ಭಾನುವಾರ, ಅಕ್ಟೋಬರ್ 29, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 42

ನಾನು ಕಲ್ಲಟ್ಟೆ ಮನೆಯಲ್ಲಿ ಇದ್ದು ಕೆಲಸವನ್ನು ಹುಡುಕುತ್ತಿರುವಾಗ, ಒಂದು ನಾಯಿಮರಿಯನ್ನು ಎಲ್ಲಿಂದಲೋ ತಂದು ಸಾಕಿದ್ದೆ. ಕಾಟುನಾಯಿ. ಅದರ ಹೆಸರು ದಾಸು ಎಂದು ಇಟ್ಟಿದ್ದೆ. ಆದರೆ ಅದು ಬಿಳಿನಾಯಿ ಅಲ್ಲ. ಕೆಂಚು ಬಣ್ಣ. ಅಲ್ಲಲ್ಲಿ ಕಪ್ಪು ಕೂದಲು ಇದ್ದು ಮಚ್ಚೆಯಂತೆ ಇತ್ತು. ಅದು ನಾನು ಎಲ್ಲಿ ಹೋದರೂ ನನ್ನ ಹಿಂದೆಯೇ ಬರುತ್ತಿತ್ತು. ಆದರೆ ಮನೆಯ ಜಗುಲಿಯಿಂದ ಮೇಲೆ ಬರಲು ಅದಕ್ಕೆ ಬಿಡುತ್ತಿರಲಿಲ್ಲ. ಅದಕ್ಕೆ ಬುದ್ಧಿ ಕಲಿಸಬೇಕೆಂದು ನಾನು ಆಗ್ಗಗ ಒಂದು ಹಾಳಾದ ಪೆನ್ನನ್ನು ದೂರ ಎಸೆದು, ತರಲು ಹೇಳುತ್ತಿದ್ದೆ. ಅದು ಬಾಲ ಆಡಿಸುತ್ತಾ ನನ್ನ ಹಿಂದೆಯೇ ಬಾಯಿ ಕಳೆದುಕೊಂಡು ನಾಲಿಗೆ ಹೊರಗೆ ಹಾಕಿ ತಿರುಗುತ್ತಿತ್ತೇ ವಿನಹ, ಪೆನ್ನನ್ನು ತರಲು ಸುತರಾಂ ಹೋಗುತ್ತಿರಲಿಲ್ಲ. ಕೊನೆಗೆ ಅದರ ಮೂತಿಯನ್ನು ಪೆನ್ನು ಇರುವಲ್ಲಿ ನೆಲಕ್ಕೆ ಒತ್ತಿದರೂ, ಬಾಯಿಯಲ್ಲಿ ಕಚ್ಚಿ ಹಿಡಿಯುತ್ತಿರಲಿಲ್ಲ. ನಾನು ಹೊಡೆದರೆ ಕುಯ್ಯೋ ಮುರ್ರೋ ಎಂದು ಕೂಗಿ ನನ್ನ ಕಾಲಬಳಿಯೇ ಅಂಗಾತ ಮಲಗಿ ಶರಣಾಗುತ್ತಿತ್ತು. ನನಗೆ ನಾಯಿಗೆ ಬುದ್ಧಿ ಕಲಿಸುವ ವಿದ್ಯೆ ಗೊತ್ತಿರಲಿಲ್ಲವೋ ಅಥವ ಅದು ಅಂತಹ ಬುದ್ಧಿಕಲಿಯದ ಜಾತಿ ನಾಯಿ ಅಲ್ಲವೋ ನನಗೆ ಗೊತ್ತಾಗಲಿಲ್ಲ. ಕೊನೆಗೆ ಇದು ನನ್ನಿಂದ ಆಗುವ ಕೆಲಸವಲ್ಲ ಎಂದು ಬಿಟ್ಟುಬಿಟ್ಟೆ. ಅಂತೂ “ದಾಸೂ... “ ಎಂದು ಕರೆದರೆ ಸಾಕು. ಆ ರಾಷ್ಟ್ರದಲ್ಲಿ ಎಲ್ಲಿದ್ದರೂ ಓಡೋಡಿ ಬಂದು ನಾಲಿಗೆ ಹೊರಕ್ಕೆ ಹಾಕಿ, ಬಾಲ ಮುರಿದು ಹೋಗುವಷ್ಟು ಅಲ್ಲಾಡಿಸುತ್ತಾ ವಿನಯ ತೋರಿಸುತ್ತಿತ್ತು.

ನಾನು ದಿನಾ ಹಾಲಾಡಿ ಪೇಟೆಗೆ ಹೊರಟರೆ, ಅದೂ ಹಿಂಬಾಲಿಸುತ್ತಿದ್ದುದರಿಂದ ಬೇರೆ ನಾಯಿಗಳು ದಾರಿಯಲ್ಲಿ ಕಚ್ಚಿದರೆ ಕಷ್ಟ ಎಂದು ಅದನ್ನು ಮನೆಗೆ ಓಡಿಸುವುದೇ ಒಂದು ಕಷ್ಟದ ಕೆಲಸ ನನಗಾಗುತ್ತಿತ್ತು. ಅಂತು ಅದು ನನ್ನ ಹಿಂದೆ ಮುಂದೆ ತಿರುಗಿ ನನ್ನಿಂದ ಕಲ್ಲಿನಲ್ಲಿ ಒಂದೆರಡು ಪೆಟ್ಟುತಿಂದು ಮನೆಗೆ ಬರುತ್ತಿತ್ತು. ನನಗೆ ಉಡುಪಿಯಲ್ಲಿ ಕೆಲಸ ಸಿಕ್ಕಿದ ಮೇಲೆ ನಾನು ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದೆ. ನನ್ನನ್ನು ಕಣ್ಣಕುಡಿಯಲ್ಲಿ ಅದು ಕಂಡಿತು ಅಂತಾದರೆ ಸಾಕು, ಓಡಿ ಬಂದು ತನ್ನ ಎರಡೂ ಮುಂದಿನ ಕಾಲನ್ನು ನನ್ನ ಎದೆಯವರೆಗೂ ತಂದು ಅಪ್ಪಿಕೊಳ್ಳುವಂತೆ ಮಾಡಿ ಪ್ರೀತಿ ತೋರಿಸುತ್ತಿತ್ತು.

ಅಮ್ಮನಿಗೆ ಕಾಯಿಲೆಯಾಗಿ ಉಡುಪಿಯಲ್ಲಿ ಡಾಕ್ಟರ್ ಯು. ಎಂ. ವೈದ್ಯ ರಲ್ಲಿಗೆ ಕರೆದುತಂದು ತೋರಿಸಿದೆ. ಅವರ ಸೂಚನೆಯ ಮೇರೆಗೆ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿ, ಅಮ್ಮ, ಅಲ್ಲಿ ಹುಷಾರಾದ ಮೇಲೆ ಉಡುಪಿಯ ನನ್ನ ರೂಮಿನಲ್ಲಿ ಸ್ವಲ್ಪ ದಿನ ಅಮ್ಮನನ್ನು ಕರೆದುಕೊಂಡು ಬಂದು ಇರಿಸಿಕೊಂಡಿದ್ದೆ. ಬೆಳಿಗ್ಗೆ ಕೃಷ್ಣಮಠದ ಸುತ್ತ ರಥಬೀದಿಯಲ್ಲಿ ಅಮ್ಮನಿಗೆ ವಾಕಿಂಗ್ ಮಾಡಿಸುತ್ತಿದ್ದೆ. ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದು, ರಾತ್ರಿ ಅವಳಿಗಾಗಿ ಚಪಾತಿ ಮಾಡಿ ಹಾಕುತ್ತಿದ್ದೆ. ಹಗಲು ಅಮ್ಮ ಒಬ್ಬಳೇ ಇರುತ್ತಿದ್ದಳಲ್ಲ, ಆಗ ನನ್ನ ರೂಮಿನ ಯಜಮಾನರಾದ ರಾಜಗೋಪಾಲ ರಾಯರ ಹೆಂಡತಿ, ಅವರ ಹೆಸರು ಏನೆಂದು ನಾನು ಕೇಳದೇ ಇದ್ದುದರಿಂದ, ನನಗೆ ಈಗಲೂ ಗೊತ್ತಿಲ್ಲ. ಅವರು ಅಮ್ಮನನ್ನು ಕೈಹಿಡಿದು ಅವರ ಮನೆಗೆ ಕರೆದುಕೊಂಡು ಹೋಗಿ, ರಸ್ತೆಯ ಬದಿಯ ಕಿಟಕಿಯ ಹತ್ತಿರ ಕೂರಿಸಿಕೊಂಡು. ಆಗಾಗ ಮಾತನಾಡಿಸುತ್ತಾ ನನಗೆ ಬಹಳ ಉಪಕಾರ ಮಾಡಿದರು. ಒಮ್ಮೆಯಂತೂ ನನ್ನ ಅಮ್ಮನ ಚಿನ್ನದಸರ ಕಕ್ಕಸು ಮನೆಯ ದಾರಿಯಲ್ಲಿ ಬಿದ್ದು ಹೋಗಿದ್ದು, ಅವಳಿಗೆ ಗೊತ್ತಾಗಲೇ ಇಲ್ಲ. ಅವರೇ ಅಕಸ್ಮಾತ್ ಅದನ್ನು ನೋಡಿ, ಹೆಕ್ಕಿ ತಂದು ಅಮ್ಮನ ಕೊರಳಿಗೆ ಹಾಕಿದ್ದರು.

ಆದರೆ ಅಮ್ಮ ಅಲ್ಲಿ ಹೆಚ್ಚುದಿನ ಅಲ್ಲಿ ಇರಲಾಗಲಿಲ್ಲ. ಸ್ವಲ್ಪ ದಿನದಲ್ಲಿಯೇ ಮತ್ತೆ ಗ್ಯಾಸ್ಟ್ರಿಕ್ ಹೆಚ್ಚಾಗಿ ಬಿದ್ದು ಬಿಟ್ಟಳು. ಆ ಮನೆಯ ತಾಯಿ, ಆಫೀಸಿನಲ್ಲಿ ಇದ್ದ ನನಗೆ ಯಾರ ಮೂಲಕವೋ ಹೇಳಿ ಕಳಿಸಿದರು. ನಾನು ಓಡಿಬಂದು ಪುನಹ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದೆ. ನಂತರ ಚೇರಿಕೆಯ ಲಕ್ಷ್ಮಿ ಅತ್ತಿಗೆಯು ಅಮ್ಮನನ್ನು ನೋಡಲು ಬಂದವರು, “ಊರಿನಲ್ಲಿ ಮನೆ ಅಂತ ಇದ್ದಮೇಲೆ ಇಲ್ಲಿಯೆಲ್ಲ ಇರುವುದು ಬೇಡ. ಅಮ್ಮ ಹುಷಾರಾದ ಕೂಡಲೇ ಮನೆಗೆ ಕರೆದುಕೊಂಡು ಬಂದು ಬಿಟ್ಟುಹೋಗು” ಎಂದು ಹೇಳಿದರು. ನಾನು ಒಪ್ಪಿ ಅಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ, ಅಮ್ಮನನ್ನು ಚೇರಿಕೆಯ ನಮ್ಮ ಮನೆಗೆ ಕರೆದುಕೊಂಡು ಹೋದೆ. ಅಮ್ಮನ ಹತ್ತಿರ ಯಾರಾದರೂ ಒಬ್ಬರು ಸೇವೆಗೆ ಇರಲೇ ಬೇಕಿತ್ತು. ದಪ್ಪಗೆ ಇದ್ದುದರಿಂದ ಓಡಾಡಲೂ ಕಷ್ಟವಾಗುತ್ತಿತ್ತು. ಅವಳ ಕೊನೆಯ ಕಾಲದವರೆಗೂ ಆ ಅತ್ತಿಗೆಯೇ ಅಮ್ಮನನ್ನು ನೋಡಿಕೊಂಡರು. ಮಕ್ಕಳು ಮೊಮ್ಮಕ್ಕಳೂ ರಜೆಯಲ್ಲಿ ಮತ್ತು ಪುರಸೊತ್ತು ಇದ್ದಾಗ ಬಂದು, ನೋಡಿಕೊಂಡು ಮಾತಾಡಿಸಿಕೊಂಡು ಹೋಗುತ್ತಿದ್ದರು.

ಕಲ್ಲಟ್ಟೆಯಲ್ಲಿದ್ದ ನನ್ನ ದಾಸು ನಾಯಿ, ನಾನು ಚೇರಿಕೆಯ ಮನೆಯಲ್ಲಿ ಇದ್ದುದನ್ನು ಹೇಗೋ ಪತ್ತೆ ಮಾಡಿ ಕಂಡುಹಿಡಿದು ಆಗಾಗ ಚೇರಿಕೆಗೇ ಬರಲು ಶುರುಮಾಡಿತು. ಆದರೆ ಚೇರಿಕೆಯ ಮನೆಯಲ್ಲೂ ಒಂದು ನಾಯಿ ಇದ್ದುದರಿಂದ ಅದು ದಾಸುವಿನೊಂದಿಗೆ ಜಗಳಾಡುತ್ತಿತ್ತು. ಆದರೆ ನಾನು  ಉಡುಪಿಯಿಂದ ಮನೆಗೆ ಬರುವ ಶನಿವಾರ ಮಾತ್ರ ದಾಸು, ಅದು ಹೇಗೋ ತಿಳಿದುಕೊಂಡು ಬಂದು, ನನ್ನ ಉಪಚಾರಕ್ಕಾಗಿ ಪ್ರೀತಿಯ ಒಂದು ಸ್ಪರ್ಶಕ್ಕಾಗಿ ಕಾಯುತ್ತಿತ್ತು. ದೂರದಿಂದಲೇ ಒಂದು ತರಾ ಸ್ವರದಲ್ಲಿ ಕೂಗಿ ತಾನು ಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿತ್ತು. ಆದರೆ ಆ ಮನೆಯ ನಾಯಿ ಅದಕ್ಕೆ ಹತ್ತಿರ ಬರಲು ಸುತರಾಂ ಬಿಡುತ್ತಿರಲಿಲ್ಲ. ನನಗೂ ಬೇಸರವಾಗಿ “ಅದು ನನ್ನನ್ನು ಮರೆತುಬಿಡಲಿ” ಎಂದು ಅದನ್ನು  ಹಚ್ಚಿಕೊಳ್ಳುವುದನ್ನು ಬಿಟ್ಟೆ. ಅದು ಬಂದಾಗ ಜೋರುಮಾಡಿ “ಕಲ್ಲಟ್ಟೆ ನಿನ್ನ ಮನೆ. ಅಲ್ಲಿಗೇ ಹೋಗು” ಎಂದು ಓಡಿಸುತ್ತಿದ್ದೆ. ಕೊನೆಗೊಂದು ದಿನ ಆ ದಾಸು ನಾಯಿ ನಾನು ಉಡುಪಿಗೆ ಬರುವಾಗ, ನಾನು ಹಾಲಾಡಿಗೆ ಹೋಗುವುದನ್ನು ನೋಡಿ, ಎಲ್ಲಿಂದಲೋ ಓಡಿಬಂದು ಹಿಂದಿನಿಂದ ಬರತೊಡಗಿತು, ಎಷ್ಟು ಹೊಡೆದರೂ ಹಿಂದಕ್ಕೆ ಹೋಗಲೇ ಇಲ್ಲ. ನಾನೂ ಬಂದರೆ ಬರಲಿ ಎಂದು ಸುಮ್ಮನಾದೆ. ಅದು ಹಾಲಾಡಿಯವರೆಗೂ ನನ್ನನ್ನು ಹಿಂಬಾಲಿಸಿದ್ದು ಗೊತ್ತಿತ್ತು. ನಾನು ಬಸ್ಸು ಹತ್ತಿ ಉಡುಪಿಗೆ ಹೋದೆ. ಮುಂದಿನ ವಾರ ಮತ್ತೆ ಬರುವಾಗ ಗೊತ್ತಾಯಿತು, ನನ್ನ ದಾಸು ಅದೇ ದಿನ ಹಾಲಾಡಿಯಲ್ಲಿ ಯಾವುದೋ ಬಸ್ಸಿನ ಅಡಿಯಲ್ಲಿ ಸಿಕ್ಕಿ ಸತ್ತು ಹೋಯಿತು ಅಂತ.

ಅದೇ ಸಮಯದಲ್ಲಿ ನಾನು ಕನಕದಾಸ ರಸ್ತೆಯ ಬಾಡಿಗೆ ರೂಮನ್ನು ಬಿಟ್ಟು, ಕುಂಜಿಬೆಟ್ಟಿನಲ್ಲಿ ನಮ್ಮ ಕೆಇಬಿಯದ್ದೇ ವಸತಿಗೃಹಗಳು ಆಗಿದ್ದರಿಂದ ಅಲ್ಲಿಗೇ ಹೋದೆ.

ಅಮ್ಮನಿಗೆ ಮತ್ತೆ ಆರೋಗ್ಯ ಕೆಟ್ಟು, ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದೆವು. ಅಲ್ಲಿ ಡಾ. ಯು. ಎಂ. ವೈದ್ಯರು ಅವಳನ್ನು ನೋಡಿಕೊಳ್ಳುತ್ತಿದ್ದರು. ಅವರು ಅಮ್ಮನನ್ನು ಪರಿಶೀಲಿಸಿ “ವರ್ಷ ಆಯಿತಲ್ಲ ಇನ್ನು ಹೀಗೆ” ಎಂದು ಹೇಳಿಬಿಟ್ಟರು. ಅಮ್ಮ ಮಲಗಿದಲ್ಲೇ. ಅತ್ತಿಗೆಯೇ ಆಸ್ಪತ್ರೆಯಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿದ್ದರು. ನಾನು ಪ್ರತೀದಿನ ಊಟ ಕಾಫಿತಿಂಡಿ ಕೊಟ್ಟು ನೋಡಿಕೊಂಡು ಬರುತ್ತಿದ್ದೆ.

ಒಂದು ಹದಿನೈದು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗಿನ ಜಾವ, ಇನ್ನೂ ಕತ್ತಲೆ ಕತ್ತಲೆ. ಬೆಳಕು ಸರಿಯಾಗಿ ಮೂಡಿರಲಿಲ್ಲ. ನನ್ನ ಮನೆಯ ಬಾಗಿಲು ಸದ್ದಾಯಿತು. ನಿದ್ದೆ ಕಣ್ಣಿನಲ್ಲೆ ಬಂದು ಬಾಗಿಲು ತೆರೆದೆ. ಎದುರಿಗೆ ಅತ್ತಿಗೆ ನಿಂತಿದ್ದರು. ಅವರು ಒಮ್ಮೆಯೇನೋ ಆ ನನ್ನ ಮನೆಗೆ ಬಂದದ್ದಿರಬಹುದು. ಆ ಕತ್ತಲೆಯಲ್ಲಿ ಅಜ್ಜರಕಾಡು ಆಸ್ಪತ್ರೆಯಿಂದ, ಕುಂಜಿಬೆಟ್ಟಿನ ನಮ್ಮ ಕೆಇಬಿ ವಸತಿಗೃಹದವರೆಗೆ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡೇ ಒಂದು ಅಂದಾಜಿನ ಮೇಲೆ ನಮ್ಮ ಮನೆಯನ್ನು ಹುಡುಕಿಕೊಂಡು ಬಂದಿದ್ದರು. ಬಾಗಿಲ ಒಳಗೆ ಕಾಲಿರಿಸುತ್ತಿದ್ದಂತೆಯೇ, ಒಮ್ಮೆಲೆ ಗದ್ಗತಿತರಾಗಿ ಕುರ್ಚಿಯ ಮೇಲೆ ಕುಸಿದು ಹೇಳಿದರು. “ಎಲ್ಲ ಮುಗೀತು ಮಾರಾಯಾ, ಅತ್ತೆ, ನಮ್ಮನ್ನು ಬಿಟ್ಟು ಹೊರಟು ಹೋದ್ರು”

(ಮುಂದುವರಿಯುವುದು)

ಶನಿವಾರ, ಅಕ್ಟೋಬರ್ 28, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 41

ಉಡುಪರು ಮದುವೆಯಾಗಿ ರೂಮು ಬಿಟ್ಟು ಬೇರೆ ಮನೆಮಾಡಿದರು. ಜೊತೆಯಲ್ಲಿದ್ದ ಸುರೇಶ ಭಟ್ರು ಓದಿ ಮುಗಿದಿದ್ದು ಅವರ ಮನೆಗೆ ಹೊರಟರು. ನಾನು ಒಬ್ಬಂಟಿಯಾದೆ.  ಒಂದೋ ನಾನು ಬೇರೆ ಯಾರನ್ನಾದರೂ ಸೇರಿಸಿಕೊಳ್ಳ ಬೇಕಿತ್ತು. ಅಥವ ನಾನು ಒಬ್ಬನೇ ಇರಬಹುದಾದ ಬೇರೆಯೇ ಆದ ರೂಮನ್ನು ಹುಡುಕಿಕೊಳ್ಳಬೇಕಾಗಿತ್ತು. ನಮ್ಮ ಸುಗುಣ ಪ್ರೆಸ್ ನ ಸುಬ್ರಾಯರಿಗೆ ಆಸುಪಾಸಿನ ಎಲ್ಲರ ಗುರುತು ಪರಿಚಯ ಇದ್ದುದರಿಂದ ಅವರ ಸಹಾಯದಿಂದ ನಾನು ನನ್ನ ರೂಮನ್ನು ಬದಲಾಯಿಸಿ, ಕನಕದಾಸ ರಸ್ತೆಯಲ್ಲಿ ರಾಜಗೋಪಾಲ ರಾವ್ ಎನ್ನುವ ಕ್ರಿಶ್ಚನ್ ಶಾಲೆಯ ಅಧ್ಯಾಪಕರೊಬ್ಬರ ಮನೆಯ ಹತ್ತಿರದಲ್ಲಿಯೇ ಇರುವ ಅವರದೇ ಬಾಡಿಗೆ ರೂಮನ್ನು ಸೇರಿದೆ. ಅವರೂ ಬಹಳ ಒಳ್ಳೆಯವರು.

ಆಗ ಕೃಷ್ಣಮೂರ್ತಿ ಹೊಳ್ಳರು ಮತ್ತು ನಾನೂ ಒಂದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಜಯಲಕ್ಷ್ಮಿ ಎಂಬವರೂ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಕಾಲೇಜಿನಲ್ಲಿ ಓದುತ್ತಿರುವಾಗ ಕೊಡ್ಗಿ ಕಂಪೌಂಡ್ ನ ಹತ್ತಿರವೇ ಅವರೂ ಇದ್ದಿದ್ದರು. ಆಗಿನ ಪರಿಚಯದ ಸಲಿಗೆಯಿಂದ ನಾನು ಒಬ್ಬನೇ ಇದ್ದು ಅಡುಗೆ ಮಾಡಿಕೊಳ್ಳುವುದನ್ನು ತಿಳಿದು, ಅವರ ಮನೆಗೆ ಪ್ರತೀದಿನ ಊಟಕ್ಕೆ ಬರಬೇಕೆಂದು ಒತ್ತಾಯಿಸಿದರು. ನಾನು “ನಿಮಗೆಲ್ಲ ತೊಂದರೆ ಯಾಕೆ? ಎಂದರೂ “ನಾವು ನಿನಗೇನು ಸ್ಪೆಷಲ್ ಮಾಡುವುದಿಲ್ಲ. ಮಾಡಿದ್ದೇ ಹಾಕುವುದು ಬಾ” ಎಂದು ಹೇಳಿದರು. ನನಗೂ ಅಡುಗೆ ಮಾಡುವುದು ಅಷ್ಟೇನೂ ಕಷ್ಟವಲ್ಲದಿದ್ದರೂ, ಪಾತ್ರೆ ತೊಳೆಯುವುದು ಅಂದರೆ ಸ್ವಲ್ಪ ಅಲರ್ಜಿ. ಕೆಲವೊಮ್ಮೆ ಎರಡು ಮೂರು ದಿನಗಳ ಪಾತ್ರೆಗಳನ್ನು ಒಟ್ಟಿಗೇ ತೊಳೆದದ್ದೂ ಉಂಟು. ಆದ್ದರಿಂದ ಅವರ ಈ ಸಲಹೆ ನನಗೆ ಸಮ್ಮತವಾಗಿ, ನಾನು ಆರೂರು ಕಂಪೌಂಡ್ ನಲ್ಲಿರುವ ಅವರ ಮನೆಗೆ ಪ್ರತೀ ದಿನ ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ಹೋಗತೊಡಗಿದೆ.

ನಮ್ಮ ಆಫೀಸಿನ ಹಿಂದುಗಡೆಯೇ ಅವರ ಮನೆ ಇರುವುದು. ಅಲ್ಲಿ ಹಲವಾರು ಬಾಡಿಗೆ ರೂಮುಗಳು, ಮನೆಗಳೂ ಇದ್ದವು. ಆದರೆ ನಮ್ಮ ಅಫೀಸಿನಿಂದ ಅಲ್ಲಿಗೆ ಹೋಗಬೇಕಾದರೆ ಮಾತ್ರಾ ಮಧ್ಯದಲ್ಲಿ ದೊಡ್ಡ ಕಂಪೌಂಡ್ ಇದ್ದುದರಿಂದ, ಆಯಾತಾಕಾರವಾಗಿ  ಒಂದು ಸುತ್ತು ಹಾಕಿಯೇ ಹೋಗಬೇಕು. ಒಂದು ದಿನ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಅವರ ಮನೆಯ ಕಡೆಗೆ ಆಕಸ್ಮಿಕವಾಗಿ ನೋಡಿದಾಗ ಮಹಡಿಯ ಕಿಟಕಿಯಿಂದ ಕಪ್ಪಗೆ ಹೊಗೆ ಹೋಗುವುದು ಕಾಣುತ್ತಿತ್ತು. ಅದನ್ನು ನೋಡಿದ ನಾನು ಹತ್ತಿರ ಕುಳಿತವರಿಗೆ ತೋರಿಸಿದೆ. ಆಮೇಲೆ ಒಬ್ಬೊಬ್ಬರಾಗಿ ನೋಡಿ, ಹೊಳ್ಳರಿಗೂ ಹೇಳಿದ್ದಾಯಿತು. ಅವರು “ಏನಾಯಿತಪ್ಪಾ?” ಎಂದು ಗಾಬರಿಯಾದರು. ಯಾರೋ ಒಬ್ಬರು “ಹೋ ಅಲ್ಲಿ ಏನೋ ಬೆಂಕಿಹಿಡಿದು, ಏನೋ ಸುಟ್ಟು ಹೋಗುತ್ತಿದೆ. ಹೋಗಿ ನೋಡುವ” ಎಂದಾಗ ಒಂದೇ ಕ್ಷಣಕ್ಕೆ ನಾವೆಲ್ಲ ಹೊಳ್ಳರ ಮನೆಯ ಹತ್ತಿರ ಓಡಿದೆವು.  ಆ ಹೊಳ್ಳರ ಮನೆಯ ಮಹಡಿ ಮೇಲಿನ ಬಾಡಿಗೆ ರೂಮಿನಲ್ಲಿ ಶಂಕರನಾರಾಯಣದವರಾದ, ನನ್ನ ಸ್ನೇಹಿತರೂ ಆದ, ಉಡುಪಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ ಉಡುಪ ಎಂಬವರಿದ್ದರು. ಅವರ ರೂಮಿನ ಕಿಟಕಿಯಿಂದ ಕಪ್ಪು ನಾಲಿಗೆಯಂತೆ ದಟ್ಟವಾದ ಹೊಗೆಯು, ಹೊರಕ್ಕೆ ಚಾಚಿ ಸಣ್ಣ ಸಣ್ಣ ಬೆಂಕಿಯ ಕಿಡಿಗಳೊಂದಿಗೆ ಮೇಲಕ್ಕೆ ಹಾರುತ್ತಿತ್ತು.

ನಮ್ಮಲ್ಲಿಯೇ ಒಬ್ಬರು, ತಡಮಾಡದೇ ಮೇಲೆ ಓಡಿ ಹೋಗಿ ಆ ರೂಮಿನ ಬಾಗಿಲನ್ನು ದೂಡಿ ಒಡೆದರು. ಒಳಗೆ ನೋಡುವಾಗ ರೂಮಿನಲ್ಲಿ ಇದ್ದ ಹಾಸಿಗೆ, ಪುಸ್ತಕಗಳು, ಬಟ್ಟೆಗಳು ಎಲ್ಲ ಒಂದೊಂದೇ ಅಗ್ನಿಗೆ ಆಹುತಿಯಾಗುತ್ತಿದ್ದವು. ಅಷ್ಟರಲ್ಲಿ ಗಲಾಟೆ ಬಿದ್ದು ಬಾವಿಯಿಂದ ನೀರು ತಂದು ಒಬ್ಬರು ಅದರ ಮೇಲೆ ಹೊಯ್ದಾಯಿತು. ಕುಮಾರರಿಗೆ ಸುದ್ದಿ ಹೋಗಿ,ಅವರು  ಮನೆಗೆ ಬರುವಾಗ, ಏನು ನೋಡುವುದು?  ಮನೆಯ ಸಾಮಾನುಗಳೆಲ್ಲಾ ಅರ್ಧಕ್ಕರ್ದ ಸುಟ್ಟು ಕರಟಿ ವಾಸನೆ ಬರುತ್ತಿದ್ದರೆ, ಉಳಿದದ್ದು ನೀರಿನಿಂದ ಒದ್ದೆಯಾಗಿತ್ತು. ಅದನ್ನು ಕಂಡು ಮಂಕಾಗಿದ್ದ ಅವರನ್ನು ಎಲ್ಲರೂ ಸಮಾಧಾನ ಮಾಡಿದರು. ಕೊನೆಗೆ ನೋಡುವಾಗ ಆದದ್ದೇನು ಅಂದರೆ, ಅವರು ಬೆಳಿಗ್ಗೆ ದೇವರ ಪೋಟೋ ಒಂದಕ್ಕೆ ಪೂಜೆ ಮಾಡಿ, ಊದಿನ ಕಡ್ಡಿಯನ್ನು ಹಚ್ಚಿ ಬ್ಯಾಂಕಿಗೆ ಹೋಗಿದ್ದರು. ಗಾಳಿಗೆ ಅದರ ಕಿಡಿಯೊಂದು ಅಲ್ಲಿಯೇ ಕೆಳಗಡೆಯಿದ್ದ ಅವರ ಹಾಸಿಗೆಯ ಮೇಲೆ ಬಿದ್ದಿತ್ತು. ಹತ್ತಿಯ ಹಾಸಿಗೆ. ಒಳಗಿಂದೊಳಗೆ ಅದರಲ್ಲಿದ್ದ ಹತ್ತಿಯು ಸುಟ್ಟು ನಿಧಾನವಾಗಿ ವ್ಯಾಪಿಸುತ್ತಾ, ದೊಡ್ಡದಾಗಿ ಹತ್ತಿಕೊಂಡು ಉರಿದು, ರೂಮಿನ ಒಂದೊಂದೇ ಸಾಮಾನುಗಳನ್ನು ಆಹುತಿ ತೆಗೆದುಕೊಳ್ಳುತ್ತಾ ಹೋಯಿತು. ಹಗಲಿನಲ್ಲಿ ಅಲ್ಲಿದ್ದವರೆಲ್ಲಾ ಅವರವರ ಕೆಲಸಕ್ಕೋ, ಕಾಲೇಜಿಗೋ ಹೋಗಿದ್ದುದರಿಂದ ಆಗ ಅಲ್ಲಿ ಆಸುಪಾಸಿನಲ್ಲಿ ಯಾರೂ ಇರಲಿಲ್ಲ. ನಮಗೆ ಆಫೀಸಿನಲ್ಲಿದ್ದವರಿಗೆ ಹೊಗೆ ಕಾಣಿಸಿ, ಅದು ಗೊತ್ತಾದ್ದರಿಂದ ಅಷ್ಟಾದರೂ ಉಳಿಯಿತು.

ಹೊಳ್ಳರ ಅಕ್ಕ, ನಾವೆಲ್ಲ ಅವರನ್ನು ಬಾಬ್ಲಿಯಕ್ಕ ಎಂದು ಕರೆಯುತ್ತಿದ್ದೆವು, ನಮಗೆ ಪ್ರೀತಿಯಿಂದ ಬಡಿಸುತ್ತಿದ್ದರು. ಹೊಳ್ಳರ ಮಕ್ಕಳೂ ನನ್ನನ್ನು ಅಣ್ಣ ಅಣ್ಣ ಎಂದು ಕರೆದು, ನಾನು ಅವರ ಅಣ್ಣನೇ ಆಗಿಬಿಟ್ಟಿದ್ದೆ. ಹೊಳ್ಳರ ಹೆಂಡತಿ ಜಯಲಕ್ಷ್ಮಿಯವರಿಗೂ ನಾನೆಂದರೆ ಅಷ್ಟು ಪ್ರೀತಿ. ನಾನು ಅವರ ತಮ್ಮ ಎಂದು ಎಲ್ಲರ ಹತ್ತಿರ ಹೇಳುತ್ತಿದ್ದರು.

ಮುಂದೆ ಹೊಳ್ಳರಿಗೆ ಕಣ್ಣು ಸಮಸ್ಯೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗದೇ ಸ್ವಯಂ ನಿವೃತ್ತಿ ಪಡೆದುಕೊಳ್ಳಬೇಕಾಯಿತು. ಅವರು ಮನೆಯಲ್ಲಿ ಇದ್ದಾಗಲೂ ನಾನು ಅವರ ಮನೆಗೇ ಊಟಕ್ಕೆ ಕಾಫಿ ತಿಂಡಿಗೆ ಹೋಗುತ್ತಿದ್ದೆ. ಆಫೀಸಿನ ಹಲವಾರು ಸಮಸ್ಯೆಗಳು, ಪತ್ರ ವ್ಯವಹಾರಗಳ ಬಗ್ಗೆಯೂ ಅನುಭವಿಗಳಾದ ಅವರ ಹತ್ತಿರ ಚರ್ಚಿಸಿ ಅವರ ಸಲಹೆ ಕೇಳುವುದಿತ್ತು. ಒಮ್ಮೆ ಅವರಿಗೆ ಹಠಾತ್ ಕಾಯಿಲೆಯಾಗಿ, ಕಲ್ಸಂಕದ ಬಳಿ ಇರುವ ಒಂದು ಕ್ಲಿನಿಕ್ ಗೆ ಒಳರೋಗಿಯಾಗಿ ಸೇರಿದರು. ನಾನು ಅವರ  ಬಳಿ ಕೆಲವು ದಿನ ರಾತ್ರಿಯೂ ಇದ್ದಿದ್ದೆ. ಅವರಿಗೆ ತುರ್ತಾಗಿ ಒಮ್ಮೆ ರಕ್ತ ಬೇಕಾಯಿತು. ನಾನು ಒಂದು ಸಲ ಕೊಟ್ಟಾಯಿತು. ಮತ್ತೆ ಪುನಹ ಬೇಕಾದಾಗ ಉಡುಪಿಯಲ್ಲಿ ಸಿಗದೇ ಮಣಿಪಾಲ ಆಸ್ಪತ್ರೆ ಯ ಬ್ಲಡ್ ಬ್ಯಾಂಕಿನಲ್ಲಿ ಸಿಗುತ್ತದೆ ತನ್ನಿ ಎಂದು ಆ ಕ್ಲಿನಿಕ್ ನ ಡಾಕ್ಟರ್ ರು ಮಣಿಪಾಲದ ಆಸ್ಪತ್ರೆಯಲ್ಲಿಯ ಸಂಬಂಧಿಸಿದವರಿಗೆ ಒಂದು ಪತ್ರ ಬರೆದು ಕೊಟ್ಟರು. ನಾನು ಜಯಲಕ್ಶ್ಮಿಯವರೊಂದಿಗೆ ಅದನ್ನು ತೆಗೆದುಕೊಂಡು ಮಣಿಪಾಲಕ್ಕೆ ಹೋಗಿ ಬ್ಲಡ್ ಬ್ಯಾಂಕ್ ನಲ್ಲಿ ತೋರಿಸಿದೆ. ಅವರು ಕೊಟ್ಟ ರಕ್ತದ ಪ್ಯಾಕೆಟ್ ನ ಮೇಲಿನ ಚೀಟಿಯನ್ನು ನೋಡಿ, ನನಗೆ ಅನುಮಾನವಾಯಿತು. ಹೊಳ್ಳರದ್ದು ಒ ಪಾಸಿಟಿವ್ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅವರು ಒ ನೆಗೆಟಿವ್ ರಕ್ತವನ್ನು ಕೊಟ್ಟಿದ್ದರು. ನಾನು “ಇದು ತಪ್ಪಾಗಿದೆ ನಮಗೆ ಬೇಕಾದದ್ದು, ಒ ಪಾಸಿಟಿವ್ ರಕ್ತ” ಎಂದೆ. ಅವರು ಮತ್ತೊಮ್ಮೆ ನಮ್ಮ ಡಾಕ್ಟರ್ ಬರೆದು ಕೊಟ್ಟ ಪತ್ರವನ್ನು ನೋಡಿ “ಇಲ್ಲ. ಇಲ್ಲಿ ನೋಡಿ. ನಾವು ನಿಮ್ಮ ಡಾಕ್ಟರು ಬರೆದದ್ದನ್ನೇ ಕೊಟ್ಟಿದ್ದೇವೆ” ಅಂದರು.

ನನಗೆ ಎಲ್ಲೋ ತಪ್ಪಾಗಿದೆ ಎಂದು ದೃಢವಾಯಿತು. ಆದ್ದರಿಂದ ಅದನ್ನು ಸುಮ್ಮನೇ ಬಿಡುವ ಹಾಗಿರಲಿಲ್ಲ. ಅಲ್ಲಿಯೇ ನಾನು ಜಯಲಕ್ಷ್ಮಿಯವರಿಗೆ ಅದನ್ನು ಹೇಳಿ ಆ ರಕ್ತವನ್ನು ತೆಗೆದುಕೊಳ್ಳದೆ ವಾಪಾಸು ಬಂದು, ಕೂಡಲೇ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಕಂಡು ಪತ್ರದಲ್ಲಿ ತಪ್ಪಾಗಿರುವುದನ್ನು ಅವರ ಗಮನಕ್ಕೆ ತಂದೆ. ಅವರು ಕೂಡಲೇ ಸರಿಪಡಿಸಿ ಕೊಟ್ಟರು. ನಾನು ಪುನಹ ಮಣಿಪಾಲಕ್ಕೆ ಹೋಗಿ ಪತ್ರವನ್ನು ತೋರಿಸಿದೆ. ಅಲ್ಲಿಯ ಡಾಕ್ಟರರು “ಎಂತಹಾ ಕೆಲಸ ವಾಗುತ್ತಿತ್ತು? ನೀವು ನೋಡಿದ್ದಕ್ಕೆ ಆಯಿತು” ಅಂದರು. ಕೊನೆಗೆ ಅದನ್ನು ಬದಲಾಯಿಸಿ ಒ ಪಾಸಿಟಿವ್ ರಕ್ತವನ್ನೇ ಕೊಟ್ಟರು. ಒಂದು ವೇಳೆ ಅವರು ಕೊಟ್ಟ ರಕ್ತವನ್ನೇ ತಂದು, ಹೊಳ್ಳರಿಗೆ ಕೊಟ್ಟಿದ್ದರೆ ಅವರು ಬದುಕುತ್ತಿರಲಿಲ್ಲ. ಡಾಕ್ಟರ್ ರ ಒಂದು ಅಜಾಗ್ರತೆಯಿಂದ ಹಾಗಾಗಿತ್ತು. ಹೊಳ್ಳರು ಮತ್ತೆ ಗುಣವಾಗಿ ಮನೆಗೆ ಬಂದರು. ಆದರೆ ಅವರು ಬದುಕಿರುವವರೆಗೂ “ನೀನೆ ನನ್ನನ್ನು ಬದುಕಿಸಿದವನು” ಎಂದು ಆ ಘಟನೆಯನ್ನು ಸ್ಮರಿಸಿಕೊಳ್ಳುತ್ತಿದ್ದರು. ಅವರು ಪ್ರೀತಿಯಿಂದ ಅಷ್ಟು ದಿನ ಅನ್ನ ಹಾಕಿದ್ದಕ್ಕೆ, ನನ್ನ ಒಂದು ಋಣ ಹಾಗೆ ಸಂದಾಯವಾಯಿತು.

(ಮುಂದುವರಿಯುವುದು)

ಶುಕ್ರವಾರ, ಅಕ್ಟೋಬರ್ 27, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 40

ಹಿಂದಿನ ದಿನ ಆ ಊದುಬತ್ತಿ ಮಾರುವ ಮನೆಯವರೂ ಅಲ್ಲಿ ಇದ್ದಿದ್ದು, ಮಗುವನ್ನು ಅವರೂ ಎತ್ತಿ ಆಡಿಸಿದ್ದರು. ನಮಗೆಲ್ಲ ಅವರ ಮೇಲೆ ಅನುಮಾನ. ಆದರೆ ನಾವು ನೋಡಲಿಲ್ಲ. ನಮ್ಮಲ್ಲಿ ಇದ್ದವರಲ್ಲಿ ಯಾರನ್ನೂ ಅನುಮಾನಿಸುವ ಹಾಗಿಲ್ಲ. ಇನ್ನು ಯಾರು ಈ ಕೆಲಸ ಮಾಡುವವರು? ಕೊನೆಗೆ ನಮ್ಮ ಮಾಸ್ಟರರು ಒಂದು ಉಪಾಯ ಮಾಡಿದರು.

ಅದೇ ಸಂಜೆ ಊದುಬತ್ತಿ ಮಾರುವವರು ರೂಮಿಗೆ ಬಂದಿದ್ದಾಗ, ಅವರಿಗೆ ಕೇಳಿಸುವಂತೆ ಸರ ಕಳೆದು ಹೋದ ವಿಷಯವನ್ನು ಜೋರಾಗಿ ಹೇಳಿ, “ನನಗೆ ಅಂಜನ ಹಾಕುವವರೊಬ್ಬರು ಗೊತ್ತುಂಟು. ನಾಳೆಯೇ ಹೋಗಿ ಅಂಜನ ಹಾಕಿಸಿ ಕಳ್ಳರನ್ನು ಪತ್ತೆ ಮಾಡುತ್ತೇನೆ” ಎಂದೂ, “ಆ ಕಳ್ಳರು ಸಿಕ್ಕಿದ ನಂತರ ಹೀಗೆಯೇ ಬಿಡುವುದಿಲ್ಲ. ಈ ಕಂಪೌಂಡಿನಲ್ಲಿ ಒಂದೇ ಕುಟುಂಬದವರಂತೆ ಇದ್ದ ನಮ್ಮಲ್ಲಿ ಒಡಕು ಹುಟ್ಟಿಸಿ, ಎಲ್ಲರನ್ನೂ ಅನುಮಾನದಿಂದ ನೋಡುವ ಹಾಗೆ ಮಾಡಿದವರು. ಅವರ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜೈಲಿಗೆ ಕಳಿಸದೇ ಬಿಡುವುದಿಲ್ಲ” ಎಂದೂ ಹೇಳಿದರು. ಕೊನೆಗೆ “ಇದೇ ಕಂಪೌಂಡಿನಲ್ಲಿದ್ದವರ ಕೆಲಸ ಅದು. ಇದು ಇಲ್ಲಿಗೆ ನಿಲ್ಲಬೇಕು ಅಂತಾದರೆ, ಒಳ್ಳೆಯ ಮಾತಿನಲ್ಲಿ ನಾಳೆ ಬೆಳಗಾಗುವುದರ ಒಳಗೆ, ಮನೆಯ ಹೆಬ್ಬಾಗಿಲ ಹತ್ತಿರ ಆ ಸರ ಬಂದು ಬೀಳಬೇಕು” ಎಂದೂ ಸೇರಿಸಿದರು. ಮರುದಿನ ಸರ ಆ ಕಂಪೌಂಡಿನ ಹೆಬ್ಬಾಗಿಲ ಬಳಿಯ ಮೂಲೆಯಲ್ಲಿ ಸಿಕ್ಕಿಬಿಟ್ಟಿತು. ಅದನ್ನು ಗೋಪಾಲ ಮಾಸ್ಟರು ಪಕ್ಕದ ಮನೆಯವರಿಗೆ ಒಪ್ಪಿಸಿ, ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿದರು.

ರಥಬೀದಿಯ ತೆಂಕು ದಿಕ್ಕಿನಲ್ಲಿ, ಗಣೇಶ ರಾವ್ ಎಂಬವರ ಜನರಲ್ ಕ್ರಾಪ್ಟ್ ಎಂಬ ಅಂಗಡಿ ಇತ್ತು. ಅಂಗಡಿಯ ಎದುರು ಇದ್ದ ಒಂದು ಜಾಗದಲ್ಲಿ, ಆಗ ಒಂದಷ್ಟು ಮಂದಿ ಕುಳಿತುಕೊಂಡು ಪ್ರತೀದಿನ ಸಂಜೆ ಮಾತನಾಡುತ್ತಾ ಇರುತ್ತಿದ್ದುದು ಕಾಣಬಹುದಿತ್ತು. ಅವರಲ್ಲಿ ಸುಬ್ರಮಣ್ಯ ಕೆದ್ಲಾಯರು, ಸುಬ್ರಹ್ಮಣ್ಯ ಜೋಷಿಯವರು, ರಮೇಶ ರಾವ್, ಮುರಳೀಧರ ಉಪಾಧ್ಯರು, ಮುರಾರಿ ಬಲ್ಲಾಳ್, ಭಾಸ್ಕರ ರಾವ್ ಮತ್ತು ನಮ್ಮ ಎಸ್ ವಿ ಭಟ್ಟರು, ಮುಂತಾದವರು ಇರುತ್ತಿದ್ದರು. ಅವರದ್ದೊಂದು ರಥಬೀದಿ ಗೆಳೆಯರು ಎಂಬ ಸಂಸ್ಥೆಯು ಇದ್ದು, ಪ್ರತೀ ವರ್ಷ ಸ್ಥಳೀಯ ಕಲಾವಿದರನ್ನು ಆರಿಸಿ,  ಒಬ್ಬ ದೊಡ್ದ ನಿರ್ದೇಶಕರನ್ನು ಕರೆಸಿ, ಬೇಕಾದ ಸೆಟ್ಟಿಂಗ್ ತಯಾರಿಸಿ, ಒಂದು ಒಳ್ಳೆಯ ನಾಟಕ ಮಾಡಿಸುತ್ತಿದ್ದರು. ಹಾಗೂ ಬೇರೆ ಬೇರೆ ಕಡೆಯ ತಂಡಗಳನ್ನು ಕರೆಸಿ ನಾಟಕಗಳನ್ನು ಮಾಡಿಸುತ್ತಿದ್ದರು. ಹಾಗೂ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಒಮ್ಮೆ ನಾನು ರಥಬೀದಿಯಲ್ಲಿ ಹೋಗುತ್ತಿದ್ದಾಗ, ನನ್ನನ್ನು ನೋಡಿದ, ಎಸ್. ವಿ. ಭಟ್ಟರು “ಏ ದಿನೇಶ, ಇಲ್ ಬಾರಾ”. ಎಂದು ಕರೆದರು. ನಾನು ಹೋದೆ. “ನಾವು ಈ ವರ್ಷ ಒಂದು ನಾಟಕ ಮಾಡುತ್ತಿದ್ದೇವೆ. ನೀನು ಒಂದು ಪಾರ್ಟು ಮಾಡಬೇಕು” ಎಂದರು. ನಾನು ತಲೆ ಅಲ್ಲಾಡಿಸಿದೆ.

