ಶುಕ್ರವಾರ, ನವೆಂಬರ್ 24, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 65

ನನ್ನ ಜೀವನವೇ ಒಂದು ತರಹದ ಆಕಸ್ಮಿಕ. ನಾನು ಏನು ಆಗಬೇಕು ಅಂದುಕೊಂಡಿದ್ದೆನೋ, ಹಾಗೆ ನನ್ನ ಜೀವನವನ್ನು ಸಾಗಿಸಿಕೊಂಡು ಬರಲಿಲ್ಲ ಅಥವ ಗೊತ್ತು ಗುರಿಯಿಲ್ಲದ ಹಾಯಿದೋಣಿಯಂತೆ ಬದುಕು ಕರೆದತ್ತ ಇಲ್ಲಿಯರೆಗೆ ಸಾಗಿ ಬಂದದ್ದಾಯಿತು. ನನ್ನ ರಕ್ತದಲ್ಲಿಯೇ ಹರಿದು ಬಂದ ಕಲೆ ಯಕ್ಷಗಾನ. ಅದರಲ್ಲಿ ಯಾವುದೋ ಒಂದು ಭಾಗದಲ್ಲಿ, ಹಿಮ್ಮೇಳದಲ್ಲೋ ಮುಮ್ಮೇಳದಲ್ಲೋ ತೊಡಗಿಸಿಕೊಂಡು ಅದನ್ನು ಜಿತಮಾಡಿಕೊಂಡು ಬೆಳೆಯುವ ವಾತಾವರಣ, ವಿಪುಲ ಅವಕಾಶ ಎಲ್ಲವೂ ನನಗಿತ್ತು. ಆದರೆ ಹಾಗೆ ಮಾಡಲಿಲ್ಲ. ಬಾಲ್ಯದಲ್ಲಿ, ಚಿತ್ರಕಲೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದ ಕೃಷ್ಣಮೂರ್ತಿಯಣ್ಣಯ್ಯ, ಕತೆ, ಕವನ ಬರೆದು ಕತೆಗಾರನಾಗಿ ನಮ್ಮ ಮನೆಗೆ ಕತೆ, ಕಾದಂಬರಿ ಪುಸ್ತಕಗಳನ್ನು ತಂದು ತಂದು ಹಾಕಿ, ಅದರಲ್ಲಿ ನನಗೆ ಆಸಕ್ತಿ ಹುಟ್ಟುವಂತೆ ಮಾಡಿದ  ರಮೇಶಣ್ಣಯ್ಯ, ಪ್ರಸಂಗಕರ್ತನಾಗಿ ಸಾಹಿತಿಯಾಗಿ ಡಾಕ್ಟರೇಟ್ ಪಡೆದ, ಸಾಹಿತ್ಯದ ವಿಷಯಗಳು ಬಂದಾಗ ನನ್ನ ಮೈ ಮನಸ್ಸು ತುಂಬಿಕೊಳ್ಳುವಂತೆ ಗಂಟೆಗಟ್ಟಲೆ ವಿವರಣೆ ಕೊಡುತ್ತಿದ್ದ ಶ್ರೀಧರಣ್ಣಯ್ಯ, ಇವರೆಲ್ಲರೂ ಇದ್ದ ಮನೆಯ ವಾತಾವರಣದಲ್ಲಿ ನಾನು ಬೆಳೆದರೂ, ಅದರಲ್ಲೆಲ್ಲಾ ಆಸಕ್ತಿಯನ್ನು ಹೊಂದಿದವನಾದರೂ ಯಾವುದರಲ್ಲೂ ಸಾಧನೆ ಮಾಡಲಿಲ್ಲ. ಪಿ.ಯು.ಸಿ.ಯಲ್ಲಿ ಓದುವಾಗ ಕಲೆ, ಸಾಹಿತ್ಯ ಮುಂತಾದುವುಗಳು ನನ್ನ ಆಸಕ್ತಿಯ ವಿಷಯವಾಗಿದ್ದರೂ, ಅದನ್ನು ಬಿಟ್ಟು ಏಕೋ ವಿಜ್ಞಾನವನ್ನು ಆಯ್ದುಕೊಂಡೆ. ಅದರಲ್ಲೂ ಸಾಧನೆ ಮಾಡದೇ ಓದನ್ನು ಅವಗಣಿಸಿದೆ.

ಅಪ್ಪಯ್ಯನ ಅಗಲಿಕೆಯ ನಂತರ ಬದುಕಿನ ದಿಕ್ಕೇ ಬದಲಾಗಿ, ಮನೆಯಲ್ಲಿ ಇರಲಾಗದೇ ಅವರಿವರನ್ನು ಕಾಡಿ ಬೇಡಿ, ಬಿಲ್ಸ್ ಅಕೌಂಟ್ಸ್ ಗಳೇ ಇರುವ, ಕೆಇಬಿಯಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿಯೂ ಸಾಧಿಸಿ ಮೇಲೇರುವ, ದೊಡ್ಡ ಹುದ್ದೆಗಳಿಸುವ ಅವಕಾಶಕ್ಕೇನೂ ಕೊರತೆಯಿರಲಿಲ್ಲ. ಆದರೆ ನಾನು, “ಅದೆಲ್ಲ ನನಗ್ಯಾಕೆ?” ಎಂದು ಇಲಾಖಾ ಪರೀಕ್ಷೆಗೆ ಕುಳಿತುಕೊಳ್ಳುವುದನ್ನೇ ವಿಳಂಬ ಮಾಡಿ, ತಡವಾಗಿ ಕುಳಿತು ಪಾಸಾದೆ. ಕೊನೆಗೂ ಡೆಪ್ಯುಟಿ ಕಂಟ್ರೋಲರ್ ಆಗಿ ಬೆಳಗಾವಿಯ ಹತ್ತಿರದ ಚಿಕ್ಕೋಡಿ ಎಂಬಲ್ಲಿಗೆ ಪ್ರೊಮೋಶನ್ ಬಂದು ಹೋಗಲು ಅವಕಾಶ ಸಿಕ್ಕರೂ, “ಉಡುಪಿಯನ್ನು ಬಿಟ್ಟು ಅಷ್ಟು ದೂರ ಹೋಗುವುದಿಲ್ಲ” ಎಂದು ಅದನ್ನೂ ಬಿಟ್ಟುಬಿಟ್ಟೆ. ನನ್ನ ಮಗ, ಅನ್ವೇಷ, ನನ್ನಂತೆ ಉದಾಸೀನ ಮಾಡದೇ, ಮೊದಲೇ ಯೋಚಿಸಿ, ಚೆನ್ನಾಗಿಯೇ ಓದಿ, ಪಿಯುಸಿಯಲ್ಲಿ ಶೇಕಡ 96 ರಷ್ಟು ಮಾರ್ಕನ್ನು ಪಡೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಗೆ ಸೇರಿದ. ಓದುತ್ತಿರುವಾಗಲೇ ಕ್ಯಾಂಪಸಿನಲ್ಲಿ ಆಯ್ಕೆಯೂ ಆಗಿ, ಒಂದು ದೊಡ್ಡ ಕಂಪೆನಿಯಲ್ಲಿ (ಒರೇಕಲ್) ಒಳ್ಳೆಯ ಕೆಲಸವನ್ನೂ ಪಡೆದ.

ಅವನ ಬದುಕಿಗೊಂದು ದಾರಿಯಾಯಿತು ಅನ್ನುವಾಗ, ಇನ್ನೂ ಐದು ವರ್ಷ ಸರ್ವೀಸ್ ಬಾಕಿ ಇದ್ದರೂ, “ದುಡಿದದ್ದು ಸಾಕು, ನನ್ನ ಬದುಕು ಇದಲ್ಲ. ನನ್ನ ಆಸಕ್ತಿಗೆ ತಕ್ಕಂತೆ, ಮನಸ್ಸಿಗೆ ಇಷ್ಟವಾಗುವಂತೆ ಇನ್ನುಳಿದ ಬಾಳನ್ನಾದರೂ ಬಾಳಲೇ ಬೇಕು” ಎಂದು ಮನಸ್ಸಿಗೆ ಅನ್ನಿಸಲು ಶುರುವಾಯಿತು. ಕ್ರಮೇಣ ಅದೇ ಗಟ್ಟಿಯಾಗಿ, ಇಷ್ಟರವರೆಗೆ ಮನಸ್ಸಿಗೆ ಹಿತವೋ ಅಹಿತವೋ ಒಟ್ಟಾರೆಯಾಗಿ “ಬದುಕಿಗೆ ಬೇಕು” ಅಂತ ದುಡಿದೆ. ಇನ್ನು ಸಾಕು. ಐದು ವರ್ಷದ ನಂತರ ನನ್ನ ಮನಸ್ಸು, ಆರೋಗ್ಯ ಹೀಗೆಯೇ ಇರುತ್ತದೆಯೋ ಇಲ್ಲವೋ. ನಾಳೆಯನ್ನು ಬಲ್ಲವರಾರು? ಆದ್ದರಿಂದ ಈಗಿನಿಂದಲೇ, ನಿರಾಳವಾಗಿ ಯಾವುದೇ ಒತ್ತಡವಿಲ್ಲದೇ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬದುಕುತ್ತೇನೆ ಎಂದು ನಿರ್ಧರಿಸಿ, ಕೆಲಸದಿಂದ ಸ್ವಯಂ ನಿವೃತ್ತಿಯಾಗಲು ಮನಸ್ಸು ಮಾಡಿದೆ. ಅನ್ನಪೂರ್ಣಳ ಹತ್ತಿರ “ನಿನ್ನ ಅಭಿಪ್ರಾಯ ಏನು?” ಎಂದು ಕೇಳಿದೆ, ಅವಳೂ ಯಾವತ್ತೂ ನನ್ನ ಬದುಕಿನೊಂದಿಗೆ, ಮನಸ್ಸಿನೊಂದಿಗೆ ಹೊಂದಿಕೊಂಡು ಬಾಳಿದವಳು, ನನ್ನನ್ನು ವಿರೋಧಿಸದೇ “ನಿಮಗೆ ತಿಳಿದಂತೆ ಮಾಡಿ. ನನಗೆ ಹೇಗೂ ಆಗಬಹುದು” ಎಂದಳು.

ನಾನು ಸ್ವಯಂ ನಿವೃತ್ತಿಯಾಗಿ ಮನೆಯಲ್ಲೇ ಇರುವ ನಿರ್ಧಾರ ಮಾಡಿಯಾಯಿತು. ಆದರೆ ಸ್ನೇಹಿತರೆಲ್ಲಾ “ನಿಮಗೆ ಹುಚ್ಚಾ? ಇಷ್ಟು ಒಳ್ಳೆಯ ಕೆಲಸ ಬಿಟ್ಟು ಬಿಡುತ್ತೀರಾ? ಎಷ್ಟೋ ಜನ ಏನೂ ಕೆಲಸ ಮಾಡದೇ ಆಫೀಸಿನಲ್ಲಿ ಆರಾಮವಾಗಿ ಇಲ್ಲವೇ? ಮನಸ್ಸು ಸರಿಯಿಲ್ಲದಿದ್ದರೆ ಒಂದಷ್ಟು ದಿನ ರಜೆ ಹಾಕಿ ಮನೆಯಲ್ಲಿ ಇರಿ, ಬೇಕಾದರೆ ಎಲ್ಲದರೂ ಟೂರ್ ಗೆ  ಹೋಗಿ ಬನ್ನಿ” ಎಂದರು. “ಹಣ ಅಧಿಕಾರ ಇರುವವರೆಗೆ ಮಾತ್ರ ಮರ್ಯಾದೆ. ಆಮೇಲೆ ಮೂಸುವವರೂ ಇಲ್ಲ. ಮೂರು ಕಾಸಿನ ಬೆಲೆಕೊಡುವವರೂ ಇಲ್ಲ” ಎಂದರು. “ಒಮ್ಮೆ ನಿವೃತ್ತಿಯಾದರೆ ಸಮಯ ಕಳೆಯುವುದು ಕಷ್ಟ. ಬದುಕು ದುರ್ಭರವಾಗುತ್ತದೆ. ಕಾಯಿಲೆಯೇನೂ ಇಲ್ಲವಲ್ಲ, ನಿವೃತ್ತಿಯವರೆಗೆ, ತಾಕತ್ತು ಇರುವವರೆಗೆ ದುಡಿಯಿರಿ” ಎಂದರು. “ಮಗನಿಗೆ ಕೆಲಸವಾಗಿದೆ, ಬೇರೆ ಮಕ್ಕಳೂ ಇಲ್ಲ. ಕೈತುಂಬಾ ಸಂಬಳ ಬರುತ್ತದೆ. ಆಫೀಸಿನಲ್ಲಿಯೂ ಒಳ್ಳೆಯ ಹೆಸರಿದೆ. ಮನೆಯ ಹತ್ತಿರದಲ್ಲೇ ಆಫೀಸು ಇದೆ. ಆರೋಗ್ಯವೂ ಸರಿ ಇದೆ. ಅಂದ ಮೇಲೆ ನಿಮ್ಮ ಸಮಸ್ಯೆ ಏನು?” ಎಂದು ಕೆಲವರು “ನಿರ್ಧಾರವನ್ನು ಹಿಂತೆಗೆದುಕೊಳ್ಳಿರಿ” ಎಂದು ಒತ್ತಾಯಿಸಿ, ನೋಡಿದರು. ಎಲ್ಲವನ್ನೂ ಎಲ್ಲರ ಮಾತನ್ನೂ ಕೇಳಿದರೂ ನನ್ನ ರಾಗ ಒಂದೆ, “ನನಗೆ ಸರಳವಾಗಿ ಬದುಕಲು ಸಾಧ್ಯವಾಗುವಷ್ಟು ಪೆನ್ಶನ್ ಬರುತ್ತದಲ್ಲ. ಸಾಕು. ನಾನು ಬಯಸಿದಂತೆ ಬಾಳಲು, ನನಗೆ ಇನ್ನೊಂದು ಜನ್ಮ ಕೊಡುವವರಾರು?” ಅಂದೆ.

ನಾನು ನಿರ್ಧಾರ ಬದಲಿಸಲಿಲ್ಲ. ಅಂತೆಯೇ ನನ್ನ ಐವತ್ತೈದನೇ ವಯಸ್ಸಿನಲ್ಲಿ, ನನಗೆ ಸಮಾಜದಲ್ಲಿ ತಲೆಯೆತ್ತಿ ಬಾಳಲು ಬದುಕು ಕೊಟ್ಟ, ಸಂಸಾರವನ್ನು ಸಾಗಿಸಲು ಜೀವನಾಧಾರವಾಗಿದ್ದ, ಮೆಸ್ಕಾಂ ಎಂಬ ಸರಕಾರಿ ಕೆಲಸದಿಂದ ನಿವೃತ್ತನಾಗಿ, ಸ್ವತಂತ್ರನಾದೆ.  ನನಗೆ ಬರೆಯುವ, ಓದುವ, ನಾಟಕ, ಯಕ್ಷಗಾನದ, ಮತ್ತು ಅಲ್ಲಿ ಇಲ್ಲಿ ಪ್ರವಾಸ ಹೋಗಿ ತಿರುಗಾಡುವಂತಹ ಹಲವು ಹವ್ಯಾಸಗಳೂ ಇದ್ದುದರಿಂದ, ಹೇಗಾದರೂ ಕಾಲ ಕಳೆಯಬಹುದು ಎಂದು ನನ್ನ ಎಣಿಕೆ. ಕೆಲವರು ಹೇಳುವಂತೆ “ಹಣವೊಂದಿದ್ದರೆ ಎಲ್ಲವನ್ನೂ ಪಡೆಯಬಹುದು ಎಂಬುದಕ್ಕಿಂತ, ಮನುಷ್ಯನಿಗೆ ಹಣ ಮಾತ್ರ ಮುಖ್ಯವಲ್ಲ, ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯ, ಜೀವನದಲ್ಲಿ ತೃಪ್ತಿ ಇವುಗಳು ಮುಖ್ಯ” ಎಂಬುದು ನನ್ನ ದೃಢನಿಲುವಾಗಿತ್ತು. ನಾಳೆಯ ಮಾತು ಈಗೇಕೆ?

ಮೊದಲಿಗೆ ನಾನು, ಆಫೀಸು, ಮನೆ ಎಂದು, ನನ್ನ ಸ್ವಂತ ಆಸೆ, ಅಭಿರುಚಿಯನ್ನು ಬಿಟ್ಟು ಇದ್ದವನಿಗೆ, ಆಫೀಸಿನ ಜಂಜಾಟದಲ್ಲಿ ಬಿಡುವಿಲ್ಲದೇ ತಲೆಕೆಡಿಸಿಕೊಂಡು ಓಡಾಡಿದವನಿಗೆ, ಒಮ್ಮೆಲೇ ಬಿಡುಗಡೆ ಸಿಕ್ಕಿದಂತಾಯಿತು. ಆದರೆ ಕೆಲಸವಿಲ್ಲದೇ ಕಾಲ ಕಳೆಯಲು ಕಷ್ಟವಾಯಿತು ಎಂದು ಅನ್ನಿಸತೊಡಗಿದಾಗ, ಲೈಬ್ರೆರಿಯ ಮೆಂಬರ್ ಆಗಿ ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.  ಮನೆಯ ಪಕ್ಕದ ನಿವೇಶನದ ಖಾಲಿ ಜಾಗದಲ್ಲಿ, ಒಂದಷ್ಟು ತರಕಾರಿಗಳನ್ನು ನೆಟ್ಟು ಬೆಳೆಸುತ್ತಾ ಅವುಗಳಿಗೆ ನೀರೆರೆದು, ಪೋಷಿಸುತ್ತಾ ಅಲ್ಲಿ ಹೆಚ್ಚು ಕಾಲಕಳೆದೆ. ಶಿರಡಿ, ನಾಸಿಕ್, ದಕ್ಷಿಣ ಭಾರತ ಅಂತ ಒಂದೆರಡು ಕಡೆ ಪ್ರವಾಸವೂ ಆಯಿತು. ಹೀಗೆ ಸ್ವಲ್ಪ ದಿನದಲ್ಲೇ  ಹೊಸ ವಾತಾವರಣಕ್ಕೆ ಹೊಂದಿಕೊಂಡು, ಮನೆಯಲ್ಲಿ ಹೆಂಡತಿಯೊಂದಿಗೆ ಅಲ್ಲಿ ಇಲ್ಲಿ ಮನಸ್ವೀ ಓಡಾಡಿಕೊಂಡು ಇರತೊಡಗಿದೆ.

(ಮುಂದುವರಿಯುವುದು)

ಗುರುವಾರ, ನವೆಂಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 64

ಅಪ್ಪಯ್ಯನ ದಿನಚರಿಯ ಪುಸ್ತಕದಲ್ಲಿ ಅಪ್ಪಯ್ಯ, ಅವರ ಜೀವನ ಚರಿತ್ರೆಯನ್ನು ಒಂದು ಕಡೆಯಲ್ಲಿ ಬರೆದಿಟ್ಟಿದ್ದರು. ಒಮ್ಮೆ ಅದನ್ನು ಓದಿ ನೋಡಿದ ನಾನು, ಅದನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿ, ಪಿಡಿಎಫ್ ಮಾಡಿ ಅಪ್ಪಯ್ಯನ ಫೇಸ್ ಬುಕ್ ನ ಪೇಜಿನಲ್ಲಿ, ಅದರ ಎಟ್ಯಾಚ್ ಮೆಂಟ್ ಕೊಟ್ಟು ಬೇಕಾದವರು ನೋಡಿಕೊಳ್ಳಲಿ ಎಂದು ಅಪ್ಲೋಡ್ ಮಾಡಿದ್ದೆ. ಅದರ ಬಗ್ಗೆ ಒಂದು ಮಾಸಿಕದಲ್ಲಿ ವರದಿಯೂ ಬಂದಿತ್ತು. ನಾಗರಾಜ ಮತ್ತಿಗಾರರು ಅದನ್ನು ನೋಡಿದವರು, “ಅದು ಚೆನ್ನಾಗಿದೆ. ಅದನ್ನು ಪುಸ್ತಕವಾಗಿ ಮಾಡಬಹುದೇ?” ಎಂದು ನನ್ನನ್ನು ಕೇಳಿದರು. ನಾನು, “ಅದೆಲ್ಲ ಸುಮ್ಮನೆ. ಯಾರೂ ಓದುವವರಿಲ್ಲ. ಬರಿದೇ ಖರ್ಚು” ಎಂದೆ. ಅವರು ಬಿಡಲಿಲ್ಲ. “ನಾನೇ ಪುಸ್ತಕ ಮಾಡುತ್ತೇನೆ. ಅನುಮತಿಯನ್ನು ಕೊಡಿ” ಅಂದರು. ನಾನು ಅಣ್ಣಂದಿರಲ್ಲಿ ವಿಷಯ ಪ್ರಾಸ್ತಾಪಿಸಿದೆ. ಎಲ್ಲರೂ “ಅಪ್ಪಯ್ಯನ ನೆನಪು ಮತ್ತೊಮ್ಮೆ ಅಭಿಮಾನಿಗಳಲ್ಲಿ ಮರುಕಳಿಸುತ್ತದೆಯಲ್ಲ. ಮಾಡಲಿ ಅಡ್ಡಿಲ್ಲ, ನಮ್ಮಿಂದಾದ ಸಹಾಯವನ್ನೂ ಮಾಡುವ” ಎಂದು ಒಪ್ಪಿಗೆ ಕೊಟ್ಟರು. ನಾನು ಮತ್ತಿಗಾರರಿಗೆ ಒಪ್ಪಿಗೆಯನ್ನು ತಿಳಿಸಿದೆ.

ಅವರು ಬಹಳ ಮುತುವರ್ಜಿ ವಹಿಸಿ ಅಪ್ಪಯ್ಯನ ಜೀವನ ಚರಿತ್ರೆಯನ್ನು ಪುನಹ, ಅವರ ವಾಕ್ಯದಲ್ಲಿ ಬರೆದು, ಸ್ವತಹ ಡಿಟಿಪಿ ಕೆಲಸವನ್ನು ಮಾಡಿದರು. ಅದರಲ್ಲಿ ನಾನು ಆಗಲೇ ಸಂಗ್ರಹಿಸಿ ಫೇಸ್ ಬುಕ್ಕಿನ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದ, ಹಲವಾರು ಅಪ್ಪಯ್ಯನ ಪೋಟೋಗಳನ್ನು ಅವರು ಬಳಸಿಕೊಂಡರು. ಅದರೊಂದಿಗೆ ಅಪ್ಪಯ್ಯನ ಹಲವಾರು ಶಿಷ್ಯಂದಿರಿಂದ ಲೇಖನವನ್ನೂ ಬರೆಸಿದರು. ಬರೆಯಲು ಅನುಕೂಲವಿಲ್ಲದವರ ಸಂದರ್ಶನ ಮಾಡಿ, ಅವರೇ ಬರೆದು ಅದರಲ್ಲಿ ಅಳವಡಿಸಿದರು. ಆ ಪುಸ್ತಕದಲ್ಲಿ ಸುಬ್ರಮಣ್ಯ ಧಾರೇಶ್ವರ, ಸದಾನಂದ ಐತಾಳರು, ಕೆ.ಜಿ. ರಾಮ ರಾವ್, ಕೊಳಗಿ ಕೇಶವ ಹೆಗಡೆ, ಕೆ.ಪಿ. ಹೆಗಡೆ ಮುಂತಾದವರು, ಅವರ ಮೆಚ್ಚಿನ ಗುರುಗಳಾದ ಅಪ್ಪಯ್ಯನ ಬಗ್ಗೆ ಬರೆದ ಲೇಖನವನ್ನೂ, ಚಿಟ್ಟಾಣಿ ರಾಮಚಂದ್ರ ಹೆಗಡೆ, ನೆಬ್ಬೂರು ನಾರಾಯಣ ಭಾಗವತರನ್ನು ಸಂದರ್ಶನ ಮಾಡಿ, ಅಪ್ಪಯ್ಯನ ಜೊತೆಗಿನ ಅವರ ಅನುಭವಗಳನ್ನೂ ದಾಖಲಿಸಿಕೊಂಡು, ಲೇಖನ ತಯಾರು ಮಾಡಿ ಸೇರಿಸಿದ್ದರು. ಶ್ರೀಧರಣ್ಣಯ್ಯನ ಒಂದು ಲೇಖನವೂ ಸೇರಿತು. ಹೊಸ್ತೋಟ ಭಾಗವತರಿಂದ ಒಂದು ಬೆನ್ನುಡಿಯನ್ನೂ ಬರೆಸಿ ಅಳವಡಿಸಿದರು.

 “ಪ್ರಾಚಾರ್ಯ ಪಥ” ಎಂಬ ಹೆಸರಿನಲ್ಲಿ ಮತ್ತಿಗಾರರು, ಅವರ ತಂದೆ ಸುಬ್ರಾಯ ಹೆಗಡೆಯವರ “ಯಮುನಾ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ, ಅದನ್ನು ಒಂದು ಒಳ್ಳೆಯ ಪುಸ್ತಕವಾಗಿ ಮುದ್ರಿಸಿ ಪ್ರಕಟಿಸಿದರು. ಅದನ್ನು ಬಿಡುಗಡೆ ಮಾಡಲು ನಿಶ್ಚಯಮಾಡಿ, ರಾಜಶೇಖರ ಹೆಬ್ಬಾರರನ್ನು ಮಾತಾಡಿಸಿ, ಹಂಗಾರಕಟ್ಟೆಯ ಭಾಗವತಿಕೆ ಕೇಂದ್ರದಲ್ಲಿ ಬಿಡುಗಡೆಮಾಡಲು ಸಾಧ್ಯವೇ ಎಂದು ಕೇಳಿದೆವು. ಕೂಡಲೇ ಒಪ್ಪಿದ ಅವರು ಬಹಳ ಮುತುವರ್ಜಿ ವಹಿಸಿ, ಆ ಪುಸ್ತಕದ ಬಿಡುಗಡೆಯನ್ನು ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ, ಮಾಡಿದರು. ಬಿಡುಗಡೆಯ ದಿನದಂದು ನೆಬ್ಬೂರರು, ಚಿಟ್ಟಾಣಿಯವರು, ಉದ್ಯಾವರ ಮಾಧವ ಆಚಾರ್ಯರು, ಎಂ. ಎಲ್. ಸಾಮಗರು, ಆನಂದ ಕುಂದರ್, ಎ. ಎಸ್. ಎನ್. ಹೆಬ್ಬಾರರು ಮುಂತಾದವರ ದೊಡ್ಡ ಪರಿವಾರವೇ ನೆರೆದು, ಅಪ್ಪಯ್ಯನನ್ನು ಬಹಳವಾಗಿ ನೆನಪು ಮಾಡಿಕೊಳ್ಳುವಂತೆ ಮಾಡಿದರು. ಅನಂತರ ರಾಜ ಹೆಬ್ಬಾರರು ಮತ್ತು ಬಳಗದವರಿಂದ ಭೀಷ್ಮಪರ್ವ ಎಂಬ ಯಕ್ಷಗಾನವೂ ನೆರವೇರಿತು.

ಮತ್ತೊಮ್ಮೆ ಎಡನೀರು ಮಠದಲ್ಲಿ ಸುಮಾರು ಹಳೆಯ ವಿಸಿಡಿಗಳು ಇವೆ ಎಂದು ಜೋಯಿಸರಿಗೆ ಹೊಸಮೂಲೆ ಗಣೇಶ ಎನ್ನುವವರಿಂದ ಗೊತ್ತಾಯಿತು. ಒಮ್ಮೆ ಅಲ್ಲಿಗೂ ಹೋಗಿ ಸ್ವಾಮಿಯವರನ್ನು ಭೇಟಿಮಾಡಿದೆವು. ಅವರು ಆ ಕ್ಯಾಸೆಟ್ ಗಳಿದ್ದ ರೂಮಿಗೇ, ಅವರ ಒಬ್ಬ ಶಿಷ್ಯನನ್ನು ನಮ್ಮೊಡನೆ ಕಳಿಸಿ ಹೋಗಿ ನೋಡಲು ಹೇಳಿದರು. ಅಲ್ಲಿ ತೆಂಕಿನ ತುಂಬಾ ವಿಡಿಯೋ ಕ್ಯಾಸೆಟ್ ಗಳಿದ್ದವು. ಆದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಕೆಲವು ಮಣ್ಣುಹಿಡಿದು ಹಾಳಾಗಿತ್ತು. ಅದರಲ್ಲೇ ಒಂದಷ್ಟು ಕ್ಯಾಸೆಟ್ ಗಳನ್ನು ಆರಿಸಿಕೊಂಡು ಸ್ವಾಮಿಯವರ ಆಶೀರ್ವಾದವನ್ನು ಪಡೆದು, ಅವರು ಕೊಟ್ಟದ್ದನ್ನು ಒಂದು ಗೋಣಿ ಚೀಲದಲ್ಲಿ ಹಾಕಿಕೊಂಡು ತಂದದ್ದಾಯಿತು.

ನನ್ನ ಹಿರಿಯರ ಆಸ್ತಿಯು, ಚೇರಿಕೆಯಲ್ಲಿ ಮತ್ತು ಕಲ್ಲಟ್ಟೆಯಲ್ಲಿ ಇತ್ತು. ಅಲ್ಲಿಯ ಬೇಸಾಯದಲ್ಲಿ ಹೇಳಿಕೊಳ್ಳುವಂತಹ ಉತ್ಪತ್ತಿಯೇನೂ ಇರಲಿಲ್ಲ. ಮನಸ್ಸು ಕೊಟ್ಟು ಬೆಳೆದರೆ ಊಟಕ್ಕೆ ಸಾಕಾಗುವಷ್ಟು ಇದ್ದರೂ, ಕೆಲಸಕ್ಕೆ ಜನಗಳು ಸಿಕ್ಕದೇ ಬೇಸಾಯ ಮಾಡಿಸುವುದೂ ಕಷ್ಟವಾದ ಪರಿಸ್ಥಿತಿ ಇತ್ತು. ನನಗೆ ಆಗ ಮನೆಯ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದೆ ಇರುವುದರಿಂದ, ನನ್ನ ಪಾಲಿನ ಆಸ್ತಿಯ ಹಕ್ಕಿನ ಪಾಲನ್ನು ಅಲ್ಲಿ ವಾಸವಾಗಿರುವ ಅಣ್ಣಂದಿರಿಗೆ ಬಿಟ್ಟು ಕೊಡಲು ನಿರ್ಧಾರ ಮಾಡಿದೆ. ನನ್ನ ಸ್ನೇಹಿತರಲ್ಲಿ ಈ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿದಾಗ ಹೆಚ್ಚಿನವರು, “ಬೇಡ, ಹಿರಿಯರ ಸೊತ್ತು, ಬೇಡ ಎನ್ನಬಾರದು. ನಿನಗೆ ಬೇಡದಿದ್ದರೆ ಹಾಗೆಯೇ ಬಿದ್ದಿರಲಿ.” ಎಂದು, ಕೆಲವು ಸ್ನೇಹಿತರು, “ಹಿರಿಯರದ್ದು ಪ್ರಸಾದವೆಂದು, ಪಾಲಿಗೆ ಬಂದದ್ದು ಎಂದು ಸ್ವೀಕರಿಸಬೇಕು. ಯಾಕೆ ದುಡುಕುತ್ತೀರಿ?. ಎಲ್ಲ ಬಿಟ್ಟು ಕೊಟ್ಟರೆ ಮುಂದೆ ಎಂತಹ ಕಾಲ ಬರುತ್ತದೆ, ಹೇಳುವುದು ಕಷ್ಟ. ಆಪತ್ಕಾಲದಲ್ಲಿ ಬೇಕಾಗುತ್ತದೆ” ಎಂದು ವ್ಯವಹಾರದ ಮಾತಾಡಿ, ಬುದ್ಧಿ ಹೇಳಿದರು. ಅವರಿಗೆ ನಾನು, “ನನಗೆ ಅದು ಬೇಡ. ನನಗೆ ಅಪ್ಪಯ್ಯ ಕೊಡಿಸಿದ ವಿದ್ಯೆ ಮತ್ತು ಉತ್ತಮ ಸಂಸ್ಕಾರಗಳೇ ಸಾಕು” ಎಂದು ಹೇಳಿದೆ. ಅಲ್ಲದೇ, ನನ್ನ ಜೀವನಕ್ಕೆ ಹೇಗೂ ಒಂದು ದಾರಿಯಾಗಿದೆ. ಆ ಆಸ್ತಿಯ ಹಂಗು ಬೇಡ ಎಂದು ನಿರ್ಧರಿಸಿ, ನಮಗೆ ಹಿರಿಯರು ಬಿಟ್ಟುಹೋದ ಆಸ್ತಿಯನ್ನು ಪಾಲು ಮಾಡಿಕೊಂಡು, ಚೂರು ಚೂರು ಮಾಡುವ ಬದಲು, ಅದನ್ನು ಈಗ ಮಾಡುತ್ತಿದ್ದ ಅಣ್ಣಂದಿರಿಗೆ, ಅದರಲ್ಲಿ ಇತರರ ಹಕ್ಕೂ ಇದೆ ಎನ್ನಿಸಿ “ಪರರದು” ಎನ್ನಿಸುವ ಬದಲು, ಅವರಿಗೇ ಬಿಟ್ಟುಕೊಟ್ಟರೆ, ಅದನ್ನು ಮನಸ್ಸುಕೊಟ್ಟು ಅಭಿವೃದ್ಧಿಪಡಿಸಿ ಇಟ್ಟುಕೊಳ್ಳಬಹುದು ಎಂಬ ಸ್ವಾರ್ಥವೂ ಇತ್ತು.

ನಮ್ಮ ಚೇರಿಕೆಯ ಮೂಲ ಮನೆಯ ಮತ್ತು ಕಲ್ಲಟ್ಟೆಯ ಮನೆಯ ಎರಡು ಅಣ್ಣಂದಿರಿಗೆ ನನ್ನ ಹಕ್ಕಿನ ಪಾಲನ್ನು ರಿಲೀಸ್ ಮಾಡಿ ಕಾನೂನಿನ ಪ್ರಕಾರ ಬಿಟ್ಟು ಕೊಡಲು ನಿರ್ಧರಿಸಿ, ಲಾಯರನ್ನು ಕಂಡು, ಅದರ ವಿಧಿ ವಿಧಾನಗಳ ಬಗ್ಗೆ ವಿಚಾರಿಸಿದೆ. ಅದರಲ್ಲಿ ನಮ್ಮ ಅಕ್ಕ ಮತ್ತು ಅಣ್ಣಂದಿರ ಪಾಲುಗಳೂ, ದೊಡ್ಡಪ್ಪ ಮತ್ತು ಅವರ ಮಕ್ಕಳ ಪಾಲೂ ಇದ್ದು, ನನ್ನ ಒಬ್ಬನ ಇಚ್ಛೆಯಂತೆ ಬಿಟ್ಟುಕೊಟ್ಟರೆ ಅಣ್ಣಂದಿರ ಹೆಸರಿಗೆ ರಿಜಿಸ್ಟರ್ ಆಗುವುದು ಸಾಧ್ಯವಿರಲಿಲ್ಲ. ಆದರೆ ಅದು ನನಗೆ ಸಂಬಂಧಿಸಿದ್ದಲ್ಲ ಎಂದು, ಯಾರ ಹತ್ತಿರವೂ ಚರ್ಚಿಸದೇ, ನಾನು ನನ್ನ ಹಕ್ಕಿನ ಪಾಲನ್ನು ರಿಲೀಸ್ ಪತ್ರಮಾಡಿ ಬರೆದುಕೊಟ್ಟೆ. ನಂತರ ನನ್ನ ಅಣ್ಣಂದಿರೆಲ್ಲರೂ ಅವರವರ ಪಾಲನ್ನೂ, ಮನೆಯಲ್ಲಿ ಬೇಸಾಯವನ್ನೇ ನಂಬಿಕೊಂಡಿದ್ದ ಅಣ್ಣಂದಿರಿಗೇ, ಬಿಟ್ಟುಕೊಟ್ಟದ್ದೂ ಆಯಿತು. ಅಂತೂ ಹಿರಿಯರ ಆಸ್ತಿ ಪಾಲಾಗದೇ ಉಳಿಯುವಂತಾಯಿತು. ವರ್ಷಕ್ಕೊಮ್ಮೆಯೋ, ಎರಡು ಸಲವೊ, ಅಥವ ಹಿರಿಯರ ದಿನಗಳಲ್ಲಿಯೋ, ಹಬ್ಬಕ್ಕೋ ಮತ್ತೊಂದಕ್ಕೋ ನಾವು ಹುಟ್ಟಿ ಬೆಳೆದ, ಓಡಿಯಾಡಿದ, ಆ ಮೂಲ ಮನೆಗೆ ಹೋದರೆ, ಅವರು ನಮ್ಮನ್ನು ಚಂದವಾಗಿ ಕಂಡು ಮಾತಾಡಿಸಿದರೆ, ಆಸ್ತಿಯನ್ನು ಹಾಳು ಮಾಡದೇ ಇಟ್ಟುಕೊಂಡಿದ್ದರೆ, ಅಷ್ಟೇ ಸಾಕು ಎಂದು ನಾನು ಭಾವಿಸಿದೆ.

(ಮುಂದುವರಿಯುವುದು)

ಬುಧವಾರ, ನವೆಂಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 63

ಕೆಲವು ವರ್ಷದ ಹಿಂದೆ ಸಕ್ರಿಯವಾಗಿದ್ದು ಕಾರ್ಯದರ್ಶಿಯಾಗಿಯೂ ನಾನು ಕೆಲಸ ಮಾಡಿದ, ಪುತ್ತೂರು ಬ್ರಾಹ್ಮಣ ಸಂಘದ ಮಹಿಳೆಯರೆಲ್ಲಾ ಸೇರಿಕೊಂಡು ಪ್ರತೀ ವರ್ಷ ಒಂದೆರಡು ಆಟವನ್ನೂ ಹಬ್ಬದ ಸಮಯದಲ್ಲಿ ಮಾಡುತ್ತಿದ್ದು, ಅದರಲ್ಲಿ ಅನ್ನಪೂರ್ಣಳೂ ಒಬ್ಬಳು ವೇಷ ಮಾಡುವ ಕಲಾವಿದೆಯೆ ಎಂದು ಹಿಂದೆಯೇ ಹೇಳಿದ್ದೆ. ಆಗ ಬಡಾನಿಡಿಯೂರಿನ ಕೇಶವ ರಾವ್ ಎನ್ನುವ ಮದ್ದಲೆ ಬಾರಿಸುವವರು, ಅವರಿಗೆ ಟ್ರಯಲ್ ಮಾಡಿಸಿ ಆಟ ಮಾಡಿಸುತ್ತಿದ್ದರು. ಒಮ್ಮೆ ಮಾಯಾಗುಂಡಿ ಆನಂದ ಭಟ್ಟರೆನ್ನುವವರು, ಮಹಿಳಾ ಸಂಘದ ಸದಸ್ಯರಲ್ಲಿ “ನೀವು ಯಾವ ಯಾವುದೆಲ್ಲಾ ಪ್ರಸಂಗ ಮಾಡುವುದಕ್ಕಿಂತ ಪುತ್ತೂರು ಭಗವತೀ ಅಮ್ಮನವರ ಕ್ಷೇತ್ರ ಮಹಾತ್ಮೆಯನ್ನು ಬರೆಸಿ ಆಟ ಮಾಡಬಹುದಲ್ಲ” ಎಂದರಂತೆ. ಎಲ್ಲರಿಗೂ ಅದು ಹೌದು ಎನ್ನಿಸಿ ಅನ್ನಪೂರ್ಣಳ ಮೂಲಕ ಪ್ರಸಂಗ ಬರೆಯುವ ಹೊಣೆಯನ್ನು ನನಗೆ ವಹಿಸಿದರು. ನಾನು ಒಪ್ಪಿಕೊಂಡು, ಅಲ್ಲಿಯ ಸ್ಥಳ ಪುರಾಣವನ್ನು ಸಂಗ್ರಹಿಸಿ ಕತೆಯನ್ನು ಹುಡುಕುತ್ತಿದ್ದಾಗ, ಅಲ್ಲಿಯೇ ಸಮೀಪದಲ್ಲಿ ಮನೆಯಿರುವ ಒಬ್ಬರು, “ಬಹಳ ಹಿಂದೆ ಅಂದರೆ, ಸುಮಾರು ಮುವ್ವತ್ತು ಮುವ್ವತ್ತೈದು ವರ್ಷದ ಕೆಳಗೆ ಇಲ್ಲಿನ ಸ್ಥಳೀಯರು ಒಟ್ಟುಸೇರಿ ಯಕ್ಷಗಾನ ಸಂಘದಲ್ಲಿ ಆ ಪ್ರಸಂಗವನ್ನು ಆಟ ಮಾಡಿದ್ದರು” ಎಂಬ ಮಾಹಿತಿಯನ್ನು ಕೊಟ್ಟರು. ನನ್ನ ಹುಡುಕಾಟ, ಕತೆಯನ್ನು ಬಿಟ್ಟು ಅದನ್ನು ಆಡಿಸಿದವರ, ಪ್ರಸಂಗ ಬರೆದವರ ಹುಡುಕಾಟದತ್ತ ಹೊರಳಿತು.


ದೇವಸ್ಥಾನದ ಆವರಣದಲ್ಲಿಯೇ ಒಂದು ಯಕ್ಷಗಾನ ಸಂಘದ ಕೋಣೆ ಇದ್ದು, ಒಂದು ಯಕ್ಷಗಾನ ಸಂಘವೂ ಅಸ್ತಿತ್ವದಲ್ಲಿ ಇದ್ದು, ಪ್ರತೀ ಶುಕ್ರವಾರ ತಾಳಮದ್ದಲೆ ಹಾಗೂ ವರ್ಷದಲ್ಲಿ ಒಮ್ಮೆ ಅತಿಥಿಕಲಾವಿದರನ್ನು ಸೇರಿಸಿಕೊಂಡು ಅವರು ಆಟವನ್ನೂ ಮಾಡುತ್ತಿದ್ದರು. ಅವರ ಕೋಣೆಯಲ್ಲಿ ನನಗೆ ಬೇಕಾದ ಪ್ರಸಂಗದ ಬಗ್ಗೆ ಏನಾದರೂ ವಿಷಯ ಸಿಕ್ಕಬಹುದೇ? ಎಂದು ವಿಚಾರಿಸಿದೆ. ಅಲ್ಲಿ ಹುಡುಕಿಸಿದಾಗ ಏನೂ ಸಿಗಲಿಲ್ಲ. ಅದೇ ಸಮಯದಲ್ಲಿ ಮಹಿಳಾ ಯಕ್ಷಗಾನ ಸಂಘದಲ್ಲಿ ವೇಷ ಮಾಡುತ್ತಿದ್ದ ಸರೋಜಮ್ಮ ಎನ್ನುವವರು, ಮೊದಲು ಇದೇ ಪರಿಸರದಲ್ಲಿದ್ದು,  ಈಗ  ಅಮೇರಿಕಾದಲ್ಲಿ ನೆಲೆಸಿರುವ ಒಬ್ಬರ ಸಹಾಯದಿಂದ ಮೊದಲು ಪುತ್ತೂರು ಕ್ಷೇತ್ರಮಹಾತ್ಮೆ ಎನ್ನುವ ಪ್ರಸಂಗ ಬರೆದವರು ಬನ್ನಂಜೆಯಲ್ಲಿದ್ದ ಗುರುರಾಜ್ ರಾವ್ ಎನ್ನುವವರು ಎಂಬ ಸಮಾಚಾರವನ್ನು ಕಂಡುಹಿಡಿದರು. ಬ್ರಾಹ್ಮಣ ಸಂಘದ ಹಿರಿಯ ಸದಸ್ಯರಾದ ಪಿ.ಹೆಚ್ ಭಟ್ಟರು, ಆಗ ಯಕ್ಷಗಾನ ಸಂಘದ ಕಾರ್ಯದರ್ಶಿಯವರನ್ನು ಕರೆಸಿ ವಿಚಾರಿಸಿ, ಕೇಳಿದಾಗ, ಅವರು ನೆನಪು ಮಾಡಿಕೊಂಡು, ಬಹಳ ಹಿಂದೆ ಗುರುರಾಜ್ ರಾವ್ ಎನ್ನುವವರೊಬ್ಬರು ಬಹಳ ಆಸಕ್ತಿಯಿಂದ, ಅಲ್ಲಿ ಸಕ್ರಿಯರಾಗಿದ್ದು, ಸಂಘದಲ್ಲಿ ಭಾಗವತಿಕೆಯನ್ನು ಮಾಡಿ, ಪ್ರಸಂಗವನ್ನು ಬರೆದು ಆಡಿಸುತ್ತಿದ್ದರು ಎಂದು ಹೇಳಿದರು. ಕಾರಣಾಂತರದಿಂದ ಅವರು ಪುತ್ತೂರಿಗೆ ಬರುವುದು ನಿಂತು ಹೋಗಿದ್ದು, ಈಗ ಯಕ್ಷಗಾನದಲ್ಲೂ ಅಷ್ಟು ಕಾಣಿಸುತ್ತಿಲ್ಲ, ಮಾತ್ರವಲ್ಲ ಅವರು ಈಗ ಬನ್ನಂಜೆಯಲ್ಲೂ ಇದ್ದಂತೆ ಕಾಣುವುದಿಲ್ಲ ಎಂದರು.

ನಾವು ಆಗ ಎಲ್ಲವನ್ನೂ ಬಿಟ್ಟು, ಗುರುರಾಜರಾವ್ ಎಂಬವರನ್ನು ಪತ್ತೆ ಮಾಡಲು ಶುರುಮಾಡಿದೆವು. ನಾಲ್ಕು ಜನರಲ್ಲಿ ವಿಚಾರಿಸಿಯಾಯಿತು. ಅಂತೂ ಕೊನೆಗೆ ಅವರು ಈಗ ಗುಂಡೀಬೈಲಿನಲ್ಲಿ ಮನೆ ಮಾಡಿ ಮಗನೊಂದಿಗೆ ಇದ್ದಾರೆ ಎಂದು ಪತ್ತೆ ಮಾಡಿ, ಅವರನ್ನು ಕರೆಸಿದ ಪಿ. ಹೆಚ್. ಭಟ್ಟರು, ಅವರಲ್ಲಿ ಕ್ಷೇತ್ರಮಹಾತ್ಮೆ ಪ್ರಸಂಗವನ್ನು ನಮಗೆ ಆಡಲು ಕೊಡಬಹುದೇ? ಎಂದು ಕೇಳಿದರು. ಆಗ ಗುರುರಾಜ ರಾಯರು, ಬಹಳ ವಿನಯದಿಂದ "ನಾನು ಈಗ ಯಕ್ಷಗಾನದ ಎಲ್ಲ ಹವ್ಯಾಸವನ್ನೂ ಬಿಟ್ಟು ಬಿಟ್ಟಿದ್ದೇನೆ. ಆ ಪ್ರಸಂಗ ಬರೆದದ್ದು ಹೌದು. ಆದರೆ ಮೊನ್ನೆ ಯಾವುದೋ ಕಾರಣಕ್ಕೆ ಅಟ್ಟದ ಮೇಲಿದ್ದ ಪೆಟ್ಟಿಗೆಯನ್ನು ಹೊರ ತೆಗೆದಾಗ ಅದು ಸಿಕ್ಕಿ, ಇದರಿಂದ ಇನ್ನು ಉಪಯೋಗ ಇಲ್ಲ ಎಂದು ಹಾಗೆ ಬದಿಗೆ ಸರಿಸಿದ್ದೆ. ಈಗ ನೀವು ಅದನ್ನೇ ಕೇಳಿಬಿಟ್ಟಿರಿ. ನಾಳೆಯೇ ತರುತ್ತೇನೆ” ಎಂದು ಹೊರಟುಹೋದರು. ಗುರುರಾಜ ರಾಯರು, ಮಾರನೇ ದಿನವೇ ಆ ಪ್ರಸಂಗದ ಹಸ್ತಪ್ರತಿಯನ್ನು ತಂದು ಕೊಟ್ಟು, "ನಾನು ಈ ಹವ್ಯಾಸವೆಲ್ಲ ಸುಮ್ಮನೆ, ನಮ್ಮ ಬದುಕಿಗೆ ಅನ್ನ ಕೊಡಲಾರದವುಗಳು  ಎಂದು  ಮರೆತೇಬಿಟ್ಟಿದ್ದೆ. ನಿಮ್ಮಿಂದ ಪುನಹ ಮುವ್ವತ್ತು ನಲವತ್ತು ವರ್ಷ ಹಿಂದೆ ಹೋಗಿ, ನನ್ನ ಗತಕಾಲವನ್ನು ನೆನಪು ಮಾಡಿಕೊಳ್ಳುವಂತಾಯಿತು. ನೀವು ಇದನ್ನು ಆಡುವಂತೆ ಆದರೆ ನನಗೆ ಸಂತೋಷವೇ" ಎಂದರು.

