಿ ಮಾಡಲು ಅಲ್ಲಿ ಇರುವ ಒಂದು ದೈವವೇ ಬರುತ್ತಿತ್ತಂತೆ. ರಾತ್ರಿ ಒಂದು ಅಗೆಯನ್ನು ನಟ್ಟರೆ ಸಾಕು ಬೆಳಿಗ್ಗೆ ಬಂದು ನೋಡುವಾಗ ಇಡೀ ಗದ್ದೆಯ ನಟ್ಟಿ ಆಗಿರುತ್ತಿತ್ತಂತೆ. ಒಮ್ಮೆ ಯಾರೋ ಒಬ್ಬ ಪುಂಡ ಆ ದೈವವನ್ನು ಪರಿಶೀಲಿಸಲು ಗದ್ದೆಯ ಒಡೆಯರು ನೆಟ್ಟು ಹೋದ ಅಗೆಯನ್ನು ಅವರು ಹೋದ ನಂತರ ಮೆಲ್ಲಗೇ ಹೋಗಿ ಅದನ್ನು ತಲೆಯಡಿಮಾಡಿ ನೆಟ್ಟುಹೋದನಂತೆ. ಬೆಳಿಗ್ಗೆ ನೋಡುವಾಗ ಇಡೀ ಗದ್ದೆಯಲ್ಲಿ ನಟ್ಟಿಯಾಗಿದ್ದು, ಬೇರು ಮೇಲೆ, ಅಗೆಯ ತುದಿ ಕೆಳಗೆ. ಹೌದೋ ಅಲ್ಲವೋ ಗೊತ್ತಿಲ್ಲ.

ಅಂತಹಾ ಕಾರಣೀಕವಾದ ವಂಡಾರು ಕಂಬಳದ ಗದ್ದೆಗೆ ನನ್ನ ಶಂಭು ವನ್ನು "ಬಾ" ಎಂದ ಕರೆದುಕೊಂಡು ಹೋದೆ. ಅದು ನನ್ನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂಬ ನಂಬಿಕೆಯಿಂದ ಅದರ ಕುತ್ತಿಗೆಗೆ ಹಗ್ಗವನ್ನೂ ಹಾಕಿರಲಿಲ್ಲ. ಅದು ನನ್ನ ಹಿಂದೆಯೇ ಬಂದಿತ್ತು. ಕುತ್ತಿಗೆಗೆ ಕಟ್ಟಿದ ಗಗ್ಗರ ಸದ್ದು ಮಾಡುತ್ತಾ ಇತ್ತು. ಅದು ನನ್ನ ಜೊತೆಗೆ ಕಂಬಳದ ಗದ್ದೆಯವರೆಗೂ ಬಂದು ನನ್ನ ಜೊತೆಗೆ ಗದ್ದೆಯನ್ನೂ ಇಳಿಯಿತು. ಅದರ ಕುತ್ತಿಗೆಯನ್ನು ಹಿಡಿದು ಕೆಸರು ನೀರಿನಲ್ಲಿ ಒಂದೆರಡು ಸಲ ಮುಳುಗಿಸಿದೆ. ಮೈಗೆಲ್ಲ ಕೆಸರನ್ನು ಚೋಕಿದೆ. ಮತ್ತೆ "ಬಾ ಹೋಗುವ" ಎಂದು ಅದರ ಕುತ್ತಿಗೆಯ ಗಗ್ಗರಕ್ಕೆ ಕೈ ಹಾಕಿ ಹೇಳಿದೆ. ಅದು ನನ್ನ ಹಿಂದೆಯೇ ಬಂದಿತು. ಹಾಗೆಯೇ ಮನೆಯವರೆಗೂ ನನ್ನ ಹಿಂದೆಯೇ ಬಂತು.

ನನಗೆ  ಉಡುಪಿಯಲ್ಲಿ ಕೆಲಸ ಸಿಕ್ಕಿದ ನಂತರವೂ ನಾನು ಪ್ರತೀ ವಾರ ಮನೆಗೆ ಹೋಗುತ್ತಿದ್ದೆ. ನನ್ನ ಪ್ರೀತಿಯ ದಾಸು ನಾಯಿಯಂತೆಯೇ ಈ ಶಂಭು ಕೂಡ ನಾನು ಬಂದದ್ದು ಗೊತ್ತಾಗಿ, ಮನೆಗೆ ಬಂದ ನನ್ನ ಸ್ವರ ಕೇಳಿದ ಕೂಡಲೇ ಕಿವಿಯನ್ನು ನಿಗುರಿಸಿ ತಲೆಯನ್ನು ಎತ್ತಿ, "ಹೂಂ,ಹೂಂ" ಎಂದು ಹೂಂಕರಿಸಿ ಕರೆಯುತ್ತಿತ್ತು. ನಾನು ಅದರ ಹತ್ತಿರ ಹೋಗಿ "ಏನಾ ಶಂಭು?" ಎಂದು ನನ್ನ ತಲೆಯನ್ನು ಅದರ ಮುಖಕ್ಕೆ ಒತ್ತಿ, ಹಿಡಿದು ಅಪ್ಪಿ ಮಾತಾಡಿಸಿ ಬರುತ್ತಿದ್ದೆ.

ಆದರೆ ಅಮ್ಮ, ನಮ್ಮ ದೊಡ್ಡಣ್ಣಯ್ಯ ಇರುವ ಚೇರಿಕೆಯ ಮನೆಗೆ ಬಂದು ಇದ್ದುದರಿಂದ ಅವಳನ್ನು ನೋಡಲು ಚೇರಿಕೆಯ ಮನೆಗೆ ಬರುವುದಾಯಿತು. ನಾನು ಕ್ರಮೇಣ ಆ ಶಂಭುವನ್ನು ಮರೆತು ಬಿಟ್ಟೆ. ಶಂಭುವನ್ನು ನೋಡಲು ಹೋಗಲಾಗುತ್ತಿರಲಿಲ್ಲ. ಅದು ನನ್ನನ್ನು ನೆನಪಿಸಿಕೊಂಡು ಎಷ್ಟು ಹಂಬಲಿಸುತ್ತಿತ್ತೋ ನನಗೆ ಗೊತ್ತಾಗಲೇ ಇಲ್ಲ. ನಾನು ನನ್ನ ಹೋರಾಟದ ಬದುಕಿನ ಹಿಂದೆ, ಕೆಲಸದ ಮಧ್ಯೆ ಎಲ್ಲೋ ಕಳೆದು ಹೋಗಿ ಬಿಟ್ಟಿದ್ದೆ.