ಆ ವರ್ಷ ಆದ ನಾಟಕ, ಶೇಕ್ಸಪಿಯರ್ ನ ಮ್ಯಾಕ್ಬೆತ್. ಅದನ್ನು ನಿರ್ದೇಶನ ಮಾಡಿದವರು ಇಕ್ಬಾಲ್ ಎಂಬವರು. ಅವರು ಬಹಳ ಸರಳವಾದ ವ್ಯಕ್ತಿ. ಎಲ್ಲರೊಡನೆ ಬೆರೆಯುವವರು. ಸದಾ ಏನಾದರೂ ಕ್ರಿಯಾತ್ಮಕವಾಗಿ ಯೋಚಿಸುವವರು. ಒಮ್ಮೊಮ್ಮೆ ಬಿಳಿ ಕಾಗದದ ಹಾಳೆ ಸಿಕ್ಕಿದರೆ ಸಾಕು, ಅದರಲ್ಲಿ ಏನೇನೋ ಗೀಚುತ್ತಿದ್ದರು. ಆಮೇಲೆ ಅದನ್ನು ನೋಡಿದರೆ ಅದೇ ಸುಂದರ ಒಂದು ಡ್ರಾಯಿಂಗ್ ಆಗುತ್ತಿತ್ತು. ಆಗಿನ ಅವರ ನಿರ್ದೇಶನದ ಇಡೀ ನಾಟಕದಲ್ಲಿ ಅವರು ಒಂದೇ ಉದ್ದವಾದ ಪರದೆಯನ್ನು ಏನೇನೆಲ್ಲ ಸಿಂಬಲ್ ಆಗಿ ಬಳಸಿದ್ದರು. ಒಮ್ಮೆ ಆ ಪರದೆಯು, ಹಡಗು ಆದರೆ, ಮತ್ತೊಮ್ಮೆ ಉಪ್ಪರಿಗೆಗೆ ಹೋಗುವ ಮೆಟ್ಟಲಿನ ಮುಂಭಾಗವಾಗುತ್ತಿತ್ತು. ಮತ್ತೊಮ್ಮೆ ಹೇಗೇಗೆಲ್ಲಾ ತಿರುಗಿಸಿ ಸಮುದ್ರದ ತೆರೆಯಾಗಿ ಪರಿವರ್ತನೆಯಾದರೆ, ಮತ್ತೊಮ್ಮೆ ಮೇಲೆ ನೆರಳು ಕೊಡುವ ಮಾಡು ಆಗುತ್ತಿತ್ತು. ಮತ್ತೊಮ್ಮೆ ಭೂತಗಳು ವಾಸ ಮಾಡುವ ಮರದ ಬಿಳಲುಗಳಾದರೆ, ಮಗದೊಮ್ಮೆ  ದೃಶ್ಯ ಬದಲಾವಣೆಯಲ್ಲಿ ಮರೆಯಾಗಲು ಸಂಚರಿಸುವ ಗೋಡೆಯಾಗುತ್ತಿತ್ತು. ಅವರ ನಿರ್ದೇಶನ ಅಂದರೆ,  ಡೈಲಾಗ್ ಗಳ ಹೇಳುವಿಕೆ, ರಂಗಚಲನೆ ನಿಲ್ಲುವ ಸ್ಥಾನ ಒಂದೊಂದು ದಿನ ಒಂದೊಂದು ತೆರನಾಗುತ್ತಿತ್ತು. ನಾಟಕದ ಪ್ರದರ್ಶನದ ಹಿಂದಿನ ದಿನದ ಗ್ರ್ಯಾಂಡ್ ಟ್ರಯಲ್ ದಿನವೂ ಅವರು ಡೈಲಾಗ್ ಡೆಲಿವರಿ ಮತ್ತು ರಂಗಚಲನೆಗಳನ್ನು  ಬದಲಿಸುತ್ತಿದ್ದರು. ಆದರೆ ಯಾವುದೇ ಗಾಬರಿ, ಉದ್ವೇಗಕ್ಕೊಳಗಾಗುತ್ತಿರಲಿಲ್ಲ. ನನ್ನದು ಆ ನಾಟಕದಲ್ಲಿ ಬರುವ ಗುಂಪಿನಲ್ಲಿ ಏನೋ ಒಂದು ಸಣ್ಣ ಪಾರ್ಟು. ಆದರೆ ಆ ನಾಟಕ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು.

ಮುಂದಿನ ವರ್ಷ “ಶ್ರೀಮತಿ ಹೆಗ್ಗಡೆಯ ಭೇಟಿ ಪ್ರಕರಣ” ಎಂಬ ನಾಟಕ ಆಯಿತು. ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ನಾಟಕ ಅದು. ವೀಣಾ ಬನ್ನಂಜೆಯವರದ್ದು ಪ್ರಧಾನ ಪಾತ್ರ, ನಟರಾಜ ದೀಕ್ಷಿತ್, ಅವರ ತಮ್ಮ ಕೃಷ್ಣ ದೀಕ್ಷಿತ್, ರಘುರಾಮ ಭಟ್, ಮಂಜು ಕೆಜಿ, ರವಿ ಕೆಜಿ, ಮುಂತಾದವರಿದ್ದರು. ಕಥಾನಾಯಕಿಯನ್ನು ಮೇನೆಯಲ್ಲಿ ಹೊತ್ತುಕೊಂಡು ಹೋಗುವ ದೃಶ್ಯ ನನ್ನ ಮನಸ್ಸಿನಲ್ಲಿ ಇನ್ನೂ ಉಳಿದಿದೆ.

ಆಗ ನಡೆದ ಒಂದು ಘಟನೆ ನೆನಪಿಗೆ ಬರುತ್ತದೆ. ನನ್ನ ಅಮ್ಮನಿಗೆ ಆರೋಗ್ಯ ಸರಿ ಇಲ್ಲದಿದ್ದುದರಿಂದ ಅಜ್ಜರಕಾಡು ಆಸ್ಪತ್ರೆಯಲ್ಲಿ ಇದ್ದಳು. ನಾನು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಅವಳಿಗೆ ತಿಂಡಿ, ಊಟ ಕೊಟ್ಟು ಬರುತ್ತಿದ್ದೆ. ಸಂಜೆ ಆಸ್ಪತ್ರೆಗೆ ಹೋಗಿ ಬಂದ ಮೇಲೆ, ಟ್ರಯಲ್ ಗೆ ವಾದಿರಾಜ ರಸ್ತೆಯಲ್ಲಿರುವ ಪಣಿಯಾಡಿ ಶಾಲೆಗೆ ಬಂದು, ಹಾಜರಾಗಬೇಕಿತ್ತು. ಒಮ್ಮೆ ಬರುವಾಗ ಸ್ವಲ್ಪ ತಡವಾಯಿತು. ಇನ್ನೂ ಟ್ರಯಲ್ ಶುರುವಾಗಿರಲಿಲ್ಲ. ನಾನು ಒಳಗೆ ಕಾಲಿಡುತ್ತಿರುವಾಗಲೇ “ಟ್ರಯಲ್ ಗೆ ಯಾರೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ನಾಟಕ ಯಾರಿಗಾಗಿ ಮಾಡುವುದು? ಯಾರಿಗೂ ಜವಾಬ್ದಾರಿ ಇಲ್ಲದಿದ್ದರೆ ನಾಟಕ ಏತಕ್ಕೆ ಮಾಡಬೇಕು?” ಇತ್ಯಾದಿಯಾಗಿ ನಿರ್ದೇಶಕರು ಮತ್ತು ಕೆ. ಎಸ್.ಕೆದ್ಲಾಯರು ಗಲಾಟೆ ಮಾಡುತ್ತಿದ್ದರು. ನಾನು ಬಂದದ್ದನ್ನು ನೋಡಿದೊಡನೆ ಅವರ ಅಸಮಾಧಾನ, ಅಲ್ಲಿಯವರೆಗೂ ಬಾರದೇ ಇದ್ದ ಮುಖ್ಯ ಪಾತ್ರದ ಒಬ್ಬರ ಮೇಲಿದ್ದದ್ದು, ನನ್ನ ಮೇಲೆ ತಿರುಗಿತು. ನನಗೂ ಬೈಗುಳವಾಯಿತು. ಆಗ ನನಗೆ ಒಮ್ಮೆಲೆ ಸಿಟ್ಟು ಬಂದು, “ಹಾಗಾದರೆ ನಾಳೆಯಿಂದ ನಾನು ಬರುವುದಿಲ್ಲ. ಈ ನಾಟಕದಿಂದ ನನಗೆ ಏನೂ ಆಗಬೇಕಾದ್ದಿಲ್ಲ. ನಾನು ಮೊದಲೇ ಹೇಳಿದ್ದೆ. ನನ್ನ ಅಮ್ಮ, ಆಸ್ಪತ್ರೆಯಲ್ಲಿ ಇದ್ದವಳನ್ನು ನೋಡದೇ ಬರಲು ಸಾಧ್ಯವೇ ಇಲ್ಲ” ಎಂದು ಅಳುತ್ತಾ ಜೋರಾಗಿ ಹೇಳಿ ಹೊರಗೆ ಬಂದುಬಿಟ್ಟೆ. ಆಗ ಅಲ್ಲಿ ಇದ್ದ ಕೆಜಿ ಮಂಜುವೋ, ರವಿಯೋ ಕೂಡಲೇ ಓಡಿ ಬಂದು ನನ್ನನ್ನು ಸಮಾಧಾನ ಮಾಡಿ, ಮತ್ತೆ ಒಳಗೆ ಕರೆದು ಕೊಂಡುಹೋದರು. ಅಷ್ಟರಲ್ಲಿ ತಡಮಾಡಿದ ಆ ಮುಖ್ಯಪಾರ್ಟ್  ಮಾಡುವವರೂ ಬಂದಾಗಿತ್ತು. ಅವರ ಎದುರು ಯಾರೂ ಮಾತಾಡಲಿಲ್ಲ. ಮಾಮೂಲಿನಂತೆ ಅಷ್ಟರವರೆಗೆ ಏನೂ ನಡೆದೇ ಇಲ್ಲವೇನೋ ಅನ್ನುವಂತೆ ನಾಟಕದ ಟ್ರಯಲ್ ಶುರುವಾಯಿತು. ಆ ನಾಟಕ ತುಂಬಾ ಚೆನ್ನಾಗಿ ಆಯಿತು.

ಮೂರನೆ ವರ್ಷ ಆಡಿದ ನಾಟಕ ಚಂದ್ರಶೇಖರ ಕಂಬಾರರ “ಸಿರಿ ಸಂಪಿಗೆ” ಅದರಲ್ಲಿ ಅವಳಿ ಜವಳಿ ಎಂಬ ಬಿಂಬ ಪ್ರತಿಬಿಂಬದಂತೆ ಒಂದೇ ತರಹ ಅಭಿನಯಿಸಬೇಕಾದ ಪಾತ್ರಗಳಲ್ಲಿ ಒಂದು ಪಾತ್ರ ನನ್ನದು. ಅದರಲ್ಲಿ ನನ್ನ ಹಾಗೆಯೇ ಅಭಿನಯಿಸುವ ಇನ್ನೊಬ್ಬನ ಪಾತ್ರ ಮಾಡಿದವರು ಸುಬ್ರಮಣ್ಯ ಎಂಬವರು. ಅದನ್ನು ಉಡುಪಿಯಲ್ಲಿ ಮಾತ್ರವಲ್ಲದೇ ಕರ್ನಾಟಕದ ಅನೇಕ ಕಡೆಗಳಲ್ಲಿ ಸಂಚಾರ ಮಾಡಿ ಆಡಿದೆವು. ಆ ನಾಟಕಕ್ಕೆ ವಿಶೇಷವಾದ ಮೆರುಗು ತಂದದ್ದು ಗುರುರಾಜ ಮಾರ್ಪಳ್ಳಿಯವರ ಸಂಗೀತ.

ಆ ಮೇಲೆ ನಾನು ಸಮಯ ಹೊಂದಾಣಿಕೆ ಕಷ್ಟವಾದ್ದರಿಂದ, ನಾಟಕದಲ್ಲಿ ಪಾರ್ಟ್ ಮಾಡುವುದನ್ನು ಬಿಟ್ಟುಬಿಟ್ಟೆ. ಆದರೆ ಆಮೇಲೂ ಅವರು ಸ್ಥಳೀಯ ಕಲಾವಿದರನ್ನು ಹುಡುಕಿ, ಪ್ರಸಿದ್ಧ ನಿರ್ದೇಶಕರನ್ನು ಕರೆಸಿ ಪ್ರತೀ ವರ್ಷಕ್ಕೊಂದು ನಾಟಕ ಮಾಡಿಸುತ್ತಿದ್ದರು. ಮತ್ತು ಹೆಗ್ಗೋಡಿನ ನೀನಾಸಂ ತಂಡವನ್ನು, ಮೈಸೂರಿನ ರಂಗಾಯಣ ತಂಡವನ್ನು ಕರೆಸಿ, ಒಳ್ಳೊಳ್ಳೆಯ ನಾಟಕಗಳನ್ನು  ಪ್ರತೀವರ್ಷ ಆಡಿಸುತ್ತಿದ್ದಾರೆ. ನಾನು ಅದಕ್ಕೆಲ್ಲಾ ತಪ್ಪದೇ ನೋಡಲು ಹೋಗುತ್ತಿದ್ದೆ.

(ಮುಂದುವರಿಯುವುದು)

ಗುರುವಾರ, ಅಕ್ಟೋಬರ್ 26, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 39

ನಾನು ಇದ್ದ ರೂಮು, ಭೋಜರಾವ್ ಕಂಪೌಂಡ್ ಅಂತ ಅದಕ್ಕೆ ಹೆಸರು. ಅಲ್ಲಿ ನಮ್ಮ ಒಂದು ರೂಮು ಮಾತ್ರಾ ಇದ್ದದ್ದಲ್ಲ. ಅದೊಂದು ದೊಡ್ಡ ಮನೆ. ಕಂಪೌಂಡು ಗೇಟು ದಾಟಿ ಒಳಗೆ ಹೋಗುತ್ತಿದ್ದಂತೆ, ದೊಡ್ಡ ಹೆಬ್ಬಾಗಿಲು, ಅದನ್ನು ತೆರೆದು ಒಳಗೆ ಕಾಲಿರಿಸಿದರೆ ಸಿಗುವುದೇ ಒಳ ಅಂಗಳ, ಸುತ್ತ ಮನೆ. ಅದರಲ್ಲಿ ಇರುವ ಒಂದೊಂದು ರೂಮನ್ನು ವಿಂಗಡಿಸಿ ಪಾರ್ಟೀಶನ್ ಮಾಡಿ ಬೇರೆ ಬೇರೆಯಾಗಿ ಬಾಡಿಗೆಗೆ ಕೊಟ್ಟಿದ್ದರು. ನಮ್ಮ ಬಲಬದಿಯಲ್ಲಿರುವ ಮೆಟ್ಟಿಲು ಏರಿ ಉಪ್ಪರಿಗೆಗೆ ಹೋದರೆ ಅಲ್ಲಿ ನಾವಿದ್ದ ರೂಮು, ಆ ಮನೆಯ ಎಡದ ಒಂದು ಭಾಗದಲ್ಲಿ ಬಾವಿಯ ಹತ್ತಿರ, ಗೋಪಾಲ ಮಾಸ್ಟರು ಎಂಬವರು ಅವರ ಸಂಸಾರದ ಜೊತೆ ಇದ್ದರು. ಶಾಲೆಯಿಂದ ಬಂದ ಆ ಮಾಸ್ಟರು ಮನೆಗೆ ಹೋಗುವ ಮೊದಲು ನಮ್ಮ ರೂಮಿಗೆ ಬಂದು ಮಾತಾಡಿಸಿ ಹೋಗುತ್ತಿದ್ದರು. ಕೆಲವೊಮ್ಮೆ ನಮ್ಮ ರೂಮಿನಲ್ಲೇ ಊಟವನ್ನೂ ಮಾಡುತ್ತಿದ್ದರು. ಅವರ ಮನೆಯ ಬೆಳಿಗ್ಗಿನ ತಿಂಡಿ, ಅವರ ಮನೆಯಲ್ಲಿ ಮಾಡಿದ ಸಾಂಬಾರ್ ನಮ್ಮ ಮನೆಗೆ ಬಂದದ್ದು, ಅದೆಷ್ಟು ಬಾರಿಯೋ. ಅಂತೂ ಅವರು ನಮಗೆ ತುಂಬಾ ಆತ್ಮೀಯರಾಗಿದ್ದರು. ಒಳ ಅಂಗಳದ ಬಲಬದಿಯಲ್ಲಿ ಇದ್ದ ಉದ್ದವಾದ ಜಗುಲಿಯ ಅಂಚಿಗೆ ಗ್ರಿಲ್ ಹಾಕಿಸಿ ಒಂದು ರೂಮು ಮಾಡಿದ್ದು ಅದರಲ್ಲಿ ರಾಘವೇಂದ್ರ ಆಚಾರ್ ಮತ್ತು ಮಂಜುನಾಥ ಆಚಾರ್ ಎನ್ನುವ ಇಬ್ಬರು ಚಿನ್ನ ಕೆಲಸ ಮಾಡುವವರು ವಾಸವಾಗಿದ್ದರು. ಅವರು ತುಂಬ ಒಳ್ಳೆಯವರು. ಮತ್ತು ಅಂಗಳದ ಎದುರೇ ಇರುವ ಮನೆಯ ದೇವರುಕೋಣೆಯ ಭಾಗದ ಬಾಡಿಗೆ ಕೋಣೆಯಲ್ಲಿ ಒಬ್ಬರು ಊದುಬತ್ತಿಯನ್ನು ಸ್ಟಾಕ್ ಮಾಡಿಟ್ಟು, ಅದನ್ನು ಅಂಗಡಿ ಅಂಗಡಿಗೆ ಕೊಟ್ಟು ಮಾರುವವರೂ ಇದ್ದರು. ಅವರು ಯಾವಾಗಲೂ ಇರುತ್ತಿರಲಿಲ್ಲ. ಆದ್ದರಿಂದ ಆ ವ್ಯಕ್ತಿಯಲ್ಲಿ ನಮಗೆ ಅಷ್ಟು ಸಲುಗೆ ಇರಲಿಲ್ಲ. ಅಡುಗೆ ಮನೆ ಇರುವ ಈಶಾನ್ಯಭಾಗದ ಕೋಣೆ ಮತ್ತು ಒಂದು ರೂಮಿನ ಭಾಗದಲ್ಲಿ ರಥಬೀದಿಯಲ್ಲಿ ಹೂವು ಮಾರುವ ಅಂಗಡಿ ಇಟ್ಟವರೊಬ್ಬರ ಮನೆ. ಒಟ್ಟಿನಲ್ಲಿ ಆ ಮನೆಯ ತುಂಬಾ ಜನವೆ.

ನಮ್ಮ ಉಪ್ಪರಿಗೆಯ ಮತ್ತೊಂದು ಬದಿಯರೂಮಿನಲ್ಲಿ ಹಗಲು, ಮಠದಲ್ಲಿ ಕೆಲಸಮಾಡುತ್ತಾ, ಸಂಜೆ ಶಾಲೆಗೆ ಹೋಗುವ ಶ್ರೀನಿವಾಸ ಅಡಿಗರು, ಚಂದ್ರಶೇಖರ ಅಡಿಗರು, ವೆಂಕಟರಮಣ ಅಡಿಗರು ಎನ್ನುವ ಒಂದೇ ಊರಿನ ಹುಡುಗರಿದ್ದರು. ಅವರೂ ಬಹಳ ಬೇಗ ನಮ್ಮೊಂದಿಗೆ ಸ್ನೇಹದಿಂದ ಇದ್ದು ನಮ್ಮೊಡನೆ ಸೇರಿಕೊಂಡು ನಮ್ಮ ರೂಮಿಗೆ ಬಂದು ಹೋಗಿ ಮಾಡುತ್ತಿದ್ದರು. ಅವರಲ್ಲಿ ಚಂದ್ರಶೇಖರ ಅಡಿಗರು ಎನ್ನುವವರು ಚೆನ್ನಾಗಿ ಈಜುಕಲಿತವರಾಗಿದ್ದರು. ನಾವು ದಿನವೂ ಸ್ನಾನ ಮಾಡುತ್ತಿದ್ದ ಬಾವಿಗೆ, ಒಮ್ಮೆ ಕೊಡಪಾನ ಬಿತ್ತು ಅಂತ ತೆಗೆಯಲು ಇಳಿದರು. ನೀರಿನ ಅಡಿಯಲ್ಲಿ ಬಾವಿಯ ಬದಿಯ ಮಣ್ಣು ಜರಿದು ಆದ ಮೋಟೆಯೋ ಏನೋ, ಒಂದರಲ್ಲಿ ಸಿಕ್ಕಿ ಹಾಕಿಕೊಂಡು ಮೇಲೆ ಬರಲಾಗದೇ, ನಾವು ನೋಡು ನೋಡುತ್ತಿರುವಂತೆಯೆ ಉಸಿರುಕಟ್ಟಿ ಪ್ರಾಣ ಕಳೆದುಕೊಂಡರು. ನಾವು, ಅವರು ಈಗ ಬರುತ್ತಾರೆ, ಇನ್ನೊಂದು ಕ್ಷಣದಲ್ಲಿ ಬರುತ್ತಾರೆ ಎಂದು ಮೇಲೆ ನಿಂತು ಕಾಯುತ್ತಾ ಇದ್ದೆವು. ಕೊನೆಗೆ ತುಂಬಾ ಹೊತ್ತಾದ ಮೇಲೆ ಅನುಮಾನ ಬಂದು ಮೇಲಿದ್ದ ಮತ್ತೊಬ್ಬ ಅಡಿಗರು, ಬಾವಿಗೆ ಇಳಿದು ನೋಡಿದಾಗಲೇ ನಮಗೆ ತಿಳಿದದ್ದು ಅವರು ಮೇಲಕ್ಕೆ ಬರಲಾಗದೇ ಸಿಕ್ಕಿಹಾಕಿಕೊಂಡಿದ್ದು ನೀರಿನಡಿಯೇ ಉಸಿರು ಕಟ್ಟಿ ಕೊನೆಯುಸಿರೆಳೆದಿದ್ದರು ಎಂದು. ಅದೊಂದು ನಾನು ಅಲ್ಲಿ ಕಣ್ಣಾರೆ ಕಂಡ ದುರಂತವಾಯಿತು.

ಆಗ ಪುತ್ತಿಗೆ ಮಠದಲ್ಲಿ ಸುಗುಣ ಪ್ರಿಂಟರ್ಸ್ ಅಂತ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಮೇನೇಜರ್ ಆಗಿರುವ ಸುಬ್ಬರಾಯರು ಎನ್ನುವವರ ಪರಿಚಯ ನಮ್ಮ ಉಡುಪರ ಮೂಲಕ ಆಯಿತು. ನಾವು ಆಫೀಸಿನ ಕೆಲಸ ಮುಗಿಸಿ, ಅವರ ಪ್ರೆಸ್ ಗೆ ಹೋಗಿ ಅದು ಇದೂ ಮಾತಾಡುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆವು. ಅಲ್ಲಿಯೇ ಮಠದ ಉಪ್ಪರಿಗೆಯ ಮೇಲೆ ಸುಬ್ರಾಯರ ರೂಮು ಇದ್ದು. ಅಲ್ಲಿಯೂ ಹೋಗಿ ಸಲಿಗೆಯಿಂದ ಯಜಮಾನಿಕೆ ಮಾಡುತ್ತಿದ್ದೆವು. ಅವರೂ ನಮ್ಮ ರೂಮಿಗೂ ಆಗಾಗ ಬರುತ್ತಿದ್ದರು.

ಕೆಲವೊಮ್ಮೆ ರಜಾದಿನಗಳಲ್ಲಿ ನಾವು ಮತ್ತು ಆಚೆ ಈಚೆ ರೂಮಿನವರೆಲ್ಲ ಒಟ್ಟು ಸೇರಿದಾಗ, ಒಟ್ಟಿಗೇ ಕಾಫಿತಿಂಡಿಗೆ ಹೋಗಿ ಪಾರ್ಟಿ ಮಾಡುತ್ತಿದ್ದುದುಂಟು. ಹಾಗೆ ಹೋಟೆಲಿಗೆ ಹೋಗಬೇಕು ಅನ್ನಿಸಿದಾಗ ನಮ್ಮ ಮಾಸ್ಟರರು “ಚೀಟಿ ಹಾಕುವನಾ?” ಎನ್ನುತ್ತಿದ್ದರು. ಅದೊಂದು ಅದೃಷ್ಟದ ಆಟ. ಒಂದಷ್ಟು ಚೀಟಿಗಳಲ್ಲಿ ಅಲ್ಲಿದ್ದ ಎಲ್ಲರ ಹೆಸರನ್ನು ಬರೆದು, ಚಂದವಾಗಿ ಮಡಿಸಿ ರಾಶಿ ಹಾಕಿ, ಯಾರಾದರೂ ಒಬ್ಬರಿಗೆ, ಅದರಲ್ಲಿ ಒಂದು ಚೀಟಿಯನ್ನು ಎತ್ತಲು ಹೇಳುವುದು. ಆಗ ಯಾರ ಹೆಸರು ಬಂತೋ, ಅವರು ನಮ್ಮ ಎಲ್ಲರಿಗೂ ಪಾರ್ಟಿ ಕೊಡಬೇಕು.

ಹೀಗೆ ಚೀಟಿ ಹಾಕುವಾಗ, ನಮ್ಮ ಪಕ್ಕದ ರೂಮಿನಲ್ಲಿ ಇರುವ ಶ್ರೀನಿವಾಸ ಅಡಿಗರು ಎನ್ನವವರ ಹೆಸರು ಎಷ್ಟು ಸಲವಾದರೂ ಬರುತ್ತಲೇ ಇರಲಿಲ್ಲ. ನಮಗೆ ಆಶ್ಚರ್ಯ! ಅವರ ಅದೃಷ್ಟ ಅಷ್ಟು ಚೆನ್ನಾಗಿತ್ತು. ಬಹಳ ಸಮಯದ ನಂತರ ಅಂತೂ ಒಮ್ಮೆ ಅವರ ಹೆಸರು ಬಂದೇ ಬಿಟ್ಟಿತು. ನಮಗೆಲ್ಲ ಖುಷಿಯೋ ಖುಷಿ. ಆಗ ತೆಂಕುಪೇಟೆಯಲ್ಲಿ ರಾಮಭವನ ಎನ್ನುವ ಹೋಟೆಲ್ ಇದ್ದಿತ್ತು. ಎಲ್ಲರೂ ಅಲ್ಲಿಗೆ ಹೋಗಿ ನಮನಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿದೆವು. ಇಷ್ಟು ದಿನ ನಮ್ಮ ದುಡ್ಡು ಖಾಲಿಮಾಡಿದ ಅಡಿಗರ ಕಿಸೆಯನ್ನು ಖಾಲಿಮಾಡುವ ಅಂತ ಎಲ್ಲರಿಗೂ ಹುಮ್ಮಸ್ಸು. ಎಲ್ಲ ತಿಂದು ಪಾರ್ಟಿ ಆದ ಮೇಲೆ, ಬಿಲ್ಲು ಕೊಡುವ ಸಮಯ ಬಂದಾಗ, ನಮ್ಮ ಗೋಪಾಲ ಮಾಸ್ಟರು ಎದ್ದು ನಿಂತು, “ನಾನು ಒಂದು ವಿಷಯ ಹೇಳಲಿಕ್ಕುಂಟು” ಎಂದು ಮೆಲ್ಲಗೆ ಶುರು ಮಾಡಿ, ಆವತ್ತು ಚೀಟಿಯಲ್ಲಿ ಮಾಡಿದ ಚೀಟಿಂಗ್ ವಿಷಯವನ್ನು ಬಯಲುಮಾಡಿದರು. ಅವರು ಒಂದು ಉಪಾಯ ಮಾಡಿದ್ದರು. ನಮಗೆ ಗೊತ್ತಿಲ್ಲದ ಹಾಗೆ ಮೊದಲೇ ಎಲ್ಲ ಚೀಟಿಯಲ್ಲೂ ಆ ಅಡಿಗರ ಹೆಸರನ್ನೇ ಬರೆದು ಹಾಕಿ, ಚೀಟಿ ಎತ್ತಲು ಹೇಳಿದ್ದರು. ಆದ್ದರಿಂದ ಅದೃಷ್ಟವಂತ ಅಡಿಗರಿಗೆ ಮೋಸಮಾಡಬಾರದು, ಹಾಗಾಗಿ ಅವರವರ ಬಿಲ್ಲನ್ನು ಅವರವರೇ ಕೊಡಬೇಕು ಅಂತ ಅವರು ವಿನಂತಿಸಿದಾಗ ನಾವೆಲ್ಲ ಹೊಟ್ಟೆತುಂಬಾ ತಿಂದವರು, ಒಮ್ಮೆ ಪೆಚ್ಚಾದರೂ, ಅವರ ಮಾತಿಗೆ ಒಪ್ಪಿ ಬಿಲ್ಲನ್ನು ಕೊಟ್ಟು ಬರಬೇಕಾಯಿತು. ಅಡಿಗರ ಅದೃಷ್ಟ ಮತ್ತೆ ಅವರನ್ನು ಗೆಲ್ಲಿಸಿತ್ತು.

ಒಮ್ಮೆ ನಮ್ಮ ಕಂಪೌಂಡ್ ನ ಪಕ್ಕದ ಮನೆಯೊಂದರ ಮಗುವನ್ನು ಗೋಪಾಲ ಮಾಸ್ಟ್ರು ಎತ್ತಿಕೊಂಡು ಬಂದು ಆಟವಾಡಿಸುತ್ತಿದ್ದರು. ನಾವೆಲ್ಲ ಅದನ್ನು ಎತ್ತಿಕೊಂಡು ಆಡಿಸುತ್ತ, ತಮಾಷೆ ಮಾಡುತ್ತ ಕಾಲ ಕಳೆದು ತುಂಬ ಹೊತ್ತಿನ ನಂತರ ಆ ಮಗುವನ್ನು ಅದರ ಮನೆಗೆ ಮಾಸ್ಟರೇ ಬಿಟ್ಟುಬಂದರು. ಸಂಜೆ ಆ ಮನೆಯವರು ಬಂದು, “ಮಗುವಿನ ಕುತ್ತಿಗೆಯಲ್ಲಿ ಒಂದು ಚಿನ್ನದ ಸರ ಇತ್ತು. ಅದನ್ನು ಯಾರಾದರೂ ನೋಡಿದ್ದಿರಾ? ಈಗ ಅದು ಕಾಣಿಸುತ್ತಿಲ್ಲ” ಎಂದು ಮಾಸ್ಟರನ್ನು ಕೇಳಿದರು. ಮಾಸ್ಟರಿಗೆ ಒಮ್ಮೆಲೇ ಶಾಕ್ ಆಯಿತು. ತಾನು ಸರವನ್ನು ನೋಡಲೇ ಇಲ್ಲ ಎಂದರು. ಆ ಮನೆಯವರು ಮತ್ತೆ ಏನೋ ಮಾತಾಡಿ ಮನೆಗೆ ಹೋದರೂ ಮಾಸ್ಟರಿಗೆ ನೆಮ್ಮದಿ ಹಾಳಾಯಿತು, ನಮ್ಮ ಬಳಿಗೆ ಬಂದು ಕಳೆದುಹೋದ ಸರದ ಬಗ್ಗೆ ಹೇಳಿ, ನಾವು ಇಲ್ಲಿಗೆ ಮಗುವನ್ನು ಕರೆದುಕೊಂಡು ಬಂದು ವಾಪಾಸು ಮಾಡುವಾಗ ಅದು ಕಳೆದುಹೋಗಿದೆಯಂತೆ. ನಮಗೆ ಬೇಕಿತ್ತ ಮಾರಾಯ್ರೆ ಇದು? ಇನ್ನೇನು ಮಾಡುವುದು? ಎಂದು ಮುಖ ಸಣ್ಣಗೆ ಮಾಡಿದರು. ನಮ್ಮಲ್ಲಿ ಯಾರಿಗೂ ಆ ಸರದ ಗೋಚರವೇ ಇರಲಿಲ್ಲ.

(ಮುಂದುವರಿಯುವುದು)
ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 38

ನಾನು ಕೆಲಸಕ್ಕೆ ಸೇರಿ ಒಂದು, ಮೂರು ನಾಲ್ಕು ತಿಂಗಳು ಆಗಿರಬಹುದು. ನನ್ನ ಬಲಗಾಲಿನ ಹೆಬ್ಬೆಟ್ಟಿನ ಹತ್ತಿರ ಒಳಭಾಗದಲ್ಲಿ ಸಣ್ಣ  ಕಜ್ಜಿಯ ಹಾಗೆ ಒಂದು ಗುಳ್ಳೆ ಆಯಿತು. ಸ್ವಲ್ಪ ತುರಿಕೆಯೂ ಇದ್ದುದರಿಂದ ಔಷಧದ ಅಂಗಡಿಗೆ ಹೋಗಿ ಏನೋ ಒಂದು ಬಿಳಿಮುಲಾಮನ್ನು ತಂದು ಹಚ್ಚಿದೆ. ಎರಡು ಮೂರು ದಿನಗಳಾದರೂ ಅದು ಹಾಗೆಯೇ ಇತ್ತು. ಆಗ ಉಡುಪಿಯಲ್ಲಿ ಆನೆ ಕಾಲುರೋಗ ತುಂಬಾ ಇತ್ತು. ಕೆಲವರ ಕಾಲನ್ನು ನೋಡಿದರೆ ಭಯವಾಗುತ್ತಿತ್ತು. ಅವರ ಕಾಲು ಆನೆಯ ಕಾಲಿನಂತೆ ತೋರವಾಗುತ್ತಾ ಹೋಗಿ, ಅಲ್ಲಲ್ಲಿ ಕಜ್ಜಿಯಂತೆ ಕಪ್ಪು ಕಪ್ಪು ಮುಳ್ಳುಗಳು ಎದ್ದು, ನಡೆಯುವಾಗ ಆ ಕಾಲನ್ನು ಎತ್ತಿ ಇಡಲು ಕಷ್ಟಪಡುವ ಜನರು ಅಲ್ಲಲ್ಲಿ ಸಿಗುತ್ತಿದ್ದರು. ಆನೆ ಕಾಲುರೋಗಕ್ಕೆ ಆಗಲೇ ಮದ್ದು ಬಂದಿದ್ದರೂ, ಅದು ಸೊಳ್ಳೆಯಿಂದ ಬರುವ ಕಾಯಿಲೆಯೆಂದೂ, ಒಮ್ಮೆ ಬಂತು ಅಂತಾದರೆ ಅದನ್ನು ಅಷ್ಟಕ್ಕೆ ನಿಲ್ಲಿಸಬಹುದೇ ಹೊರತು, ಗುಣಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ನಾನು ಸೊಳ್ಳೆಪರದೆ ಹಾಕಿಕೊಂಡು ಮಲಗುತ್ತಿದ್ದೆನಾದರೂ. ಅದರ ಒಳಗೆ ಮತ್ತು ಹೊರಗೆ ಹೋಗುವಾಗ, ಎಡೆಯಿಂದ ಕೆಲವು ಸಲ ಸೊಳ್ಳೆಗಳು ಒಳಗೆ ಬಂದು ಕಚ್ಚುತ್ತಿದ್ದವು. ನನಗೂ ಆನೆಕಾಲು ರೋಗ ಬರುತ್ತದೆಯೇನೋ ಎಂಬ ಭಯವಾಯಿತು.

ಆಗ ಮಾರುತಿ ವೀಥಿಕಾದ ಚಿತ್ತರಂಜನ್ ಸರ್ಕಲ್ಲಲ್ಲಿಯೇ ಡಾ.ಬಿ.ಬಿ. ಶೆಟ್ಟಿಯವರ ಕ್ಲಿನಿಕ್ ಇತ್ತು. ಅವರು ಯಕ್ಷಗಾನ ಕಲಾವಿದರ ದೊಡ್ಡ ಅಭಿಮಾನಿಗಳು. ಆಟನೋಡುತ್ತಿದ್ದರೋ ಇಲ್ಲವೋ, ಯಾರೇ ತಾವು ಯಕ್ಷಗಾನ ಕಲಾವಿದರು ಅಂತ ಅಲ್ಲಿಗೆ ಹೋಗಿ ಪರಿಚಯ ಹೇಳಿದರು ಅಂತಾದರೆ, ಶೆಟ್ಟರದ್ದು ಅವರಿಗೆ ಉಚಿತ ಸೇವೆ. ಕೆಲವರು ಹೋದರಂತೂ ಕಾಯಿಲೆಗೆ ಮದ್ದೂ ಕೊಟ್ಟು, ಅವರೇ ಬಸ್ಸಿಗೆ ಇರಲಿ ಅಂತ ಕಿಸೆಗೆ ಸ್ವಲ್ಪ ಹಣವನ್ನೂ ಹಾಕಿ ಕಳುಹಿಸುತ್ತಿದ್ದರು. ನಾನೂ ಅಪ್ಪಯ್ಯನೊಂದಿಗೆ ಉಡುಪಿಗೆ ಬಂದಾಗ ಅವರನ್ನು ಮಾತಾಡಿಸಲು ಹೋಗಿದ್ದು ನೆನಪಿತ್ತು. ನಾನು ಅವರ ಕ್ಲಿನಿಕ್ ಗೆ ಒಂದು ಸಂಜೆ ಹೋದೆ. ಬಹುಷ್ಯ ಯಾವುದೋ ಕಲಾವಿದರೆ ಇರಬೇಕು, ಅವರೊಡನೆ ಮಾತಾಡುತ್ತಾ, ನಗುತ್ತಾ ಆರಾಮವಾಗಿ ಕುಳಿತ್ತಿದ್ದರು. ನಾನು ಹೋಗಿ ನನ್ನ ಸಮಸ್ಯೆಯನ್ನು ಹೇಳಿದೆ. ಅವರು “ಹೋ ಹೌದಾ? ನೋಡುವ”  ಎಂದು “ಒಳಗೆ ಮಂಚದ ಮೇಲೆ ಹೋಗಿ ಮಲಗು, ಬರುತ್ತೇನೆ” ಅಂದರು. ಸುಮಾರು ಹೊತ್ತು ಬಂದವರೊಂದಿಗೆ ಅವರ ಮಾತುಕತೆಯಾಯಿತು. ಕೊನೆಗೆ ಬಂದವರಿಗೇ ಮಾತು ಮುಗಿದು ಹೋದ ಮೇಲೆ ಶೆಟ್ಟರು ಒಳಗೆ ಬಂದರು. ಬಂದವರೇ “ಯಾವ ಕಾಲು? ಎಲ್ಲಿ?” ಎಂದು ತೋರಿಸಲು ಹೇಳಿದರು. ಆಗಲೇ  ನನ್ನ ಪರಿಚಯ ಕೇಳಿ ತಿಳಿದುಕೊಂಡಾಯಿತು. ನಾನು ಎದ್ದು ಕುಳಿತು, ಕಾಲಿನ ಹೆಬ್ಬೆರಳು ಮತ್ತು ಎರಡನೆಯ ಬೆರಳಿನ ಮಧ್ಯವಿರುವ ಗುಳ್ಳೆಯನ್ನು ತೋರಿಸಿದೆ. ಅವರು ಒಮ್ಮೆ ಬಗ್ಗಿ ಹತ್ತಿರದಿಂದ ನೋಡಿದರು. “ಇದಾ?” ಎಂದು ಕೈಯ ಉಗುರಿನಲ್ಲಿ ಒಮ್ಮೆ ಜೋರಾಗಿ ಒತ್ತಿದರು. “ಇದೆಂತದೂ ಅಲ್ಲ. ಬರೀ ಕಜ್ಜಿ. ಹೋಗು, ಇದಕ್ಕೆ ಮದ್ದುಗಿದ್ದು ಏನೂ ಬೇಡ” ಎಂದು ಹೊರಗೆ ಬಂದು ನನ್ನನ್ನು ಕಳಿಸಿಬಿಟ್ಟರು. ನಾನು ಪೆಚ್ಚಾಗಿ ರೂಮಿಗೆ ಬಂದೆ. ಸ್ವಲ್ಪದಿನದಲ್ಲಿಯೇ ಅದು ಎಲ್ಲಿಹೋಯಿತು? ಅಂತ ಗೊತ್ತಾಗಲಿಲ್ಲ.

ನಮ್ಮ ಆಫೀಸಿನಲ್ಲಿ ಸತ್ಯನಾರಾಯಣ ಅಂತ ಒಬ್ಬರು ಟೈಪಿಸ್ಟ್ ಇದ್ದರು. ಅವರು ನನ್ನ ಸ್ನೇಹಿತರಾದರು. ಆಗಾಗ ಸಂಜೆ ಎಲ್ಲಾದರೂ ತಿರುಗಾಡಲು ಹೋಗುತ್ತಿದ್ದೆವು. ಅವರು ಎಲ್ಲಿ ಹೋದರೂ ನನ್ನನ್ನು ಕರೆದು “ದಿನೇಶ ಬಾರಾ.” ಎಂದು ಕರೆಯುತ್ತಿದ್ದರು. ನಾನು ಅವರೊಂದಿಗೆ ಇರಬೇಕು. ವಾರಕ್ಕೆರಡು ದಿನ ಮಹದೇವರು ಎಂಬ ಇಂಜಿನಿಯರ್ ಜೊತೆಗೆ ಡಯಾನಾ ಹೋಟೇಲಿಗೆ ಹೋಗಿ ಅಲ್ಲಿಯ ಮೆನುವನ್ನು ನೋಡಿ ಪ್ರತೀಸಲ ಒಂದೊಂದು ಬಗೆಯ ತಿಂಡಿಯನ್ನು ತಿಂದು ರುಚಿ ನೋಡಿ ಬರುತ್ತಿದ್ದೆವು. ಒಬ್ಬೊಬ್ಬರು ಒಂದೊಂದು ಸಲ ಬಿಲ್ಲು ಪಾವತಿಸುವುದು. ಹೀಗೆ ಆಗ ಡಯಾನದಲ್ಲಿ ಮಾಡುತ್ತಿದ್ದ  ಎಲ್ಲಾ ತಿಂಡಿಯ ರುಚಿ ನೋಡಿದ್ದೆವು. ನಂತರ ಅವರು, ಅವರ ಊರು ಶೃಂಗೇರಿಗೆ ವರ್ಗವಾಗಿ ಹೋಗಿದ್ದರೂ ಆಗಾಗ ಉಡುಪಿಗೆ ಬಂದು ಹೋಗಿ ಮಾಡುತ್ತಿದ್ದು, ನನ್ನ ಅನೇಕ ಸುಖಕಷ್ಟಗಳ ವಿಚಾರದಲ್ಲಿ ಸಹಭಾಗಿಗಳಾಗಿದ್ದು ನನ್ನ ಸಂಪರ್ಕದಲ್ಲಿ ಇದ್ದವರು. ಇತ್ತೀಚೆಗೆ ನಿವೃತ್ತರಾದ ಮೇಲೆ ಹೃದಯಾಘಾತದಿಂದ ತೀರಿಕೊಂಡರು.

ಉಡುಪಿಯಲ್ಲಿ ಎಸ್. ವಿ. ಭಟ್ ಎನ್ನುವ ಒಬ್ಬರು ನಮ್ಮ ಕುಟುಂಬದ ಸ್ನೇಹಿತರು. ಮೊದಲು ಶ್ರೀಧರಣ್ಣಯ್ಯ ಪಿಪಿಸಿಯಲ್ಲಿ ಪಿಯುಸಿ ಓದುತ್ತಿದ್ದಾಗ  ಅವನ ರೂಮ್ ಮೇಟ್ ಆಗಿದ್ದ ಅವರು, ಮುಂದೆ ಗೌರೀಶಅಣ್ಣ ಪಿಯುಸಿ ಓದುವಾಗ ಅವರದೆ ರೂಮಿಗೆ ಸೇರಿದ. ನಂತರ ಅತ್ತಿಗೆಯು ಮೈಯನ್ನು ಸುಟ್ಟುಕೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಇದ್ದಾಗ ಕೃಷ್ಣಮೂರ್ತಿ ಅಣ್ಣಯ್ಯನೂ ಅವರ ರೂಮಿನಲ್ಲಿಯೇ ಇದ್ದು, ಅವನ ಸ್ನೇಹಿತರೂ ಆದರು. ಅಪ್ಪಯ್ಯನ ಅಭಿಮಾನಿಗಳೂ ಆದ ಅವರು, ನಮ್ಮ ಮನೆಯವರಂತೆಯೇ ಆಗಿದ್ದರು. ಅವರು ಆಟ ನೋಡಲು ಹೋದರೆ, ಆಟ ನೋಡುವುದಕ್ಕಿಂತ ಹೆಚ್ಚಾಗಿ ಚೌಕಿಯಲ್ಲಿ ಕಲಾವಿದರ ಜೊತೆಗೇ ಅವರ ಸುಖ ಕಷ್ಟ ಮಾತಾಡುತ್ತಾ ಅಲ್ಲಿಯೇ ಹೆಚ್ಚು ಹೊತ್ತು ಕಾಲಕಳೆಯುವವರು. ಆಗ ಉಡುಪಿಯಲ್ಲಿ ಯಕ್ಷಗಾನ ಕಲಾರಂಗ ಪ್ರಾರಂಭವಾಗಿದ್ದು, ಡಾ. ಬಿ.ಬಿ. ಶೆಟ್ಟರ ಮುಂದಾಳುತನದಿಂದ ಇವರೆಲ್ಲರ ಹುರುಪಿನಿಂದ ಮಳೆಗಾಲದಲ್ಲಿ ಒಳ್ಳೊಳ್ಳೆಯ ಕಲಾವಿದರನ್ನು ಕರೆಸಿ ಆಟಗಳನ್ನು ಮಾಡಿಸುತ್ತಿದ್ದರು. ಅವರ ಆಟ ಆದರೆ ಅಪ್ಪಯ್ಯನಂತೂ ಇದ್ದೇ ಇರುತ್ತಿದ್ದರು.