ಗುರುರಾಜ ರಾಯರು ಹೇಳುವಂತೆ, ಮೊದಲು ಆ ಪ್ರಸಂಗದ ಹಲವಾರು ಪ್ರದರ್ಶನ ಆಗಿತ್ತಂತೆ. ಇಡೀ ರಾತ್ರಿಯ ಆಟ. ಒಮ್ಮೆ ತರಬೇತಿಯ ಸಮಯದಲ್ಲಿ ಆ ಪ್ರಸಂಗದಲ್ಲಿ ಬರುವ ಒಂದು ದೇವಿಯ “ಕನ್ನಿಕೆ” ಯೆಂಬ ಸಣ್ಣ ಪಾತ್ರಕ್ಕೆ ಹುಡುಗರು ಸಿಕ್ಕದೆಯಿದ್ದುದರಿಂದ, ಕೊನೆಗೆ ಕುಣಿತವೂ ಗೊತ್ತಿಲ್ಲದ ಒಬ್ಬ ಸಣ್ಣ ಹುಡುಗನಿಗೆ ಒತ್ತಾಯಿಸಿ, ಅವನಿಂದ ಆ ಪಾತ್ರ ಮಾಡಿಸಬೇಕಾಯಿತಂತೆ. ಆಗ ಆ ಹುಡುಗನ ಮೈಯಲ್ಲಿ ಇದ್ದ ತೊನ್ನು ರೋಗ ಆಟದ ಮರುದಿನ ನೋಡಿದಾಗ ಗುರುತೂ ಸಿಕ್ಕದಂತೆ ಮಾಯವಾಗಿ ಹೋಯಿತಂತೆ. ಅವರು ಅದನ್ನು ನೆನಪಿಸಿಕೊಂಡು ಈ ಪುತ್ತೂರಮ್ಮ ದೇವಿಯು ಬಹಳ ಕಾರಣಿಕಳು ಎಂದು ಸ್ಮರಿಸಿಕೊಂಡು, “ನಾವು ಆಗ ಎಷ್ಟೆಲ್ಲಾ ಕಷ್ಟಪಟ್ಟು ಹಗಲಿರುಳೂ ತೊಡಗಿಸಿಕೊಂಡು ಆಟ ಮಾಡಿದೆವು. ಆದರೆ ಈಗ ಅದೆಲ್ಲ ಯಾರಿಗೂ ಬೇಡವಾಗಿದೆ. ನನ್ನ ಎಲ್ಲ ಪ್ರಸಂಗ ಪುಸ್ತಕಗಳು ಆಸಕ್ತಿಗಳು, ಜೀವನದ ಉದ್ಯೋಗ, ಸಂಸಾರದ ಹೋರಾಟ ಮತ್ತು ಕಾಲದ ಮಹಿಮೆಯಿಂದ ಮನೆಯ ಅಟ್ಟವನ್ನು ಸೇರಿದ್ದು, ನೀವು ಅದನ್ನು ಉಪಯೋಗಿಸಿಕೊಳ್ಳುತ್ತೀರಿ ಅಂತಾದರೆ ಅದು ದೈವೇಚ್ಛೆ ಮತ್ತು ಅದೇ ನನ್ನ ಭಾಗ್ಯವೆಂದು ತಿಳಿಯುತ್ತೇನೆ” ಎಂದರು.

ಪುತ್ತೂರು ಕ್ಷೇತ್ರ ಮಹಾತ್ಮೆಯ ಪ್ರಸಂಗದ ಹಸ್ತಪ್ರತಿಯು ಹೀಗೆ ನನಗೆ ಸಿಕ್ಕಿದಂತಾಯಿತು. ಅದರಲ್ಲಿ ಸುಮಾರು ಇನ್ನೂರ ಎಪ್ಪತ್ತಾರು ಪದ್ಯಗಳಿದ್ದು ಆಗಿನ ಕಾಲದಲ್ಲಿ ಇಡೀ ರಾತ್ರಿ ಆಡುವಷ್ಟಿತ್ತು. ನಾನು ಅದರಲ್ಲಿ ನಮ್ಮ ಬ್ರಾಹ್ಮಣ ಸಂಘದ ಮಹಿಳಾ ತಂಡಕ್ಕೆ ಬೇಕಾಗಿ ಒಂದು, ಐವತ್ತು ಅರವತ್ತು ಪದ್ಯಕ್ಕೆ ಇಳಿಸಿ ಎರಡೂವರೆ ಗಂಟೆಯ ಆಟವನ್ನು ಮಾಡಲು ಸಿದ್ಧಮಾಡಬೇಕಾಗಿತ್ತು. ಕೆಲವು ದೃಶ್ಯಗಳನ್ನು ಕಡಿತಗೊಳಿಸಿ, ಮತ್ತೆ ಕೆಲವು ಪದ್ಯಗಳನ್ನು ಬದಲಾಯಿಸಬೇಕಾಯಿತು. ಅದಕ್ಕೆ ಗುರುರಾಜರ ಅನುಮತಿ ಕೇಳಿದೆ. ಆಗ ಅವರು “ನಿಮ್ಮ ಅಪ್ಪಯ್ಯ ನಮಗೆ ದೇವರ ಸಮಾನ. ಆದಿ ಉಡುಪಿಯಲ್ಲಿ ಆಟವಾದಾಗ ಕೆಲವೊಮ್ಮೆ ನಮ್ಮ ಅಪ್ಪಯ್ಯನ ಸ್ನೇಹದಿಂದ, ಉಪ್ಪೂರರು ನಮ್ಮ ಮನೆಗೂ ಬಂದು ಹಗಲು ಇದ್ದು ಸಂಜೆ ಹೋಗುತ್ತಿದ್ದರು. ಆಗೆಲ್ಲ ನಮಗೆ ಅವರ ಮುಂದೆ ಸುಳಿದಾಡುವುದೆಂದರೆ ಒಂದು ರೀತಿಯ ಸಂಭ್ರಮ. ಪೂಜ್ಯ ಭಾವ. ಅಂತಹ ಪುಣ್ಯಾತ್ಮರ ಮಗ ನೀವು. ನೀವು ಏನು ಬದಲಾಯಿಸಿದರೂ ನನ್ನ ಒಪ್ಪಿಗೆ ಇದೆ” ಎಂದು ಅನುಮತಿಯನ್ನು ಕೊಟ್ಟ ಪ್ರಕಾರ ಅವರ ಪ್ರಸಂಗವನ್ನು ಪರಿಷ್ಕರಿಸಿ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದೆ.

ಆಗ ಮಹಿಳಾ ತಂಡದ ಆಟವನ್ನು ನಿರ್ದೇಶಿಸುತ್ತಿದ್ದ ಕೇಶವರಾವ್ ರಿಗೆ ಅದನ್ನು ಕೊಟ್ಟು ಅರ್ಥವನ್ನು ಬರೆಯಲು ತಿಳಿಸಿದೆ. ಅವರು ಸ್ವಲ್ಪ ದಿನದಲ್ಲಿಯೇ ಅರ್ಥವನ್ನು ಬರೆದು ಕೊಟ್ಟರು. ಅಂತೂ ಪ್ರಸಂಗದ ಸ್ಕ್ರಿಪ್ಟ್ ಸಿದ್ಧವಾಗಿ ಟ್ರಯಲ್ ಶುರುವಾಯಿತು. ಪುತ್ತೂರು ವಾರ್ಷಿಕ ಜಾತ್ರೆಯ ಸಮಯದಲ್ಲಿ ಆಟ ಆಡಲು ನಿರ್ಧರಿಸಿದೆವು. ಅಂದು ನಾನು ಆ ಪ್ರಸಂಗವನ್ನು ಒಂದು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಆಲೋಚಿಸಿದೆ. ನನ್ನ ಸ್ನೇಹಿತರಾದ ಸುಬ್ರಾಯರಿಗೆ ಹೇಳಿ, ಅವರ ಸೂರ್ಯ ಆಪ್ ಸೆಟ್ ಪ್ರಿಂಟರ್ಸ್ ಎಂಬ  ಪ್ರೆಸ್ಸಿನಲ್ಲಿ ಪುಸ್ತಕವನ್ನು ಮಾಡಿಸಿದೆ. ಜಾತ್ರೆಯ ದಿನ ಊರವರ ಸಮಕ್ಷಮದಲ್ಲಿ ಅದರ ಬಿಡುಗಡೆಯೂ ಆಗಿ, ಆ ಪ್ರಸಂಗವನ್ನು ಬರೆದ ಗುರುರಾಜ ರಾವ್ ರವರನ್ನು ದೇವಸ್ಥಾನದ ಮುಕ್ತೇಸರರಾದ ರಾಮ ಭಟ್ಟರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಿದೆವು.

(ಮುಂದುವರಿಯುವುದು)

ಮಂಗಳವಾರ, ನವೆಂಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 62

ಸುಮಾರು ಅದೇ ಸಮಯದಲ್ಲಿ ಅಪ್ಪಯ್ಯ ಬರೆದ ಪ್ರಸಂಗ “ಸತ್ಯಂ ವದ ಧರ್ಮಂ ಚರ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಿಂಟ್ ಮಾಡುವ ಉದ್ದೇಶವಿಲ್ಲದಿದ್ದರೂ, ಒಮ್ಮೆ ಪಿಡಿಎಫ್ ಮಾಡಿಯಾದರೂ ಇಟ್ಟುಕೊಳ್ಳಬೇಕು ಎನ್ನಿಸಿತು. ಆಗಲೇ ಅಪ್ಪಯ್ಯನ ಕೈಬರಹದಲ್ಲಿರುವ ಆ ಪ್ರಸಂಗದ ಹಸ್ತ ಪ್ರತಿಯನ್ನು ನೋಡಿ, ಮುಂಬೈಯ ಪದವೀಧರ ಯಕ್ಷಗಾನ ಸಮಿತಿಯವರು ಬೇರೆ ಹಲವಾರು ಪ್ರಸಂಗಗಳ ಜೊತೆಗೆ, ಅದನ್ನೂ ಮುದ್ರಣ ಮಾಡಿದ್ದರು. ಆದರೆ ಅವರು ಅಪ್ಪಯ್ಯನು ರಂಗಕ್ಕೆ ಬೇಕಾಗುವಂತೆ ಮಧ್ಯ ಮಧ್ಯ ಕೆಲವು ಪದ್ಯಗಳನ್ನೂ, ನೋಟ್ ನಂತೆ ಬರೆದು ಇಟ್ಟಿದ್ದು, ಅದನ್ನೂ ಸೇರಿಸಿ ಅವಸರದಲ್ಲಿ ಮುದ್ರಿಸಿದ್ದುದರಿಂದ, ಅದರಲ್ಲಿ ಹಲವಾರು ದೋಷಗಳು ಇದ್ದಿತ್ತು. ನನ್ನ ಹತ್ತಿರ ಬೇರೆ ಪ್ರತಿಗಳು ಇರಲಿಲ್ಲ.

 ಒಮ್ಮೆ ಸುಬ್ರಮಣ್ಯ ಧಾರೇಶ್ವರರು  ಸಿಕ್ಕಾಗ “ನಿಮ್ಮಲ್ಲಿ ಆ ಪ್ರಸಂಗ ಇದ್ದರೆ ಒಮ್ಮೆ ಕೊಡಬಹುದೇ?” ಎಂದು ಕೇಳಿದೆ. ಆ ಪ್ರಸಂಗವನ್ನು ಅಪ್ಪಯ್ಯ ಶ್ರೀಧರಣ್ಣಯ್ಯನ ಸಹಾಯದಿಂದಲೇ ಬರೆದದ್ದಾಗಿದ್ದು, ಶ್ರೀಧರಣ್ಣಯ್ಯನ ಕೈಬರಹದ ಒಂದು ಪ್ರತಿಯನ್ನು ಧಾರೇಶ್ವರರು ಜೋಪಾನವಾಗಿ ಇಟ್ಟುಕೊಂಡಿದ್ದರು, ನಾನು ಕೇಳಿದ ಕೂಡಲೇ ಅದನ್ನು ಹುಡುಕಿ ಕಳುಹಿಸಿಕೊಟ್ಟರು. ನಾನು ಅದನ್ನು ಕಂಪ್ಯೂಟರ್ ಲ್ಲಿ ಟೈಪ್ ಮಾಡಿದೆ. ಹಲವಾರು ಪದ್ಯಗಳನ್ನು ಪುನರ್ರಚಿಸಬೇಕಾಯಿತು. ಪದ್ಯಗಳು ಹೆಚ್ಚಾಯಿತು ಅನ್ನಿಸಿ, ಒಂದೆರಡು ದೃಶ್ಯಗಳನ್ನು ತೆಗೆದು, ಸರಿ ಮಾಡಿ ಕೊಡಲು ಶ್ರೀಧರಣ್ಣಯ್ಯನಿಗೆ ಕೊಟ್ಟೆ. ಅವನೂ ಕೆಲವೊಂದು ತಿದ್ದುಪಡಿ ಮಾಡಿ ಪರಿಷ್ಕರಿಸಿದ ಮೇಲೆ, ಅದನ್ನು ಪಿಡಿಎಫ್ ಮಾಡಿ ಯಾರಾದರೂ ನೋಡಿ ಓದುವುದಾದರೆ ಓದಿಕೊಳ್ಳಲಿ ಎಂದು ಅಪ್ಪಯ್ಯನ ಫೇಸ್ ಬುಕ್ ನ ಪೇಜಿಗೆ ಎಟ್ಯಾಚ್ ಮಾಡಿ ಹಾಕಿಬಿಟ್ಟೆ.

ಹೊಸದಾಗಿ ಪ್ರಾರಂಭವಾದ ಕುಂದಾಪುರ ವಿಭಾಗಕ್ಕೆ 2011 ರ ಫೆಬ್ರವರಿಯಲ್ಲಿ ನಾನು ವರ್ಗವಾಗಿ ಬಂದಾಗ ಅಲ್ಲಿ ನನ್ನ ಬಹುಕಾಲದ ಸ್ನೇಹಿತರೂ ಆದ  ಜಗದೀಶ ರಾವ್  ಎನ್ನುವವರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಆಫೀಸಿನಲ್ಲಿ ಲೆಕ್ಕವಿಭಾಗದಲ್ಲಿ ಕೆಲಸ ಮಾಡಿಸುವ ಬಾಸ್ ಆದರೆ, ನಾನು ಅವರ ಕೆಲಸಗಳನ್ನು ಆಡಿಟ್ ಮಾಡುವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ನಮ್ಮಲ್ಲಿ, ಸಾಮಾನ್ಯವಾಗಿ ಆಡಿಟ್ ನವರು ಎಂದರೆ ‘ಎಲ್ಲದರಲ್ಲೂ ತಪ್ಪು ಕಂಡು ಹಿಡಿದು, ಇಕ್ಕಟ್ಟಿಗೆ ಸಿಲುಕಿಸಿ ಚಂದ ನೋಡುವವರು’ ಅಂತ ಇತ್ತು. ಯಾಕೆಂದರೆ ಅವರು ತಪ್ಪನ್ನು ಹುಡುಕಿ ದೊಡ್ಡದು ಮಾಡಿ ಹೇಳುತ್ತಾರೆಯೇ ಹೊರತು, ಅದನ್ನು ಸರಿಮಾಡುವುದು ಹೇಗೆ? ಎಂದು ಹೇಳುವುದಿಲ್ಲ. ಆದರೆ ನಾನು ಜಗದೀಶರ ಜೊತೆಗೆ ಸೇರಿ, ಅವರು ಕೆಲಸ ಮಾಡುವಾಗಲೇ, ಅದನ್ನು ಪರಿಶೀಲಿಸಿ ತಪ್ಪಿದ್ದರೆ ಅಲ್ಲಿಯೇ ಸರಿಪಡಿಸಿ ಆದಷ್ಟು ನ್ಯೂನತೆಗಳಾಗದಂತೆ ನೋಡಿ ಎಚ್ಚರ ವಹಿಸುತ್ತಿದ್ದೆ.

ಹಾಗಾಗಿ ನಮ್ಮಲ್ಲಿ ಸಮಸ್ಯೆಗಳು ಎಲ್ಲ  ಕಛೇರಿಗಳಿಗಿಂತ ಕನಿಷ್ಟ ಮಟ್ಟದಲ್ಲಿ ಇದ್ದು, ಆಗಾಗ ನಡೆಯುವ ಮೀಟಿಂಗ್ ಗಳಲ್ಲಿ ಮೇಲಧಿಕಾರಿಗಳು, “ನಿಮ್ಮಿಬ್ಬರದೂ ಮ್ಯಾಚ್ ಪಿಕ್ಸಿಂಗೋ?” ಎಂದು ತಮಾಷೆಗೆ ಹೇಳುವವರೆಗೂ ಹೋಯಿತು. ಆಗ ನಮಗೆ ವಿಭಾಗಾಧಿಕಾರಿಗಳಾಗಿದ್ದ ಮಹದೇವಪ್ಪ ಎನ್ನುವವರೂ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಗಳಾಗಿದ್ದು, ನಮಗೆ ತುಂಬಾ ಸಪೊರ್ಟ್ ಮಾಡುತ್ತಿದ್ದರು. ಅವರಿಗೂ ನಮ್ಮ ಕೆಲಸ, ಗುಣಸ್ವಭಾವಗಳ ಮೇಲೆ ತೃಪ್ತಿಯಾಗಿ “ನೀವಿಬ್ಬರು ಅಧಿಕಾರಿಗಳು ನನ್ನ ಎರಡು ಭುಜಗಳು” ಎನ್ನುತ್ತಿದ್ದರು. ಆಗ ನಮ್ಮ ಕುಂದಾಪುರ ವಿಭಾಗಕ್ಕೆ ಉತ್ತಮವಾದ ಆಫೀಸು ಎಂದು ಪ್ರಶಸ್ತಿಗಳು ಬಂದಿದ್ದವು. ಒಂದು ವರ್ಷದಲ್ಲಿಯೇ ನನಗೂ ಜಗದೀಶರಿಗೂ ಕೆಲಸದಲ್ಲಿ ಅದಲುಬದಲು ಆಗಿ ಆದೇಶವಾಯಿತು. ನನಗೆ ಅಲ್ಲಿಯ ಲೆಕ್ಕಪತ್ರಗಳ ಎಲ್ಲ ವ್ಯವಹಾರಗಳೂ ತಿಳಿದಿದ್ದರಿಂದ ಅದರಿಂದ ಅಂತಹ ವ್ಯತ್ಯಾಸವೇನೂ ಆಗಲಿಲ್ಲ. 2016 ರ ಅಂತ್ಯದಲ್ಲಿ ನನಗೆ ನನ್ನ ಊರಾದ ಉಡುಪಿಗೆ ವರ್ಗವಾಯಿತು.

2014 ರಲ್ಲಿ ಮತ್ತೊಮ್ಮೆ ಅಪ್ಪಯ್ಯನ ಮುವ್ವತ್ತನೇ ವರ್ಷದ ಪುಣ್ಯ ತಿಥಿಯನ್ನು ವಿಶೇಷವಾಗಿ ಆಚರಿಸಬೇಕೆಂದು ಮನಸ್ಸಾಯಿತು. ಆಗ ಎರಡು ದಿನದ ಕಾರ್ಯಕ್ರಮವನ್ನು ನಮ್ಮ ಅಂಬಾಗಿಲಿನ ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಪೆಂಡಾಲ್ ಹಾಕಿ ಮಾಡಿದ್ದೆವು. ಮೊದಲ ದಿನ ಅಪ್ಪಯ್ಯನ ಶ್ರಾದ್ಧವಿಧಿಗಳನ್ನು ಪೂರೈಸಿದ ನಂತರ, ಮಧ್ಯಾಹ್ನ ಊಟದ ನಂತರ ನೆಬ್ಬೂರು ನಾರಾಯಣ ಭಾಗವತರನ್ನು ಕರೆಸಬೇಕೆಂದು ನಿರ್ಣಯಿಸಿ ನಮ್ಮ ಕೊಲ್ಲೂರು ಜೋಯಿಸರಿಗೆ ಹೇಳಿದೆ. ಅವರು ಕೊಲ್ಲೂರಿನ ನರಸಿಂಹ ಭಟ್ಟರ ಮೂಲಕ ನೆಬ್ಬೂರರನ್ನು ಮಾತಾಡಿಸಿ ಒಪ್ಪಿಸಿದರು. ನನ್ನ ಸ್ನೇಹಿತರಾದ ಹೆಗ್ಗರಣೆ ಕೇಶವ ನಾಯ್ಕರು ನೆಬ್ಬೂರರನ್ನು ಕರೆದುಕೊಂಡು ಬರುವ ಹೊಣೆ ಹೊತ್ತುಕೊಂಡರು. ನೆಬ್ಬೂರರು ಮಧ್ಯಾಹ್ನದಿಂದ ಸಂಜೆಯವರೆಗೂ ಅವರ ಇಷ್ಟದ ಅನೇಕ ಪದ್ಯಗಳನ್ನು ಹಾಡಿದರು. ಮದ್ದಲೆವಾದನಕ್ಕೆ ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ ಇದ್ದರು.

ನಂತರ ಅವರ ಜೊತೆಗೆ ಸಾಲಿಗ್ರಾಮ ಮಕ್ಕಳ ಮೇಳದ ಭಾಗವತರಾದ ಹೆಚ್. ಶ್ರೀಧರ ಹಂದೆಯವರೂ, ಅವರ ಮಗ ಸುಜಿಯೀಂದ್ರ ಹಂದೆಯೂ ಸೇರಿಕೊಂಡು ಹಾಡಿದರು. ಅಂದು ಒಟ್ಟಿಗೇ ಹಾಡಿದ ಬಬ್ರುವಾಹನ ಕಾಳಗದ, ಕೃಷ್ಣಾರ್ಜುನ ಕಾಳಗದ ಪದ್ಯಗಳು ಅನ್ಯಾದೃಶವಾಗಿ ಮೂಡಿಬಂದು ಕೇಳಿದ ನಮಗೆಲ್ಲ ಅತ್ಯಂತ ಆನಂದವಾಯಿತು. ಸಂಜೆ ನೆಬ್ಬೂರರವರನ್ನು ಹಣ್ಣುತುಂಬಿದ ಹರಿವಾಣ, ಶಾಲು ಕಾಣಿಕೆಗಳನ್ನು ಸಮರ್ಪಿಸಿ ಸನ್ಮಾನವನ್ನು ಮಾಡಿದೆವು. ಮನೆಯವರೇ  ಸುಮಾರು ಅರವತ್ತು ಎಪ್ಪತ್ತು ಜನ ಒಟ್ಟಿಗೇ ಅಂದು ಭಾಗವಹಿಸಿದ್ದು, ನಂತರ ನೆಬ್ಬೂರರು ಆತ್ಮೀಯವಾಗಿ ಮಾತನಾಡಿ, “ಉಪ್ಪೂರರು ನನಗೆ ನೇರ ಗುರುಗಳಲ್ಲದಿದ್ದರೂ, ಸುಮಾರು ಎರಡು ವರ್ಷ ಇಡಗುಂಜಿ ಮೇಳದಲ್ಲಿ ಅವರು ಭಾಗವತಿಕೆ ಮಾಡುತ್ತಿದ್ದ ವರ್ಷ ಅವರಿಗೆ ಸಂಗೀತಗಾರನಾಗಿದ್ದು ಸಂಗೀತ ಮಾಡಿದ ನಂತರ, ಇಡೀ ರಾತ್ರಿ ಹಾರ್ಮೋನಿಯಂ ಬಾರಿಸುತ್ತಿದ್ದೆ. ಹಾಗಾಗಿ ನನ್ನ ಪದ್ಯಗಳಲ್ಲಿ, ಆಟದ ನಡೆಯಲ್ಲಿ ಉಪ್ಪೂರರ ಛಾಯೆ ಗಾಢವಾಗಿದ್ದು ತಾನೂ ಉಪ್ಪೂರರ ಶಿಷ್ಯನೇ” ಎಂದು ಹೃದಯ ತುಂಬಿ ಮಾತನಾಡಿದರು.

ರಾತ್ರಿ ನಮ್ಮ ಮನೆಯಲ್ಲಿ, ನಮ್ಮ ಹತ್ತಿರ ಸಂಬಂಧಿಕರೇ ಸುಮಾರು ಎಪ್ಪತ್ತು ಎಪ್ಪತೈದು ಜನ ಸೇರಿದ್ದು ಅದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು ನಮ್ಮ ನಮ್ಮ ಸುಖಕಷ್ಟಗಳನ್ನು ಹಂಚಿಕೊಂಡು ಊಟ ಮಾಡಿ ಮಲಗಿದೆವು. ಬೆಳಿಗ್ಗೆ ಆರು ಗಂಟೆಗೇ ಎಲ್ಲರೂ ಸಿದ್ಧರಿರಬೇಕು ಎಂದು ಎಚ್ಚರಿಸಿದ್ದರಿಂದ. ಮತ್ತೆ ಬೆಳಿಗ್ಗೆ ಎಲ್ಲರೂ ಬಂದು ಸಿದ್ಧರಾದೆವು. ನನ್ನ ಅಕ್ಕನ ಮಗಳು ವೀಣ, ಯೋಗ ಟೀಚರ್ ಆಗಿ ಬೆಂಗಳೂರಿನಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದವಳು, ಸುಮಾರು ಒಂದು ಗಂಟೆಯಲ್ಲಿ ಹಲವಾರು ಆಸನ ಪ್ರಾಣಾಯಾಮಗಳನ್ನು ಮಾಡಿತೋರಿಸಿ, ನಂತರ ನಮಗೆಲ್ಲಾ ಕೆಲವು ಯೋಗಾಸನ ಪ್ರಾಣಾಯಾಮಗಳನ್ನು ಹೇಳಿಕೊಟ್ಟು ಮಾಡಿಸಿದಳು. ನಂತರ ಕಾಫಿ ತಿಂಡಿಯಾಯಿತು. ಅದು ಮುಗಿದ ಕೂಡಲೇ ಕೃಷ್ಣಮೂರ್ತಿಯಣ್ಣಯ್ಯನಿಂದ ಚಿತ್ರಕಲೆಯ ಬಗ್ಗೆ ಒಂದು ಗಂಟೆಯ ಪ್ರಾತ್ಯಕ್ಷಿಕೆ ನಡೆಯಿತು. ಅದು ಅವನ ಮೆಚ್ಚಿನ ಕಲೆಯಾಗಿದ್ದು ಮೊದಲು ಅವನು ಬಿಡಿಸಿದ ಅನೇಕ ಚಿತ್ರಗಳು ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ನಂತರ ರಮೇಶಣ್ಣಯ್ಯನ ಮಕ್ಕಳಾದ ಅಶೋಕ, ಅಶ್ವಿನಿಯರಿಂದ ರಮೇಶಣ್ಣಯ್ಯನ ನೆನಪುಗಳು ಅಂತ ಒಂದು ಗಂಟೆಯ ಕಾರ್ಯಕ್ರಮವಾಯಿತು.

 ರಮೇಶಣ್ಣಯ್ಯ ಒಬ್ಬ ಬರಹಗಾರನಾಗಿದ್ದು ಅನೇಕ ಪತ್ರಿಕೆಗಳಲ್ಲಿ ಅವನ ಕತೆಗಳು ಕವನಗಳು ಪ್ರಕಟವಾಗಿದ್ದು, ಒಮ್ಮೆ ಉದಯವಾಣಿ ವಿಶೇಷಾಂಕದಲ್ಲಿ ಅವನ ಕತೆಗೆ ಬಹುಮಾನವೂ ಬಂದಿತ್ತು. ಅಲ್ಲದೇ ಅವನು ಕ್ಯಾಮೆರಾ ಇಟ್ಟುಕೊಂಡು ಹಲವು ಪೋಟೋ ತೆಗೆದು ಅವನೇ ಕತ್ತಲೆ ಕೋಣೆಯಲ್ಲಿ ಕೆಮಿಕಲ್ ಹಾಕಿ ರೀಲ್ ತೊಳೆದು ಪೋಟೋ ಮಾಡುತ್ತಿದ್ದ. ಟೇಪ್ ರೆಕಾರ್ಡರ್ ಹಿಡಿದುಕೊಂಡು ಆಟಕ್ಕೆ ಹೋಗಿ ಆಟದ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದ. ಅವನು ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದು ಅಹಮದಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ತೀರಿಕೊಂಡಿದ್ದ. ಅವನ ಮಕ್ಕಳಿಂದ ಅವನ ಪುಣ್ಯಸ್ಮರಣೆಯಾಯಿತು. ನಂತರ ಶ್ರೀಧರಣ್ಣಯ್ಯನ ಒಂದು ಗಂಟೆಯ ಉಪನ್ಯಾಸ. ಅವನೂ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ ಎಂಬ ವಿಷಯದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದವನು. ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದ. ಹಲವಾರು ಯಕ್ಷಗಾನ ಪ್ರಸಂಗವನ್ನು ಬರೆದಿದ್ದ. ಅವನ ಬದುಕಿನ ಕೆಲವು ಅನುಭವಗಳನ್ನು, ಯಕ್ಷಗಾನದ ಬಗ್ಗೆ ಅವನ ನಿಲುವು ಮತ್ತು ಅಪ್ಪಯ್ಯನ ನೆನಪುಗಳನ್ನು ಹಂಚಿಕೊಂಡ.

ನಂತರ ಮಧ್ಯಾಹ್ನ ಊಟವಾಗಿ ಮತ್ತು ನನ್ನ ಅಕ್ಕನ ಮಗಳು ಮಾಲತಿ ಮತ್ತು ಜನಾರ್ದನ ಹಂದೆಯವರು, ಗಂಡ ಹೆಂಡತಿಯರು ಸೇರಿ, ಒಂದು ಗಂಟೆಯ ವಿವಿಧ ವಿನೋದಾವಳಿಯ ಪ್ರದರ್ಶನವನ್ನು ನಡೆಸಿಕೊಟ್ಟರು. ಬಳಿಕ ಸುರೇಶಣ್ಣಯ್ಯ ಮತ್ತು ಗೌರೀಶಣ್ಣಯ್ಯ ಸೇರಿ ಮದ್ದಲೆಯ ಹಲವು ದಸ್ತುಗಳನ್ನು ಬಾರಿಸಿ ರಂಜಿಸಿದರು. ಅವರ ಜೊತೆಗೆ ಸುಜಿಯೀಂದ್ರ ಹಂದೆಯೂ ಸೇರಿಕೊಂಡು ಕೆಲವು ಪದ್ಯಗಳನ್ನು ಹೇಳಿದರು. ಆಮೇಲೆ ನಾನೂ ನನ್ನ ಅಕ್ಕನ ಮಗ ವೆಂಕಟೇಶ ಹಂದೆಯೂ ಸೇರಿಕೊಂಡು ಅಲ್ಲಿ ಇದ್ದ ಕೆಲವರಿಗೆ ಕುಣಿತದ ಕೆಲವು ಹೆಜ್ಜೆಗಳನ್ನು ಒಂದು ಗಂಟೆಯಲ್ಲಿ ಕಲಿಸಿಕೊಟ್ಟೆವು. ಅದಾದ ಮೇಲೆ ಮನೆಯ ಮಕ್ಕಳು, ಹೆಂಗಸರಿಂದ ಹಾಡು, ಕಿರುನಾಟಕ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳು ನಡೆದವು. ಆಮೇಲೆ ಆ ದಿನದ ಎಲ್ಲ ಕಾರ್ಯಕ್ರಮದ ನಿರೂಪಣೆ ಮಾಡಿದ ಮಾಧುರಿ ಶ್ರೀರಾಮ್ ಒಟ್ಟು ಕಾರ್ಯಕ್ರಮದ ಅವಲೋಕನ ಮಾಡಿ, ಅಪ್ಪಯ್ಯನ ನೆನಪುಗಳನ್ನು ಹಂಚಿಕೊಳ್ಳಲು ಅಲ್ಲಿ ನೆರೆದ ಎಲ್ಲರಿಗೂ ಅವಕಾಶ ಮಾಡಿಕೊಟ್ಟಳು. ಎಸ್. ವಿ. ಭಟ್ಟರು, ಸುಜಯೀಂದ್ರ ಹಂದೆ, ಚಂದ್ರ ಭಟ್ಟರೂ ಸೇರಿ ಎಲ್ಲರೂ ಅಪ್ಪಯ್ಯನ ನೆನಪುಗಳನ್ನು ಮಾಡಿಕೊಂಡು ಸ್ಮರಿಸಿದರು. ಅಂತೂ ಆ ದಿನ ಸುಮಾರು ಏಳು ಗಂಟೆಯವರೆಗೂ, ಆ ಕೌಟುಂಬಿಕ ಕಾರ್ಯಕ್ರಮ ನಡೆದು ಮನೆಯವರೆಲ್ಲ ಸೇರಿ ಭಾವನೆಗಳನ್ನು ಹಂಚಿಕೊಂಡ ಒಂದು ಚಿರಸ್ಮರಣೆಯ ದಿನವಾಯಿತು.

(ಮುಂದುವರಿಯುವುದು)

ಸೋಮವಾರ, ನವೆಂಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 61

ರಾವಣನೊಡನೆ ಸೇರಿ ದಿಗ್ವಿಜಯಕ್ಕೆ ಹೋಗಬೇಕು ಎಂದು ಶೂರ್ಪನಖಿಯು, ವಿದ್ಯುಜ್ಜಿಹ್ವನಿಗೆ ಹೇಳಿದಾಗ, ಹೇಡಿಯಾದ ಅವನು,

ಪಹಡಿ ರೂಪಕ
ಮಡದಿಬಿಡೆ | ಸಲುಗೆಕೊಡೆ | ನುಡಿಗೆ ತಡೆ | ಇರದೊಡೆ ||
ಹೊಡೆವೆ ನಡೆ | ಗಮನವಿಡೆ | ಉಡುಗೆತೊಡುಗೆ | ಗಳ ಕಡೆ||
ಎಂದು ಗದರಿಸಿದಾಗ, ಚಂದ್ರನಖಿಯು,
ಹರನ ದಯ | ವಿರಲಭಯ | ಅರಿಯ ಲಯ | ನಿಶ್ಚಯ ||
ಧುರದಿ ಜಯ | ಖರೆಯೆ ಭಯ | ತೊರೆದಿನಿಯ | ತೆರಳೆಯ ||

ಎಂದರೂ, ಒಪ್ಪದಿದ್ದಾಗ,

ಮಣಿರಂಗು ಅಷ್ಟ
ಗಂಡುಸೆ ಚೆನ್ನಾಯಿತೆ | ನಿಮ್ಮ ಎದೆ | ಗುಂಡಿಗೆ ಬಿಸಿಯಾರಿತೆ ||
ಕಂಡವರ್ ಕೈತಟ್ಟಿ | ಕೊಂಡು ನಗುವ ಇಂತಾ |
ಭಂಡ ಬಾಳುವೆಯಾಯಿತೆ | ಹೀ| ಗಾಯಿತೆ ||೧||
ಹೇಳಿರೀ ಬಾಳು ಬಾಳೆ | ಜನರೆಮ್ಮ ಹೀ | ಯಾಳಿಸುವುದನು ಕೇಳೆ ||
ಕೀಳಾಗೇಕಿಹುದು ಕ | ರಾಳ ರೂಪವ ನೀಗ |
ತಾಳಿ ಮರ್ಧಿಸಿ ನಿಮ್ಮನು | ಸಾ | ಯುವೆನು ||೨||

 ಎಂದು ಹೆದರಿಸುತ್ತಾಳೆ. ಆಗ ವಿದ್ಯುಜ್ಜಿಹ್ವನು,

ತುಜಾವಂತು ಝಂಪೆ
ದಮ್ಮಯ್ಯ ಬೇಡುವೆನೆ ಬಿಟ್ಟುಬಿಡು ಕೋಪ | ಅಮ್ಮಮ್ಮ ನೋಡೆ ನಿನ್ನಾ ಘೋರರೂಪ |
ಬೊಮ್ಮ ಬರೆದಂತಾಗಲಿನ್ನು ನಾನಳುಕೆ | ಸಮ್ಮತಿಯನಿತ್ತೆನ್ನ ಕಳುಹು ಕೊಳಗುಳಕೆ |

ಎಂದು ರಾವಣನೊಂದಿಗೆ ದಿಗ್ವಿಜಯಕ್ಕೆ ಹೊರಟು ಕಾಲಕೇಯನಲ್ಲಿಗೆ ಬಂದಾಗ, ದೂತ

ಇಂಗ್ಲೀಷ್ ನೋಟ್  ಏಕ
ಬಿತ್ತರಿಪೆನಯ್ಯ | ಬಂದಾ | ಪತ್ತನಾ ಜೀಯ ||
ನಿತ್ಯದ ಹಾಗೆಯಿ | ವತ್ತೂ ಕದ ಕಾ | ಯುತ್ತಲಿಹ ಸಮಯ ||
ಕೇಳಿದೆ ನೀವ್ಯಾರು | ಏನ್ ಬಂ | ದೂಳಿಗವೆನಲವರು ||
ಕಾಳಗಕೊಡಲುನಿ | ವಾಳಿಸೆನಾ ಕೆಳ | ಬೀಳಲು ಮತ್ತವರು ||

ಯುದ್ಧವಾಗುತ್ತದೆ.  ಯುದ್ದದಲ್ಲಿ ವಿದ್ವುಜಿಹ್ವ ಹೆದರಿ ಓಡಿದಾಗ, ಕಾಲಕೇಯನ ಮಕ್ಕಳು ತಡೆದು, ಅವನನ್ನು ಯುದ್ಧದಲ್ಲಿ ಸೋಲಿಸಿ,

ಮೋಹನ ಕಲ್ಯಾಣಿ ಆದಿ
ಮಾತನಾಡಬಾರದೇನೋ | ಭೂತಳೇಶ | ಮಾತನಾಡಬಾರದೇನೊ ||
ಬಟ್ಟಲು ಹಾಲನು ಕೊಟ್ಟು | ತೊಟ್ಟಿಲೊಳು ನಿನ್ನ ನಿಟ್ಟು||
ಗಟ್ಟಿ ಜೋಗುಳ ಹಾಡಿ | ತಟ್ಟಿ ತಟ್ಟಿ ಮಲಗಿಸುವೆವು ||
ಸಿಟ್ಟಿಲಿ ತೊಂದರೆ | ಕೊಟ್ಟರೆ ರಟ್ಟೆಯ ||
ಕಟ್ಟುತ ಹೊಡೆವೆವು | ಪೆಟ್ಟನು ಎಂದೆವೆ ||

ಎಂದು ಹೀಯಾಳಿಸುತ್ತಾರೆ.  ಕೊನೆಗೆ, ರಾವಣ ಅವನನ್ನು ಎಳೆತಂದು,

ನಾದನಾಮಕ್ರಿಯೆ ಅಷ್ಟ
ನೋಡಿದಿರಾ | ಭಟರೆ | ನೋಡಿದಿರಾ ||ಪ||
ನೋಡಿ ಭಟರೆ ನಮ್ಮ ಭೃತ್ಯ | ಮಾಡಿದಂತ ನೀಚ ಕೃತ್ಯ |
ಧುರದ ನಿಯಮ ಮೀರಿ ಪೋಪ | ಸರುವರಿಂಗು ಶಿಕ್ಷೆಯಾಪ |
ಪರಿಯ ನೋಡಿರೆನುತ ಕೋಪ | ಭರಿತನಾಗುತಾಗ ಭೂಪ ||

ಎಂದು ಕೊಂದುಬಿಡುತ್ತಾನೆ.  ಆಗ ಶೂರ್ಪನಖಿಯು ದುಃಖದಿಂದ

ದ್ವಿಪದಿ
ಕೌಳಿಕವ ನೆಂಟತನ ನೆಪದಿಂದ ಗೆದ್ದು | ಹಾಳಡವಿಗಟ್ಟಿದನು ಕಾಲ್ಕಸದೋಲ್ ಒದ್ದು |

ಎಂದು ದಂಡಕಾರಣ್ಯಕ್ಕೆ ಬರುವಲ್ಲಿಗೆ ಪ್ರಸಂಗ ಮುಗಿಯುತ್ತದೆ.

ಅದನ್ನು ಓದಿದ ಕಂದಾವರ ರಘುರಾಮ ಶೆಟ್ಟರು, “ನೀವು ಇಷ್ಟೆಲ್ಲಾ ಪ್ರಾಸ ಹಾಕಿ ಪದ್ಯ ಮಾಡಿದರೆ, ಶಬ್ಧಗಳ ಸರ್ಕಸ್ ಮಾಡಿದರೆ, ಅದನ್ನು ಓದುವ ನಮಗೇ ತ್ರಾಸವಾದೀತು ಮಾತ್ರವಲ್ಲ, ಒಟ್ಟೂ ಸಾಹಿತ್ಯಕ್ಕೆ ತೊಡಕಾಗುತ್ತದೆ. ಈಗಿನ ಭಾಗವತರಂತೂ ಅವುಗಳನ್ನು ಓದುವ ಪ್ರಯತ್ನಕ್ಕೇ ಹೋಗುವುದಿಲ್ಲ. ಅವರಿಗೆ ಅದು ಆಗುವುದಿಲ್ಲ ಎಂದು ತಮಾಷೆ ಮಾಡಿದರು. ನಾನು “ಆಟಮಾಡಲಿಕ್ಕೋಸ್ಕರ ಅದನ್ನು ಬರೆದದ್ದೇ ಅಲ್ಲ. ಸುಮ್ಮನೇ ನನ್ನ ಉಮೇದಿನಿಂದ, ನನ್ನ ಚಟಕ್ಕಾಗಿ ಬರೆದದ್ದು” ಎಂದೆ.

ಪುಸ್ತಕ ಮಾಡಿಸಲು ಶ್ರೀಧರಣ್ಣಯ್ಯನೇ ನಮ್ಮ ಎಡಿಟರ್. ಮೇಲಾಗಿ ಕನ್ನಡ ಮೇಸ್ಟ್ರೂ ಅಲ್ಲವೇ?   ಅದೆಷ್ಟೋ ಸಲ,  ತಿದ್ದಿ ತಿದ್ದೀ ಬರೆಸಿ, ಒಂದು ರೂಪಕ್ಕೆ ಬರುವಂತೆ ಮಾಡಿದ. ಅಂತೂ ಪ್ರಸಂಗ ಪ್ರಕಟವಾಗಿ ಬಿಡುಗಡೆಗೆ ಸಿದ್ಧವಾಯಿತು. ಹಂಗಾರಕಟ್ಟೆ ಭಾಗವತಿಕೆ ತರಬೇತಿ ಕೇಂದ್ರದಲ್ಲಿ ಬಿಡುಗಡೆ ಮಾಡಲು ಸಾಧ್ಯವೇ? ಎಂದು ರಾಜ ಹೆಬ್ಬಾರನಲ್ಲಿ ಕೇಳಿದೆ. ಅವನು ಕೂಡಲೇ ಒಪ್ಪಿ, ಪತ್ರಿಕೆಗಳಲ್ಲಿ ತುಂಬಾ ಪ್ರಚಾರವನ್ನೂ ಕೊಟ್ಟು, ಮುತುವರ್ಜಿಯಿಂದ ಎಲ್ಲ ಜವಾಬ್ಧಾರಿಯನ್ನೂ ವಹಿಸಿಕೊಂಡ.  ಎಂ. ಎ. ಹೆಗಡೆ ಶಿರಸಿಯವರಿಂದ ಬಿಡುಗಡೆ ಮಾಡಿಸಿದ್ದಾಯಿತು.

ಅಂದು, ಪ್ರಸಂಗ ಬಿಡುಗಡೆಯ ಸಮಾರಂಭ ಮುಗಿದ ನಂತರ, ಸದಾನಂದ ಐತಾಳರು, ಸುಬ್ರಮಣ್ಯ ಧಾರೇಶ್ವರರು, ಬೈಲೂರು ಸುಬ್ರಮಣ್ಯ ಐತಾಳರು ಮತ್ತು ರಾಘವೇಂದ್ರ ಮಯ್ಯರು ಸೇರಿ ಅದೇ ಪ್ರಸಂಗದ  ಪದ್ಯಗಳನ್ನೂ ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಆದರೆ ಪುಸ್ತಕವನ್ನು ಮಾರಾಟ ಮಾಡುವ ಉದ್ದೇಶವಿಲ್ಲದೇ ಕಾಂಬ್ಲಿಮೆಂಟರಿಯಾಗಿ ಪುಸ್ತಕವನ್ನು ಮಾಡಿದ್ದಾದರೂ ಅದರ ಪ್ರಿಂಟಿಂಗ್ ನನಗೆ ಸಮಾಧಾನವಾಗದೇ ಇರುವುದರಿಂದ, ಕೇಳಿದವರಿಗೆ ಕೊಡಲೂ ಮುಜುಗರವಾಗಿ, ಹೆಚ್ಚಿನ ಪುಸ್ತಕ ನನ್ನಲ್ಲಿಯೇ ಉಳಿಯಿತು.

ಇನ್ನೊಮ್ಮೆ ನಾನು ಬರೆದ ಇನ್ನೊಂದು ಪ್ರಸಂಗ, ಶಂಕರನಾರಾಯಣ ಮಹಾತ್ಮೆ ಪ್ರಸಂಗವನ್ನೂ, ಶಂಕರನಾರಾಯಣದಲ್ಲಿ ದೇವಸ್ಥಾನದ ಬ್ರಹ್ಮ ಕಲಶೊತ್ಸವದ ಸಮಯದಲ್ಲಿ, ನಮ್ಮ ಭಾವ ಲಕ್ಷ್ಮೀನಾರಾಯಣ ಉಡುಪರ ನೇತೃತ್ವದಲ್ಲಿ ಮುದ್ರಿಸಿ ಬಿಡುಗಡೆ ಮಾಡಿಯಾಯಿತು. ಆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೆ ಕಂದಾವರ ರಘುರಾಮ ಶೆಟ್ಟಿಯವರನ್ನೇ ಕರೆಸಿದ್ದು, ಅವರು ಅದರ ಪದ್ಯಗಳ ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದು, ನನ್ನ ಮನಸ್ಸಿಗೆ ತೃಪ್ತಿಯಾಯಿತು. ಅದರ ಒಂದು ಪ್ರದರ್ಶನವನ್ನು ಸುಬ್ರಮಣ್ಯ ಧಾರೇಶ್ವರರು ಉಪ್ಪುಂದ ನಾಗೇಂದ್ರ, ವಿದ್ಯಾಧರ ಜಲವಳ್ಳಿ ಮುಂತಾದ ಪ್ರಸಿದ್ಧ ಕಲಾವಿದರನ್ನು ಸೇರಿಸಿಕೊಂಡು, ಒಂದು ಪ್ರದರ್ಶನವನ್ನು ಮಾಡಿದರು. ಸಾಲಿಗ್ರಾಮ ಮೇಳದಲ್ಲಿ, ನೀಲಾವರ ಮೇಳದಲ್ಲಿ ಪ್ರಯೋಗಗಳೂ ಆದವು. ಸುಮಾರು ಮೂರುಮೂರುವರೆ ಗಂಟೆಯ ಅವಧಿಯ ಪ್ರಸಂಗವಾದ್ದರಿಂದ ಮತ್ತೆ ಅಲ್ಲಲ್ಲಿ ಶಂಕರನಾರಾಯಣ ಸಂಘದವರು ಆಡಿದರು ಎಂದು ಕೇಳಿ ಸಂತೋಷಪಟ್ಟೆ.

