ಗುರುವಾರ, ಆಗಸ್ಟ್ 14, 2014



ಕಲಾವಿದರು ಹಾಗೂ ಹವ್ಯಾಸಿ ಕಲಾವಿದರು
ದಿನೇಶ ಉಪ್ಪೂರ
                ಹವ್ಯಾಸಿ ಕಲಾವಿದರು ಮತ್ತು ಸಂಘಟನೆ ಮತ್ತು ಅವರ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಬರೆಯಬೇಕು ಎಂದು ಒಂದು ಪತ್ರಿಕೆಯ ಸಂಪಾದಕರಿಂದ ಆಹ್ವಾನ ಬಂದಾಗ, ಮೊದಲಿಗೆ ನನಗನ್ನಿಸಿದ್ದು ಹವ್ಯಾಸಿ ಕಲಾವಿದರು ಎಂದರೆ ಯಾರು? ಕಲಾವಿದರಲ್ಲಿ ಹವ್ಯಾಸಿಗಳು, ವೃತ್ತಿ ಪರರು ಎಂದೋ, ವ್ಯವಸಾಯಿಗಳು, ಪ್ರಯೋಗಶೀಲರು ಎಂದೋ ವಿಂಗಡಣೆ ಮಾಡುವುದು ಈಗಿನ ಯಕ್ಷಗಾನ ವಾತಾವರಣದಲ್ಲಿ  ಸಾಧ್ಯವೇ? ಹಾಗೆ ಮಾಡಿದರೆ ಈಗ ಕಾಲಮಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗಾಟ ಮಾಡುತ್ತಿರುವ ಪ್ರಬುದ್ಧ ಕಲಾವಿದರ ತಂಡಗಳನ್ನು ಯಾವ ಗುಂಪಿಗೆ ಸೇರಿಸಬೇಕು? ಏಂದು. ಯಾಕೆಂದರೆ ಅಂತಹಾ ತಂಡಗಳಲ್ಲಿ. ವ್ಯವಸಾಯೀ ಮೇಳಗಳಂತೆ ಸೇವೆ ಆಟ,  ಖಾಯಂ ಆರು ತಿಂಗಳ ತಿರುಗಾಟ, ಮಳೆಗಾಲದ ಬಿಡುವು ಇತ್ಯಾದಿಗಳು ಅವರಿಗೆ ಇರುವುದಿಲ್ಲ ಇವರಲ್ಲಿ ವೃತ್ತಿ ಕಲಾವಿದರ ಜೊತೆ ಬೇರೆ ಖಾಯಂ ಉದ್ಯೋಗದಲ್ಲಿರುವವರು ಇರುತ್ತಾರೆ .ಹಾಗಂತ ಅವರನ್ನು ಹವ್ಯಾಸಿಗಳು ಅಂತ ಕರೆಯಲು ಆಗುವುದಿಲ್ಲ. ಇವರ ವಿಂಗಡಣೆ ಹೇಗೆ? ಇಂಗ್ಲೀಷಿನಲ್ಲಾದರೆ ಮೆಚ್ಯುರ್ ಎಮೆಚ್ಯುರ್, ಅಂದರೆ ಒಬ್ಬರು ಕಲಿತವರು ಮತ್ತೊಬ್ಬರು ಕಲಿಯುವವರು.  