ಒಮ್ಮೆ ಕಲಾರಂಗದವರು ಹವ್ಯಾಸಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ನಾನು ನನ್ನ ಸ್ನೇಹಿತರನ್ನು ಒಟ್ಟು ಮಾಡಿ ಅದರಲ್ಲಿ ಭಾಗವಹಿಸಲು ನಿರ್ಧರಿಸಿದೆ. “ರತ್ನಾವತಿ ಕಲ್ಯಾಣ” ಎಂಬ ಪ್ರಸಂಗವನ್ನು ಆಡುವುದು ಎಂದು ತೀರ್ಮಾನಿಸಿದೆ. ಈ ಪ್ರಸಂಗ, ನಾನು ಸುಮಾರು ಹತ್ತು ಹನ್ನೆರಡು ವರ್ಷದ ಹಿಂದೆ ಸಾಲಿಗ್ರಾಮ ಮಕ್ಕಳ ಮೇಳದ ಭಾಗವತರಾದ ಶ್ರೀಧರ ಹಂದೆಯವರು ನನ್ನನ್ನು ಮೊತ್ತ ಮೊದಲು ವೇಷಮಾಡಿಸಿ ಗೆಜ್ಜೆ ಕಟ್ಟಿಸಿ ಕುಣಿಸಿದ ಪ್ರಸಂಗ. ಅದೇ ಪ್ಲೋಟ್ ನ್ನು ಶ್ರೀಧರ ಹಂದೆಯವರನ್ನು ಕೇಳಿ ತಂದೆ.  ನನ್ನ ಅಕ್ಕನ ಮಗ ವೆಂಕಟೇಶನ ಭದ್ರಸೇನ, ಮೋಹನದಾಸ ಶ್ಯಾನುಭೋಗನ ಹನುಮನಾಯ್ಕ. ಅವನ ಅಣ್ಣಂದಿರಾದ ದೇವರಾಯ ಶ್ಯಾನುಭೋಗನ ದೃಢವರ್ಮ ಮತ್ತು ಗಣೇಶ ಶ್ಯಾನುಭೋಗನ ವಿಂದ್ಯಕೇತ, ಗುರುಪ್ರಸಾದ ಐತಾಳನ ವತ್ಸಾಖ್ಯ, ಪ್ರಕಾಶ ಹಂದೆಯ ರತ್ನಾವತಿ ಮತ್ತು ಗಿರೀಶ ಹಂದೆಯ ಚಿತ್ರಧ್ವಜ ಹಾಗೂ ನನ್ನದು ವಿದ್ಯುಲ್ಲೋಚನ ಎಂಬ ರಕ್ಕಸ ವೇಷ. ಎಲ್ಲರನ್ನೂ ಮಾತಾಡಿಸಿ ಒಪ್ಪಿಸಿಯಾಯಿತು. ಭಾಗವತರು ಯಾರು ಆಗಬಹುದು? ಎಂದು ಕೋಟದ ಮೋಹನದಾಸನ ಮನೆಯ ಜುಗುಲಿಯಲ್ಲಿ ಕುಳಿತು ನಮ್ಮಲ್ಲೇ ಒಟ್ಟಾಗಿ ಚರ್ಚಿಸಿ ಕಡೆಗೆ ವಿದ್ವಾನ್ ಗಣಪತಿ ಭಟ್ಟರು ಆದೀತು ಎಂದು ನಿರ್ಣಯಿಸಿದೆವು, ಆಗ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಇದ್ದರು. ಅವರನ್ನು ಮಾತಾಡಿಸಿ ಒಪ್ಪಿಸಿದ್ದಾಯಿತು. ಏಳೆಂಟು ಟ್ರಯಲನ್ನೂ ಮೋಹನ ದಾಸನ ಮನೆಯ ಹತ್ತಿರದ ದೇವಸ್ಥಾನದ ಹೊರ ಪೌಳಿಯಲ್ಲಿ ಮಾಡಿಯಾಯಿತು. ಇನ್ನೇನು ಒಂದು ಹಂತಕ್ಕೆ ಬಂದಿತು ಎನ್ನುವಾಗ, ಗಣಪತಿ ಭಟ್ಟರಿಗೆ ಯಕ್ಷರಂಗದ ತಿರುಗಾಟಕ್ಕೆ ಕರೆಬಂದಿತು. ಅವರು ಮೊದಲೇ ತಿಳಿಸಿದ್ದರು. ಕಾರಂತರ ಪ್ರೋಗ್ರಾಮಿಗೆ ಕರೆ ಬಂದರೆ ತಾನು ಹೋಗಬೇಕಾಗುತ್ತದೆ ಅಂತ. ಸ್ಪರ್ಧೆಗೆ ಇನ್ನೂ ಮೂರ್ನಾಲ್ಕು ದಿನವಷ್ಟೇ ಇದೆ. ಏನು ಮಾಡುವುದು? ಕೊನೆಗೆ ನಮ್ಮ ಶ್ರೀಧರಣ್ಣಯ್ಯನನ್ನೇ ಭಾಗವತಿಕೆ ಮಾಡಲು ಒಪ್ಪಿಸಿದೆವು.  ಮೊದಲು ನನ್ನ ಮತ್ತು ಗುರುಪ್ರಸಾದ ಐತಾಳನ ಪೀಠಿಕೆ ಸ್ತ್ರೀವೇಷವೂ ಇದ್ದು, ಸಂಪೂರ್ಣ ಒಡ್ಡೋಲಗದ ಕುಣಿತಗಳನ್ನು ಪ್ರಾಕ್ಟೀಸ್ ಮಾಡಿಕೊಂಡಿದ್ದೆವು. ಸ್ಪರ್ಧೆಯ ದಿನ ಬಂತು. ನಮ್ಮ ಆಟವೂ ಜೋರಿನಿಂದಲೇ ಆಯಿತು. ಆದರೆ ಮೂರನೆಯ ಬಹುಮಾನ ಮತ್ತು ಎರಡು ವೈಯಕ್ತಿಕ ಬಹುಮಾನಗಳು ಬಂದವು. ಆದರೂ ಬಾಲ್ಯದಲ್ಲಿ ಒಟ್ಟಿಗೇ ಸೇರಿ ಮಕ್ಕಳ ಮೇಳದಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ವೇಷ ಮಾಡಿದ್ದ ನಾವು, ಹತ್ತು ಹನ್ನೆರಡು ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೇ ಸೇರಿ ಆಟ ಮಾಡಿ ಖುಷಿ ಪಟ್ಟೆವು.

(ಮುಂದುವರಿಯುವುದು)

ಮಂಗಳವಾರ, ಅಕ್ಟೋಬರ್ 24, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 37

ಸ್ವಲ್ಪ ದಿನ ಕುಂದಾಪುರದ ಶ್ರೀಧರಣ್ಣಯ್ಯನ ಮನೆಯಿಂದಲೇ ಉಡುಪಿಯ ನಮ್ಮ ಆಫೀಸಿಗೆ ಓಡಾಡಿದೆ. ನನಗೆ ಉಡುಪಿಯಲ್ಲೇ ಇರುವ ಮನಸ್ಸು. ಸಂಜೆ ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವಿಚಾರಿಸತೊಡಗಿದೆ. ನನ್ನ ಜೊತೆಗೆ ಕೆಲಸಕ್ಕೆ ಸೇರಿದ ದೂರದೂರದ ಊರಿನ ಹುಡುಗರು ಅವರವರೇ ಸೇರಿ ಮಾತಾಡಿಕೊಂಡು ಒಟ್ಟಾಗಿ ರೂಮು ಮಾಡಿಕೊಂಡರು. ಕೊನೆಗೆ ಒಳಕಾಡಿನಲ್ಲಿ ಒಬ್ಬರ ಜೊತೆಗೆ ಇರಬಹುದು ಅಂತ ಯಾರೋ ಹೇಳಿದರು ಅಂತ ಹುಡುಕಿಕೊಂಡು ಹೋದೆ. ಅದು ಕತ್ತಲೆ ಕತ್ತಲೆಯ ಒಂದು ಸಣ್ಣ ರೂಮು. ಬಾಗಿಲ ಹೊರಗೇ, ಎದುರೇ ತೆಂಗಿನ ಮರದ ಬುಡದಲ್ಲಿ ಬಟ್ಟೆ, ಪಾತ್ರೆ ತೊಳೆದ ಗಲೀಜು ನೀರು ಅಲ್ಲಲ್ಲೇ ನಿಂತಿತ್ತು. ರೂಮು ನೋಡಿ, “ಬರುವುದಾದರೆ ನಾಳೆ ಬರುತ್ತೇನೆ” ಎಂದು ಬಂದುಬಿಟ್ಟೆ. ಇನ್ನೂ ಸ್ವಲ್ಪ ಚೆನ್ನಾಗಿರುವ ಪರಿಸರದಲ್ಲಿ ಸಿಗಬಹುದು ಎಂದು ಮತ್ತೆ ಹುಡುಕಾಟ ಮುಂದುವರಿಸಿದೆ. ಆಮೇಲೆ ರಾಜ ಹೆಬ್ಬಾರನ ಸ್ನೇಹಿತರು ಶಿರೂರಿನವರೇ ಆದ ಒಬ್ಬರು, ತೆಂಕುಪೇಟೆಯಲ್ಲಿ ತಾಜಮಹಲ್ ಹೋಟೆಲಿನ ಹಿಂದೆ ಉಪ್ಪರಿಗೆಯ ಮೇಲೆ ಒಬ್ಬರೇ ಇದ್ದಾರೆ ಎಂದು ಗೊತ್ತಾಗಿ, ಅವರನ್ನು ಕೇಳುವ ಅಂತ ಹುಡುಕಿಕೊಂಡು ಹೋದೆ. ಅವರು ಚಿನ್ನದ ಕೆಲಸ ಮಾಡುವ ಆಚಾರಿಯವರು,  ಅವರು ನನ್ನನ್ನು ನೋಡಿದ ಕೂಡಲೇ, “ನೀವು ಬರುತ್ತೀರಿ ಎಂದು ಹೆಬ್ಬಾರರು ಹೇಳಿದ್ದಾರೆ ಎಂದು. ಯಾವಾಗ ಬರುತ್ತೀರಿ?” ಎಂದು ಕೇಳಿದರು. ನಾನು ಮರುದಿನವೇ ಅಣ್ಣನಲ್ಲಿ ವಿಷಯವನ್ನು ತಿಳಿಸಿ ಅಲ್ಲಿಗೆ ಹೋಗಿ ಸೇರಿಕೊಂಡೆ.

ನಾನು ಅವರ ರೂಮಿನಲ್ಲಿ ಒಂದು, ಮೂರು ತಿಂಗಳು ಇದ್ದೆ. ಅವರು ಬೆಳಿಗ್ಗೆ ಬೇಗ ಸ್ನಾನ ಮಾಡಿ ಹೊರಟು ಹೋದರೆ, ರಾತ್ರಿ ಮಲಗಲಿಕ್ಕೆ ಮಾತ್ರ ರೂಮಿಗೆ ಬರುತ್ತಿದ್ದರು. ಬಹಳ ದಾಕ್ಷಿಣ್ಯದ ಜನ. ಮಾತೇ ಆಡುವವರಲ್ಲ. ಅವರು ನಾನು ಏಳುವ ಮೊದಲೇ ಎದ್ದು ಸ್ನಾನ ಮಾಡಿ ಹೋದರೆ, ಸಾಮಾನ್ಯ ನಾನು ಮಲಗಿದ ಮೇಲೇ ರೂಮಿಗೆ ಬರುತ್ತಿರುವುದರಿಂದ, ನನ್ನ ಮತ್ತು ಅವರ ಭೇಟಿ ಯಾವಾಗಾದರೊಮ್ಮೆ ಮಾತ್ರಾ ಆಗುತ್ತಿತ್ತು.

ಕೆಲಸ ಸಿಕ್ಕಿದ ಮೇಲೆ ನಾನು ಮೊದಲು ಮಾಡಿದ ಕೆಲಸ ಏನೆಂದರೆ, ರಮೇಶಣ್ಣಯ್ಯನಿಗೆ ಪತ್ರ ಬರೆದು, ಬಿದ್ಕಲ್ ಕಟ್ಟೆ ಸಿಂಡಿಕೇಟ್ ಬ್ಯಾಂಕಿನ ಸಾಲಕ್ಕೆ ಕಂತಿನಲ್ಲಿ ಅವನು ಪಾವತಿಸುತ್ತಿದ್ದ ಹಣವನ್ನು ಇನ್ನು ಮುಂದುವರಿಸುವುದು ಬೇಡ. ನನಗೆ ಕೆಲಸ ಸಿಕ್ಕಿದೆ. ಇನ್ನು ನಾನೇ ಕಟ್ಟಿ ಸಾಲವನ್ನು ತೀರಿಸುತ್ತೇನೆ ಎಂದದ್ದು. ಹಾಗೆಯೇ ಒಂದು ಆರು ತಿಂಗಳ ಅಂತರದಲ್ಲಿ ಸಂಬಳದಲ್ಲಿ ಒಂದಷ್ಟು ಹಣವನ್ನು ಉಳಿಸಿ, ಬಿದ್ಕಲ್ ಕಟ್ಟೆ ಬ್ಯಾಂಕಿಗೆ ಹೋಗಿ ಬಡ್ಡಿ ಸಹಿತ ಆ ಸಾಲವನ್ನು ಪೂರ್ತಿಯಾಗಿ ತೀರಿಸಿ ಬಂದೆ. ಮತ್ತು ಅಮ್ಮನು ಹೊತ್ತ ಹರಕೆಯಂತೆ ಅವಳೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಹೋಗಿ, ದೇವರಿಗೆ ಸೀರೆಯ ಹರಕೆಯನ್ನು ಕೊಟ್ಟು ಧನ್ಯನಾದೆ.

 ಆಗಲೇ ಶಂಕರ ನಾರಾಯಣದ ಶ್ರೀಧರ ಉಡುಪರ ಮಗ ಸುಬ್ರಮಣ್ಯ ಉಡುಪರು, ಒಮ್ಮೆ ತೆಂಕುಪೇಟೆಯ ಓಣಿಯಲ್ಲಿ ಆಕಸ್ಮಿಕವಾಗಿ ನನ್ನನ್ನು ನೋಡಿ “ಹ್ವಾಯ್, ನಿಮ್ಮನ್ನು ಎಲ್ಲೋ ನೋಡಿದ ಹಾಗಿತ್ತಲ್ಲ” ಎಂದು ಪರಿಚಯ ಮಾಡಿಕೊಂಡರು. ನಾನು ಶಂಕರನಾರಾಯಣ ದ ಕಾಲೇಜಿಗೆ ಹೋಗುವಾಗ ಸರ್ವೋತ್ತಮ ಶೇಟ್ ರ ಜವುಳಿ ಅಂಗಡಿಯ ಮಾಳಿಗೆಯ ರೂಮಿನಲ್ಲಿ ಇದ್ದಾಗ, ಅಲ್ಲಿಯೇ ಅವರ ಜವುಳಿ ಮಳಿಗೆಯ ಪಕ್ಕದಲ್ಲೆ ಶ್ರೀಧರ ಉಡುಪರ ಜೀನಸಿ ಅಂಗಡಿಯೂ ಇದ್ದು, ಅವರ ಅಂಗಡಿಯಲ್ಲಿಯೇ ನಾನು ಅಕ್ಕಿ, ಎಣ್ಣೆ ಮೊದಲಾದ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ಆಗ ಈ ಉಡುಪರು ನನ್ನನ್ನು ನೋಡಿದ್ದರಂತೆ. ಪರಿಚಯವಾದದ್ದೇ “ಹ್ವಾಯ್, ನಮ್ಮ ರೂಮಿನಲ್ಲಿ ಒಬ್ಬರು ಬಿಟ್ಟು ಹೋಗುತ್ತಿದ್ದಾರೆ. ನೀವು ಎಲ್ಲಿ ಇರುವುದು? ನಮ್ಮ ರೂಮಿಗೆ ಬರಬಹುದಾ?” ಎಂದರು. ನಾನು ಯೋಚಿಸಿ, “ನಿಮ್ಮ ರೂಮು ಎಲ್ಲಿ ಇರುವುದು? ಒಮ್ಮೆ ನೋಡಿ ಆಮೇಲೆ ಹೇಳುತ್ತೇನೆ” ಎಂದೆ.

ಮಾರನೇ ದಿವಸವೇ ಹೋಗಿ ವಾದಿರಾಜ ರಸ್ತೆಯಲ್ಲಿ ಭೋಜರಾವ್ ಕಂಪೌಂಡ್ ನಲ್ಲಿ ಇರುವ ಅವರ ರೂಮನ್ನು ನೋಡಿ ಸಮಾಧಾನವಾಗಿ, ಅದೇ ವಾರದಲ್ಲೇ ಅಲ್ಲಿಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರ ಮಾಡಿದೆ. ಅಲ್ಲಿ ಕೊಟ್ಟಕ್ಕಿ ಸುರೇಶ ಭಟ್ರು, ಉಡುಪರು ಮತ್ತು ನಾನು. ಅಡುಗೆಗೆ ಒಂದು ಸಣ್ಣ ರೂಮು. ಮತ್ತು ಓದಲು,ಬರೆಯಲು ಕುಳಿತುಮಾತಾಡಲು, ಮಲಗಲು ಒಂದು ಹಾಲ್. ಬೇಗನೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡೆ. ಬೆಳಿಗ್ಗೆ ನಸುಕಿನಲ್ಲಿ ಕೆಳಗೆ ಬಾವಿಕಟ್ಟೆಯಲ್ಲಿ ಸ್ನಾನ. ಚಿಮಣೀ ಎಣ್ಣೆಯ ಸ್ಟೋವ್ ನಲ್ಲಿ ಬೆಳಿಗ್ಗೆ ಗಂಜಿಮಾಡಿದರೆ ಉಂಡು, ಆಫೀಸಿಗೆ ಹೋದರೆ ಆಯಿತು.  ಅದನ್ನೇ ಬಸಿದರೆ ಮಧ್ಯಾಹ್ನದ ಅನ್ನ, ಸಾರಿನಪುಡಿ ಜೊತೆಗೆ ಟೊಮೇಟೋ ಹಾಕಿ ಮಾಡಿದ  ಸಾರು ಅಥವ ಹಾಗೆಯೇ ಮಾಡಿದ ಸಾಂಬಾರು. ರಾತ್ರಿ ಮತ್ತೆ ಒಂದು ಅನ್ನ ಬೇಯಿಸಿದರೆ ಆಯಿತು. ಗಂಜಿ ಉಪ್ಪಿನಕಾಯಿ ತುಪ್ಪದ ಊಟ. ಬೆಳಿಗ್ಗೆ ಮಾಡಿದ ಅನ್ನವನ್ನು ಒಂದು ಚಾ ಪೆಟ್ಟಿಗೆಯ ಒಳಗಡೆ ಒಣಹುಲ್ಲು ಹಾಕಿ ಆ ಅನ್ನದ ಪಾತ್ರೆಯನ್ನು ಇಟ್ಟು ಮೇಲೆ ಗಟ್ಟಿಯಾದ ಮುಚ್ಚಳ ಹಾಕಿ, ಒಂದು ಕಲ್ಲನ್ನು ಹೇರಿದರೆ, ಅನ್ನ ಮಧ್ಯಾಹ್ನ ಊಟಕ್ಕೆ ಬಂದಾಗಲೂ ಬಿಸಿಬಿಸಿ ಇರುತ್ತಿತ್ತು.

ನಾನು ಕೆಲಸಕ್ಕೆ ಸೇರಿದಾಗ ಉಡುಪಿ ಕೆಇಬಿ ಕಛೇರಿಯಲ್ಲಿ ಮೊದಲು ತುಂಬಾ ಹುದ್ದೆ ಖಾಲಿಯಿತ್ತು. ನಮ್ಮ ಬ್ಯಾಚ್ ನಲ್ಲಿ ಒಮ್ಮೆಲೇ ಮುವ್ವತ್ತು ನಲವತ್ತು ಜನ ಹೊಸದಾಗಿ ನೇಮಕಾತಿಯಾದೆವು. ಹಿಂದೆ ಅಲ್ಲಿ ಮಾಡುತ್ತಿದ್ದ ನೌಕರರ ಕೆಲಸವನ್ನು ನಮಗೆ ಹಂಚಿ ಕೊಟ್ಟದ್ದರಿಂದ ಅಷ್ಟೇನೂ ಕೆಲಸದ ಹೊರೆ ಇರಲಿಲ್ಲ. ಆಗ ನಮ್ಮ ಲೆಕ್ಕವಿಭಾಗದ ಮುಖ್ಯಸ್ಥರಾಗಿ ಮುರಳೀಧರ ಪೈಯವರಿದ್ದರೆ ಲೆಕ್ಕಾಧಿಕಾರಿಗಳಾಗಿ ಶರಾವೋ ಎನ್ನುವವರಿದ್ದರು. ಅವರಿಗೆ ಕೆನ್ನೆಯ ತುಂಬಾ ದೊಡ್ಡ ಮೀಸೆ ಇತ್ತು. ಅವರನ್ನು ನೋಡಿದರೆ ಅವರು ತುಂಬಾ ಜೋರಿನವರು ಎನ್ನಿಸುವಂತಿದ್ದರು. ಆದರೆ ತುಂಬಾ ಪಾಪದವರು. ದಿನಕ್ಕೆ ಎರಡು, ಮೂರು ಸಲ, ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ ಬರುವ ಪರಿವೀಕ್ಷಕರಂತೆ ಕೈಯನ್ನು ಹಿಂದೆ ಕಟ್ಟಿಕೊಂಡು ಅವರ ಚೇಂಬರಿನಿಂದ ಹೊರಗೆ ಬಂದು, ಎಲ್ಲ ಗುಮಾಸ್ತರ ಟೇಬಲ್ಲಿನ ಹತ್ತಿರ ಬಂದು ನಾವು ಏನು ಮಾಡುತ್ತಿದ್ದೇವೆ? ಎಂದು ಇಣಕಿ ನೋಡಿ ಹೋಗುತ್ತಿದ್ದರು. ನನಗೆ ದಿವಸಕ್ಕೆ ಹೆಚ್ಚೆಂದರೆ ಮೂರು ನಾಲ್ಕು ಗಂಟೆ ಕೆಲಸ ಇದ್ದರೆ ಹೆಚ್ಚು. ಉಳಿದ ಸಮಯದಲ್ಲಿ ಸುಮ್ಮನೇ ಕುಳಿತಿರಲು ಬೇಸರವಾಗಿ ಒಮ್ಮೊಮ್ಮೆ ನಾನು ಚಿತ್ರವನ್ನು ಬಿಡಿಸುತ್ತಾ ಕುಳಿತುಕೊಳ್ಳುತ್ತಿದ್ದೆ. ನಾನು ಚಿತ್ರ ಬಿಡಿಸುವುದನ್ನು ನೋಡಿದ ನನ್ನ ಸಹೋದ್ಯೋಗಿ ಸ್ನೇಹಿತರು ಅವರ ಸೇವಾ ಪುಸ್ತಕದ ಮುಖಪುಟದಲ್ಲಿ ಒಂದು ಚಂದದ ಚಿತ್ರ ಬರೆದು ಕೊಡು ಎಂದು ಒಬ್ಬೊಬ್ಬರಾಗಿ ತಂದುಕೊಡುತ್ತಿದ್ದರು. ಒಮ್ಮೆ ನಾನು ತಲೆಯನ್ನು ಕೆಳಗೆ ಹಾಕಿ ತನ್ಮಯನಾಗಿ ಏನೋ ಚಿತ್ರವನ್ನು ಬಿಡಿಸುತ್ತಾ ಕುಳಿತಿದ್ದೆ. ಸಾಹೇಬರು ಹಿಂದಿನಿಂದ ಮೆಲ್ಲನೇ ಹತ್ತಿರ ಬಂದು ಇಣಕಿದ್ದನ್ನು ನಾನು ಗಮನಿಸಲೇ ಇಲ್ಲ. ಅವರು “ಏನು ಮಾಡುತ್ತಿದ್ದೀರಿ?”. ಎಂದು ಗದರಿಸಿದರು. ನಾನು ಒಮ್ಮೆಲೇ ಗಾಬರಿಯಾಗಿ, ತಲೆ ಎತ್ತಿ ಅವರ ಮುಖ ನೋಡಿದಾಗ ಅವರ ಮೀಸೆಯೇ ನನಗೆ ಕಂಡುಬಂದು ಹೆದರಿಕೆಯಾಯಿತು. ಸುಮ್ಮನೇ ಎದ್ದು ನಿಂತೆ. ಅವರು “ಇವತ್ತಿನ ಕೆಲಸ ಎಲ್ಲ ಮುಗಿಸಿದ್ದೀರಾ?” ಎಂದು ಕೇಳಿದರು. ನಾನು “ಹೌದು” ಎಂದೆ. “ಹಾಗಾಗಿ ಚಿತ್ರ ಬರೆಯುತ್ತಾ ಕುಳಿತಿದ್ದೀರಿ” ಎಂದು ಮೀಸೆಯ ಒಳಗೇ ನಕ್ಕು, ಮುಂದೆ ಹೋಗಿಯೇ ಬಿಟ್ಟರು. ನನಗೆ ಹೋದ ಜೀವ ಬಂದಂತಾಯಿತು.

(ಮುಂದುವರಿಯುವುದು)

ಸೋಮವಾರ, ಅಕ್ಟೋಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 36

ಕೊನೆಗೆ ಆದದ್ದಾಗಲಿ ಎಂದು ಒಂದು ಪುಸ್ತಕದ ಅಂಗಡಿಯನ್ನು ಹುಡುಕಿಕೊಂಡು ಹೋಗಿ ಅಂಗವಿಕಲತೆಯ ಬಗ್ಗೆ ಭರ್ತಿ ಮಾಡಬೇಕಾದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದುಕೊಂಡೆ. ಅದಕ್ಕೆ ಒಂದು ಪೋಟೋ ಬೇಕಾಗಿತ್ತು. ಪೋಟೋ ಸ್ಟುಡಿಯೋವನ್ನು ಎಲ್ಲಿದೆ ಎಂದು ಯಾರನ್ನೋ ವಿಚಾರಿಸಿಕೊಂಡು ಹೋಗಿ ಸ್ಟುಡಿಯೋ ತಲುಪಿದೆ. ನನ್ನ ಪೋಟೋ ತೆಗೆಸಿದ್ದಾಯಿತು. ಎಷ್ಟು ಸಾಧ್ಯವೋ ಅಷ್ಟುಬೇಗ ಪೋಟೋ ಬೇಕಿತ್ತು ಎಂದು ವಿನಂತಿಸಿಕೊಂಡೆ. ಅವರು ಒಂದು ಗಂಟೆ ಬಿಟ್ಟು ಬರಲು ಹೇಳಿದರು. ಆ ಅಪರಿಚಿತ ಊರಿನಲ್ಲಿ ನನಗೆ ಬೇರೆ ಏನೂ ಮಾಡಲಿಕ್ಕಿಲ್ಲದೇ, ಅಲ್ಲಿಯೇ ಹೊರಗೆ ಕಾಯುತ್ತಾ ಚಡಪಡಿಸುತ್ತಾ ಕುಳಿತೆ. ಕೊನೆಗೆ ಅವರಿಂದ ಪೋಟೋ ವನ್ನು ಪಡೆದು ಅರ್ಜಿಯಲ್ಲಿ ಅದನ್ನು ಅಂಟಿಸಿದೆ, ಅರ್ಜಿ ಸಿದ್ಧವಾಯಿತು. ಇನ್ನು ಅದಕ್ಕೆ ಅಧಿಕೃತ ಜಿಲ್ಲಾ ವೈದ್ಯಾಧಿಕಾರಿಗಳಿಂದ ಸಹಿ ಮಾಡಿಸಬೇಕು. ಗುರುತು ಪರಿಚಯವಿಲ್ಲದ ಊರು. ಎದುರಿಗೆ ಬರುವ ಎಲ್ಲರ ಮುಖವೂ ನನಗೆ ಒಂದೇ ತರ ಕಾಣಿಸುತ್ತದೆ. ಆದರೆ ನನಗೆ ಸಹಾಯ ಮಾಡುವವರು ಯಾರು? ಆಸ್ಪತ್ರೆಯಲ್ಲಿ ಎಲ್ಲಿ ಹೋಗಬೇಕು?. ಏನು ಮಾಡಬೇಕು? ಗೊತ್ತಿಲ್ಲ. ಆದರೂ ಬಿಡುವ ಹಾಗಿಲ್ಲ. ಜೀವನದ ಸೋಲು ಗೆಲುವಿನ ಪ್ರಶ್ನೆ. ಅಂತೂ ಸುಮಾರು ಒಂದು ಗಂಟೆಯ ಸುಮಾರಿಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ನಡೆದುಕೊಂಡು ಹೋಗಿ ತಲುಪಿದೆ.

ಅಲ್ಲಿಯ ಮೂಳೆತಜ್ಞ ವೈದ್ಯರಿಂದ ನನ್ನ ಅರ್ಜಿಗೆ ಸಹಿ ಹಾಕಿಸಬೇಕಿತ್ತು. ಅವರು ಯಾರು? ಎಲ್ಲಿ ಸಿಗುತ್ತಾರೆ? ಎಂಬುದನ್ನು ಕೇಳಿ ತಿಳಿದುಕೊಂಡು ಹೋಗಿ, ಅಲ್ಲಿ ಕಾಯುತ್ತಿದ್ದ ರೋಗಿಗಳ ಸರತಿಯ ಸಾಲಿನಲ್ಲಿ ನಿಂತು ಕಾಯತೊಡಗಿದೆ. ಮನಸ್ಸಿನ ಒಳಗೆಲ್ಲ ದುಗುಡ ತಂಬಿತ್ತು. ಸಾವಿರ ಸಲ ದೇವರನ್ನು, “ಕಾಪಾಡು ನನಗೆ ಈ ಕೆಲಸವನ್ನು ಕೊಡಿಸು ದೇವರೆ” ಎಂದು ಬೇಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ರೋಗಿಗಳ ಪರಿಶೀಲನೆ ಮಾಡುತ್ತಿದ್ದ ಕೋಣೆಯ ಬಾಗಿಲಿನ ಒಳಗಿನಿಂದ ಹೊರಕ್ಕೆ ಮುಖ ಹಾಕಿ ಎಲ್ಲರನ್ನೂ ಅವಲೋಕಿಸಿದ ಒಬ್ಬರು, ನನ್ನನ್ನು ಕಂಡು ಒಳಗೆ ಬರಬೇಕೆಂದು ಕೈಮಾಡಿ ಕರೆದರು. ಅವರೇ ನನಗೆ ಸಹಿ ಹಾಕಬೇಕಾಗಿದ್ದ ಡಾಕ್ಟರ್ ಆಗಿದ್ದರು. ಅವರ ಹೆಸರು ಡಾಕ್ಟರ್ ಬಿ. ಆರ್. ತಾಹಶೀಲ್ದಾರ್.

ಒಬ್ಬ ಎಕ್ಸಿಡೆಂಟಿನಿಂದ ಗಾಯಗೊಂಡ ರೋಗಿಯ ಕೈಗೆ ಆ ಡಾಕ್ಟರ್ ರವರು ಬ್ಯಾಂಡೇಜ್ ಮಾಡುತ್ತಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ನನ್ನನ್ನು ಕರೆದವರು ನಾನು ಒಳಗೆ ಬಂದ ಕೋಡಲೇ, “ಬನ್ನಿ. ಇಲ್ಲಿ ಸ್ವಲ್ಪ ಹಿಡಿದುಕೊಳ್ಳುತ್ತೀರಾ? ಎಂದರು. ಅಲ್ಲಿಯ ನರ್ಸ್ ಎಲ್ಲೋ ಹೊರಗೆ ಹೋಗಿರಬೇಕು. ಆಗಲೆ ಊಟದ ಸಮಯವೂ ಆಗಿದ್ದುದರಿಂದ ಸ್ವಲ್ಪ ಗಡಿಬಿಡಿಯಲ್ಲೂ ಇದ್ದರು. ನಾನು ಆ ರೋಗಿಯ ಕೈಯನ್ನು ಹಿಡಿದುಕೊಂಡು ಅವರಿಗೆ ಸಹಾಯ ಮಾಡಿದೆ. ಬ್ಯಾಂಡೆಜನ್ನು ಕಟ್ಟಿ ಮುಗಿಸಿದ ಮೇಲೆ, ಆ ರೋಗಿಯನ್ನು ಕಳಿಸಿ, ಕೈಯನ್ನು ಸಿಂಕಿನಲ್ಲಿ ತೊಳೆದುಕೊಳ್ಳುತ್ತಾ, ನನ್ನನ್ನು ನೋಡಿ “ನಿಮ್ಮದು, ಏನು ಸಮಸ್ಯೆ?” ಎಂದರು. ನಾನು ಅರ್ಜಿಯನ್ನು ಅವರ ಮುಂದೆ ಹಿಡಿದು, ಅದಕ್ಕೊಂದು ಸಹಿ ಬೇಕಿತ್ತು ಅಂದೆ. ಅವರು “ಓಹೋ, ಸರಕಾರಿ ಕೆಲಸಕ್ಕಾಗಿಯೋ?” ಎಂದು ನನ್ನನ್ನು ಒಮ್ಮೆ ಮೇಲಿನಿಂದ ಕೆಳಗೆ ನೋಡಿ ಪರೀಕ್ಷಿಸಿದರು. ಕಾಲನ್ನೂ ನೋಡಿದರು. “ನೀವು ಸರಿಯಾಗಿಯೇ ನಡೆದಾಡುತ್ತೀರಲ್ಲ. ಡಿಪಿಶಿಯೆನ್ಸಿ ಎಂದು ಹೇಗೆ ಬರೆದು ಕೊಡಲಿ?” ಎಂದು ಅನುಮಾನ ಮಾಡಿದರು. ನನ್ನ ಎಡದ ಕಾಲು ಬಲಗಾಲಿಗಿಂತ ಸ್ವಲ್ಪವೇ ಸಪೂರ ಇದ್ದರೂ, ಊನತೆ ಅಂತ ಇರಲಿಲ್ಲ. ಅವರು ಮತ್ತೆ ಸ್ವಲ್ಪ ಯೋಚನೆ ಮಾಡಿ “ಇರಲಿ, ನಿಮಗೆ ಒಳ್ಳೆಯದಾಗುವುದಾದರೆ ಆಗಲಿ “ ಎಂದು ಅರ್ಜಿಯನ್ನು ಅವರ ಸ್ವಹಸ್ತಾಕ್ಷರದಿಂದ ತುಂಬಿಸಿ, ಸಹಿ ಹಾಕಿ ಕೊಟ್ಟರು.

ನನಗೆ ಹೋದ ಜೀವ ಬಂದ ಹಾಗೆ ಆಯಿತು. ಕಣ್ಣು ತುಂಬಿ ಬಂದಿತು. ಅವರಿಗೆ ಕೃತಜ್ಞತೆ ಹೇಳಿ, ಬೆಳಿಗ್ಗೆಯಿಂದ ಏನೂ ತಿನ್ನದೇ ಇದ್ದುದರಿಂದ ಹಸಿವೆಯಾಗಿ ಸಂಕಟವಾಗುತ್ತಿದ್ದುದರಿಂದ ಹೋಟೇಲಿನಲ್ಲಿ ಏನೋ ಒಂದಷ್ಟು ಗಡಿಬಿಡಿಯಲ್ಲಿ ತಿಂದಹಾಗೆ ಮಾಡಿ ಊಟದ ಶಾಸ್ರ್  ಮುಗಿಸಿ ಸೀದಾ ಕೆಇಬಿ ಆಫೀಸಿಗೆ ಓಡಿದೆ. ಆಗಲೇ ಮೂರು ಗಂಟೆಯ ಹತ್ತಿರ ಹತ್ತಿರ ಆಗಿತ್ತು. “ಹೋ ಬಂದಿರಾ” ನೀವು ಬರುವುದಿಲ್ಲ ಎಂದು ಎಣಿಸಿದ್ದೆವು” ಎಂದ ಅಲ್ಲಿಯ ಗುಮಾಸ್ತರೊಬ್ಬರು ನನ್ನ ಸರ್ಟಿಫಿಕೇಟ್ ಗಳನ್ನು ಪುನಹ ಪರಿಶೀಲಿಸಿದರು. ಮತ್ತು ಆಗಲೇ ಹೊಡೆದು ಹಾಕಿ ಬಿಟ್ಟು ಬಿಟ್ಟಿದ್ದ ನನ್ನ ಹೆಸರನ್ನು ಮತ್ತೆ ಸೇರಿಸಿಕೊಂಡರು. ನನ್ನ ವಿವರದ ಫೈಲನ್ನು ಎಟೇಂಡರ್ ಒಬ್ಬರ ಹತ್ತಿರ ಇಂಟರ್ ವ್ಯೂ ನಡೆಯುವ ಚೇಂಬರಿಗೆ ಕಳುಹಿಸಿಕೊಟ್ಟರು. ಆಗ ರಾಮಭದ್ರಯ್ಯ ಎನ್ನುವ ಅಧೀಕ್ಷಕ ಇಂಜಿನಿಯರ್ ಒಬ್ಬರು ಶಿವಮೊಗ್ಗ ವೃತ್ತದ ಮುಖ್ಯಸ್ಥರಾಗಿದ್ದು  ನಮ್ಮ ನೇಮಕಾತಿಯ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು. ಬೆಳಿಗ್ಗೆ ತಡವಾಗಿದ್ದರಿಂದ ಉಳಿದುಕೊಂಡಿದ್ದ ನಾಲ್ಕಾರು ಮಂದಿಯ ಸಂದರ್ಶನವನ್ನು ಊಟ ಮಾಡಿ ಬಂದ ಮೇಲೆ ಮುಗಿಸಿ, ಮಧ್ಯಾಹ್ನ ದ ಇಂಟರ್ ವ್ಯೂ ಶುರುವಾಯಿತು. ಸುಮಾರು ಹದಿನೈದು ಇಪ್ಪತ್ತು ಮಂದಿ ಇದ್ದಿರಬಹುದು. ನನ್ನ ಕೆಟಗರಿಯ ನಾಲ್ಕಾರು ಜನ ಅಂಗವಿಕಲ ಅಭ್ಯರ್ಥಿಗಳು ಇದ್ದರು.  ನನಗೋ ಎದೆ ಬಡಬಡ ಹೊಡೆದುಕೊಳ್ಳುತ್ತಿದೆ. ಆದರೂ ನಾನು ಸುಮ್ಮನೇ ಕುಳಿತುಕೊಳ್ಳಲಿಲ್ಲ. ಸಂದರ್ಶನ ಮುಗಿಸಿ ಹೊರಬಂದ ಅಭ್ಯರ್ಥಿಗಳನ್ನು ಅಡ್ಡ ಹಾಕಿ “ನಿಮಗೆ ಏನೆಲ್ಲ ಪ್ರಶ್ನೆ ಕೇಳಿದರು? ನೀವು ಏನು ಉತ್ತರ ಕೊಟ್ಟಿರಿ? ಎಂದು ಎಲ್ಲರನ್ನೂ ಕೇಳಲು ಶುರುಮಾಡಿದೆ. ನನಗೆ ಅದು ಬಹಳ ಅನುಕೂಲವೂ ಆಯಿತು. ಸುಮಾರು ಆರು ಗಂಟೆಯ ಹೊತ್ತಿಗೆ ನನ್ನ ಸಂದರ್ಶನವು ಆಗಿ ಮುಗಿಯಿತು. ಚೆನ್ನಾಗಿಯೇ ಆಯಿತು. ಹಿಂದಿನ ತಯಾರಿಗಿಂತ ಆ ದಿನದ ಓಡಾಟದಿಂದ ಆದ ತಯಾರಿಯೇ ನನಗೆ ಹೆಚ್ಚು ಸಹಾಯ ಮಾಡಿತು.

ಆ ದಿನ ಶಾರದೆಯವರ ಮನೆಯಲ್ಲಿಯೇ ಇದ್ದು, ಮರುದಿನ ಸೀದಾ ಶಿರೂರಿಗೆ ಹೋದೆ. ರಾಜನಿಗೆ ನಡೆದದ್ದನ್ನು ತಿಳಿಸಿದೆ. ಅವನೂ ಕೇಳಿ “ಒಳ್ಳೆಯದಾಗಲಿ” ಎಂದ. ಮುಂದೆ ಅಲ್ಲಿಯೇ ಸುಮಾರು ಮೂರು ತಿಂಗಳ ಕಾಲ ಕೆಲಸ ಮಾಡಿದೆ. ಅಂತೂ ಅವನು ನನ್ನನ್ನು ತನ್ನ ತಮ್ಮನಂತೆ, ಸ್ನೇಹಿತನಂತೆ ನೋಡಿಕೊಂಡ. ಅಲ್ಲಿಯೇ ನನ್ನ ಉಬ್ಬಸ ಕಾಯಿಲೆಗೆ ಔಷಧಿಯನ್ನು ಕೊಟ್ಟು, ಪ್ರೀತಿಯಿಂದ ಆಧರಿಸಿದ. ಅದಾಗಿ ಸ್ವಲ್ಪ ದಿನದಲ್ಲಿಯೇ ಅಂದರೆ ಮೇ ತಿಂಗಳು 1986 ರಲ್ಲಿ ನನಗೆ ಉಡುಪಿಗೆ  ಕೆಲಸಕ್ಕೆ ಹಾಜರಾಗಲು ಕೆಇಬಿಯಿಂದ ನೇಮಕಾತಿ ಆದೇಶದ ಕರೆ ಬಂದಿತು. ನಾನು ಸಂತೋಷದಿಂದ ಕುಣಿದಾಡಿದೆ. ಇಷ್ಟು ದಿನದ ಕಷ್ಟಗಳೆಲ್ಲ ಪರಿಹಾರವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಬದುಕಿನ ಅತ್ಯಂತ ದುಃಖದ ಕಾಲದಲ್ಲಿ ಕಾರ್ಕೋಟಕ ಸರ್ಪದಿಂದ ಕಚ್ಚಿಸಿಕೊಂಡು, ವಿಕಲಾಂಗನಾದ ನಳನಿಗೆ, ಆ ಊನವೇ ವರವಾಗಿ, ಜೀವನದ ದಾರಿಯಾದಂತೆ, ನನಗೂ ನನ್ನ ಊನತೆಯೇ ನನ್ನ ಅನ್ನಕ್ಕೊಂದು ಮೂಲವಾಗಿ ಹೋಯಿತು. ನಿಗದಿತ ದಿನದಂದು ಶ್ರೀಧರ ಅಣ್ಣನೊಂದಿಗೆ ಉಡುಪಿಯ ಆಫೀಸಿಗೆ ಬಂದು ಕೆಲಸಕ್ಕೆ ಹಾಜರಾದೆ. ಅಲ್ಲಿ ನಾನು ಕುಂದಾಪುರದಲ್ಲಿ ಓದುತ್ತಿದ್ದಾಗ, ಕೊಡ್ಗಿ ಕೌಂಪೌಂಡಿನಲ್ಲಿ ಇದ್ದಾಗ, ಅಲ್ಲಿಯೇ ಕೆಳಗಿನ ಮನೆಯಲ್ಲಿ ಬಾಡಿಗೆ ಬಿಡಾರದಲ್ಲಿ ಇದ್ದ ಕೃಷ್ಣಮೂರ್ತಿ ಹೊಳ್ಳರೂ, ಅವರ ಪತ್ನಿಯೂ ಇದ್ದುದನ್ನು ಕಂಡು ಪರಿಚಯದವರು ಒಬ್ಬರು ಇದ್ದಾರಲ್ಲ ಎಂದು ಖುಷಿಯಾಯಿತು.

ನನ್ನನ್ನು ನೋಡುತ್ತಲೇ ಹೊಳ್ಳರು  “ಹೋ ದಿನೇಶ, ಏನು? ನೀನಿಲ್ಲಿ. ಎಂದರು.  ನಾನು  ಕೆಲಸ ಸಿಕ್ಕಿದ ಬಗ್ಗೆ ಹೇಳಿದೆ. ಅವರು “ಹೋ ಚಾನ್ಸ್ ಹೊಡ್ದ್ಯಲ ಮಾರಾಯ. ಇದು ತುಂಬಾ ಒಳ್ಳೆಯ ಕೆಲಸ. ಎಷ್ಟೋ ಜನ ದುಡ್ಡು ಕೊಟ್ಟು ಬಂದು ಸೇರುತ್ತಾರೆ. ಮುಂದೆ ಇಲಾಖೆಯ ಪರೀಕ್ಷೆಗಳನ್ನು ಕಟ್ಟಿ ಪಾಸ್ ಆದರೆ ದೊಡ್ಡದೊಡ್ಡ ಪ್ರಮೋಶನ್ ಇದೆ. ಫ್ರೀ ಲೈಟಿಂಗ್, ರಜಾ ಸೌಲಭ್ಯ ಮೊದಲಾದ ಎಲ್ಲಾ ಅನುಕೂಲ ಇದೆ ಎಂದರು. ನನಗೆ ಯಾವುದಾದರೂ ಒಂದು ಉದ್ಯೋಗ ಸಿಕ್ಕಿದರೆ ಸಾಕಾಗಿತ್ತು. ಆ ದಿನ ಅವರ ಲೆಕ್ಕದಲ್ಲಿ ನಮಗೆ ಹತ್ತಿರದ ಬೊಬ್ಬರ್ಯ ಹೋಟೇಲಿನಲ್ಲಿ ಕಾಫಿ ತಿಂಡಿಯೂ ಆಯಿತು. ನನಗೆ ಮನೆಯ ಹತ್ತಿರದ ಕುಂದಾಪುರದ ಆಫೀಸಿನಲ್ಲಿ ಕೆಲಸವಾದರೆ, ಪ್ರತೀ ದಿನ ಮನೆಗೆ ಹೋಗಿ ಬರಬಹುದಲ್ಲ ಅಂತ ಆಸೆಯಾಗಿ ಕೆಲಸವನ್ನು ಕುಂದಾಪುರದ ಆಫೀಸಿಗೆ ಬದಲಾಯಿಸಲು ಸಾಧ್ಯವೇ?” ಎಂದು ಕೇಳಿದೆ. ಆಗ ಶ್ರೀಧರಣ್ಣಯ್ಯ “ಉಡುಪಿ ಒಳ್ಳೆಯ ಜಾಗ. ತುಂಬಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಬೆಳೆಯಬಹುದು. ಕುಂದಾಪುರ ಸಧ್ಯ ಬೇಡ. ಇಲ್ಲಿ ಆಗದಿದ್ದರೆ ಮತ್ತೆ ನೋಡುವ” ಅಂದ. ನಾನು ಒಪ್ಪಿ ಸುಮ್ಮನಾದೆ. ಉಡುಪಿಯಲ್ಲಿ ಅದೇ ದಿನ ವರದಿ ಮಾಡಿಕೊಂಡಾಯಿತು. ಮುಂದೆ ಎರಡೇ ತಿಂಗಳಲ್ಲಿ ಬಳ್ಳಾರಿಯ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕಿನಿಂದಲೂ ಕೊಪ್ಪಳ ಎಂಬ ಊರಿಗೆ ಗ್ರಾಮೀಣ ಬ್ಯಾಂಕ್ ನಲ್ಲಿ ಆಫೀಸರ್ ಆಗಿ ಆಯ್ಕೆಯಾಗಿ ಕೆಲಸಕ್ಕೆ ಆದೇಶ ಬಂತು. ಕೂಡಲೇ ಆ ಕೆಲಸ ಸಿಗಲು ಕಾರಣರಾದ ಶ್ರೀನಿವಾಸ ಶೆಟ್ಟರನ್ನೂ ಹೋಗಿ ಕಂಡು, ವಿಷಯ ತಿಳಿಸಿ, “ಏನು ಮಾಡುವುದು?” ಎಂದು ಕೇಳಿದೆ. ಅವರು ಸಂತೋಷಪಟ್ಟು “ಹೋ ಇದು ಊರ್ಮನೆಲ್ಲೇ ಆಯ್ತಲ್ಲ. ಗವರ್ನ್ ಮೆಂಟ್ ಕೆಲಸ. ಒಳ್ಳೆದಾಯ್ತು. ಬ್ಯಾಂಕಿನ್ ಕೆಲ್ಸಕ್ ಹೋಗ್ಬೇಕಂತೇನ್ ಇಲ್ಲೆ. ವಿಚಾರ ಮಾಡಿ. ನಿಮಗೆ ಯಾವುದು ಒಳ್ಳೆದೋ, ಹಾಂಗೆ ಮಾಡಿ” ಎಂದರು. ನನ್ನ ಜೊತೆಯ ಸ್ನೇಹಿತರು, ಹಿರಿಯ ಸಹೋದ್ಯೋಗಿಗಳು  “ಇದೇ ಕೆಲಸ ಒಳ್ಳೆಯದು” ಎಂದುದರಿಂದ ,“ನಾನು ಬ್ಯಾಂಕಿನ ಕೆಲಸಕ್ಕೆ ಹಾಜರಾಗುವುದಿಲ್ಲ. ಈಗಾಗಲೇ ಕೆಇಬಿಯಲ್ಲಿ ಕೆಲಸ ಸಿಕ್ಕಿದೆ” ಎಂದು ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕಿಗೆ ಪತ್ರ ಬರೆದು ಹಾಕಿದೆ.