(ಮುಂದುವರಿಯುವುದು)

ಭಾನುವಾರ, ನವೆಂಬರ್ 19, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 60

ಆದರೆ ನನಗೆ ಆ ಕ್ರಮ ಅಷ್ಟು ಸರಿಯೆನಿಸಲಿಲ್ಲ. ಶಾಖಾಧಿಕಾರಿಗಳ ನಿರ್ಲಕ್ಷ್ಯವು ಅಲ್ಲಿರುವುದು ಹೌದಾದರೂ, ಆ ಹಳೆಯ ಸಾಮಗ್ರಿಗಳು ಹಾಗೆ ಕಣ್ಮರೆಯಾಗುವುದಕ್ಕೆ ಹೇಗೆ ಸಾಧ್ಯ? ಎಲ್ಲಾದರೂ ಇರಲೇ ಬೇಕಲ್ಲ? ಅದು ಆ ಗುತ್ತಿಗೆದಾರರಲ್ಲೇ ಸಾಮಾನ್ಯವಾಗಿ ಇರುತ್ತದೆ ಎಂದು ಗೊತ್ತಿದ್ದರೂ, ಅವರು ಅದನ್ನು ಒಪ್ಪಿಕೊಳ್ಳದೇ, ವಸೂಲಿ ಮಾಡುವ ಹಾಗಿಲ್ಲ. ನನಗೆ ಧರ್ಮಸಂಕಟವಾಯಿತು. ಆದರೂ ಶಾಖಾಧಿಕಾರಿಗಳಿಗೆ ಒಂದು ನೋಟೀಸು ಕೊಟ್ಟೆ. ಅವರು ಓಡಿ ಬಂದು, “ನಾನೂ ಕೆಲಸ ನಡೆಯುವಾಗಲೇ ಗುತ್ತಿಗೆದಾರರಿಗೆ ಭಾರಿ ಭಾರಿ ಹೇಳಿದ್ದೇನೆ. ಆದರೆ ಅವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಇದ್ದುದರಿಂದ ಹೀಗಾಗಿದೆ. ಆ ಹಳೆಯ ಸಾಮಗ್ರಿಗಳ ಮೊತ್ತವನ್ನು ಗುತ್ತಿಗೆದಾರರ ಬಿಲ್ಲಿನಲ್ಲಿ ಕಡಿತಗೊಳಿಸಿ, ಬಿಲ್ಲು ಪಾವತಿಮಾಡಬೇಕು” ಎಂದು ತಿಳಿಸಿ ಹಾಗೆಯೇ ಉತ್ತರವನ್ನೂ ಬರೆದುಕೊಟ್ಟರು. ಗುತ್ತಿಗೆದಾರರಿಗೂ ಒಂದು ನೋಟೀಸು ಬಿಟ್ಟೆವು. ಆದರೆ ಅವರು, ಅವರ ಬಿಲ್ಲಿನಲ್ಲಿ ಆ ಮೊತ್ತವನ್ನು ಕಡಿತಗೊಳಿಸಲು ಆಕ್ಷೇಪವಿದೆಯೆಂದು ಮಾರುತ್ತರ ಕೊಟ್ಟುಬಿಟ್ಟರು. ತೀರ್ಮಾನವಾಗದೇ ಬಿಲ್ಲು ಬಾಕಿಯಾಯಿತು. ಗುತ್ತಿಗೆದಾರರು ಬಿಲ್ಲು ಪಾವತಿಮಾಡಲು ಒತ್ತಡವನ್ನೂ ತರಲು ಶುರುಮಾಡಿದರು. ಅವರಿಗೆ ನಮ್ಮ ಕಛೇರಿ ವ್ಯವಹಾರಗಳು ಇತರ ವಿಷಯಗಳು ಗೊತ್ತಿರುವುದರಿಂದ ಅವರನ್ನು ಕರೆಸಿ ಮನವೊಲಿಸುವ ನನ್ನ ಪ್ರಯತ್ನವೂ ಕೈಗೂಡಲಿಲ್ಲ. ಕೊನೆಗೆ ನನ್ನ ಮೇಲಧಿಕಾರಿಗಳೇ, “ಆ ಬಿಲ್ಲು ಏನಾಯ್ತು? ಏನಾದರೂ ಮಾಡಿ ಬೇಗ ಇತ್ಯರ್ಥ ಮಾಡಿಬಿಡಿ” ಎನ್ನತೊಡಗಿದರು. ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿ, ನೇರವಾಗಿ ಆಡಳಿತ ಕಛೇರಿಯ ಹಿರಿಯ ಅಧಿಕಾರಿಗಳನ್ನು ಫೋನಿನಲ್ಲಿ ಸಂಪರ್ಕಿಸಿ ಏನು ಮಾಡಬೇಕೆಂದು ಕೇಳಿದೆ. ಅವರು, “ನಮಗೆ ಬರೆಯಿರಿ ನಾವೇ ಸೂಕ್ತವಾದ ನಿರ್ದೇಶನವನ್ನು ಕೊಡುತ್ತೇವೆ” ಎಂದರು. ನಾನು ಮೊದಲಿಂದ ಎಲ್ಲ ವಿವರವನ್ನು ಕಾಣಿಸಿ ಒಂದು ದೀರ್ಘ ಪತ್ರವನ್ನು ಬರೆದೇ ಬಿಟ್ಟೆ. ಆಗ ನಮ್ಮ ವಿಭಾಗಾಧಿಕಾರಿಗಳಿಗೆ ಅದು ಗೊತ್ತಾಗಿ, “ನಿಮಗೆ ಏನು ಮಾಡಬೇಕೆಂದು ನಾನು ತಿಳಿಸಿದ ಮೇಲೂ, ನೀವು ನನಗೆ ತಿಳಿಯದಂತೆ ಆಡಳಿತ ಕಛೇರಿಗೆ ಬರೆದು, ನನಗೆ ಅವಮಾನ ಮಾಡಿದಿರಿ” ಎಂದು ಕೂಗಾಡಿಬಿಟ್ಟರು. ನನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ.

ಇತ್ತ, ನಮ್ಮ ನೌಕರರ ಯೂನಿಯನ್ ಲೀಡರ್ ಗಳೂ ನನ್ನ ಚೇಂಬರಿಗೆ ಬಂದು “ನಮ್ಮ ನೌಕರರಿಂದ ಸಾಮಗ್ರಿಯ ಮೌಲ್ಯವನ್ನು ಹೇಗೆ ವಸೂಲಿ ಮಾಡುತ್ತೀರಿ?, ನಾವೂ ನೋಡುತ್ತೇವೆ” ಎಂದು ಬೆದರಿಕೆಯನ್ನೂ ಹಾಕಿಹೋದರು. ಕೊನೆಗೆ ನಾನು ಆಗ ನನ್ನ ಆಪ್ತರೂ ಅಗಿದ್ದ ಇಂಜಿನಿಯರ್ ರಲ್ಲಿಗೆ  ಖಾಸಗಿಯಾಗಿ ಹೋಗಿ, ಮಾತಾಡಿದೆ. “ಇದನ್ನು ಯಾವ ರೀತಿ ಬಗೆಹರಿಸಬೇಕು?” ಎಂದು ಎಲ್ಲ ಕಡತವನ್ನು ತೋರಿಸಿ, ಸಲಹೆಯನ್ನು ಕೇಳಿದೆ. ಅವರು ಎಲ್ಲವನ್ನೂ ಕೇಳಿಕೊಂಡರು, ಆದರೆ ನನಗೆ ಯಾವುದೇ ತೀರ್ಮಾನದ ಉತ್ತರವನ್ನೂ ಕೊಡದೇ “ನೋಡುವ” ಎಂದು ವಾಪಾಸು ಕಳಿಸಿದರು. ಆದರೆ ಅವರು ನಮ್ಮ ವಿಭಾಗಾಧಿಕಾರಿಗಳನ್ನು ಕರೆಸಿ ಏನೋ ನಿರ್ದೇಶನ ಕೊಟ್ಟಿರಬೇಕು. ಆಗಿನಿಂದ ನಮ್ಮ ವಿಭಾಗಾಧಿಕಾರಿಗಳು ಮನಸ್ಸು ಬದಲಾಯಿಸಿ, “ನೀವು ಹೇಗೆ ತೀರ್ಮಾನ ತೆಗೆದುಕೊಂಡರೂ ಅಡ್ಡಿಲ್ಲ. ಬೇಗ ಬಿಲ್ಲು ಪಾಸು ಮಾಡಿ ಮುಗಿಸಿಬಿಡಿ. ಗುತ್ತಿಗೆದಾರರು ನನ್ನನ್ನು ಕೇಳುತ್ತಿದ್ದಾರೆ” ಎಂದು ನನ್ನನ್ನು ಕರೆಸಿ ಹೇಳಿದರು. ಗುತ್ತಿಗೆದಾರರೂ ಮತ್ತೆ ಒತ್ತಾಯಿಸಲು ಬರಲಿಲ್ಲ. ನಾನು ಗುತ್ತಿಗೆದಾರರ ಬಿಲ್ಲಿನಿಂದ ಆ ಮೊತ್ತವನ್ನು ಕಡಿತಗೊಳಿಸಿಯೇ ಬಿಲ್ಲು ಪಾವತಿಸಿ ಪ್ರಕರಣ ಮುಗಿಸಿಬಿಟ್ಟೆ. ಗುತ್ತಿಗೆದಾರರೂ ನಮ್ಮ ಆಫೀಸಿಗೆ ಬಂದು “ನಮ್ಮ ಆಕ್ಷೇಪವಿದ್ದರೂ ನೀವು ಬಿಲ್ಲಿನಲ್ಲಿ ಹಣವನ್ನು ಕಡಿತ ಮಾಡಿ ನಮಗೆ ನಷ್ಟ ಮಾಡಿದಿರಿ. ನೀವಾದುದಕ್ಕೆ ಹೋಗಲಿ ಎಂದು ಬಿಟ್ಟಿದ್ದೇವೆ. ಬೇರೆ ಯಾರಾದರೂ ಆಗಿದ್ದರೆ ಒಂದು ಕೈ ನೋಡಿಕೊಳ್ಳುತ್ತಿದ್ದೆವು” ಎಂದು ಸಮಾಧಾನವಾಗಿಯೇ ಹೇಳಿ, ಮಾತಾಡಿಸಿಕೊಂಡು ಹೋದವರು, ಅದನ್ನು ಮುಂದುವರಿಸದೇ ಅಲ್ಲಿಗೆ ಬಿಟ್ಟುಬಿಟ್ಟರು.

ನಾನು ಕೆಲಸಕ್ಕೆ ಸೇರುವ ಮೊದಲು ಕಲ್ಲಟ್ಟೆಯ ಮನೆಯಲ್ಲಿದ್ದಾಗ ಬರೆದ “ಚಂದ್ರನಖಿ” ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಿಂಟ್ ಮಾಡಿಸಬೇಕು ಅಂತ ಮನಸ್ಸಾಯಿತು. ಮತ್ತೊಮ್ಮೆ ಅದನ್ನು ರೀ ರೈಟ್ ಮಾಡಿದೆ. ಆಗಲೇ ಮೊದಲು ಬರೆದದ್ದರಲ್ಲಿ ಬಹಳಷ್ಟನ್ನು ಬದಲಾವಣೆ ಮಾಡಬೇಕಾಯಿತು. ಕೆಲವು ಪದ್ಯಗಳನ್ನೇ ಬಿಟ್ಟು, ಕೆಲವು ದೃಶ್ಯಗಳನ್ನು ಹಿಂದೆ ಮುಂದೆ ಮಾಡಿ, ಸರಿಪಡಿಸಿದೆ. ಉಡುಪಿಯ ಕಿನ್ನಿಮೂಲ್ಕಿಯ ಶ್ರೀನಿಧಿ ಪ್ರಿಂಟರ್ಸ್ ನ ಮಾಧವ ಐತಾಳರ ಪ್ರಿಂಟಿಂಗ್  ಪ್ರೆಸ್ ನಲ್ಲಿ ಪುಸ್ತಕ ಮಾಡಿಸಲು ಕೊಟ್ಟೆ. ಪುಸ್ತಕ ಖರ್ಚಾಗುವುದಿಲ್ಲ ಎಂದು ಗೊತ್ತಿದ್ದು, ಹಣ ದಂಡ ಮಾಡಬಾರದು ಎಂದು ಮುಂಜಾಗ್ರತೆಯಾಗಿ ಕೇವಲ ಐನೂರು ಪ್ರತಿಯನ್ನಷ್ಟೇ ಮಾಡಿಸಿದ್ದೆ. ಆ ಪ್ರಸಂಗದಲ್ಲಿ  ನಾನು ಆವರೆಗೆ ಓದಿ ನೋಟ್ ಮಾಡಿಕೊಂಡ ಎಲ್ಲಾ ಯಕ್ಷಗಾನ ಛಂದಸ್ಸುಗಳ, ಪದ್ಯದ ಧಾಟಿಗಳನ್ನು ಒಂದೇ ಪ್ರಸಂಗದಲ್ಲಿ ತರುವ ಒಂದು ಹುಚ್ಚಿದ್ದಿತ್ತು. ಮೊಟ್ಟಮೊದಲು ಬರೆದ ಮತ್ತು ಇಷ್ಟದ ಪ್ರಸಂಗವಾದ್ದರಿಂದ, ಅದರಲ್ಲಿ ಚಮತ್ಕಾರವಾಗಿ ಹಲವು ಶಬ್ಧಗಳನ್ನು, ಅಕ್ಷರಗಳ ಪುರಾವರ್ತನೆಯ ಜೋಡಣೆಯನ್ನು ಮಾಡಿದ್ದು, ತುಂಬಾ ಕಷ್ಟಪಟ್ಟು ಬರೆದಿದ್ದೆ. ಪ್ರಸಂಗ ಹೀಗೆ ಸಾಗುತ್ತದೆ.

ರಾವಣನ ಆಜ್ಞೆಯಂತೆ ಮಾರೀಚನು, ಶೂರ್ಪನಖಿಗೆ ಮದುವೆ ಮಾಡಲು ಕೌಳಿಕಾಲಯದ ವಿದ್ಯುಜ್ಜಿಹ್ವನಲ್ಲಿಗೆ ಬಂದು, ಶೂರ್ಪನಖಿಯ ಚಂದವನ್ನು ಬಣ್ಣಿಸಿ ಮದುವೆಯಾಗಲು ಹೇಳುತ್ತಾನೆ. ಆಗ ವಿದ್ಯುಜ್ಜಿಹ್ವನು,

ಬೇಹಾಗ್ ಏಕ
ಅಂಗಜನ | ಅಂಗನೆಯ | ಹಂಗಿಪ ಕು | ರಂಗನಯ |
ನಂಗಳಿಹ | ಭೃಂಗಲಕೆ | ಸಿಂಗ ಕಟಿ | ತುಂಗ ಕುಚೆಯ ||

ತೋರಿಸು ಎಂದಾಗ,  ಉದ್ಯಾನದಲ್ಲಿ ಚಂದ್ರನಖಿಯನ್ನು ನೋಡಿ,

ವಾರ್ಧಕ
ಕಮಲನೇತ್ರೆಯ ಕಂಡು ಮನಸೋತೆ ನನ್ನ ಹೃ |
ತ್ಕಮಲಮಂ ಸೂರೆಗೊಂಡಿಹಳಿನ್ನು ತಾಳೆ ನಾ | ಕಮಲಶರನುರುಬೆಯನ್ನರಗಳಿಗೆಯವಳ ಮುಖ | ಕಮಲ ಕಾಣದೆ ಬದುಕೆನು ||
ಕಮಲ ಪೀಠನು ಸೃಜಿಸಲೀ ಚೆಲುವನೆನಗೆಂದೆ |
ಕಮಲಗಂಧಿಯ ತೊರೆಯೆನೆಂತಾದೊಡೆನ್ನ ಕರ |
ಕಮಲಕೀಕೆಯ ಒಪ್ಪಿಸೆನುತ ಮಾರೀಚ ಪದ | ಕಮಲದೊಳು ಹೊರಳುತಿರ್ದ ||

ಎಂದು ಅಂಗಲಾಚುತ್ತಾನೆ. ಶೂರ್ಪನಖಿಯು,

ಭಾಗವತನಿಗೆ ತಾನೆ ಒಲಿದ | ರಾಗ, ನಿತ್ಯವು |
ರೋಗಿ ಬಯಸೆ ಹಾಲನಿತ್ತ | ಹಾಗೆ ಸತ್ಯವು |
ಆಗಲೆಂದು ನೀವು ಒಪ್ಪಿ | ಯೋಗ ಬಂದರೆ |
ಸಾಗಲೆನ್ನ ಮದುವೆ ಇಲ್ಲ | ವೀಗ ತೊಂದರೆ |

ಎನ್ನಲು, ಅವರಿಬ್ಬರ ಮದುವೆ ನಡೆಯುತ್ತದೆ. ಶೂರ್ಪನಖಿಯು ವಿನೋದಕ್ಕೆ ಘೋರ ರೂಪವನ್ನು ತಾಳಿ,

ಕಾಮಾಚ್ ಆದಿ
ಹರಿ (ದೇವೇಂದ್ರ)ಗಕ್ಷಿ ಹತ್ತು ನೂರು| ಮತ್ತಿವೆಯಂತೆ |ಹರಿದೇರಪತಿಗೆ (ಈಶ್ವರ)ಮೂರು||
ಹರಿ(ವಿಷ್ಣು) ಚತುರ್ಭುಜ ನಂಗ | ವಿರದು ಮಾರ(ಮನ್ಮಥ)ಗೆ ಕಲೆ |
ಹರಿಣಾಂಕ(ಚಂದ್ರ)ಗಿದೆ ಚತು | ರ್ಶಿರವಿಧಿ(ಬ್ರಹ್ಮ)ಗೆಂಬೂನ |
ವರಿತು | ನಿನಗೆ ಸೋತು | ಬಂದೆ ನಿಂತು | ನಾ ನಿನಗೋತು ||

ಎನ್ನಲು, ಕಂಡು ಹೆದರಿದ ವಿದ್ಯುಜಿಹ್ವ,,

ಜಂಜೂಟಿ ಏಕ
ಕೂಡಲು ನಿನ್ನ | ನೋಡುವೆ ಯಮನ | ಬೇಡುವೆ ಕಾಣೆ ಶಿವನಾಣೆ ||
ಕಾಡದೆ ಬೇರೆ | ಜೋಡಿಯ ಸೇರೆ | ಮಾಡೆಸಹಾಯ ನೀಡೆ ದಯ ||

ಎನ್ನಲು, ದೀನಳಾಗಿ

ಶಂಕರಾಭರಣ ಅಷ್ಟ
ಬೇಡಿಕೊಂಬೆ ಕಾ | ಪಾಡುವುದೆಂಬೆ || ಪ ||
ಹಗರಣ ವಹುದೆಂದು | ಬಗೆಯಲಿಲ್ಲಯ್ಯ | ಮುಗಿವೆನಾ ಕಯ್ಯ | ಹಗೆಯೇ ದಮ್ಮಯ್ಯ ||
ಸುಂದರಿಯಾಗೆ ನಿ | ಮ್ಮೊಂದಿಗೆ ಇರುವೆ || ನೊಂದೆಯಾ ದೊರೆಯೇ | ಸಂದೇಹ ತೊರೆಯೆ ||

ಎಂದು ಶರಣು ಬಂದಾಗ, ಧಾರಾಳತನದಿಂದ

ಭಾಮಿನಿ
ನಂದನೆಯ ಭೋಗಿಸುವುದತಿ ತ | ಪ್ಪೆಂದರಿಯನೇ ಬ್ರಹ್ಮ, ತ್ರ್ಯಂಬಕ |
ನಿಂದಲರಿಯದೆ ಭಸ್ಮವಾದನೆ ಮನ್ಮಥನು ಅಂದು ||
ನಿಂದಿಸುವರೆಂದರಿಯನೇ ಸಂ | ಕ್ರಂದನನು ಪರಪತ್ನಿಗೆಳಸಲಿ |
ಕಿಂದಿವಳ ಜೊತೆ ಬಾಳ್ವೆಯೇ? ಪ್ರಾರಬ್ಧ ಕರ್ಮವಲಾ ||

ಎಂದು ಕೌಳಿಕನಗರಕ್ಕೆ ಅವಳನ್ನು ಕರೆದೊಯ್ಯುತ್ತಾನೆ.

(ಮುಂದುವರಿಯುವುದು)

ಶನಿವಾರ, ನವೆಂಬರ್ 18, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 59

ಉಡುಪಿಯಲ್ಲಿ ಒಮ್ಮೆ ಮಂಟಪ ಪ್ರಭಾಕರ ಉಪಾಧ್ಯರು ಅವರ ಪ್ರೋಗ್ರಾಮ್ ಗೆ ಬಂದಿದ್ದಾಗ, ಆ ಪ್ರೋಗ್ರಾಮ್ ನೋಡಲು ಹೋಗಿದ್ದ ನನಗೆ ಸಿಕ್ಕಿದರು. “ನನ್ನ ಹತ್ತಿರವೂ ಒಂದಷ್ಟು ಹಳೆಯ ವಿಹೆಚ್ಎಸ್ ಕ್ಯಾಸೆಟ್ ಗಳಿವೆ ಮಾರಾಯ್ರೆ. ನಿಮಗೆ ಉಪಯೋಗ ಬರುತ್ತದಾ, ನೋಡ್ತೀರಾ? ಎಂದು ಹೇಳಿದರು. ನಾನು “ಕಳಿಸಿಕೊಡಿ” ಎಂದೆ. ಅವರು ಮುಂದಿನ ಸಲ ಉಡುಪಿಗೆ ಬಂದಾಗ, ಒಂದು ವಿಸಿಆರ್ ನ್ನೂ, ಮೂರು ದೊಡ್ಡ ರಟ್ಟಿನ ಪೆಟ್ಟಿಗೆಯ ತುಂಬಾ ಹಲವಾರು ವಿಹೆಚ್ಎಸ್ ಕ್ಯಾಸೆಟ್ ಗಳನ್ನು ಕಾರಿಗೆ ಹಾಕಿಕೊಂಡು ಬಂದು, “ಉಪ್ಪೂರ್ರೆ, ನಿಮ್ಮ ಸಂಗ್ರಹವನ್ನು ಕಂಡು ನಾನು ಬೆರಗಾಗಿದ್ದೇನೆ. ಹಾಗೆಯೇ ನನ್ನದು ಇದು ಕಸವೆಂದು ಭಾವಿಸದೇ ನಿಮ್ಮಲ್ಲಿ ಇಟ್ಟುಕೊಳ್ಳಿ” ಎಂದೂ, “ಇದನ್ನು ತೆಗೆದುಕೊಳ್ಳಿ. ಬೇಡ ಎನ್ನಿಸಿದರೆ ದಯವಿಟ್ಟು ವಾಪಾಸು ಕಳಿಸಬೇಡಿ ಸುಟ್ಟುಬಿಡಿ” ಎಂದು ನನಗೆ ಹಸ್ತಾಂತರಿಸಿದರು. ಅವುಗಳಲ್ಲಿ ಎಡನೀರು ಮಠದಲ್ಲಿ ಆಗಿದ್ದ, ಲೈವ್ ಕಾರ್ಯಕ್ರಮಗಳು, ಮಹಾಬಲ ಹೆಗಡೆಯವರ, ಶಂಭು ಹೆಗಡೆಯವರ, ಚಿಟ್ಟಾಣಿಯವರ, ಕಾಳಿಂಗ ನಾವಡರ, ಶೇಣಿಯವರ ಮತ್ತು ತೆಂಕುತಿಟ್ಟಿನ ಅಮೂಲ್ಯವಾದ ಯಕ್ಷಗಾನದ ವಿಡಿಯೋಗಳು ಸಿಕ್ಕಿದವು.  ನಾನು, ಮತ್ತಿಗಾರರು, ಕೈಗಾ ಭಾಗವತರು ಮತ್ತು ಗಣೇಶಭಟ್ರು ಒಟ್ಟಾಗಿ ಅವುಗಳನ್ನೆಲ್ಲ ಡಿವಿಡಿ ಮಾಡಿಸಿ, ದಾಖಲೆಯಾಗಿ ಇಟ್ಟುಕೊಂಡೆವು. ಹಾಗೂ ಉಡುಪಿಯ ಕಲಾರಂಗದ ಆಫೀಸಿನಲ್ಲಿಯೂ, ಎಸ್.ವಿ.ಭಟ್ ರವರಲ್ಲಿಯೂ ಕೆಲವು ಹಳೆಯ ಮತ್ತು ಈಗಿನ ಆಡಿಯೋ, ವಿಡಿಯೋಗಳನ್ನು ಪಡೆದ್ದಾಯಿತು.

ನನ್ನ ಹಳೆಯ ಹಾರ್ಡ್ ಡಿಸ್ಕ್ ಗಳಲ್ಲಿ ಒಂದು, ಒಮ್ಮೆ ಓಪನ್ನೇ ಆಗದೆ ಹಾಳಾಗಿಬಿಟ್ಟಿತು. ಪುಣ್ಯಕ್ಕೆ ನಾನು ಅದರಲ್ಲಿ ಇರುವ ಎಲ್ಲ ಫೈಲುಗಳನ್ನು ಬೇರೆಯವರಿಗೆ ಕೊಟ್ಟು, ಇಟ್ಟದ್ದರಿಂದ ಪುನಹ ಪಡೆಯುವುದು ಕಷ್ಟವಾಗಲಿಲ್ಲ. ಆಗ ಒಮ್ಮೆ ಜೋಯಿಸರಿಗೆ ಹೇಳಿದೆ. “ನೋಡಿ, ಇವುಗಳನ್ನೆಲ್ಲ ಸಿಡಿಗಳಲ್ಲಿ ಹಾಕಿ ಇಟ್ಟದ್ದೂ ಉಳಿಯುವುದಿಲ್ಲ. ಹಾರ್ಡ್ ಡಿಸ್ಕೂ ಹೆಚ್ಚು ಸಮಯ ಬಾಳಿಕೆ ಬರಲಾರದು ಅನ್ನಿಸುತ್ತದೆ. ಕಂಪ್ಯೂಟರ್ ಲ್ಲಿ ಇಟ್ಟುಕೊಳ್ಳುವುದಂತೂ ತುಂಬಾ ಅಪಾಯ. ನಾವು ಇಷ್ಟೆಲ್ಲಾ ಮಾಡಿಯೂ ಇವುಗಳನ್ನು ಮುಂದಿನವರಿಗೆ ಸಂರಕ್ಷಿಸಿ ಇಡಲು ಸಾಧ್ಯವಾಗದೇ ಇದ್ದರೆ, ನಾವು ಇಷ್ಟೆಲ್ಲ ಮಾಡಿಯೂ ವ್ಯರ್ಥವಾಗುತ್ತದಲ್ಲ ಮರ್ರೆ” ಎಂದೆ. ಅವರು “ಮತ್ತೇನು ಮಾಡುವುದು?” ಎಂದರು. ನಾನು “ಇದನ್ನು ಕ್ಲೌಡ್ ನಲ್ಲಿ ಸಂಗ್ರಹಿಸಿ ಇಡಲು ಸಾಧ್ಯವಾದರೆ ಬ್ಯಾಕ್ ಅಪ್ ಇದ್ದು, ಉಳಿಸುವುದು ಸಾಧ್ಯವಾಗುತ್ತದಾ ನೋಡಬಹುದು. ಅದರ ಬಗ್ಗೆ ನನಗೆ ಹೆಚ್ಚು ಅನುಭವ ಇಲ್ಲ” ಎಂದೆ. ಆಗ ನಮ್ಮ ನಾಲ್ಕಾರು ಆಪ್ತ ಸ್ನೇಹಿತರೊಂದಿಗೆ ವಿಚಾರಿಸಿ, ಚರ್ಚಿಸಿದೆವು.

ಆಗ ಒಂದು ಸಮಸ್ಯೆ ಎದುರಾಯಿತು. ನಮ್ಮ ಇಷ್ಟೆಲ್ಲ ಸಂಗ್ರಹಗಳಲ್ಲಿ ಯಾವುದೂ ನಮ್ಮದಲ್ಲ. ಅಲ್ಲಿ ಇಲ್ಲಿ ಸಂಗ್ರಹಿಸಿದ್ದು. ಯಾರ ಯಾರದ್ದೋ ನಿರ್ಮಾಪಕರ, ಕಲಾವಿದರ, ದಾಖಲಿಸಿದವರಿಗೆ ಅದರ ಹಕ್ಕು ಹೊರತು, ಸಂಗ್ರಹಿಸಿದ ನಮಗೆ ಅದರ ಮೇಲೆ ಯಾವುದೇ ರೀತಿಯ ಹಕ್ಕೂ ಇಲ್ಲ ಎಂದು ಕೆಲವರು ಹೇಳಿ, “ಅದನ್ನು ನೆಟ್ ಗೆ ಏರಿಸಲು ಕಾನೂನಿನ ತೊಡಕು ಇದೆಯೋ ನೋಡಿಕೊಳ್ಳಬೇಕು” ಎಂದು ಎಚ್ಚರಿಸಿದರು. ಕಾನೂನು ಏನೇ ಹೇಳಲಿ. ನಾವು ಅದನ್ನು ಮಾರಾಟಮಾಡಿ ಹಣಗಳಿಸುತ್ತಿಲ್ಲ. ಬೇರೆಯವರ ಆದಾಯವನ್ನು ಕಸಿದುಕೊಳ್ಳುತ್ತಲೂ ಇಲ್ಲ ಯಾಕೆಂದರೆ ನಾವು ಯಾವುದೇ ಫೈಲುಗಳ, ಹತ್ತಾರು ಪ್ರತಿಗಳನ್ನು ಮಾಡಿ ನಮ್ಮ ಹೆಸರು ಹಾಕಿ ಇರಿಸುವುದಿಲ್ಲ. ಯಾರಾದರೂ ಅದು ತಮ್ಮದೆಂದು ಹಕ್ಕು ಸ್ಥಾಪಿಸಿದಾಗ ನೋಡಿದರಾಯಿತು ಎಂದು ಸಮಾಧಾನ ಮಾಡಿಕೊಂಡರೂ, ಮತ್ತೇನು ಮಾಡುವುದು? ಎಂದು ತೀರ್ಮಾನಿಸುವುದು ಸಾಧ್ಯವಾಗಲಿಲ್ಲ.

ಆಗ ಜೋಯಿಸರು, ನೈಜೀರಿಯದಲ್ಲಿ ಕೆಲಸದಲ್ಲಿದ್ದು, ಆಗಾಗ ಊರಿಗೆ ಬಂದು ಒಂದಷ್ಟು ಯಕ್ಷಗಾನಗಳನ್ನು ಮಾಡಿ, ಕಲಾವಿದರಿಗೆ, ಕಲಾಭಿಮಾನಿಗಳಿಗೆ ಪರಿಚಿತರಾಗಿ,, ಜನಪ್ರಿಯರಾಗಿದ್ದ ಹಾಗೂ ಕುಂದಾಪುರದ ಉಪ್ಪಿನಕುದ್ರಿನವರೇ ಆದ ರಾಜಶೇಖರ ಹಂದೆಯವರನ್ನು ಸಂಪರ್ಕಿಸಿ, ಅವರಿಗೆ ನಮ್ಮ ಒಂದಷ್ಟು ಸಂಗ್ರಹಗಳನ್ನು ಅವರದೇ ಹಾರ್ಡ್ ಡಿಸ್ಕಿಗೆ ಹಾಕಿಕೊಟ್ಟು, ಇದನ್ನೆಲ್ಲ ಸಂರಕ್ಷಸಿ ಇಡಲು ಏನಾದರೂ ಮಾಡಲು ಸಾಧ್ಯವೇ? ಎಂದು ಚರ್ಚಿಸಿದರು. ಕೂಡಲೆ ಹಂದೆಯವರು ಧನಾತ್ಮಕವಾಗಿ ಸ್ಪಂದಿಸಿ, ಲಾನ್ ವ್ಯವಸ್ಥೆಯಿರುವ ಒಂದು ದೊಡ್ಡ ಸಾಮರ್ಥ್ಯದ ಒಂದು ಸರ್ವರ್ ನ್ನು ಕಳಿಸಿಯೇ ಬಿಟ್ಟರು. ಅದರಲ್ಲಿ ಸ್ಟೋರ್ ಮಾಡಿ ಇಡಲು, ಜೋಯಿಸರು “ಅದು ನಿಮ್ಮಲ್ಲಿಯೇ ಇರಲಿ” ಎಂದು ನನಗೆ ಕಳಿಸಿಕೊಟ್ಟರು. ನಾನು ಅದರ ಪೂರ್ಣ ಉಪಯೋಗ ತಿಳಿಯದಿದ್ದರೂ ಅದಕ್ಕೆ ನನ್ನಲ್ಲಿದ್ದ ಸಂಗ್ರಹಗಳನ್ನು ಒಂದೊಂದಾಗಿ, ಅಪ್ ಲೋಡ್ ಮಾಡುತ್ತಾ ಬರುತ್ತಿದ್ದೇನೆ.

ಮಂಗಳೂರು ಪರಿಸರದಲ್ಲಿ ನಮ್ಮ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಒಂದು ಕೆಲಸವನ್ನು, ಒಬ್ಬ ದೊಡ್ಡ ಗುತ್ತಿಗೆದಾರರಿಗೆ ವಹಿಸಿದ್ದರು. ಅದನ್ನು ಅವರು ಮಾಡಿ ಮುಗಿಸಿದ ಮೇಲೆ, ಅದಕ್ಕೆ ಸಂಬಂಧಿಸಿದ ದೊಡ್ಡ ಬಿಲ್ಲನ್ನು ಸಲ್ಲಿಸಬೇಕಾದ ಎಲ್ಲ ದಾಖಲೆಗಳೊಂದಿಗೆ ಗುತ್ತಿಗೆದಾರರು ಸಲ್ಲಿಸಿದ್ದರು. ಬಿಲ್ಲಿನ ಮೊತ್ತ ಹಲವು ಲಕ್ಷದಷ್ಟು ದೊಡ್ಡದಾದುದರಿಂದ ಬಿಲ್ಲು ಸಲ್ಲಿಸಿದ ಬೆನ್ನಿಗೇ, ಬೇಗ ಪಾಸು ಮಾಡಬೇಕು ಎನ್ನುವ ಒತ್ತಡವೋ ವಶೀಲಿಯೋ ನಡೆಯುವುದು ಸಾಮಾನ್ಯ. ಜೊತೆಗೆ ಆ ಗುತ್ತಿಗೆದಾರರು ಪ್ರಭಾವಿಗಳಾದುದರಿಂದ ಮತ್ತು ನನಗೂ ತುಂಬಾ ಪರಿಚಿತರೂ ಆದುದರಿಂದ, ಫೋನಿನಲ್ಲೇ ಒಮ್ಮೆ, “ಉಪ್ಪೂರರೆ ನಂದು ಒಂದು ಬಿಲ್ಲು ಇತ್ತು. ನಿಮಗೇನೂ ಹೇಳಬೇಕಾಗಿಲ್ಲ. ನಿಮ್ಮಲ್ಲಿ ಉಳಿಯುವುದಿಲ್ಲ ಎಂದು ಗೊತ್ತು. ಅಂತಹ ಅರ್ಜೆಂಟೇನಿಲ್ಲ. ಹೀಗೆ ಮಾತಾಡುತ್ತಾ ಮಾತಿನ ಮಧ್ಯ ನೆನಪಾಯಿತು. ಹೇಳಿದೆ” ಎಂದು ಪರೋಕ್ಷವಾಗಿ, ಬೇಗ ಪಾಸು ಮಾಡಬೇಕೆಂದು ಸೂಚನೆಯನ್ನೂ ಕೊಟ್ಟರು. ನಾನು ಅದನ್ನು ಪಾಸು ಮಾಡಲು, ನನ್ನ ಬಿಲ್ಲು ಪಾಸು ಮಾಡುವ ಗುಮಾಸ್ತರಿಗೆ ತಿಳಿಸಿದೆ. ಅದನ್ನು ಪರಿಶೀಲಿಸುವಾಗ ಆ ಹೊಸ ಕೆಲಸವನ್ನು ಕೈಗೆತ್ತಿ ಕೊಳ್ಳುವ ಸಮಯದಲ್ಲಿ, ಆ ಸ್ಥಳದಲ್ಲಿ ಮೊದಲು ಇದ್ದ ಕಂಪೆನಿಯದೇ ಆದ ಸುಮಾರು ಸಾವಿರಾರು ರೂಪಾಯಿ ಬೆಲೆಬಾಳುವ ವಿದ್ಯುತ್ ತಂತಿ, ಕಂಬ ಮತ್ತು ಇತರ ಸಾಮಗ್ರಿಗಳನ್ನು ಅವರು ಕಂಪೆನಿಯ ಉಗ್ರಾಣಕ್ಕೆ ಹಿಂತಿರುಗಿಸಬೇಕಿತ್ತು. ಆ ಕೆಲಸವು ನಡೆಯುತ್ತಿರುವಾಗಲೇ ಅದರ ಮೇಲ್ವಿಚಾರಣೆ ಮಾಡಬೇಕಾದ ಶಾಖಾಧಿಕಾರಿಗಳು ಆ ಬಗ್ಗೆ ಆಗಲೇ ಎಚ್ಚರವಹಿಸಿ ಗುತ್ತಿಗೆದಾರರಿಗೆ ಹೇಳಿ, ಅಲ್ಲಿ ಇದ್ದ ಹಳೆಯ ಸಾಮಗ್ರಿಗಳನ್ನು ವಾಪಾಸು ಮಾಡಲು ತಿಳಿಸಬೇಕಾಗಿತ್ತು. ಆದರೆ ಅವರು ಹೇಳಿಯೂ ಗುತ್ತಿಗೆದಾರರು ಕಡೆಗಣಿಸಿದರೋ, ಅಥವ ಆ ಶಾಖಾಧಿಕಾರಿಯವರೇ, ಇವರು ಪ್ರಭಾವೀ ಗುತ್ತಿಗೆದಾರರು ಎಂದು ಹೇಳಲು ಹೆದರಿ ಸುಮ್ಮನಾದರೋ, ಅಂತೂ ಅಷ್ಟು ಸಾಮಗ್ರಿಗಳು ವಾಪಾಸು ಬಾರದೆ  ಕಂಪೆನಿಗೆ ನಷ್ಟವಾಗಿತ್ತು.

ನಾನು ಗುತ್ತಿಗೆದಾರರನ್ನು ಪೋನ್ ನಲ್ಲಿ ಸಂಪರ್ಕಿಸಿ, ಅದನ್ನು ಹಿಂತಿರುಗಿಸಬೇಕಾಗುತ್ತದಲ್ಲ? ಎಂದು ತಿಳಿಸಿದೆ. ಆದರೆ ಆ ಗುತ್ತಿಗೆದಾರರು “ಆ ಸಾಮಗ್ರಿಗಳು ಈಗ ಸ್ಥಳದಲ್ಲಿಯೂ ಇಲ್ಲ. ಎಲ್ಲಿ ಹೋಯಿತೋ ನಮಗೂ ಗೊತ್ತಿಲ್ಲ. ನಾವಂತೂ ತೆಗೆದುಕೊಂಡು ಹೋಗಿಲ್ಲ. ಅದೆಲ್ಲ ಕೆಲಸದ ಮೇಲ್ವಿಚಾರಣೆ ಮಾಡುವ ಶಾಖಾಧಿಕಾರಿಗಳ ಹೊಣೆ. ಈಗ ಅದೆಲ್ಲ ಮುಗಿದ ಕತೆ. ಇನ್ನು ಏನೂ ಮಾಡಲು ಆಗುವುದಿಲ್ಲ. ಬಿಟ್ಟು ಬಿಡಿ”. ಎಂದು ಹೇಳಿದರು. ನಾನು ಒಪ್ಪಲಿಲ್ಲ. ಆ ಸಾಮಗ್ರಿಗಳು ಲಭ್ಯವಾಗದೇ ಹೋದರೆ ಹೋಗಲಿ ಅದರ ಮೌಲ್ಯವಾದರೂ ಕಂಪೆನಿಯ ಆದಾಯದ ಲೆಕ್ಕಕ್ಕೆ ಬರಲೇಬೇಕಲ್ಲ. ಇಲ್ಲದೇ ಹೋದಲ್ಲಿ ಅದನ್ನು ಒಂದೋ, ಅವರ ಬಿಲ್ಲಿನಲ್ಲಿ ವಸೂಲಿಮಾಡಬೇಕು ಇಲ್ಲವೇ ಶಾಖಾಧಿಕಾರಿಗಳ ನಿರ್ಲಕ್ಷ್ಯತನ ಎಂದು ಅವರಿಗೆ ನೋಟೀಸು ನೀಡಿ, ಅವರ ಸಂಬಳದಿಂದ ಮುರಿದುಕೊಳ್ಳಬೇಕು. ಅಂತೂ ನಿರ್ಧಿರಿಸಲು ನನಗೆ ಕಷ್ಟವಾಗಿ, ನನ್ನ ಮೇಲಧಿಕಾರಿಗಳಾದ ವಿಭಾಗಾಧಿಕಾರಿಗಳಿಗೆ ಒಂದು ನೋಟ್ ಬರೆದು, ಹೀಗೆ ಹೀಗೆ ಆಗಿದೆ. ಮುಂದೆ ಆ ಮೊತ್ತವನ್ನು ಯಾರಿಂದ ವಸೂಲಿಮಾಡಬೇಕು? ಎಂದು ನಿರ್ದೇಶನ ನೀಡಬೇಕೆಂದು ಕೇಳಿದೆ.

ಅವರು ಸೀದಾ ಸ್ವಭಾವದ ನೇರ ನಡೆಯವರು. “ಅದು ಆ ಕೆಲಸದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದ ಆ ಶಾಖಾಧಿಕಾರಿಗಳ ಹೊಣೆಯಲ್ಲವೇ? ಆಗಲೇ ಅದನ್ನು ಉಗ್ರಾಣಕ್ಕೆ ಹಾಕಿಸಬೇಕಿತ್ತು. ಅವರದೇ ನಿರ್ಲಕ್ಷ್ಯವಾದ್ದರಿಂದ ನೋಟೀಸು ನೀಡಿ, ಅವರ ಸಂಬಳದಿಂದ ವಸೂಲಿಮಾಡಿ” ಎಂದು ತೀರ್ಮಾನ ನೀಡಿಬಿಟ್ಟರು.

(ಮುಂದುವರಿಯುವುದು)

ಶುಕ್ರವಾರ, ನವೆಂಬರ್ 17, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 58

ಸಾಗರದ ಹತ್ತಿರದ ದೊಂಬೆ ಶಿವರಾಮಯ್ಯ ಎನ್ನುವವರಲ್ಲಿ ಸಿರಿವಂತೆಯ ತಾಳಮದ್ದಲೆಯಲ್ಲಿ ರೆಕಾರ್ಡ್ ಮಾಡಿದ ಅಪ್ಪಯ್ಯ ಮತ್ತು ನಾವಡರು, ಕಡತೋಕರು, ದಾಸಭಾಗವತರು ಇರುವ ಕೆಲವು ಕ್ಯಾಸೆಟ್ ಗಳು ಇವೆ ಎಂದು ಗೊತ್ತಾಗಿ, ಜೋಯಿಸರು ಅವರ ಮನೆಯನ್ನು ಹುಡುಕಿಕೊಂಡು ಹೋಗಿ ತಂದು ಕೊಟ್ಟರು. ಅದನ್ನೂ  ಎಂಪಿತ್ರಿಗೆ ಪರಿವರ್ತಿಸಿ ಅವರಿಗೆ ಒಂದು ಪ್ರತಿ ಕೊಟ್ಟು ನಾವೂ ಇಟ್ಟುಕೊಂಡೆವು.  ಈ ಮಧ್ಯದಲ್ಲಿ ಮತ್ತೊಮ್ಮೆ ನಾನೂ ಮತ್ತು ಜೋಯಿಸರು ಒಟ್ಟಾಗಿ ಕೋಟದ ಮಂಜುನಾಥ ಮಯ್ಯರ ಮನೆಗೆ, ಮಂಕಿ ಕೇಶವ ಮಯ್ಯರ ಮನೆಗೆ ಹೋಗಿ ಅವರ ಸಂಗ್ರಹದಲ್ಲಿದ್ದ ಕೆಲವು ಆಟದಲ್ಲಿ ನೇರವಾಗಿ ಅವರು ರೆಕಾರ್ಡ್ ಮಾಡಿದ ಕ್ಯಾಸೆಟ್ ಗಳನ್ನು ಪಡೆದುಕೊಂಡು ಬಂದೆವು. ಒಮ್ಮೆ ಸಾಗರಕ್ಕೆ ಅವರ ಕಾರಿನಲ್ಲಿ ಹೋಗಿ ಪ್ರಭಾಕರ್ ಎನ್ನುವವರಲ್ಲಿಗೆ, ಅಲ್ಲಿಂದ ನನ್ನ ಅಪ್ಪಯ್ಯನ ಶಿಷ್ಯರೇ ಆದ ಕೆ.ಜಿ. ರಾಮ ರಾವ್ ರವರಲ್ಲಿಗೆ ಹೋಗಿ, ಅವರು ಕೊಟ್ಟ ಕೆಲವು ಕ್ಯಾಸೆಟ್ ಗಳನ್ನು ತಂದದ್ದಾಯಿತು. ಜೋಯಿಸರು ಬೆಂಗಳೂರು, ಬೊಂಬಾಯಿ, ಕಾಸರಗೋಡು ಅಂತ ಯಾರ ಯಾರ ಹತ್ತಿರ ಹಳೆಯ ಸಂಗ್ರಹ ಇದೆ ಅಂತ ಕಿವಿಗೆ ಬಿತ್ತೋ, ಅವರನ್ನೆಲ್ಲಾ ಫೋನಿನಲ್ಲಿ ಸಂಪರ್ಕಿಸಿ, ಹಲವಾರು ಹಳೆಯ ಸಂಗ್ರಹಗಳನ್ನು ಪಡೆದು ನನಗೆ ಕಳಿಸಿಕೊಟ್ಟರು. ಹೀಗೆಂದ ಮಾತ್ರಕ್ಕೆ ಎಲ್ಲವೂ ನನ್ನ ಬಳಿ ಇದೆ ಎಂದು ಅರ್ಥವಲ್ಲ. ಅನೇಕರು ನಾವು ಅವರಲ್ಲಿದ್ದ ಸಂಗ್ರಹವನ್ನು ಕೇಳಲು ಹೋದಾಗ, ಸಹಕರಿಸದೇ, ಮತ್ತೆ ಬನ್ನಿ ಈಗ ಪುರಸೊತ್ತು ಇಲ್ಲ, ಅದನ್ನು ಕೊಡಲು ಆಗುವುದಿಲ್ಲ. ಎಂದು ಅವರದನ್ನು ಕೊಡದೇ, ನಮ್ಮಲ್ಲಿರುವುದನ್ನು ಕೇಳಿ ತೆಗೆದುಕೊಂಡು ಹೋದವರೂ ಇದ್ದಾರೆ. ಇಷ್ಟಾದರೂ ನಮ್ಮಲ್ಲಿ ಎಲ್ಲವೂ ಇದೆ ಎಂಬ ಅಹಂಕಾರ ನನಗಿಲ್ಲ. ಅದು ಬಿಂದು ಮಾತ್ರಾ ಆಗಿರಬಹುದು. ಅಲ್ಲಲ್ಲಿ ದಾಖಲೆಗಳು ಅಡಗಿ ಕುಳಿತಿದ್ದು ಅದು ಸಿಂಧುವಷ್ಟಿರಬಹುದು. ನಮಗಿಂತಲೂ ಹೆಚ್ಚು ಸಂಗ್ರಹ ಇರುವವರು ಇರಬಹುದು.

ಮಂಗಳೂರಿನಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುವಾಗ ನಡೆದ ಒಂದು ಘಟನೆ ನೆನಪಾಗುತ್ತದೆ. ನನ್ನ ಜೀವನದಲ್ಲಿ ನಡೆದ ಇಂತಹ ಘಟನೆಗಳನ್ನು ಹೇಳದೇ ಬಿಟ್ಟರೆ, ಈ ನನ್ನ ನನ್ನೊಳಗೆ ಪೂರ್ಣವಾಗದೇ ಪ್ರಾಮಾಣಿಕವಾಗದೇ ಹೋಗುವುದರಿಂದ ಹೇಳಿ ಬಿಡುತ್ತೇನೆ. ನಮಗೊಬ್ಬರು, ಆಫೀಸಿನ ಕೇಸುಗಳನ್ನು ನೋಡಿಕೊಳ್ಳುವ ಕಂಪೆನಿಯ ವಕೀಲರಿದ್ದರು. ಅವರು ಆಗಲೇ ಮುದುಕರಾಗಿ, ವಕೀಲಿ ವೃತ್ತಿಯಿಂದ ನಿವೃತ್ತರಾಗಿದ್ದು, ಅವರ ಸಹಾಯಕರೊಬ್ಬರ ನೆರವಿನಿಂದ ಕೇಸು ನಡೆಸುತ್ತಿದ್ದರು. ನಮ್ಮ ಕಂಪೆನಿಯ ಆ ಕಛೇರಿಯಲ್ಲಿ ವಿವಾದಾತ್ಮಕವಾದ ತುಂಬಾ ಕೇಸುಗಳು ಕೋರ್ಟಿನಲ್ಲಿ ಇದ್ದು, ಪ್ರಕರಣದ ವಿಚಾರಣೆಯ ಸಮಯವನ್ನೂ ಸರಿಯಾಗಿ ನೋಡಿ ಅವರಿಗೆ ತಿಳಿಸಲು ಸಾಧ್ಯವಾಗುತ್ತಿರಲಿಲ್ಲ.