ಈ ಎಮೆಚ್ಯುರ್ ಗುಂಪನ್ನು ಹವ್ಯಾಸಿಗಳು ಎಂದುಕೊಂಡರೆ ಅವರಲ್ಲಿ ಕಲೆಯ ಆಸಕ್ತಿಯಿರುವ ಹಲವು ಗೆಳೆಯರನ್ನು ಕೂಡಿಸಿಕೊಂಡು ಒಬ್ಬ ಗುರುಗಳನ್ನು ಆರಿಸಿಕೊಂಡು ನಿಯಮಿತವಾಗಿ ಒಂದು ಸ್ಥಳದಲ್ಲಿ ಸೇರಿ ಯಕ್ಷಗಾನದ ತಾಳ,ಕುಣಿತ ಕಲಿತು ಯಾವುದಾದರೂ ಒಂದು ಪ್ರಸಂಗದ ಬಗ್ಗೆ ಅಭ್ಯಾಸ ಮಾಡಿಕೊಂಡು ಅದರ ಅರ್ಥ ಬರೆದುಕೊಂಡು ಬಾಯಿಪಾಠ ಮಾಡಿಕೊಂಡು, ಅವರಿವರನ್ನು ಕೇಳಿ, ಬೇಡಿ ಹಣಹೊಂದಿಸಿ ಒಂದೋ ಎರಡೋ ಪ್ರದರ್ಶನ ಮಾಡಿ ಕೈ ಸುಟ್ಟುಕೊಂಡು ತೃಪ್ತಿ ಪಟ್ಟುಕೊಳ್ಳುವವರ ಗುಂಪು ಎನ್ನಬಹುದು. ಅವರಿಗೆ ಸಮಸ್ಯೆಗಳೇ ಇರುವುದಿಲ್ಲ ಅಥವಾ ಎಲ್ಲವೂ ಸಮಸ್ಯೆಗಳೇ. ಒಂದು ಚಟ. ಅವರ ಉತ್ಸಾಹವೇ ಪ್ರದರ್ಶನಕ್ಕೆ ಹೇತುವೇ ಹೊರತು ಲಾಭ ನಷ್ಟದ ಇಷ್ಟ ಕಷ್ಟಗಳ ಗೊಡವೆ ಅವರಿಗಿರುವುದಿಲ್ಲ. ಅದರಿಂದಲೇ ಅವರು ಜೀವನ ನಡೆಸಬೇಕಾಗಿರುವುದಿಲ್ಲ. ಆದರೆ ಇವರಂತೆ ಇಂದು ಹಲವಾರು ಕಾಲಮಿತಿ ತಂಡಗಳು ಅಲ್ಲಿ ಇಲ್ಲಿ ಪ್ರದರ್ಶನ ನೀಡುತ್ತಿವೆ.ಅವರು ವೃತ್ತಿ ಕಲಾವಿದರನ್ನು, ಪ್ರವೃತ್ತಿ ಕಲಾವಿದರನ್ನು ಸೇರಿಸಿಕೊಂಡು ವಿವಿದೆಡೆ ವಿಜ್ರಂಭಣೆಯಿಂದ ಅಲ್ಲಲ್ಲಿ ಪ್ರದರ್ಶನ ಏರ್ಪಡಿಸುತ್ತಾರೆ. ಇವರನ್ನು ಅಲ್ಲಲ್ಲಿ ಇರುವ ಆ ಕಲಾವಿದರ ಅಭಿಮಾನಿಗಳು, ಸಂಘಟಕರು ಕರೆಸಿ ಪ್ರದರ್ಶನ ಏರ್ಪಡಿಸುವುದರಿಂದ ಇವರಿಗೆ ಸಂಭಾವನೆ, ವ್ಯವಸ್ಥೆಗಳ ಕೊರತೆಗಳು ಇರುವುದಿಲ್ಲ. ಅವರಿಗೆ ಆಟ ಮಾಡಿ ಹೋಗುವುದು ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆಗಳೂ ಇರುವುದಿಲ್ಲ.