ಆದರೂ ನನಗೆ ಕೆಲವೊಮ್ಮೆ ನಾನು ಸರಿ ಇದ್ದೂ, ಬೇರೆ ಯಾವುದೋ ಅಂಗವಿಕಲ ಅಭ್ಯರ್ಥಿಯ ಅನ್ನಕ್ಕೆ ಕಲ್ಲು ಹಾಕಿದೆ ಎಂದು ಅನ್ನಿಸುತ್ತಿದ್ದುದುಂಟು. ಆದರೆ ನನ್ನ ಜೊತೆಯಲ್ಲಿ ಕೆಲಸಕ್ಕೆ ಸೇರಿದ ನನ್ನ ಸಹೋದ್ಯೋಗಿಗಳು ತಾನು ಇಷ್ಟು ದುಡ್ಡು ಕೊಟ್ಟು ಬಂದಿದ್ದೇನೆ, ಇಷ್ಟು ಪ್ರಭಾವ ಇದ್ದು ಅವರ ಮೂಲಕ ಕೆಲಸಕ್ಕೆ ಬಂದಿದ್ದೇನೆ ಎನ್ನುವಾಗ, ಅವರೂ ಬೇರೆ ಪ್ರತಿಭಾವಂತರ ಸ್ಥಾನವನ್ನು ಕಸಿದವರಲ್ಲವೇ? ಅನ್ನಿಸಿ ಸ್ವಲ್ಪ ಸಮಾಧಾನ ಪಟ್ಟುಕೊಂಡೆ. ಇದನ್ನು ಬಿಟ್ಟರೆ ನನ್ನ ಜೀವನ ನಡೆಯಲು ಸಾಧ್ಯವಿಲ್ಲದ್ದರಿಂದ, ನಾನು ಬೇರೆ ಆಯ್ಕೆಯನ್ನು ಮಾಡಿಕೊಳ್ಳುವಂತಿರಲಿಲ್ಲ. ಆದರೆ ಅಂದೇ ನಾನು ಇನ್ನು ಅಂಗವಿಕಲ ಎಂಬ ರಿಯಾಯಿತಿಯಿಂದ ಸರಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದಿಲ್ಲ ಎಂದು ನಿಶ್ಚಯಮಾಡಿದೆ.  ಒಟ್ಟಿನಲ್ಲಿ, ಡಾಕ್ಟರ್ ಇಂಜಿನಿಯರ್ ಕೆಲಸ ಬಿಟ್ಟು, ಬರೀ ಬ್ಯಾಂಕ್ ಕೆಲಸ, ಮಾಸ್ಟರ್ ಕೆಲಸ ಮಾತ್ರ ಗೊತ್ತಿದ್ದ ನನಗೆ, ಕೆಇಬಿಯಂತಹ ಆಫೀಸಿನಲ್ಲಿ ಇಂತಹ ಬರವಣಿಗೆ, ಲೆಕ್ಕಪತ್ರಗಳ ಕೆಲಸ ಇರುತ್ತದೆ ಅಂತ ಗೊತ್ತಾದದ್ದು, ಇಲ್ಲಿ ಕೆಲಸಕ್ಕೆ ಅಂತ ಆಯ್ಕೆಯಾಗಿ ಈ ಕೆಇಬಿಗೆ ಸೇರಿದ ಮೇಲೆಯೆ. ಆಗ ನಮ್ಮ ಹಳ್ಳಿಯ ಮನೆಯಲ್ಲಿಯೂ ಕರೆಂಟ್ ಇಲ್ಲದ ಕಾರಣ, ಚಿಮಣಿಯ ಎಣ್ಣೆಯ ಮಂದಬೆಳಕಿನ ಪ್ರಕಾಶದ ಸುತ್ತ ಇರುವ ಗಾಢವಾದ ಕತ್ತಲೆಯನ್ನೇ ಕಂಡಿದ್ದ ನನಗೆ, ಹೊರಗೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ, ವಯರ್ ಗಳನ್ನು ಮಾತ್ರ ನೋಡಿದ್ದ ನಾನು, ಅಲ್ಲಿ ಎಲೆಕ್ಟ್ರಿಕ್, ವಯರ್ ಮತ್ತು ಕಂಬದ ಕೆಲಸ ಮಾತ್ರ ಇರಬಹುದು ಎಂದು ಎಣಿಸಿದ್ದು, ಒಳಗೆ ಇಷ್ಟೆಲ್ಲ ಇದೆ ಎಂದು ತಿಳಿದಂತಾಯಿತು. ಅಂತೂ ಆ ಕೆಲಸದಿಂದ ನನಗೆ ಒಂದು ನೆಲೆಯಾಯಿತು. ಅಮ್ಮನ ಮನದ ಹಾರೈಕೆ, ದೇವರಲ್ಲಿ ಇಟ್ಟ ಮೊರೆ ಫಲ ನೀಡಿತು. ಒಟ್ಟಾರೆ ನಾನು ಆ ಹುದ್ದೆಗೆ ಸೇರಿ ಡಿಪಾರ್ಮೆಂಿಲಟ್ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಮೂರು ನಾಲ್ಕು ಪದೋನ್ನತಿಯನ್ನು ಪಡೆದು, ಲೆಕ್ಕಾಧಿಕಾರಿಯಾಗಿ ಒಂದು ಕಛೇರಿಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥನಾಗಿ ದುಡಿಯುವ ಹಾಗೆ ಆಗಿ, ಇಡೀ ನನ್ನ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಪ್ರಾಮಾಣಿಕವಾಗಿ ದುಡಿದು ನೆಮ್ಮದಿಯಿಂದ ಬದುಕು ಸಾಗಿಸುವಂತಾಯಿತು.

(ಮುಂದುವರಿಯುವುದು)

ಭಾನುವಾರ, ಅಕ್ಟೋಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 35

ನಾನು ರಾಜ ಹೆಬ್ಬಾರನ ಔಷಧಿ ಅಂಗಡಿಯಲ್ಲಿದ್ದುದರಿಂದ ಅವನ ತಂದೆ ಐರೋಡಿ ಸದಾನಂದ ಹೆಬ್ಬಾರರ ಸಂಪರ್ಕಕ್ಕೆ ಪುನಹ ಬಂದು, ಅವರ ನಿರ್ದೇಶನದಲ್ಲಿ ಆದ ಕೆಲವು ರೇಡಿಯೋ ಪ್ರೋಗ್ರಾಮ್ ಗಳಲ್ಲಿ, ರಾಜ ಹೆಬ್ಬಾರನ ಜೊತೆಗೂಡಿ ಭಾಗವಹಿಸಲು ಅವಕಾಶವಾಯಿತು. ಆಗ ಬುಧವಾರ ರಾತ್ರಿ ಒಂಬತ್ತುವರೆಗೆ ಯಕ್ಷಗಾನ ಕಾರ್ಯಕ್ರಮ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿತ್ತು. ಲಂಕಾದಹನದಲ್ಲಿ ಸೀತೆ, ಬಬ್ರುವಾಹನ ಕಾಳಗದಲ್ಲಿ ಚಿತ್ರಾಂಗದೆ, ಜಾಂಬವತಿ ಕಲ್ಯಾಣದಲ್ಲಿ ನಾರದ, ರುಕ್ಮಿಣಿಸ್ವಯಂವರದಲ್ಲಿ ರುಕ್ಮಿಣಿ, ಚಿತ್ರಸೇನ ಕಾಳಗದಲ್ಲಿ ಕರ್ಣ ಇತ್ಯಾದಿ ಪಾತ್ರಗಳನ್ನು ಮಾಡಿ ರೇಡಿಯೋ ಕಾರ್ಯಕ್ರಮದಲ್ಲಿ ಹೆಬ್ಬಾರರ ಭಾಗವತಿಕೆಯಲ್ಲಿ ಅರ್ಥ ಹೇಳಿದೆ. ಸುರೇಶಣ್ಣಯ್ಯನದ್ದು ಮದ್ದಲೆವಾದನ. ರಾಮಚಂದ್ರ ಐತಾಳರು, ಮಣೂರು ರವಿರಾಜ ಹೊಳ್ಳ, ಕಾಶಿ ಮಯ್ಯ, ಶಿವಾನಂದ ಮಯ್ಯ ಗೋಪಾಲ ಶೆಟ್ಟಿಗಾರ್ ಮೊದಲಾದವರು ನಮ್ಮಸಹ ಕಲಾವಿದರಾಗಿದ್ದರು. ಸದಾನಂದ ಹೆಬ್ಬಾರರೇ ಪ್ರಸಂಗದ ಪದ್ಯಗಳನ್ನು ಆಯ್ಕೆ ಮಾಡಿ, ಅದಕ್ಕೆ ಅರ್ಥವನ್ನೂ ಬರೆದು, ಒಂದು ಪ್ಲಾಟ್ ಆಗಿ ಸಿದ್ಧಮಾಡಿ ನಮಗೆ ಕೊಡುತ್ತಿದ್ದರು. ಕಾರ್ಯಕ್ರಮ ಕೊಡುವ ಹಿಂದಿನ ದಿನ ಕೋಟ ಮಣೂರು ಶಾಲೆಯಲ್ಲಿ ಒಂದು ಟ್ರಯಲ್ ಮಾಡಿಕೊಂಡು ಮಂಗಳೂರು ಆಕಾಶವಾಣಿ ಗೆ ಹೋಗಿ ಪ್ರೊಗ್ರಾಮ್ ಕೊಟ್ಟು ಬರುತ್ತಿದ್ದೆವು.

ಬಹುಷ್ಯ ನಾನು ಶಿರೂರಿಗೆ ಹೋಗುವ ಹಿಂದಿನ ವರ್ಷ ಇರಬೇಕು. ಕವಲಾಳಿ ಸದಾನಂದ ವೈದ್ಯರು, ಅವರು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಓದುವಾಗ ಪರಿಚಯವಾಗಿದ್ದವರು, ಮತ್ತೆ ಒಮ್ಮೆ ನಮ್ಮನ್ನೆಲ್ಲಾ ಒಟ್ಟು ಮಾಡಿ, ಒಂದು ಹವ್ಯಾಸಿ ಯಕ್ಷಗಾನ ತಂಡವನ್ನು ಕಟ್ಟಿ, ಒಂದು ವ್ಯಾನಿನಲ್ಲಿ ನಮ್ಮನ್ನೆಲ್ಲ ಕರೆದುಕೊಂಡು ಶಿವಮೊಗ್ಗ, ದಾವಣಗೆರೆ ಅಂತ ಹತ್ತಾರು ಕಡೆ ಹೋಗಿ, ಅವರ ಮುಂದಾಳು ತನದಲ್ಲಿ ಕಾರ್ಯಕ್ರಮ ಕೊಟ್ಟು ಬಂದಿದ್ದೆವು. ಆಗ ಆದ ಪ್ರಸಂಗ “ವಿದ್ಯುನ್ಮತಿ ಕಲ್ಯಾಣ”. ನಾನು ಮೊದಲು ಸುಲೋಚನ ಎಂಬ ಕೆಂಪು ಮುಂಡಾಸಿನ ವೇಷ ಮಾಡಿ, ಕೊನೆಗೆ ವೃತ್ತಜ್ವಾಲೆ ಎಂಬ ಹೆಣ್ಣು ಬಣ್ಣದ ವೇಷ ಮಾಡುತ್ತಿದ್ದೆ. ನಮ್ಮ ಶ್ರೀಧರ ಅಣ್ಣಯ್ಯನದ್ದು ಭಾಗವತಿಕೆ. ಹಳ್ಳಾಡಿ ಸುಬ್ರಾಯ ಮಲ್ಯರದ್ದು ಚಂಡೆವಾದನ. ಮದ್ದಲೆಗೆ ಸುರೇಶ ಎನ್ನುವ ನನ್ನ  ಮತ್ತೊಬ್ಬ ಅಣ್ಣ. ಆಗ ನಮ್ಮೊಡನೆ ಇದ್ದವರಲ್ಲಿ ನೆನಪಿಗೆ ಬರುವವರು, ರಾಘವ ಶೆಟ್ಟಿ, ಕಮಲಶಿಲೆ ರಾಮಚಂದ್ರ ಭಟ್, ಕುಪ್ಪಾರು ರವೀಂದ್ರ ಶೆಟ್ಟಿ ಮೊದಲಾದವರು.

ಏತನ್ಮಧ್ಯೆ “ಶಂಕರನಾರಾಯಣದ ಜ್ಯೂನಿಯರ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಒಂದು ಯಕ್ಷಗಾನ ಕಾರ್ಯಕ್ರಮ ನಡೆಸುವುದು ಅಂತ ತೀರ್ಮಾನಿಸಿದ್ದೇವೆ ಬನ್ನಿ” ಎಂದು ಕವ್ಲಾಳಿ ಸದಾನಂದ ವೈದ್ಯರು ನನಗೆ ಪತ್ರ ಬರೆದಿದ್ದರು. ಮೊದಲೊಂದು ನಾಟಕ ನಂತರ ಯಕ್ಷಗಾನ ಮಾಡುವುದು ಅಂತ ಮೀಟಿಂಗ್ ಮಾಡಿ ಹಲವಾರು ಸ್ನೇಹಿತರು ಒಟ್ಟಿಗೇ ಸೇರಿ ನಿರ್ಣಯಿಸಿದೆವು. ಭೀಷ್ಮ ವಿಜಯದಲ್ಲಿ ನನ್ನದು ಅಂಬೆ, ಸದಾನಂದ ವೈದ್ಯರ ಭೀಷ್ಮ, ನನ್ನ ಹಳೆಯ ಸ್ನೇಹಿತರಾದ ಶ್ರೀಕಾಂತ ಸಿದ್ದಾಪುರ ಇವರ ಪರಶುರಾಮ, ಕುಪ್ಪಾರು ರವೀಂದ್ರ ಶೆಟ್ಟರ ಸಾಲ್ವ, ಹೆಚ್ಚಿಗೆ ಉಮೇದುವಾರರಿದ್ದುದರಿಂದ ರಾಘವ ಶೆಟ್ಟಿಯವರ ಎರಡನೆಯ ಭೀಷ್ಮ, ಗಣೇಶ ಭಟ್ ರ ಕೊನೆಯ ಅಂಬೆ ಅಂತ ಆಗಿತ್ತು. ಶ್ರೀಧರ ಅಣ್ಣಯ್ಯ, ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ರ ಭಾಗವತಿಕೆ. ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆ. ಸುರೇಶಣ್ಣನ ಮದ್ದಲೆವಾದನ. ನಾಲ್ಕಾರು ಟ್ರಯಲ್ ಆಯಿತು.

ಆಟಕ್ಕೆ ಮೂರು ದಿನ ಇದೆ ಎನ್ನುವಾಗ, ನನಗೆ ಶಿವಮೊಗ್ಗದ ಕೆಇಬಿ ಯಿಂದ ಇಂಟರ್ ವ್ಯೂಗೆ ಕರೆ ಬಂತು.. ನನ್ನ ಜೀವನಕ್ಕೊಂದು ದಾರಿಯಾಯಿತು ಎಂದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ಅದಕ್ಕೆ ಹಾಜರಾಗಬೇಕು. ಬದುಕಿನ ಪ್ರಶ್ನೆಯಲ್ಲವೇ? ಹಾಗಾಗಿ ಅಂಬೆಯನ್ನು ಗಣೇಶ ಭಟ್ ಎನ್ನುವವರಿಗೆ ಮಾಡಲು ಹೇಳಿ, ಅಂದೇ ನಾನು ಹೊರಡುವುದು ಎಂದು ತೀರ್ಮಾನಿಸಿದೆ. ಆದರೆ ನನಗೆ ಶಿವಮೊಗ್ಗದಲ್ಲಿ ಯಾರೂ ಪರಿಚಯದವರು ಇರಲಿಲ್ಲ. ಹಾಗಾಗಿ ಸಾಗರದಲ್ಲಿ  ವೆಂಕಟಾಚಲ ಹೊಳ್ಳರು ಎಂಬವರಲ್ಲಿಗೆ ಹೋದೆ. ಅವರು ನಮ್ಮ ಸಂಬಂಧಿಕರು. ಶ್ರೀಧರಣ್ಣಯ್ಯನ ಮಾವನೂ ಹೌದು. ಅವರು ಮೊದಲು ವಕೀಲಿ ವೃತ್ತಿಯನ್ನು ಮಾಡುತ್ತಿದ್ದು ವಯಸ್ಸಾದ ನಂತರ ಸಾಗರದ ರಾಘವೇಂದ್ರ ಮಠದಲ್ಲಿ ಮಠದ ಉಸ್ತುವಾರಿಯನ್ನು ನೋಡಿಕೊಂಡು ಇದ್ದರು. ಬಹಳ ನಿಷ್ಠುರವಾದಿಗಳು. ಆಗಿನ ಕಾಲದಲ್ಲೂ ಕಚ್ಚೆಪಂಚೆಯನ್ನು ಉಟ್ಟು ಬಿಳಿ ಜುಬ್ಬವನ್ನು ಹಾಕಿ, ಅದರ ಮೇಲೆ ಕರಿಕೋಟು, ತಲೆಗೆ ಕರೀ ಟೊಪ್ಪಿಯನ್ನು ಧರಿಸುತ್ತಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಅವರಿಗೆ ಶಿವಮೊಗ್ಗದಲ್ಲಿ ಯಾರಾದರೂ ಪರಿಚಿತರಿರಬಹುದು ಎಂಬ ಆಸೆ. ಅವರಲ್ಲಿ ನನಗೆ ಇಂಟರ್ ವ್ಯೂ ಬಂದ ವಿಷಯ ಹೇಳಿದೆ. ಅವರು ನನ್ನನ್ನು ರಾಘವೇಂದ್ರ ಮಠಕ್ಕೆ ಕರೆದು ಕೊಂಡು ಹೋಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದರು. ಕೊನೆಗೆ “ಸ್ವಾಮಿಯವರ ಪ್ರಸಾದ ಮತ್ತು ಒಂದು ಪೋಟೋ ಕೊಟ್ಟು, ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಇದೆ. ನಿನ್ನ ಕೆಲಸವಾಗುತ್ತದೆ ಹೋಗು” ಎಂದು ಹರಸಿದರು. ಮತ್ತು “ಕೆಲಸ ಆದರೆ ನನಗೊಂದು ಎಲ್ ಐ ಸಿ. ಯ ಪಾಲಿಸಿ ಕೊಡಬೇಕು” ಎಂದು ಹೇಳಿದರು. “ಕೆಲಸ ಆದರೆ ಖಂಡಿತಾ ಕೊಡುತ್ತೇನೆ” ಎಂದು ಭರವಸೆಯನ್ನು ಕೊಟ್ಟದ್ದಾಯಿತು. ಅವರೇ ಶಿವಮೊಗ್ಗದಲ್ಲಿದ್ದ ಅವರ ಮಗಳು ಶಾರದೆಯ ಮನೆಯ ವಿಳಾಸ ಕೊಟ್ಟು ಅಲ್ಲಿ ಉಳಿದುಕೊಳ್ಳಲು ಹೇಳಿದರು. ಆ ರಾತ್ರಿ ಅಲ್ಲಿಯೇ ಉಳಿದು ಮರುದಿನ ನಾನು ಸೀದಾ ಶಿವಮೊಗ್ಗಕ್ಕೆ ಹೋಗಿ ಅವರ ಮಗಳ ಮನೆಗೆ ಹೋದೆ. ಮರುದಿನ ಮಧ್ಯಾಹ್ನ ಎರಡು ಗಂಟೆಗೆ ನನ್ನ ಇಂಟರ್ ವ್ಯೂ.

ಬೆಳಿಗ್ಗೆ ಹತ್ತು ಗಂಟೆಗೆ ಕೆಇಬಿ ಆಫೀಸನ್ನು ಹುಡುಕಿಕೊಂಡು ಹೋದೆ. ನನ್ನ ಮಾರ್ಕ್ಸ್ ಕಾರ್ಡ್ ಮತ್ತು ಇತರ ದಾಖಲೆಗಳ ಮೂಲಪ್ರತಿಯನ್ನು ಹಾಜರು ಪಡಿಸಿ ಪರಿಶೀಲನೆಗೆ ಒಳಪಡಿಸಬೇಕಿತ್ತು.  ನನ್ನ ಇಂಟರ್ ವ್ಯೂ ಕಾರ್ಡಿನಲ್ಲಿ ಜಿಲ್ಲಾ ವೈದ್ಯರಿಂದ ಅಂಗವಿಕಲತೆಯ ಬಗ್ಗೆ ಪ್ರಮಾಣ ಪತ್ರ ಬೇಕು ಎಂದು ತಿಳಿಸಿದ್ದು, ನಾನು ಅದು ಇಲ್ಲದಿದ್ದುದರಿಂದ ಏನು ಮಾಡುವುದು ಎಂದು ಗೊತ್ತಾಗದೇ ನೋಡುವ ಎಂದು ಹಾಗೇ ಸುಮ್ಮನೇ ಹೋಗಿದ್ದೆ.  ಮೂಲ ಸರ್ಟಿಫಿಕೇಟ್ ಗಳನ್ನು ಪರಿಶೀಲಿಸಿದ ಅಲ್ಲಿನ ಸಿಬ್ಬಂದಿಗಳು ನನಗೆ ಡಾ. ಭಾಸ್ಕರಾನಂದರು ಕೊಟ್ಟ ನನ್ನ ಅಂಗವಿಕಲತೆಯ ಪತ್ರ ನೋಡಿ “ಇದು ಆಗುವುದಿಲ್ಲ. ಜಿಲ್ಲಾ ವೈದ್ಯರಿಂದಲೇ ದೃಢಪತ್ರಿಕೆ ಬೇಕು. ಅದು ಇಲ್ಲದಿದ್ದರೆ ಇಂಟರ್ ವ್ಯೂ ಗೆ ಹಾಜರಾಗಲು ಆಗುವುದಿಲ್ಲ ಎಂದರು. ನನಗೆ ದಿಕ್ಕೇ ತೋರದ ಹಾಗಾಯಿತು. ಏನು ಮಾಡುವುದು ಗೊತ್ತಾಗಲಿಲ್ಲ. ಬೇರೆ ಅರ್ಜಿದಾರರ ದೃಢಪತ್ರಿಕೆಯನ್ನು ತೋರಿಸಿ “ಅಂತದ್ದೇ ಪೋಟೋ ಸಹಿತ ಇರುವ ನಿಗದಿತ ನಮೂನೆಯ ದೃಡಪತ್ರಿಕೆ ಆಗಬೇಕು” ಅಂದರು. ನನಗೆ ಭ್ರಮನಿರಸನವಾಯಿತು. ಅಲ್ಲಿಂದ ಸೀದಾ ಶಾರದೆಯವರ ಮನೆಗೆ ಬಂದು, ಅವರ ಗಂಡನವರಲ್ಲಿ “ ಹೀಗೆ ಹೀಗೆ ಆಯಿತು. ಬಂದದ್ದು ದಂಡ ಆಯಿತು. ನಿಮಗೆ ಯಾರದ್ದಾದರೂ ಪ್ರಭಾವ ಇದ್ದವರ ಪರಿಚಯವಿದೆಯೇ?” ಎಂದು ಕೇಳಿದೆ. ಅವರು “ಇಲ್ಲ” ಅಂದರು. ನನಗೆ ಅತೀವ ನಿರಾಶೆಯಾಯಿತು. ಮುಂದೇನು ಮಾಡಬೇಕು ತಿಳಿಯಲಿಲ್ಲ. ಮನಸ್ಸಿನ ಒಳಗೆ ಎಲ್ಲ ಖಾಲಿಯಾದಂತೆ ಅನ್ನಿಸಿತು. ಆಗಲೇ ಹನ್ನೊಂದು ಗಂಟೆಯಾಗಿತ್ತು.

(ಮುಂದುವರಿಯುವುದು)

ಶನಿವಾರ, ಅಕ್ಟೋಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 34

ಮನೆಯಲ್ಲಿ ಬೇಸಾಯವಿದ್ದರೂ ಎಲ್ಲವನ್ನೂ ಕೂಲಿಯವರಿಂದ ಮಾಡಿಸಿ ಕೂಲಿ ಕೊಟ್ಟು, ಆಗಬೇಕಾಗಿದ್ದುದರಿಂದ ಉತ್ಪತ್ತಿ ಅಷ್ಟಕ್ಕಷ್ಟೆ. ಆದರೂ ಸುರೇಶಣ್ಣ ಮತ್ತು ಮೇಳಕ್ಕೆ ಬಿಡುವು ಇದ್ದಾಗ ಚಂದ್ರ ಭಟ್ರು ಪೂರ್ತಿಯಾಗಿ ಕೆಲಸದವರ ಮೇಲೆ ಬಿಡದೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು. ಹಟ್ಟಿಯ ಗೊಬ್ಬರ ಹೊತ್ತು ಹೊಂಡಕ್ಕೆ ಹಾಕುವುದು, ಅಗೇಡಿಯಲ್ಲಿ ಹೆಂಗಸರು ಕಿತ್ತು ಕಟ್ಟುಮಾಡಿದ ಅಗೆಯನ್ನು ಒಂದು ಗದ್ದೆಯಿಂದ ಇನ್ನೊಂದಕ್ಕೆ ಸಾಗಿಸುವುದು, ಬತ್ತ ಒಣಗಿದಾಗ ಕೊಯ್ಲಿನ ಸಮಯದಲ್ಲಿ ಕೊಯ್ಲು ಮಾಡಿ, ಮನೆಗೆ ಸಾಗಿಸಿ ಜಪ್ಪುವುದು ಮುಂತಾದ ಎಲ್ಲದರಲ್ಲೂ ನಾನೂ ಸಹಾಯ ಮಾಡುತ್ತಿದ್ದೆ. ಏನೂ ಕೆಲಸವಿಲ್ಲದೇ ಇದ್ದಾಗಲೂ, ಸುಮ್ಮನೇ ಕುಳಿತಿರಲಾಗದೇ ಗದ್ದೆಯಲ್ಲಿ ಕುಳಿತು ಭತ್ತದ ಗಿಡದ ಬುಡದ ಭಾಗವನ್ನು ಬಹುಷ್ಯ ಅದಕ್ಕೆ ಕೂಳಿ ಅಂತ ಹೇಳುತ್ತಾರೆ ಅದನ್ನು ಕಿತ್ತುಕಿತ್ತು ರಾಶಿ ಹಾಕುತ್ತಿದ್ದೆ. ಅದನ್ನು ಹಟ್ಟಿಯಲ್ಲಿ ಗಂಟಿಗಳ ಕಾಲಬುಡದಲ್ಲಿ ಹಾಕಿದರೆ ಒಳ್ಳೆಯ ಗೊಬ್ಬರ ಆಗುತ್ತಿತ್ತು. ಆದರೆ ನನ್ನ ಆರೋಗ್ಯ ಒಂದೇ ಸಮನಾಗಿ ಇರುತ್ತಿರಲಿಲ್ಲ. ಉಬ್ಬಸ ಇತ್ತಲ್ಲ. ಅದಕ್ಕೆ ಸರಿಯಾಗಿ ಒಮ್ಮೆ ಸ್ವಲ್ಪ ನಿತ್ರಾಣ ಕಾಣಿಸಿಕೊಂಡು, ನನ್ನ ಎಡಕಾಲು ನೋಯಲು ಶುರುವಾಯಿತು. ಕುಂದಾಪುರದ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿದೆ. ಅವರು ತೊಂದರೆ ಇಲ್ಲ ಎಂದರೂ ಪೋಲಿಯೋ ಆದ ಕಾಲೇ ಆದ್ದರಿಂದ ನಡೆಯಲಾಗದ ಹಾಗೆ ಆದರೆ ಏನು ಮಾಡುವುದು? ಎಂದು ಹೆದರಿಕೆಯಾಗಿ ಸೀದಾ ಮಣಿಪಾಲಕ್ಕೆ ಹೋದೆ. ಅಲ್ಲಿ ಓಪಿಡಿಯಲ್ಲಿ ನನ್ನನ್ನು ಪರೀಕ್ಷೆ ಮಾಡಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು, “ಅದು ಹಾಗೆಯೇ, ಸುಮಾರು ನಲವತ್ತು, ಐವತ್ತು ವರ್ಷ ಆಗುತ್ತಿದ್ದ ಹಾಗೆ ಇನ್ನೂ ಸಪೂರವಾಗುತ್ತದೆ” ಎಂದು ಹೆದರಿಸಿಬಿಟ್ಟರು. ನನಗೆ ಗಾಬರಿಯಾಯಿತು.

ನನಗೆ, ಅಲ್ಲಿ ಭಾಸ್ಕರಾನಂದ ಎನ್ನುವ ಯಕ್ಷಗಾನ ಪ್ರೇಮಿಗಳೊಬ್ಬರು ಡಾಕ್ಟರ್ ಆಗಿದ್ದಾರೆ ಎಂದು ಯಾರೋ ಹೇಳಿದ್ದ ನೆನಪಾಯಿತು. ಆಗಲೇ ಅವರ ಎಪಾಯಿಂಟ್ಮೆಂಟ್  ತೆಗೆದುಕೊಂಡು ಹೋಗಿ ಭೇಟಿಯಾದೆ. ಪುಣ್ಯಕ್ಕೆ ಅವರು ನನ್ನ ಸಮಸ್ಯೆಗೆ ಸಂಬಂಧಿಸಿದ ಮೂಳೆಯ ತಜ್ಞರೇ ಆಗಿದ್ದರು. ಅವರಿಗೆ ನನ್ನ ಪರಿಚಯ ಮಾಡಿಕೊಂಡು ಕಾಲನ್ನು ತೋರಿಸಿದೆ. ಅವರು ನೀವು “ಉಪ್ಪೂರರ ಮಗನೇ, ನಿಮ್ಮನ್ನು ನೋಡಿ ಸಂತೋಷವಾಯಿತು” ಎಂದು ನನ್ನ ವಿಷಯ ಕೇಳಿಕೊಂಡು ನನ್ನ ಕಾಲನ್ನು ಪರಿಶೀಲಿಸಿದರು. ಏನೂ ತೊಂದರೆ ಇಲ್ಲ, ಎಂದರಲ್ಲದೇ ಅಪ್ಪಯ್ಯನ ಬಗ್ಗೆ ಅವರ ಹಾಡಿನ ಬಗ್ಗೆ ಹೇಳಿ ಹೊಗಳಿದರು. ನನ್ನ ಬಗ್ಗೆ ಕೇಳಿದರು.  ಮತ್ತು ನೊಂದುಕೊಂಡು, “ಈಗ ಕೆಲಸ ಎಲ್ಲ ಸಿಗುವುದು ಕಷ್ಟವೇ”, ಎಂದರು. ಕೊನೆಗೆ ಒಂದು ಉಪಾಯ ತಿಳಿಸಿದರು. ನಿಮಗೆ ಪೋಲಿಯೋ ಉಂಟಲ್ಲ ಅದನ್ನು ಉಪಯೋಗಿಸಿಕೊಂಡು ಅಂಗವಿಕಲ ಕೋಟಾದಲ್ಲಿ ಪ್ರಯತ್ನಿಸಬಹುದೋ ಎಂದರು. ಮತ್ತು ಅವರೆ, “ನಿಮಗೆ ನಾನು ಒಂದು ಪತ್ರವನ್ನು ಬರೆದು ಕೊಡುತ್ತೇನೆ. ಆದರೆ ನಮ್ಮದು ಖಾಸಗಿ ಆಸ್ಪತ್ರೆಯಾದ್ದರಿಂದ ಅದು ನಿಮಗೆ ಉಪಯೋಗ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಶಿಪಾರಸ್ಸು ಪತ್ರ ಎಂದು ಬೇಕಾದರೆ ತಿಳಿಯಿರಿ” ಎಂದು ಒಂದು ಪತ್ರವನ್ನು ಅಲ್ಲಿಯೇ ಬರೆದುಕೊಟ್ಟರು. ಕಾಲ ಎಲ್ಲರಿಗೂ ಒಂದೆ ತೆರನಾಗಿರುವುದಿಲ್ಲ. ಕೆಲವರಿಗೆ ಒಳ್ಳೆಯದು ಮಾಡಿದರೆ, ಕೆಲವರನ್ನು ಕಷ್ಟ ಕೊಟ್ಟು ಪರೀಕ್ಷೆ ಮಾಡುತ್ತದಂತೆ. ಆ ಕಷ್ಟ ಕಳೆದು ಸುಖ ಬಂದಾಗ ನಮಗೆ ಹಿಂದಿನದನ್ನು ಮರೆಯಲಿಕ್ಕೆ ಸಾಧ್ಯವಾಗುವುದಿಲ್ಲ. ಸುತ್ತಮುತ್ತ ಎಲ್ಲರೂ ಸುಖವಾಗಿ ಇದ್ದಾರೆ ಎನ್ನಿಸುವುದೂ, ಕಷ್ಟವೆಲ್ಲಾ ನನಗೊಬ್ಬನಿಗೇ ಬಂತು ಎನ್ನಿಸುವುದೂ ಸಹಜ. ನನಗೆ ಆದದ್ದೂ ಅದೆ. ಹಾಗಾಗಿ ಆಗಿನ ಮನಸ್ಥಿತಿ ಪರಿಸ್ಥಿತಿಗಳು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದ್ದು, ಬರೆಯಲು ತೊಡಗಿದಾಗ, ಅದರ ಇಂಚು ಇಂಚು ಒಂದೊಂದಾಗಿ ನೆನಪಿಗೆ ಬರುತ್ತಾ ಇದೆ. ಕೆಲವೊಮ್ಮೆ ಅದನ್ನು ಬರೆಯುವಾಗ ಈಗಲೂ ಕಣ್ಣಲ್ಲಿ ನೀರು ಜಿನುಗಿದ್ದಿದೆ. ಹಾಗೆ ಹೇಳುವುದಾದರೆ ಅಂದಿನ ಆ ಕಷ್ಟಗಳೆಲ್ಲ ಕಳೆದು ನನ್ನ ಕಾಲಮೇಲೆ ನಾನು ನಿಲ್ಲುವ ಹಾಗಾದ ಮೇಲೆ, ಬಂದ ಸುಖದ ಅನುಭವಗಳೇ ನನಗೆ ಅಷ್ಟು ನೆನಪಿಗೆ ಬರುತ್ತಿಲ್ಲ.

ನನ್ನ ಅಕ್ಕನ ಮಗ ವೆಂಕಟೇಶನೂ ಎಂ. ಎಸ್ಸಿ. ಮಾಡಿ ಕೆಲಸ ಹುಡುಕುತ್ತಿದ್ದ. ಅವನೂ ಮತ್ತು ನಾನು, ಒಮ್ಮೆ ಗೋವಾಕ್ಕೆ ಬ್ಯಾಂಕ್ ಪರೀಕ್ಷೆಗೆ ಒಟ್ಟಿಗೇ ಹೋಗಿ ಬರೆದು ಬಂದೆವು. ಅವನು ಅದರಲ್ಲೇ ಪಾಸ್ ಆಗಿ ಇಂಟರ್ ವ್ಯೂನಲ್ಲೂ ಗೆದ್ದು,  ಅವನಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಕೆಲಸವೂ ಸಿಕ್ಕಿತು. ಹಾಗೆ ಒಟ್ಟಿಗೇ ಕೆಲಸ ಹುಡುಕುವಾಗ, ಒಮ್ಮೆ “ಕೆಇಬಿಗೆ ಕಾಲ್ ಫಾರ್ ಮಾಡಿದ್ದಾರೆ. ನಾನೂ ಹಾಕುತ್ತೇನೆ. ನೀನು ಹಾಕು” ಎಂದು ಅದರ ವಿವರ, ವಿಳಾಸವನ್ನು ಅವನು ನನಗೆ ಕೊಟ್ಟಿದ್ದ. ನನ್ನ ಪಾಲಿಗೆ ಭಾಸ್ಕರಾನಂದರು ಕೊಟ್ಟ ಆ ಪತ್ರವೇ ವರದಾನವಾಯಿತು. ಅದನ್ನೇ ಲಗತ್ತಿಸಿ ಕೆಇಬಿಯ ಸಹಾಯಕ ಹುದ್ದೆಗೆ ಅರ್ಜಿಯನ್ನು ಹಾಕಿದೆ.

ಇಂತಹ ಹೊತ್ತಿನಲ್ಲಿ, ನನ್ನ ಕಾಲೇಜಿನ ಸ್ನೇಹಿತ, ರಾಜ ಹೆಬ್ಬಾರ, ಒಮ್ಮೆ ನಮ್ಮ ಸಂಬಂಧಿಕರ ಒಂದು ಊಟದಲ್ಲಿ ಭೇಟಿಯಾದ. ಸಿಕ್ಕಿದವ “ಏನು ಮಾಡುತ್ತಿದ್ದೀ?” ಎಂದು ಕೇಳಿದ. ನಾನು ಹೇಳಿದೆ. ಅವನೂ ಆಗ ಬೈಂದೂರಿನ ಆಚೆ ಶಿರೂರಿನ ಪೇಟೆಯಲ್ಲಿ ಸ್ವಂತವಾಗಿ “ಸಿಂಡಿಕೇಟ್ ಫಾರ್ಮಾ” ಎನ್ನುವ ಔಷಧದ ಅಂಗಡಿ ಇಟ್ಟಿದ್ದ. “ಕೆಲಸ ಸಿಗುವವರೆಗೆ ನನ್ನ ಜೊತೆ ಇರಬಹುದಲ್ಲ. ಬಾ” ಅಂದ. ನನಗೆ ಅದೂ ಸರಿಯೆನಿಸಿತು. ಸರಿ, ಮಾರನೇ ದಿವಸವೇ ನನ್ನ ಬಟ್ಟೆಬರೆಗಳನ್ನು ಕಟ್ಟಿಕೊಂಡು ಶಿರೂರಿಗೆ ಹೋದೆ. ಓನರ್ ಪರವೂರಿನಲ್ಲಿದ್ದು ಖಾಲಿ ಇರುವ ಒಂದು ಮನೆಯು, ನನ್ನ ವಾಸಕ್ಕೆ ಸಿಕ್ಕಿತು. ಬೆಳಿಗ್ಗೆ ಕಾಫಿ,ತಿಂಡಿ ಮಧ್ಯಾಹ್ನ, ರಾತ್ರಿ ಊಟ ಹೋಟೆಲಿನಲ್ಲಿ ಆಗುತ್ತಿತ್ತು. ಅಲ್ಲಿ ಲೆಕ್ಕ ಬರೆದಿಟ್ಟು ಒಟ್ಟಿಗೆ ಪಾವತಿಸುವುದು. ಹಗಲು ಅವನ ಔಷಧದ ಅಂಗಡಿಯಲ್ಲಿ ಕೆಲಸ ಮಾಡುವುದು. ಹೀಗೆಯೇ ಮೂರ್ನಾಲ್ಕು ತಿಂಗಳು ಕಳೆಯಿತು.

ನಾನು ಶಿರೂರಿನಲ್ಲಿ ರಾಜ ಹೆಬ್ಬಾರನ ಔಷಧದ ಅಂಗಡಿಯಲ್ಲಿ ಇದ್ದಾಗ ಒಮ್ಮೆ ಮನೆಗೆ ಹೋಗಲು ಕುಂದಾಪುರಕ್ಕೆ ಹೋಗುವ ಲಾರಿ ಹತ್ತಿದೆ. ಆಗ ಬಸ್ಸುಗಳು ಕಡಿಮೆ ಇದ್ದು, ಹೆಚ್ಚಿನ ಬಸ್ಸುಗಳು ಸರ್ವೀಸ್ ಬಸ್ಸುಗಳಾಗಿದ್ದು ಎಲ್ಲಾ ಕಡೆಯಲ್ಲೂ ನಿಲ್ಲಿಸಿ ನಿಲ್ಲಿಸಿ ಹೋಗುತ್ತಿದ್ದುದರಿಂದ ನಾವು ಹೆಚ್ಚಾಗಿ ಲಾರಿಯಲ್ಲಿ ಪ್ರಯಾಣಮಾಡುವುದು ಸಾಮಾನ್ಯವಾಗಿತ್ತು. ಲಾರಿ ಹತ್ತಿದಾಗ ಅದರಲ್ಲಿ ಕಾಳಿಂಗ ನಾವಡರೂ ಇದ್ದರು. ಅದೂ ಇದೂ ಮಾತಾಡುತ್ತಾ ಎಲ್ಲಿ ಇರುವುದು? ಏನು ಮಾಡುವುದು? ಇತ್ಯಾದಿ ಕೇಳಿದ ಅವರು, ಯಕ್ಷಗಾನದ ಭಾಗವತಿಕೆಯಲ್ಲಿ ಅವರು ತಂದ ಕೆಲವು ಬದಲಾವಣೆಗಳ ಬಗ್ಗೆ ತಿಳಿಸಿದರು. ಅವುಗಳನ್ನು ಅಪ್ಪಯ್ಯ ಹೇಳುತ್ತಿದ್ದ ರೀತಿಯನ್ನು ಮೆಲುಕುಹಾಕಿದರು. ನಾನು, “ಈಚೀಚೆಗೆ ನಾನು ಆಟ ನೋಡುತ್ತಲಿಲ್ಲ” ಎಂದೆ. “ಬಿಡಬಾರದು ಮಾರಾಯ, ನಿಮ್ಮ ಅಪ್ಪಯ್ಯ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ನೀನು ಮುಂದುವರಿಸಬೇಕು” ಎಂದರು. ನಾನು, “ಅವರೇ ಮೇಳದ ಸುದ್ದಿ ಬೇಡ ಮಕ್ಕಳೇ, ಅದು ಸುಖದ ಬಾಳು ಅಲ್ಲ” ಎಂದು ಹೇಳುತ್ತಿದ್ದರು ಎಂದೆ. ಅದು ಗುರುಗಳ ಕಾಲಕ್ಕಾಯಿತು. ಈಗ ನನ್ನನ್ನೇ ನೋಡು, ನನಗೆ ಎಷ್ಟೆಲ್ಲ ಪ್ರಸಿದ್ಧಿ ಬಂದಿದೆ. ವಿಮಾನವನ್ನು ಹತ್ತಿಯಾಯಿತು. ನೀವು ಓದಿದ ಮಕ್ಕಳು ಯಕ್ಷಗಾನಕ್ಕೆ ಹೊಸತೇನನ್ನಾದರೂ ಕೊಡಬೇಕು. ಪ್ರಸಿದ್ಧಿಗೆ ಬರಬಹುದು ಎಂದರು. ನಾನು ಸುಮ್ಮನಾದೆ. ಅವರು ಯಕ್ಷಗಾನಕ್ಕೆ ಅವರು ಅಳವಡಿಸಿದ ಕಲಾವತಿ, ಶುದ್ಧ ಸಾವೇರಿ, ಷಣ್ಮುಖಪ್ರಿಯ ಮುಂತಾದ ರಾಗಗಳ ಬಗ್ಗೆ, ಹಳೆಯ ಪ್ರಸಂಗಗಳ ಕೆಲವು ಸಂದರ್ಭಗಳಲ್ಲಿ ಅವುಗಳನ್ನು ಬಳಸುತ್ತಿರುವ ಬಗ್ಗೆ ಒಂದೆರಡು ರಾಗಗಳನ್ನು ಹಾಡಿಯೇ ತೋರಿಸಿದರು. ಕುಂದಾಪುರ ಬಂದ ಕೂಡಲೇ ನಾನು ಬರುತ್ತೇನೆ ಎಂದು ಹೇಳಿ ಲಾರಿಯಿಂದ ಇಳಿದೆ.

ನನಗೆ ಕೆಇಬಿಯಲ್ಲಿ ಕೆಲಸ ಸಿಕ್ಕಿದ ಮೇಲೆ,  ಉಡುಪಿಯಲ್ಲಿ ಇರುವಾಗ, ಅವರ ತಂದೆ ರಾಮಚಂದ್ರ ನಾವಡರಿಗೆ ಆರೋಗ್ಯ ಸರಿ ಇಲ್ಲದಾಗ, ಮಿತ್ರ ನರ್ಸಿಂಗ್ ಹೋಮ್ ಗೆ ಸೇರಿಸಿದ್ದರು. ನಾನು ಸುದ್ದಿ ತಿಳಿದು, ಮಾತಾಡಿಸಿಕೊಂಡು ಬರುವ ಎಂದು ಹೋದಾಗ ಅಲ್ಲಿ, ಕಾಳಿಂಗ ನಾವಡರು ಮತ್ತೊಮ್ಮೆ ಸಿಕ್ಕಿದರು. ಆಗಲೂ ಅವರು “ನೀನು ಭಾಗವತಿಕೆ ಕಲಿಯಬೇಕು. ಬೇಕಾದ್ರೆ ನಾನೇ ಹೇಳಿ ಕೊಡ್ತೆ. ನನ್ನ ಜೊತೆಗೆ ಬಾ. ಈ ಕೆಲಸ ಎಲ್ಲ ಎಂತಕ್ಕೆ” ಎಂದರು. ನಾನು ಮುಖ ಕೆಳಗೆ ಹಾಕಿ “ನನ್ನ ಇಳಿಸ್ವರ ಭಾಗವತಿಕೆಗೆ ಹೊಂದುವುದಿಲ್ಲ. ಅಪ್ಪಯ್ಯ ಇರುವಾಗಲೇ ಒಮ್ಮೆ ಹಾಗೆ ಹೇಳಿದ್ದರು. ತುಂಬಾ ಪ್ರಯತ್ನ ಬೇಕು ಅಂತ. ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ ಮರ್ರೆ. ಈಗ ಕೆಲಸವೂ ಸಿಕ್ಕಿಯಾಯಿತಲ್ಲ ಇದನ್ನು ಬಿಟ್ಟು ಬರುವುದುಂಟೇ? ಎಂದೆ. ಅವರು “ಮತ್ತೆಂತ ಇಲ್ಯಾ? ಸ್ವರ ಏರಿಸಿದ ಕೂಡಲೇ ಭಾಗವತರಾತ್ರಾ? ಇಳೀ ಸ್ವರದಲ್ಲೂ. ಪರಿಣಾಮಕಾರಿಯಾಗಿ ಒಳ್ಳೇ ರೀತಿ ಪದ್ಯ ಹೇಳುಕಾತ್ತು. ಅಭ್ಯಾಸ ಮತ್ತು ಸ್ವಂತಿಕೆ ಬೇಕು ಅಷ್ಟೆ”. ಎಂದು ಹೇಳಿದರು. ನಂತರ “ಮಾರಾಯಾ ನನಗೂ ಒಂದು ಆಸೆ ಇತ್ತು. ನಾನು, ನನಗೆ ಕಲಿಸಿದ, ಬಾಳು ಕೊಟ್ಟ ಗುರುಗಳ ಮಗನಿಗೆ ಭಾಗವತಿಕೆ ಕಲಿಸಿ, ನನ್ನ ಗುರು ಋಣ ತೀರಿಸಬೇಕು ಅಂತ” ಎಂದು ನಗಾಡಿದರು.  ನಾನೂ “ಬೇಡ ಮಹರಾಯರೆ, ಅದು ನಿಮಗೆ ಆಗಲಿಕ್ಕಿಲ್ಲ” ಎಂದು ನಕ್ಕುಬಿಟ್ಟೆ. ಅವರು ಅಂದು ಅದನ್ನು ಸೀರಿಯಸ್ಸಾಗಿ ಹೇಳಿದ್ದರೋ, ತಮಾಷೆಗೆ ಹೇಳಿದ್ದರೋ ಗೊತ್ತಿಲ್ಲ.  ಅಂತೂ ನಾನು ಅವರ ಹತ್ತಿರ ಭಾಗವತಿಕೆ ಕಲಿಯಲು ಹೋಗಲಿಲ್ಲ. ಅದರಿಂದ ನನಗೆ ನಷ್ಟವಾಯಿತೋ ಇಲ್ಲವೋ, ಆದರೆ ಯಕ್ಷಗಾನಕ್ಕಂತೂ ಒಳ್ಳೆಯದೇ ಆಯಿತು ಬಿಡಿ.