ಒಂದುದಿನ ನಾನು ಆಫೀಸಿನಲ್ಲಿ ಇದ್ದಾಗ, ಕೋರ್ಟಿನಿಂದ ಒಬ್ಬ ಅಮೀನ್ ಬಂದು, ನ್ಯಾಯಾಲಯದ ಒಂದು ಪ್ರಕರಣಕ್ಕೆ ಸಂಬಂಧಿಸಿದ ಪಿರ್ಯಾದುದಾರರ ಮೊತ್ತವನ್ನು ನ್ಯಾಯಾಲಯದ ಆದೇಶದಂತೆ ಪಾವತಿಸದೇ ಇರುವುದರಿಂದ, ನಿಮ್ಮ ಆಫೀಸಿನ ಸೊತ್ತನ್ನು ಹರಾಜು ಹಾಕಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇನ್ನು ಇಪ್ಪತ್ತನಾಲ್ಕುಗಂಟೆಯ ಒಳಗೆ ಎರಡೂವರೆ ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಕೋರ್ಟಿಗೆ ಪಾವತಿಸಬೇಕು ಎಂದು ಕೋರ್ಟಿನಿಂದ ಜಾರಿಮಾಡಿದ ನೋಟೀಸನ್ನು ಕೊಟ್ಟ. ಆಗ ನಾನು ಆ ಹುದ್ದೆಗೆ ವರದಿ ಮಾಡಿಕೊಂಡು ಹೆಚ್ಚುದಿನವೂ ಆಗಿರಲಿಲ್ಲ. ಪ್ರಕರಣ ಏನೆಂದು ಗೊತ್ತಿಲ್ಲದ್ದರಿಂದ ಗಾಬರಿಯಾಗಿ, ಅದಕ್ಕೆ ಸಂಬಂಧಿಸಿದ ವಿವರದ ಕಡತವನ್ನು ಗುಮಾಸ್ತರಿಂದ ತರಿಸಿದೆ. ವಕೀಲರಿಗೆ ಫೋನ್ ಮಾಡಿದೆ. ಅವರು ಸಿಗಲಿಲ್ಲವಾಗಿ ಅವರ ಮನೆಗೇ ಓಡಿದೆ. ಅವರು ಕೂಲಾಗಿ “ಹೌದು ಅದೊಂದು ಮಿಸ್ಟೇಕ್ ಆಗಿದೆ. ಹಣಕಟ್ಟಲೇ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ನಿಮ್ಮಿಂದ ವಿವರ ಸಿಗಲಿಲ್ಲವಾದ್ದರಿಂದ ಕೋರ್ಟಿನಲ್ಲಿ ವಾದಿಸಲು ಸಾಧ್ಯವಾಗಿರಲಿಲ್ಲ. ನಾವು ತುಂಬಾ ಪ್ರಯತ್ನ ಪಟ್ಟೆವು. ಆದರೂ ಹೀಗೆ ತೀರ್ಮಾನವಾಯಿತು” ಎಂದರು.

ಅಷ್ಟು ಹಣವನ್ನು  ಒಮ್ಮೆಲೇ ಕಟ್ಟದಿದ್ದರೆ ನಮಗೆ ಗಂಡಾಂತರ. ಎಲ್ಲಿಂದ ಕಟ್ಟುವುದು? ನಾನು ಆಡಳಿತ ಕಛೇರಿಗೆ ಓಡಿದೆ. ಸಂಬಂಧಿಸಿದವರನ್ನು ಮಾತಾಡಿಸಿದೆ. ಹೀಗಾಗಿದೆ ಏನು ಮಾಡುವುದು?. ಹಣ ಕಟ್ಟಬೇಕು ಇಲ್ಲದಿದ್ದರೆ ನಮ್ಮ ಆಫೀಸಿನ ಸೊತ್ತುಗಳನ್ನು ಹರಾಜು ಹಾಕುತ್ತಾರಂತೆ ಎಂದೆ. ಅವರು ಹಣ ಪಾವತಿಸಲು ಅನುಮತಿ ಬೇಕು ಸಾಹೇಬರನ್ನು ನೋಡಿ ಹೇಳಿ ಎಂದರು. ಅಲ್ಲಿಗೂ ನೋಟ್ ಹೋಯಿತು. ನನ್ನನ್ನು ಕರೆಸಿದರು. ಅವರು ಮೊದಲೇ ನಮ್ಮ ಬಾಸು, ಎಂ.ಡಿ. ಕೇಳಬೇಕೇ? ಅದು ಹೇಗಾಯಿತು?. ನಿರ್ಲಕ್ಷಕ್ಕೆ ಕಾರಣ ಯಾರು? ಅವರ ಮೇಲೆ ಶಿಸ್ತು ಕ್ರಮತೆಗೆದುಕೊಂಡು ಈಗಲೇ ಅವರನ್ನು ಸಸ್ಪೆಂಡ್ ಮಾಡಿಬಿಡಿ” ಎಂದು ಹಾರಾಡಿಬಿಟ್ಟರು. ನನಗೆ ಹೆದರಿಕೆಯಾಯಿತು. ಅಷ್ಟಕ್ಕೇ ಸುಮ್ಮನಾಗದ ಅವರು, ನನ್ನ ಮೇಲಿನ ಕಛೇರಿಯ ಎಲ್ಲ ಅಧಿಕಾರಿಗಳನ್ನೂ ಆಗಲೇ ಫೋನ್ ಮಾಡಿ ಚೇಂಬರಿಗೆ ಕರೆಸಿದರು. ಅವರ ಎದುರಿನಲ್ಲಿ, ನನ್ನನ್ನು ತೋರಿಸಿ “ನೋಡಿ ಇವರ ಕಛೇರಿಯ ಸೊತ್ತುಗಳನ್ನು ಹರಾಜು ಹಾಕುತ್ತಾರಂತೆ. ಕಂಪೆನಿಗೆ ಇವರಿಂದ ಎರಡುವರೆ ಲಕ್ಷ ನಷ್ಟವಾಗಿದೆಯಂತೆ. ಅದಕ್ಕೆ ಯಾರು ಜವಾಬ್ದಾರಿ? ಈಗಲೇ ಈ ಪ್ರಕರಣದ ತನಿಖೆಯಾಗಲೇಬೇಕು. ತಪ್ಪಿತಸ್ಥರು ಯಾರು? ಎಂದು ಹುಡುಕಿ ವರದಿ ಮಾಡಬೇಕೆಂದೂ ಅಲ್ಲಿಯೇ ಪಾರ್ಮಾನು ಹೊರಡಿಸಿಬಿಟ್ಟರು. ನನ್ನ ಆಫೀಸಿನ ವಿಷಯವಾದ್ದರಿಂದ ಮೊದಲಿಗೆ ನಾನೇ ಬಲಿಪಶುವಾಗಬೇಕಾಯಿತು. ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡಿ ಕೋರ್ಟಿಗೆ ಕಟ್ಟಿ ಅದನ್ನು ಮುಗಿಸಬಹುದೆಂದು ಬಂದವನಿಗೆ, ಈಗ ದಿಕ್ಕೇ ತೋಚದಾಯಿತು.

ಆಗ ನನಗೆ ಆಪ್ತರಾದ ಒಬ್ಬ ಇಂಜಿನಿಯರ್, ಆಗ ಅಲ್ಲಿಯೇ ಇದ್ದು ಅವರು ಮತ್ತೆ ನನ್ನನ್ನು ಕರೆಸಿ “ಏನಾಯಿತು?” ಎಂದು ಎಲ್ಲ ವಿವರವನ್ನು ಕೇಳಿ ತಿಳಿದುಕೊಂಡರು. ನನಗೆ ಅಳುವೇ ಬರುವಂತಾಗಿತ್ತು. ಏನೂ ತಪ್ಪು ಮಾಡದೇ  ಇದ್ದ ನನ್ನನ್ನೇ, ದೂರು ಕೊಡಲು ಬಂದವರನ್ನೇ ವಿಚಾರಣೆ ಇಲ್ಲದೇ ಜೈಲಿಗೆ ಹಾಕಲು ಸಿದ್ಧರಾದಂತೆ ಕಂಡಿತು. ಕೊನೆಗೆ ತುಂಬಾ ಹೊತ್ತಿನ ನಂತರ ನಮ್ಮ ವಿಭಾಗಾಧಿಕಾರಿಗಳೂ ಮತ್ತು ಅವರೂ ಮತ್ತೆ ಬಾಸ್ ಹತ್ತಿರ ಹೋಗಿ ಮಾತಾಡಿದರು, “ಈಗ ಹಣ ಬಿಡುಗಡೆ ಮಾಡಿ. ಕೋರ್ಟಿಗೆ ಒಮ್ಮೆ ಪಾವತಿ ಮಾಡಿ, ಸಧ್ಯದ ಗಂಡಾತರ ತಪ್ಪಿಸಿಕೊಳ್ಳುವ. ಬೇಕಾದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಷರತ್ತಿನ ಮೇಲೆ ಹಣ ಬಿಡುಗಡೆ ಮಾಡಿ” ಎಂದು ಮನವೊಲಿಸಿದರು. ಹಣವೂ ಮಂಜೂರಾಯಿತು. ಕೋರ್ಟಿಗೂ ಪಾವತಿಯಾಯಿತು. ಅಂತೂ ಮೊದಲಿಗೆ ದೊಡ್ಡ ಅವಗಡದಿಂದ ಪಾರಾದೆ. ಸರಿಯಾಗಿ ಕೇಸನ್ನು ಗಮನಿಸದೇ ಇಷ್ಟಕ್ಕೆಲ್ಲ ಕಾರಣರಾದ ನಮ್ಮ ಕಛೇರಿಯ ಸಿಬ್ಬಂದಿಗೂ ನೋಟೀಸು ಜಾರಿ ಮಾಡಿದ್ದಾಯಿತು. ಆ ವಕೀಲರು ನಮ್ಮ ಕಂಪೆನಿಯ ಕೇಸುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ನೋಟೀಸು ನೀಡಿ, ಅವರನ್ನು ವಜಾ ಮಾಡಿ, ಬೇರೆ ವಕೀಲರನ್ನು ನಿಯೋಜಿಸಿದ್ದಾಯಿತು.

ನಾನು ನೋಡಿದ ಆಡಿಯೋ ವಿಡಿಯೋಗಳಲ್ಲಿ ಯಾವುದಾದರೂ ಭಾಗ ಒಳ್ಳೆಯದಿದೆ ಅನ್ನಿಸಿದರೆ ಅದನ್ನು ಕತ್ತರಿಸಿ ನನ್ನ  ಫೇಸ್ ಬುಕ್ಕಿಗೆ ಆಗಾಗ ಅಪ್ಲೋಡ್ ಮಾಡುತ್ತಿದ್ದೆ. ಅದನ್ನು ನೋಡಿದ ಶಿವಮೊಗ್ಗದ ಡಾಕ್ಟರ್ ಮಂಟಪ ರತ್ನಾಕರ ಉಪಾಧ್ಯಾಯರು, ಅವರು ಆವರೆಗೆ ಸಂಗ್ರಹಿಸಿದ ಮತ್ತು ಅವರೇ ಆಯೋಜಿಸಿದ ಹಲವಾರು ಯಕ್ಷಗಾನದ ಅಮೂಲ್ಯವಾದ ಡಿವಿಡಿಗಳ ದಾಖಲೆಗಳನ್ನು “ಇನ್ನು ನನ್ನ ಕೆಲಸವಾಯಿತು. ಇದನ್ನು ನಿಮಗೆ ಹಸ್ತಾಂತರಿಸುತ್ತೇನೆ” ಎಂದು ಮೂರ್ನಾಲ್ಕು ದೊಡ್ಡದೊಡ್ಡ ರಟ್ಟಿನ ಪೆಟ್ಟಿಗೆಗೆ ಹಾಕಿ ಕಳಿಸಿಕೊಟ್ಟರು.

(ಮುಂದುವರಿಯುವುದು)

ಗುರುವಾರ, ನವೆಂಬರ್ 16, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 57

ಉತ್ತರಕನ್ನಡದ ಚಂದಾವರ ಗಣೇಶ ಭಟ್ಟರು ಎಂಬವರು ಹಲವಾರು ಯಕ್ಷಗಾನದ ವಿಡಿಯೋ ದಾಖಲೆಗಳನ್ನು ಸಂಗ್ರಹಿಸುವವರು. ಒಮ್ಮೆ ನಮ್ಮ ಸುದರ್ಶನ ಜೋಯಿಸರು ಹಳೆಯ ಸಂಗ್ರಹಗಳನ್ನು ಹುಡುಕುತ್ತಿದ್ದಾರೆ ಎಂದು ಯಾರಿಂದಲೋ ತಿಳಿದು, ಚಂದಾವರದಿಂದ ಬೈಕಿನಲ್ಲಿ ಅವರಲ್ಲಿದ್ದ ಎಲ್ಲ ಸಿಡಿಗಳನ್ನು ಎರಡು, ಮೂರು ಚೀಲದಲ್ಲಿ ಹಾಕಿಕೊಂಡು ಕೊಲ್ಲೂರಿಗೆ ಬಂದರು. ಜೋಯಿಸರು ಒಮ್ಮೆ ಅದನ್ನೆಲ್ಲಾ ನೋಡಿ, ಅವರಲ್ಲಿಯೇ ಇರಿಸಿಕೊಂಡು ನನಗೆ ಕಳಿಸಿ, ನಮ್ಮಲ್ಲಿದ್ದ ಸಂಗ್ರಹವನ್ನು ಗಣೇಶ ಭಟ್ಟರಿಗೆ ಪ್ರತಿ ಮಾಡಿಕೊಡಿ ಎಂದರು. ಇನ್ನೊಮ್ಮೆ ಅವರು ಬಂದಾಗ ನನ್ನ ವಿಳಾಸ ಕೊಟ್ಟು ಕಳಿಸಿದರು. ಅವರಿಗೆ, ನನ್ನ ಹತ್ತಿರವಿದ್ದ ಎಲ್ಲ ವಿಡಿಯೋ ಆಡಿಯೋಗಳನ್ನು ಅವರ ಹಾರ್ಡ್ ಡಿಸ್ಕಿಗೆ ಹಾಕಿಕೊಟ್ಟೆ. ಈ ಭಟ್ಟರೊಬ್ಬರು, ಯಾರಲ್ಲಿ ಏನು ವಿಡಿಯೋ ಉಂಟು ಯಾವ ವಿಡಿಯೋಗ್ರಾಫರ್ ಆಟದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂದು ನೋಡುತ್ತಾ ಇದ್ದು ಮೊದಲು ಹೋಗಿ ಪರಿಚಯ ಮಾಡಿಕೊಂಡು, ಏನಾದರೂ ಮಾಡಿ ಅವರಿಂದ ಅದನ್ನು ಸಂಗ್ರಹಿಸುತ್ತಿದ್ದರು. ಆವಾಗಿನಿಂದ ಅವರು ಆಗಾಗ ನಮ್ಮ ಮನೆಗೆ ಬಂದು, ಅವರ ಸಂಗ್ರಹದ ಒಂದು ಪ್ರತಿಯನ್ನು ನನಗೆ ಕೊಟ್ಟು, “ಇದು ನಿಮ್ಮ ಭಂಡಾರಕ್ಕೆ ಸೇರಿಸಿಕೊಳ್ಳಿ” ಎಂದು, ಮತ್ತೆ ನನ್ನಲ್ಲಿ ಏನಾದರೂ ಇದ್ದರೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮತ್ತೆ ಅವರದನ್ನು ಕೊಡುವಾಗ “ಹ್ವಾಯ್, ಇದರಲ್ಲಿ ಇದೊಂದನ್ನು ಸದ್ಯ ಯಾರಿಗೂ ಕೊಡಬೇಡಿ ಮಾರಾಯ್ರೆ” ಅನ್ನುತ್ತಿದ್ದರು. ನಾನು ಸುಮ್ಮನೆ ಮಂದಹಾಸ ಬೀರುತ್ತಿದ್ದೆ. ಅದರ ಅರ್ಥ ಅವರಿಗೂ ಗೊತ್ತಿತ್ತು. ನನಗೂ.

ಉಡುಪಿ ಅಂಬಾಗಿಲಿನ ಹತ್ತಿರ ಇರುವ ಪುತ್ತೂರಿನಲ್ಲಿ ಭಗವತೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವಿದೆ. ಅಲ್ಲಿಯೆ ಹತ್ತಿರ ಇರುವ ಸುಧಾಮ ಭಟ್ ಎನ್ನುವವರು, ಹಿಂದೆ ಪುತ್ತಿಗೆ ಮಠದಲ್ಲಿ ಪರಿಚಯವಾದವರು ಒಮ್ಮೆ ನಮ್ಮ ಮನೆಗೆ ಬಂದು, ಪುತ್ತೂರಿನಲ್ಲಿ ಒಂದು ಬ್ರಾಹ್ಮಣ ಸಂಘ ಇದೆ ಅದಕ್ಕೆ ಸದಸ್ಯರಾಗಲು ಹೇಳಿದರು. ಆ ಊರಿನಲ್ಲಿ ಯಾರದ್ದೂ ಹೆಚ್ಚಿಗೆ ಪರಿಚಯವಿಲ್ಲದ ನಾನು, ಅದಕ್ಕೆ ಒಪ್ಪಿ ಸದಸ್ಯನಾದೆ. ದೇವಸ್ಥಾನದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ ವಿಷ್ಣುಸಹಸ್ರನಾಮ ಪಾರಾಯಣ ಪ್ರತೀ ಶುಕ್ರವಾರ ಮಹಿಳೆಯರಿಗೆ ಲಕ್ಷ್ಮೀ ಶೋಭಾನೆ ಮತ್ತು ಭಜನೆ ಮತ್ತು ಪ್ರತೀ ತಿಂಗಳು ಒಂದು ಆ ಸಂಘದವರೇ ನಡೆಸುವ ಸಭಾ ಕಾರ್ಯಕ್ರಮ ಇರುತ್ತಿತ್ತು. ನಾವೂ ಪುರಸೊತ್ತಾದಾಗ ಹೋಗಲು ಶುರುಮಾಡಿದೆವು. ಅಲ್ಲಿಯವರ ಸ್ನೇಹವಾಯಿತು. ಪರಿಚಯವಾಗಿ ಒಂದು ವರ್ಷ ಆ ಬ್ರಾಹ್ಮಣ ಸಂಘದಲ್ಲಿ ಕಾರ್ಯದರ್ಶಿಯಾಗಿಯೂ ಕೆಲಸವನ್ನು ಮಾಡಿದೆ. ಆಸುಪಾಸಿನ ಸುಮಾರು ನೂರಿನ್ನೂರು ಬ್ರಾಹ್ಮಣರ ಮನೆಮನೆಗೆ ಹೋಗಿ ಆ ವರ್ಷ ಸಂಘದಿಂದ ಮಾಡಿದ ಶ್ರೀಚಕ್ರಪೂಜೆಗೆ ಆಮಂತ್ರಣ ನೀಡಿ ಬರುವ ಅವಕಾಶವೂ ಲಬ್ಯವಾಗಿ ಅವರೆಲ್ಲರ ಪರಿಚಯವೂ ಆಯಿತು. ಅನ್ನಪೂರ್ಣಳೂ ಆ ಸಮಯದಲ್ಲಿ ಮಹಿಳೆಯರ ಲಕ್ಷ್ಮೀಶೋಭಾನೆ ಭಜನೆಗೆ ಸೇರಿಕೊಂಡವಳು ಅಲ್ಲಿನ ಯಕ್ಷಗಾನ ಪ್ರದರ್ಶನಕ್ಕೆ ಸೇರಿ, ಬನ್ನಂಜೆ ಸಂಜೀವನವರ ನಿರ್ದೇಶನದಲ್ಲಿ ಆದ ಚಿತ್ರಪಟ ರಾಮಾಯಣ ಆಟದಲ್ಲಿ ಕುಣಿತ ಅಭ್ಯಾಸ ಮಾಡಿ ಯೋಗಿನಿಯ ಪಾತ್ರವನ್ನೂ ಮಾಡಿದಳು. ನಂತರವೂ ಕೆಲವು ಪ್ರದರ್ಶನಗಳಲ್ಲಿ ದಾಕ್ಷಾಯಿಣಿ, ರುಕ್ಮಿಣಿ, ತ್ರಿಲೋಕ ಸುಂದರಿ, ಕೃಷ್ಣ ಮುಂತಾದ ಪಾತ್ರಗಳನ್ನೂ ನಿರ್ವಹಿಸಿದಳು. ಮನೆಯಲ್ಲಿ ಕುಣಿತ, ಅಭಿನಯ, ಮಾತಿಗೆ ನಾನೂ ಟ್ರಯಲ್ ಕೊಡುತ್ತಿದ್ದೆ.

ಮನೋಹರ ಕುಂದರ್ ಎನ್ನುವ ಪಡುಬಿದ್ರೆ ಹತ್ತಿರದ ಪೋಟೋಗ್ರಾಫರ್ ಒಬ್ಬರ ಬಳಿ, ಹಿಂದಿನ ಹಲವು ಆಡಿಯೋ ವಿಡಿಯೋ ಮತ್ತು ಅವರೇ ಫೋಟೋ ತೆಗೆದು ಸಂಗ್ರಹಿಸಿ ಇಟ್ಟ ಹಳೆಯ ದಾಖಲೆಗಳಿದ್ದವು.  ಅವರ ಬಳಿ ನನ್ನ ಅಪ್ಪಯ್ಯನ ಕೃಷ್ಣ ಪಾರಿಜಾತ ಪ್ರಸಂಗದ ಆಕಾಶವಾಣಿಯ ಪ್ರೋಗ್ರಾಮ್ ಮತ್ತು ಅಪ್ಪಯ್ಯ ಕುಳಿತು ಪದ್ಯಹೇಳುವ ಒಂದು ಭಂಗಿಯ ಒಳ್ಳೆಯ ಫೋಟೋ  ಇದ್ದು ಅವರು ಅದನ್ನು  ನಮ್ಮ ಮನೆಗೆ ತಂದು ಕೊಟ್ಟರು. ಅವರಲ್ಲಿಯೂ ಅಪಾರ ಸಂಗ್ರಹಗಳಿವೆ. ಅವರು ದೊಡ್ಡ ಪ್ರಮಾಣದಲ್ಲಿ ಖರ್ಚುಮಾಡಿ ಅವರ ಫೋಟೋಗಳದ್ದೇ ಒಂದೆರಡು ಪುಸ್ತಕವನ್ನೂ ಮಾಡಿ ಕೈ ಸುಟ್ಟುಕೊಂಡಿದ್ದರು. ಅವರಿಗೂ ಹಳೆಯಂಗಡಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಶಿವಚಂದ್ರ ಭಟ್ ಎನ್ನುವ ಡಾಕ್ಟರರಿಗೂ ಸ್ನೇಹವಿದ್ದು, ನನ್ನ ಬಳಿ ಶಂಭುಹೆಗಡೆಯವರ ಆಟದ ವಿಡಿಯೋ ಇದೆ ಎಂದು ತಿಳಿದ ಡಾಕ್ಟರ್ ರು, ಒಂದು ದಿನ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬಂದರು. ತನ್ನ ಬಳಿಯೂ ಉಪ್ಪೂರರ ಕೆಲವು ಹಳೆಯ ಪೋಟೋಗಳು ಬರಹಗಳೂ ಇವೆ. ಅದನ್ನು ನೀವು ಒಮ್ಮೆ ನೋಡಿ, ಮತ್ತೆ ಶಂಭು ಹೆಗಡೆ ಯವರು ಅಪ್ಪಯ್ಯ ಒಟ್ಟಿಗೆ ಮಾಡಿದ ಬ್ರಹ್ಮಕಪಾಲವೂ ಇದೆ ಎಂದು ತಿಳಿಸಿ ಮನಗೆ ಬರಬೇಕೆಂದೂ ಹೇಳಿದರು. ಜೊತೆಗೆ ನನ್ನ ಸಂಗ್ರಹವನ್ನು ಅವರಿಗೆ ಕೊಡಲು ಸಾಧ್ಯವೇ?” ಎಂದು ಕೇಳಿದರು. ನಾನು ಕೂಡಲೇ ಒಪ್ಪಿದೆ. ಆದರೆ ನಾನು, “ನೆಬ್ಬೂರರು ಮತ್ತು ಕೆಪ್ಪೆಕೆರೆಯವರ ಹಿಮ್ಮೇಳದಲ್ಲಿ ಮಾತ್ರ ಶಂಭು ಹೆಗಡೆಯವರು ಕುಣಿಯುತ್ತಿದ್ದುದು. ೧೯೬೮ ರ ಸಾಲಿಗ್ರಾಮ ಮೇಳದಲ್ಲಿ ಕೆರೆಮನೆ ಕಲಾವಿದರೊಂದಿಗೆ ಅಪ್ಪಯ್ಯ ಭಾಗವತಿಕೆ ಮಾಡಿದ ನಂತರ, ಶಂಭುಹೆಗಡೆಯವರಿಗೆ ಅಪ್ಪಯ್ಯ ಪದ್ಯ ಹೇಳಿದ್ದು ನನಗೆ ತಿಳಿದೇ ಇಲ್ಲ” ಎಂದೆ. ಆದರೆ ಅದಕ್ಕೆ ಅಪವಾದವೆಂಬಂತೆ ಒಮ್ಮೆ ಎಡನೀರು ಸ್ವಾಮಿಯವರ ಭಾಗವತಿಕೆಗೆ ಶಂಭು ಹೆಗಡೆಯವರು ಮಾಡಿದ ಕಂಸವಧೆಯ ಕಂಸ, ಸಾಲ್ವ ಇತ್ಯಾದಿ ಆಟಗಳು ನನಗೆ ಜೋಯಿಸರ ಸಹಾಯದಿಂದ ಸಿಕ್ಕಿದ್ದವು. ಆದರೆ ಅಪ್ಪಯ್ಯ ಮತ್ತು ಶಂಭುಹೆಗಡೆಯವರು ಇರುವ ಒಂದೇ ಒಂದು ಫೋಟೋ ಸುಜಿಯೀಂದ್ರ ಹಂದೆ ಒಮ್ಮೆ ನನಗೆ ಕಳಿಸಿ ಕೊಟ್ಟಿದ್ದ. ಅದು ಸುಮಾರು 1968 ರ ಸಾಲಿಗ್ರಾಮ ಮೇಳದಲ್ಲಿ ಕೆರೆಮನೆಯ ಕಲಾವಿದರು, ಅಪ್ಪಯ್ಯ ಒಟ್ಟಿಗೇ ಇದ್ದ ಕಾಲದ್ದೇ ಇರಬೇಕು. ಆದ್ದರಿಂದ ನಾನು ಅಂತಹ ಆಡಿಯೋ ಇರಲು ಸಾಧ್ಯವೇ ಇಲ್ಲ ಎಂದೆ. ಆದರೂ “ನೀವು ಒಂದು ಹಾರ್ಡ್ ಡಿಸ್ಕ್ ಖರೀದಿಸಿ ಇಟ್ಟುಕೊಳ್ಳಿ. ನಾನೇ ನಿಮ್ಮ ಮನೆಗೆ ಬಂದು ಅದಕ್ಕೆ ಹಾಕಿಕೊಡುತ್ತೇನೆ” ಎಂದೆ.

ಅವರನ್ನು ಅಂದು ಕಳಿಸಿಕೊಟ್ಟರೂ ನನಗೆ ರಾತ್ರಿ ನಿದ್ದೆ ಬರಲಿಲ್ಲ ಅಪ್ಪಯ್ಯನ ಪದ್ಯಕ್ಕೆ, ಬ್ರಹ್ಮಕಪಾಲದಲ್ಲಿ ಶಂಭು ಹೆಗಡೆಯವರ ಈಶ್ವರನ ಅಭಿನಯವೇ ಕಣ್ಣಮುಂದೆ ಬರುತ್ತಿತ್ತು. ಅದು ಹೇಗಿರಬಹುದು? ಎಂದು ಕಲ್ಪಸಿಕೊಳ್ಳುತ್ತಾ ಬೆಳಗು ಮಾಡಿದೆ. ಮತ್ತೆ ನನಗೆ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಮರುದಿನವೇ, ಅವರಿಗೆ ಫೋನ್ ಮಾಡಿ ಬರುತ್ತಿದ್ದೇನೆ ಎಂದು ತಿಳಿಸಿ, ಹೊರಟುಬಿಟ್ಟೆ. ನಾನು ಹೋದಾಗ ಆಗಲೇ ಅಲ್ಲಿ ಔಷಧಕ್ಕೆಂದು ಬಂದು ತುಂಬಿದ್ದ ಹತ್ತಾರು ಜನರನ್ನು ಬಿಟ್ಟು ಅವರು, ನನ್ನನ್ನು ಒಳಗಿನ ಒಂದು ರೂಮಿಗೆ ಕರೆತಂದು ಕುಳ್ಳಿರಿಸಿ, ಒಂದಷ್ಟು ಫೈಲ್ ಗಳನ್ನು ಕೊಟ್ಟು ನೋಡಿ ಅಂದರು. ನಾನು “ಆ ಆಡಿಯೋವನ್ನು ಮೊದಲು ತೋರಿಸಿ” ಅಂದು ಕೇಳಿದೆ. ಹುಡುಕಿ ಕೊಟ್ಟರು. ಅದು ಶಂಭುಹೆಗಡೆಯವರಿಗೆ ಕೆಪ್ಪೆಕೆರೆಯವರು ಹಾಡಿದ ಬ್ರಹ್ಮಕಪಾಲ ಪ್ರಸಂಗದ ಆಟದ ನೇರ ರೆಕಾರ್ಡ್ ಆಗಿತ್ತು. ಅದರೆ ಆ ಫೈಲಿನಲ್ಲಿ ಉಪ್ಪೂರ್ ಶಂಭು ಹೆಗಡೆ ಎಂದು ಬರೆದಿದ್ದರು ಅಷ್ಟೆ.  ಕೆಪ್ಪೆಕೆರೆಯವರ ಸ್ವರ ಆಗ ಅಪ್ಪಯ್ಯನ ಸ್ವರವನ್ನೇ ತುಂಬಾ ಹೋಲುತ್ತಿತ್ತು. ಅವರ ಸಂಗ್ರಹವನ್ನು ಒಂದೊಂದೇ ನೋಡುತ್ತಾ ಹೋದೆ.

ಅವರಲ್ಲಿ ಶಿವರಾಮ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರ, ಹಾಗೂ ಕೆರೆಮನೆ ಮೇಳದ ಹಲವು ಹಳೆಯ ಕಾಲದ ಉತ್ತಮ ಸ್ಥಿತಿಯಲ್ಲಿರುವ ಫೋಟೋಗಳು, ಲೇಖನಗಳು ಇದ್ದವು. ಕಾಗದ ಹಳೆಯದಾಗಿ ಮಸುಕಾಗಿದ್ದ ಫೋಟೋ, ಬರಹಗಳನ್ನು ಲ್ಯಾಮಿನೇಶನ್ ಮಾಡಿ ಇಟ್ಟುಕೊಂಡಿದ್ದರು. 1966 -67 ರ ಸಮಯದ ಶಿವರಾಮ ಕಾರಂತರು ಬ್ಯಾಲೆ ಮಾಡುವಾಗ ಅಪ್ಪಯ್ಯ ಹಾಡುವ ಒಂದು ಅಪರೂಪದ ಫೋಟೋ ಕಂಡು ನನಗೆ ರೋಮಾಂಚನವಾಯಿತು. ಸುಮಾರು ಅದೇ ಕಾಲದ ಮತ್ತು ನಂತರದ ಅಪ್ಪಯ್ಯನ ಹೆಸರು ಇರುವ ಕಾರಂತರ ಆಟದ ಪುಸ್ತಕಗಳೂ, ಹ್ಯಾಂಡ್ ಬಿಲ್ಲುಗಳನ್ನೂ ಅವರು ಜೋಪಾನವಾಗಿ ಇಟ್ಟುಕೊಂಡಿದ್ದರು. ನನಗೆ ತುಂಬಾ ಖುಷಿಯಾಯಿತು. ಅದನ್ನೆಲ್ಲ ತಂದು ಪ್ರತಿಮಾಡಿಕೊಂಡು, ಅವರ ಹಾರ್ಡ್ ಡಿಸ್ಕ್ ಗೆ ನನ್ನ ಅನೇಕ ಸಂಗ್ರಹವನ್ನು ಹಾಕಿಕೊಟ್ಟೆ. ನಂತರವೂ ಅವರಿಗೆ ಆಗಾಗ ನನಗೆ ಸಿಕ್ಕಿದ ಆಡಿಯೋ ವಿಡಿಯೋಗಳನ್ನು ಅವರ ಕೋರಿಕೆಯ ಮೇರೆಗೆ ಅವರ ಹಾರ್ಡ್ ಡಿಸ್ಕ್ ಗೆ ಹಾಕಿ ಕೊಡುತ್ತಿದ್ದೆ.

(ಮುಂದುವರಿಯುವುದು)

ಬುಧವಾರ, ನವೆಂಬರ್ 15, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 56

ಉದಯವಾಣಿ ಪೇಪರಲ್ಲಿ ಒಮ್ಮೆ, ಪೆರ್ಲ ರಾಮಚಂದ್ರ ಭಟ್ಟರು ಎನ್ನುವ ಒಬ್ಬ ಯಕ್ಷಗಾನದ ಹಳೆಯ ಕ್ಯಾಸೆಟ್ ಸಂಗ್ರಹಕಾರರ ಬಗ್ಗೆ ಒಂದು ಲೇಖನ ಬಂದಿತ್ತು. ಲೇಖನದ ಕೊನೆಯಲ್ಲಿ ಅವರ ಫೋನ್ ನಂಬರ್ ಸಹ ಕೊಟ್ಟಿದ್ದರು. ನಾನು ’ನೋಡುವ’ ಎಂದು ಆ ನಂಬರಿಗೆ ಫೋನ್ ಮಾಡಿ, ನನ್ನ ಪರಿಚಯ ಹೇಳಿಕೊಂಡು, ನನ್ನ ತಂದೆಯವರ ಯಾವುದಾದರೂ ಸಂಗ್ರಹ ನಿಮ್ಮಲ್ಲಿ ಇದೆಯೇ? ಎಂದು ಕೇಳಿದೆ. ಅವರು ಬಹಳ ಚೆನ್ನಾಗಿಯೇ ಮಾತನಾಡಿ, “ನಿಮ್ಮಲ್ಲಿ ಯಾವ ಯಾವ ಸಂಗ್ರಹ ಇದೆ?” ಎಂದು ಕೇಳಿದರು. ನಾನು ಹೇಳಿದೆ. ಅವರು “ನಮ್ಮ ಮನೆ ಎಲ್ಲಿ? ಉಡುಪಿಯಿಂದ ಎಷ್ಟು ದೂರ?” ಎಂಬುದನ್ನೆಲ್ಲಾ ಕೇಳಿ ತಿಳಿದುಕೊಂಡರು. ನಾನು ಅವರಲ್ಲಿ ನಮ್ಮ ಅಪ್ಪಯ್ಯನದ್ದು ಅಂತಹ ಯಾವ ದಾಖಲೆಯೂ ಇಲ್ಲ, ತೆಂಕಿನವರದ್ದೇ ಹೆಚ್ಚಿಗೆ ಇರುವುದು ಎಂದು ತಿಳಿದುಕೊಂಡು ಅದನ್ನು ಮರೆತು ಬಿಟ್ಟೆ.

ಒಂದು ದಿನ ಭಾನುವಾರ ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಮಲಗಿದ್ದೆ. ಯಾರೋ ನಮ್ಮ ಮನೆಯ ಗೇಟಿನಲ್ಲಿ ನಿಂತು ಇದು “ಉಪ್ಪೂರರ ಮನೆಯೇ?” ಎಂದು ಕೇಳಿದರು. ನಾನು ಹೊರಗೆ ಬಂದು, “ಹೌದು. ನೀವು ಯಾರು ಗೊತ್ತಾಗಲಿಲ್ಲ. ಬನ್ನಿ” ಎಂದು ಒಳಗೆ ಕರೆದೆ. ಅವರು ಒಬ್ಬ ವಯೋವೃದ್ಧರು, ತಲೆಕೂದಲು ಕೆದರಿತ್ತು. ಪಂಚೆ ಉಟ್ಟು ಅದನ್ನುಎತ್ತಿ ಕಟ್ಟಿದ್ದರು, ಬಗಲಲ್ಲಿ ಒಂದು ಉದ್ದದ ಬಟ್ಟೆಯ ದೊಗಲೆ ಚೀಲ, ಬಾಯಿಯ ತುಂಬ ಬೀಡ, ಆರಾಮವಾಗಿ ಒಳಬಂದು ಸೋಫಾದಲ್ಲಿ ಕುಳಿತರು. ನಾನು, ಪರಿಚಯವಾಗಲಿಲ್ಲ ಎಂದು ಮುಖಮುಖ ನೋಡಿದೆ. “ನೀವು ಮೊನ್ನೆ ಫೋನ್ ಮಾಡಿದ್ದೀರಲ್ಲ. ಆ ರಾಮಚಂದ್ರ ಭಟ್ಟ ನಾನೆ” ಎಂದರು. ನನಗೆ ಅವರ ಸಂಗ್ರಹದ ಆಸಕ್ತಿಯನ್ನು ಕಂಡು ಬೆರಗಾಗಿ ಹೋಯಿತು. ಅವರೊಬ್ಬ ರಿಟೈರ್ಡ ಮಾಸ್ತರರು. ಅವರ ಚೀಲದಲ್ಲಿ ಒಂದಷ್ಟು ಶೇಣಿಯವರ ಹಳೆಯ ಅಮೂಲ್ಯವಾದ ಆಡಿಯೋ ಸಂಗ್ರಹಗಳಿದ್ದುವು. ಅವರಲ್ಲಿ ಇರುವ ಕ್ಯಾಸೆಟ್ ಗಳು, ಸಿಡಿಗಳು, ವಿಡಿಯೋಗಳ ಹೆಸರುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಕ್ರಮವಾಗಿ, ಪ್ರಸಂಗದ ಹೆಸರು, ಭಾಗವತರು, ಮುಖ್ಯ ಕಲಾವಿದರ ಹೆಸರುಗಳನ್ನು ಬರೆದಿಟ್ಟುಕೊಂಡಿದ್ದರು. ಅವರ ಸಂಗ್ರಹ ಆಗಲೇ ಸಾವಿರಕ್ಕೂ ಮೇಲೆ ಇದ್ದಿರಬಹುದು. ನನ್ನಲ್ಲಿದ್ದ ಸಂಗ್ರಹಗಳನ್ನು ಅವರಿಗೆ ಡಿವಿಡಿಯಲ್ಲಿ ಹಾಕಿ ಕೊಡಲು ತಿಳಿಸಿದರು. ನಾನು ಪ್ರಸಂಗದ ಹೆಸರು ಹೇಳಿ “ಇದು ಉಂಟಾ?” ಎಂದು ಕೇಳುತ್ತಾ, ಅವರಲ್ಲಿ ಇಲ್ಲದ್ದನ್ನು ಪ್ರತಿಮಾಡಿ ಕೊಟ್ಟೆ. ಮತ್ತು ಅವರ ಸಂಗ್ರಹವನ್ನು ನೋಡಿ ಬೇಕಾದುದನ್ನು ಪಡೆದುಕೊಳ್ಳಲು, “ನಾನೇ ನಿಮ್ಮ ಮನೆಗೆ ಒಮ್ಮೆ ಬರುತ್ತೇನೆ” ಎಂದು, ಆ ದಿನ ಅವರನ್ನು ನಮ್ಮ ಮನೆಯಲ್ಲಿಯೇ ಉಳಿಸಿಕೊಂಡು, ಮರುದಿನ ಕಳಿಸಿಕೊಟ್ಟೆ. ಮತ್ತೊಮ್ಮೆ ಕಾಸರಗೋಡಿನ ಹತ್ತಿರದ ಬನ್ನತ್ತಡ್ಕ ಎಂಬಲ್ಲಿರುವ  ಅವರ ಮನೆಯನ್ನು ಹುಡುಕಿಕೊಂಡು ಕಾರಿನಲ್ಲಿ ಹೋಗಿದ್ದೆ. ಬೆಳಿಗ್ಗಿನಿಂದ ಸಂಜೆಯವರೆಗೂ ಅವರ ಸಂಗ್ರಹವನ್ನು ನೋಡಿ, ನನಗೆ ಬೇಕಾದುದನ್ನು ನನ್ನ ಹಾರ್ಡ್ ಡಿಸ್ಕ್ ಗೆ ಹಾಕಿಕೊಂಡು ಬಂದೆ. ಆದರೆ ಅವರ ಸಂಗ್ರಹ ತುಂಬಾ ಇದ್ದು, ಅವರ ಮನೆಯ ಎರಡೆರಡು ರೂಮಿನಲ್ಲಿ ಅಲ್ಲಲ್ಲಿ ಜೋಡಿಸಿ ಇಟ್ಟಿದ್ದರು. ನನಗೆ ಪೂರ್ತಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಆದಷ್ಟು ನನ್ನ ಹಾರ್ಡ್ ಡಿಸ್ಕಿನಲ್ಲಿ ಹಾಕಿಕೊಂಡು ಬಂದೆ.

ಜೋಯಿಸರು, “ಅಪ್ಪಯ್ಯನ ವಿಡಿಯೋಗಳು ಇಲ್ಲವೇ” ಎಂದು ಆಗಾಗ ಕೇಳುತ್ತಿದ್ದರು. ಒಂದು ಬಬ್ರುವಾಹನ ಕಾಳಗ ಮಾತ್ರ ಇದ್ದದ್ದು ನೆನಪಾಗಿ “ರಮೇಶಣ್ಣಯ್ಯ ಇರುವಾಗ ಅದನ್ನು ಪ್ರತಿಮಾಡಿ ಇಟ್ಟಿದ್ದು, ನಾನೂ ನೋಡಿದ ನೆನಪಿತ್ತು. ಆದರೆ ಅದು ಮತ್ತೆ ಸಿಗಲಿಲ್ಲ” ಎಂದೆ. ಅವರು ಅಷ್ಟಕ್ಕೇ ಬಿಡಲಿಲ್ಲ. ಶುಂಠಿ ಸತ್ಯನಾರಾಯಣ ಭಟ್ ಎನ್ನುವವರನ್ನು ಕ್ಯಾಸೆಟ್ಟಿಗಾಗಿ ಮಾತಾಡಿಸುವಾಗ, ಅವರ ಹತ್ತಿರ, “ಆ ವಿಡಿಯೋದ ಬಗ್ಗೆ ಗೊತ್ತುಂಟಾ?” ಎಂದು ಕೇಳಿದರು. ಅವರು ನೆನಪು ಮಾಡಿಕೊಂಡು “ಬೆಂಗಳೂರಿನಲ್ಲಿ ವೈಕುಂಠ ಕಾರಂತರೆನ್ನುವವರ ಮೊಮ್ಮಗ ಮುರಳೀಧರ ಕಾರಂತರೆನ್ನುವವರ ಉಪನಯನದಲ್ಲಿ ಆದ ವಿಡಿಯೋ ಅದು. ತಾನು ನೋಡಿದ್ದೇನೆ” ಅಂದರು. ಜೋಯಿಸರು ತಡಮಾಡಲಿಲ್ಲ. ಬೆಂಗಳೂರಿನ ಕೃಷ್ಣಮೂರ್ತಿ ಅಣ್ಣಯ್ಯನ ಫೋನ್ ನಂಬರನ್ನು ನನ್ನಿಂದಲೇ ಪಡೆದು ಅವನಿಗೆ ಫೋನ್ ಮಾಡಿ ಅದನ್ನು ಹುಡುಕಲು ಹೇಳಿದರು. ನಾನದರ ಆಸೆಯನ್ನೇ ಬಿಟ್ಟಿದ್ದೆ.

ಕೃಷ್ಣಮೂರ್ತಿ ಅಣ್ಣನಿಗೆ ಮುರಳೀಧರ ಕಾರಂತರ ಪರಿಚಯವಿತ್ತು. ಅವರ ಮನೆಗೆ ಹೋಗಿ, “ಹೀಗೆ ಮುವ್ವತ್ತು ವರ್ಷದ ಕೆಳಗೆ, ನಿಮ್ಮ ಉಪನಯನದಲ್ಲಿ ಮಾಡಿದ ವಿಡಿಯೋ ಇದೆಯೇ?” ಎಂದು ಕೇಳಿದ. ಅವರಿಗೆ ಅದು ಇದೆಯೋ ಇಲ್ಲವೋ ಎಂದೂ ಗೊತ್ತಿರಲಿಲ್ಲ. ಕೊನೆಗೆ ಮನೆಯಲ್ಲೆಲ್ಲಾ ಹುಡುಕಿದಾಗ ಉಪನಯನ ಕಾರ್ಯಕ್ರಮದ ಮಾಸ್ಟರ್ ಪ್ರತಿಯೇ ಸಿಕ್ಕಿಬಿಟ್ಟಿತು. ಅದರ ಮಹತ್ವ ಅವರಿಗೆ ಗೊತ್ತಿರಲಿಲ್ಲ. “ಬೇಕಾದರೆ ತೆಗೆದುಕೊಂಡು ಹೋಗಿ” ಎಂದು ಕೊಟ್ಟುಬಿಟ್ಟರು. ಅದನ್ನು ಡಿವಿಡಿಗೆ ಪರಿವರ್ತಿಸಿ ಅಣ್ಣ ನಮಗೆ ಕಳಿಹಿಸಿಕೊಟ್ಟ. ಅದರಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯರ ಬಬ್ರುವಾಹನ, ಕೋಟ ವೈಕುಂಠನ ಚಿತ್ರಾಂಗದೆ, ಕೊಳಗಿ ಅನಂತ ಹೆಗಡೆಯವರ ಅರ್ಜುನ ಹಾಗೂ ಮೊದಲಿಗೆ ಧಾರೇಶ್ವರ, ಮಧ್ಯದಲ್ಲಿ ಕಾಳಿಂಗ ನಾವಡರು ಕೊನೆಯಲ್ಲಿ ಅಪ್ಪಯ್ಯ ಹಾಡಿದ್ದರು. ಅಂತೂ ಜೋಯಿಸರ ಉಮೇದಿನಿಂದ ಅಡಿಗೆ ಬಿದ್ದು ಕಾಲಗರ್ಭದಲ್ಲಿ ಸೇರಿಹೋದ ಮತ್ತೊಂದು ದಾಖಲೆಯು, ಮೇಲೆ ಬಿದ್ದು ನಮಗೆಲ್ಲಾ ಅಪ್ಪಯ್ಯನನ್ನು ಅದರಲ್ಲಿ ಕಣ್ತುಂಬಾ ನೋಡುವ ಹಬ್ಬವಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿಯೂ ಜೋಯಿಸರಿಗೆ ಕೆಲವು ಹಳೆಯ ವಿಡಿಯೋಗಳು ಸಿಕ್ಕಿದವು. ಕುಂಬ್ಳೆ ಕಡೆಯ ಜಯರಾಮ ಭಟ್ ಎನ್ನುವವರು ಶಂಭುಹೆಗಡೆಯವರ ಎರಡು ವಿಡಿಯೋಗಳನ್ನು ಕೊಟ್ಟರು. ಮಹಾಬಲೇಶ್ವರ ಗಡಿಕ್ಕಾಯ್, ದತ್ತು ಸೋಮಸಾಗರರವರಿಂದಲೂ ಹಳೆಯ ದಾಖಲೆಗಳೂ ಸಿಕ್ಕಿದವು. ಕುಂದಾಪುರದ ಎಂ. ಎಂ. ಹೆಗ್ಡೆಯವರ ಮನೆಯಲ್ಲಿ, ಸಾಸ್ತಾನದ ನರಸಿಂಹ ಭಟ್ಟರಲ್ಲಿ ಅಲ್ಲಿ ಇಲ್ಲಿ ಅಂತ ಎಷ್ಟೋ ನಾವುಡರ, ಶಂಭುಹೆಗಡೆಯವರ ಆಡಿಯೋ ವಿಡಿಯೋಗಳನ್ನು  ಪಡೆದಾಯಿತು. ಇನ್ನೂ ಹಲವಾರು ಮಂದಿ “ನನ್ನ ಹತ್ತಿರವೂ ಕೆಲವು ಹಳೆಯ ಕ್ಯಾಸೆಟ್ ಗಳಿವೆ ಈಗ ಅವುಗಳನ್ನು ಉಪಯೋಗಿಸುತ್ತಿಲ್ಲ. ಬೇಕಾದರೆ ನೋಡಿ” ಎಂದು ಕೊರಿಯರ್ ನಲ್ಲಿ ಅಥವ ನನ್ನ ಮನೆಯನ್ನು ಹುಡುಕಿಕೊಂಡು ಬಂದು ಕೊಟ್ಟರು. ಸಕಲೇಶಪುರದ ವೈಕುಂಠ ಐತಾಳರು, ಸಹ ಅವರೇ ಅವರ ಮನೆಯಲ್ಲಿ ಅಪ್ಪಯ್ಯ ಹೋಗಿದ್ದಾಗ ರೆಕಾರ್ಡ್ ಮಾಡಿದ ಕೆಲವು ಕ್ಯಾಸೆಟ್ ಗಳನ್ನು ತಂದುಕೊಟ್ಟರು. ಬೆಂಗಳೂರಿನ ವಿನಯ ರಾಜೀವ ಎನ್ನುವ ಒಬ್ಬನ ಹತ್ತಿರವೂ ಅಪ್ಪಯ್ಯನ ಕೆಲವು ಪೋಟೋಗಳಿದ್ದವು. ನಾನು ಅವುಗಳನ್ನು ಸಂಗ್ರಹ ಮಾಡುತ್ತಿದ್ದೇನೆ ಎಂದು ತಿಳಿದುಕೊಂಡ ಅವನು ಅದನ್ನೂ ಕಳಿಸಿಕೊಟ್ಟ. ಮಟ್ಟಿ ಸುಬ್ರಾಯರು ಎನ್ನುವ ಒಬ್ಬ ದೊಡ್ಡ ತಾಳಮದ್ದಲೆ ಅರ್ಥದಾರಿಗಳ ಮಗ, ಹರೀಶರೂ ಒಮ್ಮೆ ನನ್ನ ಮನೆಗೆ ಬಂದವರು ಅವರ ಅಪ್ಪಯ್ಯನ ಹಲವು ಆಡಿಯೋ ವಿಡಿಯೋವನ್ನು ನೀಡಿ ನನ್ನ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಮುದ್ರಾಡಿಯಲ್ಲಿರುವ ಸತ್ಯಾಶ್ರಯ ಕಲ್ಕೂರರು ಜಾನುವಾರು ಕಟ್ಟೆ ಮತ್ತು ಗೋರ್ಪಾಡಿಯವರು ಹಾಡಿದ ಅವರ ತಂದೆಯವರ ನಿರೂಪಣೆಯಿರುವ ಕ್ಯಾಸೆಟ್ ಗಳನ್ನು ತಂದು ಕೊಟ್ಟರು.