ಮೇಲೆ ತಿಳಿಸಿದಂತೆ ಕೇವಲ ಒಂದೆರಡು ಆಟದ ಮಟ್ಟಿಗೆ ಯಕ್ಷಗಾನ ಕಲಿತು ಆಟ ಮಾಡಿ ಕೈತೊಳೆದು ಕೊಳ್ಳುವ ಕಲಾವಿದರನ್ನು ಹವ್ಯಾಸಿಗಳೆಂದುಕೊಂಡರೆ ಅವರ ಸಮಸ್ಯೆಗಳು ಒಂದೆರಡಲ್ಲ. ಯಕ್ಷಗಾನ ಕಲಿಸುವವರನ್ನು ಹುಡುಕಿ ಕರೆಸಬೇಕು. ಭಾಗವತರು ಹಿಮ್ಮೇಳವನ್ನು ಹೊಂದಿಸಿಕೊಳ್ಳಬೇಕು. ವೇಷಭೂಷಣದವರಿಗೆ ಮುಂಚಿತವಾಗಿ ತಿಳಿಸಿ ದಿನ ನಿಶ್ಚಯಿಸಬೇಕು. ಪಾತ್ರಗಳನ್ನು ಹಂಚುವಾಗ ಗೊತ್ತಿಲ್ಲದವರಿಗೆ ಕಲಿಸಿ ಗೊತ್ತಿದ್ದವರಿಗೆ ಅವರಿಗೆ ಗೊತ್ತಿರುವುದನ್ನು ಪ್ರದರ್ಶಿಸಲು ಅವಕಾಶ ನೀಡಬೇಕು ಅವರಿಗೆ ಅವರು ಮಾಡುವ ತರಹದ ವೇಷವನ್ನೇ ಕೊಡಬೇಕು ಟ್ರಯಲ್ ವ್ಯವಸ್ಥೆ ಅದಕ್ಕೆ ಬಾರದವರನ್ನು ಮನಒಲಿಸಿ ಕರೆದುತಂದು ಎದುರು ಪಾತ್ರಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಬೇಕು. ಪ್ರದರ್ಶನದ ದಿನವಂತೂ ಕಲಾವಿದರನ್ನು ಮುಂಚಿತವಾಗಿ ಬರಹೇಳಿ ಅವರಿಗೆ ಮುಖವರ್ಣಿಕೆ ಮಾಡಿಸಿ ವೇಷತೊಡಿಸಿ ರಂಗಸ್ಥಳಕ್ಕೆ ಬಿಟ್ಟರೆ ಸಾಲದು ಅವರು ಸುಸ್ಥಾದರೆ ಗಾಳಿಹಾಕುವ ಕಿರೀಟಬಿಗಿದು ತಲೆನೋವು ಬಂದು ವಾಂತಿ ಮಾಡಿಕೊಂಡರೆ ಆರೈಕೆಮಾಡಿ ಹುರಿದುಂಬಿಸುವ ಈ ಆಟ ಒಂದು ಮುಗಿದರೆ ಸಾಕು ಇನ್ನು ಇದರ ಸುದ್ಧಿ ಬೇಡವೇ ಬೇಡ ಎಂದು ಎಲ್ಲರಿಗೂ ಹೇಳಿ, ಆಟ ಮುಗಿಯುತ್ತಿದ್ದಂತೆ ಇನ್ಯಾವಾಗ ಮಾಡುವ ಎಂದು ತೃಪ್ತಿಯಿಂದ ಹೇಳುವ ವರೆಗೆ ಸಮಸ್ಯೆ ಇರಬಹುದು. ಆದರೆ ಈಗ ಆಲ್ಲಲ್ಲಿ ಪ್ರದರ್ಶನ ನೀಡಿ ಜನರ ಮನ ಗೆದ್ದಿರುವ ಕಾಲಮಿತಿ ತಂಡಗಳಿಗೆ ಇಂತಹಾ ಯಾವ ಸಮಸ್ಯೆಗಳೂ ಇರುವುದಿಲ್ಲ. ಇಂದಿನ ಚಿಟ್ಟಾಣಿಯವರ ವೀರಾಂಜನೇಯ ಯಕ್ಷಗಾನ ಮಂಡಳಿ, ಯಾಜಿ ಯಕ್ಷಬಳಗ, ವಿದ್ಯಾಧರ ಕಲಾ ತಂಡ, ಕೊಂಡದಕುಳಿಯವರ ತಂಡ ಕೆರೆಮನೆ ತಂಡ ಮೊದಲಾದ ಮೇಳಗಳಲ್ಲಿ ಇಂದು ಗೊತ್ತು ಪಡಿಸಿದ ದಿನಾಂಕದಂದು ನಿಗದಿಪಡಿಸಿದ ಕಲಾವಿದರೊಂದಿಗೆ ಬಂದು ಪ್ರದರ್ಶನ ನೀಡಿ ಅವರು ಪ್ರದರ್ಶನ ನೀಡಿ ಅವರು ಹೋಗಿ ಬಿಡುತ್ತಾರೆ ಅವರಿಗೆ ಇಂತಿಷ್ಟು ಅಂತ ಕೊಟ್ಟರೆ ಮುಗಿಯಿತು. ಎಲ್ಲ ಜವಾಬ್ದಾರಿ ಆಟ ಮಾಡಿಸಿದ ಸಂಘಟಕನಿಗೆ. ವ್ಯವಸಾಯಿ ಮೇಳಗಳಂತೆ ಮಾರನೆಯ ದಿನದ ಯೋಚನೆ ಅವರಿಗಿರುವುದಿಲ್ಲ. ಅವರಲ್ಲಿ ಸ್ವಂತ ಬೇರೆ ಉದ್ಯೋಗಿಗಳೂ ಇರುತ್ತಾರೆ.