(ಮುಂದುವರಿಯುವುದು)

ಶುಕ್ರವಾರ, ಅಕ್ಟೋಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 33

ಮರುದಿನ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ನಾನು ಶ್ರೀನಿವಾಸ ಶೆಟ್ರ ಮನೆಗೆ ಹೋದೆ. ಆಗ ಅವರು ಇನ್ನೂ ಶಾಸಕರಾಗಿರಲಿಲ್ಲ, ಹೆಚ್ಚೇಕೆ ರಾಜಕೀಯಕ್ಕೆ ಇಳಿದಿರಲಿಲ್ಲ. ಆಗಲೇ, ಅವರನ್ನು ಕಾಣಲು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿ, ಅವರಿಂದ ಸಹಾಯ ಪಡೆಯಲು, ಕುಟುಂಬ ವ್ಯಾಜ್ಯ ಜಾಗದ ವಿವಾದಗಳನ್ನು ಬಗೆಹರಿಸಿಕೊಳ್ಳಲು, ಅಂತ ಹತ್ತಾರು ಮಂದಿ ಅಲ್ಲಿ ಬಂದು, ಅವರ ಮನೆಯ ಮುಂದಿನ ಜಗಲಿಯಲ್ಲಿ ಸಾಲಾಗಿ ಕುಳಿತಿದ್ದರು. ಎಲ್ಲರಿಗೂ ಕಾಫಿಯೂ ಬಂತು. ಟವೆಲ್ಲನಲ್ಲಿ ಮುಖವರೆಸಿಕೊಳ್ಳುತ್ತಾ, ಲುಂಗಿ ಬನಿಯನ್ನಿನ್ನಲ್ಲಿ ಹೊರಗೆ ಬಂದ ಶೆಟ್ರು, ಕುಳಿತುಕೊಂಡು ಕಾಯುತ್ತಿದ್ದ ಎಲ್ಲರನ್ನೂ ಮಾತಾಡಿಸಿದರು, ಕೊನೆಗೆ ನನ್ನನ್ನು ನೋಡಿ “ಹೋ ಉಪ್ಪೂರ್ರೆ, ನೀವೂ ಬಂದಿರ್ಯಾ? ನಾನ್ ಅವ್ರಿಗ್ ಪೋನ್ ಮಾಡಿ ಹೇಳಿದಿ. ಒಂದ್ಸಲ ಹೋಯಿ ಬಪ್ಪ. ನಾಳೆ ನಾಡದಾಂಗ್ ಬನ್ನಿ” ಅಂದರು. ನಾಳೆ ಬೆಳಿಗ್ಗೆ ನಾನು ಮತ್ತೆ ಅವರ ಮನೆಗೆ ಹೋದೆ. ಅವರು “ಹೋ ಇವತ್ ಆಯ್ಲಿಲ್ಲೆ ಮರಾಯ್ರೆ. ನನಗೆ ಸ್ವಲ್ಪ ಬೇರೆ ಅರ್ಜೆಂಟ್ ಕೆಲ್ಸ ಬಂತ್. ನಾಳಿಗ್ ಹೋಪ”. ಅಂದ್ರು. ಮತ್ತೆ ಮರುದಿನ ಬೆಳಿಗ್ಗೆ ನಾನು ಅಲ್ಲಿ ಹಾಜರ್. ಅವರು ಬಿಜಿ. “ಹೋ ನಿಮ್ಮನ್ ಕಂಡ್ರೆ ನಂಗೇ ಬೇಜಾರಾತ್ ಮರ್ರೆ. ಇವತ್ ಬೇಡ. ನಾಳಿಗ್ ಖಂಡಿತಾ”. ಎನ್ನುವರು. ಮತ್ತೊಂದು ದಿನ ಹೋದಾಗ, ನಾವು ಹೋಗ ಬೇಕಾದವರ ಮನೆಗೆ, ಪೋನ್ ಮಾಡಿದರು. “ಅವರು ಇವತ್ ಊರಲ್ ಇಲ್ಲೆ ಅಂಬ್ರು. ನಾಳೆ ಕಾಂಬ” ಅನ್ನುವರು. ಅಲ್ಲಿ ಬರುವ ಹತ್ತಾರು ಮಂದಿ, ಅವರ ಸಹಾಯ ಬೇಡಿಬಂದವರಲ್ಲಿ ನಾನೂ ಒಬ್ಬ. ಅವರನ್ನು ಬಿಟ್ರೆ ನನಗೆ ಬೇರೆ ದಾರಿಯೇ ಇರಲಿಲ್ಲ.

ಆಗಲೇ ಶುರುವಾದ ಉಬ್ಬಸ ಕಾಯಿಲೆ ಬೇರೆ. ಮಧ್ಯರಾತ್ರಿ ಒಮ್ಮೆಲೆ ಹೆಚ್ಚಾಗುತ್ತಿತ್ತು. ಕೆಲವು ದಿನ ರಾತ್ರಿ ಇದ್ದಕ್ಕಿಂತೆಯೇ ಎಚ್ಚರಾಗಿ ಉಸಿರಾಡಲು ಕಷ್ಟವಾಗಿ, ನಿದ್ರೆ ಮಾಡಲಿಕ್ಕೇ ಆಗುತ್ತಿರಲಿಲ್ಲ. ಕುಳಿತೇ ಬೆಳಗು ಮಾಡಬೇಕಾದ ಪರಿಸ್ಥಿತಿ. ಒಮ್ಮೊಮ್ಮೆ ಅಮ್ಮನೂ ನನ್ನ ಸ್ಥಿತಿ ನೋಡಿ ಬಂದು ಹತ್ತಿರ ಕುಳಿತು ಕೊಳ್ಳುತ್ತಿದ್ದಳು. ನಾನು ಅದೇ ಒದ್ದಾಟದಲ್ಲಿ, ಅವಳಿಗೆ ಏನಾದರೂ ಕತೆ ಹೇಳುತ್ತಿದ್ದೆ. ನನ್ನ ಸಮಾಧಾನಕ್ಕೆ ಅವಳೂ ಕೇಳಿದಂತೆ ಮಾಡುತ್ತಿದ್ದಳು. ಎಲ್ಲಾ ಕಡೆ ಮದ್ದೂ ಮಾಡಿಯಾಯಿತು. ಅದರ ಮಧ್ಯೆ ಪ್ರತೀ ದಿನ ಬೆಳಿಗ್ಗೆ ಹಾಲಾಡಿ ಶ್ರೀನಿವಾಸ ಶೆಟ್ರ ಮನೆಯ ದರ್ಶನ. ಕೆಲವೊಮ್ಮೆ ನನಗೇ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗೇ ಒಂದೂ ಒಂದುವರೆ ತಿಂಗಳೇ ಕಳೆದಿರಬೇಕು. ಇಂಟರ್ ವ್ಯೂ ಕಾರ್ಡ್ ಬಂದು ಸಂದರ್ಶನದ ದಿನವೂ ಹತ್ತಿರ ಬಂದಾಯಿತು. ಶೆಟ್ರು ಬಿಜಿ. “ಹೆದರಬೇಡಿ ಉಪ್ಪೂರ್ರೆ, ಎಲ್ಲ ಮಾಡ್ವ” ಎಂದು ಧೈರ್ಯ ಬೇರೆ ಕೊಡುತ್ತಾರೆ. ನನಗೆ ಆತಂಕ.

 ಅಂತೂ ಇಂಟರ್ ವ್ಯೂಗೆ ಇನ್ನು ಎರಡು ದಿನ ಇದೆ ಎನ್ನುವಾಗ, ಅವರ ಬೈಕಿನಲ್ಲಿ ನನ್ನನ್ನು ಕೂರಿಸಿಕೊಂಡು, ಶಿರಿಯಾರದ ಹತ್ತಿರ ಒಳರಸ್ತೆಯಲ್ಲಿ ಸುಮಾರು ಎರಡು ಫರ್ಲಾಂಗ್ ದೂರ ಹೋಗಿ, ಒಬ್ಬ ಹಿರಿಯರ ಮನೆಗೆ ಕರೆದುಕೊಂಡು ಹೋದರು. ಅವರಿಗೆ ನನ್ನ ಪರಿಚಯ ಮಾಡಿಸಿ “ಇವರಿಗೆ ನೀವೊಂದು ಸಹಾಯ ಮಾಡಲೇಬೇಕು” ಎಂದು ನನ್ನ ಕುರಿತು ಹೇಳಿದರು. ಆ ವೃದ್ಧರು ಒಪ್ಪಿ, ಒಂದು ಪತ್ರ ಬರೆದು ನನಗೆ ಕೊಟ್ಟರು. “ಕೆಲಸ ಸಿಕ್ಕಿದ ಮೇಲೆ ನನ್ನನ್ನು ಮರೆಯಬಾರದು. ಒಂದು ಎಲ್.ಐ.ಸಿ. ಪಾಲಿಸಿ ಮಾಡಿಸಬೇಕು” ಅಂದರು. ಅಷ್ಟೇ ಬೇಡಿಕೆ. “ಅದು ಅಡ್ಡಿಲ್ಲಪ್ಪ. ನಾನು ಆ ಬಗ್ಗೆ ಗ್ಯಾರಂಟಿ ಕೊಡ್ತೇ” ಎಂದು ಶೆಟ್ರೇ ಹೇಳಿಯಾಯಿತು. ನಾನೂ ಒಪ್ಪಿದೆ.

ಅಂತೂ ಇಂಟರ್ ವ್ಯೂ ನ ಹಿಂದಿನ ದಿನ ಬಳ್ಳಾರಿಗೆ ಹೋಗಿ ಚಯರ್ ಮೆನ್ ರ ಮನೆ ಹುಡುಕಿ, ಅವರಿಗೆ ಆ ಪತ್ರವನ್ನು ಕೊಟ್ಟೆ. ಅವರು, “ಮರುದಿನ ಬಂದು ಇಂಟರ್ ವ್ಯೂ ಗೆ ಹಾಜರಾಗಿ. ಮತ್ತೆ ನೋಡುವ”. ಅಂತ ಹೇಳಿದರು. ನಾನು ಮರುದಿನ ಇಂಟರ್ ವ್ಯೂ ಗೆ ಹಾಜರಾದೆ. ಸುಮಾರಾಗಿ ಆಯಿತು. ಕೊನೆಗೆ ಅಲ್ಲಿಂದ, ಹತ್ತಿರವೇ ಇರುವ ಮಂತ್ರಾಲಯಕ್ಕೆ ಹೋಗಿ, ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿಕೊಂಡು ಮನೆಗೆ ಬಂದು ಸೇರಿದೆ. ಮರುದಿನವೇ ಶೆಟ್ರ ಮನೆಗೆ ಹೋಗಿ, “ಹೀಗೆ ಹೀಗೆ ಆಯಿತು” ಅಂದೆ. ಅವರು. “ಹೆದರಬೇಡಿ ಉಪ್ಪೂರ್ರೆ, ನಾನು ಮತ್ತೊಮ್ಮೆ ಅವರಿಗೆ ನೆನಪು ಮಾಡ್ತೇ. ದೇವರು ಒಳ್ಳೇದು ಮಾಡ್ತಾ”. ಅಂದರು.

ವರದಾ ಗ್ರಾಮೀಣ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ನ ಸ್ವಾಧೀನದಲ್ಲಿದ್ದ ಬ್ಯಾಂಕ್ ಆಗಿದ್ದ ಕಾಲ ಅದು. ನಾನು ಮಕ್ಕಳ ಮೇಳದ ತಿರುಗಾಟದಲ್ಲಿದ್ದಾಗ ಪರಿಚಯವಿದ್ದ ಸಿಂಡಿಕೇಟ್ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಕೆ.ಎಮ್. ಉಡುಪರು ಆಗ ಮಣಿಪಾಲದಲ್ಲಿದ್ದಿದ್ದರು. ಅವರ ಮನೆಗೂ ಹೋಗಿ ಬಂದೆ. “ನಾನು ಗ್ರಾಮೀಣ ಬ್ಯಾಂಕ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ” ಎಂದು  “ಏನಾದರೂ ಮಾಡಿ ನನಗೆ ಕೆಲಸಕೊಡಿಸಲು ಸಾಧ್ಯವೇ?” ಎಂದು ಅವರನ್ನೂ ಕೇಳಿಕೊಂಡೆ. ಅವರು ಪ್ರಯತ್ನಿಸುವ ಎಂದು ನನ್ನಲ್ಲಿದ್ದ ವಿವರಗಳನ್ನೆಲ್ಲ ಪಡೆದರು. ಆದರೆ ಅವರ ಪ್ರಯತ್ನದಿಂದ ಆ ಬ್ಯಾಂಕಿನ ಇಂಟರ್ವ್ಯೂ ನಲ್ಲಿ ಪಾಸಾದರೂ ನನ್ನ ಹೆಸರು ಆಯ್ಕೆಯಾದವರ ಪಟ್ಟಿಯಲ್ಲಿ ವೈಟಿಂಗ್ ಲೀಸ್ಟ್ ನಲ್ಲಿ ಬಂತು. ಅಲ್ಲಿಗೆ ಮತ್ತೆ ನನ್ನ ಅದೃಷ್ಟ ಕೈಕೊಟ್ಟಿತು.

ಒಮ್ಮೆ ನಾನು ಮನೆಯಲ್ಲಿ ಸುಮ್ಮನೇ ಹೀಗೆ ಕುಳಿತಿರುವಾಗ, ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದ. ನೋಡಲು ಗಟ್ಟಿ ಮುಟ್ಟಗಿದ್ದ. ಏನಾದರೂ ಕೊಡಿ ಸ್ವಾಮೀ ಅಂದ. ಅವನನ್ನು ನೋಡಿದ ಕೂಡಲೇ ನನಗೆ, “ಇಷ್ಟು ಗಟ್ಟಿ ಇದ್ದವರು, ದುಡಿದು ತಿನ್ನಬಾರದೇ?” ಅನ್ನಿಸಿ, ಅವನಿಗೆ ಅದನ್ನು ಹೇಳಿದೆ. “ನೋಡಪ್ಪ ನಾನೂ ಕೆಲಸ ಇಲ್ಲದ ನಿರುದ್ಯೋಗಿ. ಮನೆಯಲ್ಲಿ ಏನೋ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ನೀನೂ ಹಾಗೆಯೇ, ಇನ್ನೊಬ್ಬರ ಮನೆಯಲ್ಲಿ ದುಡಿದಾದರೂ ತಿನ್ನಬಾರದೇ?”. ಅದಕ್ಕೆ ಅವನು “ನಿಮಗಾದರೆ ಆಸ್ತಿ ಇದೆ, ಮನೆ ಇದೆ. ನನಗೆ ಏನಿದೆ?. ಅಲ್ಲದೇ ಗುರುತು ಪರಿಚಯವಿಲ್ಲದ ನನಗೆ ಯಾರು ಕೆಲಸ ಕೊಡುತ್ತಾರೆ” ಅಂದ. ನನಗೂ ಕೆಣಕಿದಂತಾಯಿತು. ನಾನು, “ಹಾಗಾದರೆ ನಾನು ಕೆಲಸ ಕೊಡುತ್ತೇನೆ. ಇವತ್ತು ನನ್ನ ಜೊತೆಗೆ ಇದ್ದು ತೋಟದಲ್ಲಿ ಕೆಲಸ ಮಾಡು. ಸಂಜೆ ನಿನಗೆ ಮುವ್ವತ್ತು ರೂಪಾಯಿ ಕೊಡುತ್ತೇನೆ” ಅಂದೆ. ಅವನು ಮೊದಲು ಸ್ವಲ್ಪ ಅನುಮಾನಿಸಿದರೂ ಕೊನೆಗೆ ಒಪ್ಪಿಯೇ ಬಿಟ್ಟ.

ನಾನು ಅಂತಹ ಮೈಗಳ್ಳರ ವಿಷಯ ತಿಳಿದವನಾಗಿ ಅಷ್ಟಕ್ಕೇ ಅವನು ಓಡಿ ಹೋಗುತ್ತಾನೆ ಎಂದು ಭಾವಿಸಿದ್ದೆ.  ಅಮ್ಮ, “ನಿಂಗ್ ಬೇರೆ ಕೆಲಸ ಇಲ್ಲ, ಸುಮ್ನೇ ಎಂಟಾಣೆ ಕೊಟ್ಟು ಕಳಿಸೂಕಾಗ್ದಾ?” ಅಂದಳು. ಅವನು ನಿಂತೇ ಇದ್ದ. ನಾನು ಅವನಿಗೆ ಒಂದು ಹಾರೆಯನ್ನು ಕೊಟ್ಟು, ನಮ್ಮ ತೋಟಕ್ಕೆ ಕರೆದೊಯ್ದು, ಒಂದು ಕಡೆ ತೋರಿಸಿ, “ಅಲ್ಲಿಂದ ನಮ್ಮ ಬಾವಿಯ ವರೆಗೆ ಒಂದು ತೋಡು ಮಾಡು ನೋಡುವ” ಎಂದು ಹೇಳಿದೆ. ಅವನೇನು ಮಾಡುತ್ತಾನೆ ಎಂದು ನೋಡುತ್ತಾ ಅಲ್ಲಿಯೇ ನಿಂತೆ. ಅವನು ಹೇಳದೇ ಕೇಳದೇ ಓಡಿಹೋದರೆ ನಮ್ಮ ಹಾರೆಯೂ ಹೋಗುತ್ತದಲ್ಲ. ಅವನು ಸ್ವಲ್ಪ ಹೊತ್ತು ಕೆಲಸ ಮಾಡಿದ ಹಾಗೆ ಮಾಡಿ, ಇದು ನನ್ನಿಂದ ಆಗುವುದಿಲ್ಲ ಎಂದು ಹಾರೆಯನ್ನು ಅಲ್ಲಿಯೇ ಬಿಸುಟು ಹೊರಟೇ ಹೋದ. ನಾನು “ಎಲ್ಲಿಗೆ ಹೋಗುತ್ತಿ? ಬಾ ಮಾರಾಯಾ” ಎಂದು ಕರೆದರೂ ಅವನು ವಾಪಾಸು ಬರಲಿಲ್ಲ. ನಾನು ನಕ್ಕು, ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿದೆ. ಅವಳು, “ನಿಂಗ್ ಮರುಳು, ಅವ್ರನ್ನೆಲ್ಲ ಸಮಾ ಮಾಡೂಕಾತ್ತಾ? ಊರು ಉದ್ದಾರ ಮಾಡೂಕೆ ಹೋದ್ರೆ ಮತ್ತೆಂತ ಆತ್?“ ಎಂದು  ನಗಾಡಿದಳು.

(ಮುಂದುವರಿಯುವುದು)

ಗುರುವಾರ, ಅಕ್ಟೋಬರ್ 19, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 32

ಹಾಲಾಡಿ ಪೇಟೆಗೆ ಹೋಗಿದ್ದಾಗ ಒಮ್ಮೆ ರಾಮಣ್ಣ ಶೆಟ್ರು ಎಂಬವರು ಸಿಕ್ಕಿದರು. “ಈಗ ಎಲ್ಲಿದ್ದೀರಿ? ಏನು ಮಾಡುತ್ತಿದ್ದೀರಿ?” ಎಂದು ಮಾತಿಗೆ ತೊಡಗಿದ ಅವರು, ಆ ವರ್ಷ ಹಾಲಾಡಿ ಮರ್ಲಚಿಕ್ಕು ದೇವಸ್ಥಾನದ ಆಡಳಿತ ಮುಕ್ತೇಸರರಾಗಿದ್ದರೆಂದೂ, ಹಾಲಾಡಿ ಮೇಳವನ್ನು ವಹಿಸಿಕೊಂಡಿದ್ದೇನೆಂದು ಹೇಳಿದರು. ಹಾಗೆ ಮಾತಾಡುತ್ತಾ, “ಉಪ್ಪೂರ್ರೆ, ನಂಗೊಂದು ಒಳ್ಳೆ ಹೊಸ ಪ್ರಸಂಗ ಬರ್ದು ಕೊಡಿ ಕಾಂಬ. ಒಳ್ಳೆ ರೈಸಕ್ ಕಾಣಿ” ಅಂದರು. ನಾನು, “ನಾವು ಬರ್ದದ್ದೆಲ್ಲ ಈಗಿನ ಕಲಾವಿದರಿಗೆ, ಪ್ರೇಕ್ಷಕರಿಗೆ ಆತಿಲ್ಲೆ ಮರ್ರೆ” ಅಂದರೂ ಬಿಡಲಿಲ್ಲ. ಒತ್ತಾಯಿಸಿದರು. ಮಾರ್ವಿ ವಾದಿರಾಜ ಹೆಬ್ಬಾರರು ಬರೆದು ಕೊಟ್ಟ “ಹಾಲಾಡಿ ಕ್ಷೇತ್ರ ಮಹಾತ್ಮೆ” ಪ್ರಸಂಗ, ಯಶಸ್ವಿಯಾಗಿ ಆಡುತ್ತಿದ್ದಾರೆ ಎಂದೂ. ಹೋದಲ್ಲೆಲ್ಲಾ ಹರಕೆ ಬಯಲಾಟಕ್ಕೆ ಅದೇ ಪ್ರಸಂಗವಾಗುತ್ತಿದೆ ಎಂದೂ ಹೊಗಳಿದರು. ಸರಿ ನಾನು ನೋಡುವ ಎಂದು ಹೇಳಿ, ಮನೆಗೆ ಬಂದವನೇ, ಒಂದು ಕಾಲ್ಪನಿಕ ಕತೆಯನ್ನು ಹೆಣೆದು, ಅದರಲ್ಲಿ ಬರುವ ಪಾತ್ರಗಳಿಗೆಲ್ಲಾ ಯಕ್ಷಗಾನದ ರಾಗಗಳ ಹೆಸರನ್ನು ಇಟ್ಟು, ಪದ್ಯ ಬರೆಯಲು ಶುರುಮಾಡಿದೆ. ಕತೆಯಲ್ಲಿ ಕುತೂಹಲದ, ಸ್ವಾರಸ್ಯಕರವಾದ ಆಂಶಗಳಿಗೇನೂ ಕೊರತೆ ಇರಲಿಲ್ಲ. ಅಂತೂ ಒಂದು ಹದಿನೈದು ದಿನಗಳಲ್ಲಿ  ನನ್ನ “ಮೋಹನ ಕಲ್ಯಾಣಿ “ ಎಂಬ ಪ್ರಸಂಗ ಸಿದ್ಧವಾಯಿತು. ಅದರ ಮೂರು ಪ್ರತಿ ಮಾಡಿ, ಎರಡು ಪ್ರತಿಯನ್ನು ಹಾಲಾಡಿಗೆ ಹೋಗಿ ರಾಮಣ್ಣ ಶೆಟ್ರನ್ನು ಕಂಡು, ಮುಟ್ಟಿಸಿ, “ಟ್ರಯಲ್ ಮಾಡುವುದಾದರೆ, ಹೇಳಿ ಕಳಿಸಿ. ಬರುತ್ತೇನೆ” ಎಂದೆ.

ಆದರೆ ಅವರು ಅದಾಗಿ ಒಂದೇ ವಾರದಲ್ಲಿ, ”ಬನ್ನಿ ಉಪ್ಪೂರರೇ, ಇವತ್ತು  ಹಾಲಾಡಿ ಮುಂಡುಕೋಡಿನ ಹತ್ರ ನಿಮ್ದೇ ಪ್ರಸಂಗ. ಎಲ್ಲಾ ತಯಾರಿ ಅವರೇ ಮಾಡಿಕೊಂಡಿರಂಬ್ರು. ನೀವು ಬಂದ್ರ್ ಸಾಕು” ಅಂದರು. ನಾನು “ಆಯ್ತು” ಎಂದು ನನ್ನದೇನಾದರೂ ಸಹಾಯ ಬೇಕಾದೀತು ಎಂದು, ಆ ದಿನ ಏಳು ಗಂಟೆಯ ಹೊತ್ತಿಗೇ ಹೋಗಿ ಚೌಕಿಯ ಒಂದು ಬದಿಯಲ್ಲಿ ಕುಳಿತೆ. ನನ್ನನ್ನು ಯಾರೂ ಮಾತಾಡಿಸುವವರಿಲ್ಲ. ಗುರುತಿದ್ದವರೂ “ನಮಸ್ಕಾರ” ಎಂದು ಹೇಳಿ, “ಇವತ್ತು ನಿಮ್ಮ ಪ್ರಸಂಗವಂಬ್ರಲೆ” ಎಂದು ನಕ್ಕು ಮಾತಾಡಿಸಿ ಹೋದರು. ಪ್ರಸಂಗದ ಬಗ್ಗೆ ಚರ್ಚಿಸುವುದಾಗಲೀ, “ಹೇಗೆ? ಏನು?” ಎಂದು ಕೇಳುವುದಾಗಲೀ, ಯಾರೂ ಮಾಡಲಿಲ್ಲ. ನಾನು “ಹೋ, ಅವರೇ ಎಲ್ಲ ಸಿದ್ಧತೆ ಮಾಡಿಕೊಂಡಿರಬಹುದು” ಎಂದು ಸುಮ್ಮನೆ ಕುಳಿತೆ.

ಸುಮಾರು ಹತ್ತು ಗಂಟೆಗೆ ಬಾಲಗೋಪಾಲ. ಪೀಠಿಕೆ ಸ್ತ್ರೀವೇಷ,  ಮುಗಿದು ಒಡ್ಡೋಲಗ ಶುರುವಾಯಿತು. ಸಂಗೀತಗಾರರಾಗಿ ಬಂದ ಮೊದಲ ಭಾಗವತರು ಪ್ರಸಂಗವನ್ನು ಶುರು ಮಾಡಿದರು. ನೋಡಿದರೆ ನಾನು ಬರೆದ ಪದ್ಯವನ್ನು ಬಿಟ್ಟು. ಬೇರೆ ಪದ್ಯ ಹೇಳುತ್ತಿದ್ದಾರೆ. ನನಗೆ ಯೋಚನೆಯಾಯಿತು. ನಿಧಾನವಾಗಿ ಕುಳಿತಲ್ಲಿಂದ ಎದ್ದು, ಭಾಗವತರ ಹಿಂದೆ ಹೋಗಿ ನಿಂತುಕೊಂಡು ನೋಡಿದೆ. ಪ್ರಸಂಗ ಪುಸ್ತಕ ನನ್ನದೆ. ಕೊನೆಗೆ ನನ್ನನ್ನು ನೋಡಿದ ಅವರು “ಮೊದಲ ಒಡ್ಡೋಲಗಕ್ಕೆ ಯಾವ ಪದ್ಯ,ಯಾವ್ದಾದ್ರೂ ಆತ್ತೆ” ಅಂತ ನಗಾಡಿ. “ಮುಂದಿನ ಪದ್ಯ ಇದರದ್ದೇ ಹೇಳೂದ್” ಅಂದರು. ನಾನು ಸುಮ್ಮನಾದೆ. ಮುಂದಿನ ಪದ್ಯ ಅದರದ್ದೇ ಆಯಿತು. ಆದರೆ ಅವರು ಮುಂಚಿತವಾಗಿ ಪ್ರಸಂಗ ಪುಸ್ತಕವನ್ನು ಓದಿಯೇ ಇರಲಿಲ್ಲ. ಪದ್ಯದ ಶಬ್ದಗಳನ್ನು ಹುಡುಕಿ ಹುಡುಕಿ, ತಪ್ಪು ತಪ್ಪಾಗಿ ಹೇಳುತ್ತಿದ್ದರು.

ನನಗೆ ತಡೆಯಲಾಗಲಿಲ್ಲ. “ಒಮ್ಮೆಯೂ ಓದಿಕೊಳ್ಳಲಿಲ್ಲವೇ?” ಎಂದು ಸ್ವಲ್ಪ ಜೋರಾಗಿಯೇ ಕೇಳಿದೆ. ಅವರು ನಕ್ಕು “ಇಲ್ಲ. ಪ್ರಸಂಗ ಪುಸ್ತಕ ಭಾಗವತರ ಹತ್ರವೇ ಇತ್ತು. ಇವತ್ತು ಬೆಳಗಾತ ನಮ್ಮ ಎಲ್ಲರನ್ನು ಕರೆದು, ಕತೆ ಹೀಗೆ ಹೀಗೆ ಎಂದದ್ದೇ ಸೈ” ಎಂದರು. ನಾನು “ಹಾಗಾದರೆ ಭಾಗವತರನ್ನು ಬರಲಿಕ್ಕೆ ಹೇಳಿ” ಅಂದೆ. ಅಷ್ಟರಲ್ಲಿ ಮತ್ತೊಂದು ಪದ್ಯವನ್ನೂ ಅವರು ಹೇಳಿದರು. ಆಗಲೇ ಯಾರೋ ಭಾಗವತರಿಗೆ ನಾನು ಅಲ್ಲಿ ನಿಂತಿದ್ದರ ಬಗ್ಗೆ ಹೇಳಿರಬೇಕು. ಅವರು ಮುಂಡಾಸು ಕಟ್ಟಿಕೊಂಡು ಗಡಿಬಿಡಿಯಲ್ಲಿ ಹಾಜರಾದರು. ಘಟ್ಟದ ಮೇಲಿನವರು. ಗೌಡರು. ಅವರ ಹೆಸರೂ ಮರೆತು ಹೋಗಿದೆ. ಒಳ್ಳೆಯ ಸ್ವರ ಕಂಚಿನ ಕಂಠ. ಯಾವ ಯಾವ ಪದ್ಯವನ್ನು ಹೇಗೆ ಹೇಳುವುದು? ಎಲ್ಲಿ ಯಾವ ರಾಗ ಬಳಸುವುದು ಎಂದು, ಅವರು ಗುರುತನ್ನೂ ಮಾಡಿ ಕೊಂಡಿರಲಿಲ್ಲ. ನನಗೆ ಆಶ್ಚರ್ಯವಾಯಿತು. ಪಾತ್ರಧಾರಿಗಳು ಮಾತಾಡುವಾಗ ಮುಂದಿನ ಪದ್ಯ ಹೇಗೆ ಹೇಳುತ್ತೀರಿ? ಎಂದು ಕೇಳಿದರೆ, ಅವರು ಹೇಗೆ ಹೇಳುವುದು? ಎಂದು ನನ್ನನ್ನೇ ಕೇಳಿದರು. ಅರ್ಥಧಾರಿಗಳಾದರೂ ಒಳ್ಳೊಳ್ಳೆಯವರೇ ಇದ್ದರು. ನರಾಡಿ ಭೋಜ ಶೆಟ್ಟಿ, ಹಳ್ಳಾಡಿ ಕೃಷ್ಣ, ಬೇಳಂಜೆ ಸುಂದರ ಮುಂತಾದ ಕಲಾವಿದರಿದ್ದರೂ ಎಲ್ಲರೂ ಬರೀ ಗಡಿಬಿಡಿ ಮಾಡಿಕೊಂಡು ಆಚೆ ಈಚೆ ತಿರುಗುತ್ತಿದ್ದರು.

 ಪುರಾಣ ಪ್ರಸಂಗವನ್ನು ಆಡುವಾಗಲೂ ಒಮ್ಮೆ ಚೌಕಿಯಲ್ಲಿ ಪರಸ್ಪರ ಮಾತಾಡಿಕೊಂಡು ಆಟ ಮಾಡಬೇಕು ಎನ್ನುವವ ನಾನು. ಹಿಂದೆ ಶಂಭು ಹೆಗಡೆಯವರು, ವಾಸುದೇವ ಸಾಮಗರಂತವರನ್ನು, ಹಾಗೆ ಚೌಕಿಯಲ್ಲಿ  ಪುಸ್ತಕವನ್ನು ತೆರೆದು, ಪದ್ಯವನ್ನು ಮನಸ್ಸಿಗೆ ತಂದುಕೊಂಡು, “ಈ ಪದ್ಯಕ್ಕ್ ನಾನು ಹೀಂಗೆ ಅರ್ಥ ಹೇಳ್ತೆ. ನೀನು ಹೀಂಗೆ ಹೇಳು” ಎಂದು ಚರ್ಚಿಸುತ್ತಿದ್ದುದನ್ನು ಕಂಡು, ಕೇಳಿದವವನು. ಪೂರ್ವ ತಯಾರಿಯಿಲ್ಲದ್ದರಿಂದ ಕೊನೆಗೆ ಎಲ್ಲಿಯವರೆಗೆ ಎಂದರೆ ಪ್ರಸಂಗದಲ್ಲಿರುವ ಕೆಲವು ಪದ್ಯಗಳನ್ನು, ಇದು ಬೇಡ, ಇದು ಹೇಳಿ, ಎಂದು ನಾನೇ ಹೇಳಬೇಕಾಯಿತು. ಅಂತೂ ಬೆಳಗಿನವರೆಗೂ  ನನ್ನ ಒದ್ದಾಟದಲ್ಲಿ “ಆಟ ಆಯಿತು”.

ನನಗೆ ತುಂಬಾ ಬೇಸರವಾಯಿತು. ಒಬ್ಬಿಬ್ಬರು ಕಲಾವಿದರು “ಹೇಗಾಯಿತು?” ಎಂದು ಕೇಳಲು ಬಂದು, ನನ್ನಿಂದ ಬೈಸಿಕೊಂಡರು. ಮತ್ತು ಕೆಲವರು “ಅದು ಮೊದಲ ಪ್ರದರ್ಶನ ಅಲ್ದಾ” ಎರಡು, ಮೂರು ಆಗುತ್ತಿದ್ದ ಹಾಗೆ ಹಿಡಿತಕ್ಕೆ ಬಂದು, ಸಮ ಆಗುತ್ತದೆ” ಎಂದು ನನಗೆ ಸಮಾಧಾನ ಹೇಳಿದರು. ಮುಂದೆ ಒಂದು ಹತ್ತು ಹದಿನೈದು ಪ್ರದರ್ಶನವೂ ಆಯಿತೆಂದು ಕೇಳಿದೆ. ಆದರೆ ನಾನು ನೋಡಲು ಹೋಗಲಿಲ್ಲ. ಮತ್ತೆ ಆ ಪ್ರಸಂಗ ಮೂಲೆಗೆ ಹೋಯಿತು. ಅದರಲ್ಲಿ ಅವರಿಗೆ ಬೇಕಾದ ಹಾಸ್ಯ, ಲಘು ದೃಶ್ಯಗಳು ಇರಲಿಲ್ಲ. ಪದ್ಯಗಳೂ ಉದ್ದುದ್ದ ಇದ್ದು, ಅದರ ಸಾಹಿತ್ಯವೂ ಅವರಿಗೆ ರುಚಿಸಲಿಲ್ಲ ಎಂದು ಕಾಣುತ್ತದೆ. “ಆ ಪ್ರಸಂಗದ ಪದ್ಯ ಸ್ವಲ್ಪ ಜಿಡ್ಕ್ ಮರ್ರೆ,” ಅಂದರಂದೂ ಕೇಳಿದೆ. ಆದರೂ ಒಮ್ಮೆಮ್ಮೆ ಅವರೊಟ್ಟಿಗೆ ಮೇಳಕ್ಕೆ ಹೋಗಿ, ಒಂದು ವೇಷಮಾಡಿ, ಅವರೊಂದಿಗೆ ಸಮಾಲೋಚನೆ ಮಾಡಿ ಅದನ್ನು ಆಡಬೇಕು ಎಂದು  ಅನ್ನಿಸುತ್ತಿತ್ತು. ಬೇರೆ ಉದ್ಯೋಗವಿಲ್ಲದೇ, ಒಮ್ಮೊಮ್ಮೆ ರಾಮಣ್ಣ ಶೆಟ್ರನ್ನು ಕೇಳಿಕೊಂಡು, ಮೇಳಕ್ಕೆ ಸೇರುವ ಅಂತ ಅನ್ನಿಸಿದ್ದೂ ಉಂಟು. ಆಗ ಅಪ್ಪಯ್ಯ ಹೇಳುತ್ತಿದ್ದ ಮಾತು ನೆನಪಾಗುತ್ತಿತ್ತು. ಅವರು, “ಮೇಳಕ್ಕೆ ಸೇರಿದರೆ ಮುಖ್ಯ ಕಲಾವಿದರಾದರೆ ಮಾತ್ರ ಅಡ್ಡಿಲ್ಲ. ಅಲ್ಲದಿದ್ದರೆ ಅವರ ಪಾಡು ಕಷ್ಟ. ದುಡಿಮೆ ಜೀವನಕ್ಕೆ ಸಾಕಾಗುವುದಿಲ್ಲ” ಎಂದಿದ್ದರು. ಹಾಗಾಗಿ ನಮ್ಮನ್ನು ಮೇಳಕ್ಕೆ ಸೇರಿಸಲು ತೀವ್ರವಾಗಿ ಒತ್ತಾಯಿಸಲಿಲ್ಲ. “ಮಕ್ಳೆ ಸಾಧ್ಯವಾದಷ್ಟು ಓದಿ. ಒಳ್ಳೆಯ ಸಂಸ್ಕಾರಯುತರಾಗಿ ಬಾಳಿದರೆ ಸಾಕು” ಎನ್ನುತ್ತಿದ್ದರು. ಹಾಗಾಗಿ ಮೇಳಕ್ಕೆ ಸೇರಿ, ಅದರಲ್ಲಿ ನನ್ನ ಭವಿಷ್ಯವನ್ನು ಕಂಡುಕೊಳ್ಳಲು ಧೈರ್ಯ ಸಾಲದಾಯಿತು. ನನ್ನೆದುರೇ ಇರುವ ಹಲವಾರು ಕಲಾವಿದರ ಪರಿಸ್ಥಿತಿಯನ್ನು ನೋಡಿದ ನನಗೆ, ಒಮ್ಮೆ ಹೋಗಿ ಜಯಿಸಲು ಆಗದಿದ್ದರೆ ನಾನು ಮೂಲೆಗೆ ಬಿದ್ದೇನು ಎಂದು ಭಯವಾಯಿತು. ಆದರೂ ಒಮ್ಮೆ, ಡಾ. ಶಿವರಾಮ ಕಾರಂತರಿಗೆ ಒಂದು ಪತ್ರ ಬರೆದು, “ನಾನು ಉಪ್ಪೂರರ ಮಗ, ನಾನು ಸ್ವಲ್ಪ ಕುಣಿತ ಕಲಿತಿದ್ದೇನೆ. ನನ್ನನ್ನು, ನಿಮ್ಮ ಯಕ್ಷರಂಗದ ಮೇಳಕ್ಕೆ ಸೇರಿಸಿಕೊಳ್ಳಬಹುದೇ” ಎಂದು ಕೇಳಿಕೊಂಡಿದ್ದೆ. ಅವರಿಂದ ಕೂಡಲೇ ಉತ್ತರ ಬಂತು, “ತಾನು ಪಾತ್ರಧಾರಿಗಳ ಆಯ್ಕೆ ಮಾಡುವ ವಿಷಯದಲ್ಲಿ ತಲೆ ಹಾಕುತ್ತಲಿಲ್ಲ. ನೀವು ಕು.ಶಿ. ಹರಿದಾಸ ಭಟ್ಟರನ್ನು ಕೇಳಬಹುದು” ಎಂದು. ಆದರೆ ನಾನು ಅದೇಕೋ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಟ್ಟೆ.

 ಏನಾದರೂ ಉದ್ಯೋಗಕ್ಕೆ ಪ್ರಯತ್ನಿಸುವುದೇ ನನ್ನ ಗುರಿಯಾಯಿತು. ಆ ಸಮಯದಲ್ಲಿ ನಾನು ಓದುವಕಾಲಕ್ಕೆ ಸರಿಯಾಗಿ ಮನಸ್ಸು  ಕೊಟ್ಟು ಓದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅನ್ನಿಸದಿರಲಿಲ್ಲ. ಅದೇ ಸಮಯದಲ್ಲಿ ವರದಾ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಅಂತ ಕೆಲವು ರಿಟರ್ನ ಟೆಸ್ಟ್ ಗಳಿಗೂ ಹೋಗಿ ಹಾಜರಾಗುತ್ತಿದ್ದೆ. ಕೊನೆಗೆ ಚಿಕ್ಕಮಗಳೂರು, ಕೊಡಗು ಗ್ರಾಮೀಣ ಬ್ಯಾಂಕ್ ಪರೀಕ್ಷೆಯಲ್ಲಿ ಪಾಸಾಗಿ ಖುಷಿಯಾಯಿತು. ವರದಾ ಗ್ರಾಮೀಣ ಬ್ಯಾಂಕ್ ಪರೀಕ್ಷೆ ಯಲ್ಲೂ ಪಾಸು. ಆದರೆ ಇಂಟರ್ ವ್ಯೂ ಎದುರಿಸಿ ಮೇಲೆ ಬೀಳಲು ಪ್ರಭಾವ ಇಲ್ಲದೇ ಆಗುವುದಿಲ್ಲ ಎಂದು ಎಲ್ಲರೂ ಹೇಳುವವರೆ. ಒಮ್ಮೆ ಹಾಲಾಡಿ ಶ್ರೀನಿವಾಸ ಶೆಟ್ರು ಸಿಕ್ಕಿ, ನೀವ್ ಉಪ್ಪೂರ್ರ ಮಗ ಅಲ್ದಾ ಈಗ ಎಲ್ಲಿದ್ರಿ? ಎಂದು ನನ್ನನ್ನು ಕೇಳಿದಾಗ,  ನನ್ನ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದೆ. ಅವರಿಗೆ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ನ ಚಯರ್ ಮ್ಯಾನ್ ರ ಸಂಬಂಧಿಕರೊಬ್ಬರ ಪರಿಚಯ ಇದೆಯೆಂದೂ. ತಾನು ಅವರಲ್ಲಿಗೆ ನನ್ನನ್ನು ಕರೆದೊಯ್ದು ಅವರಿಂದ ಪತ್ರ ಕೊಡಿಸುತ್ತೇನೆ ಎಂದೂ ಹೇಳಿದರು. ನನಗೆ ಅಷ್ಟೇ ಭರವಸೆ  ಸಾಕಾಯಿತು.

(ಮುಂದುವರಿಯುವುದು)

ಬುಧವಾರ, ಅಕ್ಟೋಬರ್ 18, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 31

ಆಗ ಪೇಪರ್ ಓದುವುದಕ್ಕೆ ಪ್ರತೀದಿನ ಸಂಜೆ, ಹಾಲಾಡಿಯವರೆಗೆ ಹೋಗಿ ಅಲ್ಲಿ ಗೋಳಿಯವರ ಅಂಗಡಿಯಲ್ಲಿ ಕುಳಿತು, ಅವರು ತರಿಸುವ ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳನ್ನು ಓದುತ್ತಿದ್ದೆ. “ಬೇಕಾಗಿದ್ದಾರೆ” ಎಂಬ ಅಂಕಣದಲ್ಲಿ ನನ್ನ ವಿದ್ಯೆಗೆ ಹೊಂದುವ ಪ್ರಕಟಣೆಯ ವಿವರಗಳನ್ನು ಗುರುತು ಮಾಡಿಕೊಂಡು ತಪ್ಪದೇ ಅರ್ಜಿ ಹಾಕುತ್ತಿದ್ದೆ. ಕೆಲವೊಂದು ಕಡೆ ಸಂದರ್ಶನಕ್ಕೆ ಅಂತ ಹೋಗಿಯೂ ಬಂದೆ. ಆದರೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಒಮ್ಮೆ ಸಕಲೇಶಪುರಕ್ಕೆ ಯಾವುದೋ ಕಂಪೆನಿಯ ಲ್ಯಾಬ್ ಲ್ಲಿ ಕೆಲಸ ಮಾಡುವ ಬಗ್ಗೆ ಸಂದರ್ಶನಕ್ಕೆ ಹೋದಾಗ, ಚಿಕ್ಕಮಂಗಳೂರಿನಲ್ಲಿ ಬಸ್ ಇಳಿದು ಮತ್ತೊಂದು ಬಸ್ ಹತ್ತುವಾಗ ಆ ಬಸ್ಸಿನಲ್ಲಿ ಹುಣಿಸೇಮಕ್ಕಿಯವರೊಬ್ಬರ ಪರಿಚಯವಾಗಿ, ಅವರ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೇ ಉಳಿದು ಸಂದರ್ಶನಕ್ಕೆ ಹೋಗಿ ಮರುದಿನ ಬಂದಿದ್ದೆ.  ಮತ್ತೊಮ್ಮೆ ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಗೂ ಟ್ಯೂಟರ್ ಕೆಲಸಕ್ಕಾಗಿ ಹೋಗಿ, ಒಂದು ದಿನ ಇದ್ದು ಮಕ್ಕಳಿಗೆ ಪಾಠವನ್ನೂ ಮಾಡಿದ್ದೆ. ಕೆಲವು ಸಲ ಅರ್ಜಿ ಹಾಕಿದ ಮೇಲೆ ಕರೆ ಬಂದರೂ ಅವರು ಕೊಡುವ ಸಂಬಳಕ್ಕೆ ಅಷ್ಟುದೂರ ಹೋಗಿ ಉಳಿಯುವ ಧೈರ್ಯ ಸಾಲದೇ ಸುಮ್ಮನಾಗುತ್ತಿದ್ದೆ. ನಿರಾಶೆಯಾಗಿ ಒಬ್ಬನೇ ಮನೆಯ ಪಕ್ಕದಲ್ಲಿರುವ ತೋಡಿನ ಅಂಚಿನಲ್ಲಿರುವ ಹುಣಿಸೇಮರದ ಅಡಿಯಲ್ಲಿ, ಒಮ್ಮೊಮ್ಮೆ ಅದೆಷ್ಟೋ ಹೊತ್ತು ಕುಳಿತುಕೊಂಡು ಅಳುತ್ತಿದ್ದೆ. ಅಪ್ಪಯ್ಯ ಇದ್ದಿದ್ದರೆ ಅವರ ಹೆಸರಿನ ಪ್ರಭಾವದಿಂದ ಅವರ ಗುರುತಿನ ಮೇಲೆ, ಇಷ್ಟರ ಒಳಗೆ ಏನಾದರೂ ಕೆಲಸ ಸಿಗುತ್ತಿತ್ತು ಅಂತ ಸಾವಿರ ಸಲ ಅನ್ನಿಸುತ್ತಿತ್ತು. ಶಿವರಾಮ ಕಾರಂತರ ಒಂದು ಕಾದಂಬರಿಯಲ್ಲಿ  ಇದ್ದ ಮಾತು ಪದೇ ಪದೇ ಮನಸ್ಸಿಗೆ ಬರುತ್ತಿತ್ತು. ಈ ಪ್ರಪಂಚದಲ್ಲಿ, ಕೆಲವರು ಜಯಿಸುವುದಕ್ಕಾಗಿ ಹುಟ್ಟುತ್ತಾರೆ. ಕೆಲವರು ಸೋಲುವುದಕ್ಕಾಗಿ. ಅದರಲ್ಲಿ ನಾಚಿಕೆಯೇನು? ನಾವು ಬಿತ್ತಿದ ಬೀಜದಲ್ಲಿ ಉಳಿಯುವುದು ನಾಲ್ಕಾದರೆ, ಅಳಿದುಹೋಗುವುದು ಒಂಬೈನೂರ ತೊಂಬತ್ತಾರು. ಬದುಕಿನಲ್ಲಿ ಹೋರಾಟವಿಲ್ಲದೇ ಸೋತರೆ ಅದು ಸೋಲು. ಹೋರಾಡಿ ಸೋತರೆ ಅದು ಸೋಲಲ್ಲ. ಅದರಿಂದ ಅವಮಾನವಿಲ್ಲ. ಕೆಲವರು ತಾವು ಬಯಸಿದಂತೆ ಬದುಕುತ್ತಾರೆ. ಆದರೆ ಹಲವಾರು ಮಂದಿ ಸಾವಿರಕ್ಕೊಬ್ಬರಾಗಿ ಹೇಳ ಹೆಸರಿಲ್ಲದೇ ಬದುಕಿ ಸಾಯುತ್ತಾರೆ. ಆ ಬಹು ಸಂಖ್ಯಾತರ ಪಕ್ಷ ನಮ್ಮದು. ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಒಂದು ದಿನ ಹಾಲಾಡಿಯಲ್ಲಿ ಪೇಪರ್ ಓದಲಿಕ್ಕೆ ಹೋಗಿದ್ದಾಗ, ಜೈರಾಮ ಹಾಲಂಬಿ ಎನ್ನುವವರು ಪೇಟೆಯಲ್ಲಿ ಸಿಕ್ಕಿದವರು, “ಹಾಲಾಡಿ ನರಸಿಂಹ ದೇವಸ್ಥಾನವು ಖಾಯಂ ಪೂಜೆಯವರಿಲ್ಲದೇ ಜೀರ್ಣಾವಸ್ಥೆಯಲ್ಲಿದೆ. ಅದರ ಬಗ್ಗೆ ಚರ್ಚಿಸಲು ಶೃಂಗೇರಿಯಿಂದ ಸ್ವಾಮಿಗಳು ಬರುತ್ತಾರೆ. ನಾವು ಊರಿನ ಕೆಲವು ಯುವಕರು ಸೇರಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ರಿಪೇರಿ ಮಾಡಿ, ದಾರಿಯಲ್ಲಿ ತಳಿರು ತೋರಣ ಕಟ್ಟುವ ಕೆಲಸ ಮಾಡುತ್ತೇವೆ. ಮನೆಯಲ್ಲೇ ಇದ್ದಿಯಂತಲ್ಲ ನೀನೂ ಬಾ”. ಎಂದು ಕರೆದರು. ಮರುದಿನ ಬೆಳಿಗ್ಗೆ ಹೋದವನು ಅವರೊಂದಿಗೆ ಸೇರಿ, ಹಾಲಾಡಿ ಪೇಟೆಯಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ ದವರೆಗೆ ಇರುವ ಸುಮಾರು ಅರ್ಧ ಕಿಲೋಮೀಟರ್ ದೂರದ ರಸ್ತೆಯನ್ನು ಮಣ್ಣು ಹಾಕಿ ಸರಿಪಡಿಸಿದೆವು. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಬಯಣಿಮರದ ಗೆಲ್ಲು ಹುಗಿದು ಮಾವಿನ ಎಲೆಯ ತೋರಣ ಕಟ್ಟುವ ಕೆಲಸದಲ್ಲಿ ಅವರಿಗೆ ನೆರವಾದದ್ದಾಯಿತು. ಶೃಂಗೇರಿ ಸ್ವಾಮಿಗಳು ನಿಶ್ಚಿತ ದಿನದಂದು ಆಗಮಿಸಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ವಿಷಯದಲ್ಲಿ ತಾನು ಸಹಾಯ ಮಾಡುವುದಾಗಿಯೂ, ಊರವರು ಕೈಜೋಡಿಸಬೇಕೆಂದೂ ವಿನಂತಿ ಮಾಡಿದರು. ಆ ದಿನ ಮಧ್ಯಾಹ್ನ ದೇವಸ್ಥಾನದಲ್ಲೇ ಊಟದ ವ್ಯವಸ್ಥೆಯೂ ಇದ್ದು ನಾವೆಲ್ಲ ಒಟ್ಟಿಗೇ ಪರಸ್ಪರ ಸಹಾಯ ಮಾಡುತ್ತಾ ಓಡಾಡಿದ ನೆನಪು. ಪ್ರಸಿದ್ಧ ಜ್ಯೋತಿಷಿಗಳಾದ ತಟ್ಟುವಟ್ಟು ವಿಶ್ವನಾಥ ಜೋಯಿಸರು ಆ ಬಗ್ಗೆ ಮುಂದಾಳತ್ವ ವಹಿಸಲೂ ಒಪ್ಪಿದರು. ಮುಂದೆ ಕೆಲವು ಸ್ವಹಿತಾಸಕ್ತ ವ್ಯಕ್ತಿಗಳ ಪ್ರವೇಶವಾಗಿ ಪ್ರಗತಿ ಕುಂಟಿತವಾದರೂ, ತುಂಬಾ ವರ್ಷದ ನಂತರ  ಈಗ ಆ ದೇವಸ್ಥಾನದ ಜೀರ್ಣೋದ್ಧಾರವೂ ಆಯಿತು.