ಬೊಂಬಾಯಿಯಲ್ಲಿ ಬಾಬಣ್ಣ ಹಂದೆಯವರು, ನಾನು ಅಪ್ಪಯ್ಯನ ಕ್ಯಾಸೆಟ್ ಗಳನ್ನು ಎಂಪಿತ್ರಿ ಮಾಡಿ ಇಟ್ಟುಕೊಂಡಿದ್ದೇನೆ ಎಂಬ ವಿಷಯವನ್ನು ತಿಳಿದುಕೊಂಡು, ಅವರು ಅಪ್ಪಯ್ಯ ಮತ್ತು ಕಾಳಿಂಗ ನಾವಡರು ಬೊಂಬಾಯಿಗೆ ಬಂದಿದ್ದಾಗ ರೆಕಾರ್ಡ್ ಮಾಡಿದ ಕ್ಯಾಸೆಟ್ ಗಳನ್ನು ತಂದುಕೊಟ್ಟರು. ಅದನ್ನೂ ಎಂಪಿತ್ರಿ ಮಾಡಿಕೊಟ್ಟೆ. ಕಾರ್ಕಳದ ಸದಾನಂದ ನಾಯಕರೆನ್ನುವವರೂ ಅವರಲ್ಲಿದ್ದ ಆಗ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಆಗುತ್ತಿದ್ದ ಅಪ್ಪಯ್ಯ ಮತ್ತು ನಾವಡರು ಇದ್ದ ತಾಳಮದ್ದಲೆಯ ಕ್ಯಾಸೆಟ್ ಗಳನ್ನು ತಂದುಕೊಟ್ಟರು.

 (ಮುಂದುವರಿಯುವುದು)

ಮಂಗಳವಾರ, ನವೆಂಬರ್ 14, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 55

ಮತ್ತೆ ಯಾರಾದರೂ ಅಪ್ಪಯ್ಯನ ಹಾಡಿನ ಕ್ಯಾಸೆಟ್ ಸಂಗ್ರಹವಿದ್ದವರು ಇದ್ದಾರೆಯೇ? ಎಂದೆ. ಅವರು ಪೇಟೇಸರ ಶ್ರೀಕಾಂತ ಹೆಗಡೆಯವರು ಅಂತ ಒಬ್ಬರಲ್ಲಿ ಇರಬಹುದು, ಆದರೆ ಅದು ತುಂಬಾ ದೂರ ಆಯಿತು ಎಂದರು. ನಮಗೆ ಏನು ಮಾಡುವುದು ಗೊತ್ತಾಗಲಿಲ್ಲ. ಇಷ್ಟು ದೂರ ಬಂದು ಸುಮ್ಮನೇ ಬರಿಗೈಯಲ್ಲಿ ಹೋಗುವುದಾಯಿತಲ್ಲ ಎಂದು ದುಃಖವಾಯಿತು. ಮೂರು ಮೂರುವರೆಯ ಹೊತ್ತಿಗೆ  ಸುಬ್ರಾಯ ಭಟ್ಟರಿಂದ ಪುನಹ ಪೋನ್ ಬಂತು. ಅವರು, ಅವರ ಕೆಲಸವನ್ನು ಬೇರೆಯವರಿಗೆ ವಹಿಸಿದ್ದು, “ಉಪ್ಪೂರರನ್ನು ಕರೆದುಕೊಂಡು ಈಗಲೇ ಬನ್ನಿ” ಎಂದು ತಿಳಿಸಿದರು. ನಾವು ಒಮ್ಮೆಲೆ ಆದ ಬದಲಾವಣೆಗೆ ಹರ್ಷಿತರಾಗಿ ಸಡಗರದಿಂದ ತಿಮ್ಮಪ್ಪ ಭಾಗವತರನ್ನು ಕರೆದುಕೊಂಡು ಗಡಿಗೆಹೊಳೆ ಸುಬ್ರಾಯ ಭಟ್ಟರ ಮನೆಗೆ ಹೋದೆವು.

ಅಲ್ಲಿ ಹೋಗಿ ನೋಡುವಾಗ, ಅವರ ಕ್ಯಾಸೆಟ್ ಗಳ, ಸಿ.ಡಿ.ಗಳ ರಾಶಿಯಲ್ಲಿ ಹುಡುಕಿ, ಅವರು ನನ್ನ ಅಪ್ಪಯ್ಯ ಇರುವ ರುಕ್ಮಾಂಗದ ಚರಿತ್ರೆ, ಭೀಷ್ಮ ವಿಜಯ, ವಾಲಿವಧೆ ಕರ್ಣಾರ್ಜುನ ಮುಂತಾದ ಇಪ್ಪತ್ತು ಸಿ.ಡಿ.ಗಳನ್ನು ಪ್ರತ್ಯೇಕಿಸಿ ನಮಗಾಗಿ ಕಾಯುತ್ತಾ ಕುಳಿತಿದ್ದರು. ನಾನು ಹೋದವನೇ ಅವರು ಕೊಟ್ಟ ಸಿ.ಡಿ.ಗಳನ್ನು ಒಂದೊಂದಾಗಿ ನನ್ನ ಮಗನಿಗೆ  ಕೊಟ್ಟು ಲ್ಯಾಪ್ಟಾಪ್ ಗೆ ವರ್ಗಾಯಿಸಲು ತಿಳಿಸಿದೆ. ಅವನು ಶುರುಮಾಡಿದ. ಆದರೆ ಆಗಲೇ ಐದು ಗಂಟೆಯಾಗುತ್ತಾ ಬಂದಿತ್ತು. ಒಂದೊಂದು ಸಿ.ಡಿ.ಗೂ ಹತ್ತು ಹದಿನೈದು ನಿಮಿಷ ಬೇಕಿತ್ತು. ಮಧ್ಯ ಮಧ್ಯ ಸುಬ್ರಾಯ ಭಟ್ಟರು, ಅದು ಚಂದ ಇದೆ, ಈ ಹಾಡನ್ನು ಉಪ್ಪೂರರು ಹೇಳಿದ್ದು ಕೇಳಿ, ಅಂತ ಕೆಲವು ಪದ್ಯಗಳನ್ನೂ ಹಾಕಿ ಕೇಳಲು ಒತ್ತಾಯಿಸುತ್ತಿದ್ದರು. ಕೊನೆಗೆ ಅವರಲ್ಲಿ ಬೇರೆ ಸಿ.ಡಿ. ಇದೆಯಾ ಅಂತ ಕೇಳಿದೆ. ಅವರಿಗೆ ಅಂತ ತಂದಿಟ್ಟ ನಾಲ್ಕಾರು ಸಿ.ಡಿ.ಗಳನ್ನು ಕೊಟ್ಟರು. ನಾನೂ ಗಡಿಗೆಹೊಳೆಯವರ ಕಂಪ್ಯೂಟರ್ ನಲ್ಲಿ ಕೆಲವಷ್ಟನ್ನು ಆ ಸಿ.ಡಿ.ಗೆ ಹಾಕತೊಡಗಿದೆ. ಈ ಮಧ್ಯದಲ್ಲಿ ನನ್ನ ಹತ್ತಿರವಿದ್ದ ಸಂಗ್ರಹವನ್ನೂ ಅವರಿಗೆ ಕೊಡಬೇಕಾಗಿತ್ತು.

ಅವರು ಬಹಳ ಕಾಲದಿಂದ ಮಾಡಿಕೊಂಡು ಬಂದ ಸಂಗ್ರಹವದು. ಅಲ್ಲದೇ ಅವರು ರೆಕಾರ್ಡ್ ಮಾಡಿದ್ದ ಎಲ್ಲ ಕ್ಯಾಸೆಟ್ ಗಳನ್ನು ಯಾರಿಂದಲೋ ಎಂಪಿತ್ರಿಗೆ ಪರಿವರ್ತಿಸಿ ತುಂಬಾ ಹಣವನ್ನೂ ಖರ್ಚು ಮಾಡಿದ್ದರು. ನನಗೆ ಕೇಳಲು ದಾಕ್ಷಿಣ್ಯವಾಗಿ “ಇದಕ್ಕೆ ಏನಾದರೂ ಕೊಡಬೇಕೇ?” ಎಂದು ಕೇಳಿದೆ. ಅವರು “ಬೇಡಪ್ಪ, ನಿಮ್ಮ ಹತ್ತಿರ ದುಡ್ಡು ತೆಗೆದುಕೊಳ್ಳುವುದೇ? ನಿಮ್ಮ ಅಪ್ಪಯ್ಯನದ್ದೇ ಅಲ್ಲವೇ?” ಎಂದು ಔದಾರ್ಯ ತೋರಿದರು. ಕೊನೆಗೆ ಅವರ ಖಾಲಿ ಸಿ.ಡಿ.ಯ ಹಣವನ್ನು ಮಾತ್ರ ಕೊಟ್ಟು ಕೃತಜ್ಞತೆ ಹೇಳಿದೆ. ಸಂಜೆ ಏಳುವರೆ ಹೊತ್ತಿಗೆ ಎಲ್ಲವೂ ಮುಗಿಯಿತು ಅಂತಾಗಿ, ಅವರ ಮನೆಯಲ್ಲಿ ಕಾಫಿತಿಂಡಿಯನ್ನು ತಿಂದು ತಿಮ್ಮಪ್ಪ ಭಾಗವತರನ್ನು ಅವರ ಮನೆಗೆ ಬಿಟ್ಟು, ರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ ಉಡುಪಿಗೆ ಬಂದು ಮನೆಯನ್ನು ತಲುಪಿದೆವು.

ಉತ್ತರಕನ್ನಡದ ಒಬ್ಬರು ಗಣೇಶ ಹೆಗಡೆ ಎನ್ನುವವರು ಅವರ ಮನೆಯ ಅಟ್ಟದ ಮೇಲಿದ್ದ ಎಲ್ಲ ಹಳೆಯ ಕ್ಯಾಸೆಟ್ ಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊರಿಯರ್ ಮಾಡಿದರು. ಯಲ್ಲಾಪುರದ ಪ್ರಸನ್ನ ಹೆಗಡೆ ಎನ್ನುವವರು ಪೆನ್ ಡ್ರೈವನ್ನು ಕಳಿಸಿ ಅವರ ದಾಖಲೆಯನ್ನು ಕಳಿಸಿಕೊಟ್ಟರು. ಬೆಂಗಳೂರಿನ ಅಭಿಜಿತ್ ಹೆಗಡೆಯವರು ಅವರ ಹಾರ್ಡ್ ಡಿಸ್ಕಿನಲ್ಲಿ ಅವರ ಸಂಗ್ರಹವನ್ನು ಕಳಿಸಿ ನನ್ನದನ್ನು ಪಡೆದುಕೊಂಡರು. ಹಾಗೆಯೇ ಸುಮಾರು ಅದೇ ಸಮಯದಲ್ಲಿ ನನಗೆ ಫೇಸ್ ಬುಕ್ ನಿಂದ ಪರಿಚಯವಾದ ಬೆಂಗಳೂರಿನ ರವಿ ಮೆಡೋಡಿ, ಎ. ಎನ್. ಹೆಗಡೆಯವರು, ನಾಗರಾಜ್ ಮತ್ತಿಗಾರರು, ಎಸ್. ಜಿ. ಭಾಗವತರೂ ಅವರಲ್ಲಿರುವ ದಾಖಲೆಗಳನ್ನು, ಇವುಗಳೂ ನಿಮ್ಮ ಭಂಡಾರದಲ್ಲಿರಲಿ ಎಂದು ನನಗೆ ಕೊಟ್ಟು ಸಹಕರಿಸಿದರು. ಪರ್ಕಳದ ಮುರಳಿ ಪ್ರಭು ಅನ್ನುವವರು ನಮ್ಮ ಮನೆಗೆ ಬಂದು ಅವರೇ ರೆಕಾರ್ಡ್ ಮಾಡಿದ ಗೀತಾಂಜಲಿ ಥಿಯೇಟರ್ ನಲ್ಲಿ ಆದ ಬಹಳ ಹಿಂದಿನ ಸುಧನ್ವ ಕಾಳಗ ಆಟವನ್ನು ನಮಗೆ ಕೊಟ್ಟರು. ಅದರಲ್ಲಿ ಮಹಾಬಲ ಹೆಗಡೆಯವರ ಸುಧನ್ವ ಮತ್ತು ಚಿಟ್ಟಾಣಿಯವರ ಅರ್ಜುನ ಮತ್ತು ಅಪ್ಪಯ್ಯನ ಭಾಗವತಿಕೆ ಇತ್ತು.

ಇದೇನಪ್ಪ ಅಲ್ಲಿಗೆ ಹೋದೆ, ಇಲ್ಲಿಗೆ ಬಂದೆ, ಹಳೇ ಕ್ಯಾಸೆಟ್ ಸಿಕ್ತು. ತಂದು ಕೊಟ್ರು ಇದೇ ಪುರಾಣ ಆಯ್ತಲ್ಲ. ಇದೆಂತಹಾ ನನ್ನೊಳಗಿನ ಕತೆ ಬೋರ್ ಹೊಡಿತಾ ಇದೆ ಅಂತ ಓದುವ ನಿಮಗೆ ಅನ್ನಿಸುವ ಮೊದಲು, ನನ್ನ ಒಂದು ಯಾತ್ರೆಯ ಕತೆಯನ್ನು ಈಗ ಹೇಳುತ್ತೇನೆ. ಕತೆಯೆಂದರೆ ಕಟ್ಟು ಕತೆಯಲ್ಲ ಮಾರಾಯ್ರೆ. ನಿಜವಾಗಿ ನಡೆದದ್ದೆ.

ಶಿವರಾತ್ರಿಯ ದಿನ ನಾವು ಪಂಚ ಶಂಕರನಾರಾಯಣ ಯಾತ್ರೆಯನ್ನು ಮಾಡುತ್ತಿದ್ದ ಕತೆ ಸ್ವಾರಸ್ಯವಾದುದೇನೂ ಅಲ್ಲದಿದ್ದರೂ ಅದನ್ನು ಸುಮಾರು ಏಳೆಂಟು ವರ್ಷದಿಂದ ಮಾಡುತ್ತಾ ಬಂದಿರುವೆನಾದ್ದರಿಂದ ಹೇಳಲೇ ಬೇಕಾಗುತ್ತದೆ. ಮಹಾ ಶಿವರಾತ್ರಿಯ ದಿನ, ನಾವು ಒಂದು ಏಳೆಂಟು ಜನ ಸೇರಿಕೊಂಡು ಮಾಡುತ್ತಾ ಬಂದ ಒಂದು ಮಹಾ ಯಾತ್ರೆಯ ಕತೆ ಅದು. ಮೊದಲಿನ ಕಾಲದಲ್ಲಿಯಾದರೆ ನಡೆದುಕೊಂಡೇ ಹೋಗಬೇಕಿತ್ತು. ಈಗಲಾದರೆ ಎಲ್ಲ ಕಡೆಗೂ ರಸ್ತೆ ಸೌಲಭ್ಯವಿದ್ದು ಕಾರೋ ಬೈಕೋ ಇದ್ದರೆ ಆಯಿತು. ಪಂಚ ಶಂಕರನಾರಾಯಣ ಯಾತ್ರೆ ಅಂದರೆ ಒಂದೇ ದಿನ ಶಂಕರನಾರಾಯಣದ ಆಸು ಪಾಸು ಒಂದು ಎಪ್ಪತ್ತೈದು ಕಿಲೋಮೀಟರ್ ಸುತ್ತಳತೆಯಲ್ಲಿ ಇರುವ ಹೊಳೆ ಶಂಕರನಾರಾಯಣ, ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ, ಆವರ್ಸೆ ಶಂಕರನಾರಾಯಣ ಮತ್ತು ನಮ್ಮ  ಶಂಕರನಾರಾಯಣ ದ ಶಂಕರನಾರಾಯಣ ಹೀಗೆ, ಐದು ಶಂಕರನಾರಾಯಣ ಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುವುದು. ಕ್ಷೇತ್ರ ಪುರಾಣದಲ್ಲಿ ಇರುವಂತೆ ಈ ಯಾತ್ರೆ ಮನುಷ್ಯಮಾಡಿದ ಸಕಲ ಪಾಪವನ್ನೂ ತೊಡೆದು ಹಾಕಿ, ರೋಗರುಜಿನಗಳನ್ನೂ ದೂರಮಾಡಿ ಶಾಂತಿ ನೆಮ್ಮದಿಯನ್ನು ಕೊಡುತ್ತದಂತೆ.

ಮಹಾಶಿವರಾತ್ರಿಯ ದಿನ ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ವೃತಧಾರಿಗಳಾಗಬೇಕು. ಮುಸುರೆ ತಿನ್ನಬಾರದು. ಆ ದಿನ ನಾವು ಹಾಗೆಯೇ ಇದ್ದು ಮೊದಲಿಗೆ ಸೌಡದ ಹತ್ತಿರ ಇರುವ, ವಾರಾಹಿ ನದಿಯ ಮಧ್ಯದ ಶಿವಗಂಗೆಯಲ್ಲಿ ಮುಳುಗು ಹಾಕಿ ಸ್ನಾನ ಮಾಡಿ ಬಂದು ಅಲ್ಲಿಯೇ ಹತ್ತಿರವಿರುವ ಸಾಂಬಸದಾಶಿವ ದೇವಸ್ಥಾನಕ್ಕೆ ಹೋಗಿ ದೇವರಿಗೆ ಜಲಾಭಿಷೇಕ ಮಾಡಿ ಭಕ್ತಿಯಿಂದ ಪೂಜಿಸಿ ಅರ್ಚಿಸುವೆವು. ಅಲ್ಲಿಂದ ಹೊರಟು ಶಂಕರನಾರಾಯಣಕ್ಕೆ ಬಂದು, ಅಲ್ಲಿಯ ಸರೋವರದಲ್ಲಿ ಮಿಂದು ಮಡಿಯಲ್ಲಿಯೇ ಶಂಕರನಾರಾಯಣ ಸ್ವಾಮಿಯ ದರ್ಶನವನ್ನು ಮಾಡಿ ಭಕ್ತಿಯಿಂದ ಪೂಜಿಸುವುದು. ನಂತರ ಅಲ್ಲಿಂದ ಹೊರಟು ಸಿದ್ದಾಪುರದಲ್ಲಿ ಎಡಕ್ಕೆ ತಿರುಗಿ ಹೊಳೆ ಶಂಕರನಾರಾಯಣವನ್ನು ತಲುಪಿ, ಅಲ್ಲಿಯ ಹೊಳೆಯಲ್ಲಿ ಮಿಂದು ಶುಚಿರ್ಭೂತರಾಗಿ ಶಂಕರನಾರಾಯಣ ನನ್ನು ಭಕ್ತಿಯಿಂದ ಅರ್ಚಿಸಿ, ಒಂದೆರಡು ಶ್ಲೋಕ ಭಜನೆಗಳನ್ನು ಮಾಡುವೆವು  ಅಲ್ಲಿಂದ ಒಳಮಾರ್ಗವಾಗಿ ಅಮವಾಸೆಬೈಲಿನ ಮೂಲಕ ಮಾಂಡವ್ಯ ಮುನಿಯು ತಪಸ್ಸು ಮಾಡಿ ಶಂಕರನಾರಾಯಣನನ್ನು ಪ್ರತ್ಯಕ್ಷೀಕರಿಸಿಕೊಂಡ ಮಾಂಡ್ವಿ ಶಂಕರನಾರಾಯಣಕ್ಕೆ ಹೋಗಿ ಅಲ್ಲಿ ಹರಿಯುವ ವಾರಾಹಿನದಿಯಲ್ಲಿ ಮಿಂದು ಧ್ಯಾನಾದಿಗಳನ್ನು ಪೂರೈಸಿ ಮಡಿಯಲ್ಲಿ ಶಂಕರನಾರಾಯಣ ಸ್ವಾಮಿಯ ದರ್ಶನವನ್ನು ಮಾಡಿ ಅಲ್ಲಿಯೂ ಪಾರಾಯಣ ಶ್ಲೋಕ ಭಜನೆಗಳನ್ನು ಮಾಡಿ ಧನ್ಯರಾಗುವೆವು. ಅಲ್ಲಿಂದ ಗೋಳಿಯಂಗಡಿ ಮಾರ್ಗವಾಗಿ ಬಂದು ಬೆಳ್ವೆಯನ್ನು ತಲುಪಿ, ಅಲ್ಲಿ ಕೊಡಪಾನದಿಂದ ಬಾವಿಯ ನೀರನ್ನು ಸೇದಿ ತಲೆಗೆ ಹೊಯ್ದುಕೊಂಡು ಮಡಿಯಲ್ಲಿ ಶಂಕರನಾರಾಯಣನ ದರ್ಶನ ಮಾಡಿ ಪೂಜಿಸುವೆವು. ಅಲ್ಲಿಯೂ ಭಜನೆ ಶ್ಲೋಕಗಳ ಸಲ್ಲಿಕೆಯಾಗಬೇಕು.

 ಮುಂದೆ ಅಲ್ಲಿಂದ ಹೊರಟು ಗೋಳಿಯಂಗಡಿಗೆ ಬಂದು, ಅಲ್ಲಿಂದ ಎಡಕ್ಕೆ ತಿರುಗಿ ವಂಡಾರು ಮಾವಿನಕಟ್ಟೆಯ ಮೂಲಕ ಆವರ್ಸೆಯನ್ನು ತಲುಪಿ ಅಲ್ಲಿಯೂ ಬಾವಿ ನೀರಿನ ಪುಣ್ಯೋದಕದಲ್ಲಿ ಮಿಂದು ಶುಚಿಯಾಗಿ ಶಂಕರನಾರಾಯಣನ ದರ್ಶನ ಮಾಡಿ, ಶ್ಲೋಕ ಭಜನೆಗಳಿಂದ ದೇವರ ಸ್ತುತಿ ಮಾಡಿ ತೃಪ್ತರಾಗುವುದು. ಅಲ್ಲಿಂದ  ಚೋರಾಡಿ ಮಾರ್ಗವಾಗಿ ಹಾಲಾಡಿಯಿಂದ ಶಂಕರನಾರಾಯಣಕ್ಕೆ ಬಂದು ಪುನಹ ಸರೋವರಕ್ಕಿಳಿದು ಸ್ನಾನವನ್ನು ಮಾಡಿ ದೇವರ ದರ್ಶನ ಮಾಡಿ ನಮ್ಮ ತೀರ್ಥಯಾತ್ರೆಯನ್ನು ಮುಗಿಸುತ್ತೇವೆ. ಅಲ್ಲಿಗೆ ಸುಮಾರು ಮೂರುವರೆ ನಾಲ್ಕುಗಂಟೆಯಾಗುತ್ತಿತ್ತು. ದೇವಸ್ಥಾನದಲ್ಲಿಯೇ ಸಿದ್ಧವಾಗಿರುತ್ತಿದ್ದ ಫಲಾಹಾರವನ್ನು ಮುಗಿಸಿ ಮನೆಗೆ ಬರುತ್ತಿದ್ದೆವು. ಆ ರಾತ್ರಿಯೂ ಉಪವಾಸ ಮಾಡಿ ಮಲಗಿದರೆ ಮರುದಿನಕ್ಕೆ ನಮ್ಮ ವೃತ ಮುಗಿಯಿತು ಅಂತ ಲೆಕ್ಕ. ಮುಂದಿನ ವರ್ಷ ನೀವೂ ಬಂದು ಕಂಪೆನಿ ಕೊಡಬಹುದು. ಈಗಾಗಲೇ ಹೀಗೆ ಪಂಚ ಶಂಕರನಾರಾಯಣ ಯಾತ್ರೆ ಮಾಡುವ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಅದೊಂದು ಅಪೂರ್ವವಾದ ಅನುಭವವೆಂದೇ ಹೇಳಬಹುದು.

(ಮುಂದುವರಿಯುವುದು)

ಸೋಮವಾರ, ನವೆಂಬರ್ 13, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 54

ಆಸ್ಪತ್ರೆಯಿಂದ ನಾನು ಕೋಟೇಶ್ವರದಲ್ಲಿರುವ ಶ್ರೀಧರಣ್ಣಯ್ಯನ ಮನೆಗೆ ಹೋದೆ. ಅಲ್ಲಿಂದಲೇ ಡಾ. ಯು. ಎಂ. ವೈದ್ಯರಿಗೆ ಫೋನ್ ಮಾಡಿ “ನನಗೆ ಹೀಗೆ ಹೀಗೆ ಆಗಿದೆ ಮರ್ರೆ. ಎಕಡು ಶುರುವಾಗಿ  ನಿಲ್ಲಲೇ ಇಲ್ಲ. ನೀವು ಒಂದು ವರ್ಷದ ಹಿಂದೆ ನನಗೆ ಒಂದು ಮಾತ್ರೆ ಬರೆದು ಕೊಟ್ಟಿದ್ದೀರಿ. ಅದರ ಹೆಸರು ಹೇಳಿದರೆ ನಾನು ಇಲ್ಲಿ ತೆಗೆದು ಕೊಂಡು ಬದುಕುತ್ತೇನೆ” ಎಂದೆ. ಅವರು ನನ್ನ ಅಮ್ಮ ಆಸ್ಪತ್ರೆಯಲ್ಲಿದ್ದಾಗ, ಅವಳಿಗೆ ಮದ್ದು ಕೊಟ್ಟು ಗುಣ ಮಾಡಿದವರು. ಒಳ್ಳೆಯ ಡಾಕ್ಟರು. ಚೆನ್ನಾಗಿಯೇ ಪರಿಚಯವಿತ್ತು. ಅವರು, “ಎದೆ ಮತ್ತು ಹೊಟ್ಟೆಯ ಮಧ್ಯದ ವಪೆ ಎಂಬ ಭಾಗ ಸರಿಯಾಗಿ ಕೆಲಸ ಮಾಡದಿದ್ದಾಗ ಈ ಎಕಡು ಕಾಯಿಲೆ ಬರುತ್ತದೆ. ಎಂದು, ಫೋನಿನಲ್ಲಿಯೇ ವಿವರಿಸಿ, “ಪೆರಿನಾರ್ಮ್” ಎಂಬ ಮಾತ್ರೆಯನ್ನು ತೆಗೆದುಕೊಳ್ಳಿ” ಎಂದು ಅದರ ಸ್ಪೆಲ್ಲಿಂಗನ್ನೂ ಹೇಳಿ, ಬರೆಸಿ ಅದನ್ನು ತೆಗೆದುಕೊಳ್ಳಲು ಹೇಳಿದರು. ಅದನ್ನು ತರಿಸಿ ಆ ರಾತ್ರಿಯೇ ತೆಗೆದುಕೊಂಡೆ. ರಾತ್ರಿ ಚೆನ್ನಾಗಿ ನಿದ್ದೆ ಬಂದು, ಬೆಳಿಗ್ಗೆ ಆಗುವುದರೊಳಗೆ ಆವರೆಗೆ ನನ್ನನ್ನು ಬಿಡದೇ ಮೂರುವರೆ ದಿನ ಕಾಡಿದ ಶನಿ, ಎಂಬ ಎಕಡು ನನ್ನನ್ನು ಬಿಟ್ಟು ತೊಲಗಿಹೋಯಿತು.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅಂಬರೀಶ ಭಟ್ ಎನ್ನುವವನೂ ಅವನಲ್ಲಿರುವ ಕಾಳಿಂಗ ನಾವಡರ ಹಾಗೂ ಅಪ್ಪಯ್ಯನ ಕೆಲವು ಸಂಗ್ರಹಗಳನ್ನು ಕೊಟ್ಟು, ನನ್ನಲ್ಲಿರುವುದನ್ನು ಪ್ರತಿಮಾಡಿಕೊಂಡು ಹೋಗಿದ್ದ. ಮತ್ತೊಬ್ಬ ಸುದೇಶ ಎನ್ನುವ ಹುಡುಗ, ಒಂದು ದಿನ ನಮ್ಮ ಮನೆಗೆ ಬಂದು, ನಾವಡರ ಮತ್ತು ಅಪ್ಪಯ್ಯನ ಪದ್ಯಗಳನ್ನು, ಫೋಟೋಗಳನ್ನು ನನಗೆ ಕೊಟ್ಟು ಅವನದನ್ನು ನನಗೆ ಕೊಟ್ಟ. ಮತ್ತೆಯೂ ಅವನು ಎಲ್ಲೆಲ್ಲಾ ಹೋಗಿ ನಾವಡರ ಕ್ಯಾಸೆಟ್ ಗಳನ್ನು ಹುಡುಕಿ ತಂದು, ನನಗೆ ಕೊಟ್ಟು ಎಂಪಿತ್ರಿ ಮಾಡಿಕೊಡಲು ಹೇಳುತ್ತಿದ್ದ. ನಾನು ಅದು ಯಾವುದೇ ಸ್ಥಿತಿಯಲ್ಲಿ ಇದ್ದರೂ, ಅದನ್ನು ಸರಿಪಡಿಸಿ, ಫಂಗಸ್ ತೆಗೆದು, ಹಾಳಾದ ಭಾಗವನ್ನು ತುಂಡರಿಸಿ, ಮತ್ತೆ ಮುಂದಿನ ಭಾಗಕ್ಕೆ ಅಂಟಿಸಿ, ರೆಕಾರ್ಡ್ ಮಾಡಿ ಕೊಡುತ್ತಿದ್ದೆ. ಅವನೂ ಅಲ್ಲಿ ಇಲ್ಲಿ ಅಂತ ನಾವಡರ ಹಲವು ಆಡಿಯೋ ಸಂಗ್ರಹವನ್ನೂ ಮಾಡಿ ತಂದುಕೊಡುತ್ತಿದ್ದ. ನಮ್ಮ ಆಫೀಸಿನ ಗೆಳೆಯ ವಸಂತ ಎನ್ನುವವರ ಅಣ್ಣ, ಹೆಗ್ಗರಣೆಯ ಕೇಶವ ನಾಯಕ್ ಎನ್ನುವವರೂ, ಅವರ ಹೆಚ್ಚಿನ ಹಳೆಯ ಸಂಗ್ರಹಗಳನ್ನು ನನಗೆ ಕೊಟ್ಟು ನನ್ನಲ್ಲಿರುವುದನ್ನು ತೆಗೆದುಕೊಂಡು ಹೋಗಿದ್ದರು.

ಸುಮಾರು ೨೦೧೧ರ ಹೊತ್ತಿಗೆ ನನಗೆ ಮಂಗಳೂರಿನಿಂದ ಕುಂದಾಪುರದ ಆಫೀಸಿಗೆ ವರ್ಗವಾಯಿತು. ಆಗಲೇ ಶ್ರೀಧರಣ್ಣನ ಸ್ನೇಹಿತರಾದ ಶಂಕರ ಜೋಯಿಸರ ಅಣ್ಣನ ಮಗ, ಕೊಲ್ಲೂರು ಸುದರ್ಶನ ಜೋಯಿಸರು  ಆಗ ಕುಂದಾಪುರದ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಚಾರಿಸಿಕೊಂಡು ಬಂದರು. ಅವರು ಶ್ರೀಧರ ಅಣ್ಣಯ್ಯನಿಂದ, ಅವನು ಡಾಕ್ಟರೇಟ್ ಪಡೆಯಲು  ಮಾಡುವ ಸಂಶೋಧನಾ ಗ್ರಂಥದ ಬಗ್ಗೆ ಬರೆಯುವಾಗ ಸಂಗ್ರಹಿಸಿದ ಉಡುಪಿಕೇಂದ್ರದಲ್ಲಿ 1974 ರಲ್ಲಿ, ಶಿವರಾಮ ಕಾರಂತರು ದಾಖಲಿಸಿದ ಯಕ್ಷಗಾನ ರಾಗಗಳ ದಾಖಲೀಕರಣದ ಸುಮಾರು ಹದಿನೆಂಟು ಕ್ಯಾಸೆಟ್ ಗಳನ್ನು ಸಿ ಡಿ ಮಾಡಿಸಿ, ವಾಪಾಸು ತಲುಪಿಸಲು, ನನಗೆ ಕೊಡುವುದಕ್ಕಾಗಿ ಬಂದಿದ್ದರು. ಆಗ ಪರಿಚಯವಾದ ಜೋಯಿಸರು ಮತ್ತೆ ನನ್ನ ಜೊತೆಗೆ ಹಳೆಯ ಸಂಗ್ರಹಗಳನ್ನು ಪತ್ತೆಹಚ್ಚುವಲ್ಲಿ ಜೊತೆಯಾದರು.

 ಆಗ ಅಪ್ಪಯ್ಯನ ಆಡಿಯೋ ಪೋಟೋಗಳ ಜೊತೆಗೆ, ಕಾಳಿಂಗ ನಾವಡರ, ನೆಬ್ಬೂರ್ ರ ಹಾಡುಗಳು, ಕೆರೆಮನೆ ಕಲಾವಿದರ, ಶಂಭು ಹೆಗಡೆ, ಮಹಾಬಲ ಹೆಗಡೆಯವರ ಆಟದ ವಿಡಿಯೋ ಆಡಿಯೋ ಸಂಗ್ರಹಕ್ಕೂ ತೊಡಗಿದೆವು. ಎಲ್ಲಿ ಯಾರಾದರೂ ಹಳೆಯ ಯಕ್ಷಗಾನ ಸಂಗ್ರಹ ಇದೆ ಎಂದು ಗಾಳಿ ಸುದ್ದಿ ಸಿಕ್ಕರೂ ಸಾಕು. ಅವರ ಫೋನ್ ನಂಬರ್ ಹುಡುಕಿ ಅಥವ ಅವರ ಮನೆಗೇ ಹೋಗಿ ಅಲ್ಲಿದ್ದ ದಾಖಲೆಗಳನ್ನು ಅವರನ್ನು ಕಾಡಿ ಬೇಡಿ ಪಡೆದುಕೊಂಡು ಬರಲು ಶುರುಮಾಡಿದೆವು.

 ನಮ್ಮ ಜೋಯಿಸರು ಹೀಗೆ ಹಳೆಯ ಸಂಗ್ರಹದ ಮೂಲ ಹುಡುಕುತ್ತಿದ್ದಾಗ ಉತ್ತರಕನ್ನಡ ಜಿಲ್ಲೆಯಲ್ಲಿಯ ಬಾಳೆಹದ್ದ ತಿಮ್ಮಪ್ಪ ಭಾಗವತರ ನಂಬರ್ ಸಿಕ್ಕಿತು. ಅವರಲ್ಲಿ ವಿಚಾರಿಸಿದಾಗ, ಗಡಿಗೆ ಹೊಳೆ ಸುಬ್ರಾಯಭಟ್ಟರಲ್ಲಿ ಶೇಣಿಯವರ ತುಂಬಾ ಸಂಗ್ರಹ ಇದೆ. ಅವುಗಳಲ್ಲಿ ಜೊತೆಗೆ ಅಪ್ಪಯ್ಯನದ್ದೂ ಇರಬಹುದು ಎಂದು ಗೊತ್ತಾಯಿತು. ಸರಿ ನಾನು ತಡಮಾಡಲಿಲ್ಲ. ಒಂದು ಬೆಳಿಗ್ಗೆ ಮೈಸೂರಿನಲ್ಲಿ ಓದುತ್ತಿದ್ದ ಮಗ, ಊರಿಗೆ ಬಂದಿದ್ದಾಗ, ಅವನ ಲ್ಯಾಪ್ ಟಾಪ್ ನೊಂದಿಗೆ ಅವನನ್ನು, ನನ್ನ ಹೆಂಡತಿಯನ್ನು ಹೊರಡಿಸಿ ಬೆಳಿಗ್ಗೆ ಆರು ಘಂಟೆಗೆ ಕಾರಿನಲ್ಲಿ ಹೊರಟೇಬಿಟ್ಟೆ. ಸತ್ಯ ಹೇಳುವುದಾದರೆ ನಿಜವಾಗಿ ಸಂಗ್ರಹ ಇದ್ದದ್ದು ಯಾರ ಬಳಿಯಲ್ಲಿ ಎಂದು ನನಗೆ ಗೊತ್ತಿರಲಿಲ್ಲ. ಜೋಯಿಸರು ಕೊಟ್ಟ ಒಂದೆರಡು ಫೋನ್ ನಂಬರ್ ಮಾತ್ರ ಇತ್ತು. ಶಿರಸಿಯವರೆಗೆ ಹೋದಾಗಲೇ ಮಧ್ಯಾಹ್ನವಾಗುತ್ತಾ ಬಂದಿತ್ತು. ಒಂದು ನಂಬರಿಗೆ ಫೋನ್ ಮಾಡಿದೆ. ಅದು ಬಾಳೆಹದ್ದ ತಿಮ್ಮಪ್ಪ ಹೆಗಡೆಯವರದ್ದು. ಫೋನ್ ನಲ್ಲಿ ಸಿಕ್ಕಿದ ಅವರು ನನ್ನ ಪರಿಚಯವಾಗುತ್ತಲೇ ತುಂಬಾ ಖುಷಿಯಾಗಿ ನಮ್ಮ ಮನೆಗೆ ಬನ್ನಿ ಅಂತ ಕರೆದರು.

ನಾವು ಅವರ ಮನೆಯ ಹತ್ತಿರ ಹತ್ತಿರ ಹೋಗುತ್ತಿದ್ದಂತೆಯೇ ತಿಮ್ಮಪ್ಪ ಭಾಗವತರು ರಸ್ತೆಯ ತನಕ ಬಂದು ನಮ್ಮನ್ನು ಸ್ವಾಗತಿಸಿದರು. ಮನೆಗೆ ಒಳಗೆ ಕಾಲಿಡುತ್ತಿದ್ದಂತೆಯೇ ಅವರ ತಂದೆಯವರಾದ ಕೃಷ್ಣ ಭಾಗವತರು ಹತ್ತಿರ ಬಂದು, ನನ್ನನ್ನು ಆಲಿಂಗಿಸಿಕೊಂಡು “ಉಪ್ಪೂರರನ್ನೇ ನೋಡಿದಷ್ಟು ಖುಷಿಯಾಯಿತು” ಎಂದು ಕಣ್ಣನ್ನು ತೇವಗೊಳಿಸಿಕೊಂಡರು. ನಮ್ಮನ್ನು ಕರೆದು ಉಪಚಾರ ಮಾಡಿದ ಅವರು “ ಇಲ್ಲಿ ಹತ್ತಿರದಲ್ಲಿ  ಎಲ್ಲಿ ಆಟ ಇದ್ದರೂ ನಾನು ಮರುದಿನ ಬೆಳಿಗ್ಗೆ ನಸುಕಿನಲ್ಲಿಯೇ ಆಟದ ಗರದ ಜನರೇಟರ್ ಬಳಿ ಹೋಗಿ ನಿಂತು ಅಲ್ಲಿಗೆ ಉಪ್ಪೂರರು ಮುಖ ತೊಳೆಯುವುದಕ್ಕಾಗಿ ಬರುವುದನ್ನೇ ಕಾಯುತ್ತಿದ್ದು, ಮನೆಗೆ ಕರೆತಂದು ಆತಿಥ್ಯ ಮಾಡುತ್ತಿದ್ದೆ. ಅವರು ನಮ್ಮ ಮನೆಯಲ್ಲಿ ಇದ್ದರೆ ನಮಗೆ ಅದೇನೋ ಸಂಭ್ರಮವಾಗುತ್ತಿತ್ತು ಎಂದು ಹಳೆಯ ಕೆಲವು ನೆನಪುಗಳನ್ನು ಹೇಳಿಕೊಂಡರು.  ಬಂದ ನಮಗೆ ಕಾಲು ತೊಳೆಯಲು ಹೇಳಿ ಊಟಕ್ಕೆ ಆಗಿದೆ ಬನ್ನಿ ಎಂದು ಉಪಚಾರ ಮಾಡಿದರು. ಊಟವನ್ನು ಮಾಡಿದೆವು. ತಿಮ್ಮಪ್ಪಭಾಗವತರು ಅವರ ಮಗಳೊಬ್ಬಳಿಗೆ ಸಂಗೀತ ಕಲಿಸಿದ್ದೇವೆ ಎಂದು ತಿಳಿಸಿ, ಅವಳಿಂದ ಅಲ್ಲಿಯೇ ಒಂದು ಹಾಡನ್ನೂ ಹಾಡಿ ಕೇಳಿಸಿದರು.

ನಂತರ ನಾನು ಬಂದ ವಿಷಯವನ್ನು ಪ್ರಾಸ್ತಾಪಿಸಿದೆ. ಆದರೆ ಅವರಲ್ಲಿ ಅಂತಹಾ ಯಾವುದೇ ಯಕ್ಷಗಾನದ ಸಂಗ್ರಹಗಳು ಇರಲಿಲ್ಲ. ಅವರ ಅಪ್ಪಯ್ಯನದ್ದೇ ಒಂದೆರಡು ಕ್ಯಾಸೆಟ್ಗಳನ್ನು ಕೊಟ್ಟರು. ಗಡಿಗೆಹೊಳೆ ಸುಬ್ರಾಯ ಭಟ್ಟರು ಎಂಬವರಲ್ಲಿ ಇದೆ ಎಂದು ಆಗಲೇ ಸುಬ್ರಾಯ ಭಟ್ಟರಿಗೆ ಫೋನ್ ಮಾಡಿ ನಾವು ಬಂದ ವಿಷಯವನ್ನು ತಿಳಿಸಿ ಈಗ ಬರಬಹುದೇ ಎಂದು ಕೇಳಿದರು. ಆದರೆ ಸುಬ್ರಾಯ ಭಟ್ಟರು ವೃತ್ತಿಯಿಂದ ಆಗಲೇ ನಿವೃತ್ತರಾಗಿದ್ದು ಮನಸ್ಸಿನ ಸಂತೋಷಕ್ಕೆ, ಸಮಯ ಕಳೆಯಲು ಅಲ್ಲಿ ಇಲ್ಲಿ ಪೌರೋಹಿತ್ಯ ಮಾಡುತ್ತಿದ್ದು ಯಾವುದೋ ಪೌರೋಹಿತ್ಯದಲ್ಲಿ ಬಿಝಿ ಇದ್ದು, ಆವತ್ತು ಕಷ್ಟ  ಮರಾಯ್ರೆ ನಾನು ಸ್ವಲ್ಪ ಹೊರಗಡೆ ಇದ್ದೇನೆ ಎಂದು ಹೇಳಿದರು. ಸರಿಯಾಗಿ ವಿಚಾರಿಸಿಕೊಳ್ಳದೇ ಬಂದಾಯಿತು. ಏನು ಮಾಡುವದು? ಅಷ್ಟು ದೂರ ಬಂದು ಸುಮ್ಮನೇ ಮರಳಿ ಹೋಗುವುದಾಯಿತೇ? ಎಂದು ನಮಗೆ ನಿರಾಶೆಯಾಯಿತು.

(ಮುಂದುವರಿಯುವುದು)

ಭಾನುವಾರ, ನವೆಂಬರ್ 12, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 53

ಒಮ್ಮೆ, ಸಾಲಿಗ್ರಾಮ ಮೇಳದ ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯರು ಸಿಕ್ಕಿದಾಗ “ನಾನು ಅಪ್ಪಯ್ಯನ ಪದ್ಯಗಳನ್ನು ಸಂಗ್ರಹಿಸುತ್ತಿದ್ದೇನೆ, ನಿಮಗೆ ಎಲ್ಲಾದರೂ ಅಂತಹ ಸಂಗ್ರಹ ಇದೆ ಅಂತ ಗೊತ್ತಾದರೆ ನನಗೊಂದು ಸುದ್ಧಿ ತಿಳಿಸುವಿರಾ?” ಎಂದೆ. ಅವರು ಸಾಗರದ ಬಳಿ ಒಬ್ಬರು ಅವರ ಅಭಿಮಾನಿಗಳಲ್ಲಿ ಅಪ್ಪಯ್ಯನ ಪದ್ಯಗಳಿವೆ ಎಂದೂ, ಅವರು ತನಗೆ ಸಿಕ್ಕಿದಾಗ ಅದನ್ನು ಕೇಳಿಸಿದ್ದರು ಎಂದು ಒಂದು  ಫೋನ್ ನಂಬರ್ ಕೊಟ್ಟರು. ಅವರ ಹೆಸರು ಬಾಬಣ್ಣ ಹೊಸೂರು ಅಂತ. ನಾನು ಅವರನ್ನು ಸಂಪರ್ಕಿಸಿದೆ. ಅವರಲ್ಲಿ ತುಂಬಾ ಪದ್ಯಗಳಿವೆ ಎಂದು ಗೊತ್ತಾಗಿ ಎಲ್ಲವನ್ನು ಒಂದು ಡಿವಿಡಿಗೆ ಹಾಕಿ ಕಳಿಸಿಕೊಡಲು ವಿನಂತಿಸಿದೆ.

ಅವರು ಸ್ವಲ್ಪ ದಿನದಲ್ಲಿಯೇ ಕೊರಿಯರ್ ಮೂಲಕ ಅದನ್ನು ಕಳಿಸಿಕೊಟ್ಟರು. ನೋಡಿದರೆ ಅದೆಲ್ಲವೂ ನನ್ನದೇ ಸಂಗ್ರಹ. ಯಾರೋ ಅವರಿಗೆ ಕೊಟ್ಟಿದ್ದರು. ನನಗೆ ಗೊತ್ತಾಯಿತಾದರೂ ಕಂಪ್ಯೂಟರಲ್ಲಿ ಹಾಕಿ ಸುಮ್ಮನೇ ಮೇಲೆ ಮೇಲೆ ಎಲ್ಲವನ್ನೂ ನೋಡುತ್ತಾಹೋದೆ. ಅದರಲ್ಲಿ ಮುದ್ರಾಡಿಯಲ್ಲಿ ರೆಕಾರ್ಡ್ ಮಾಡಿದ ಪದ್ಯಗಳೂ ಇದ್ದು ನಾನು ಖುಷಿಯಿಂದ ಕುಣಿದಾಡಿದೆ. ಆದರೆ ಅದು ನಾನು ರೆಕಾರ್ಡ್ ಮಾಡಿದ್ದೇ ಆಗಿತ್ತು. ಅವರಿಗೆ ಯಾರು ಕೊಟ್ಟವರು ಎಂದು ತಿಳಿಯಬೇಕಾಯಿತು. ಬಾಬಣ್ಣರಿಗೆ ಫೋನ್ ಮಾಡಿ ಆ ಸಂಗ್ರಹ ಎಲ್ಲಿ ಸಿಕ್ಕಿದ್ದು? ಅಂತ ಕೇಳಿದೆ. ಅವರು ನಿತ್ಯಾನಂದ ಹೆಬ್ಬಾರರೂ ಅವರೂ ಸ್ನೇಹಿತರೆಂದೂ ಅವರ ಮೊಬೈಲಿನಲ್ಲಿದ್ದುದನ್ನು ತಾನು ಪ್ರತಿ ಮಾಡಿಕೊಂಡೆ ಎಂದೂ ಹೇಳಿದರು. ಅಂತು ನಾನು ಕಳೆದುಹೋಯಿತು ಅಂತ ಆಸೆ ಬಿಟ್ಟಿದ್ದ ಅಮೂಲ್ಯವಾದ ಸಂಗ್ರಹ ಮತ್ತೆ ನನ್ನ ಕೈ ಸೇರಿತು. ಕೆಲವರು ಹಳೆಯ ಸಂಗ್ರಹ ಇದ್ದವರು ಬೇರೆಯವರಿಗೆ ಅದನ್ನು ಕೊಡುವುದಿಲ್ಲ. ಕೊಟ್ಟರೂ ಅದನ್ನು ನೀವು ಬೇರೆಯವರಿಗೆ ಕೊಡಬೇಡಿ ಮಾರಾಯ್ರೆ. ಎಂದು ತಾಕೀತು ಮಾಡಿಯೇ ಕೊಡುತ್ತಾರೆ. ಇನ್ನು ಕೆಲವರು, “ನನಗೆ ಕೊಟ್ಟವರು ಬೇರೆಯವರಿಗೆ ಕೊಡಬಾರದು ಎಂದಿದ್ದಾರೆ. ನೀವಾದ್ದಕ್ಕೆ ಕೊಡುತ್ತಿದ್ದೇನೆ” ಎಂದು ನನಗೆ ಕೊಟ್ಟರೆ ನಾನು ನಕ್ಕು ಈ ಕತೆ ಹೇಳಿ, ನಾನು ನನ್ನ ಸಂಗ್ರಹವನ್ನು ಕೇಳಿದವರಿಗೆಲ್ಲಾ ಕೊಡುತ್ತಾ ಇದ್ದೇನೆ. ನನ್ನ ಹತ್ತಿರ ಇರುವುದು ಹಾಳಾದರೂ ಎಲ್ಲಿಯಾದರೂ ಒಂದು ಪ್ರತಿ ಇರುತ್ತದಲ್ಲ ಎಂದು ಹೇಳುತ್ತೇನೆ.