ಆದರೆ ಇಂದಿನ ಸಾಕೇತ ಕಲಾವಿದರು, ಲಕ್ಷ್ಮಿ ಜನಾರ್ಧನ ಯಕ್ಷಗಾನ ಮಂಡಳಿ ಅಂಬಲಪಾಡಿ, ಚೇರ್ಕಾಡಿ ಮಕ್ಕಳಮೇಳ, ಸಾಲಿಗ್ರಾಮ ಮಕ್ಕಳ ಮೇಳ  ಇವರನ್ನು ಮೇಲಿನ ಗುಂಪಿಗೆ ಸೇರಿಸಬಹುದೇ? ಯಾಕೆಂದರೆ ಇವರೂ ಇಂದು ತಯಾರಿಯಿಲ್ಲದೇ ಉತ್ತಮ ಪ್ರದರ್ಶನ ಕೊಡಬಲ್ಲರು. ವೃತ್ತಿ ಮೇಳಗಳಂತೆ ಅವರದೇ ಆದ ವೇಷಭೂಷಣ, ಹಿಮ್ಮೇಳ, ರಂಗಸ್ಥಳ, ಲೈಟು, ಮೈಕು ಎಲ್ಲವೂ ಇದೆ. ಆದರೂ ಇವರನ್ನು ವ್ಯವಸಾಯೀ ಮೇಳಗಳ ಪಟ್ಟಿಗೆ ತರುವುದು ಕಷ್ಟವೇ. ಯಾಕೆಂದರೆ ಇಂತಹಾ ಮೇಳಗಳಲ್ಲಿ ಇಂದು ವೃತ್ತಿ ಮೇಳಗಳಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ, ಊಟ ಬಿಡಾರದ ವ್ಯವಸ್ಥೆ, ಅರ್ಧ ರಾತ್ರಿಯನಂತರದ ಪ್ರೇಕ್ಷಕರ ಕೊರತೆ, ಪ್ರದರ್ಶನಕ್ಕೆ ಹಣಸಂಗ್ರಹದ ಸಮಸ್ಯೆ, ಕಲಾವಿದರನ್ನು ಓಲೈಸುವ ಸಮಸ್ಯೆ ಇವೆಲ್ಲಾ ಇರುವುದಿಲ್ಲ
ಆದ್ದರಿಂದ ಯಕ್ಷಗಾನದಲ್ಲಿ ಹವ್ಯಾಸಿ ವ್ಯವಸಾಯಿ ಅಥವಾ ಮೆಚ್ಯುರ್ ಎಮೆಚ್ಯುರ್ ಎಂಬ ಅರ್ಥದಲ್ಲಿ ಕಲಾವಿದರನ್ನು ಮೇಳಗಳನ್ನು ವಿಂಗಡಿಸುವುದು ಸ್ವಲ್ಪ ಕಷ್ಟವೆ. ಅದರಲ್ಲೂ ಯಕ್ಷಗಾನ ಕಲೆಯಲ್ಲಿ ಒಂದು ಪ್ರತ್ಯೇಕ ವೈಶಿಷ್ಟ್ಯತೆ ಇದೆ ಎಂದು ಹೇಳಬಹುದಾಗಿದೆ.

ದಿನೇಶ ಉಪ್ಪೂರ