ಅದೇ ವೇಳೆಯಲ್ಲಿ ಗೋರಾಜಿ ಪ್ರಭಾಕರ ಹಾಲಂಬಿಯವರ ಮಗ ಉದಯ ಹಾಲಂಬಿ ಎನ್ನುವವನು, ಒಮ್ಮೆ ಸಿಕ್ಕಿದಾಗ, “ಹಾಯ್ಕಾಡಿ ಶಾಲೆಯ ವಾರ್ಷಿಕೋತ್ಸವದಲ್ಲಿ ನಾವೊಂದು ನಾಟಕ ಮಾಡುತ್ತಿದ್ದೇವೆ. ನೀನೂ ಪಾರ್ಟು ಮಾಡು” ಅಂದ. ಆಗ ಅವನ ಜೊತೆಗೆ, ಅವನ ಅಣ್ಣ ರವಿ, ಮತ್ತು ಅರುಣ ಮತ್ತು ತಮ್ಮ ದಿನೇಶ ಹಾಗೂ ಕೆಲವರು ಯುವಕರೆಲ್ಲ ಸೇರಿ ನಾಟಕ ಮಾಡಲು ನಿರ್ಣಯಿಸಿದ್ದರು. ಅವರ ತಂದೆ ಪ್ರಭಾಕರ ಹಾಲಂಬಿಯವರನ್ನು ನಾವು ಚಿಕ್ಕಂದಿನಿಂದ ಬಲ್ಲವರು. ಮೊದಲು ಕಂಪೆನಿಯ ನಾಟಕದಲ್ಲಿ ಒಳ್ಳೆಯ ಸ್ತ್ರೀ ಪಾರ್ಟ್ ಮಾಡುತ್ತಿದ್ದರಂತೆ. ಹಾರ್ಮೋನಿಯಂ ಬಾರಿಸಿಕೊಂಡು ನಾಟಕದ ಪದ್ಯಗಳನ್ನು ಚೆನ್ನಾಗಿ ಹಾಡುತ್ತಿದ್ದರು. ಒಳ್ಳೆಯ ಕಂಠ. ನಾವು ಚಿಕ್ಕಂದಿನಲ್ಲಿ ಅವರ ಮನೆಗೆ ಹೋಗಿ ಪ್ರಭಾಕರ ಹಾಲಂಬಿಯವರ ಮಕ್ಕಳೊಡನೆ ಬೆರೆತು, ಆಟವಾಡಿ, ರಾತ್ರಿ ಅಲ್ಲಿಯೇ ಉಳಿದು ಮರುದಿನ ಬರುತ್ತಿದ್ದೆವು. ಅವರ ಮಕ್ಕಳೆಲ್ಲರಿಗೂ ನಾಟಕದ ಹುಚ್ಚು ತಂದೆಯಿಂದ ಬಂದ ಬಳುವಳಿ.

ನಾನು ಯಕ್ಷಗಾನದಲ್ಲಿ ಹಲವು ವೇಷ ಮಾಡಿದ್ದರೂ, ನಾಟಕದಲ್ಲಿ ಪಾರ್ಟು ಮಾಡಿರಲಿಲ್ಲ. ಆದರೂ ಇದೊಂದು ಅನುಭವವಾಯಿತು ಎಂದು ಒಪ್ಪಿದೆ. “ತೊಟ್ಟಿಲು ತೂಗದ ಕೈ” ಎನ್ನುವ ನಾಟಕ ಅದು. ಅದರಲ್ಲಿ ಕೆನ್ನೆಯ ಒಂದು ಬದಿಯಲ್ಲಿ ಸುಟ್ಟ ಕಲೆಯಿದ್ದು ಕುರೂಪಿಯಾದ, ಒಬ್ಬ ದುರಂತ ಕಥಾನಾಯಕಿಯ ಪಾತ್ರ ನನ್ನದು. ಇಡೀ ನಾಟಕದಲ್ಲಿ  ಕಷ್ಟ ಪಡುವುದು, ಅಳುವ ಡೈಲಾಗ್ ಗಳೇ ಇರುವುದು. ಕೆಲವು ಟ್ರಯಲ್ ಗಳ ನಂತರ ನಾಟಕದ ದಿನ ಬಂತು.

ನಾಟಕದ ದಿನ ಕೆಲವರು ಸರಿಯಾಗಿ ಬಾಯಿಪಾಠ ಕಲಿಯದಿದ್ದುದರಿಂದ ಪರದೆಯ ಹಿಂದಿನಿಂದ ಪ್ರಾಂಪ್ಟ್ ಮಾಡುವವರು ಒಬ್ಬರಿದ್ದರು. ಅವರು ಒಂದು ದೃಶ್ಯ ಮುಗಿದು, ಪಾತ್ರಗಳು ರಂಗದಿಂದ ಒಳಗೆ ಬಂದ ಕೂಡಲೇ, ಮುಂದಿನ ದೃಶ್ಯ ಯಾವುದು? ಎಂದು ನಮಗೆ ಅವರಲ್ಲಿದ್ದ ಪಟ್ಟಿಯನ್ನು ಆ ಕತ್ತಲೆಯಲ್ಲಿ ಬೆಳಕಿಗೆ ಹಿಡಿದು ನೋಡಿ ತಿಳಿಸುತ್ತಿದ್ದರು. ಆದರೆ ಅವರು ಹಿಂದಿನಿಂದ ಹೇಳಿಕೊಟ್ಟರೂ ಕೆಲವು ಪಾತ್ರಧಾರಿಗಳಿಗೆ ಅದು ಕೇಳದೇ, ಅವರದೇ ಅಂದಾಜಿನ ಮೇಲೆ ಏನೋ ಹೇಳಿ, ಇವರಿಗೆ ಆ ಡೈಲಾಗ್ ಎಲ್ಲಿದೆ? ಎಂಬುದು ತಿಳಿಯದೇ ಗೊಂದಲವಾಗುತ್ತಿತ್ತು. ಆದರೆ ಆ ಪ್ರಾಂಪ್ಟ್ ಮಾಡುವವರು ಪಾತ್ರಧಾರಿಗಳು ಒಳಗೆ ಬರುತ್ತಿದ್ದಂತೆ, ಅವರ ಹಿಂದೆ ಹೋಗಿ ಎಲ್ಲಿ ತಪ್ಪಿದ್ದು? ಅಂತ ಹೇಳಿ, ಮುಂದೆ ಸರಿ ಮಾಡಬೇಕು, ತಾನು ಈ ಕಡೆಯಲ್ಲಿ ಇರುತ್ತೇನೆ. ಜಾಗ್ರತೆ” ಎಂದು ಎಚ್ಚರಿಕೆ ಹೇಳಿ, ಆ ಕಡೆ ಈ ಕಡೆ ಓಡಾಡುತ್ತಾ ಇರುವಾಗ, ಮುಂದಿನ ದೃಶ್ಯ ಯಾವುದು? ಅದಕ್ಕೆ ಯಾರು ಯಾರು ಹೋಗಬೇಕು? ಎಂದು ಹೇಳುವ ಮೊದಲೇ, ಗಡಿಬಿಡಿಯಲ್ಲಿ ನಾನು ನನ್ನ ದೃಶ್ಯ ಎಂದು ತಿಳಿದು ಸ್ಟೇಜಿಗೆ ಹೋಗಿ ಮಾತನ್ನು ಶುರು ಮಾಡಿಬಿಟ್ಟೆ. ಆದರೆ ಅದು ನನ್ನ ದೃಶ್ಯ ಹೌದಾಗಿದ್ದರೂ ಮಧ್ಯದ ಒಂದು ಸಣ್ಣ ದೃಶ್ಯವನ್ನು ಬಿಟ್ಟು, ಮುಂದಿನ ದೃಶ್ಯದ ಮಾತನ್ನು ಹೇಳಿಬಿಟ್ಟಿದ್ದೆ. ಅದು ಅಷ್ಟು ಪ್ರಾಮುಖ್ಯ ದೃಶ್ಯವಲ್ಲದಿದ್ದರೂ ಆ ದೃಶ್ಯದಲ್ಲಿ ಬರುವ ಎದುರು ಪಾತ್ರಧಾರಿಗೆ ತಿಳಿಯದಿದ್ದರೆ, ಎಲ್ಲಾ ಅಸ್ತವ್ಯಸ್ತವಾಗುವ ಸಾಧ್ಯತೆ ಇತ್ತು. ನನಗೆ ಅದು ಗೊತ್ತಾದರೂ ಏನೂ ಮಾಡುವ ಹಾಗಿರಲಿಲ್ಲ. ಮುಂದೇನಾಗುತ್ತದೋ ಎಂದು ಗಾಬರಿಯಾಯಿತು. ಪ್ರಾಂಪ್ಟ್ ಮಾಡುವವರಿಗೆ ನಾಟಕ ಎಲ್ಲಿಗೆ ಬಂತು? ಅಂತ ತಿಳಿಯದೇ ಗಡಿಬಿಡಿಯಾಯಿತು. ಅಷ್ಟರಲ್ಲಿ ಎದುರು ಪಾತ್ರಧಾರಿಗಳಿಗೂ ಅದನ್ನು ಯಾರೋ ಹೇಳಿರಬೇಕು. ನಾನು ಒಳಗೆ ಬರುತ್ತಲೇ, ಅವರು “ಏನ್ ಮಾಡಿದ್ರಿ ಮರ್ರೆ? ನೀವು ಒಂದು ದೃಶ್ಯ ಹಾರ್ಸಿ ಬಿಟ್ರ್ಯಲೆ. ಇನ್ನೆಂತ ಮಾಡೂದ್? ನಾಟ್ಕ ಬಿದ್ದೇ ಹೋಯ್ತ್” ಎಂದು ಮತ್ತಷ್ಟು ಹೆದರಿಸಿದರು. ನಾನು “ಹೋದದ್ದು ಹೋಗಲಿ ಮರ್ರೆ. ಮುಂದಿನದ್ದು ಮಾಡುವ” ಎಂದು ಅವರಿಗೆ ಸಮಾಧಾನ ಮಾಡಬೇಕಾಯಿತು. ಸದ್ಯ ಸಭೆಯಲ್ಲಿ ಯಾರಿಗೂ ಅದು ಗೊತ್ತಾಗದಿದ್ದುದು ಪುಣ್ಯ. ಅಂತೂ ನಾಟಕ ಮುಗಿಯಿತು. ಎಲ್ಲರೂ ನಾಟಕ ಬಹಳ ಚೆನ್ನಾಗಿ ಆಯಿತು ಅನ್ನುವವರೆ. ಆದರೆ ನನಗೆ ಏನೇನೂ ಸಮಾಧಾನವಾಗಲಿಲ್ಲ.

 (ಮುಂದುವರಿಯುವುದು)

ಮಂಗಳವಾರ, ಅಕ್ಟೋಬರ್ 17, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 30

 ಅಪ್ಪಯ್ಯನ ಅಪರ ಕ್ರಿಯೆಗಳನ್ನು ಅಣ್ಣಂದಿರೊಂದಿಗೆ ಮಾಡಿ ಮುಗಿಸಿದ ನಾನು, ಮತ್ತೆ ಪುನಹ ಬೆಂಗಳೂರಿಗೆ ಹೋದೆ. ಮನಸ್ಸು ಗೊಂದಲದ ಗೂಡಾಗಿತ್ತು. ಮುಂದೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದೇ, ಭವಿಷ್ಯವೆಲ್ಲ ಕತ್ತಲು ಎಂದೆನಿಸಿದ ಕಾಲ ಅದು. ಮನಸ್ಸಿನಲ್ಲಿ, ಹೀಗೆ ದಿನ ಹೋದರೆ, ನನ್ನ ಜೀವನ, ನೆಲೆ ಕಾಣುವುದೆ ಕಷ್ಟ ಎನ್ನಿಸತೊಡಗಿತು. ಸುಮ್ಮನೇ ಕಾಲತಳ್ಳಲು ತೊಡಗಿದೆ. ಮನಸ್ಸಿನ ಬೇಸರವನ್ನು ನೀಗಿಸಲು ಒಂದಷ್ಟು ಇಂಗ್ಲೀಷ್ ಸಿನೇಮಾಗಳಿಗೆ, ಪುರಭವನದಲ್ಲಿ, ರವೀಂದ್ರಕಲಾ ಕ್ಷೇತ್ರದಲ್ಲಿ ಆಗುತ್ತಿದ್ದ ನಾಟಕಗಳಿಗೆ ಹೋದೆ. ಅಣ್ಣಯ್ಯ ಖರ್ಚಿಗೆ ಕೊಡುತ್ತಿದ್ದ. ಕೊನೆಗೆ, ಹೀಗೆ ಅಲ್ಲಿ ಇಲ್ಲಿ ಕಾಣದ ಸ್ಥಳದಲ್ಲಿ ಸುಮ್ಮನೇ ಅಲೆದಾಡುವುದಕ್ಕಿಂತ, ಊರಲ್ಲೇ ಇರುವುದು ಮೇಲು ಎನ್ನಿಸಿತು. ಒಂದು ದಿನ ಅಣ್ಣನಿಗೂ ಹೇಳದೇ ಪುನಹ ಊರಿಗೆ ಬಂದುಬಿಟ್ಟೆ. ಅಮ್ಮನ ಹತ್ತಿರ “ಇನ್ನು ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಂದಲೇ ಕೆಲಸಕ್ಕೆ ಪ್ರಯತ್ನಿಸುತ್ತೇನೆ. ಆದರೆ ಆಯಿತು. ಇಲ್ಲದಿದ್ದರೆ, ಸುರೇಶ ಅಣ್ಣನಂತೆ ಇಲ್ಲಿಯೇ ಇದ್ದು, ನಾನೂ ಗಂಟಿ ಮೇಯಿಸಿಕೊಂಡು, ಗದ್ದೆಕೆಲಸ ಮಾಡಿಕೊಂಡಿರುತ್ತೇನೆಯೇ, ಹೊರತು ಎಲ್ಲಿಗೂ ಹೋಗುವುದಿಲ್ಲ” ಎಂದೆ.

ಅದೇ ಸಮಯಕ್ಕೆ ಡಿಗ್ರಿ ಓದುವಾಗ ಬಿದ್ಕಲ್ ಕಟ್ಟೆಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಮಾಡಿದ ಸಾಲ, ಆರೇಳು ಸಾವಿರವಾಗಿ, ಒಂದು ನೋಟೀಸು ನಮ್ಮ ಮನೆಗೆ ಬಂದಿತು. ಯಾವುದೇ ಕೆಲಸವೂ ಇಲ್ಲದ, ಸಂಪಾದನೆಯೂ ಇಲ್ಲದ ನಾನು ದಿಗಿಲುಬಿದ್ದೆ. ಹೀಗೆಯೇ ಬಡ್ಡಿಗೆ ಬಡ್ಡಿ ಸೇರಿ, ಅದೇ ದೊಡ್ಡ ಮೊತ್ತವಾದರೆ ತೀರಿಸುವುದು ಎಲ್ಲಿಂದ?. ಕಂಗಾಲಾದೆ. ರಮೇಶ ಅಣ್ಣಯ್ಯ ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿಯೇ ಕೆಲಸ ಮಾಡುತ್ತಿದ್ದುದರಿಂದ, ಅಮ್ಮನ ಸಲಹೆಯಂತೆ, ಅವನಿಗೆ ನನ್ನ ಪರಿಸ್ಥಿತಿಯನ್ನು ತಿಳಿಸಿ, ಒಂದು ದೀರ್ಘವಾದ ಪತ್ರ ಬರೆದು “ಏನಾದರೂ ಮಾಡಲು ಸಾಧ್ಯವೇ?” ಎಂದು ಬೇಡಿದೆ. ಅವನೂ ಆಗ ಕೋಟದ ಮಣೂರಿನಲ್ಲಿ ಮನೆ ಮಾಡಿದ್ದು, ಸಾಲ ಸೋಲ ಮಾಡಿಕೊಂಡಿದ್ದ. ಸಾಕಷ್ಟು ಹಣದ ಅಡಚಣೆ ಇದ್ದರೂ, “ನಿನಗೆ ಕೆಲಸ ಸಿಗುವವರೆಗೆ, ನಾನು ತಿಂಗಳಿಗೆ ಐವತ್ತು ರೂಪಾಯಿಯನ್ನು ನಿನ್ನ ಆ ಸಾಲದ ಖಾತೆಗೆ ಜಮಾ ಮಾಡುತ್ತಾ ಬರುತ್ತೇನೆ. ಮುಂದೆ ನೋಡುವ” ಎಂದು ಪತ್ರ ಬರೆದು ಧೈರ್ಯ ಹೇಳಿದ. ಆಗ ಸ್ವಲ್ಪ ಧೈರ್ಯ ಬಂತು.

ಮನೆಯಲ್ಲಿ ಸುಮ್ಮನೇ ಕುಳಿತಿರಲಾರದೇ ಬೆಳಿಗ್ಗೆ ಗಂಟಿಗಳನ್ನು ಮನೆಯ ಹಿಂದಿನ ಮಾರ್ವಿ ಅಣೆಗೋ (ಬೆಟ್ಟ), ಮಕ್ಕಿಗದ್ದೆಗೋ ಹೋಗಿ ಮೇಯಿಸಿಕೊಂಡು ಬರುತ್ತಾ, ಮಧ್ಯಾಹ್ನದ ಮೇಲೆ ಏನಾದರೂ ಗದ್ದೆಯ ಕೆಲಸದಲ್ಲಿ ಸುರೇಶಣ್ಣನಿಗೆ ಸಹಾಯ ಮಾಡುತ್ತಾ ದಿನ ಕಳೆದೆ. ಮನೆಯಲ್ಲಿ ಅಪ್ಪಯ್ಯ ತಂದು ಇರಿಸಿದ್ದ ರಾಮಾಯಣ, ಜೈಮಿನಿ ಭಾರತ, ಮಹಾಭಾರತಗಳನ್ನೆಲ್ಲ ಓದಿಯಾಯಿತು. ಹಳೆಯ ಪ್ರಸಂಗ ಪುಸ್ತಕಗಳನ್ನು ಓದತೊಡಗಿದೆ. ಯಾರು ಯಾರೋ ಪ್ರಸಂಗಕರ್ತರು ಬರೆದು, ಅಪ್ಪಯ್ಯನಿಗೆ “ಆಡಲು ಸಾಧ್ಯವೇ? ನೋಡಿ” ಎಂದು ತಂದುಕೊಟ್ಟ ಹಲವಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳೂ ಮನೆಯಲ್ಲಿ ಇದ್ದವು. ಅವುಗಳನ್ನೆಲ್ಲಾ ಒಮ್ಮೆ ಓದಿ ಮಗುಚಿ ಹಾಕಿದ್ದಾಯಿತು. ಆ ಪ್ರಸಂಗ ಪುಸ್ತಕಗಳನ್ನು ಓದುತ್ತಿದ್ದಂತೆಯೇ ಅವುಗಳಲ್ಲಿ ಇರುವ ಪದ್ಯಗಳ ಪ್ರಾಸ, ಧಾಟಿ, ಛಂದಸ್ಸುಗಳು, ಸಾಹಿತ್ಯಗಳು, ನನ್ನನ್ನು ಆಕರ್ಷಿಸಿತು. ತಾಳಗಳಿಗೆ ಅನುಗುಣವಾಗಿ ಮಟ್ಟುಗಳ ಪ್ರಕಾರ ಅವುಗಳ ಒಂದು ಟಿಪ್ಪಣಿಯನ್ನು ಮಾಡಿದೆ. ನಾನೇ ಒಂದು ಪ್ರಸಂಗ ಬರೆಯಬಾರದೇಕೆ? ಅನ್ನಿಸಿತು. ಆ ಕಾಲದಲ್ಲಿ ನನ್ನ ಮನಸ್ಸಿನಲ್ಲಿ ಪರಿಣಾಮ ಬೀರಿದ್ದ ಭಾಸನ ಪ್ರತಿಮಾ ಪ್ರಸಂಗದ ಕತೆಯನ್ನು ಆರಿಸಿಕೊಂಡು, ಅದರ ದೃಶ್ಯಗಳನ್ನು ವಿಂಗಡಿಸಿಕೊಂಡೆ. ನನ್ನ ಮನಸ್ಸಿಗೆ ಬಂದಂತೆ ಪದ್ಯಗಳನ್ನು ರಚಿಸುತ್ತಾ ಹೋದೆ. ಗಂಟಿಗಳನ್ನು ಮೇಯಿಸುವಾಗಲೆಲ್ಲ ಕಿಸೆಯಲ್ಲಿ ಒಂದು ಕಾಗದ, ಮತ್ತು ಪೆನ್ನನ್ನು ಇಟ್ಟುಕೊಂಡು ಮನಸ್ಸಿನಲ್ಲಿ ಪದ್ಯದ ಜೋಡಣೆಯನ್ನು ಮಾಡಿಕೊಳ್ಳುತ್ತಾ, ಅಲ್ಲೇ ಬರೆದುಕೊಂಡು ಮನೆಗೆ ತಂದು ಒಂದು ಪುಸ್ತಕದಲ್ಲಿ ಬರೆದಿಟ್ಟು ಕೊಳ್ಳತೊಡಗಿದೆ.

ನಾನು ಛಂದಸ್ಸನ್ನು ಅಭ್ಯಾಸ ಮಾಡಿದವನಲ್ಲ. ನನಗೆ ತೋಚಿದಂತೆ, ಹಲವು ಹಳೆಯ ಪ್ರಸಂಗಗಳ ಪದ್ಯಗಳನ್ನು ಅನುಕರಿಸಿಕೊಂಡೇ, ಅದೇ ಅಳತೆಯಲ್ಲಿ, ದಾಟಿಯಲ್ಲಿ, ಆಗ ಭಾಸನ ಪ್ರತಿಮಾ ನಾಟಕವನ್ನು ಆಧರಿಸಿ “ಪ್ರತಿಮಾ ಪ್ರಸಂಗ”ವನ್ನೂ, ಶೂರ್ಪನಖಿಯ ಕತೆಯನ್ನು ಆಧರಿಸಿ “ಚಂದ್ರನಖಿ” ಎಂಬ ಪ್ರಸಂಗವನ್ನೂ ಬರೆದೆ. ಚಂದ್ರಶೇಖರ ಕಂಬಾರರ “ಮತಾಂತರ” ಎಂಬ ನಾಟಕ ಆಗ ಯಾವುದೋ ವಿಶೇಷಾಂಕದಲ್ಲಿ ಬಂದಿದ್ದು, ಅದನ್ನು ಪ್ರತಿ ಮಾಡಿಕೊಂಡು ಆ ನಾಟಕದ ಸಂಭಾಷಣೆಗೆ ಮಧ್ಯ ಮಧ್ಯ ಯಕ್ಷಗಾನದ ಪದ್ಯಗಳನ್ನು ಬರೆದು ಸೇರಿಸಿ “ಸಂಗರ” ಎಂಬ ಒಂದು ಸಾಮಾಜಿಕ ಸಮಸ್ಯೆಯ ಪ್ರಸಂಗವನ್ನೂ ಬರೆದಿದ್ದೆ. ಮತ್ತು ಹಾಲಾಡಿ ಮೇಳದವರು ಕೇಳಿದರು ಅಂತ, ನನ್ನದೇ ಒಂದು ಕಾಲ್ಪನಿಕ ಕತೆಯನ್ನು ಹೆಣೆದುಕೊಂಡು, “ಮೋಹನ ಕಲ್ಯಾಣಿ” ಎಂಬ ಪ್ರಸಂಗವನ್ನೂ ಬರೆದೆ. ಅದನ್ನು ಹಾಲಾಡಿ ಮೇಳದಲ್ಲಿ ಆಡಿದ್ದರು. ಇದರ ವಿಷಯವಾಗಿ ಮುಂದೆ ಹೇಳುತ್ತೇನೆ.

ನಮ್ಮ ಮನೆಗೆ ಒಂದು ಕಾಲಕ್ಕೆ ದೊಡ್ಡ ಭಾಗವತರಾಗಿದ್ದ, ಮಾರ್ವಿ ವಾದಿರಾಜ ಹೆಬ್ಬಾರರು ಆಗಾಗ ಬರುತ್ತಿದ್ದರು. ಅವರು ನಮ್ಮ ಕಲ್ಲಟ್ಟೆಯ ಮನೆಗೆ ಬಂದು, ಹತ್ತಾರು ದಿನ ನಮ್ಮ ಮನೆಯಲ್ಲಿಯೇ ಇದ್ದು ಹೋಗುತ್ತಿದ್ದರು. ಅವರು ಇದ್ದರೆ ಮನೆಯಲ್ಲಿ ಸುಮ್ಮನೇ ಇರುತ್ತಿರಲಿಲ್ಲ. ತೆಂಗಿನ ಹೆಡೆಯಿಂದ ಮಡಲನ್ನೋ, ಅದರ ತುದಿಯ ಭಾಗದಿಂದ ಬೀಸಣಿಗೆಯನ್ನೋ ಏನಾದರೂ ಮಾಡುತ್ತಾ. ಯಕ್ಷಗಾನ ಪದ್ಯಗಳನ್ನು ಗುಣುಗುತ್ತಾ ಇರುತ್ತಿದ್ದರು. ಮೇಳದ ಅವರ ಅನುಭವಗಳನ್ನು ಕೇಳಿದರೆ, ಅದೆಲ್ಲ ಈಗ ಯಾರಿಗೆ ಬೇಕು ಮಾರಾಯಾ? ಎಂದು, ನೆನಪಾದ ಕೆಲವು ಸಂಗತಿಗಳನ್ನು ಹೇಳಿ ಮೆಲುಕು ಹಾಕುತ್ತಿದ್ದರು. ಅವರಿಗೆ ನನ್ನ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಿದೆ. ಅವರು ಖುಷಿಪಟ್ಟು, “ಹೋ ಒಳ್ಳೆಯ ಪ್ರಾಸ, ಸಾಹಿತ್ಯ ಎಲ್ಲ ಇತ್ತಲೆ” ಎಂದು ಮೆಚ್ಚುಗೆಯ ಮಾತನ್ನು ಹೇಳಿದ್ದರು. ಈಗಿನ ಪ್ರಸಂಗಕರ್ತರಿಗೆ ಅದೆಲ್ಲ ಬ್ಯಾಡ ಮಾರಾಯ. ಭಾಗವತರಂತೂ ನೀನು ಏನು ಬರೆದು ಕೊಟ್ಟರೂ, ಅವರ ಕಿಸೆಯಿಂದ ಶಬ್ದಗಳನ್ನು ಸೇರಿಸಿಯೇ, ಏನೋ ಒಂದು ಹೇಳುತ್ತಾರೆ, “ಕೌರವಗಂಜುತೆಂದ” ಎಂದು ನಾವು ಬರೆದರೆ ಅವರು “ಕೌರವ ಗಂಜಿ ತಿಂದ” ಎಂದು ಹಾಡಿದರೂ ಹಾಡಿದರೆ, ಸ್ವರವೊಂದು ಗಟ್ಟಿ ಇದ್ದರೆ ಈಗ ಒಳ್ಳೆಯ ಭಾಗವತ” ಎಂದು ನಗೆಯಾಡಿದ್ದರು. ಅವರೂ ಕೆಲವು ಪ್ರಸಂಗಗಳನ್ನು ಬರೆದಿದ್ದರು

. ರಾಜಕೀಯ ವಿಷಯದ, "ಕಾಶ್ಮೀರ ವಿಜಯ," "ಹಾಲಾಡಿ ಕ್ಷೇತ್ರ ಮಹಾತ್ಮೆ", "ಬೇಡರಕಣ್ಣಪ್ಪ" ಎನ್ನುವ ಪ್ರಸಂಗಗಳನ್ನು ಅವರ ಹುಡುಗಾಟಿಕೆಯ ಕಾಲದಲ್ಲೇ ಬರೆದುದಾಗಿತ್ತು. ಅಪ್ಪಯ್ಯನ ಒತ್ತಾಯದ ಮೇರೆಗೆ ಅವರು ಶಂಕರನಾರಾಯಣ ಕ್ಷೇತ್ರ ಮಹಾತ್ಮೆ, ಎಂಬ ಪ್ರಸಂಗವನ್ನೂ ಬರೆದಿದ್ದರು. ಆದರೆ ಇದೊಂದನ್ನು ಬಿಟ್ಟು ಯಾವುದೂ ಅಚ್ಚಾಗಲಿಲ್ಲ. ಹಾಗಾಗಿ ಅವುಗಳ ಹಸ್ತಪ್ರತಿಗಳೂ ಈಗ ಸಿಗಲಿಕ್ಕಿಲ್ಲವಾದ್ದರಿಂದ, ಅವು ಕಾಲಗರ್ಭದಲ್ಲಿ ಮರೆಯಾದಂತೆಯೆ ಸೈ.

ಮಾರ್ವಿ ವಾದಿರಾಜ ಹೆಬ್ಬಾರರು ಅವರ ಯೌವನದ ಕಾಲದಲ್ಲಿ ಪ್ರಸಿದ್ಧರಾದ ಭಾಗವತರಾಗಿದ್ದರು. ಅವರ ಅಣ್ಣ ರಾಮಕೃಷ್ಣ ಹೆಬ್ಬಾರರ ಹನುಮಂತ, ಮತ್ತು ಇವರ ಭಾಗವತಿಕೆಯ ಲಂಕಾದಹನ, ರಾಮಾಂಜನೇಯ ಪ್ರಸಂಗಗಳು ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ಮೆರೆದಾಡಿತ್ತಂತೆ. ಕೋಟದ ಆಸುಪಾಸಿನ ಹತ್ತಾರು ಮೈಲಿಗಳ ವಿಸ್ತೀರ್ಣದಲ್ಲೇ, ಆ ವರ್ಷದ ಇಡೀ ಒಂದು ತಿರುಗಾಟವನ್ನೇ ಮಾಡಿದ್ದರಂತೆ. ಆದರೆ ಒಂದು ತರಹದ ಮೂಡಿ ಆಸಾಮಿ. ಆಟಕ್ಕೆ ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ನಂಬುವಂತಿಲ್ಲ. ಎಲ್ಲಾದರೂ, ಯಾರ ಮನೆಯಲ್ಲಾದರೂ ಉಳಿದರು ಅಂದರೆ, ಆಟಕ್ಕೆ ಕೈಕೊಟ್ಟರು ಅಂತಲೇ ಲೆಕ್ಕ.

ಅವರ ಹೆಂಡತಿ ಬಸುರಿಯಾಗಿದ್ದಾಗಲೇ ತೀರಿಕೊಂಡರಂತೆ. ಆಮೇಲೆ ಅವರು ಮದುವೆಯಾಗಲಿಲ್ಲ. ಒಂಟಿ ಬಾಳು. ಎಲ್ಲೆಲ್ಲೋ ಹೋಗುತ್ತಿದ್ದರು. ಹೋಗಿ ನಾಲ್ಕಾರು ದಿನ ಇರುತ್ತಿದ್ದರು. ನಾನು ನೋಡುವಾಗಲೇ ಅವರಿಗೆ ಸುಮಾರು ಎಪ್ಪತ್ತರ ಮೇಲೆ ವಯಸ್ಸಾಗಿತ್ತು. ದಾರಿಯಲ್ಲಿ ಹೋಗುವಾಗ ಮೈ ತೇಲುತ್ತಿತ್ತು. ಗದ್ದೆಯ ಅಂಚಿನಲ್ಲಿ ಅವರು ನಡೆಯುತ್ತಿದ್ದರೆ, ಎಲ್ಲಿ ಬೀಳುತ್ತಾರೋ ಎಂದು ಭಯವಾಗುತ್ತಿತ್ತು. ಆದರೆ “ನಮ್ಮ ಮನೆಯಲ್ಲೇ ಇರಿ. ಎಲ್ಲಿಗೆ ಹೋಗುತ್ತೀರಿ?” ಎಂದರೆ ಅವರು ಕೇಳುವವರಲ್ಲ. ಹೊರಡಬೇಕು ಅನ್ನಿಸಿದಾಗ, ಅವರ ಒಂದು ಬಟ್ಟೆಯ ಚೀಲದ ಗಂಟನ್ನು ಬಗಲಿಗಿರಿಸಿಕೊಂಡು, ಸಣ್ಣಗೆ ನಗುತ್ತಾ, “ ನಾನ್ ಬರ್ತೆ” ಎನ್ನುತ್ತಾ ಒಂದು ಜಲ್ಲನ್ನು ಊರಿಕೊಂಡು, ಹೊರಟೇ ಬಿಡುತ್ತಿದ್ದರು. ಅವರು ಹಾಲಾಡಿಯಲ್ಲಿ ಒಬ್ಬ ವೇಶ್ಯೆಯ ಮನೆಯಲ್ಲೂ ಇರುತ್ತಿದ್ದರು. “ಅಲ್ಲಿಗೆಲ್ಲಾ ಯಾಕೆ ಹೋತ್ರಿ ಮರ್ರೆ?” ಅಂದರೆ, ಸುಮ್ಮನೇ ಒಂದು ನಗು ಅಷ್ಟೆ. ಅವರ ಜೀವಿತದ ಕೊನೆಯ ಕಾಲದಲ್ಲಿ, ಕಾಲು ನೋವಾಗಿ, ಹುಣ್ಣಾಗಿ, ಹಾಸಿಗೆಯ ಮೇಲೆ ಮಲಗಿಯೇ ಇದ್ದಾಗಲೂ, ಆ ಹೆಂಗಸೇ ಅವರನ್ನು ಚೆನ್ನಾಗಿ ಸೇವೆಮಾಡಿ ನೋಡಿಕೊಂಡದ್ದಂತೆ.

(ಮುಂದುವರಿಯುವುದು)

ಸೋಮವಾರ, ಅಕ್ಟೋಬರ್ 16, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 29

ಅಪ್ಪಯ್ಯನಿಗೆ ಕಾಲು ಸ್ವಲ್ಪ ಮಟ್ಟಿಗೆ ಗುಣವಾಗಿ, ಆ ವರ್ಷ ನವಂಬರ್ ಹೊತ್ತಿಗೆ ಮೇಳ ಪ್ರಾರಂಭವಾಗುತ್ತಿದ್ದಂತೆಯೇ ಮೇಳಕ್ಕೆ ಹೋದುದರಿಂದ, ನಾನು ಬೆಂಗಳೂರಿಗೆ ಹೋದೆ. ಅಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡೇ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ, ಅಣ್ಣನಿಗೆ ಸಹಾಯಕನಾಗಿ  ಮೂರು ತಿಂಗಳು ಕೆಲಸ ಮಾಡಿದ್ದಾಯಿತು. ನಂತರ ಅತ್ತಿಗೆಯ ಅಕ್ಕನ ಮಗ ದೀಪುವಿನ ಜೊತೆಗೂ ಅಲ್ಲಲ್ಲಿ ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಾಡಿದೆ. ಪ್ರಯೋಜನವಾಗಲಿಲ್ಲ. ಮನೆಮನೆಗೆ ಹಾಲುಕೊಡುವುದಾದರೆ ಬಾ ಎಂದು ಅವನ ಸ್ನೇಹಿತರೊಬ್ಬರು ಕರೆದರು. ಅದಕ್ಕೂ ಸೈ ಎಂದು ಒಂದೆರಡು ದಿನ ಅವರೊಟ್ಟಿಗೂ ಹೋದೆ. ಆದರೆ ಅದು ನನಗೆ ಹಿಡಿಸದ ಕೆಲಸ ಅನ್ನಿಸಿ ಮತ್ತೆ ಹೋಗಲಿಲ್ಲ. ಶಂಕರನಾರಾಯಣದ ಸಮೀಪದ ಕೊಂಡಳ್ಳಿಯ ರಂಗನಾಥ ಎನ್ನುವವರ ಪರಿಚಯವಾಗಿ ಅವರೊಂದಿಗೆ ಪಿಯರ್ಲೆಸ್ ಎಂಬ ಇನ್ಸುರೆನ್ಸ್ ಪಾಲಿಸಿ ಮಾಡುವ ಉದ್ಯೋಗವನ್ನು ಮಾಡುತ್ತಾ ನಾಲ್ಕಾರು ದಿನ ಅವರೊಂದಿಗೆ ಓಡಾಡಿದೆ. ನರಸಿಂಹ ಹಂದೇರು ಎಂಬ ಅಣ್ಣನ ಸ್ನೇಹಿತರು, ಅವರ ಅಂಗಡಿಯ ಸಮೀಪದ ಜನಾರ್ದನ ಲಾಡ್ಜ್ ಗೆ ಬಂದ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡು, ನನ್ನ ಬಗ್ಗೆ ಹೇಳಿ ಅವರನ್ನು ಕೆಲಸಕ್ಕಾಗಿ ಸಂದಿಸುವಂತೆ ಮಾಡಿದರು. ಅವರು ಇಂಗ್ಲೀಷಿನಲ್ಲಿ ಕೇಳಿದ ಪ್ರಶ್ನೆಗೆ, ನಾನು ಉತ್ತರಿಸಲು ತಡವರಿಸಿದೆ. ಅಲ್ಲಿಯೂ ಆಯ್ಕೆಯಾಗಲಿಲ್ಲ.

ಮುಂದೆ ದೀಪುವಿನ ಸ್ನೇಹಿತರೊಬ್ಬರ ಮೂಲಕ ಮಾರ್ಕೇಟ್ ಹತ್ತಿರದ ಒಂದು ಹಿಟ್ಟಿನ ಗಿರಣಿಯಲ್ಲಿ ಲೆಕ್ಕಬರೆಯುವ ಕೆಲಸ ಸಿಕ್ಕಿತು. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ಅದಕ್ಕೆ ಒಪ್ಪಿ ಅಲ್ಲಿ ಕೆಲಸ ಮಾಡಲುತೊಡಗಿದೆ. ಅಂಗಡಿಯಲ್ಲಿ ಮತ್ತು ಹೊರಗಡೆ ಎಲ್ಲಾ ಹಿಟ್ಟಿನ ಧೂಳು. ಅಲ್ಲಿ ವೃದ್ಧರೊಬ್ಬರು ಸುಮಾರು ಮುವ್ವತ್ತು ಮುವ್ವತ್ತೈದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಸಂಬಳ ತುಂಬಾ ಕಡಿಮೆ ಇತ್ತು. ಅವರು ಕನ್ನಡಕದ ಮೇಲ್ಬದಿಯಿಂದ ನೋಡುತ್ತಾ, ಯಾವಾಗಲೂ ಗೊಣಗುತ್ತಾ ಅವರ ಸಮಸ್ಯೆಗಳನ್ನೇ ಹೇಳುತ್ತಾ ಕಾಲತಳ್ಳುತ್ತಿದ್ದರು. ಅವರಿಗೆ ನಗುವೇ ಗೊತ್ತಿಲ್ಲವೇನೋ ಎಂಬಷ್ಟು ಗಂಭೀರವಾಗಿರುತ್ತಿದ್ದರು. ಹಾಗೂ ಹೀಗೂ ಒಂದು ತಿಂಗಳು ಕೆಲಸ ಮಾಡಿದ್ದಾಯಿತು. ಇನ್ನೇನು ಸಂಬಳದ ದಿನ ಬಂತು ಎನ್ನುವಾಗ ಆ ಕೆಲಸವೂ ಬೇಡ ಅನ್ನಿಸಿತು. ಅದೇ ಸಮಯಕ್ಕೆ ಉಡುಪಿಯಲ್ಲಿ ಜೋಡಾಟ ಇದೆ ಎಂದು ತಿಳಿದು, ನಾನೂ ಜೋಡಾಟ ನೋಡುವ ಹುರುಪಿನಿಂದ ಅಣ್ಣನ ಹತ್ತಿರ ಹೇಳಿ ಸೀದಾ ಊರಿಗೆ ಬಂದೆ. ನನ್ನ ಜೀವನದ ಮೊದಲ ದುಡಿಮೆಯ ತಿಂಗಳ ಸಂಬಳವನ್ನೂ ತೆಗೆದುಕೊಳ್ಳಲಿಲ್ಲ.

1984 ರ ಎಪ್ರಿಲ್ 11 ರಂದು ನಡೆದ ಹಿರೇಮಾಲಿಂಗೇಶ್ವರ ಮೇಳ ಮತ್ತು ಮೂಲ್ಕಿ ಮೇಳದ ಜೋಡಾಟ ಅದು. ಮೂಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪ ಆಚಾರ್ ರವರ ಭಾಗವತಿಕೆ. ಅಪ್ಪಯ್ಯ, ಧಾರೇಶ್ವರರೊಂದಿಗೆ ನಮ್ಮ ಹಿರೇಮಾಲಿಂಗೇಶ್ವರ ಮೇಳದಲ್ಲಿ. ಮೂಲ್ಕಿ ಮೇಳದಲ್ಲಿ ಜಗನ್ನಾಥ ಶೆಟ್ಟಿಯವರ ಕರ್ಣ ಆದರೆ, ನಮ್ಮ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆಯವರ ಕರ್ಣ. ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿಕೊಂಡು ಜಗಳ, ಗಲಾಟೆ ಆಗದಂತೆ ವ್ಯವಸ್ಥಾಪಕರು, ಸಾಕಷ್ಟು ಜಾಗ್ರತೆ ಮಾಡಿದ್ದರೂ ಮುಸುಕು ಹಾಕಿಕೊಂಡು ಆಚೆಗಿನ ಕಲಾವಿದರು ಈಚಿಗೆ, ಈಚಿನ ಕಲಾವಿದರು ಆಚೆಗೆ, ಕದ್ದು ಹೋಗಿ ಏನು ಹೊಸದು ಮಾಡುತ್ತಾರೆ ಎಂದು ನೋಡುತ್ತಿದ್ದರು. ನಮ್ಮ ಮೇಳದಲ್ಲಿ ಜೋಡಾಟದ ಹುಡಿಹಾರಿಸುವ ಕಲಾವಿದರು ಇಲ್ಲದಿದ್ದರೂ, ಇದ್ದ ಕಲಾವಿದರನ್ನೇ ಹುರಿದುಂಬಿಸಿ, ಬೇಕುಬೇಕಾದ ಸೂಚನೆಗಳನ್ನು ಕೊಟ್ಟು, ನಾಲ್ಕಾರು ದಿನಗಳಿಂದ ತಯಾರಿ ನೆಡೆಸಿ. ಅಂದು ರಾತ್ರಿ ಇಡೀ ರಂಗಸ್ಥಳದಲ್ಲಿ ಇದ್ದು ಕೆಲಸ ಮಾಡಿ, ಛಲತೊಟ್ಟು ಮೇಳದ ಜೋಡಾಟದಲ್ಲಿ ನಮ್ಮ ಮೇಳವನ್ನು ಗೆಲ್ಲಿಸಿ ಮರ್ಯಾದೆಯನ್ನು ಉಳಿಸಿದ, ಕೀರ್ತಿ ಅಪ್ಪಯ್ಯನಿಗೆ ಸಂದಿತು. ಅದೇ ಅಪ್ಪಯ್ಯನ ಕೊನೆಯ ಭಾಗವತಿಕೆಯಾಯಿತು.

ಮರುದಿನ ಕುಂದಾಪುರದಲ್ಲಿ ಆಟ, ಭಸ್ಮಾಸುರ ಮೋಹಿನಿ, ವಿಶೇಷ ಆಕರ್ಷಣೆಯಾಗಿ ಚಿಟ್ಟಾಣಿಯವರ ಭಸ್ಮಾಸುರದ ಎದುರು, ಕುಮಾರಿ ಸುಜಾತಳ (ಸುಬ್ರಮಣ್ಯ ಧಾರೇಶ್ವರರ ಹೆಂಡತಿ) ಮೋಹಿನಿ. ಜೋಡಾಟ ಮುಗಿಸಿ ಅಪ್ಪಯ್ಯ, ದಣಿದಿದ್ದರೂ, ಮನೆಗೆ ಬಂದು ಜೋಡಾಟದ ವಿಷಯವನ್ನು ಹೇಳಿ ನಗುತ್ತಾ, “ ಕಂಡ್ರ್ಯಾ? ನಾವು ಬಿಟ್ಟ್ ಕೊಡೂದುಂಟಾ? ಹೇಗಾಯ್ತು? ಎಂದು ಯುದ್ಧದಲ್ಲಿ ಗೆದ್ದ ವೀರರಂತೆ ಗೆಲುವಿನಿಂದ ಮಾತಾಡಿದರು.  ಮಧ್ಯಾಹ್ನ ಊಟಮಾಡಿ, ನಂತರ ಮಲಗಿ ಸ್ವಲ್ಪ ವಿಶ್ರಾಂತಿಯನ್ನೂ ಪಡೆದರು. ಸಂಜೆ ಕುಂದಾಪುರದ ಆಟಕ್ಕೆ ಹೊರಟವರು, ನನ್ನನ್ನು ಕರೆದು “ಆಟಕ್ ಬತ್ಯಾ ಮಾಣಿ? ಬಪ್ದಾದ್ರೆ ಹೊರಡು” ಎಂದರು. ನನಗೆ ಜೋಡಾಟದ ನಿದ್ದೆಯ ಮಂಪರು ಇಳಿದಿರಲಿಲ್ಲ. “ಇವತ್ತು ಬತ್ತಿಲ್ಲೆ, ನೀವ್ ಹೋಯಿನಿ, ಆ ಚಿಟ್ಟಾಣಿಯ ಭಸ್ಮಾಸುರ ಕಂಡ್ ಕಂಡ್ ಸಾಕಾಯ್ತ್” ಎಂದು ಮನೆಯಲ್ಲಿಯೇ ಉಳಿದೆ.