ಆಗಲೇ ಡಿವಿಡಿ, ಟಿವಿಗಳು ಬಂದು, ಟೇಪ್ ರೆಕಾರ್ಡರ್ ಉಪಯೋಗಿಸುವವರಿಲ್ಲದೇ, ಅದು ಹಾಳಾದರೆ ಅದರ ಬಿಡಿ ಭಾಗಗಳು ಸಿಕ್ಕದೇ ಮೂಲೆ ಸೇರಿದ್ದವು. ಹಳೆಯ ಕ್ಯಾಸೆಟ್ ಗಳು ಅಟ್ಟ ಸೇರಿದ್ದವು. ಆದರೆ ಕೆಲವರು ಅದನ್ನು ಜೋಪಾನವಾಗಿ ಇಟ್ಟದ್ದು ಕಂಡು ಬಂತು. ಕೆಲವರಂತೂ ಕ್ಯಾಸೆಟ್ ಗಳನ್ನು ಅವು ಯಾವ ಸ್ಥಿತಿಯಲ್ಲಿದೆಯೋ ಹಾಗೆಯೇ ಎಸೆದಿದ್ದು ಅವುಗಳು ನೋಡುವ ಸ್ಥಿತಿಯಲ್ಲಿ ಇಲ್ಲದೇ, ಟೇಪುಗಳು ಹೊರ ಬಂದು ಫಂಗಸ್ ಹಿಡಿದು ಹಾಳಾದ ಸ್ಥಿತಿಯಲ್ಲಿ ಇರುತ್ತಿತ್ತು. ಅಂತೂ ನಾವು ಕೇಳಿದಾಗ ಅವರು ಮರುಮಾತಾಡದೇ “ನಿಮಗೆ ಉಪಯೋಗವಾಗುವುದಾದರೆ ಮಾಡಿ” ಎಂದು ಕೊಟ್ಟುಬಿಡುತ್ತಿದ್ದರು. ನಾನು ಅವುಗಳನ್ನು ನನ್ನ ಕಂಪ್ಯೂಟರಲ್ಲಿ ಗೋಲ್ಡ್ ವೇವ್ ಎಂಬ ಸಾಫ್ಟ್ ವ್ಯಾರ್ ನ್ನು ಹಾಕಿಕೊಂಡು,  ಸಿಡಿ ಮಾಡಿ ಒಂದು ಪ್ರತಿಮಾಡಿ ಅವರಿಗೆ ತಲುಪಿಸುತ್ತಿದ್ದೆ. ಎಲ್ಲವನ್ನೂ ಒಂದು ಪ್ರತಿ ಸಿ.ಡಿ. ಮಾಡಿ ಬ್ಯಾಕ್ ಅಪ್ ಇಟ್ಟುಕೊಳ್ಳುತ್ತಿದ್ದೆ. ಅಪ್ಪಯ್ಯನ ಪದ್ಯ ಇದೆಯಾ? ಅಂತ ನನ್ನಲ್ಲಿ ಕೇಳಿದವರಿಗೆಲ್ಲಾ ಒಂದು ಪ್ರತಿಯನ್ನು ಮಾಡಿ ಕೊಡುತ್ತಿದ್ದೆ.

ಈಗ ಸ್ವಲ್ಪ ಸಮಯದ ಹಿಂದೆ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ನಾನಾಗ ಮುಲ್ಕಿಯಲ್ಲಿದ್ದೆ ಅಂತ ನೆನಪು. ಹಿಂದೆ ಹೇಳಿದಂತೆ ನಾನು ಪ್ರತೀ ವರ್ಷ ಶಂಕರನಾರಾಯಣದಲ್ಲಿ ದೀಪೋತ್ಸವದ ಸಮಯದಲ್ಲಿ ನಮ್ಮ ಯಕ್ಷಗಾನ ಸಂಘದ ಹುಡುಗರನ್ನೆಲ್ಲಾ ಸೇರಿಸಿಕೊಂಡು ಒಂದು ಆಟವನ್ನು ಆಡಿಸುತ್ತಿದ್ದೆ. ನನ್ನ ಭಾವನವರೇ ದೇವಸ್ಥಾನದ ಮುಕ್ತೇಸರರಾದ್ದರಿಂದ ಪ್ರದರ್ಶನದ ಅವಕಾಶಕ್ಕೆ ತೊಂದರೆಯಾಗುತ್ತಿರಲಿಲ್ಲ.  ಒಂದು ಪ್ರಸಂಗದ ಮುಖ್ಯ ದೃಶ್ಯಗಳ, ಸುಮಾರು ಎರಡರಿಂದ  ಎರಡೂವರೆ ಗಂಟೆಯ ಒಂದು ಭಾಗವನ್ನು ಸುಮಾರು ಐವತ್ತು ಪದ್ಯಕ್ಕೆ ಸೀಮಿತಗೊಳಿಸಿ ಆಯ್ದುಕೊಂಡು, ಅರ್ಥವನ್ನೂ ಬರೆದು ಮಕ್ಕಳಿಗೆ ಕೊಟ್ಟು ಬಾಯಿ ಪಾಠ ಮಾಡಲು ಹೇಳಿ, ದೇವಸ್ಥಾನದಲ್ಲಿಯೇ ನಾಲ್ಕಾರು ಟ್ರಯಲ್ ಮಾಡಿಕೊಂಡೇ ಆಟ ಆಡುವುದು. ಮತ್ತೆ ನಾಲ್ಕಾರು ಕಡೆಗಳಲ್ಲಿ ಮುಂದಿನ ವರ್ಷ ಚೌತಿಗೆ, ನವರಾತ್ರಿಗೆ ಅಂತ ಐದಾರು ಆಟ ಆಡಲು ಅವಕಾಶ ಸಿಗುತ್ತಿತ್ತು.

ಒಮ್ಮೆ ಕಡಿಯಾಳಿಯಲ್ಲಿ ಆಟ. ಪ್ರಸಂಗ “ಜಾಂಬವತಿಕಲ್ಯಾಣ”. ನನ್ನದು ಕೃಷ್ಣ. ವೆಂಕಟೇಶ ಹಂದೆಯ ಜಾಂಬವಂತ ಮಾಡಿಸುವ ಅಂತ ಅವನನ್ನು ಕರೆಸಿದ್ದೆ. ಆಗ ಅವನು ಬ್ಯಾಂಕ್ ಉದ್ಯೋಗಿಯಾಗಿ ಬೆಂಗಳೂರಿನಲ್ಲಿದ್ದ. ಆಟದ ಚೌಕಿಯಲ್ಲಿ ಕುಳಿತು ನಮ್ಮ ಗೋವಿಂದ ಉರಾಳರು ನನ್ನ ಮುಖಕ್ಕೆ ಸಪೇತ ಹಾಕಿ. ಪೌಡರ್ ಹಚ್ಚಿ ನೀರಿನ ಸ್ಪಂಜ್ ನಲ್ಲಿ ಒರೆಸಿ, ಇನ್ನೇನು, ಹುಬ್ಬಿಗೆ, ಕಣ್ಣಿಗೆ ಕಾಡಿಗೆ ಹಚ್ಚಬೇಕು ಎನ್ನುವಾಗ “ರೊಯ್ಯನೆ” ಒಂದು ದೀಪದ ಹುಳು ನನ್ನ ಬಲದ ಕಿವಿಯ ಒಳಗೆ ಪ್ರವೇಶ ಮಾಡಿಬಿಟ್ಟಿತು. ನಾನು ತಲೆ ಕೊಡಕಿದೆ. ಕೈಯಿಂದ ಕಿವಿಯನ್ನು ಬಡಿದೆ. ಬೆರಳು ಹಾಕಿ ಅದನ್ನು ತೆಗೆಯಲು ಪ್ರಯತ್ನಿಸಿದೆ. ಅದು ಮತ್ತೆ ಒಳಗೇ ಹೋಯಿತೇ ವಿನಹ ಹೊರಗೆ ಬರಲಿಲ್ಲ. ಒಳಗೆ ಗುಯ್ಯ್ ಸದ್ದು ಬಿಟ್ಟರೆ ಬಲಕಿವಿ ಬಂದ್ ಆದ ಹಾಗೆಯೇ ಆಯಿತು.  ನೋವು ಹೆಚ್ಚಾಗುತ್ತಾ ಹೋದುದರಿಂದ ಮುಖಕ್ಕೆ ಬಣ್ಣ ಬಳಿದಿರುವಾಗಲೇ ಅಲ್ಲೇ ಹತ್ತಿರದ ಡಾಕ್ಟರರ ಬಳಿಗೆ ಹೋಗಿ, ತೋರಿಸಿದೆ ಅವರು ಕೊಟ್ಟ ಡ್ರಾಪ್ಸ್ ಒಂದನ್ನು ಒಮ್ಮೆ ಕಿವಿಗೆ ಹೊಯ್ದುಕೊಂಡೆ. ಆಮೇಲೆ ಹೊತ್ತಾಯಿತು ಅಂತ ಗಡಿಬಿಡಿಯಲ್ಲಿ ವೇಷ ಕಟ್ಟಿಸಿಕೊಂಡು ಆ ನೋವಿನಲ್ಲೇ ರಂಗಸ್ಥಳಕ್ಕೆ ಹೋಗಿ ಕುಣಿದೆ. ಬಲಭಾಗದಲ್ಲಿ ಏನು ಶಬ್ಧ ಆದರೂ ಕೇಳುತ್ತಿರಲಿಲ್ಲ.

ಆಟ ಹೇಗಾಯಿತೋ, ಅಂತೂ ಮುಗಿಯಿತು. ವೇಷ ಬಿಚ್ಚಿಹಾಕಿ ಅಲ್ಲಿಂದ ಮನೆಗೆ ಬಂದವನೇ ಮತ್ತೆ ಕಿವಿಯ ಒಳಗಿನ ಹುಳವನ್ನು ಹೊರಹಾಕಲು ಶತಪ್ರಯತ್ನ ಶುರುಮಾಡಲು ತೊಡಗಿದೆ. ಒಂದು ಕುಗ್ಗಿ ಕಡ್ಡಿಯನ್ನು ಕಿವಿಯ ಒಳಗೆ ಹಾಕಿ “ಮೀಂಟಿ” ಹುಳವನ್ನು ತೆಗೆಯಲು ನೋಡಿದೆ. ತೆಂಗಿನ ಎಣ್ಣೆಯನ್ನು ಕಿವಿಗೆ ಬಿಟ್ಟು ಪಟಪಟ ಅಂತ ಕಿವಿಯನ್ನು ಒತ್ತಿಹಿಡಿದು ರಭಸದಿಂದ ಆಚೆಈಚೆ ಮಾಡಿದ್ದಾಯಿತು. ಅದು ಮತ್ತೆ ಒಳಕ್ಕೇ ಹೋಗಿ, ಕಿವಿಯ ತಮ್ಮಟೆಗೆ ತಾಗಿ ನೋವು ಮಾಡಿತೇ ಹೊರತು, ಹೊರಕ್ಕೆ ಬರಲು ಒಪ್ಪಲೇ ಇಲ್ಲ. ರಾತ್ರಿ ಇಡೀ ನಿದ್ದೆ ಇಲ್ಲದೇ ಕಳೆದಾಯಿತು. ಬೆಳಿಗ್ಗೆ ಆದಾಗ ಇನ್ನೊಂದು ಸರ್ಕಸ್ ಮಾಡುವ ಮನಸ್ಸಾಯಿತು.

ಬಾಯಿಯನ್ನು ಮುಚ್ಚಿ, ಮೂಗನ್ನು ಕೈಯಿಂದ ಗಟ್ಟಿಯಾಗಿ ಹಿಡಿದು ಜೋರಾಗಿ ಉಸಿರನ್ನು ಕಿವಿಯಿಂದ ಹೊರಗೆ ಹಾಕಲು ಪ್ರಯತ್ನಿಸಿದೆ. ಆದರೂ ಕಿವಿಯ ಒಳಗಿನ ಹುಳು ಅಲ್ಲಿಯೇ ಇದ್ದು ಸತ್ಯಾಗ್ರಹ ಮಾಡಿತು. ಇನ್ನು ನನ್ನಿಂದ ಆಗುವುದಿಲ್ಲ ಅಂತ ಸೋಲನ್ನು ಒಪ್ಪಿಕೊಂಡು, ಉಡುಪಿಯ ಅಲಂಕಾರ್ ಥಿಯೇಟರ್ ಪಕ್ಕದಲ್ಲಿರುವ ಗಾಂಧಿ ಆಸ್ಪತ್ರೆಗೆ(ಈಗ ಅದು ಲಲಿತ್ ಆಸ್ಪತ್ರೆ ಆಗಿದೆ) ಹೋಗಿ ಅಲ್ಲಿ ಡಾ. ಆರ್ ವಿ. ನಾಯಕ್ ಎನ್ನುವ ಕಿವಿ ಮೂಗು ಮತ್ತು ಗಂಟಲು ತಜ್ಞರಲ್ಲಿಗೆ ಹೋಗಿ ತೋರಿಸಿದೆ. ಅವರು ಚಿಮಟ ಹಾಕಿ ನನ್ನ ಕಿವಿಯ ಒಳಗಿದ್ದ ಹುಳವನ್ನು ತೆಗೆದು ನನಗೂ, ತನ್ಮೂಲಕ ಅದಕ್ಕೂ ಬಿಡುಗಡೆ ಮಾಡಿದರು. ಸದ್ಯ ಮುಗಿಯಿತಲ್ಲ ಎಂದು ಮನೆಗೆ ಬಂದು ಮಧ್ಯಾಹ್ನ ಊಟ ಮಾಡಿ ಮಲಗಿ, ಏಳುವಾಗ ನೋಡುತ್ತೇನೆ, ಎಕ್ ಎಕ್ ಅಂತ ಎಕಡು( ಬಿಕ್ಕಳಿಕೆ) ಶುರುವಾಗ ಬೇಕೆ?. ಹೋಗುತ್ತದೆ ಅಂತ ಮೊದಲಿಗೆ ನಾನು ಕ್ಯಾರೇ ಮಾಡಲಿಲ್ಲ. ಸಂಜೆಯವರೆಗೂ ನಿಲ್ಲದೇ ಇದ್ದಾಗ ಗಾಬರಿ ಶುರುವಾಯಿತು. “ಚೆನ್ನಾಗಿ ನೀರು ಕುಡಿಯಿರಿ. ಹೋಗುತ್ತದೆ” ಎಂದು ಅನ್ನಪೂರ್ಣ ಹೇಳಿದಳು. ಗಂಟಲಲ್ಲಿ ನೀರು ಹೋಯಿತೇ ಹೊರತು ಎಕಡು ಹೋಗಲಿಲ್ಲ. ಕೊಬ್ಬರಿ ತಿನ್ನಿ. ಅಂದಳು. ತಿಂದೆ. ಯಾರಿಗಾದರೂ ಸುಳ್ಳು ಹೇಳಿದರೆ ಹಾಗಾಗುತ್ತಂತೆ. ನೆನಪು ಮಾಡಿಕೊಳ್ಳಿ ಅಂದಳು. ನೆನಪು ಮಾಡಿದೆನೋ ಇಲ್ಲವೋ, ಅಂತು ಎಕಡು ನನ್ನನ್ನು ಬಿಡುವುದಿಲ್ಲ ಎಂದಿತು. ಮರುದಿನ ಚಂದ್ರ ಭಟ್ಟರ ಮೊದಲನೇ ಮಗಳು ಸುಧಾರಾಣಿಯ  ಮದುವೆಯು ಕೋಟೇಶ್ವರದಲ್ಲಿ ಇತ್ತು. ಹೋಗಲೇ ಬೇಕು. ಮನೆಯ ಮಗಳಲ್ಲವೇ? ಹೋದೆವು.

ಮಧ್ಯಾಹ್ನದ ಹೊತ್ತಿಗೆ ನಿತ್ರಾಣವಾಗಿ ಕಣ್ಣುಕತ್ತಲೆ ಬರುವಂತಾಯಿತು. ಏನೂ ಮಾಡಲಾಗದೇ ಮದುವೆಯ ಮಂಟಪಕ್ಕೂ ಹೋಗದೇ ಕಲ್ಯಾಣಮಂದಿರದ ಮೇನೇಜರ್ ಮನೆಯ ಒಂದು ರೂಮಿನಲ್ಲಿ ಮಲಗಿಕೊಂಡೆ. ಮಧ್ಯಾಹ್ನದ ಮೇಲೆ ಇನ್ನು ಕಡೆಗಣಿಸಿದರೆ ಆಗುವುದಲ್ಲ ಅನ್ನಿಸಿ, ಮದುವೆಗೆ ಅಂತ ಬಂದಿದ್ದ ಶ್ರೀಧರಣ್ಣಯ್ಯನ ಜೊತೆಗೆ ಕೋಟೇಶ್ವರದಲ್ಲಿಯೇ ಇರುವ ಸರ್ಜನ್ ಆಸ್ಪತ್ರೆಗೆ ಹೋಗಿ, ಅಲ್ಲಿಯ ಡಾಕ್ಟರರಿಗೆ ತೋರಿಸಿದೆ. ನನ್ನ ಸ್ಥಿತಿಯನ್ನು ಕಂಡ ಆ ಡಾಕ್ಟರ್ “ನೀವು ಎಡ್ಮಿಟ್ ಆಗಲೇ ಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ” ಎಂದರು. ಸರಿ ಎಂದು ಆ ದಿನವೇ ಎಡ್ಮಿಟ್ ಆದೆ. ನನ್ನ ಹೆಂಡತಿ ನನ್ನ ಶುಶ್ರೂಷೆಗೆ. ಆ ಡಾಕ್ಟರಿಗೆ ಇದು ಎಂತ ಕಾಯಿಲೆ ಎಂದೇ ಗೊತ್ತಾಗಲಿಲ್ಲವೇನೋ ಪಾಪ. ನನ್ನನ್ನು ಮಲಗಿಸಿ ದಿನವೂ ಬೆಳಿಗ್ಗೆ ಸಂಜೆ ಅಂತ ಡ್ರಿಪ್ಸ್ ಕೊಟ್ಟು, ಶಕ್ತಿ ತುಂಬಿದರು. ನನಗೆ ಅಸ್ತಮಾ ಇದೆ ಎಂದು ತಿಳಿದು ಅದರಲ್ಲೇ ಅದಕ್ಕೂ ಮದ್ದು ಸುರಿದರು. ಆದರೆ ಎಕಡು ಮಾತ್ರಾ ಗುಣವಾಗಲಿಲ್ಲ. ಆದರೆ ನಾನು ಸ್ವಲ್ಪ ಗಟ್ಟಿಯಾದೆ ಅಂತಾಯಿತು.

ಎರಡು ದಿನ ಕಳೆಯಿತು. ನಾನು ಡಾಕ್ಟರ್ ವಿಸಿಟ್ ಗೆ ಬಂದಾಗ, ಮೆಲ್ಲನೆ ಹೇಳಿದೆ. “ಒಂದು ವರ್ಷದ ಮೊದಲೊಮ್ಮೆ ನನಗೆ ಹೀಗೆಯೇ ಎಕಡು ಶುರುವಾಗಿತ್ತು. ಆಗ ಉಡುಪಿಯ ಯು. ಎಂ. ವೈದ್ಯ ಎನ್ನುವ ಡಾಕ್ಟರ್  ಒಂದು ಮಾತ್ರೆ ಬರೆದು ಕೊಟ್ಟಿದ್ದರು. ಅದರಿಂದ ಗುಣವಾಗಿತ್ತು. ಅವರನ್ನು ವಿಚಾರಿಸಿದರೆ ಆಗುತ್ತಿತ್ತೋ ಏನೋ” ಅಂದೆ. ಅವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ ಎಂದು ಕಾಣುತ್ತದೆ. ಎಕಡಂತೂ ಗುಣವಾಗಲೇ ಇಲ್ಲ. ಕೊನೆಗೆ ಮರುದಿನ ಮತ್ತೆ ಡಾಕ್ಟರ್ ಬಂದಾಗ “ನನ್ನನ್ನು ಡಿಸ್ಚಾರ್ಜ್ ಮಾಡಿಬಿಡಿ. ನಾನು ಉಡುಪಿಗೆ ಹೋಗುತ್ತೇನೆ. ನನಗೆ ರಜೆ ಬೇರೆ ಇಲ್ಲ. ಆಫೀಸಿನಲ್ಲಿ ತುಂಬಾ ಪ್ರೊಬ್ಲೆಮ್ ಇದೆ. ಸರ್” ಎಂದು ಗೋಗರೆದೆ. ಅವರಿಗೆ ಏನನ್ನಿಸಿತೋ. “ಆಯಿತು” ಎಂದು ಅದೇ ದಿನ ಸಂಜೆ ಡಿಸ್ಚಾರ್ಜ್ ಮಾಡಿಯೂಬಿಟ್ಟರು.

(ಮುಂದುವರಿಯುವುದು)

ಶನಿವಾರ, ನವೆಂಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 52

ಬೆಳಿಗ್ಗೆ ನನ್ನ ಅಕ್ಕ ಭಾವಯ್ಯರಿಂದ ಕಾರ್ಯಕ್ರಮ ಉದ್ಘಾಟನೆಯಾಗಿ, ಅನ್ನಪೂರ್ಣಳ ಅತ್ತಿಗೆ ಗಾಯತ್ರಿಯವರ ಶಂಕರನಾರಾಯಣ ದೇವಸ್ಥಾನದ  ಮಹಿಳಾ ತಂಡದವರ  ಲಲಿತಾಸಹಸ್ರನಾಮ ಪಾರಾಯಣದಿಂದ ಕಾರ್ಯಕ್ರಮ ಶುರುವಾಯಿತು. ಬೆಳಿಗ್ಗೆ ಶ್ರೀಕಾಂತ ಸಿದ್ಧಾಪುರ ಮತ್ತು ಮಧ್ಯಾಹ್ನದ ನಂತರ ಜನಾರ್ದನ ಹಂದೆಯವರು ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತರು. ಉದ್ಘಾಟನೆಯ ನಂತರ ಐರೋಡಿ ನರಸಿಂಹ ಹೆಬ್ಬಾರರ ತಂಡದಿಂದ ಭಜನೆ. ಅದರಲ್ಲಿ ನೀಲಾವರ ಲಕ್ಷ್ಮೀನಾರಾಯಣಯ್ಯ, ಚಂದ್ರಶೇಖರ ಕೆದ್ಲಾಯರು, ದಯಾನಂದ ವಾರಂಬಳ್ಳಿ ಮೊದಲಾದವರು ಇದ್ದರು. ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಗಿ, ಸಾಲಿಗ್ರಾಮ ಮಕ್ಕಳ ಮೇಳದ ಹೆಚ್. ಶ್ರೀಧರ ಹಂದೆಯವರು, ಸುಬ್ರಮಣ್ಯ ಧಾರೇಶ್ವರ ಮತ್ತು ಶ್ರೀಧರಣ್ಣಯ್ಯ, ಅಪ್ಪಯ್ಯನ ನೆನಪುಗಳನ್ನು ಹಂಚಿಕೊಂಡರು. ಉಪ್ಪೂರರ ಮಕ್ಕಳು ಮೊಮ್ಮಕ್ಕಳಲ್ಲಿ ವಿಶೇಷ ಪ್ರತಿಭಾನ್ವಿತರಿಗೆ, ಸಾಕುಮಗನಾದ ಚಂದ್ರಭಟ್ಟರಿಗೆ ಉಪ್ಪೂರರ ನೆನಪಿನಲ್ಲಿ ಗೌರವವನ್ನೂ ಸಮರ್ಪಿಸಲಾಯಿತು. ಸಂಜೀವ ಸುವರ್ಣ, ಮಂಟಪ ಪ್ರಭಾಕರ ಉಪಾಧ್ಯರು, ಅಂಬಾತನಯ, ಶುಂಠಿ ಸತ್ಯನಾರಾಯಣ ಭಟ್ಟರು, ಕೊಳ್ಯುರು ರಾಮಚಂದ್ರ ರಾವ್, ಸಾಲಿಗ್ರಾಮ ಶಿವರಾಮ ಐತಾಳರು ಕೋಟ ಶಿವಾನಂದ ಹೊಳ್ಳರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಸಭೆಗೆ ಕಳೆಯನ್ನು ತಂದುಕೊಟ್ಟರು. ಪ್ರೇಕ್ಷಕರ ಪರವಾಗಿ ಅಂಬಾತನಯರೂ ಮಾತನಾಡಿ, ಉಪ್ಪೂರರ ಜೊತೆಗಿನ ಅವರ ಒಡನಾಟದ ನೆನಪನ್ನು ಹಂಚಿಕೊಂಡರು.

ಆಮೇಲೆ ಮಧ್ಯಾಹ್ನ ಊಟವಾದ ನಂತರ ನೀಲಾವರ ಲಕ್ಷ್ಮಿನಾರಾಯಣಯ್ಯ ಮತ್ತು ಕಲ್ಯಾಣಪುರ ಕಾಲೇಜಿನ ಲೆಕ್ಚರರ್ ನಾರಾಯಣ ಹೆಗಡೆಯವರಿಂದ ಕರ್ಣಭೇದನದ ಭಾಗದ ಕಾವ್ಯವಾಚನವಾಯಿತು. ನಂತರ ಸುಬ್ರಮಣ್ಯ ಧಾರೇಶ್ವರರು ಅಪ್ಪಯ್ಯನ ಇಷ್ಟದ ಕೆಲವು ಪದ್ಯಗಳನ್ನು ಹಾಡಿ, ಮತ್ತೆ ಮತ್ತೆ ಅಪ್ಪಯ್ಯನ ಗುಣಗಾನ ಮಾಡಿ ಅವರಿಂದಲೇ ತಾನು ಇಷ್ಟರಮಟ್ಟಿಗೆ ಆಗಿದ್ದೇನೆ ಎಂದು ಗುರುಗಳ ಸ್ಮರಣೆಯನ್ನು ಮಾಡಿ, ಒಂದು ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮದ್ದಲೆಯಲ್ಲಿ ಸುನಿಲ್ ಭಂಡಾರಿಯವರು ಸಹಕರಿಸಿದ್ದರು.

ನಂತರ ಯಕ್ಷಗಾನ ಸಂವಾದ ಎಂಬ ಅಪರೂಪದ ಕಾರ್ಯಕ್ರಮವು ಗುಂಡ್ಮಿ ಸದಾನಂದ ಐತಾಳರ ನಿರೂಪಣೆಯಲ್ಲಿ ನಡೆಯಿತು. ಅದರಲ್ಲಿ ಹಲವು ಭಾಗವತರು ಒಂದೊಂದು ಪ್ರಸಂಗದ ಪಾತ್ರಗಳನ್ನು ವಹಿಸಿಕೊಂಡು ಪದ್ಯವನ್ನು ಹೇಳಿದರು. ಮೊದಲಿಗೆ ಹೆರಂಜಾಲು ಗೋಪಾಲ ಗಾಣಿಗರು ಮತ್ತು ರಾಘವೇಂದ್ರ ಮಯ್ಯರು ಭೀಷ್ಮವಿಜಯದ ಭಾಗವನ್ನು ಹಾಡಿದರೆ, ನಂತರ ಕೆ.ಪಿ. ಹೆಗಡೆ, ಸುಬ್ರಮಣ್ಯ ಐತಾಳರು ಕೃಷ್ಣ ಸಂಧಾನದ ಭಾಗವನ್ನೂ, ನಾರಾಯಣ ಶಬರಾಯರು, ವಿಶ್ವೇಶ್ವರ ಸೋಮಯಾಜಿಯವರು ಮತ್ತು ಕೆ.ಜೆ. ಗಣೇಶರು ಸೇರಿ, ಕೃಷ್ಣಾರ್ಜುನದ ಭಾಗವನ್ನು ಹಾಡಿ ರಂಜಿಸಿದರು. ಮದ್ದಲೆಯಲ್ಲಿ ಕೆ.ಜೆ.ಕೃಷ್ಣ ಮತ್ತು ಹಾಲಾಡಿ ಚಂದ್ರಾಚಾರ್ ಇವರು ಸಹಕರಿಸಿದರು. ನಂತರ ಸದಾನಂದ ಐತಾಳರು ಸಂಯೋಜಿಸಿದ ನನ್ನ ಕಲ್ಪನೆಯ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯಿತು. ಅದರಲ್ಲಿ ಯಕ್ಷಗಾನದ, ಅಪರೂಪದ ಕೆಲವು ಪದ್ಯಗಳನ್ನು ಆಯ್ದುಕೊಂಡು ಮೊದಲು ಕೆ.ಜೆ. ಗಣೇಶರು ಯಕ್ಷಗಾನದಲ್ಲಿ ಹಾಡಿದರೆ, ಅದೇ ಪದ್ಯವನ್ನು ನಮ್ಮ ನೆಚ್ಚಿನ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರು ಸುಗಮ ಸಂಗೀತದಲ್ಲಿ ಹಾಡಿದರು. ಹಿಮ್ಮೇಳದಲ್ಲಿ ಜೊತೆಗಾರರಾಗಿ ಕೆ.ಜೆ. ಕೃಷ್ಣ ಮದ್ದಲೆವಾದಕರಾಗಿ ಸಹಕರಿಸಿದ್ದರೆ, ಹಾರ್ಮೋನಿಯಂನಲ್ಲಿ ಹಾಲಾಡಿ ಕೃಷ್ಣ ಕಾಮತ್ ರೂ, ತಬಲದಲ್ಲಿ ಗೋರಾಜಿ ಉದಯ ಹಾಲಂಬಿಯವರೂ ಮೇಳವಾದರು. ನಂತರ ನಮ್ಮ ಕುಟುಂಬದ ಕೌಟುಂಬಿಕ ಕಾರ್ಯಕ್ರಮವಾಗಿ ಉಪ್ಪೂರರ ಎಲ್ಲ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರೆಲ್ಲ ಒಬ್ಬೊಬ್ಬರಾಗಿ ಹಾಡಿ ಕುಣಿದು ದಣಿದರು. ನಂತರ ಒಟ್ಟಿಗೇ ಸೇರಿ ಕೃಷ್ಣಮೂರ್ತಿಯಣ್ಣಯ್ಯ ಬರೆದ ಒಂದು ಪದ್ಯವನ್ನೂ ಹಾಡಿ ಕುಣಿದು ಸಂತೋಷಪಟ್ಟೆವು.

 ರಾತ್ರಿ ಊಟವಾದ ಮೇಲೆ ಕರ್ಣಾರ್ಜುನ ಕಾಳಗದ ಆಟ. ಮೊದಲು ಕೊಂಡದಕುಳಿ ರಾಮಚಂದ್ರಹೆಗಡೆಯವರ ಕರ್ಣ ಮಾಡಿಸಬೇಕು ಎಂದು ಅವರನ್ನು ಮಾತಾಡಿಸಿ ಒಪ್ಪಿಸಿದ್ದರೂ, ನಂತರ ಅವರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಿವಾರ್ಯಕಾರಣದಿಂದ ಅನನುಕೂಲವೆಂದು ತಿಳಿಸಿದ್ದರಿಂದ, ಕೋಟ ಸುಜಯೀಂದ್ರ ಹಂದೆಯವರ ಕರ್ಣನಾಗಿ ಉತ್ತಮ ನಿರ್ವಹಣೆಯನ್ನು ಮಾಡಿದರು. ಅದರಲ್ಲಿ ಬೈಲೂರು ಸುಬ್ರಮಣ್ಯ ಐತಾಳರು ಮತ್ತು ತೋನ್ಸೆ ಜಯಂತ ಕುಮಾರರ ಭಾಗವತಿಕೆಯಾದರೆ, ಹಾಲಾಡಿ ಚಂದ್ರಾಚಾರ್ ಮತ್ತು ಸುರೇಶಣ್ಣಯ್ಯನ ಮದ್ದಲೆ ಮತ್ತು ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆಯ ಹಿಮ್ಮೇಳದಲ್ಲಿ, ಸುಜಯೀಂದ್ರ ಹಂದೆಯ ಕರ್ಣ, ವೆಂಕಟೇಶ ಹಂದೆಯ ಅರ್ಜುನ, ಐರೋಡಿ ರಾಜ ಹೆಬ್ಬಾರರ ಕೃಷ್ಣ, ನನ್ನದೇ ಶಲ್ಯ ಮತ್ತು ಜನಾರ್ದನ ಹಂದೆಯವರು ವೃದ್ಧ ಬ್ರಾಹ್ಮಣನಾಗಿ ಅಭಿನಯಿಸಿದರು. ಒಟ್ಟಿನಲ್ಲಿ ನಮ್ಮ ಉಪ್ಪೂರರ ಮನೆತನದ ಚರಿತ್ರೆಯಲ್ಲಿ ಅದೊಂದು ಐತಿಹಾಸಿಕ ದಾಖಲೆಯಾಗಿ ಬಹುಕಾಲದವರೆಗೂ ನೆನಪಿನಲ್ಲಿರುವ ವೈಭವದ ಒಂದು ಉತ್ಕೃಷ್ಟ ಕಾರ್ಯಕ್ರಮವಾಗಿ ಮನಸ್ಸಿನಲ್ಲಿ ಉಳಿಯುವಂತಾಯಿತು.

ಆಗಲೇ ಅಪ್ಪಯನ ಪದ್ಯಗಳ ಆಡಿಯೋ, ಲೇಖನಗಳು, ಪೋಟೋ ಇತ್ಯಾದಿ ದಾಖಲೆಗಳನ್ನು ಒಟ್ಟು ಮಾಡಬೇಕೆಂಬ ಬಯಕೆ ಬಲವಾಗತೊಡಗಿತು. ಕೃಷ್ಣಮೂರ್ತಿಯಣ್ಣನ ಹತ್ತಿರ, ಅಪ್ಪಯ್ಯ ಇರುವಾಗ ಅವನದೇ ಕ್ಯಾಮರಾದಲ್ಲಿ ತೆಗೆದಿರಿಸಿದ್ದ ಫೋಟೋಗಳನ್ನು ಕೊಡಲು ಹೇಳಿದೆ. ಅವನ ಹತ್ತಿರ ಇದ್ದವುಗಳ ಜೊತೆಗೆ ಬೆಂಗಳೂರಿನ ನರಸಿಂಹ ಹಂದೆಯವರು ಎಂಬ ಅಪ್ಪಯ್ಯನ ಅಭಿಮಾನಿಗಳಲ್ಲಿ ಇದ್ದ ಕೆಲವು ಪೋಟೋಗಳನ್ನು ಅವನು ಕಳುಹಿಸಿಕೊಟ್ಟ. ಆಗಲೇ ಫೇಸ್ ಬುಕ್ ಶುರುವಾದ ಕಾಲವದು. ಅದರಲ್ಲಿ ಅಪ್ಪಯ್ಯನ ಒಂದು ಪೇಜ್ ನ್ನು ತೆರೆದು, ನನ್ನ ಹತ್ತಿರ ಇದ್ದ ಫೋಟೋಗಳ ಜೊತೆಗೆ, ಅವುಗಳನ್ನು ಅಪ್ಲೋಡ್ ಮಾಡಿದೆ.  ನನ್ನಲ್ಲಿರುವ ಅವರ ಆಡಿಯೋ ಗಳನ್ನು ಮ್ಯೂಸಿಕ್ ಅಪ್ ಲೋಡ್ಸ್ ಎನ್ನುವ ಓಪನ್ ಕ್ಲೌಡ್ ಸೈಟ್ ಗೆ ಅಪ್ಲೋಡ್ ಮಾಡಿದೆ. ಆದರೆ ಆ ಸೈಟ್ ನಂತರ ಬ್ಯಾನ್ ಆಗಿ ಬ್ಲೋಕ್ ಆಯಿತು. ಮತ್ತು ಫೇಸ್ಬುಕ್ ನಲ್ಲಿಯೇ ನನ್ನ ತಂದೆಯವರ ಏನಾದರೂ ದಾಖಲೆಗಳಿದ್ದಲ್ಲಿ ನನಗೆ ತಿಳಿಸಲೂ ವಿನಂತಿಸಿಕೊಂಡೆ. ಹಾಗೆಯೇ, ರಮೇಶಣ್ಣಯ್ಯನೂ ಆಗ ಅಪ್ಪಯ್ಯನ ಹಲವು ಪ್ರಸಂಗಗಳ ಪದ್ಯಗಳನ್ನು ಸಭಾಲಕ್ಷಣದ ಪದ್ಯಗಳನ್ನೂ, ರಾಮಾಂಜನೇಯ ಕೃಷ್ಣಾರ್ಜುನ, ಪಟ್ಟಾಭಿಷೇಕ, ಬಬ್ರುವಾಹನ, ಲಂಕಾದಹನ, ಭೀಷ್ಮವಿಜಯ ಮುಂತಾದ ಪ್ರಸಂಗಗಳ ಪದ್ಯಗಳನ್ನು  ಕೋಟ ಮಣೂರಿನ ಅಕ್ಕನ ಮನೆಯ ಉಪ್ಪರಿಗೆಯಲ್ಲಿ ಅವನ ಟೇಪ್ ರೆಕಾರ್ಡಿನಲ್ಲಿ ರೆಕಾರ್ಡ್ ಮಾಡಿದ್ದು. ಹಾಗೂ ಅವನ ಸಂಗ್ರಹದಲ್ಲಿದ್ದ ಆಟದಲ್ಲೇ ಅವನು ರೆಕಾರ್ಡ್ ಮಾಡಿದ ಶಶಿಪ್ರಭಾ ಪರಿಣಯ, ಭೀಷ್ಮ ವಿಜಯ, ರುಕ್ಮಾಂಗದ ಚರಿತ್ರೆ ಮುಂತಾದ ಕ್ಯಾಸೆಟ್ ಗಳನ್ನೂ ಆಗಲೇ ಪ್ರತಿ ಮಾಡಿಕೊಂಡಿದ್ದು ಅದನ್ನೆಲ್ಲ ಎಮ್.ಪಿ.ತ್ರಿ.ಫೋರ್ಮೆಟ್ ಗೆ ಕನ್ವರ್ಟ್ ಮಾಡಿದೆ.

ಹೆಬ್ರಿಯ ಪ್ರಾಥಮಿಕ ಶಾಲೆಯ ಮಾಸ್ಟರರೊಬ್ಬರು, ಕಾರ್ಕಳದ ಒಬ್ಬ ಪೋಟೋಗ್ರಾಫರ್ (ಅವರ ಹೆಸರು ಏನು ಮಾಡಿದರೂ ಎಷ್ಟೇ ತಲೆ ಕೆರೆದುಕೊಂಡರೂ ಈಗ ನೆನಪಿಗೆ ಬರುತ್ತಿಲ್ಲ ) ರವರೊಂದಿಗೆ, “ಅಪ್ಪಯ್ಯನ ಪದ್ಯವಿದೆಯೇ?” ಅಂತ ಕೇಳಿಕೊಂಡು, ನಮ್ಮ ಮನೆಯನ್ನು ಹುಡುಕಿಕೊಂಡು ಬಂದವರು, ಅವರ ಹತ್ತಿರವಿದ್ದ ಅಪ್ಪಯ್ಯ ಇರುವಾಗ, ಒಮ್ಮೆ ಮುದ್ರಾಡಿಯಲ್ಲಿ ಹಿರಿಯಡ್ಕ ಗೋಪಾಲ ರಾವ್ ರ ಮದ್ದಲೆಯಲ್ಲಿ ಡಾಕ್ಟರ್ ರೊಬ್ಬರು ಮಾಡಿಸಿದ ಪದ್ಯಗಳ ಕ್ಯಾಸೆಟ್ ನ್ನು ತಂದು ಕೊಟ್ಟರು. ಆ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಹಾರ್ಮೋನಿಯಂವಾದನ ನನ್ನದೇ ಆಗಿತ್ತು. ನನಗೆ ತುಂಬಾ ಖುಷಿಯಾಯಿತು. ಅದನ್ನು ಒಮ್ಮೆ ಅವರಿಗೆ ಟೇಪ್ ರೆಕಾರ್ಡರ್ ನಲ್ಲಿ ಹಾಕಿ ತೋರಿಸಿದಾಗ ಅವರು, “ಆ ಸ್ವರ ಕೇಂಡ್ ಮೈಯೆಲ್ಲ ಝುಮ್ ಅನ್ನತ್ ಮಾರಾಯ್ರೆ. ಅವ್ರೇ ಕಾಲ್ ಮೇಲ್ ಕಾಲ್ ಹಾಯ್ಕಂಡ್ ಎದ್ರಿಗೆ ಕೂಕಂಡಾಗ್ ಕಾಂತ್.  ಎಲ್ಲಾ ಹೋಯ್ತೆ, ಈಗ ಯಾರಿದ್ರ್ ಹಾಂಗ್ ಪದ ಹೇಳ್ವರ್?” ಎಂದು ಕಣ್ಣಲ್ಲಿ ನೀರು ತಂದುಕೊಂಡರು.

ಅದನ್ನು ಎಂಪಿತ್ರಿಗೆ ಪರಿವರ್ತಿಸಿ ಒಂದು ಪ್ರತಿಯನ್ನು ಅವರ ಪೆನ್ ಡ್ರೈವ್ ಗೆ ಹಾಕಿಕೊಟ್ಟೆ. ಅದರ ಪ್ರತಿಯೊಂದನ್ನು ನನ್ನ ಕಂಪ್ಯೂಟರ್ ಲ್ಲಿ ಇಟ್ಟುಕೊಂಡಿದ್ದೆ. ಆದರೆ ನನ್ನ ಗ್ರಹಚಾರ, ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಹಾಳಾಗಿ ಎಲ್ಲಾ ನನ್ನ ಸಂಗ್ರಹಗಳೂ ನಾಶವಾಗಿ ಹೋಗಿಬಿಟ್ಟಿತು. ಪುಣ್ಯಕ್ಕೆ ಕೆಲವನ್ನು ಸಿಡಿ ಮಾಡಿ ಇಟ್ಟುಕೊಂಡದ್ದರಿಂದ ಬಚಾವಾದೆ. ಆದರೆ ಮಾಸ್ಟರು ಕೊಟ್ಟ ಆ ಕ್ಯಾಸೆಟ್ ನ ಅಪ್ಪಯ್ಯನ ಪದ್ಯಗಳು ಮಾತ್ರ ಹೋಯಿತೆ. ಅದರ ಬ್ಯಾಕ್ ಅಪ್ ಮಾಡಿರಲಿಲ್ಲ. ಹೊಟ್ಟೆ ಉರಿದುಹೋಯಿತು. ಪುನಹ ಅದನ್ನು ಪಡೆಯಲು ಹೆಬ್ರಿ ಮಾಸ್ಟರರನ್ನು ಸಂಪರ್ಕಿಸಲು, ಅವರ ಪೋನ್ ನಂಬರನ್ನೂ ಪಡೆದು ಇಟ್ಟುಕೊಂಡಿರಲಿಲ್ಲ. ತುಂಬಾ ಬೇಸರವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಅದು ನನ್ನ ಪಾಲಿಗೆ ತುಂಬಾ ಅಮೂಲ್ಯವಾದ ಸಂಗ್ರಹವಾಗಿತ್ತು. ಈ ಮಧ್ಯದಲ್ಲಿ ನಮ್ಮ ಸಂಬಂಧಿಕರಾದ ನಿತ್ಯಾನಂದ ಹೆಬ್ಬಾರರು ನಮ್ಮ ಮನೆಗೆ ಬಂದಾಗ ಅವರ ಮೊಬೈಲಿಗೆ ಕೆಲವು ಅಪ್ಪಯ್ಯನ ಪದ್ಯಗಳನ್ನು ಹಾಕಿ ಕೊಟ್ಟಿದ್ದೆ. ಅದರಲ್ಲಿ ಇರಬಹುದು ಅನ್ನಿಸಿ, ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು, “ಅಯ್ಯೋ, ಆ ಫೋನ್ ಹಾಳಾಗಿ, ಎಲ್ಲಾ ಅಳಿಸಿಹೋಯಿತು ಮಾರಾಯ” ಎಂದುಬಿಟ್ಟರು. ಬೇರೆ ಯಾರ ಹತ್ತಿರವೂ ಅದು ಇರಲು ಸಾಧ್ಯವಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯಲಿಲ್ಲ.

(ಮುಂದುವರಿಯುವುದು)

ಶುಕ್ರವಾರ, ನವೆಂಬರ್ 10, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 51

ವಿಷ್ಣುಮೂರ್ತಿ ಎನ್ನುವ ಜನತಾ ಕೊಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರೊಬ್ಬರಿದ್ದರು. ಅವರು ಅಲೆವೂರಿನಲ್ಲಿ ಒಂದು ಸೈಟ್ ತೆಗೆದು ಇಟ್ಟಿದ್ದರು. ಮನೆ ಕಟ್ಟಲು ಪ್ರಾರಂಭಿಸದೇ ಇರುವುದರಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಒಮ್ಮೆ ಅಲ್ಲಿಗೆ ಹೋಗಿ ನೋಡಿದಾಗ ಅವರ ನಿವೇಶನದ  ಒಂದು ಬದಿಯಲ್ಲೇ ಒಂದು ಕಂಬ ಹಾಕಿ ಸೈಟಿನ ಮೂಲೆಯಿಂದ ಹಾದುಹೋಗುವಂತೆ ವಯರ್ ಎಳೆದು ಅಲ್ಲಿನ ಮತ್ತೊಂದು ಮನೆಗೆ ಕರೆಂಟ್ ಕೊಟ್ಟಿದ್ದರು. ಇದ್ದದ್ದೇ ಏಳೋ ಎಂಟೋ ಸೆಂಟ್ಸ್ ಜಾಗ, ಅದರಲ್ಲೂ ಸ್ವಲ್ಪ ಜಾಗ ಹೀಗೆ ನಷ್ಟವಾಗಿ ಹೋಗುತ್ತದೆ ಮತ್ತು ಅದರ ಅಡಿಯಲ್ಲಿ ಏನು ನೆಟ್ಟರೂ ಕೆಇಬಿಯವರು ಕಡಿದು ಹಾಕುತ್ತಾರೆ ಎಂದು ಗೊತ್ತಿದ್ದ ಮೂರ್ತಿಯವರಿಗೆ ಆತಂಕವಾಯಿತು. ನಮ್ಮ ಆಫೀಸಿಗೆ ಬಂದು ವಿಷಯ ತಿಳಿಸಿದರು. ನಾನು ಅವರನ್ನು ಕರೆದುಕೊಂಡು ನನ್ನ ಮೇಲಧಿಕಾರಿಗಳಲ್ಲಿಗೆ ಹೋಗಿ, “ಅವರಿಗೆ ಸಹಾಯ ಮಾಡಲು ಸಾಧ್ಯವೇ?” ಎಂದು ಕೇಳಿಕೊಂಡೆ.

ಅವರು ಕೂಡಲೇ ಶಾಖಾಧಿಕಾರಿಗಳಿಗೆ ಫೋನ್ ಮಾಡಿ, ಸ್ಥಳಕ್ಕೆ ಹೋಗಿ ನೋಡಿ ಬರಲು ತಿಳಿಸಿದರು. ಅಲ್ಲಿಂದ ಸ್ಥಳಪರಿಶೀಲನೆಯಾಗಿ ಅರ್ಧ ಗಂಟೆಯಲ್ಲಿ ವಸ್ತುಸ್ಥಿತಿಯ ವರದಿಯಾಯಿತು. ಆದರೆ “ಅಲ್ಲಿ ಈಗಾಗಲೇ ವಯರ್ ಎಳೆದು ಮುಂದಿನ ಮನೆಗೆ ಕರೆಂಟ್ ಕೊಟ್ಟಾಗಿದೆಯಂತಲ್ಲ. ಆಕ್ಷೇಪವಿದ್ದಲ್ಲಿ ವಯರ್ ಎಳೆಯುವಾಗಲೇ ತಿಳಿಸಬೇಕಿತ್ತು. ನಿಮಗೆ ಏನೂ ಪ್ರೋಬ್ಲೆಮ್ ಇಲ್ಲ. ಸೈಟಿನ ಒಂದು ಬದಿಯಲ್ಲಿ ವಯರ್ ಹೋಗಿದೆ. ಸ್ವಲ್ಪ ಸುಧಾರಿಸಿಕೊಳ್ಳಿ. ಹಾಗೆ ಎಲ್ಲರೂ ಅವರವರ ಖಾಸಗಿ ಜಾಗದಲ್ಲಿ ವಯರ್ ಹೋಗಬಾರದು ಎಂದು ಹೇಳುತ್ತಾ ಹೋದರೆ, ನಮ್ಮ ಕರೆಂಟನ್ನು ಯಾರಿಗೂ ಕೊಡಲು ಸಾಧ್ಯವಾಗಲಿಕ್ಕಿಲ್ಲ”. ಎಂದು ಕೈಚೆಲ್ಲಿದ್ದೂ ಆಯಿತು. ನಮ್ಮ ವಿಷ್ಣುಮೂರ್ತಿಯವರಿಗೆ ನಿರಾಶೆಯಾಯಿತು. ಆದರೂ “ಸರ್, ಆ ಮನೆಗೆ ಮತ್ತೊಂದು ಕಡೆಯಿಂದ ರಸ್ತೆ ಇದೆ. ಅಲ್ಲಿಂದ ವಯರ್ ಎಳೆದು ಕರೆಂಟ್ ಕೊಡಲು ಸಾಧ್ಯವಿದೆ. ದಯವಿಟ್ಟು ಹಾಗೆ ಆದರೂ ಮಾಡಿಕೊಡಿ” ಎಂದು ವಿನಂತಿಸಿದರು. ಅದಕ್ಕೆ “ಈಗಾಗಲೇ ಕೆಲಸ ಮಾಡಿ ಖರ್ಚು ಮಾಡಿಯಾಗಿದೆ. ಇನ್ನು ಅದನ್ನು ತೆಗೆದು ಪುನಹ ಮಾಡುವುದು ಹೇಗೆ?. ನಮ್ಮ ಇಲಾಖೆಯಲ್ಲಿ ಅದಕ್ಕೆ ಅವಕಾಶವಿಲ್ಲ. ಇನ್ನು ನಿಮಗೆ ಬೇಕೇ ಅಂತಾದರೆ ಸ್ಥಳಾಂತರದ ಖರ್ಚನ್ನು ನೀವು ಭರಿಸುವುದಾದರೆ ಕೂಡಲೇ ಮಾಡಿಸಿಕೊಡುತ್ತೇನೆ” ಎಂದು ಭರವಸೆಯನ್ನೂ ಕೊಟ್ಟರು. ವಿಷ್ಣುಮೂರ್ತಿಯವರ ಮುಖ ಸಣ್ಣಗಾಯಿತು. “ಸರ್, ನನ್ನ ತಪ್ಪಿಲ್ಲದೇ ನಾನು ಸಾವಿರಾರು ರುಪಾಯಿಯನ್ನು ಭರಿಸಬೇಕೆಂದರೆ ಯಾವ ನ್ಯಾಯ?. ದಯವಿಟ್ಟು ಏನಾದರೂ ಮಾಡಿ. ನಾನು ಅಲ್ಲಿ ಮನೆಯನ್ನು ಕಟ್ಟಲು ಶುರುಮಾಡಬೇಕು.” ಎಂದರು.

ಆದರೆ ಅವರ ಬೇಡಿಕೆ ಫಲಕಾರಿಯಾಗಲಿಲ್ಲ. ನನಗೂ ಅವರಿಗೆ ಸಹಾಯ ಮಾಡಲಾಗಲಿಲ್ಲವಲ್ಲ ಎಂದು ಬೇಸರವಾಯಿತು. ಅದೇ ಸಮಯಕ್ಕೆ ಕುಂದಾಪುರದಲ್ಲಿ ಇಂತಹುದೇ ಒಂದು ಪ್ರಕರಣದಲ್ಲಿ ಮೊದಲೇ ನಿವೇಶನ ಇದ್ದು, ಅದರ ಮೇಲೆ ಲೈನ್ ಎಳೆದುದರಿಂದ ಬಳಕೆದಾರರು ಆಕ್ಷೇಪಿಸಿ ಬಳಕೆದಾರರ ವೇದಿಕೆಯಲ್ಲಿ ದೂರು ನೀಡಿದ್ದು, ಅದರ ತೀರ್ಪು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಬಳಕೆದಾರರ ವೇದಿಕೆಯು “ಕೆಇಬಿಯವರೇ ಅವರ ಖರ್ಚಿನಲ್ಲಿ ವಯರನ್ನು ಬದಲಾಯಿಸಿ ಕೊಡಬೇಕು ಮತ್ತು ಅದರಿಂದ ಮಾನಸಿಕವಾಗಿ ನೊಂದ ಬಳಕೆದಾರರಿಗೆ ಪರಿಹಾರವನ್ನೂ ಕೊಡಬೇಕು” ಎಂದು ಪ್ರಕರಣ ಇತ್ಯರ್ಥಗೊಳಿಸಿ ತೀರ್ಪು ನೀಡಿತ್ತು. ಅದನ್ನು ಓದಿದ ನಾನು ವಿಷ್ಣುಮೂರ್ತಿಯವರನ್ನು ಬರಲು ಹೇಳಿ, “ನನಗೆ ನನ್ನ ಸ್ಥಳದ ಮೇಲೆ ಹಾದು ಹೋದ ವಯರ್ ನ್ನು ಸ್ಥಳಾಂತರಿಸಿ ನ್ಯಾಯ ಒದಗಿಸದಿದ್ದರೆ ನಾನೂ ಬಳಕೆದಾರರ ವೇದಿಕೆಗೆ ದೂರು ಕೊಡುತ್ತೇನೆ ಎಂದು, ಆ ಪೇಪರ್ ಕಟ್ಟಿಂಗ್ ನ್ನು ಲಗತ್ತಿಸಿ ಒಂದು ಅರ್ಜಿ ಬರೆಯಿರಿ ನೋಡುವ” ಎಂದು ತಿಳಿಸಿದೆ. ಅವರು ಹಾಗೆಯೇ ಬರೆದರು. ಹದಿನೈದು ದಿನದಲ್ಲಿಯೇ ಅವರ ಕೆಲಸವೂ ಆಯಿತು. ನಂತರ ಒಮ್ಮೆ ಅವರು ನನ್ನನ್ನು ಭೇಟಿ ಮಾಡಿ ಧನ್ಯವಾದ ಹೇಳುವಾಗ, “ನೀವೇ ನಿಮ್ಮ ಆಫೀಸಿನ ವಿರುದ್ದ ಕೆಲಸ ಹೇಳಬೇಕಾಯಿತಲ್ಲ. ಆದರೆ ಅದರಿಂದ ನನಗೆ ಮಾತ್ರ ದೊಡ್ಡ ಉಪಕಾರವಾಯಿತು” ಎಂದರು. ನಾನು, “ಕಾನೂನು ಏನೇ ಇರಲಿ. ಈ ಪ್ರಕರಣದಲ್ಲಿ ನಿಮಗೆ ಅನ್ಯಾಯವಾಗಿದೆ ಎನ್ನಿಸಿತು. ಮನಃಸಾಕ್ಷಿ  ಹೇಳಿದ ಹಾಗೆ ಮಾಡಿದೆ” ಎಂದೆ.

ನನಗೆ ೨೦೦೮ ರಲ್ಲಿ ಮತ್ತೆ ಪ್ರೊಮೋಶನ್ ಬಂದು, ಲೆಕ್ಕಾಧಿಕಾರಿಯಾಗಿ ಮಂಗಳೂರಿನ ಅತ್ತಾವರ ವಿಭಾಗಕ್ಕೆ ವರ್ಗವಾಯಿತು. ಆಗ ನನಗೆ ನನ್ನ ಹವ್ಯಾಸವಾದ ಬರವಣಿಗೆ, ಯಕ್ಷಗಾನ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಹಂಬಲ ಶುರುವಾಗತೊಡಗಿತು. ಅದೇ ಸಮಯದಲ್ಲಿ ನಾನು, ಅನ್ನಪೂರ್ಣಳ ಸಹಾಯದಿಂದ “ಬಳಗ” ಎಂಬ ಖಾಸಗಿ ಮಾಸಪತ್ರಿಕೆಯನ್ನು ತಯಾರು ಮಾಡಿ, ನಮ್ಮ ಸಂಬಂಧಿಕರಿಗೆಲ್ಲ ಕಳಿಸಿಕೊಡುತ್ತಿದ್ದೆ. ಅದರಲ್ಲಿ ನಾಲ್ಕು ಪುಟಗಳಿದ್ದು, ನನಗೆ ತಿಳಿದ ಹಲವಾರು ಸಂಗತಿಗಳನ್ನು ಅದರ ಮೊದಲ ಪುಟದಲ್ಲಿ ತಿಳಿಸುತ್ತಿದ್ದೆ. ಎರಡನೆಯ ಪುಟದಲ್ಲಿ ನಮ್ಮ ಬಳಗದವರಲ್ಲಿ ಯಾರಾದರೂ ಏನಾದರೂ ಬರೆದು ಕಳಿಸಿದರೆ ಅದನ್ನು, ಮೂರನೆಯ ಪುಟದಲ್ಲಿ ಮಕ್ಕಳಿಗೆ ಇಷ್ಟವಾಗುವ ಲೆಕ್ಕಗಳು, ಸಮಸ್ಯೆಗಳು, ಚುಟುಕುಗಳು, ಪದಬಂಧ ಇತ್ಯಾದಿಗಳನ್ನು ಅಳವಡಿಸುತ್ತಿದ್ದೆ. ಮತ್ತು ಕೊನೆಯ ಪುಟದಲ್ಲಿ ನಮ್ಮ ಸಂಬಂಧಿಕರ ಹುಟ್ಟುಹಬ್ಬ, ಮದುವೆಯ ದಿನದ ಶುಭಾಶಯವನ್ನು ಅದರಲ್ಲಿ ಹಾಕಿ ನೆನಪು ಮಾಡುತ್ತಿದ್ದೆ. ಎಲ್ಲವನ್ನೂ ಕಂಪ್ಯೂಟರಲ್ಲಿ ಟೈಪ್ ಮಾಡಿ ಒಂದು ಐವತ್ತು ಪ್ರತಿಗಳನ್ನು ಝೆರಾಕ್ಸ್ ಮಾಡಿ ಅಂಚೆಯಲ್ಲಿ ಎಲ್ಲರಿಗೂ ಕಳಿಸಿ, ಅವರು ಮೊಬೈಲಿನಲ್ಲಿ, ಅಂಚೆಯಲ್ಲಿ ಪೋನ್ ನಲ್ಲಿ ನೀಡಿದ ಪ್ರತಿಕ್ರಿಯೆಗಳನ್ನು ಕೊನೆಯ ಪುಟದಲ್ಲಿ ಸಂಗ್ರಹಿಸಿ ಹಾಕುತ್ತಿದ್ದೆ. ಸುಮಾರು ಒಂದುವರೆ ವರ್ಷಗಳ ಕಾಲ ಅದನ್ನು ಆಸಕ್ತಿಯಿಂದ ನಡೆಸಿದೆ. ನಂತರ ಆಫೀಸಿನ ಕೆಲಸಗಳ ಮಧ್ಯ ಅದೂ ಬೋರ್ ಅನ್ನಿಸಿ ನಿಲ್ಲಿಸಬೇಕಾಯಿತು.

ಉದ್ಯೋಗದಲ್ಲಿದ್ದಾಗ ಅನಿವಾರ್ಯವಾಗಿ ನನ್ನನ್ನು ತೊಡಗಿಸಿಕೊಂಡು ನನ್ನ ಜೀವವಾದ ಯಕ್ಷಗಾನವನ್ನೇ ಹತ್ತಾರು ವರ್ಷ ದೂರ ಮಾಡಿದೆನಲ್ಲ ಎಂದು ಕೆಲವೊಮ್ಮೆ ಅನ್ನಿಸಿ ಮನಸ್ಸಿನಲ್ಲಿ ಅದೇ ಕೊರೆಯತೊಡಗಿತು. ಮಂಗಳೂರಿನಲ್ಲಿ ಲೆಕ್ಕಾಧಿಕಾರಿಯಾಗಿ ಇರುವಾಗ ಅಪ್ಪಯ್ಯನ ನೆನಪು ಇದ್ದಕ್ಕಿದ್ದ ಹಾಗೆ ತೀವ್ರವಾಗಿ ಕಾಡಲು ಶುರುವಾಯಿತು. ಅವರ ನೆನಪುಗಳನ್ನು ಈ ಪ್ರಪಂಚ ಶಾಶ್ವತವಾಗಿ ಮರೆಯುವ ಮೊದಲು, ಮತ್ತೆ ಅವರನ್ನು, ಅವರ ಅಭಿಮಾನಿಗಳು ನೆನಪಿಸಿಕೊಳ್ಳುವಂತೆ ಮಾಡಬೇಕು ಎನ್ನಿಸಲೂ ಶುರುವಾಯಿತು.

ಆಗಲೇ ಶ್ರೀಧರಣ್ಣಯ್ಯ ಅಪ್ಪಯ್ಯನ ನೆನಪಿನಲ್ಲಿ  ಒಂದು ಪ್ರಶಸ್ತಿಯನ್ನು  ಒಬ್ಬ ಹಿಮ್ಮೇಳದ ಕಲಾವಿದರಿಗೆ ನೀಡುವ ಬಗ್ಗೆ, ಒಂದು ಕುಟುಂಬ ನಿಧಿಯನ್ನು ತನ್ನ ಗರಿಷ್ಠ ಪಾಲಿನೊಂದಿಗೆ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ  ನೀಡಿದ್ದ. ಕಲಾರಂಗದ ಆಟದ ಸಮಯದಲ್ಲಿ  ಅವರು ಅಪ್ಪಯ್ಯನ ಒಡನಾಡಿಯಾಗಿದ್ದ ಯಾವುದಾದರೂ ಒಬ್ಬ ಕಲಾವಿದರಿಗೆ ಆ ನಿಧಿಯ ಬಡ್ಡಿಯಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನವನ್ನು ಮಾಡಿಕೊಂಡು ಬರುತ್ತಿದ್ದು, ಅದನ್ನು ಈಗಲೂ ನವಂಬರ್ ನಲ್ಲಿ ಮಾಡುತ್ತಾ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆಗಲೇ  ಅಪ್ಪಯ್ಯ ನಮ್ಮನ್ನು ಅಗಲಿ ಇಪ್ಪತ್ತೈದು ವರ್ಷಗಳಾಗುತ್ತಾ ಬಂದಿತ್ತು. ಒಂದು ಪೂರ್ತಿದಿನದ ಕಾರ್ಯಕ್ರಮವನ್ನು ನಮ್ಮ ಮೂಲಮನೆ ಚೇರಿಕೆಯಲ್ಲಿ ಮಾಡಬೇಕು ಎಂದು ನಿರ್ಣಯಿಸಿದೆ. ಅಣ್ಣಂದಿರಿಗೆ, ಅಣ್ಣನ ಅಕ್ಕನ ಮಕ್ಕಳಂದಿರಿಗೆ ಎಲ್ಲರಿಗೂ ಪತ್ರ ಬರೆದು ನನ್ನ ಆಲೋಚನೆಯನ್ನು ತಿಳಿಸಿದೆ. ಅವರೆಲ್ಲರೂ ಅದಕ್ಕೆ ಸಹಕಾರ ಕೊಡುವುದಾಗಿ ಭರವಸೆಯಿತ್ತರು. 2009 ಎಪ್ರಿಲ್ 12ರಂದು, ಅಪ್ಪಯ್ಯ ನಮ್ಮನ್ನು ಅಗಲಿ ಸರಿಯಾಗಿ ಇಪ್ಪತ್ತೈದು ವರ್ಷದ ದಿನ, ಒಂದು ಇಡೀ ದಿನದ, ಅಂದರೆ ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾದರೆ ರಾತ್ರಿ ಒಂದು ಬಯಲಾಟ ಮಾಡಿ ಅದು ಮುಗಿಯುವವರೆಗೆ ಒಂದೊಂದು ಗಂಟೆಯ ವಿವಿಧ ಕಾರ್ಯಕ್ರಮಗಳು, ಬೆಳಿಗ್ಗೆ ಲಲಿತಾಸಹಸ್ರನಾಮದಿಂದ ತೊಡಗಿ, ಭಜನೆ, ಕಾವ್ಯವಾಚನ, ಅಪ್ಪಯ್ಯನ ಶಿಷ್ಯರಿಂದ ಗಾನವೈವಿಧ್ಯ, ಹಿಮ್ಮೇಳ ಮತ್ತು ಕರ್ನಾಟಕ ಸಂಗೀತದ ಒಂದು ಪ್ರಯೋಗ, ಮನೆಯವರೆಲ್ಲರೂ ಸೇರಿ ಅವರವರ ಪ್ರತಿಭಾಪ್ರದರ್ಶನ, ರಾತ್ರಿ ಒಂದು ಗಡದ್ದು ಆಟ, ಮಧ್ಯದಲ್ಲಿ ಒಂದು ಸಭಾಕಾರ್ಯಕ್ರಮ. ಅದರಲ್ಲಿ ನಮ್ಮ ಕುಟುಂಬದಲ್ಲಿಯೇ ಹೆಚ್ಚಿನ ಸಾಧನೆ ಮಾಡಿದವರಿಗೆ, ಅಪ್ಪಯ್ಯನ ಸಾಕು ಮಗನಾದ ಚಂದ್ರ ಭಟ್ಟರಿಗೆ ಸನ್ಮಾನ, ಹೀಗೆ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲರಿಗೂ ತಿಳಿಸಿದೆ.

ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಲು ಸುಣ್ಣಬಣ್ಣ ಹೊಡೆಸಲು ದಾಮೋದರಣ್ಣಯ್ಯನ ಮಗನಿಗೆ ಹೇಳಿ ಮಾಡಿಸಿದೆ. ಮನೆಯವರೆಗೂ ರಸ್ತೆ ಸೌಕರ್ಯವಿರಲಿಲ್ಲ. ಬುಲ್ಡೋಜರ್ ತರಿಸಿ, ಪಕ್ಕದ ಸ್ಥಳದ ಯಜಮಾನರನ್ನು ವಿನಂತಿಸಿ, ಮಧ್ಯದ ಎತ್ತರದ ಧರೆಯನ್ನು ಬೀಳಿಸಿ, ದನಗಳು ಓಡಾಡುವ, ನೀರು ಹರಿಯುವ ತಗ್ಗಿನ ಓಣಿಯನ್ನೂ ಮುಚ್ಚಿ ದಾರಿಯ ಬದಿಯ ಮರಗಳನ್ನೂ ಕಡಿದು ಮನೆಯವರೆಗೆ ರಸ್ತೆಯನ್ನೂ ಮಾಡಿದ್ದಾಯಿತು. ಅದೇ ಸಮಯದಲ್ಲಿ ಶ್ರೀ ರಾಘವ ನಂಬಿಯಾರ್ ರವರನ್ನು ಭೇಟಿಯಾಗಿ, ಅಪ್ಪಯ್ಯನ ಬಗ್ಗೆ ಒಂದು ಲೇಖನವನ್ನು ಬರೆದುಕೊಡಲು ವಿನಂತಿಸಿದೆ. ಅವರು ಸಂತೋಷದಿಂದ ಒಪ್ಪಿ ಕೂಡಲೇ ಬರೆದುಕೊಟ್ಟರು. ಅದನ್ನು ಉದಯವಾಣಿಗೆ, ಪ್ರಜಾವಾಣಿ ಪತ್ರಿಕೆಗಳಿಗೆ ಕಳಿಸಿ ಪ್ರಕಟಿಸಲು ವಿನಂತಿಸಿದ ಮೇರೆಗೆ, ಅದೇ ಸಮಯದಲ್ಲಿ ಅದು ಪ್ರಕಟವೂ ಆಗಿ, ಸಂತೋಷವಾಯಿತು. ಮನೆಯ ಹತ್ತಿರದ ಮಕ್ಕಿಗದ್ದೆಯಲ್ಲಿ ಒಂದು ರಂಗಸ್ಥಳ ನಿರ್ಮಿಸಿ ಒಂದು ದೊಡ್ಡ ಟೆಂಟ್ ಹಾಕಿ ಎಲ್ಲವನ್ನೂ ಸಿದ್ಧಮಾಡಿದ್ದಾಯಿತು.

(ಮುಂದುವರಿಯುವುದು)

ಗುರುವಾರ, ನವೆಂಬರ್ 9, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 50

ಅವನು ತಟ್ಟನೇ ಯಕ್ಷಗಾನ ಕೇಂದ್ರಕ್ಕೆ ಹೋಗಲು ಒಪ್ಪಿದ. ಬಹುಷ್ಯ ಸೈಕಲ್ ಕಲಿಯುವಾಗ ಅವನ ಸ್ನೇಹಿತರ ಮುಂದೆ ನನ್ನಿಂದ ಅವಮಾನವಾದದ್ದು ನೆನಪಾಗಿ, ಕುಣಿತ ಕಲಿಯುವಾಗಲೂ ಪೆಟ್ಟು ತಿನ್ನುವ ಅವಮಾನದ ಸಂಗತಿ ಮನಸ್ಸಿಗೆ ಬಂದಿರಬೇಕು. ನನಗೂ ಅದರಿಂದ ಸಂತೋಷವಾಯಿತು. ಆಗ, ಅಲ್ಲ ಈಗಲೂ ಹಾಗೆಯೇ, ಸಂಜೀವರು ಯಾರೇ ಆಗಲಿ, ಮಕ್ಕಳು ಮುದುಕರು ಹೆಣ್ಣುಮಕ್ಕಳು ಎನ್ನದೇ, ಎಷ್ಟು ವಯಸ್ಸಿನವರಾಗಲಿ, ಅಲ್ಲಿಗೆ ಬಂದು ಯಕ್ಷಗಾನ ಕಲಿಯುವ ಆಸೆ ಎಂದು ಹೇಳಿದರೆ ಸಾಕು. ಯಕ್ಷಗಾನ ಕ್ಲಾಸಿನ ಬಿಡುವಿನ ಸಮಯದಲ್ಲಿ ಬರಲು ಹೇಳಿ ಉಚಿತವಾಗಿ ಕಲಿಸುತ್ತಿದ್ದರು. ಯಾರೇ ಬಂದರೂ ಬಂದವರಿಗೇ ಇದು ನಮಗೆ ಕಲಿಯಲು ಆಗುವುದಿಲ್ಲ ಅನ್ನಿಸಬೇಕೇ ಹೊರತು, ಅವರು ನಿರಾಶೆಗೊಳಿಸಿದ್ದಿಲ್ಲ. ಕಲಿಸುವಾಗಲೂ ಅಂತದ್ದೇ ಶಿಸ್ತು, ಪ್ರೀತಿ. ಅಂತೂ ಮಗನನ್ನು ಅವರ ಕೇಂದ್ರಕ್ಕೆ ಪ್ರತೀ ಶನಿವಾರ ಭಾನುವಾರ ಕರೆದುಕೊಂಡು ಹೋಗತೊಡಗಿದೆ. ನಮಗೆ ಶನಿವಾರ ಇಡೀದಿನ ಆಫೀಸ್ ಇದ್ದರೂ ಕೆಲವೊಮ್ಮೆ ಅವರು ಮಕ್ಕಳಿಗೆ ಕಲಿಸುವುದನ್ನು ನೋಡುತ್ತಾ ಅಲ್ಲಿಯೇ ಕುಳಿತು ಮೈಮರೆತು ಸಂಜೆಯವರೆಗೂ ಇರುತ್ತಿದ್ದೆ. ಅದೊಂದು ಗುರುಕುಲ ಇದ್ದಹಾಗೆ. ಬನ್ನಂಜೆ ಸಂಜೀವನವರು ತಾನು ಕಲಿತದ್ದನ್ನೆಲ್ಲ ಇನ್ನೊಬ್ಬರಿಗೆ ಧಾರೆಯೆರೆಯಲು ಸದಾ ಸಿದ್ದರಾಗಿದ್ದ ಒಬ್ಬ ಅಪರೂಪದ ಗುರುಗಳು. ನಿಗರ್ವಿ. ಅಲ್ಲಿ ಹೋಗಿ ಅವರು ಮಕ್ಕಳಿಗೆ ಯಕ್ಷಗಾನ ಕಲಿಸುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.

ಅಂತೂ ಮಗ ಅಲ್ಲಿಯೇ ಎರಡು ಮೂರು ವರ್ಷ ಯಕ್ಷಗಾನ ಅಭ್ಯಾಸ ಮಾಡಿ ಹಲವಾರು ವೇಷಗಳನ್ನೂ ಅಲ್ಲಿಯ ಮಕ್ಕಳ ಜೊತೆಗೆ ಮಾಡಿದ. ಸಂಜೀವನವರ ನಿರ್ದೇಶನದಲ್ಲಿ ಅಭಿಮನ್ಯು ಕಾಳಗ, ಪಂಚವಟಿ ಜಟಾಯುಮೋಕ್ಷ. ಶ್ವೇತಕುಮಾರ ಚರಿತ್ರೆ ಮತ್ತು ಕೆಲವು ಪ್ರಾತ್ಯಕ್ಷಿಕೆಗಳಲ್ಲಿ ಭಾಗಿಯಾದ. ನಂತರ ಅವನು ಕಲಿಯುವ ಕುಂಜಿಬೆಟ್ಟು ಶಾಲೆಯಲ್ಲೂ ಕೃಷ್ಣಮೂರ್ತಿ ಉರಾಳರ ನಿರ್ದೇಶನದಲ್ಲಿ ಮೀನಾಕ್ಷಿಕಲ್ಯಾಣದಲ್ಲಿ ಮೀನಾಕ್ಷಿ ಬಬ್ರುವಾಹನ ಕಾಳಗದಲ್ಲಿ ಅರ್ಜುನ ಮುಂತಾದ ಪಾತ್ರಗಳನ್ನು ಮಾಡಿದ.   ಆಗ ನೀಲಾವರ ಲಕ್ಷ್ಮಿನಾರಾಯಣಯ್ಯನವರು ಅಲ್ಲಿ ಗುರುಗಳಾಗಿದ್ದರು. ಅವರು ಅವನಿಗೆ ತಾಳವನ್ನು ಕಲಿಸಿ, ಕೆಲವು ಪದ್ಯಗಳನ್ನು ಕಲಿಸಿಕೊಟ್ಟರು. “ಭಾಗವತರ ಮೊಮ್ಮಗನಲ್ಲವೇ?”ಎಂದು ಒಮ್ಮೆ “ಗಜಮುಖದವಗೆ” ಪದ್ಯವನ್ನು ಒಂದು ಪ್ರದರ್ಶನದಲ್ಲಿ  ಹೇಳಿಸಿದ್ದಾಯಿತು. ಸಂಜೀವನವರ ಜೊತೆಯಲ್ಲಿ ಡೆಲ್ಲಿಗೂ ಹೋಗಿ ಅವರ ಪ್ರದರ್ಶನದಲ್ಲಿ ಭಾಗವಹಿಸಿದ. ಅಂತೂ ಎಸ್ ಎಸ್ ಎಲ್ ಸಿ ಯವರೆಗೆ ಯಕ್ಷಗಾನದಲ್ಲಿ ಭಾಗವಹಿಸಿದವನು, ಮತ್ತೆ ಓದಿನ ಕಡೆಗೇ ಹೆಚ್ಚು ಗಮನಕೊಡಬೇಕಾಯಿತಾದ್ದರಿಂದ ಆ ಹವ್ಯಾಸ ಬಿಟ್ಟುಹೋಯಿತು. ಆದರೆ ಆ ಯಕ್ಷಗಾನದ ಅಭಿರುಚಿಯು ಹಾಗೆಯೇ ಉಳಿಯಲು ಅದರಿಂದ ಅನುಕೂಲವಾಯಿತು. ಸಂಜೀವರು ಹೇಳುವಂತೆ ಮೇಳಕ್ಕೆ ಸೇರಲು ಮಾತ್ರ ಯಕ್ಷಗಾನ ಕಲಿಯಬೇಕೆಂದೇನಿಲ್ಲ. ಇಂತಹ ಒಂದು ವಿದ್ಯೆಯನ್ನು ಕಲಿತವರು, ಮುಂದೆ ಕಲಾವಿದರಾಗದಿದ್ದರೂ, ಒಬ್ಬ ಒಂದು ಪ್ರಬುದ್ಧ ಯಕ್ಷಗಾನದ, ಒಳ್ಳೆಯ ಪ್ರೇಕ್ಷಕನಾಗಿ ಬಾಳಬಹುದು ಎನ್ನುವಂತೆ ಆಯಿತು.

ಮುಲ್ಕಿಯಲ್ಲಿ ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆಯೊಂದಿತ್ತು. ಅಲ್ಲಿಯ ವಾರ್ಡನ್ ಒಬ್ಬರು ಕುಂದಾಪುರ ಮೂಲದವರಿದ್ದರು. ಒಮ್ಮೆ ಅವರ ಶಾಲೆಯ ಕರೆಂಟ್ ಬಿಲ್ಲಿನ ಬಗ್ಗೆ ಏನೋ ಸಮಸ್ಯೆಯಾಗಿ ನಮ್ಮ ಆಫೀಸಿಗೆ ಬಂದವರಿಗೆ ನಾನು ಉಪ್ಪೂರರ ಮಗ ಎಂದು ಗೊತ್ತಾಯಿತು. ಆಗಲೇ ಅವರಿಗೆ ಶಾಲೆಯಲ್ಲಿ ಉಳಿದುಕೊಂಡ ಮಕ್ಕಳಿಗೆ ನನ್ನಿಂದ ಯಕ್ಷಗಾನ ಕಲಿಸಿ ಒಂದು ಆಟ ಮಾಡಿಸಬೇಕೆಂದು ಮನಸ್ಸಾಯಿತು. ಬಂದು ಹೇಳಿದಾಗ ನಾನು ಒಪ್ಪಿಕೊಂಡೆ. ಪ್ರತೀದಿನ ನಮ್ಮ ಆಫೀಸ್ ಕೆಲಸ ಮುಗಿದ ಕೂಡಲೆ, ಸಂಜೆ ಅಲ್ಲಿಗೆ ಹೋಗಿ ಯಕ್ಷಗಾನ ತಾಳ ಹೇಳಿ ಕೊಟ್ಟು, ಆ ತಾಳದ ಕುಣಿತ ಮುಕ್ತಾಯಗಳನ್ನು ಕಲಿಸತೊಡಗಿದೆ. ಆ ಮಕ್ಕಳೂ ಬಹಳ ಉಮೇದಿನಿಂದ ಕಲಿತರು. ಸುಮಾರು ಮೂರು ನಾಲ್ಕು ತಿಂಗಳು ಹಾಗೆ ಕಲಿಸಿದೆ. ಆಮೇಲೆ ಎರಡು ಗಂಟೆಯ “ರುಕ್ಮಿಣಿ ಕಲ್ಯಾಣ” ಎಂಬ ಪ್ರಸಂಗದ ನನ್ನದೇ ಪ್ಲೋಟ್ ಆರಿಸಿಕೊಂಡು ಅದರ ಕುಣಿತ ಮಾತು ಕಲಿಸಿದೆ. ಬೈಲೂರು ಸುಬ್ರಮಣ್ಯ ಐತಾಳರನ್ನು ಭಾಗವತಿಕೆಗೆ, ಹಾಗೂ ಸುರೇಶಣ್ಣಯ್ಯನನ್ನು ಮದ್ದಲೆವಾದನಕ್ಕೆ ಕರೆಸಿ ಎರಡುದಿನ ಬೆಳಿಗ್ಗೆ ಮಧ್ಯಾಹ್ನ ಅಂತ ಬಿಡುವಿಲ್ಲದೇ ಟ್ರಯಲ್ ಮಾಡಿಸಿ  ಆಟವನ್ನು ಮಾಡಿದೆವು. ಆ ದಿನ ಒಂದು ಸಮಾರಂಭವನ್ನು ಮಾಡಿ ಚಿಕ್ಕ ಸನ್ಮಾನವನ್ನೂ ಮಾಡಿದರು. ಅವರಿಗೆ ತುಂಬಾ ಖುಷಿಯಾಗಿ ಆ ವಾರ್ಡನ್ ಮತ್ತು ಕೆಲವು ಮಕ್ಕಳು ಮುಂದಿನ ವರ್ಷವೂ ಬಂದು ಮಕ್ಕಳಿಗೆ ಮತ್ತೆ ಕಲಿಸಿ ಆಟ ಮಾಡಿಸಲು ಕೇಳಿಕೊಂಡರು. ಆದರೆ ನಾನು ಆಗಲೇ ನಮ್ಮ ಡಿಪಾರ್ಟ್ ಮೆಂಟ್ ಪರೀಕ್ಷೆಗೆ ಕುಳಿತುಕೊಳ್ಳಲು ತೀರ್ಮಾನಿಸಿ, ಓದಿಕೊಳ್ಳಲು ಸಮಯ ಬೇಕಾದ್ದರಿಂದ ಅವರ ಆಹ್ವಾನವನ್ನು ನಯವಾಗಿ “ಮತ್ತೊಮ್ಮೆ ನೋಡುವ” ಎಂದು ಮುಂದೂಡಿದೆ.

ಮುಲ್ಕಿಯಲ್ಲಿ ಸುಮಾರು ೧೯೯೮ ರಿಂದ ೨೦೦೩ ರ ವರೆಗೆ ಕೆಲಸ ಮಾಡಿದ ನನಗೆ, ಮತ್ತೆ ಉಡುಪಿಗೆ ಬರುವ ಮನಸ್ಸಾಯಿತು. ಒಂದು ಕೋರಿಕೆ ಅರ್ಜಿಯನ್ನು ಬರೆದುಕೊಂಡು ಆಗ ಅಧೀಕ್ಷಕ ಇಂಜಿನಿಯರ್ ಆಗಿದ್ದ ಭಾಸ್ಕರ ರಾಯರು ಅನ್ನುವವರಿಗೆ ಕೊಟ್ಟು, “ನನಗೆ ಉಡುಪಿಗೆ ವರ್ಗ ಮಾಡಿಸಿಕೊಡಿ” ಎಂದು ಕೇಳಿಕೊಂಡೆ. ಅವರು “ನಾನೂ ಊರುಬಿಟ್ಟು ಬಂದವ ಎಲ್ಲರೂ ಅವರವರ ಊರಿಗೆ ಹೋಗಲು ಅರ್ಜಿ ಹಾಕಿದರೆ ಪರವೂರಿನಲ್ಲಿ ಕೆಲಸ ಮಾಡುವವರು ಯಾರು?. ಮುಲ್ಕಿಗೆ ಬೇರೆ ಯಾರಾದರೂ ಬರುವವರಿದ್ದರೆ ನೋಡಿ. ಆಮೇಲೆ ನೋಡುವ” ಎಂದು ಬಿಟ್ಟರು. ನನಗೆ ನಿರಾಶೆಯಾದರೂ ಏನಾದರೂ ಮಾಡಲೇಬೇಕು ಎಂಬ ಹಠ ಬಂದಿತು. ಅಷ್ಟರವರೆಗೆ ಇಲಾಖಾಪರೀಕ್ಷೆಯನ್ನು ಪಾಸು ಮಾಡುವ ವಿಷಯದಲ್ಲಿ ಸ್ವಲ್ಪ ಅನಾಸಕ್ತಿ ತೋರಿದ್ದ ನನಗೆ ಅದರಲ್ಲಿ ಪಾಸು ಮಾಡಿಕೊಂಡು ಪ್ರೊಮೋಶನ್ ಪಡೆದುಕೊಂಡರೆ ಅಲ್ಲಿಂದ ಬಿಡುಗಡೆ ಪಡೆಯಬಹುದು ಅನ್ನಿಸಿ ಇಲಾಖಾ ಪರೀಕ್ಷೆಗೆ ಕಟ್ಟಿ ರಜೆಯನ್ನು ಹಾಕಿ ಹಠಹಿಡಿದು ಓದಿದೆ. ಎರಡೇ ಸಲದಲ್ಲಿ ಹನ್ನೊಂದು ಸಬ್ಜಕ್ಟಿನಲ್ಲಿ ಪಾಸೂ ಆಯಿತು. ಮತ್ತೆ ಪ್ರಮೋಶನ್ ಬಂದು ಉಡುಪಿಗೆ ವರ್ಗವಾಗಿ ಬಂದೆ.

ಆಫೀಸರ್ ಆಗಿ ಉಡುಪಿಗೆ ಬಂದು ವರದಿ ಮಾಡಿಕೊಂಡಾಗ ನನಗೆ ಮೊದಲೇ ಗೊತ್ತಿದ್ದ ಜಯಸೂರ್ಯ ಎನ್ನುವ ಒಬ್ಬ ದಕ್ಷ ಅಧಿಕಾರಿಗಳ ಹತ್ತಿರ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಮೊದಮೊದಲು ತುಂಬಾ ಬಿಗುವಾಗಿ ಇದ್ದಂತೆ ಕಂಡರೂ, ಅವರೂ ಯಕ್ಷಗಾನ ಪ್ರೇಮಿಗಳಾಗಿದ್ದು, ಕೊನೆಗೆ ”ದಿನೇಶ್, ಇಲ್ಲಿಯೇ ಒಂದು ತಾಳಮದ್ದಲೆ ಇದೆ. ಬರುತ್ತೀರಾ? ಸ್ವಲ್ಪ ಹೊತ್ತು ನೋಡಿ ಬರುವ” ಎಂದು ಕರೆದುಕೊಂಡು ಹೋಗುವವರೆಗೂ ಸಲಿಗೆ ಬೆಳೆಯಿತು. ಉಡುಪಿಗೆ ಬಂದಾಗ ನಾನು ಹಿಂದೆ ಕೆಲಸ ಮಾಡಿದ ಕಛೇರಿಯಲ್ಲೇ ನನ್ನ ಸೂಪರ್ ವೈಸರ್ ಆಗಿದ್ದ, ಲಕ್ಷ್ಮ ನಾಯ್ಕರು ಎನ್ನುವವರಿಗೆ ನಾನು ಮೇಲಧಿಕಾರಿಯಾಗಿ ಬಂದದ್ದು. ಅವರಿಗೂ ಸ್ವಲ್ಪದಿನ ಇರುಸು ಮುರುಸಾದರೂ ಸ್ವಲ್ಪ ದಿನದಲ್ಲಿಯೇ ಹೊಂದಾಣಿಕೆಯಾಗಿ ಸರಿಯಾಯಿತು.

ಆಗ ಮ್ಯಾನುವಲ್ ಕಡತಗಳು ಹೋಗಿ ಕಂಪ್ಯೂಟರೈಸೇಶನ್ ಆಗುತ್ತಿದ್ದ ಕಾಲ. ತುಂಬಾ ಸಮಸ್ಯೆ ಇತ್ತು. ತಪ್ಪು ತಪ್ಪು ಬಿಲ್ಲು ಬಳಕೆದಾರರಿಗೆ ಹೋಗುತ್ತಿತ್ತು. ಮೊದಲೇ ಕೆಇಬಿ ಅಂದರೆ ಕರೆಂಟ್ ಆಗಾಗ ಹೋಗುತ್ತದೆ ಆದರೆ ಬಿಲ್ಲು ಸರಿಯಾದ ಸಮಯಕ್ಕೆ ಬರುತ್ತದೋ ಇಲ್ಲವೋ, ಬಿಲ್ಲು ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲು ತಕ್ಷಣ ಬರುತ್ತಾರೆ ಎಂಬ ಅಲರ್ಜಿಯಿದ್ದ ಜನರು, ಕೆಲವು ಸಲ ಜಗಳ ಮಾಡಲಿಕ್ಕೆಂದೇ ಆಫೀಸಿಗೆ ಬರುತ್ತಿದ್ದರು. ಎಲ್ಲ ಕೇಳಿ ಬಿಲ್ಲು ಸರಿ ಮಾಡಿ ಹೋಗುವಾಗಲೂ “ಅಂತೂ ನೀವು ಹೇಳಿದ್ದನ್ನು ನಾವು ಕೇಳಿಕೊಂಡು ಅದನ್ನೇ ಸರಿ ಎಂದು ನಂಬಬೇಕು” ಎಂದು ಬೈದೂ ಹೋದದ್ದಿದೆ.

ಒಮ್ಮೆ ನಾನು ಆಫೀಸಿಗೆ ಹೋಗಿ ಕುಳಿತಿದ್ದೆನಷ್ಟೆ. ಒಬ್ಬರು ಬಿಲ್ಲು ತಪ್ಪಾದ್ದರಿಂದ ಸಿಟ್ಟನ್ನು ತಡೆದುಕೊಳ್ಳಲು ಸಾಧ್ಯವಾಗದೇ ಬುಸುಗುಟ್ಟುತ್ತಾ “ಇವತ್ತು ಎರಡರಲ್ಲಿ ಒಂದು ತೀರ್ಮಾನವಾಗಲೇ ಬೇಕು” ಎಂದು  ನಿರ್ಣಯಿಸಿದವರಂತೆ, ಅವರು ಹಿಂದೆ ಕಟ್ಟಿದ ಎಲ್ಲ ರಸೀದಿಗಳ, ಬಿಲ್ಲುಗಳ ಫೈಲಿನೊಂದಿಗೆ ಯುದ್ಧಕ್ಕೆ ಸನ್ನದ್ಧರಾದಂತೆ ಬಿರುಸಿನಿಂದ ಬಂದು ನನ್ನ ಎದುರು ಇದ್ದ ಕುರ್ಚಿಯಲ್ಲಿ ಕುಳಿತರು. ನಾನು ತುಂಬಾ ಸಾವಧಾನದಿಂದ “ಏನು?” ಎಂದು ಮುಗುಳ್ನಗುತ್ತಾ ಕೇಳಿದೆ. ಅವರು ಒಮ್ಮೆಲೇ ಜೋರಿನಿಂದ ಶುರುಮಾಡಿದರು.

ನಾನು ಅವರು ಹೇಳಿದ್ದೆಲ್ಲವನ್ನೂ ಕೇಳಿದೆ ಮತ್ತು ಅಷ್ಟೇ ತಾಳ್ಮೆಯಿಂದ ಬಿಲ್ಲನ್ನು ನೋಡಿ ನಮ್ಮ ಕಂಪ್ಯೂಟರ್ ನಲ್ಲಿ ಪರಿಶೀಲನೆ ಮಾಡಿ ಅವರಿಗೆ ಬಿಲ್ಲಿನ ವಿವರವನ್ನು ಮನದಟ್ಟಾಗುವಂತೆ ಹೇಳಿದೆ. ತಪ್ಪು ಇರುವುದನ್ನು ತಿದ್ದಿ ಸದ್ಯದ ಪರಿಸ್ಥಿತಿಯನ್ನು ಅವರಿಗೆ ಹೇಳಿದಾಗ ಅವರಿಗೆ ಸಮಾಧಾನವಾಯಿತು. ಅಷ್ಟರಲ್ಲಿ ಅವರು, ಸಿಟ್ಟು ಇಳಿದು, ಹೋಗುವಾಗ “ನಾನು ಇಷ್ಟು ಚೆನ್ನಾಗಿ ವಿವರಿಸಿ ಉತ್ತರ ಕೊಡುವವರು ಇಲ್ಲಿ ಇರುತ್ತಾರೆ ಎಂದು ನಂಬಿಕೊಂಡು ಬರಲೇ ಇಲ್ಲ ಮಾರಾಯ್ರೆ. ಬಿಲ್ಲು ಹೇಗೇ ಇರಲಿ. ನೀವು ಇಷ್ಟು ತಾಳ್ಮೆಯಿಂದ ಮಾತನಾಡಿ, ನನ್ನನ್ನು ನೋಡಿಕೊಂಡ ರೀತಿ ತುಂಬಾ ಖುಷಿಯಾಯಿತು.” ಎಂದು ಒಂದು ಪ್ರಶಸ್ತಿಯನ್ನೂ ಕೊಟ್ಟು ನನ್ನ ಪರಿಚಯವನ್ನೂ ಕೇಳಿ ತಿಳಿದುಕೊಂಡು ಹೊರಟುಹೋದರು.

ಒಮ್ಮೆ ಹಾಗೆ ಬಿಲ್ಲನ್ನು ಸರಿಪಡಿಸಿಕೊಂಡು ಹೋಗಲು ಬಂದ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಆಫೀಸರ್ ಒಬ್ಬರು ಹೀಗೆ ಬಿಲ್ಲು ಸರಿಪಡಿಸಿಕೊಂಡು, ಮಾತಿನ ಮಧ್ಯ ನನ್ನ ಪರಿಚಯ ಮಾಡಿಕೊಂಡರು. ನಾನು ಉಪ್ಪೂರರ ಮಗ ಎಂಬುದನ್ನು ಕೇಳಿದ ಅವರು, ನನ್ನ ಎದುರು ಕುರ್ಚಿಯಲ್ಲಿ ಕುಳಿತಿದ್ದವರು ಪಕ್ಕನೇ ಎದ್ದು “ಹೌದಾ? ನೀವು ಉಪ್ಪೂರರ ಮಗನಾ?” ಎಂದು ಒಂದು ಅದ್ಭುತವನ್ನೇ ನೋಡಿದಂತೆ ಮಾಡಿ, ಒಮ್ಮೆಲೇ ನನ್ನ ಟೇಬಲ್ಲನ್ನು ಸುತ್ತುಹಾಕಿ ಹತ್ತಿರ ಬಂದೇಬಿಟ್ಟರು. ನಾನು ಏನಾಗುತ್ತಿದೆ ಎಂದು ತಿಳಿಯದೇ ಎದ್ದು ನಿಲ್ಲುವುದರ ಒಳಗೆ, ನನ್ನನ್ನು ಗಟ್ಟಿಯಾಗಿ ಆಲಿಂಗಿಸಿಕೊಂಡು, “ನಾನು ಭಾಗವತ ಉಪ್ಪೂರರ ದೊಡ್ಡ ಅಭಿಮಾನಿ. ನನಗೆ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು” ಎಂದು ನನ್ನನ್ನು ರೋಮಾಂಚನಗೊಳಿಸಿದ್ದರು. ಆಮೇಲೂ ಅವರು ಆಫೀಸಿಗೆ ಬಂದರೆ ನನ್ನ ಎದುರು ಕುಳಿತು ನಾಲ್ಕು ಮಾತಾಡಿ, ಒಂದಷ್ಟು ಅಪ್ಪಯ್ಯನ  ಸುದ್ಧಿಯನ್ನು,  ಸಾಲಿಗ್ರಾಮ ಮೇಳದಲ್ಲಿ ಅಪ್ಪಯ್ಯ, ತಿಮ್ಮಪ್ಪ ಮದ್ಲೆಗಾರ ಮತ್ತು ಕೆರೆಮನೆ ಕಲಾವಿದರು ಇರುವಾಗ ಅವರು ನೋಡಿದ ಆಟದ ಬಗ್ಗೆ, ಆಗಿನ ಭೀಷ್ಮ ಭೀಷ್ಮ ಭೀಷ್ಮ, ಚಂದ್ರಹಾಸ - ಬೇಡರ ಕಣ್ಣಪ್ಪ ಹಾಗೂ ಪಟ್ಟಾಭಿಷೇಕ - ಗದಾಯುದ್ಧ ಆಟದ ಸುದ್ಧಿ ಹೇಳಿ, ಕೆರೆಮನೆ ಗಜಾನನ ಹೆಗಡೆಯವರು, ಶಿರಿಯಾರ ಮಂಜು, ಹೆರಂಜಾಲು ವೆಂಕಟರಮಣ, ವೀರಭದ್ರ ನಾಯ್ಕ, ದೊಡ್ಡಸಾಮಗರ ಬಗ್ಗೆ ಹೇಳುತ್ತಿದ್ದರು. ಕುಂದಾಪುರದಲ್ಲಿ ಸಾಲಿಗ್ರಾಮ ಮೇಳಕ್ಕೂ, ಅಮೃತೇಶ್ವರಿ ಮೇಳಕ್ಕೂ ಆದ ಜೋಡಾಟ, ಅದರಲ್ಲಿ ಅಪ್ಪಯ್ಯನ ಸ್ವರ ಬಿದ್ದು ಹೋಗಿ ಮದ್ದಲೆ ಬಾರಿಸಿದ್ದು, ತಿಮ್ಮಪ್ಪ ಮದ್ಲೆಗಾರ ಭಾಗವತಿಕೆ ಮಾಡಿ ರೈಸಿದ್ದು ಅವರ ಸ್ವರ.... ಹೀಗೆ ಒಂದಷ್ಟು ಹೊತ್ತು ಮಾತಾಡಿ ತೃಪ್ತರಾಗಿ  ಹೋಗುತ್ತಿದ್ದರು.