ವಿಧಿಯ ಆಟ. ನಾನು ಆ ದಿನ ಅವರೊಂದಿಗೆ ಹೋಗಿದ್ದರೆ ಅಪ್ಪಯ್ಯನ ಅಂತಿಮ ಕ್ಷಣದಲ್ಲಿ ಅವರೊಂದಿಗೆ ಇರುವ ಅವಕಾಶವಾದರೂ ಸಿಗುತ್ತಿತ್ತು. ಅದೇ ದಿನ, ಅಪ್ಪಯ್ಯ ರಂಗಸ್ಥಳಕ್ಕೆ ಹೋಗುವ ಮೊದಲು ಎಂದಿನಂತೆ ಮುಖ ಮಾರ್ಜನ ಮಾಡಿ, ಕಚ್ಚೆ ಹಾಕಿ ಪಂಚೆ ಉಟ್ಟು, ಜುಬ್ಬ ತೊಟ್ಟು ಚೌಕಿಯಲ್ಲಿ ಕನ್ನಡಿ ಎದುರು ಕುಳಿತು, ತಲೆಗೆ ಕೆಂಪು ಮುಂಡಾಸನ್ನು ಕಟ್ಟಿಕೊಳ್ಳುತ್ತಿರುವಾಗ ಎದೆನೋವು ಬಂದು, ಕುಳಿತಲ್ಲೇ ಎದೆ ಹಿಡಿದುಕೊಂಡು ಹಿಂದಕ್ಕೆ ಬಿದ್ದುಬಿಟ್ಟರಂತೆ. ಜನ ಸೇರಿದರು. “ಏನಾಯ್ತು ಉಪ್ಪೂರರೇ?” ಎಂದು ಆದರಿಸಿ ಕುಳ್ಳಿರಿಸಿದರು. “ಏನೋ, ಸ್ವಲ್ಪ ಎದೆ ನೋಯಿತ್ತಪ. ಹೋತ್ ಬಿಡಿ. ರಂಗಸ್ಥಳಕ್ ಹೋಪು ಹೊತ್ ಆಗಿಯೇ ಹೋಯ್ತಲ್ಲ. ಸ್ವಲ್ಪ ಸುಧಾರಿಸಿಕೊಂಡು ರಂಗಸ್ಥಳಕ್ಕೆ ಹೋಗ್ತೆ” ಅಂದರು ಅಪ್ಪಯ್ಯ. ಆದರೆ ದೇವರ ಇಚ್ಛೆಯೇ ಬೇರೆ ಇತ್ತು. ಸುದ್ಧಿ ತಿಳಿದು ಗುರುತಿನವರೆಲ್ಲ ಚೌಕಿಗೆ ಬಂದರು. ಅವರ ಪರಿಸ್ಥಿತಿಯನ್ನು ನೋಡಿ ಪರೀಕ್ಷೆ ಮಾಡಿದ ಒಬ್ಬ ಡಾಕ್ಟರ್ ರು, ಕೂಡಲೇ ಮಣಿಪಾಲಕ್ಕೆ ಕರೆದೊಯ್ಯಬೇಕೆಂದು ತಿಳಿಸಿದರು. ಚಿಟ್ಟಾಣಿಯವರನ್ನು ಕುಣಿಸಲು ತಯಾರಾಗಿ ರಂಗಸ್ಥಳಕ್ಕೆಂದು ಹೊರಟ ಅವರನ್ನು, ಕೂಡಲೆ ವ್ಯಾನಿನಲ್ಲಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೋಗುವಾಗ ಎದೆ ನೋವು ಇದ್ದರೂ, “ತಡಿನಿ. ಎರಡು ಪದ್ಯ ಹೇಳಿ ಬತ್ತೆ. ಇಲ್ದಿದ್ರೆ ಜನ ಗಲಾಟೆ ಮಾಡೂರ್” ಅಂದರಂತೆ.

ಬೆಳೆಗ್ಗೆಯ ಹೊತ್ತಿಗೆ ಮನೆಯಲ್ಲಿದ್ದ ನಮಗೆಲ್ಲಾ ಸುದ್ಧಿ ಬಂತು, ನಾವೂ ಕೂಡಲೇ ಹೊರಟು, ಮಣೂರಿನ ಅಕ್ಕನ ಮನೆಗೆ ಬಂದೆವು, ಅಲ್ಲಿಂದ ಮಣಿಪಾಲಕ್ಕೆ ಅಕ್ಕನೊಂದಿಗೆ ಹೊರಡುವುದು ನಮ್ಮ ಆಲೋಚನೆಯಾಗಿತ್ತು. ಆದರೆ ಅಷ್ಟರಲ್ಲಿ ಮಣಿಪಾಲಕ್ಕೆ ಹೋಗಿ ಬಂದ, ಶ್ರೀಧರ ಅಣ್ಣಯ್ಯ, ಭಾವಯ್ಯ, “ಈಗ ಸ್ವಲ್ಪ ಅಡ್ಡಿ ಇಲ್ಲ. ಇನ್ನು ಇಪ್ಪತ್ತನಾಲ್ಕು ಗಂಟೆಯ ಒಳಗೆ ಪುನಹ ಹಾರ್ಟ್ ಎಟ್ಯಾಕ್ ಆಗದಿದ್ದರೆ ತೊಂದರೆ ಇಲ್ಲವಂತೆ. ಒಬ್ಸರ್ವೇಶನ್ ನಲ್ಲಿ ಇಟ್ಟಿದ್ದಾರೆ” ಅಂದರು. ಆಗ ನಾವೂ “ಹಾಗಾದರೆ ನಿಧಾನವಾಗಿ ಹೋದರಾಯಿತು” ಎಂದು ಕೋಟದಲ್ಲೆ ಉಳಿದೆವು.

ಆದರೆ ಮಧ್ಯಾಹ್ನ ಎರಡು ಗಂಟೆಗೆ ಹೊತ್ತಿಗೆ ಪುನಹ ಹಾರ್ಟ್ ಎಟ್ಯಾಕ್ ಆಗಿ “ಅಪ್ಪಯ್ಯ ಹೋದರು” ಎಂಬ ವಾರ್ತೆ ಸಿಕ್ಕಿತು. ನಾವೆಲ್ಲ ಏಳು ಮಂದಿ ಗಂಡುಮಕ್ಕಳು ಇದ್ದರೂ, ಸಾಯುವ ಆ ಕೊನೆಯ ಕಾಲಕ್ಕೆ ನಾವು ಯಾರೂ ಅವರ ಬಳಿ ಇರಲಿಲ್ಲ. ಅವರು ಸಾಕಿದ ಮಗ, ಚಂದ್ರ ಭಟ್ರು ಮಾತ್ರ ಇದ್ದರು. ಅವರೇ ಅಪ್ಪಯ್ಯನ ಬಾಯಿಗೆ ನೀರು ಬಿಡಬೇಕಾಯಿತು. ಹೆಣವನ್ನು ಅಂದು ರಾತ್ರಿಯೇ ಮನೆಗೆ ಹೊತ್ತು ತಂದರು.  ಹಿಂದೆಯೇ ಹಲವಾರು ಜನ ಅಭಿಮಾನಿಗಳೂ ಬಂದಿದ್ದರು. ನಮ್ಮ ಮನೆಯವರೆಗೆ ರಸ್ತೆ ಇರಲಿಲ್ಲ. ಹಾಡಿಯಲ್ಲಿ, ಬೈಲುಗದ್ದೆಯ ಅಂಚಿನಲ್ಲಿ, ಹೊಳೆಗೆ ಹಾಕಿದ ಸಂಕವನ್ನು ದಾಟಿಕೊಂಡು ಮೂರು ಮೈಲಿ ನಡೆದುಕೊಂಡೇ ಬರಬೇಕು. ಸುದ್ಧಿ ತಿಳಿದ ಅಪ್ಪಯ್ಯನ ಅಭಿಮಾನಿಗಳು ರಾತ್ರಿಯಾಗಿದ್ದರೂ, ಆ ಕತ್ತಲಲ್ಲಿ ಮನೆಯನ್ನು ಹುಡುಕಿಕೊಂಡು, ಗುಂಪು ಗುಂಪಾಗಿ ಅವರ ಅಂತಿಮ ದರ್ಶನಕ್ಕಾಗಿ ಬರತೊಡಗಿದರು. ಪುರೋಹಿತರು “ಮಕ್ಕಳೆಲ್ಲ ಹತ್ತಿರವೇ ಇದ್ದಾರಲ್ಲ. ಕಾಯುವುದು ಬೇಡ. ಮುಂದುವರಿಸುವ” ಅಂದರು. “ಮೂಗಿನಲ್ಲಿ ರಕ್ತ ಬರುತ್ತಿದೆ ಕಾಯುವುದು ಸರಿಯಲ್ಲ” ಎಂದು ಇನ್ನು ಯಾರೋ ಹೇಳಿದರು. ಹಾಗಾಗಿ ಬೆಂಗಳೂರಿನಲ್ಲಿ ಇದ್ದ ಇಬ್ಬರು ಮಕ್ಕಳು ಬರುವವರೆಗೂ ಕಾಯುವುದೂ ಸಾಧ್ಯವಾಗಲಿಲ್ಲ. ಅಂದು ಮಧ್ಯರಾತ್ರಿಯ  ಹೊತ್ತಿಗೆ ಅಪ್ಪಯ್ಯನ ದೇಹವನ್ನು ಚಿತೆಯ ಮೇಲಿಟ್ಟು, ನೆರೆದ ನೂರಾರು ಜನರ ಸಮಕ್ಷಮದಲ್ಲಿ  ಬೆಂಕಿ ಇಟ್ಟು ಅವರನ್ನು ಮರಳಿ ಬಾರದ ಲೋಕಕ್ಕೆ, ಭಾರದ ಹೃದಯದಿಂದ ಮೌನವಾಗಿ ಕಳಿಸಿಕೊಟ್ಟೆವು. ಬೆಳಗ್ಗಿನವರೆಗೂ ಜನ ಬರುತ್ತಲೇ ಇದ್ದರು. “ಸ್ವಲ್ಪ ಕಾಯಬೇಕಿತ್ತು. ಕೊನೆಯಲ್ಲಿ ಅವರ ಮುಖವನ್ನು ನೋಡಲಿಕ್ಕೂ ಅವಕಾಶವಿಲ್ಲದ ಹಾಗಾಯಿತು” ಎಂದು ಹಲವರು ದುಃಖಿಸುತ್ತಾ ಹಿಂದೆ ಹೋದರು.

(ಮುಂದುವರಿಯುವುದು)

ಭಾನುವಾರ, ಅಕ್ಟೋಬರ್ 15, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 28

ಸುಮಾರು ಅದೇ ಸಮಯದಲ್ಲಿ, ಅಪ್ಪಯ್ಯ ಹಿಂದಿನ ದಿನದ ಆಟ ಮುಗಿಸಿ ಉತ್ತರ ಕನ್ನಡದಿಂದ ಕೋಟಕ್ಕೆಂದು ಹೊರಟವರು, ಬಸ್ಸು ಸಿಕ್ಕದೇ ಇದ್ದುದರಿಂದ ಲಾರಿಯನ್ನು, ಅದರ ಬಾಗಿಲನ್ನು ಹಿಡಿದುಕೊಂಡು ಹತ್ತುವಾಗ ಆಯತಪ್ಪಿ ಕಾಲು ಜಾರಿ ಕೆಳಕ್ಕೆ ಬಿದ್ದರು. ಬಿದ್ದ ಹೊಡೆತಕ್ಕೆ ಬಲಕಾಲು ತಿರುಚಿಹೋಯಿತು. ಆ ನೋವಿನಲ್ಲೇ ಕೋಟಕ್ಕೆ ಬಂದು ಡಾಕ್ಟರನ್ನು ನೋಡಿದಾಗ, ಕಾಲಿನ ಪಾದದ ಹತ್ತಿರ ಮೂಳೆಯು ಬಿರುಕು ಬಿಟ್ಟಿದೆ ಎಂದು ಎಕ್ಸ್ ರೇಯಲ್ಲಿ ಗೊತ್ತಾಯಿತು. ಹಾಗೆಯೇ ಅಲ್ಲಿ ಆಸ್ಪತ್ರೆ ಸೇರಿ ಶುಶ್ರೂಷೆ ಪಡೆದು ಬ್ಯಾಂಡೇಜು ಹಾಕಿಸಿಕೊಂಡರೂ ಬಹಳ ಸಮಯದವರೆಗೆ ನೋವು ಕಡಿಮೆಯಾಗಲಿಲ್ಲ. ಡಾಕ್ಟರ್ ರು “ವರ್ಷವಾಯಿತಲ್ಲ ಮೂಳೆ ಕೂಡಿಕೊಳ್ಳಲು ಸಮಯ ಹಿಡಿಯುತ್ತದೆ” ಎಂದರು. ಆ ವರ್ಷದ ಮೇಳದ ನಂತರದ ತಿರುಗಾಟಕ್ಕೆ ಹೋಗಲಿಕ್ಕಾಗಲಿಲ್ಲ. ಆಗ ನಾನೂ ಡಿಗ್ರಿ ಮುಗಿಸಿ ಮನೆಯಲ್ಲಿ ಇದ್ದುದರಿಂದ ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವು ನನಗೆ ಒದಗಿತು.

ಅಪ್ಪಯ್ಯನ ಜೊತೆಗೆ ಅವರಿಗೆ ಸಹಾಯಕನಾಗಿ ಅವರು ಹೋದಲ್ಲೆಲ್ಲಾ ನಾನೂ ಹೋಗಬೇಕಾಯಿತು. ಅವರಿಗೆ ನೋವು ಹೆಚ್ಚಾದಾಗ ಕಾಲು ಊರಲೇ ಆಗದ ಪರಿಸ್ಥಿತಿಯಲ್ಲಿ ಕೋಟ ಮಣೂರಿನ, ನನ್ನ ಅಕ್ಕನ ಮನೆಯಲ್ಲಿ ಅವರು ಇದ್ದರು. ಅವರಿಗೆ ಸ್ನಾನ ಮಾಡಿಸಲು, ಕಕ್ಕಸುಮನೆಯವರೆಗೆ ಬೆನ್ನಿನ ಮೇಲೆ ಉಪ್ಪಿನ ಮೂಟೆಯಂತೆ ಇರಿಸಿ ಎತ್ತಿಕೊಂಡು ಹೋಗಲೂ, ನಾನೇ ಜೊತೆಗೆ ನಿಂತೆ. ಅವರ ಜೊತೆಗೆ ಎಲ್ಲಾ ತಿರುಗಾಟಕ್ಕೂ ಜೊತೆಯಾಗಿ ಹೋಗುತ್ತಿದ್ದೆ. ಅವರಿಗೆ ಸಹಾಯವಾಗಲಿ ಎಂದು ಅವರ ಬ್ಯಾಗ್, ಕೊಡೆ ಹಿಡಿದುಕೊಳ್ಳುವುದು, ಬಸ್ಸು ಹತ್ತಲು ಸಹಾಯ ಮಾಡುವುದು ಮಾಡುತ್ತಾ, ಅವರ ಹಿಂದೆಯೇ ತಿರುಗುತ್ತಿದ್ದೆ. ಆಗ ಕಾರ್ಕಳ ವೆಂಕಟರಮಣ ದೇವಸ್ಥಾನ, ಕುಂದಾಪುರ ವೆಂಕಟರಮಣ ದೇವಸ್ಥಾನ, ಇತ್ಯಾದಿ ಕಡೆಗಳಲ್ಲಿ ಶೇಣಿಯವರು, ದೊಡ್ಡ ಸಾಮಗರು, ರಾಮದಾಸ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್ ರವರು, ಪ್ರಭಾಕರ ಜೋಷಿಯವರು ಮತ್ತು ಪೆರ್ಲ ಕೃಷ್ಣಭಟ್ರು ಮುಂತಾದ ಮಹಾ ಮಹಾ ಕಲಾವಿದರ ಅರ್ಥದಾರಿಕೆಯಲ್ಲಿ ಹಲವಾರು ತಾಳಮದ್ದಲೆ ನೋಡುವ ಅವಕಾಶ ನನಗೆ ಒದಗಿತ್ತು. ಆಗಿನ ಇಡೀರಾತ್ರಿಯ ತಾಳಮದ್ದಲೆಗಳಲ್ಲಿ ಜೊತೆ ಭಾಗವತರಾಗಿ ಕಾಳಿಂಗ ನಾವಡರೂ, ದಾಮೋದರ ಮಂಡೆಚ್ಚರು, ಬಲಿಪರು ದಾಸ ಭಾಗವತರೂ ಮೊದಲಾದವರು ಇರುತ್ತಿದ್ದರು. ದಾಮೋದರ ಮಂಡೆಚ್ಚರೊಂದಿಗೆ ಕೆಲವು ಕಡೆಗಳಲ್ಲಿ ಒಂದೇ ಪ್ರಸಂಗದಲ್ಲಿ ಅವರೊಂದು ಪದ್ಯ, ಇವರೊಂದು ಪದ್ಯ ಹೇಳಿ ಒಟ್ಟಿಗೇ ಭಾಗವತಿಕೆಯೂ ಆಗುತ್ತಿತ್ತು. ಕಾಳಿಂಗ ನಾವಡರು, ಧಾರೇಶ್ವರರು ಇದ್ದರಂತೂ ತಾಳಮದ್ದಲೆಗಳಲ್ಲಿ ಮೂವರೂ ಒಟ್ಟಿಗೇ ಪದ್ಯಹೇಳಿ ಅದೊಂದು ವಿಶೇಷ ಆಕರ್ಷಣೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮದ್ದಲೆಗಾರನಾಗಿ ದುರ್ಗಪ್ಪ ಗುಡಿಗಾರ್ ಹೇಗೂ ಕೋಟದ ಭಾಗವತಿಕೆ ಕೇಂದ್ರದಲ್ಲಿಯೇ ಉಳಿದುಕೊಂಡಿದ್ದು  ಅಪ್ಪಯ್ಯನ ಎಲ್ಲ ಕಾರ್ಯಕ್ರಮಗಳಿಗೂ ಜೊತೆಯಾಗಿ ಮದ್ದಲೆಗಾರನಾಗಿ ಇರುತ್ತಿದ್ದ. ತಾಳಮದ್ದಲೆಯಲ್ಲಿ ಪ್ರಮುಖ ಭಾಗದ ಒಂದೋ ಎರಡೋ ಪದ್ಯಗಳಿಗೆ ಅವನಿಗೆ ಮದ್ದಲೆ ಬಾರಿಸಲು ಸಂಪೂರ್ಣ ಅವಕಾಶವನ್ನು ಕೊಟ್ಟು ಅವನ ವಿದ್ವತ್ತನ್ನು ತೋರಿಸಲು ಅಪ್ಪಯ್ಯ ಅವಕಾಶ ಮಾಡಿಕೊಡುತ್ತಿದ್ದರು. ನಾನು ಸುಮ್ಮನೇ ಇರಬೇಕಲ್ಲ ಅಂತ, ಕೆಲವು ಕಡೆ ಹಾರ್ಮೋನಿಯಂ ಬಾರಿಸಲು ಕುಳಿತುಕೊಳ್ಳುತ್ತಿದ್ದೆ,

ಒಮ್ಮೆ ಮುದ್ರಾಡಿಯಲ್ಲಿ ಒಬ್ಬ ಡಾಕ್ಟರ್ ಅವರ ಹೆಸರು ಎಂ ಎಸ್ ರಾವ್ ಅಂತೆ. ಅಪ್ಪಯ್ಯನನ್ನು ಕರೆಸಿ, ಅವರ ಪದ್ಯಗಳನ್ನು ರೆಕಾರ್ಡ್ ಮಾಡಲು ಅಲೋಚಿಸಿ, ಮುದ್ರಾಡಿಗೆ ಬರಲು ಆಮಂತ್ರಿಸಿದ್ದರು. ಅಂಬಾತನಯ ಮುದ್ರಾಡಿಯವರು ಅಪ್ಪಯ್ಯ ಹಾಡುವ ಪದ್ಯದ ಸಂದರ್ಭ ಮತ್ತು ರಾಗ ತಾಳಗಳ ಹೆಸರಿನ ನಿರೂಪಣೆ ಮಾಡುವುದು ಎಂದು ನಿಶ್ಚಯವಾಗಿತ್ತು. ಮುದ್ರಾಡಿಯ ಒಂದು ಶಾಲೆಯಲ್ಲಿ ಆದ ಕಾರ್ಯಕ್ರಮ ಅದು. ದುರ್ಗಪ್ಪನಿಗೆ ಮುದ್ರಾಡಿಗೇ ಬರಲು ಹೇಳಿದ್ದು, ನಮಗೆ ಮುದ್ರಾಡಿಗೆ ಹೋದ ನಂತರವೇ ಅವನು ಬರಲಿಲ್ಲ ಎಂದು ತಿಳಿಯಿತು. ದುರ್ಗಪ್ಪನಿಗೆ ಅದೇನೋ ಕಾರಣದಿಂದ ಆವತ್ತು ಬರಲು ಅನನುಕೂಲವಾಯಿತು. ಈಗಿನ ಹಾಗೆ ಪೋನೋ ಮತ್ತೊಂದೋ ಅನುಕೂಲಗಳು ಆಗ ಇಲ್ಲದೇ ನಮಗೆ ತಿಳಿಸಲೂ ಅವನಿಗೆ ಆಗಲಿಲ್ಲ. ಆಗಲೇ ಕತ್ತಲಾಗಲು ಶುರುವಾಗಿತ್ತು. ಏನಾದರೂ ಮಾಡುವ ಅಂದರೆ ಮದ್ದಲೆಗಾರರೇ ಇಲ್ಲ. ಹೇಗೆ ಪದ್ಯ ಹೇಳುವುದು?. ಕೊನೆಗೆ ಅಂಬಾತನಯ ಮುದ್ರಾಡಿಯವರು ಹಿರಿಯಡ್ಕಕ್ಕೆ ಜನ ಹೋದರೆ ಗೋಪಾಲ ಬರಬಹುದು ಅಂದರು. ಡಾಕ್ಟರ್ ಒಪ್ಪಿ, ಅವರ ಕಾರನ್ನು ಕಳುಹಿಸಿ ಹಿರಿಯಡ್ಕ ಗೋಪಾಲರನ್ನು ಮದ್ದಲೆಯೊಂದಿಗೆ ಬರಲು ವಿನಂತಿಸಿಕೊಂಡರು. ಗೋಪಾಲರು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಬಂದರು. ನಂತರ ರಾತ್ರಿ ಸುಮಾರು ಎರಡು ಗಂಟೆಯವರೆಗೂ ಬೇರೆ ಬೇರೆ ಪ್ರಸಂಗಗಳಿಂದ ಆಯ್ದ ಹಲವಾರು ಪದ್ಯಗಳನ್ನು ಅಪ್ಪಯ್ಯ ಹೇಳಿದರು. ಡಾಕ್ಟರ್ ರ ಒತ್ತಾಯದ ಮೇರೆಗೆ ಆ ದಿನಗಳಲ್ಲಿ ಕಾಳಿಂಗ ನಾವಡರಿಂದ ಪ್ರಸಿದ್ಧಿಯಾಗಿದ್ದ "ನೀಲಗಗನದೊಳು ಮೇಘಗಳ" ಪದ್ಯವನ್ನೂ ಅಪ್ಪಯ್ಯ ಹಾಡಿದ್ದರು.

ಮತ್ತೊಮ್ಮೆ ಅಪ್ಪಯ್ಯ ಬೆಂಗಳೂರಿನ ಆಟಕ್ಕೆ ಹೋಗಬೇಕಾಯಿತು. ನಾನು ಮತ್ತು ಅಪ್ಪಯ್ಯ ಮರುದಿನ ಬೆಳಗಿನ ಒಳಗೆ ಬೆಂಗಳೂರು ತಲುಪಬೇಕೆಂದು ಆಲೋಚನೆ ಮಾಡಿ ಹಿಂದಿನ ದಿನ ಸಂಜೆಯೇ ಕೋಟದಿಂದ ಹೊರಟವರು, ಸುಮಾರು ಹತ್ತು ಗಂಟೆಯ ಹೊತ್ತಿಗೆ ಶಿವಮೊಗ್ಗ ತಲುಪಿದೆವು. ಆಗ ನೇರವಾಗಿ ಬೆಂಗಳೂರಿಗೆ ಹೋಗುವ ಬಸ್ಸು ಸಿಗಲಿಲ್ಲವೋ ಏನೋ ಸರಿಯಾಗಿ ನೆನಪಾಗುವುದಿಲ್ಲ. ಶಿವಮೊಗ್ಗದಲ್ಲಿ ವಿಚಾರಿಸುವಾಗ ಬೆಳಿಗ್ಗೆ ನಾಲ್ಕರವರೆಗೆ ಬೆಂಗಳೂರಿಗೆ ಬಸ್ಸು ಇಲ್ಲ ಎಂದು ತಿಳಿಯಿತು. ಅಪ್ಪಯ್ಯ ಏನು ಮಾಡ್ವ ಮಾಣಿ, ಹೀಗಾಯಿತಲ್ಲ? ಎಂದು ನನ್ನನ್ನು ಕೇಳಿದರು. ನಾನು “ಕಾಯುವ. ಮತ್ತೇನು ಮಾಡುವುದು?” ಎಂದೆ. ಅಷ್ಟು ರಾತ್ರಿಯಲ್ಲಿ ಯಾವುದೇ ರೂಮು ಹಿಡಿಯುವುದು ಸಾಧ್ಯವಿರಲಿಲ್ಲ. ಅಪ್ಪಯ್ಯನ ಪರಿಚಯ ಇರುವವರು ಶಿವಮೊಗ್ಗದಲ್ಲಿ ಕೆಲವರು ಇದ್ದರೂ ಇಷ್ಟು ರಾತ್ರಿಯ ಹೊತ್ತಿನಲ್ಲಿ ಹೋಗಿ ಉಪದ್ರವ ಕೊಡುವುದು ಸರಿಯಲ್ಲ ಎಂದು ಅಪ್ಪಯ್ಯನಿಗೆ ಅನಿಸಿರಬೇಕು. ಅಲ್ಲಿಯೇ ಬಸ್ ನಿಲ್ದಾಣದ ಎದುರು ಇರುವ ಒಂದು ಹೋಟೇಲಿನ ಹೊರಗಿನ ಜಗುಲಿಯೇ ನಮಗೆ ಆಶ್ರಯದಾಣವಾಯಿತು. ಅಲ್ಲಿಯೇ ಕುಳಿತು ಅದೂಇದೂ ಮಾತಾಡುತ್ತಾ ಆ ರಾತ್ರಿ ಕಾಲಕಳೆದೆವು. ಬೆಳಗ್ಗೆ ಸುಮಾರು ಐದು ಗಂಟೆಗೆ ಬೆಂಗಳೂರಿಗೆ ಹೋಗುವ ಬಸ್ಸೊಂದು ಬಂತು. ಅದರಲ್ಲಿ ಕುಳಿತು ಬೆಳಿಗ್ಗೆ ತಡವಾಗಿ  ಬೆಂಗಳೂರು ತಲುಪಿದೆವು. ಆ ಬೆಳಿಗ್ಗೆಯೇ ಕೆಲವರನ್ನು ಮಾತಾಡಿಸಬೇಕಿತ್ತು ಎಲ್ಲಾ ಹಾಳಾಯಿತಲ್ಲ ಎಂದು ಅಪ್ಪಯ್ಯ ಅಲವತ್ತುಕೊಂಡರು. ಬೆಂಗಳೂರಿನಲ್ಲಿ ಗುರುನರಸಿಂಹ ಛತ್ರದ ಮೆನೇಜರ್ ಆಗಿದ್ದ ಕೃಷ್ಣಮೂರ್ತಿ ಅಣ್ಣಯ್ಯನ ಮನೆಯಲ್ಲಿ ಉಳಿದುಕೊಂಡೆವು.  ಅಂದು ಮುರಳೀಧರ  ಎನ್ನುವವರ ಉಪನಯನದ ಪ್ರಯುಕ್ತ ಸಂಜೆ ಒಂದು ಆಟವನ್ನು ಪ್ರಾಯೋಜಿಸಿದ್ದರು. ಪ್ರಸಂಗ ಬಬ್ರುವಾಹನ ಕಾಳಗ. ಭಾಗವತರಾಗಿ ಧಾರೇಶ್ವರ, ಕಾಳಿಂಗ ನಾವಡರ ಜೊತೆಗೆ ಅಪ್ಪಯ್ಯ ಇದ್ದರೆ, ತೀರ್ಥಹಳ್ಳಿ ಗೋಪಾಲರ ಬಬ್ರುವಾಹನ, ಕೋಟ ವೈಕುಂಠನ ಚಿತ್ರಾಂಗದೆ, ಕೊಳಗಿ ಅನಂತ ಹೆಗಡೆಯವರ ಅರ್ಜುನ, ಮತ್ತು ಸಿರಿಮಠ ಪಂಜು, ಚಂದ್ರ ಭಟ್ರು ಹಳದೀಪುರ ಗಜಾನನ ಭಂಡಾರಿ ಮೊದಲಾದವರು ಇದ್ದು ಪ್ರದರ್ಶನ ತುಂಬಾ ಚೆನ್ನಾಗಿ ಆಗಿತ್ತು. ಅದರಲ್ಲಿ ನಾನೇ ಹಾರ್ಮೋನಿಯಂ ಬಾರಿಸಿದ್ದು, ಆ ದಿನದ ಉಪನಯನದ ಜೊತೆ ಅದನ್ನೂ ವಿಡಿಯೋ ಚಿತ್ರೀಕರಣ ಮಾಡಿರುವುದರಿಂದ ಅದೊಂದು ಅಪ್ಪಯ್ಯನ ಏಕಮಾತ್ರ ವಿಡಿಯೋದ ದಾಖಲೀಕರಣವಾದಂತಾಗಿದೆ.

ಅದೇ ಸಮಯದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿಯೂ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಮರುದಿನ ರೇಡಿಯೋ ಪ್ರೋಗ್ರಾಮ್ ಪ್ರಸಂಗ “ಕಂಸ ವಧೆ”. ಜಲವಳ್ಳಿ ವೆಂಕಟೇಶ ರಾವ್ ರವರ ಕಂಸ, ಹೊನ್ನಪ್ಪ ಗೋಕರ್ಣ ರ ಅಕ್ರೂರ ಕೊಳಗಿ ಅನಂತ ಹೆಗಡೆಯವರ ಕೃಷ್ಣ, ಶಿರಳಗಿ ಭಾಸ್ಕರ ಜೋಷಿಯವರ ಗೋಪಿಕಾ ಸ್ತ್ರೀ. ಅದರಲ್ಲಿ ಕೃಷ್ಣ ಗೋಪಿಕಾಸ್ತ್ರೀಯರನ್ನು ಸಂತೈಸುವ ಸಂದರ್ಭಕ್ಕೆ ನನ್ನ ಮೆಚ್ಚಿನ ಅಪ್ಪಯ್ಯನ ಪದ್ಯ “ಪೋಗಿ ಬರುವೆ ಗೋಪ ನಾಗವೇಣಿಯರೆ”.... ಪದ್ಯವನ್ನು ಅಳವಡಿಸಿದರೆ ಲಾಯಿಕ್ ಆತಿತ್.  ಎಂದು ಹೇಳಿದೆ. ಅವರು ಕೂಡಲೇ ಒಪ್ಪಿ ಆ ಆಕಾಶವಾಣಿ ಕಾರ್ಯಕ್ರಮದಲ್ಲಿ ಆ ಪದ್ಯವನ್ನು ಅಳವಡಿಸಿಕೊಂಡು ತುಂಬಾ ಸೊಗಸಾಗಿ ಹಾಡಿದ್ದರು.

(ಮುಂದುವರಿಯುವುದು)

ಶನಿವಾರ, ಅಕ್ಟೋಬರ್ 14, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 27

ಅಂತೂ ಮೂರು ವರ್ಷದ ಡಿಗ್ರಿಯನ್ನು ಆರಾಮವಾಗಿ ಪೂರೈಸಿದೆ. ಓದಿದರೆ ಓದಿದೆ. ಬಿಟ್ಟರೆ ಬಿಟ್ಟೆ. ಡಿಗ್ರಿಯ ಕೊನೆಯ ವರ್ಷದ ಪ್ರಾರಂಭದಲ್ಲಿ ನಮ್ಮ ರೂಮಿನಲ್ಲಿದ್ದ ಮಲಿಯಾಳಿ ಮಿತ್ರನಿಗೆ ಮದುವೆಯಾದ್ದರಿಂದ, ಅವನ ಸಂಸಾರ ಅಲ್ಲಿಗೇ ಬರುತ್ತದೆ ಎಂದು ನಾನು ಮತ್ತು ಗೋಪಿ, ಕೊಡ್ಗಿ ಕಂಪೌಂಡ್ ನ್ನು ಬಿಟ್ಟು, ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ನಮ್ಮ ಕಾಲೇಜಿನ ಪ್ರಾಧ್ಯಾಪಕರೇ ಆದ ಎ.ಸಿ.ತುಂಗರ ಮನೆಯ ಮಹಡಿಗೆ ನಮ್ಮ ವಾಸ್ತವ್ಯವನ್ನು ಬದಲಿಸಬೇಕಾಯಿತು. ಅಲ್ಲಿ ಸುಬ್ರಮಣ್ಯ ಐತಾಳ ಎನ್ನುವ ಪಡುಕೊಣೆಯ  ಸ್ನೇಹಿತನೊಬ್ಬನೂ ನಮ್ಮ ಜೊತೆಗೆ ಇದ್ದ. ಬರೀ ಪಾಪದ ಹುಡುಗ. ದೊಡ್ಡ ಸೋಡಾ ಗ್ಲಾಸ್ ಹಾಕುತ್ತಿದ್ದ. ಮೆಲ್ಲನೇ ಮಾತಾಡುತ್ತಿದ್ದ. ಹತ್ತು ಮಾತಾಡಿದರೆ ಒಂದು ಮಾತಾಡುವವನು. ಡಿಗ್ರಿಯ ನಂತರ ಬೆಂಗಳೂರಿನ ಯಾವುದೋ ಹೋಟೇಲಿನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಸ್ವಲ್ಪ ಅವಧಿಯಲ್ಲಿಯೇ ಕಾಯಿಲೆಯಿಂದ ತೀರಿಕೊಂಡನೆಂದು ಕೇಳಿದೆ.

 ಅಂತಿಮ ವರ್ಷದಲ್ಲಿರುವಾಗ ಬೊಟನಿಕಲ್ ಟೂರ್ ಅಂತ ಊಟಿ ಕೊಡೆಕೆನಲ್ ಗೂ ಹೋದ ನೆನಪು. ಆದರೆ ಆ ಪ್ರವಾಸದ ಕ್ಷಣಗಳು ಯಾವುದೂ ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಅಂತಿಮ ವರ್ಷದ ಕೆಮೆಸ್ಟ್ರಿ ಪರೀಕ್ಷೆಯ ಹಿಂದಿನ ದಿನ, ಕುಂದಾಪುರ ನರಿಬ್ಯಾಣದಲ್ಲಿ ಅಮೃತೇಶ್ವರೀ ಮೇಳದ “ಮಾಯಾ ಮೃಗಾವತಿ” ಆಟ ಇತ್ತು.  ಅದನ್ನು ಮಿಸ್ ಮಾಡಿಕೊಂಡರೆ ಆ ಆಟ ಮುಂದೆ ಸಿಗುವುದಿಲ್ಲವಲ್ಲ ಎಂದು ಅದಕ್ಕೂ ಹೋಗಿದ್ದೆ. ಆದರೂ ಫೈಲ್ ಆಗದೇ ಮಧ್ಯಮ ತರಗತಿಯಲ್ಲಿ ಪಾಸ್ ಆಗಿಬಿಟ್ಟೆ. ಮುಂದೇನು?. ಮುಂದೆ ಓದಲಿಕ್ಕೆ ಮನಸ್ಸಿಲ್ಲ. ಏನಾದರೂ ಕೆಲಸ ಹಿಡಿಯಬೇಕು. ಅಪ್ಪಯ್ಯ ಇದ್ದಾರಲ್ಲ?. ಅವರಿಗೆ ಎಲ್ಲರ ಪರಿಚಯ ಇದೆ. ಎಲ್ಲಾದರೂ ಒಂದು ಸಿಕ್ಕೀತು ಎಂಬ ಭಾವ.  ಸ್ವಲ್ಪ ದಿನ ಮನೆಯಲ್ಲಿ ಹಾಯಾಗಿ ಕಳೆಯಬೇಕು ಅಂತ ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ ಇದ್ದೆ.

 ಕಲ್ಲಟ್ಟೆಯಲ್ಲಿ, ಅತ್ತೆಗೆ ಮಕ್ಕಳಿಲ್ಲದಿರುವುದರಿಂದ ಅವರ ಕೊನೆಯ ಕಾಲದಲ್ಲಿ ಅಪ್ಪಯ್ಯನೇ ಅವರ ಆಗುಹೋಗುಗಳನ್ನು ನೋಡಿಕೊಂಡರು. ಅತ್ತೆಗೋ ಈ ಮುದ್ದಿನ ತಮ್ಮ “ನಾರ್ಣಪ್ಪು” ಅಂದರೆ ಅಷ್ಟು ಆಸೆ. ಮೇಳದಲ್ಲಿದ್ದಾಗ ಚೇರಿಕೆಯ ಮನೆಗೆ ಬಂದವರು, ಕಲ್ಲಟ್ಟೆಗೆ ಬಂದು, ಮಾತಾಡಿಸಿ ಹೋಗದಿದ್ದರೆ ಬೇಸರ ಮಾಡಿಕೊಳ್ಳುತ್ತಿದ್ದರು. ಅಪ್ಪಯ್ಯನಿಗೂ ಒಬ್ಬಳೇ ಅಕ್ಕ. ಅವಳು ಅಂದರೆ ಅಷ್ಟೇ ಅಕ್ಕರೆ.

ಆಗ ನಮ್ಮ ಚಂದ್ರ ಭಟ್ಟರಿಗೆ, ಅಪ್ಪಯ್ಯನೇ ನಮ್ಮ ತಾಯಿಯ ಸಂಬಂಧದ ಕಡೆಯ ಮಾರ್ವಿ ಮಹಾಬಲ ಹೆಬ್ಬಾರರ ಮಗಳನ್ನು ತಂದು ಮದುವೆ ಮಾಡಿಕೊಟ್ಟರು. ಅವರಿಗೆ ಅತ್ತೆಯ ಜೊತೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಅವರು, ಅವರ ಹೆಂಡತಿ ಮಕ್ಕಳೂ ಅತ್ತೆಯನ್ನು ನೋಡಿಕೊಂಡು ಕಲ್ಲಟ್ಟೆಯಲ್ಲಿಯೇ ಇದ್ದರು. ಮತ್ತೊಬ್ಬಳು ಸೇಸಿ ಮರಾಠಿ ಎಂಬ ಪ್ರಾಯದ ಹೆಂಗಸೂ, ನಮ್ಮ ಮನೆಗೆ ಬಂದರೆ ವಾರಗಟ್ಟಳೆ ಇದ್ದು, ಉಂಡು ಹೋಗುತ್ತಿದ್ದಳು. ಅವಳೇ, ಚಂದ್ರ ಭಟ್ರ ಹೆಂಡತಿ ಸರಸ್ವತಿ ಅಕ್ಕ, ಅವರ ಎಲ್ಲ ಹೆರಿಗೆ ಮತ್ತು ಮಕ್ಕಳ ಬಾಣಂತನವನ್ನು ನಮ್ಮ ಮನೆಯಲ್ಲೇ ಇದ್ದು ಓಡಾಡಿ ಮಾಡಿದವಳು.

ಅತ್ತೆ ಹೃದಯಾಘಾತದಿಂದ ತೀರಿಕೊಂಡರು. ರಾತ್ರಿ ನಮ್ಮೊಡನೆ ಮಾತಾಡಿ ಮಲಗಿದವರು, ಬೆಳಿಗ್ಗೆ ಏಳುವಾಗ ಉಸಿರಿರಲಿಲ್ಲ. ಸುಖಮರಣ. ಆದರೆ ಬದುಕಿರುವವರೆಗೆ ಅವರು ಆ ಊರಿನ ರಾಣಿಯಂತೆ ಗೌರವಯುತವಾಗಿಯೇ ಬದುಕಿದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಶಂಕರನಾರಾಯಣ ಅಡಿಗರು, ಅವರು ಸಾಯುವ ಮೊದಲು, ಅವರ ಮಕ್ಕಳಿಂದ ಅತ್ತೆಗೆ ತೊಂದರೆ ಆಗದೇ ಇರಲಿ ಎಂದು, ಕಲ್ಲಟ್ಟೆಯ ಆಸ್ತಿ ಮತ್ತು ಮನೆಯು, ಅತ್ತೆಯು ಬದುಕಿ ಇರುವವರೆಗೆ ಅವರ ಅನುಭೋಗಕ್ಕೆ ಹಕ್ಕು ಇರುತ್ತದೆ ಎಂದು ವೀಲು ಬರೆದಿಟ್ಟು ಕಾಲವಾಗಿದ್ದರು.

 ಅತ್ತೆಯು ಸತ್ತಾಗ, ಅಷ್ಟರವರೆಗೆ ಆ ಮನೆಗೆ ಬಂದು ಹೋಗಿ ಮಾಡದೇ ಇದ್ದ, ಶಂಕರನಾರಾಯಣ ಅಡಿಗರ ಮಗನಾದ ಬಾಬು ಅಡಿಗರು ಕುಂದಾಪುರದಲ್ಲಿ ವಕೀಲರಾಗಿದ್ದವರು, ಅತ್ತೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ಮನೆಗೆ ಬಂದು ನಮ್ಮೊಡನೆ ಸ್ನೇಹದಿಂದಲೇ ಮಾತಾಡಿಸಿ ಹೋಗಿದ್ದರು. ಅತ್ತೆಯ ಗಂಡ ಅಂದರೆ ನಮ್ಮ ಮಾವ ರಾಮಕೃಷ್ಣ ಹೆಬ್ಬಾರರ ಮಗನಾದ ರತ್ನಾಕರ ಎನ್ನುವವರು, ನಮ್ಮ ಅತ್ತೆಯ ಉತ್ತರ ಕ್ರಿಯೆಯನ್ನು ಮಾಡಲು ಒಪ್ಪಿ, ನಮ್ಮ ಮನೆಯಲ್ಲೇ ಇದ್ದು ಎಲ್ಲ ಅಪರಕಾರ್ಯಗಳನ್ನು ಮಾಡಿದ್ದರು.

ಅತ್ತೆಯು ತೀರಿಕೊಂಡ ನಂತರ, ಚೇರಿಕೆಯಲ್ಲಿ ದಾಮೋದರ ಅಣ್ಣಯ್ಯನ ಸಂಸಾರವನ್ನು ಇರಿಸಿ, ಅಪ್ಪಯ್ಯ, ಅಮ್ಮ ಮತ್ತು ನಾವೆಲ್ಲ ಕಲ್ಲಟ್ಟೆಗೆ ಬಂದು ಅಲ್ಲಿ ನೆಲೆಸಿದೆವು. ಮುಂದೆಯೂ ನಾವೇ ಆ ಮನೆಯಲ್ಲಿ ವಾಸವಾಗಿದ್ದೆವು. ಅವರ ಗಂಡ ಶಂಕರನಾರಾಯಣ ಅಡಿಗರು ಕಕ್ಕುಂಜೆ ಗ್ರಾಮದ ಪಟೇಲರಾಗಿದ್ದವರು. ಅವರಿಗೆ ಉಗ್ರಾಣಿಯಾಗಿ ಇದ್ದು, ಸದಾ ಅವರ ಹಿಂದೆ ತಿರುಗುತ್ತಿದ್ದ, ಶೇಷ ಮಡಿವಾಳ ಎನ್ನುವವ, ಅಡಿಗರ ಕಾಲದ ನಂತರವೂ ಕಲ್ಲಟ್ಟೆಯ ನಂಟನ್ನು ಬಿಡಲಿಲ್ಲ. ಆಗಾಗ ಬಂದು ಹೋಗಿ ಮಾಡುತ್ತಿದ್ದ. ಅವನ ಹೆಂಡತಿ ರುಕ್ಕು ಎನ್ನುವವಳಂತೂ ಅತ್ತೆ ಇರುವಾಗ ಆಗಾಗ ನಮ್ಮ ಮನೆಗೆ ಬಂದು, ಒಂದಷ್ಟು ಅದೂ ಇದೂ ಪಟ್ಟಾಂಗ ಹೊಡೆದು, ಊರಿನ ಸುದ್ದಿಯೆಲ್ಲಾ ಮಾತಾಡಿ, ಹಿಂದಿನ ದಿನ ನೆನೆಸಿ ಇಟ್ಟ ನೋಳಿ ಸೊಪ್ಪಿನಲ್ಲಿ ಅತ್ತೆಗೆ ಚೆನ್ನಾಗಿ ತಲೆ ಸ್ನಾನ ಮಾಡಿಸಿ ಉಪಚಾರ ಮಾಡುತ್ತಿದ್ದಳು. ಪ್ರತೀ ವರ್ಷ ದೀಪಾವಳಿಯ ಸ್ನಾನದ ದಿನ ಅವಳೇ, ನಮಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಹಾಗೆ ಬಂದವಳು ನಮ್ಮ ಮನೆಯಲ್ಲೇ ಮಧ್ಯಾಹ್ನ ಉಂಡು, ಜಗಲಿಯಲ್ಲಿ ಮಲಗಿ, ಸಂಜೆಯವರೆಗೆ ಇದ್ದು ಅತ್ತೆಯಿಂದ ಹಳೆಯ ಸೀರೆ, ತರಕಾರಿ, ತೆಂಗಿನಕಾಯಿ ಅಂತ ಏನಾದರೂ ಬೇಡಿ, ಗೆದ್ದುಕೊಂಡೇ ಹೋಗುತ್ತಿದ್ದಳು.

ಅತ್ತೆ ಇರುವವರೆಗೆ ಸುತ್ತಮುತ್ತಲು ಇದ್ದ ಒಕ್ಕಲುಗಳು, ಮನೆಗೆ ಬಂದು ಹೋಗುತ್ತಾ “ಅಮ್ಮಾ, ಒಂದ್ ವೀಳ್ಯ ಕೊಡಿ ಕಾಂಬ”. ಎಂದು , ಹೊರಗಿನ ಜಗಲಿಯಲ್ಲಿ ಕುಕ್ಕರುಕಾಲಿನಲ್ಲಿ ಕುಳಿತು ಮಾತಾಡಿಸಿ ಹೋಗುತ್ತಿದ್ದರು. “ಅಮ್ಮಾ. ಇಂದು ಪೇಟೆಗೆ ಯಾರೂ ಹೋಪರ್ ಇಲ್ಯೆ. ಒಂದು ಚೂರ್ ಕಾಫಿ ಪುಡಿ ಕೊಡ್ತ್ರ್ಯೆ?. ಸಕ್ಕರೆ ಕೊಡಿನ್ಯೆ ಬೆಲ್ಲ ಕೊಡಿನ್ಯೆ. ಕಡಿಕ್ ತಂದು ಕೊಡತಿ” ಎಂದು ಕಡ ತೆಗೆದುಕೊಂಡು ಹೋಗಿ, ಮತ್ತೆ ಯಾವಾಗಲಾದರೂ ಹಿಂದಿರುಗಿಸುತ್ತಿದ್ದರು. ಅತ್ತೆಯೂ ಅವರ ಸುಖಕಷ್ಟಕ್ಕೆ ಆಗುತ್ತಿದ್ದುದರಿಂದ ಆಗಾಗ ಕೈಗಡವಾಗಿ ಹಣವನ್ನೂ ಕೊಡುತ್ತಿದ್ದರು.