(ಮುಂದುವರಿಯುವುದು)

ಬುಧವಾರ, ನವೆಂಬರ್ 8, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 49

ಮುಲ್ಕಿಯ ಕಛೇರಿಯಲ್ಲಿ ಆಫೀಸು ಕಸ ಗುಡಿಸುವ ಹೆಂಗಸೊಬ್ಬಳಿದ್ದಳು. ಅವಳಿಗೆ ತಿಂಗಳಿಗೆ ಐನೂರು ರುಪಾಯಿ ಸಂಬಳ. ಒಮ್ಮೆ ಅವಳನ್ನು ನೋಡಿ ಪಾಪ ಅನ್ನಿಸಿ ಕರೆದು “ನಮ್ಮ ಮನೆಯಲ್ಲಿ ಬೆಳಿಗ್ಗೆ ಗುಡಿಸಿ, ಒರೆಸುವುದು ಪಾತ್ರೆ ತೊಳೆಯುವ ಕೆಲಸ ಮಾಡಿಕೊಡುತ್ತೀಯಾ? ಅದರ ಬಗ್ಗೆ ತಿಂಗಳಿಗೆ ೧೫೦ ರೂಪಾಯಿ ಕೊಡುತ್ತೇನೆ” ಅಂತ ಕೇಳಿದೆ. ನಮ್ಮ ಮಗನೂ ಆಗ ಸಣ್ಣವನಾಗಿದ್ದ. ನಮಗೂ ಅನುಕೂಲವಾಗುತ್ತದೆ ಅನ್ನಿಸಿತು. ಅವಳು ಒಪ್ಪಿದಳು. ಆ ಹೆಂಗಸು ಒಂದು ವರ್ಷ ಕೆಲಸ ಮಾಡಿದಳು. ಒಮ್ಮೆ ಯಾರ ಹತ್ತಿರವೋ “ಆಫೀಸಿನ ಕೆಲಸದ ಒಟ್ಟಿಗೆ, ಅವರ ಮನೆ ಕೆಲಸವೂ ಮಾಡಬೇಕಲ್ಲ, ತುಂಬಾ ಕಷ್ಟವಾಗುತ್ತದೆ” ಎಂದು ಹೇಳಿದಳು ಎಂದು ಒಬ್ಬರು ನನಗೆ ಬಂದು ಹೇಳಿದರು. ನನಗೆ ಆಘಾತವಾಯಿತು. ಆ ಕಾಲದಲ್ಲಿ ಕೆಲವು ಕಡೆ ಆಫೀಸರ್ ಗಳು ಹಾಗೆ ಎಟೆಂಡರ್ ಗಳಿಂದ ಸ್ವೀಪರ್ ಗಳಿಂದ ಮನೆಯ ಕೆಲಸ ಮಾಡಿಸಿಕೊಳ್ಳುತ್ತಿದ್ದುದು ನನಗೆ ಗೊತ್ತಿತ್ತು. ನಾನು ಅವಳು ನಮ್ಮ ಮನೆಯ ಕೆಲಸ ಮಾಡಿದ ಬಗ್ಗೆ ಅವಳಿಗೆ ತೀರ ಕಡಿಮೆ ಇಲ್ಲದಂತೆ ಸಂಬಳವನ್ನೇ ಕೊಡುತ್ತಿದ್ದೆ. ಒಟ್ಟಾರೆ ಅವಳನ್ನು ನಾವು ಧರ್ಮಕ್ಕೆ ದುಡಿಸಿಕೊಳ್ಳುವ ಹಾಗೆ ಮಾತಾಡಿದ್ದು  ನನಗೆ ತುಂಬಾ ಬೇಸರವಾಯಿತು. ಅಂದೇ ಅವಳನ್ನು ಕರೆದು “ನೀನು ನಮ್ಮ ಮನೆಯಲ್ಲಿ ಧರ್ಮಕ್ಕೆ ದುಡಿಸಿಕೊಳ್ಳುವ ಹಾಗೆ ಹೇಳುತ್ತೀಯಂತಲ್ಲ. ನಾಳೆಯಿಂದ ನಮ್ಮ ಮನೆಯೆ ಕೆಲಸಕ್ಕೆ ಬರುವುದು ಬೇಡ”. ಎಂದು ಕೇಳಿದೆ. ಅವಳು “ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ. ತಪ್ಪಾಯಿತು” ಎಂದು ಕಣ್ಣೀರು ಹಾಕಿದಳು. ಆದರೆ ನಾನು ಆಗಲೇ ನಿರ್ಧರಿಸಿಯಾಗಿತ್ತು. “ಖಡಾಖಂಡಿತವಾಗಿ ನಾಳೆಯಿಂದ ನೀನು ಆಫೀಸ್ ಕೆಲಸ ಮಾತ್ರ ಮಾಡಿದರೆ ಸಾಕು” ಎಂದೆ. ಅವಳು ಅಳುತ್ತಾ “ನನ್ನ ಮಗಳ ಓದಿಗಾದರೂ ಸಹಾಯ ಆಗುತ್ತಿತ್ತು” ಎಂದಳು. ನಾನು ಒಪ್ಪಲಿಲ್ಲ.  ಮತ್ತೆ ಮತ್ತೆ ಬಂದು ನಾನು ಮನೆ ಕೆಲಸ ಮಾಡುತ್ತೇನೆ ಎಂದು ಕೇಳಿಕೊಂಡರೂ ನಾನು ಒಪ್ಪಲೇ ಇಲ್ಲ.

ಹಳೆಯಂಗಡಿಯಲ್ಲಿ ಗುರುನಾರಾಯಣ ಹವ್ಯಾಸಿ ಯಕ್ಷಗಾನ ಸಂಘ ಎಂಬುದೊಂದು ಸಂಘವಿತ್ತು. ಅದು ತೆಂಕುತಿಟ್ಟು.  ಅವರಿಗೆ ನಾನು ಉಪ್ಪೂರರ ಮಗ ಎಂದು ಯಾರೋ ಹೇಳಿದರು ಅಂತ ಒಮ್ಮೆ ಹುಡುಕಿಕೊಂಡು ಬಂದು ಅವರ ಸಂಘದಲ್ಲಿ ವೇಷ ಮಾಡಲು ಹೇಳಿದರು. ಅಲ್ಲಿ ನಾನು ನಾಲ್ಕಾರು ವರ್ಷ ವೇಷ ಮಾಡಿದ್ದೆ. “ಧರ್ಮ ವಿಜಯ” ಎಂಬ ಒಂದು ಹೊಸಪ್ರಸಂಗದಲ್ಲಿ ಧರ್ಮವೃತ, “ಕಾರ್ತವೀರ್ಯಾರ್ಜುನ”ದಲ್ಲಿ ಕಾರ್ತವೀರ್ಯ, “ಜಾಂಬವತಿ ಕಲ್ಯಾಣ”ದಲ್ಲಿ ಜಾಂಬವ ಮುಂತಾದ ಪಾತ್ರಗಳನ್ನು ಮಾಡಿದೆ. ಅವರು ಮೊದಲು ನನಗೆ ಅವರದೇ ಯಾವುದೋ ಪ್ರಸಂಗದಲ್ಲಿ ದೇವೇಂದ್ರ ಪಾತ್ರವನ್ನು ಕೊಟ್ಟು ನನ್ನ ಆ ಪಾತ್ರವನ್ನು ನೋಡಿ, ಮುಂದಿನ ವರ್ಷದಿಂದ ನನಗೇ ಅರ್ಥವನ್ನೂ ಬರೆದುಕೊಡಲು ಹೇಳಿ ಡೈರೆಕ್ಷನನ್ನೂ ಮಾಡಲು ಹೇಳಿದರು. ನನ್ನೊಡನೆ ತುಂಬಾ ಆತ್ಮೀಯತೆಯಿಂದ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅಲ್ಲಿಯೇ ಕಾರ್ನಾಡಿನಲ್ಲಿ ಹರಿಹರ ದೇವಸ್ಥಾನ ಎಂಬುದಿತ್ತು. ಅಲ್ಲಿಯೂ ಪ್ರತೀ ಬುಧವಾರ ಮಧ್ಯಾಹ್ನ ತಾಳಮದ್ದಲೆಯನ್ನು ಸ್ಥಳೀಯರು ಕೆಲವರು ಸೇರಿ ಮಾಡುತ್ತಿದ್ದರು. ನಾನೂ ಕೆಲವೊಮ್ಮೆ ಅಲ್ಲಿಗೆ ಹೋಗಿ ಕೆಲವು ಅರ್ಥಗಳನ್ನು ಹೇಳುತ್ತಿದ್ದೆ. ಆದರೆ ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾರದೇ ಬಿಟ್ಟುಬಿಟ್ಟೆ.

ಮುಲ್ಕಿಯಲ್ಲಿದ್ದಾಗ ಉದಯವಾಣಿ ಪತ್ರಿಕೆಗೆ ಯಕ್ಷಗಾನದ ಬಗ್ಗೆ ಕೆಲವು ಲೇಖನಗಳನ್ನು ಬರೆದು ಕಳಿಸಿದ್ದೆ. ಅವುಗಳು ಶುಕ್ರವಾರದ ಕಲಾವಿಹಾರದಲ್ಲಿ ಪ್ರಕಟವಾಗಿದ್ದವು. ಅಲ್ಲಿ ಇಲ್ಲಿ ಒಟ್ಟುಮಾಡಿದ ಗಣಿತದ ಜಾಣ್ಮೆಯ ಸಮಸ್ಯೆ ಗಳನ್ನೂ ಉದಯವಾಣಿಗೆ ಒಂದೊಂದಾಗಿ ಕಳಿಸುತ್ತಿದ್ದು, ಅವುಗಳ ಉತ್ತರದೊಂದಿಗೆ ಮುಂದಿನವಾರ ಮತ್ತೊಂದು ಪ್ರಶ್ನೆ ಕಳಿಸುತ್ತಿದ್ದೆ. ಅವುಗಳೂ ಪತ್ರಿಕೆಯಲ್ಲಿ ಕೆಲವು ತಿಂಗಳವರೆಗೆ ಪ್ರಕಟವಾಯಿತು.

ಒಮ್ಮೆ ಉಡುಪಿಯ ಪರ್ಕಳದ ಸಮೀಪ ಕೆರೆಮನೆ ಮೇಳದವರ ಆಟ ಇದೆ ಎಂದು ಗೊತ್ತಾಗಿ ಆಫೀಸ್ ಮುಗಿದ ಕೂಡಲೇ ನನ್ನ ಸ್ಕೂಟರ್ ನಲ್ಲಿ ಮಗನನ್ನೂ ಹೆಂಡತಿಯನ್ನೂ ಕೂರಿಸಿಕೊಂಡು ಆಟಕ್ಕೆಂದು ಬಂದಿದ್ದೆ. ಶಂಭು ಹೆಗಡೆಯವರ ಕರ್ಣ.  ಅಷ್ಟರವರೆಗೆ ನಮ್ಮ ಬಡಗುತಿಟ್ಟಿನ ಸಂಪ್ರದಾಯದ ಕರ್ಣನನ್ನು ಮಾತ್ರ ನೋಡಿದ್ದ ನನಗೆ ಅವರ ಪಾತ್ರಚಿತ್ರಣ ಅಭಿನಯ ತುಂಬಾ ಖುಷಿಯಾಯಿತು. ರಾತ್ರಿ ಒಂದು ಗಂಟೆಗೇ ಆಟ ಮುಗಿಯಿತು. ರಾತ್ರಿ ವಾಪಾಸು ಮುಲ್ಕಿಗೆ ಹೋಗಲು ಧೈರ್ಯವಿರಲಿಲ್ಲ. ಕೊನೆಗೆ ಕುಂಜಿಬೆಟ್ಟು ಹತ್ತಿರ ಕುಮಾರ ಉಡುಪರ ಮನೆಯನ್ನು ಹುಡುಕಿಕೊಂಡು ಹೋಗಿ, ಅವರ ಮನೆಯ ಬಾಗಿಲನ್ನು ತಟ್ಟಿದೆವು. ಮೊದಲು ಒಮ್ಮೆ ಮಾತ್ರಾ ಅವರ ಮನೆಗೆ ಹೋಗಿದ್ದೆವು. ಅದೇ ಮನೆ ಹೌದೋ ಅಲ್ಲವೋ ಎಂದೂ ಅನುಮಾನವಿತ್ತು. ತುಂಬಾ ಹೊತ್ತು ಬಾಗಿಲು ಬಡಿದ ಮೇಲೆ ಅವರಿಗೆ ಎಚ್ಚರವಾಗಿ ಬಂದು ಬಾಗಿಲು ತೆರೆದರು ಅಂತ ಆಯಿತು. ಅವರ ಮುಖ ನೋಡಿದ ಮೇಲೆ ಧೈರ್ಯ. ಆ ರಾತ್ರಿ ಅಲ್ಲಿಯೇ ಉಳಿದು ಮರುದಿನ ಮುಲ್ಕಿಗೆ ಬಂದೆವು.

ನನ್ನ ಮಗನಿಗೆ ಸೈಕಲ್ ಕಲಿಸಬೇಕು ಅಂತ ತೀರ್ಮಾನಿಸಿದೆ. ಸೈಕಲ್ ಬಾಡಿಗೆ ಕೊಡುವವರ ಹತ್ತಿರ ವಿಚಾರಿಸಿ, ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ಲನ್ನು ತೆಗೆದುಕೊಂಡೆ. ನಮ್ಮ ಕ್ವಾರ್ಟರ್ಸ್ ಎದುರಿಗೇ ದೊಡ್ಡ ಗಾಂಧಿ ಮೈದಾನ ಒಂದು ಕಡೆಯಲ್ಲಿ ಮಕ್ಕಳು ಕ್ರಿಕೆಟ್ ಆಡಿದರೆ, ಮತ್ತೊಂದು ಬದಿಯಲ್ಲಿ ವಾಲಿಬಾಲ್ ಕೋರ್ಟ್, ಮತ್ತೊಂದು ಮೂಲೆಯಲ್ಲಿ ಒಂದಷ್ಟು ದನಗಳು ಮೇಯುತ್ತಿದ್ದವು. ಅದರ ಮಧ್ಯದಲ್ಲಿ ಅವನಿಗೆ ಸೈಕಲ್ ಕಲಿಸುವ ವ್ಯವಸ್ಥೆಯಾಯಿತು. ಅವನನ್ನು ಸೀಟಿನಲ್ಲಿ ಕೂರಿಸಿ ನಾನೇ ಹ್ಯಾಂಡಲ್ ಹಿಡಿದು ದೂಡಿಕೊಂಡು ಹೋಗಬೇಕು.  ಅವನು “ಮುಂದೆ ನೋಡು” ಎಂದರೆ ಮುಂದಿನ ಚಕ್ರ ತಿರುಗುವುದನ್ನು ನೋಡುತ್ತಾನೆ. ನನಗೆ ದೂಡಿದೂಡಿ ಸಾಕಾಯಿತು. ಅವನೇ ಮಧ್ಯ ಮಧ್ಯ ಸಾಕಪ್ಪ ಇವತ್ತು ಅನ್ನುತ್ತಿದ್ದ. ಅವನಿಗೆ ಬೇರೆ ಆಟದ ಮೇಲೆ ಗಮನ. ಎರಡು ಮೂರು ದಿನ ಏನು ಮಾಡಿದರೂ ಸೈಕಲ್ ಹಿಂದಿನ ಕ್ಯಾರಿಯರ್ ನ್ನು ಹಿಡಿದುಕೊಳ್ಳದೆ ಅವನಿಗೆ ರೈಡ್ ಮಾಡಲು ಆಗಲೇ ಇಲ್ಲ. ಒಮ್ಮೆ ಸಿಟ್ಟು ಬಂದು ಒಂದು ಏಟು ಹಾಕಿದೆ. ಅವನು ಸೈಕಲ್ ಬಿಟ್ಟು ಓಡಿದ. ನಂತರ ಏನು ಮಾಡಿದರೂ ಸೈಕಲ್ ನ್ನು ಮುಟ್ಟಲೂ ಕೇಳುವುದಿಲ್ಲ. ಅಷ್ಟು ದೊಡ್ಡ ಮೈದಾನದಲ್ಲಿ ಎಲ್ಲರ ಮುಂದೆ ಅವನಿಗೆ ಹೊಡೆದದ್ದಕ್ಕೆ ಬೇಸರವಾಗಿತ್ತು.

ಅಂತೂ ಕೊನೆಗೆ ಅವನನ್ನು ಸಮಾಧಾನ ಪಡಿಸಿ ಪುನಹ ಸೈಕಲ್ ಹಿಡಿಸಲು ಸಾಕುಬೇಕಾಯಿತು. ಮುಂದೆ ಉಡುಪಿಗೆ ಬಂದ ಮೇಲೆ ಅವನಿಗೆ ಯಕ್ಷಗಾನ ಕಲಿಸುವ ಮನಸ್ಸಾಯಿತು. ಆಗ ಕುಂಜಿಬೆಟ್ಟಿನ ವಸತಿಗೃಹದಲ್ಲಿ ಇದ್ದಿದ್ದೆ. ಅವನು ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ಆಚೆ ಈಚೆಬದಿಯ ಮಕ್ಕಳೊಡನೆ ಆಟ ಆಡಲು ಹೋಗುತ್ತಿದ್ದ. ಇಲ್ಲದಿದ್ದರೆ ಟಿವಿ ಹಾಕಿಕೊಂಡು ಕಾರ್ಟೂನ್ ನೋಡುವುದು. ಟಿವಿ ಅಷ್ಟುಹೊತ್ತು ನೋಡುವುದು ಬೇಡ ಎಂದರೆ ಮುಷ್ಕರ ಹೂಡುತ್ತಿದ್ದ. ಅಂತಹ ಸಮಯದಲ್ಲಿ ಮಗನಿಗೆ ಯಕ್ಷಗಾನ ಕಲಿಸಬೇಕೆಂದು ನಿರ್ಧರಿಸಿದ್ದು. ಅವನನ್ನು ಒಮ್ಮೆ ಕರೆದು. “ಪ್ರತೀದಿನ ಸಂಜೆ ತಾಳ ಕುಣಿತ ಹೇಳಿಕೊಡುತ್ತೇನೆ. ನೀನು ಕಲಿಯಲೇಬೇಕು” ಎಂದೆ. ಅವನು ಹೂಂ ಎಂದರೂ ನನ್ನಿಂದ ಹೇಳಿಸಿಕೊಳ್ಳುವ ಮನಸ್ಸಿಲ್ಲದ್ದರಿಂದ ಸಂಜೆ ತಪ್ಪಿಸಿಕೊಂಡು ತಿರುಗತೊಡಗಿದ. ನನಗೆ ಒಮ್ಮೆ ಸಿಟ್ಟು ಬಂದು ಅವನನ್ನು ಕರೆದು ಹೇಳಿದೆ. “ನಾಳೆಯಿಂದ ಸಂಜೆ ನೀನು ರೆಡಿ ಇರಬೇಕು. ಬೇಕಾದರೆ ನಿನ್ನ ಸ್ನೇಹಿತರನ್ನೂ ಕೂಡಿಕೊಂಡು ಬಾ. ದಿನಾ ಒಂದೊಂದು ತಾಳ ಹೇಳಿಕೊಡುತ್ತೇನೆ. ಕಲಿಯಲೇಬೇಕು. ಅದಲ್ಲದಿದ್ದರೆ ಸಂಜೀವ ಸುವರ್ಣರು ಶನಿವಾರ, ಭಾನುವಾರ ಮಕ್ಕಳಿಗೆ ಕುಣಿತ ಹೇಳಿಕೊಡುತ್ತಿದ್ದಾರಂತೆ. ಅಲ್ಲಿಗೆ ಸೇರಬೇಕು” ಎಂದು ಶರತ್ತು ಹಾಕಿದೆ.

(ಮುಂದುವರಿಯುವುದು)

ಸೋಮವಾರ, ನವೆಂಬರ್ 6, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 48

ಮುಲ್ಕಿಯಲ್ಲಿ ನಾರಾಯಣಗುರು ಇಂಗ್ಲೀಷ್ ಮೀಡಿಯಂ ಶಾಲೆಗೆ ಮಗನನ್ನು ಸೇರಿಸಿದೆವು. ಆಫೀಸಿನ ಹತ್ತಿರವೇ ನಮ್ಮ ವಸತಿಗೃಹ. ಇವಳಿಗೂ ನಮ್ಮ ಆಫೀಸಿನಲ್ಲಿಯೇ ಗುತ್ತಿಗೆಯ ಆಧಾರದಲ್ಲಿ ಕೆಲಸಮಾಡುವ ಅವಕಾಶ ಸಿಕ್ಕಿತು. ಮಗನಿಗೆ ಬೆಳಿಗ್ಗೆ ಮಾತ್ರ ಶಾಲೆ ಇದ್ದುದರಿಂದ ಮಧ್ಯಾಹ್ನ ಮನೆಗೆ ಬಂದಕೂಡಲೇ  ನಾವು ಆಫೀಸಿಗೆ ಹೋಗುವಾಗ ಕರೆದುಕೊಂಡು ಹೋಗಿ, ಆಫೀಸಿನ ಮೂಲೆಯಲ್ಲಿ ಒಂದು ಬಟ್ಟೆ ಹಾಸಿ ಮಲಗಿಸುತ್ತಿದ್ದೆವು. ಎಚ್ಚರವಿದ್ದಾಗ ಮನೆಯ ಎದುರಿನ ವಿಶಾಲವಾದ ಗಾಂಧಿ ಮೈದಾನದಲ್ಲಿ, ಹೊಯಿಗೆ ರಾಶಿಯಲ್ಲಿ, ಮಳೆಗಾಲದಲ್ಲಿಯಾದರೆ ಅಲ್ಲಿಯೇ ಹರಿಯುವ ತೋಡಿನ ನೀರಿನಲ್ಲಿ ಅವನಷ್ಟಕ್ಕೇ ಆಡಲು ಬಿಡುತ್ತಿದ್ದೆವು. ಅವನನ್ನು ಶಾಲೆಗೆ ಕರೆದೊಯ್ಯಲು ಮನೆಯ ಹತ್ತಿರ ವ್ಯಾನ್ ಬರುತ್ತಿತ್ತು. ತಿಂಗಳ ಅಂತ್ಯದಲ್ಲಿ ಆ ವ್ಯಾನಿನ ಬಾಡಿಗೆಯನ್ನು ಅವನ ಕಿಸೆಗೆ ಹಾಕಿ ಡ್ರೈವರ್ ನಿಗೆ ಕೊಡಲು ಹೇಳುತ್ತಿದ್ದೆವು. ಆಗ ವ್ಯಾನ್ ಬಾಡಿಗೆ ನೂರ ಐವತ್ತು ಇದ್ದು ಅವನು ನೂರೈವತ್ತೈದಕ್ಕೆ ಬಾಡಿಗೆಯನ್ನು ಒಮ್ಮೆ ಏರಿಸಿದ.

ಒಮ್ಮೆ ಶಾಲೆಯಿಂದ ಮನೆಗೆ ಬರುವಾಗ ಮಗನ ಕೈಯಲ್ಲಿ ದೊಡ್ಡ ಎರಡು ನವಿಲು ಗರಿಯಿತ್ತು. ಅವನು ಖುಷಿಯಿಂದ ಓಡೋಡಿ ಬಂದು “ಅಪ್ಪ ಅಪ್ಪ, ನವಿಲುಗರಿ ನೋಡು. ಎಷ್ಟು ಚೆಂದ ಇತ್ತಲ್ಲ” ಎಂದು ನನ್ನ ಮುಂದೆ ಹಿಡಿದ. ನನಗೆ ಅದನ್ನು ನೋಡಿ ಸಂತೋಷವಾಗುವ ಬದಲು, ಒಮ್ಮೆಲೇ ಸಿಟ್ಟು ಬಂತು. “ಅದು ಎಲ್ಲಿ ಸಿಕ್ಕಿತು?” ಎಂದು ಗದರಿಸಿದೆ. ಅದು ಯಾರದ್ದೋ ಅವನ ಜೊತೆಯ ಹುಡುಗರದಾಗಿದ್ದು, ಅವರಿಗೆ ಗೊತ್ತಿಲ್ಲದೇ ತಂದಿದ್ದ ಎಂದು ನನಗೆ ಅನುಮಾನ. ಅವನು “ಅಂಗಡಿಯವನು ಕೊಟ್ಟ” ಎಂದ. ನನಗೆ ಖಾತ್ರಿಯಾಯಿತು. ಅವನ ಹತ್ತಿರ ಹಣವಿಲ್ಲ. ಇವನು ಅಂಗಡಿಯವನಿಗೆ ಗೊತ್ತಾಗದ ಹಾಗೆ ತಂದಿರಬೇಕು ಎಂದುಕೊಂಡೆ. "ಯಾವ ಅಂಗಡಿ? ಅವನು ನಿನಗೆ ಯಾಕೆ ಕೊಟ್ಟ?. ಹೇಗೆ ಸಿಕ್ಕಿತು? ಎಂದು ಗಲಾಟೆ ಮಾಡಿ, ಆಗಲೇ ಸ್ಕೂಟರಿನಲ್ಲಿ ಅವನನ್ನು ಕೂರಿಸಿಕೊಂಡು, ಅವನು ಹೇಳಿದ ಅಂಗಡಿಗೆ ಹೋಗಿ “ನೀವು ಈ ನವಿಲು ಗರಿಯನ್ನು ಅವನಿಗೆ ಕೊಟ್ಟಿರಾ? ಎಂದು ವಿಚಾರಿಸಿದೆ. ಅವರು “ಹೌದು. ಅದಕ್ಕೆ ಅವನು ಐದು ರೂಪಾಯಿಯನ್ನೂ ಕೊಟ್ಟನಲ್ಲ” ಎಂದರು. ಅವನ ರಟ್ಟೆ ಹಿಡಿದು . “ನಿನಗೆ ಆ ದುಡ್ಡು ಎಲ್ಲಿಂದ ಬಂತು?” ಎಂದು ಜೋರು ಮಾಡಿದೆ. ಅವನು ಅಳುತ್ತಾ“ಕಿಸೆಯಲ್ಲಿತ್ತು” ಅಂದ. ಅವನು ವ್ಯಾನಿನವನಿಗೆ ನೂರೈವತ್ತು ರುಪಾಯಿ ಮಾತ್ರ ಕೊಟ್ಟಿದ್ದ. ಕಿಸೆಯಿಂದ ತೆಗೆಯುವಾಗ ಐದು ರೂಪಾಯಿ ಅಲ್ಲಿಯೇ ಉಳಿದಿತ್ತು. ವ್ಯಾನಿನವನೂ ಬಾಕಿ ಹಣವನ್ನು ಕೇಳಲಿಲ್ಲ. ಇವನು ಮತ್ತೊಮ್ಮೆ ಕಿಸೆಗೆ ಕೈ ಹಾಕುವಾಗ ಅದು ಸಿಕ್ಕಿರಬೇಕು. ಅದೇ ಹೊತ್ತಿಗೆ ಅಲ್ಲಿ ಅಂಗಡಿಯಲ್ಲಿ ಚಂದದ ನವಿಲುಗರಿಯೂ ಕಂಡಿತು. ಆದರೆ ಅವನಿಗೆ ಅದರಿಂದ ಒಂದು ಪಾಠವಾಯಿತು. ಆಗಲೇ ಅವನಿಗೆ ತಾಕೀತು ಮಾಡಿದೆ. “ನಮಗೆ ಗೊತ್ತಿಲ್ಲದೇ, ನಮಗೆ ಹೇಳದೇ ಏನೂ ಕೊಂಡುಕೊಳ್ಳಬಾರದು” ಎಂದು.

ಅವನನ್ನು ನಾವು ಬಹಳ ಮುದ್ದಿನಿಂದ ಆದರೆ ಅಷ್ಟೇ ಶಿಸ್ತಿನಿಂದ ಬೆಳೆಸಿದೆವು. ಹಬ್ಬಕ್ಕೆ ಹೋದರೆ ಏನಾದರೂ ಒಂದೇ ಆಟಿಕೆ ಕೊಡಿಸುವ ಶರತ್ತು. ಆಯ್ಕೆ ಅವನಿಗೆ. ಅದು ಬೇಕು ಇದು ಬೇಕು ಎನ್ನುವ ಹಾಗಿಲ್ಲ. ಎಲ್ಲವನ್ನೂ ನೋಡಿ ಆದ ಮೇಲೆ “ಅಪ್ಪ, ನನಗೆ ಇಂತದ್ದನ್ನು ಕೊಡಿಸಿ” ಅನ್ನುತ್ತಿದ್ದ. ಅದರಲ್ಲಿ ಹೆಚ್ಚಿನವುಗಳು ಆಟದ ಕಾರುಗಳು. ಅವುಗಳಲ್ಲಿ ಹೆಚ್ವಿನವುಗಳು ಇಂದೂ ನಮ್ಮ ಮನೆಯಲ್ಲಿ ಇದೆ. ಕುಟ್ಟಿ ಎಳೆದು ಹಾಳುಮಾಡುತ್ತಿರಲಿಲ್ಲ. ಚಿಕ್ಕಂದಿನಲ್ಲಿಯೂ ಬಿಳಿ ಪೇಪರ್ ಕೊಟ್ಟು ಪೆನ್ನು ಕೊಟ್ಟು ಗೀಚಲು ಕೊಟ್ಟರೂ, ಆ ಕಾಗದವನ್ನು ಹರಿದು ಹಾಕಲು ಬಿಡುತ್ತಿರಲಿಲ್ಲ.  ಅವನಿಗೆ ಒಂದು ಕಾಯಿನ್ ಡಬ್ಬಿ ಕೊಟ್ಟು ಅದರಲ್ಲಿ ಅವನಿಗೆ ವಿಶೇಷ ಊಟದಲ್ಲಿ ಅಥವ ಯಾರಾದರೂ ದೊಡ್ಡವರು ಹಣ ಕೊಟ್ಟಲ್ಲಿ ಅದಕ್ಕೆ ಹಾಕಿ ಇಡಲು ಹೇಳುತ್ತಿದ್ದೆವು.  ಅವನು ಹಾಗೆಯೇ ಮಾಡಿ ಅನಿವಾರ್ಯದಲ್ಲಿ ಮಾತ್ರ ಖರ್ಚು ಮಾಡುವ ಮಿತವ್ಯಯದ ಹಾಗೂ ಹೆಚ್ಚು 'ಆಯ್ಕಟ್' ಮಾಡದೇ ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳುವ ನಮ್ಮ ಗುಣವನ್ನು ಬೆಳೆಸಿಕೊಂಡ.

ಮುಲ್ಕಿಯಿಂದ ಪ್ರಮೋಶನ್ ಆಗಿ ಪುನಹ ಉಡುಪಿಗೆ ಬಂದಾಗ ಒಂದು ವರ್ಷ ಕುಂಜಿಬೆಟ್ಟಿನ ವಸತಿ ಗೃಹದಲ್ಲಿ ಇದ್ದೆ. ಉಡುಪಿಯಲ್ಲಿ ನನ್ನದೇ ಒಂದು ಸ್ವಂತ ಮನೆಯನ್ನು ಹೊಂದಬೇಕು ಎಂದು ಮನಸ್ಸಾಯಿತು. ಸೈಟ್ ತೆಗೆದುಕೊಂಡು ಮನೆ ಕಟ್ಟಿಸುವುದು ಕಷ್ಟ ಎಂದುಕೊಂಡು, ಕಟ್ಡಿಸಿದ ಮನೆಯನ್ನು ಹುಡುಕತೊಡಗಿದೆ. ಒಂದೆರಡು ಮನೆಯನ್ನು ಹೋಗಿ ನೋಡಿಯೂ ಆಯಿತು. ಒಮ್ಮೆ ನಮ್ಮ ಭಾವ ಉಡುಪರು ಮತ್ತು ಸುಬ್ರಾಯರು ಮಾತಾಡುತ್ತಿರುವಾಗ ಮನೆಯ ಬಗ್ಗೆ ಹೇಳಿದೆ. ಆಗ ಉಡುಪರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವುದು ಬೇಡ. ತಡವಾದರೂ ಅಡ್ಡಿಲ್ಲ ನಮಗೆ ಹೇಗೆ ಬೇಕೋ ಹಾಗೆ ಮನೆಯನ್ನು ಕಟ್ಟಿಸಿಯೇ ಬಿಡುವುದು ಒಳ್ಳೆಯದು ಎಂದರು. ಅವರೇ ಅಂಬಾಗಿಲಿನಲ್ಲಿ ಒಂದು ಸೈಟ್ ಇದೆ ಎಂದು ನನ್ನನ್ನು ಕರೆದುಕೊಂಡು ಹೋಗಿ ತೋರಿಸಿದರು. ಅದು ನನಗೂ ಒಪ್ಪಿಗೆಯಾಯಿತು. ಅಲ್ಲಿಯೇ ಈಗ ನಾನು ಇರುವ ಮನೆಯನ್ನು ಕಟ್ಟಲು ನನ್ನದೇ ಅಂದಾಜಿನ ಒಂದು ಮನೆಯ ಚಿತ್ರವನ್ನು ಬಿಡಿಸಿ ಅದರಂತೆಯೇ ಕಟ್ಟಿಕೊಡಲು ಅಂಬಲಪಾಡಿಯ ಜಗದೀಶ ಕೆದ್ಲಾಯರನ್ನು ಕೇಳಿಕೊಂಡೆ. ಅವರ ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ನನ್ನ ಕನಸಿನಂತೆಯೇ ಆ ಮನೆ ಕಟ್ಟಿಸಿದೆ. ಮನೆ ಸಿದ್ದವಾಯಿತು. ಗೃಹಪ್ರವೇಶದ ದಿನ ಮಗನ ಉಪನಯನವನ್ನೂ ಮಾಡಿ ಹೊಸಮನೆಯನ್ನು  ಪ್ರವೇಶ ಮಾಡಿದ್ದಾಯಿತು.

(ಮುಂದುವರಿಯುವುದು)

ಭಾನುವಾರ, ನವೆಂಬರ್ 5, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 47

ಮುಲ್ಕಿಯಲ್ಲಿ ಆಫೀಸ್ ಪಕ್ಕದಲ್ಲಿ ಶಾಖಾಧಿಕಾರಿಗಳ ಕ್ವಾರ್ಟರ್ಸ್ ಖಾಲಿ ಇದ್ದುದರಿಂದ, ಆಗ ಸುರತ್ಕಲ್ ಉಪವಿಭಾಗದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದ ವೇಣುಗೋಪಾಲಶೆಟ್ಟಿಯವಲ್ಲಿ, ನಾನು "ಅದನ್ನು ನನಗೆ ಕೊಡಿಸಬಹುದಾ? ಶಾಖಾಧಿಕಾರಿಗಳು ಬಂದಾಗ ಬಿಟ್ಟು ಕೊಡುತ್ತೇನೆ" ಎಂದು ಕೇಳಿಕೊಂಡೆ. ಅವರು ನೋಡುವ ಎಂದು ಮೀಟಿಂಗ್ ನಲ್ಲಿ ಶಿಪಾರಸ್ಸು ಮಾಡಿ ಅದನ್ನು ನನಗೆ ಕೊಡಿಸಿದರು. ಕೊನೆಗೆ ಶಾಖಾಧಿಕಾರಿಗಳಾಗಿ ಕೃಷ್ಣಯ್ಯ ಶೆಟ್ಟರು ಎನ್ನುವವರು  ಅಲ್ಲಿಗೆ ಬಂದಾಗ, ಅವರು ನಾಲ್ಕು ಕಿಲೋಮೀಟರ್ ದೂರದ ವಿದ್ಯುತ್ ಸಬ್ ಸ್ಟೇಶನ್ ನ ಹತ್ತಿರದ ಇನ್ನೊಂದು ವಸತಿಗೃಹದಲ್ಲಿ ಇರಲು ಒಪ್ಪಿದ್ದರಿಂದ, ನನಗೆ ಅಲ್ಲಿಯೇ ಮುಂದುವರಿಯಲು ಅವಕಾಶವಾಯಿತು. ಕೃಷ್ಣಯ್ಯ ಶೆಟ್ಟರು ನನ್ನಂತೆ ಆಟ, ತಾಳಮದ್ದಲೆ ಹುಚ್ಚಿನವರು. ಆದ್ದರಿಂದ ನಾವು ಬೇಗನೇ ಸ್ನೇಹಿತರಾದೆವು.

ಆಗ ಕಿನ್ನಿಗೋಳಿಯ ಯುಗಪುರುಷ ಎಂಬಲ್ಲಿ ತುಂಬಾ ತಾಳಮದ್ದಲೆಗಳು ನಡೆಯುತ್ತಿದ್ದವು. ಸಂಜೆ ಆಫೀಸ್ ಮುಗಿದ ಕೂಡಲೇ ನಾನೂ ಮತ್ತು ಶೆಟ್ಟರು ಅಲ್ಲಿ ಹಾಜರು. ನಮ್ಮಷ್ಟಕ್ಕೇ ಒಂದು ಬದಿಯಲ್ಲಿ ಕುಳಿತು ತಾಳಮದ್ದಲೆ ನೋಡಿ ಮರಳುತ್ತಿದ್ದೆವು. ಆಗಿನ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಶರಸೇತು ಬಂಧ ತಾಳಮದ್ದಲೆಯಲ್ಲಿ ರಾಮದಾಸ ಸಾಮಗರು ಬರುವಾಗ ಸಭೆಯಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಆಗ ಪ್ರೇಕ್ಷಕರ ಪ್ರೋತ್ಸಾಹ ತಮಗೆ ಕಡಿಮೆಯಾಯಿತು ಎಂದು ತಿಳಿದ, ಅರ್ಜುನ ಮಾಡಿದ ಶೇಣಿಯವರು ಅರ್ಥಗಾರಿಕೆಯಲ್ಲಿ ಹನುಮಂತ ಮಾಡಿದ ರಾಮದಾಸ ಸಾಮಗರಿಗೆ “ಎಂತ ಸಾಮಗರೇ, ನಿಮ್ಮ ಅರ್ಥದ ಶೈಲಿಯೇ ಸರಿ ಇಲ್ಲ ನೀವು ಹೀಗೆ ಅರ್ಥ ಹೇಳುತ್ತೀರಲ್ಲ?” ಎಂದು ಜಗಳಾಡಿದ್ದ ಘಟನೆ ನಡೆಯಿತು. ನಮಗೆ ಮುಂದೆ ಏನಾಗುತ್ತದೋ ಎಂಬಷ್ಟು ಗಾಬರಿ. ಅಲ್ಲಿಗೇ ತಾಳಮದ್ದಲೆ ನಿಂತು ಜಗಳ ಶುರುವಾಯಿತು. ಯಾರೊಬ್ಬರಿಗೂ ಅವರ ಎದುರು ಮಾತಾಡಲು ಧೈರ್ಯವಿಲ್ಲ. ಕೊನೆಗೆ ವ್ಯವಸ್ಥಾಪಕರು ಬಂದು ಇಬ್ಬರಲ್ಲು ಜಗಳ ನಿಲ್ಲಿಸಲು ಬೇಡಿಕೊಂಡರು. ತುಂಬಾ ಹೊತ್ತಿನ ಮೇಲೆ ಮತ್ತೆ ತಾಳಮದ್ದಲೆ ಮುಂದುವರಿಯಿತು.

ಮತ್ತೊಮ್ಮೆ ಬಪ್ಪನಾಡು ದೇವಸ್ಥಾನದಲ್ಲಿ ಒಂದು ಕಾರ್ಯಕ್ರಮ ಆಗಿತ್ತು. ಅದರಲ್ಲಿ ಕೊಳ್ಯೂರು ರಾಮಚಂದ್ರ ರಾಯರು,  ಸ್ತ್ರೀ ಪಾತ್ರದ ಅಭಿನಯ ಮತ್ತು ನರ್ತನವನ್ನು ಯಕ್ಷಗಾನದಲ್ಲಿ ಮಾಡಿದ ನಂತರ, ವಿದುಷಿ ಶ್ರೀಮತಿ ಪ್ರತಿಭಾ ಸಾಮಗರು ಅದೇ ಪದ್ಯವನ್ನು ಭರತ ನಾಟ್ಯದಲ್ಲಿ ಅಭಿನಯಿಸಿದ ಒಂದು ಅಪರೂಪದ ಪ್ರಯೋಗವೂ ಆಗಿತ್ತು.

ಮುಲ್ಕಿಯ ಆಫೀಸಿನಲ್ಲಿ ನಾನು ಹೋಗಿ ಕೆಲಸಕ್ಕೆ ಹಾಜರಾಗುವಾಗ ಅಲ್ಲಿ ತುಂಬಾ ಕೆಲಸಗಳು ಬಾಕಿಇತ್ತು. ಅಲ್ಲಿ ನಾನು ಲೆಕ್ಕಶಾಖೆಯ ಮೇಲ್ವಿಚಾರಕನಾಗಿದ್ದೆ. ನಾನು ಅದನ್ನು ಒಂದು ಹಂತಕ್ಕೆ ತರಲು ತುಂಬಾ ಹೆಣಗಬೇಕಾಯಿತು. ನನ್ನ ಹೆಂಡತಿಯನ್ನೂ ಆಗಾಗ ಆಫೀಸಿಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸಹಾಯ ಪಡೆದೆ. ಕೊನೆಗೆ ಮಂಗಳೂರಿನ ನಮ್ಮ ಹೆಡ್ ಅಫೀಸಿನಲ್ಲಿ ಲೆಕ್ಕಾಧಿಕಾರಿಗಳಾದ ಗೋಪಾಲಕೃಷ್ಣ ಎನ್ನುವವರು ತಾತ್ಕಾಲಿಕವಾಗಿ ಇಬ್ಬರನ್ನು ಗುತ್ತಿಗೆಯ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟರು. ಆಗ ಅನ್ನಪೂರ್ಣಳನ್ನೇ ಆಫೀಸಿನ ಕೆಲಸಕ್ಕೂ ಸೇರಿಸಿದೆ. ನನಗೆ ಆಫೀಸೂ ಮನೆಯೂ ಒಂದೇ ಆಯಿತು. ಕೆಲವೊಮ್ಮೆ ರಾತ್ರಿ ತುಂಬಾ ಹೊತ್ತಿನ ವರೆಗೂ ಅಲ್ಲಿಯೇ ಇರುತ್ತಿದ್ದೆ.

ಶಾಖಾಧಿಕಾರಿಗಳಾದ ಕೃಷ್ಣಯ್ಯ ಶೆಟ್ಟರಂತೂ ಸಲಿಗೆಯ ಸ್ನೇಹಿತರಾಗಿಬಿಟ್ಟರು. ಅವರ ಸಿಗರೇಟಿನ ಛಟ ಬಿಡಿಸಲು ಮಾತ್ರಾ ಆಗಲಿಲ್ಲ.  ಒಮ್ಮೊಮ್ಮೆ ಕಂಬ ತುಂಡಾಗಿ ವಿದ್ಯುತ್ ಅಡಚಣೆಯಾದಾಗಲೂ “ಬನ್ನಿ ಉಪ್ಪೂರ್ರೆ, ಹೋಗಿ ಬರುವ” ಎಂದು ಅವರ ಬೈಕಿನಲ್ಲಿ ಹಿಂದೆ ನನ್ನನ್ನು ಕೂರಿಸಿಕೊಂಡು ಹೊರಡುತ್ತಿದ್ದರು.  ನಾನು ಆಫೀಸಿನಲ್ಲಿ ಲೆಕ್ಕಪತ್ರಗಳ ಕೆಲಸ ಮಾತ್ರಾ ನೋಡಬೇಕಾಗಿದ್ದು, “ನಾನು ಸುಮ್ಮನೇ ಯಾಕೆ ಮರ್ರೆ” ಎಂದರೂ ಕೇಳುತ್ತಿರಲಿಲ್ಲ. ಬಾರಕೂರಿನ ಹತ್ತಿರದ ಊರಿನವರಾದ ಅವರು ಶುದ್ಧ ಕುಂದಾಪುರ ಭಾಷೆಯಲ್ಲಿ “ಮನೆಯಲ್ಲಿ ಕೂತ್ಕಂಡ್ ಎಂತ ಮಾಡ್ತ್ರಿ. ಬನ್ನಿ ಕಾಂಬ” ಎಂದು ಎಲ್ಲ ತಿರುಗಾಟಕ್ಕೂ  ಎಳೆದುಕೊಂಡೇ ಹೋಗುತ್ತಿದ್ದರು.

ನನ್ನ ಕೈಕೆಳಗೆ ಕೆಲಸ ಮಾಡುವವರು ಒಳ್ಳೆಯ ಕೆಲಸಗಾರರೂ ಆಗಿದ್ದರಿಂದ ನಾನು ಮುಲ್ಕಿಯಿಂದ ಪ್ರಮೋಶನ್ ಆಗಿ ಉಡುಪಿಗೆ ಬರುವಾಗ ನಮ್ಮದು ಒಂದು ಅತ್ಯುತ್ತಮ ಶಾಖೆ ಎಂದು ಹೊಗಳುವಂತಾಗಿ ಒಂದು ಪ್ರಶಸ್ತಿ ಯೂ ಬಂತು.

ನಾನು ಹೋಟೆಲಿಗೆ ಹೋದರೆ ಮೊದಲೆಲ್ಲ ಕ್ಲೀನ್ ಮಾಡುವವರಿಗೆ ಸಪ್ಲೈ ಮಾಡುವವರಿಗೆ ಟಿಪ್ಸ್ ಕೊಡುತ್ತಿರಲಿಲ್ಲ. ಈಗ ಮನಸ್ಸು ಬದಲಾಗಿದೆ. ಅವರಿಗೆ ಸಂಬಳ ಕೊಡುತ್ತಾರಲ್ಲ ಕೆಲಸ ಮಾಡುವುದು ಅವರ ಕರ್ತವ್ಯ. ಟಿಪ್ಸ್ ಅಂತ ಕೊಟ್ಟರೆ ಅದು ಲಂಚ ಅಂತ ಆಗುವುದಿಲ್ಲವೇ ಅಂತ ನನ್ನ ಧೋರಣೆಯಾಗಿತ್ತು. ಆಫೀಸಿನಲ್ಲಿಯೂ ನಾನು ಆಫೀಸರ್ ಅಂತ ಆದಮೇಲೂ ಅವಕಾಶವಿದ್ದರೂ ಲಂಚ ತೆಗೆದುಕೊಳ್ಳಲಿಲ್ಲ. ಯಾರಾದರೂ ಹಣಕೊಡಲು ಬಂದರೆ,  ಅವರಿಗೆ  ನನಗೆ “ನನಗೆ ಎಷ್ಟು ಸಂಬಳ ಇದೆ ಎಂದು ನಿಮಗೆ ಗೊತ್ತಾ?. ಸತ್ಯ ಹೇಳುವುದಾದರೆ ನನ್ನ ದುಡಿತಕ್ಕಿಂತ, ನನ್ನ ಅರ್ಹತೆಗಿಂತ ಹೆಚ್ಚಿಗೆ ಕೊಡುತ್ತಾರೆ. ನಿಮ್ಮ ದುಡ್ಡಿಗೆ ನಾನು ಯಾಕೆ ಕೈಯೊಡ್ಡಬೇಕು?” ಎಂದು ಅವರಿಗೆ ವಿನಯದಿಂದಲೇ ಹೇಳಿ ಕಳಿಸುತ್ತಿದ್ದೆ.

 ಒಮ್ಮೆ ಕುಂದಾಪುರದಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ಗುತ್ತಿಗೆದಾರರು ನನ್ನ ಕೈಕೆಳಗೆ ಕೆಲಸ ಮಾಡುವ ಗುಮಾಸ್ತರ ಹತ್ತಿರ ನನಗೆ ಒಂದು ಕವರ್ ಕಳಿಸಿಕೊಟ್ಟಿದ್ದರು. ಆದರೆ ಅದು ಹಣ ಎಂದು ನನಗೆ ಗೊತ್ತಾದ್ದರಿಂದ ನಾನು ಅದನ್ನು ಮುಟ್ಟಲಿಲ್ಲ. ಅವರಿಗೆ ವಾಪಾಸು ಕೊಡಿ ಎಂದುಬಿಟ್ಟೆ. ಮತ್ತೆ ನಾನು ಅದನ್ನು ಮರೆತು ಬಿಟ್ಟೆ. ಸುಮಾರು ಒಂದು ವರ್ಷ ಅದು ನಮ್ಮ ಆಫೀಸಿನ ತಿಜೋರಿಯಲ್ಲಿ ಆಫೀಸಿನ ಹಣದ ಜೊತೆಗೇ ಇತ್ತು. ನನಗೆ ನೆನಪೇ ಹೋಗಿತ್ತು ಒಮ್ಮೆ ಅಲ್ಲಿಯ ಹಣವನ್ನು ನಾನು ಪರಿಶೀಲಿಸುವಾಗ ಅದನ್ನು ನೋಡಿ “ಅದೇನು?” ಎಂದು ಕೇಳಿದೆ. ಅವನು ನೆನಪು ಮಾಡಿದ. ವಾಪಾಸು ಮಾಡಲು ಹೋದರೆ ಕೊಟ್ಟವರು ತೆಗೆದುಕೊಳ್ಳಲಿಲ್ಲ ಹಾಗಾಗಿ ಅಲ್ಲಿಯೇ ಇಟ್ಟಿದ್ದೆ ಎಂದ. ಅದು ಅಲ್ಲಿದ್ದರೆ ತೊಂದರೆಯೇ. ಅದು ಆಫೀಸಿಗೆ ಸಂಬಂಧಿಸಿದ ಹಣ ಅಲ್ಲ. ಏನು ಮಾಡುವುದೆಂದು ಗೊತ್ತಾಗಲಿಲ್ಲ. ಕೊನೆಗೆ ನಾನು ಅವನಿಗೆ “ಅದರಿಂದ ಆಫೀಸಿನ ಎಲ್ಲರಿಗೂ ಒಂದು ಪಾರ್ಟಿ ಕೊಡಿಸಿ ಖರ್ಚುಮಾಡಿಬಿಡಿ. ಅಲ್ಲಿಡಬೇಡಿ” ಎಂದು ಹೇಳಿ ಪ್ರಕರಣವನ್ನು ಮುಗಿಸಿದೆ.

(ಮುಂದುವರೆಯುವುದು)