ಆವಾಗಿನ ಒಂದು ಆಕಸ್ಮಿಕ ಬೆಳವಣಿಗೆಯೆಂದರೆ ಇಂದಿರಾಗಾಂಧಿ ಸರಕಾರದ ಒಕ್ಕಲು ಮಸೂದೆ ಕಾನೂನು ಬಂದದ್ದು. ಉಳುವವನೇ ಭೂಮಿಯ ಒಡೆಯ. ನಿಜವಾದ ಅಧಿಕಾರವಿದ್ದ ಯಜಮಾನನಿಗೆ ಭೂಮಿ ಇಲ್ಲ. ಆದರೆ ನಾವು ನಮಗಿದ್ದ ಬೇಸಾಯವನ್ನು ಮಾಡಲು, ಕೆಲಸಕ್ಕೆ ಜನ ಹಾಕಿಕೊಂಡು ಮಾಡಿದರೆ ಅಸಲಾಗುವುದಿಲ್ಲವೆಂದು ಮನೆಯ ಹತ್ತಿರದ ಮರಾಠಿ ಮತ್ತು ಕುಡುಬಿಯರು ಅಂತ ಹತ್ತಾರು ಮನೆಯವರಿಗೆ ಮುಕ್ಕಾಲಂಶ ಗದ್ದೆಗಳನ್ನು ಗೇಣಿಗೆ ಕೊಟ್ಟಿದ್ದು ಅವರು ನಿಷ್ಠೆಯಿಂದ ದುಡಿದು, ವರ್ಷ ವರ್ಷ ಗೇಣಿಯನ್ನು ಕೊಟ್ಟು ನಮ್ಮ ಅತ್ತೆ ಇರುವವರೆಗೆ ಅವರನ್ನು ಗೌರವವಾಗಿಯೇ ಕಾಣುತ್ತಿದ್ದರು.

ಅತ್ತೆಯ ಕಾಲಾನಂತರ ಅದೇ ಅವಧಿಯಲ್ಲಿ ಬಂದ ಒಕ್ಕಲು ಮಸೂದೆ ಕಾಯಿದೆಯು, ಕಲ್ಲಟ್ಟೆಯ ಮನೆಯ ಸ್ಥಿತಿಗತಿಯನ್ನು ಬದಲಾಯಿಸಲು ಬಂದಂತಾಯಿತು. ಒಕ್ಕಲುಗಳೆಲ್ಲಾ ಸ್ವಂತ ಬುದ್ಧಿಯನ್ನು ಬಿಟ್ಟು, ಅವರು  ಬೇಸಾಯ ಮಾಡುತ್ತಿದ್ದ ಗದ್ದೆಗಳೆಲ್ಲಾ, ಅವರದೇ ಎಂದು ಹೇಳಿ ಅದಕ್ಕೆ ಡಿಕ್ಲರೇಶನ್ ಕೊಟ್ಟರು. ಆದರೆ ಅಲ್ಲಿರುವ ಆ ಅಸ್ತಿಯು ಅತ್ತೆಯ ಕಾಲದ ನಂತರ, ಅಡಿಗರ ಮಕ್ಕಳಿಗೆ ಅವರ ಪೀಳಿಗೆಗೆ ಸೇರಬೇಕಿತ್ತು. ಅವರು  ನಮ್ಮನ್ನು ಅಲ್ಲಿಂದ ಹೋಗಲು ಒತ್ತಾಯ ಮಾಡದೇ ಇದ್ದುದರಿಂದ ನಾವೇ ಅದನ್ನು ಅನುಭೋಗಿಸಿಕೊಂಡು ಬರುತ್ತಿದ್ದೆವು. ಆದರೆ ಅಲ್ಲಿ ವಾಸಮಾಡಿ ಕೊಂಡಿದ್ದರಿಂದ ನಾವೇನು ಅಡಿಗರಿಗೆ ಗೇಣಿಯನ್ನೋ ಮತ್ತೊಂದನ್ನೋ ಕೊಡುತ್ತಿರಲಿಲ್ಲ. ಆದರೆ ಈ ಒಕ್ಕಲು ಮಸೂದೆಯ ಕಾನೂನಿನಿಂದ ಅದು ನಮಗೂ ಇಲ್ಲ, ಅಡಿಗರಿಗೂ ಇಲ್ಲ ಅಂತ ಆಗುತ್ತದೆ ಎಂದು ಅಪ್ಪಯ್ಯ ಮುಂದಿನ ಸಾಧ್ಯತೆಗಳ ಬಗ್ಗೆ ಕುಂದಾಪುರದಲ್ಲಿ ಒಬ್ಬ ವಕೀಲರಲ್ಲಿ ಹೋಗಿ, ಅಭಿಪ್ರಾಯ ಕೇಳಿದಾಗ ಹೇಳಿದ್ದನ್ನು ಅಪ್ಪಯ್ಯ ನಂಬಬೇಕಾಯಿತು. ಅವರು ಅಪ್ಪಯ್ಯನ ಅಭಿಮಾನಿಗಳೂ ಆಗಿದ್ದು, “ನೀವು ಸುಮ್ಮನಿದ್ದರೆ ಆಗುವುದಿಲ್ಲ. ಕೊನೆಗೆ ಆ ಆಸ್ತಿ ಯಾರಿಗೂ ಇಲ್ಲದ ಹಾಗಾಗುತ್ತದೆ” ಅಂತ ಹೇಳಿದ್ದನ್ನು ಕೇಳಿ ಅಪ್ಪಯ್ಯನೂ ನಾವು ಮಾಡುತ್ತಿದ್ದ ಬೇಸಾಯದ ಗದ್ದೆ ಮತ್ತು ಗೇಣಿಗೆ ಕೊಟ್ಟ ಗದ್ದೆಯನ್ನೂ ಸೇರಿಸಿ ಅಡಿಗರಿಗೆ ಆ ಆಸ್ತಿ ನಮ್ಮ ಅನುಭೋಗದ್ದು ಎಂದು ಡಿಕ್ಲರೇಶನ್ ಕೊಟ್ಟರು. ಅಪ್ಪಯ್ಯನಿಗೆ ಈ ಮಾರ್ಗ ಸುತರಾಂ ಇಷ್ಟವಿರಲಿಲ್ಲ. ಆದರೂ ನಮ್ಮ ಒಕ್ಕಲುಗಳು ಸ್ವಲ್ಪವೂ ನಮಗೆ ತಿಳಿಸದೇ, ಹೀಗೆ ಮಾಡಿದರಲ್ಲ ಎಲ್ಲವೂ ಕೈ ತಪ್ಪಿ ಹೋಗುತ್ತದೆ ಎಂದು ಹಾಗೆ ಮಾಡಲೇ ಬೇಕಾಯಿತು. ಆದರೆ ಅದರಿಂದ, ಆವರೆಗೆ ನಮ್ಮ ಬಗ್ಗೆ ಸ್ವಲ್ಪ ಮೃದುವಾಗಿದ್ದ ಅಡಿಗರ ಕುಟುಂಬದೊಂದಿಗೆ ಮತ್ತೆ ನಿಷ್ಠುರವಾಗಬೇಕಾಯಿತು. ಡಿಕ್ಲರೇಶನ್ ವ್ಯಾಜ್ಯ ಕೋರ್ಟಿನಲ್ಲಿ ನಡೆದು ನಡೆದು ನಮ್ಮ ಕುಂದಾಪುರದ ವಕೀಲರಿಗೆ ಅಪ್ಯಯ್ಯನಿಂದ ಹಣ ಸಂದಾಯವಾಗುತ್ತಲೇ ಬಂದದ್ದು ಮಾತ್ರವಾಗಿ, ಕೇಸು ಮುಂದೆ ಮುಂದೆ ಹೋಯಿತು. ನಂತರ ಕೋರ್ಟಿನಲ್ಲಿಯೇ ತೀರ್ಮಾನವಾಗಿ ಇಡೀ ಆಸ್ತಿಯನ್ನು  ನಮಗೂ, ನಮ್ಮ ಒಕ್ಕಲುಗಳಿಗೂ ಅಷ್ಟಷ್ಟನ್ನು ಪಾಲು ಅಂತ ಮಾಡಿ ತೀರ್ಮಾನ ಕೊಟ್ಟರು. ಆಗಲೇ ಒಕ್ಕಲುಗಳಲ್ಲಿ ನಿಷ್ಠುರವಾಗಿದ್ದರಿಂದ ’ಏನಾದರೂ ಬಿಡುವುದಿಲ್ಲ’ ಎಂದು ಆ ತೀರ್ಪಿಗೆ, ಆಕ್ಷೇಪಿಸಿ, ಅಪ್ಪಯ್ಯ ಮೇಲಿನ ಕೋರ್ಟಿನಲ್ಲಿ ಅಫೀಲು ಮಾಡಿದರು. ಅಂತೂ ಅಪ್ಪಯ್ಯನ ಕಾಲದವರೆಗೂ ಆ ಟ್ರಿಬ್ಯುನಲ್ ವ್ಯಾಜ್ಯ ಇತ್ಯರ್ಥ ಆಗಲೇ ಇಲ್ಲ.

(ಮುಂದುವರಿಯುವುದು)

ಶುಕ್ರವಾರ, ಅಕ್ಟೋಬರ್ 13, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 26

ಆಗ ಕುಂದಾಪುರದ ನಮ್ಮ ಭಂಡಾರ್ಕಾರ್ಸ್ ಕಾಲೇಜು ಗಲಾಟೆಗೆ, ಸ್ಟ್ರೈಕ್ ಗೆ ಬಹಳ ಪ್ರಸಿದ್ಧಿಯಾಗಿತ್ತು. ಮಕ್ಕಳು ಎಷ್ಟು ಜೋರಾಗಿದ್ದರು ಎಂದರೆ ಒಮ್ಮೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ತುಂಬಾ ಗಲಾಟೆ ಮಾಡುತ್ತಿದ್ದಾಗ ಪ್ರಿನ್ಸಿಪಾಲರು ಬುದ್ಧಿ ಹೇಳಲು ಕ್ಲಾಸಿಗೆ ಬಂದರು. “ಹಾಗೆ ಮಾಡಬಾರದು ಹೀಗೆ ಮಾಡಬೇಕು” ಅಂತ ಉಪದೇಶವಾಯಿತು. ಅವರು ಬಂದಾಗ ಮತ್ತು ಅವರು ಮಾತನಾಡಿದ ಅಷ್ಟೂ ಹೊತ್ತು ಎಲ್ಲರೂ ಪಾಪದವರಂತೆ ಸುಮ್ಮನೇ ಕುಳಿತಿದ್ದರು. ಅವರು ಮಕ್ಕಳಿಗೆ ಚೆನ್ನಾಗಿ ಬೈದು ಮುಗಿಸಿ, ಕ್ಲಾಸಿನಿಂದ ತಿರುಗಿ ಹೊರಗೆ ಹೋಗಿ, ಪ್ಯಾಸೇಜಿನಲ್ಲಿ ಮುಂದೆ ಹೋಗುತ್ತಿದ್ದರಷ್ಟೆ. ಅವರ ಬೆನ್ನಿನ ಹಿಂದೆಯೇ ಡಮ್ ಡಮ್ ಶಬ್ದ. ಒಮ್ಮೆಲೇ ಹೌಹಾರಿದ ಅವರು ಹಿಂದೆ ನೋಡದೇ ಓಡಿ ಹೋಗಬೇಕಾಯಿತು. ಕ್ಲಾಸಿನ ಒಳಗಿನಿಂದ ಕಿಟಕಿಯ ಮೂಲಕ ಹೊರಗೆ ಅವರ ಹಿಂದೆಯೇ ಬೀಳುವಂತೆ ಯಾರೋ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಎಸೆದು ಬಿಟ್ಟಿದ್ದರು. 

ಆಗ ಶಾಸ್ತ್ರಿ ವೃತ್ತದ ಹತ್ತಿರವೇ ರಸ್ತೆಯ ಆಚೆ ಮೂಡುದಿಕ್ಕಿನಲ್ಲಿ, ದೊಡ್ಡ ಬಂಟ್ಸ್ ಹಾಸ್ಟಲ್ ಇತ್ತು. ಈಗ ಇಲ್ಲ. ಅದನ್ನು ಕೆಡವಿ ದೊಡ್ಡ ಮದುವೆ ಹಾಲ್ ಮಾಡಿದ್ದಾರೆ. ಅಲ್ಲಿ ಊರ ಪರ ಊರ ಬಂಟ್ಸ್ ನವರ ಮಕ್ಕಳು, ಕಾಲೇಜಿನಲ್ಲಿ ಓದುವವರು ಮಾತ್ರ ಇರುತ್ತಿದ್ದರು. ಅಲ್ಲಿಯ ಮಕ್ಕಳಲ್ಲಿಯೇ ಎರಡು ಗುಂಪು. ಯಾವಾಗಲೂ ಹೊಡೆದಾಟ. ಗಲಾಟೆ. ಆಗ ಜಯಪ್ರಕಾಶ,  ಉದಯ ಅಂತೆಲ್ಲಾ ಯಾರುಯಾರೋ ಬಹಳ ಜೋರು ಜೋರಿನ, ಭರ್ತಿ ಆಳಿನ ಗಡ್ಡ ಮೀಸೆ ಬಿಟ್ಟು ಗತ್ತಿನಲ್ಲಿ ತಿರುಗುವ ಮಕ್ಕಳು ಇದ್ದರು. ಅವರು ಶರ್ಟಿನ ಮೇಲಿನೆರಡು ಗುಂಡಿಯನ್ನು ಹಾಕದೇ, ಅವರ ಅಗಲವಾದ ಎದೆಯನ್ನು ತೋರಿಸುತ್ತಾ ನಾಲ್ಕಾರು ಮಕ್ಕಳ ಜೊತೆಗೆ ಬರುತ್ತಿದ್ದರೆ, ಅವರನ್ನು ನೋಡಿದ ನಾವು ಬದಿಗೆ ಸರಿದು ದಾರಿ ಬಿಡುತ್ತಿದ್ದೆವು. ನಮಗೆ ಹೆದರಿಕೆಯಾಗುತ್ತಿತ್ತು. ಕೆಲವು ಹುಡುಗರು ಅವರ ಅಂಗಿಯ ಒಳಗೆ ತಲವಾರು, ಕತ್ತಿಯನ್ನು, ಸೈಕಲ್ ಚೈನನ್ನು ಇರಿಸಿಕೊಂಡು ತಿರುಗುತ್ತಿದ್ದರು ಅಂತಲೂ ಹೇಳುತ್ತಿದ್ದರು.

ಒಮ್ಮೆ ಒಂದು ಗಲಾಟೆ ಪ್ರಕರಣದಲ್ಲಿ ಹೊಡೆದಾಟವಾಗಿ ಒಂದಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾದರು. ಅವರಲ್ಲೇ ವೈರ ಬೆಳೆದು ಪೋಲೀಸ್ ಕೇಸ್ ಆಯಿತು. ಅವರಲ್ಲೇ ಒಂದು ಪಕ್ಷದವರ ದೂರಿನ ಮೇಲೆ, ವಿಚಾರಣೆ ಮಾಡಲು, ಆಗಿನ ಬಹಳ ಜೋರು ಸ್ಟ್ರಿಕ್ಟ್ ಅಂತ ಹೆಸರುವಾಸಿಯಾಗಿದ್ದ, ಎಸ್. ಐ. ಭಾವ ಎನ್ನುವವರು ಅಲ್ಲಿನ ಕೆಲವು ಹುಡುಗರಿಗೆ ಪೋಲೀಸ್ ಸ್ಟೇಶನ್ನಿಗೆ ಬರಹೇಳಿದರು. ಇವರು ಹೋಗಲೇ ಇಲ್ಲ. ಕರೆಯಲು ಬಂದ ಪೋಲೀಸರಿಗೆ “ಧೈರ್ಯವಿದ್ದರೆ ಅವರೇ ಇಲ್ಲಿಗೆ ಬಂದು ಕರೆಯೊಯ್ಯಲಿ” ಎಂಬ ಸವಾಲು ಬೇರೆ. ಎಸ್ ಐ ಯವರಿಗೂ ಹುರುಪು. ಕೈಯಲ್ಲಿರುವ ಅಧಿಕಾರದ ಧೈರ್ಯ. ಅವರು ಜೋರಿನಿಂದಲೇ ಏನಾಗುತ್ತದೆ?. ನೋಡಿಯೇ ಬಿಡುತ್ತೇನೆ ಎಂದು ಹಾಸ್ಟೆಲ್ಲಿಗೆ ಅವರ ಬುಲೆಟ್ ಹತ್ತಿಕೊಂಡು ಬಹಳ ರಭಸದಿಂದ ಬಂದೇ ಬಿಟ್ಟರು.

ಅದು ಚೌಕಾಕಾರದ ಮೂರು ಮಹಡಿಯ ದೊಡ್ಡ ಕಟ್ಟಡ. ಪಶ್ಚಿಮದ ರಸ್ತೆಯ ಭಾಗದಲ್ಲಿ ಹೆಬ್ಬಾಗಿಲು ಇದ್ದರೆ, ಮಧ್ಯದಲ್ಲಿ ವಿಶಾಲವಾದ ಬೈಕ್ ಸೈಕಲ್ ಗಳನ್ನು ಇಡುವ ದೊಡ್ಡ ಅಂಗಳದಂತಹ ವಿಶಾಲ ಸ್ಥಳ. ಎಸ್ ಐ ಯವರು ಅಲ್ಲಿಗೆ ಹೋಗಿ ಮಧ್ಯದಲ್ಲಿ ನಿಂತು. ಆಚೆ ಈಚೆ ನೋಡಿದರು. ಕಡೆಗೆ ಮೇಲೆ ನೋಡಿ, ಕೇಸ್ ಇರುವ ಹುಡುಗರ ಹೆಸರು ಹಿಡಿದು ಗಟ್ಟಿಯಾಗಿ ಕೂಗಿ, “ಯಾರದು ಕಾಲೇಜಿನಲ್ಲಿ ನ್ಯೂಸೆನ್ಸ್ ಮಾಡಿದ್ದು? ಹೊರಗೆ ಬನ್ನಿ” ಎಂದು ಕರೆದರು.

ಆದರೆ ಯಾರೂ ಹೊರಗೆ ಬರಲಿಲ್ಲ. ಅವರ ಸುತ್ತ ಇದ್ದ ಕೈಕೆಳಗಿನ ನಾಲ್ಕಾರು ಪೋಲೀಸರು ಆಗಲೇ ಎಚ್ಚರಿಸಿದ್ದರಿಂದ ಸೀದಾ ರೂಮಿನ ಒಳಗೆ ನುಗ್ಗಿ ಹೋಗಲು ಧೈರ್ಯ ಸಾಲಲಿಲ್ಲ ಎಂದು ಕಾಣುತ್ತದೆ. ಎಸ್. ಐ.ಯವರು  ಕೋಪದಿಂದ ಕುದಿದರು. ಅದು ತಮಗೆ ಆದ ಅವಮಾನ ಎಂದು ಅವರ ಸ್ಥಾನ ಮಾನ, ಅಧಿಕಾರವೂ ಎಚ್ಚರಿಸಿತು. ಆಮೇಲೆ ಅಲ್ಲಿಯೇ ಅಂಗಳದಲ್ಲಿ ಇರಿಸಿದ್ದ ಕೆಲವು ಸೈಕಲ್ಲುಗಳನ್ನು ಕೆಳಗೆ ಹಾಕಿ ಅದರ ಮೇಲೇ ಬೈಕ್ ಹಾರಿಸಿ ಕೆಲವು ಸೈಕಲ್ಲುಗಳನ್ನು ಪುಡಿಮಾಡಿದರು. ಆದರೂ ಹುಡುಗರು ಯಾರೂ ಹೊರಗೆ ಬರಲಿಲ್ಲ. ಎಸ್. ಐ. ಯವರು ಮತ್ತೆ ಜೋರಾಗಿ ಅರಚಿ ಕರೆದರು. ಅಷ್ಟರಲ್ಲಿ ಅನಿರೀಕ್ಷಿತವಾದ ಘಟನೆಯೊಂದು ನಡೆದುಬಿಟ್ಟಿತು. ಮೇಲಿನಿಂದ ಪದಾರ್ಥವನ್ನು ಅರೆಯಲು ಉಪಯೋಗಿಸುವ ದೊಡ್ಡ ಕಲ್ಲಿನ ಮಗುವನ್ನು  ಯಾರೋ ದೊಪ್ಪೆಂದು ಕೆಳಗೆ ಎತ್ತಿ ಹೊತ್ತು ಹಾಕಿದರು. ಪುಣ್ಯಕ್ಕೆ ಅದು ಎಸ್. ಐ. ಯವರಿಗಿಂತ ಸ್ವಲ್ಪ ಹಿಂದೆ ಬಿದ್ದುದರಿಂದ ಅವರಿಗೆ ಏನೂ ಪೆಟ್ಟಾಗಲಿಲ್ಲ. ಆದರೆ ಬೈಕ್ ನ ಹಿಂದಿನ ಒಂದು ಬದಿಯ ಮೇಲೆ ಬಲವಾಗಿ ಬಿದ್ದುದರಿಂದ ಅದು ಜಕಮ್ ಆಯಿತು. ಕಲ್ಲು ದಡ್ ದಡ್ ಎಂದು ಸದ್ದು ಮಾಡುತ್ತಾ ಹೋಗಿ ಮೂಲೆಯಲ್ಲಿ ಬಿದ್ದಿತು. ಮೇಲೆ ನೋಡಿದರೆ ಯಾರೂ ಇಲ್ಲ. ಎಲ್ಲರಿಗೂ ಗಾಬರಿಯಾಯಿತು. ಇಂತಹಾ ಸಂದರ್ಭದಲ್ಲಿ ಮತ್ತೆ ಎಲ್ಲಾ ಮಕ್ಕಳು ಒಂದಾಗಿದ್ದರು. ಅವರಲ್ಲೇ ಒಗ್ಗಟ್ಟು. ಯಾರೂ ಬಾಯಿಬಿಡುವುದಿಲ್ಲ.

ಆಗ ಎಸ್. ಐ. ಯವರಿಗೆ ಸ್ವಲ್ಪ ಹೆದರಿಕೆಯಾಯಿತು. ಈ ಹಿಂದು ಮುಂದಿಲ್ಲದ ಬಿಸಿ ರಕ್ತದ ಮಕ್ಕಳ ದೆಸೆಯಿಂದ ಕೈ ಕಾಲು ಮುರಿದುಕೊಂಡರೆ ಮತ್ತೆ ರಗಳೆ ಯಾಕೆ? ಎಂದೂ ಅನ್ನಿಸಿರಬೇಕು. ಅದೂ ಅಲ್ಲದೇ ಅಲ್ಲಿರುವುದು ಪ್ರಭಾವಿ ವ್ಯಕ್ತಿಗಳ, ಶ್ರೀಮಂತರ ಮಕ್ಕಳೇ ಅಂತಲೂ ಗೊತ್ತಾಗಿರಬೇಕು. ಆದರೆ ಹಾಗೆಯೇ ಹಿಂದೆ ಹೋದರೆ ಅವರ ಮರ್ಯಾದೆ ಏನಾಗುತ್ತದೆ? ಕೂಡಲೇ ಸಿಟ್ಟಿನಿಂದ, “ನೀವು ನನ್ನನ್ನು ಏನು ಅಂತ ತಿಳಿದಿದ್ದೀರಿ? ಇದನ್ನು ಹೀಗೆಯೇ ಬಿಡುವುದಿಲ್ಲ. ಕೋರ್ಟಿನಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ.” ಎನ್ನುತ್ತಾ ಅವರ ಸಹಚರರೊಂದಿಗೆ ಜಾಗ ಖಾಲಿ ಮಾಡಿದರು. ಅಂತೂ ಅವರಿಗೂ ಏನೂ ಮಾಡಲಾಗಲಿಲ್ಲ. ಮುಂದೆ ಏನಾಯಿತೋ ಗೊತ್ತಾಗಲಿಲ್ಲ.

(ಮುಂದುವರಿಯುವುದು)

ಗುರುವಾರ, ಅಕ್ಟೋಬರ್ 12, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 25

ಪ್ರತೀ ವರ್ಷ ನವಂಬರ್ ಒಂದರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತಾಳಮದ್ದಲೆ ನಡೆಯುತ್ತಿತ್ತು. ಬಹುಷ್ಯ ಅದು ಈಗಲೂ ಮುಂದುವರಿದಿದೆ. ಇಡೀ ರಾತ್ರಿಯ ತಾಳಮದ್ದಲೆ. ಒಂದು ಬಡಗುತಿಟ್ಟಿನ ಭಾಗವತಿಕೆಯಲ್ಲಿ ಇದ್ದರೆ ಇನ್ನೊಂದು ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಇರುತ್ತಿತ್ತು. ಕಾಲೇಜಿನ ತಾಳಮದ್ದಲೆ ಎಂದರೆ ಆಗಿನ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಗಳೆಲ್ಲ ಇರುತ್ತಿದ್ದರು. ನಮ್ಮ ಕಾಲೇಜಿನ ತಾಳಮದ್ದಲೆಯಲ್ಲಿ ಭಾಗವಹಿಸುವುದೆಂದರೆ ಕಲಾವಿದರಿಗೆ ಅದೊಂದು ಪ್ರತಿಷ್ಠೆಯ ವಿಷಯವಾಗಿತ್ತು. ಶೇಣಿಯವರು, ರಾಮದಾಸ ಸಾಮಗರು, ಪೆರ್ಲ ಕೃಷ್ಣ ಭಟ್ರು, ಕುಂಬ್ಳೆ ಸುಂದರ್, ಪ್ರಭಾಕರ ಜೋಷಿಯವರು, ತೆಕ್ಕಟ್ಟೆ ಆನಂದ ಮಾಸ್ಟ್ರು  ದಾಮೋದರ ಮಂಡೆಚ್ಚರು. ಬಲಿಪರು, ಅಪ್ಪಯ್ಯ, ಕಾಳಿಂಗ ನಾವಡರು ಮುಂತಾದ ಅತಿರಥ ಮಹಾರಥ ಕಲಾವಿದರು ಎಲ್ಲರೂ ಇರುವ ಒಂದು ದೊಡ್ಡ ಕಾರ್ಯಕ್ರಮವಾಗುತ್ತಿತ್ತು.

ಒಮ್ಮೆ ನಾನು ಓದುತ್ತಿರುವಾಗ ಆದ ತಾಳಮದ್ದಲೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ಆ ದಿನ ಮೊದಲ ಪ್ರಸಂಗ ವಾಲಿವಧೆ. ರಾಮದಾಸ ಸಾಮಗರ  ಮತ್ತು ಶೇಣಿಯವರ ರಾಮ ಮತ್ತು ವಾಲಿ. ಕೊನೆಯ ಸನ್ನಿವೇಶ. ಆ ಸಮಯದಲ್ಲಿ ಅವರ ವಾಗ್ಯುದ್ಧ ನೋಡಲೆಂದೆ ಜನ ಎಲ್ಲೆಲ್ಲಿಂದ ಬರುತ್ತಿದ್ದರು. ಇಡೀ ಹಾಲ್ ಪ್ರೇಕ್ಷಕರಿಂದ ತುಂಬಿತ್ತು. ಅಪ್ಪಯ್ಯನ ಕ್ರಮ ಅಂದರೆ,  ತಾಳಮದ್ದಲೆಯಲ್ಲಿ.  ಅರ್ಥದಾರಿಗಳು ಅವಧಿ ಮೀರಿ ಅರ್ಥ ಹೇಳಿದರೆ, ಬೋರ್ ಆಯಿತು ಅನ್ನಿಸಿದರೆ ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಲು ತಾಳವನ್ನು ಮೆಲ್ಲಗೆ ಕುಟ್ಟಿ ಸೂಚನೆ ಕೊಡುತ್ತಿದ್ದರು. ಮೂರು ಬಾರಿ ತಾಳ ಹೊಡೆಯುವುದರ ಒಳಗೆ ಅರ್ಥದಾರಿಗಳು ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಬೇಕು. ಅದು ತಾಳಮದ್ದಲೆ ಬಿದ್ದು ಹೋಗದೇ ಇರಲು ಮತ್ತು ನಿರ್ದಿಷ್ಟ ಅವಧಿಯಲ್ಲಿ ಕಾರ್ಯಕ್ರಮ ಮುಗಿಯಲು ಅಪ್ಪಯ್ಯ ಅನುಸರಿಸುತ್ತಿದ್ದ, ಹಾಗೂ ಅಪ್ಪಯ್ಯ ಮತ್ತು ಕಲಾವಿದರೊಳಗಿನ ಒಂದು ಅಲಿಖಿತ ಒಪ್ಪಂದ. ತಾಳಮದ್ದಲೆ ಶುರುವಾಗುವ ಮೊದಲು ಅಲ್ಲಿಯ ವ್ಯವಸ್ಥಾಪಕರೂ ಕಲಾವಿದರೂ ಈ ನಿಯಮವನ್ನು ತಿಳಿದಿರುತ್ತಿದ್ದರು.

ಆದರೆ ಅಂದು ತಾಳಮದ್ದಲೆಯಲ್ಲಿ ಅಪ್ಪಯ್ಯ ಹಾಕಿದ ನಿಯಮವು  ಅಲ್ಲಿ ನಡೆಯಲಿಲ್ಲ. ಶೇಣಿಯವರು, ಸಾಮಗರು ಮಾತಿಗೆ ಮಾತು ಬೆಳೆದು ವಾದಕ್ಕೆ ಪ್ರತಿವಾದ ಮಾಡಿಕೊಳ್ಳುತ್ತಾ ಬಿಸಿಬಿಸಿಯಾಗಿ ಜೋರಿನಿಂದ ಅರ್ಥ ಹೇಳುತ್ತಿದ್ದರು. ಸಮಯದ ಅರಿವೆಯೇ ಅವರಿಗೆ ಇರಲಿಲ್ಲ. ಅಪ್ಪಯ್ಯ ಮೊದಲೇ ಹೇಳಿದಂತೆ ಒಂದು ತಾಳ ಹೊಡೆದು ಸೂಚನೆ ಕೊಟ್ಟರು. ಎರಡನೆಯ ಸಲವೂ ಆಯಿತು, ಆದರೆ ಅವರು ಮುಂದಿನ ಪದ್ಯಕ್ಕೆ ಬರುವಂತೆಯೇ ಕಾಣಲಿಲ್ಲ. ಆಮೇಲೆ ತುಂಬಾ ಅಸಮಾಧಾನದಿಂದ ಮೂರನೆಯ ಬಾರಿಯೂ ತಾಳ ಹೊಡೆದು ಸೂಚನೆಯನ್ನು ಕೊಟ್ಟಾಯಿತು. ಆದರೆ ಅರ್ಥದಾರಿಗಳು ಮಾತು ನಿಲ್ಲಿಸುವಂತೆ ಕಾಣಲಿಲ್ಲ. ಅಪ್ಪಯ್ಯನಿಗೆ ತಾಳ್ಮೆ ತಪ್ಪಿತು. ನಿಧಾನವಾಗಿ ಅವರ ಸ್ಥಾನದಿಂದ ಎದ್ದು ಆ ದೊಡ್ಡ ಹಾಲಿನಿಂದ ಹೊರಗೆ ಬಂದು, ಒಂದು ಕಂಬಕ್ಕೆ ಒರಗಿ ಕತ್ತಲನ್ನು ನೋಡುತ್ತಾ ನಿಂತು ಬಿಟ್ಟರು. ಸಭೆಯಲ್ಲಿ ಸೇರಿದ ಪ್ರೇಕ್ಷಕರೂ ಹಿಂದಿನಿಂದ, “ಸಾಕು, ಮುಂದೆ ಹೋಗಲಿ” ಎಂದು ಕೂಗಲು ಶುರು ಮಾಡಿದರು.

ಅಂತೂ ಇಂತೂ ಕೊನೆಗೆ ವಾದವನ್ನು ಮುಗಿಸಿದ ಆ ಕಲಾವಿದರು, ಮುಂದಿನ ಪದ್ಯಕ್ಕೆ ಭಾಗವತರನ್ನು ನೋಡಿದರೆ, ಭಾಗವತರು ಎಲ್ಲಿದ್ದಾರೆ? ಅವರ ಸ್ಥಾನ ಖಾಲಿ. ಮದ್ದಲೆ ಬಾರಿಸುತ್ತಿದ್ದ ದುರ್ಗಪ್ಪ ಆಚೆ ಈಚೆ ನೋಡುತ್ತಿದ್ದಾನೆ. ಭಾಗವತರು ಇಲ್ಲ. ಹಾರ್ಮೋನಿಯಂ ಬಾರಿಸುತ್ತಿದ್ದವರಿಗೂ ಗೊತ್ತಿಲ್ಲ. ತಾಳ ಮದ್ದಲೆ ನಿಂತಿತು. ವ್ಯವಸ್ಥಾಪಕರನ್ನು ಕರೆಸಿ  ಭಾಗವತರು ಎಲ್ಲಿ ಅಂತ ಹುಡುಕಿಸುವುದಾಯಿತು. ಯಾರೋ “ಅವರು ಹೊರಗೆ ಇದ್ದಾರೆ” ಅಂದರು. ವ್ಯವಸ್ಥಾಪಕರು ಓಡಿ ಭಾಗವತರನ್ನು ಕಂಡು, “ಏನು ಇಲ್ಲಿದ್ದೀರಿ? ಏನಾಯಿತು? ಬನ್ನಿ ಪದ್ಯಕ್ಕಾಯಿತು” ಎಂದರೆ, ಅಪ್ಪಯ್ಯನಿಂದ, “ಅವರಿಗೆ ಭಾಗವತಿಕೆ ಯಾಕೆ? ಅವರೇ ಅರ್ಥ ಹೇಳಿ ಮುಗಿಸಲಿ, ಅವರು ನನ್ನ ಸೂಚನೆಯನ್ನು ಪಾಲಿಸಲಿಲ್ಲ, ತಾಳಮದ್ದಲೆ ಹಾಳಾದರೆ ನಾನು ಇದ್ದು ಏನು ಮಾಡಿದಂತಾಯಿತು?” ಎನ್ನುವ ಉತ್ತರ ಬಂತು. ಕೊನೆಗೆ “ಹಾಗಲ್ಲ, ಹೀಗೆ. ಸಮಾಧಾನ ಮಾಡಿಕೊಳ್ಳಿ. ತಾಳಮದ್ದಲೆ ನಿಂತರೆ ನಮ್ಮ ಮರ್ಯಾದೆ  ಹೋಗುತ್ತದೆ ಬನ್ನಿ”, ಎಂದು ಗೋಗರೆದ ಮೇಲೆ ಅಪ್ಪಯ್ಯ ಪುನಹ ಬಂದು ಭಾಗವತಿಕೆಗೆ, ಅವರ ಸ್ವಸ್ಥಾನದಲ್ಲಿ ಕುಳಿತರು ಅಂತಾಯಿತು. ನಂತರ ಎಲ್ಲರು ಒಂದು ತರಹ ಬಿಗುವಾಗಿಯೇ ಇದ್ದರು. ಮುಂದೆ ಏನಾಗುತ್ತದೋ? ಯಾರು ಯಾರೊಡನೆ ಮಾತಿಗಿಳಿದು ಜಗಳ ಶುರುವಾಗುತ್ತದೋ ಅಂತ ಆತಂಕದಿಂದಲೇ ತಾಳಮದ್ದಲೆ ಮುಂದುವರಿಯಿತು. ಆದರೆ ಹೆಚ್ಚುಕಡಿಮೆ ಒಂದು ಅರ್ಧಗಂಟೆಯ ಅಂತರದಲ್ಲಿ ಪೂರ್ವದಲ್ಲಿ ನಿರ್ಣಯಿಸಿದ ಅವಧಿಯಲ್ಲಿಯೇ ಆ ಪ್ರಸಂಗವೂ ಮುಗಿಯಿತು, ಮುಂದಿನ ಪ್ರಸಂಗಕ್ಕೆ ಮುಂದಿನ ಭಾಗವತರಿಗೆ ಅಪ್ಪಯ್ಯ ತಾಳವನ್ನು ಹಸ್ತಾಂತರಿಸಿದರು.

ರಂಗಸ್ಥಳದಲ್ಲಿ ಕಲಾವಿದರು ಪದ್ಯವನ್ನು ಎತ್ತುಗಡೆ ಮಾಡಿ ಮಧ್ಯ ಮಧ್ಯ ಕೆಲವು ಪದಗಳನ್ನು ಮಾತ್ರ ಹೇಳಬೇಕು. ಒಳ್ಳೆಯ ಸ್ವರದ ಕಲಾವಿದರಿದ್ದರೆ ಭಾಗವತರು ಅವರಿಗೆ ಪದ್ಯದ ನಿರ್ದಿಷ್ಟ ಪದವನ್ನು ಹೇಳಲು ಅವಕಾಶ ಮಾಡಿಕೊಟ್ಟು, ಅದರ ಮುಂದಿನ ಪದವನ್ನು ಅದೇ ಶೃತಿಯಲ್ಲಿ ಹೇಳುವುದು ಸಂಪ್ರದಾಯ. ಆಗಿನ ಕಾಲದ ಒಬ್ಬ ಪ್ರಸಿದ್ಧ ಕಲಾವಿದರು ಅವರ ಪಾತ್ರದಲ್ಲಿ ಬರುವ ಇಡೀ ಪದ್ಯವನ್ನು ಹೇಳುತ್ತಿದ್ದರು. ಆದರೆ ಅಪ್ಪಯ್ಯನಿಗೆ ಅದು ಕಿರಿಕಿರಿಯಾಗುತ್ತಿತ್ತು. “ನೀವೇ ಎಲ್ಲ ಪದ್ಯ ಹೇಳುವುದಾದರೆ, ನಾವು ಭಾಗವತರು ಅಂತ ಯಾಕೆ ಇರುವುದು?” ಎಂದು ಅವರಿಗೆ ಒಮ್ಮೆ ಹೇಳಿಯೂ ಹೇಳಿದರು. ಆದರೆ ಅವರು ಆಟದ ವಿಶೇಷ ಆಕರ್ಷಣೆಯಾಗಿ, ಅತಿಥಿ ಕಲಾವಿದರಾಗಿ ಬರುತ್ತಿದ್ದುದರಿಂದ ಮತ್ತು ಅಪ್ಪಯ್ಯ ಮತ್ತು ಅವರ ಜೋಡಿಯನ್ನು ಪ್ರೇಕ್ಷಕರೂ ಬಯಸುತ್ತಿದ್ದುದರಿಂದ ಆ ಕಲಾವಿದರು ಅದಕ್ಕೆ ಅಷ್ಟು ಗಮನವನ್ನು ಕೊಡಲಿಲ್ಲ ಅಂತ ಕಾಣುತ್ತದೆ. ಅಪ್ಪಯ್ಯನಿಗೆ ಒಮ್ಮೆ ಸಿಟ್ಟು ಬಂದು, ಆ ಕಲಾವಿದರ ಪಾತ್ರವು ರಂಗಸ್ಥಳಕ್ಕೆ ಬಂದಾಗ ಅವರ ಮಾಮೂಲಿ ಶೃತಿಗಿಂತ ಮೇಲಿನ ಸ್ಥಾಯಿಯಲ್ಲಿ ಶೃತಿಯನ್ನು ಇಟ್ಟು ಪದ್ಯ ಹೇಳಿದರು. ಅವರಿಗೆ ಆ ಏರುಶೃತಿಯಲ್ಲಿ ಪದ್ಯಕ್ಕೆ ಬಾಯಿ ಹಾಕುವುದೇ ಕಷ್ಟವಾಯಿತು. ಆಗ ಆ ಕಲಾವಿದರ ಒಬ್ಬ ಕಟ್ಟಾ ಅಭಿಮಾನಿಗಳು, “ಉಪ್ಪೂರರು ಅವರಿಗೆ ಬೇಕಂತಲೇ ಅವಕಾಶ ನೀಡದೇ ಪಾತ್ರ ಕಳಪೆಯಾಗುವಂತೆ ಮಾಡಿ ಆಟವನ್ನೇ ಹಾಳು ಮಾಡಿದರು” ಎಂದು ಟೀಕೆ ಮಾಡಿದರು. ಅದು ಅಪ್ಪಯ್ಯನಿಗೆ ತಿಳಿಯಿತು. ಆ ಅಭಿಮಾನಿಗಳೂ ಅಪ್ಪಯ್ಯನ ಸ್ನೇಹಿತರೆ.

ಆ ಅಭಿಮಾನಿಗಳು ಯಾವುದೇ ಆಟವಾಗಲಿ, ತಾಳಮದ್ದಲೆಯಾಗಲಿ ಅವರ ಟೇಪ್ ರೆಕಾರ್ಡರ್ ತಂದು, ಎಲ್ಲಾ ಕಡೆಯಲ್ಲೂ ಇಡೀ ಆಟವನ್ನು ರೆಕಾರ್ಡ್ ಮಾಡುತ್ತಿದ್ದರು. ಒಮ್ಮೆ ಅವರು  ಕಾಲೇಜಿನ ತಾಳಮದ್ದಲೆಯಲ್ಲಿ ಟೇಪ್ ರೆಕಾರ್ಡರ್ ತಂದು ಎಂಪ್ಲಿಪಯರಿಗೆ  ವಯರನ್ನು ಸಿಕ್ಕಿಸಿದ್ದು ನೋಡಿದ ಅಪ್ಪಯ್ಯನಿಗೆ ಒಮ್ಮೆಲೇ ಸಿಟ್ಟು ಬಂದು, ಅವರನ್ನು ಕರೆದು, “ಮೊದಲು ಅದನ್ನು ತೆಗೆಯಿರಿ. ನೀವು ನನ್ನ ಪದ್ಯ ಸಮ ಇಲ್ಲವೆಂದು ಹೇಳಿಕೊಂಡು ತಿರುಗುತ್ತೀರಲ್ಲ. ನನ್ನ ಪದ್ಯ ರೆಕಾರ್ಡ್ ಮಾಡುವುದು ಬೇಡ” ಎಂದು ಹಟ ಹಿಡಿದರು. ಅವರು ಎಂಪ್ಲಿಪೈರಿಂದ  ವಯರ್ ನ್ನು ತೆಗೆಯುವಲ್ಲಿಯವರೆಗೆ ಬಿಡಲಿಲ್ಲ. ನಮಗೆಲ್ಲ ಆಶ್ಚರ್ಯ. ಯಾರು ಬೇಕಾದರೂ “ಉಪ್ಪೂರರೇ, ನಮ್ಮ ಕಡೆಗೆ ಯಾವಾಗಲಾದರೂ ಒಮ್ಮೆ ಬನ್ನಿ. ಒಂದು ನಾಲ್ಕು ಪದ್ಯ ಹೇಳಿದರೆ ಕೇಳುವ ಆಶೆಯಿದೆ” ಎಂದರೆ ನೆನಪಿಟ್ಟುಕೊಂಡು ಅವಕಾಶವಾದಾಗ ಅವರ ಮನೆಗೆ, ಮದ್ದಲೆಯವನನ್ನು ಕರೆದುಕೊಂಡು ಹೋಗಿ, ಒಂದಷ್ಟು ಪದ್ಯವನ್ನು ಹೇಳಿ ಮೆಚ್ಚಿಸಿ ಬರುತ್ತಿದ್ದ ಅಪ್ಪಯ್ಯನಿಗೆ ಅಷ್ಟು ಸಿಟ್ಟು ಬಂದದ್ದು ನೋಡಿದ್ದೇ, ನಾವು ಅದೇ ಮೊದಲ ಸಲ.

(ಮುಂದುವರಿಯುವುದು)

ಬುಧವಾರ, ಅಕ್ಟೋಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 24

ನಮಗೆ ಹೆದರಿಕೆ. ಎಲ್ಲಿ ಯಾವ ಕಾಡುಪ್ರಾಣಿಯ ಸುಳಿವನ್ನೋ, ಇನ್ನೇನನ್ನೋ ಕಂಡನೋ ಅಂತ. ಬೀಸುವ ಗಾಳಿಯನ್ನು ಬಿಟ್ಟರೆ ಎಲ್ಲ ಸ್ತಬ್ದ. ಆಗ ಸುಮ್ಮನಿರಲು ಹೇಳಿದವನೇ “ನೋಡಿ, ಎಲ್ಲೋ ನೀರು ಬೀಳುವ ಶಬ್ಧ ಕೇಳುತ್ತಿದೆ ನೋಡಿ. ಇಲ್ಲೆಲ್ಲೋ ಜಲಪಾತ ಇರಬೇಕು. ಹೋಗಿ ನೋಡುವ” ಅಂದ. ನಮಗೆ ನಿರಮ್ಮಳವಾಯಿತು. ಮತ್ತೆ ನಮಗೆ ಉಮೇದು. “ಹೌದು ನೋಡಿಯೇ ಬಿಡುವ” ಅಂತ ಶಬ್ಧ ಕೇಳಿದ ದಿಕ್ಕಿಗೆ ತಿರುಗಿ, ಪೊದೆಯ ಮಧ್ಯ ದಾರಿ ಮಾಡಿಕೊಂಡು ಅಲ್ಲಲ್ಲಿ ಕಲ್ಲು ಮುಳ್ಳುಗಳನ್ನು ಹಾದು ಏಳುತ್ತಾ ಬೀಳುತ್ತಾ ಇಳಿಜಾರಿನಲ್ಲಿ ಮರಗಳನ್ನು ಹಿಡಿದುಕೊಂಡು ಒಬ್ಬರ ಹಿಂದೆ ಮತ್ತೊಬ್ಬರು ಆದರಿಸಿಕೊಳ್ಳುತ್ತಾ ಮುಂದೆ ನಡೆದೆವು. ಸ್ವಲ್ಪ ದೂರ ಹೋದ ಮೇಲೆ ಕಡಿದಾದ ದಾರಿಯಲ್ಲಿ ಇಳಿದು ಹೋಗಿ ಹಾಗೆ ಕಣ್ಣು ಹಾಯಿಸಿ ನೋಡಿದರೆ,

ಏನು ನೋಡುವುದು?. ದೂರದಲ್ಲಿ ದೊಡ್ದ ಜಲಪಾತ. ಧಾರೆ ಧಾರೆಯಾಗಿ ಮೇಲಿನಿಂದ ಸುರಿಯುವ ಹಾಲಿನಂತಹ ನೀರು ದೂರದಲ್ಲಿ ಕಾಣಿಸಿತು. ಪಕ್ಕದಲ್ಲಿರುವವರ ಮಾತೂ ಕೇಳದಷ್ಟು ಜೋರಾಗಿ ಬೋರ್ಗರೆಯುವ ಸದ್ದು. ಅದಕ್ಕೆ ಏನೋ ಹೆಸರಿದೆ. ನನಗೀಗ ನೆನಪಿಗೆ ಬರುತ್ತಿಲ್ಲ. ಸುಮಾರು ಐನೂರು ಆರುನೂರು ಅಡಿ ಎತ್ತರದಿಂದ ದುಮುಕುವ ನೀರನ್ನು ನೋಡಿಯೇ ನಾವು ಮೈಮರೆತೆವು. ಅದರ ಬುಡಕ್ಕೇ ಹೋಗುವ ಎಂದ ಒಬ್ಬ. ನಮ್ಮ ಗುರುಗಳು “ಬೇಡ ಅದರ ಬುಡಕ್ಕೆ ಹೋಗಲು ಸರಿಯಾದ ದಾರಿ ಇಲ್ಲ.  ಅಲ್ಲದೇ ಕೊಟಚಾದ್ರಿ ತುದಿಯನ್ನು ಮುಟ್ಟುವುದು ಕಷ್ಟ, ತಡವಾಗಬಹುದು” ಅಂದರು. ನಾವೂ ನೋಡಿಯೇ ನೋಡಿದೆವು. ಜಲಪಾತದ ಬುಡಕ್ಕೆ ಹೋಗುವುದೂ ಅಷ್ಟು ಸುಲಭವಿರಲಿಲ್ಲ. ಅಷ್ಟು ಕಡಿದಾದ ಪೊದೆ ಮರ ಬೀಳುಗಳು ಇರುವ ಜಾಗ ಅದು. ಅಷ್ಟರಲ್ಲಿ ಮತ್ತೊಬ್ಬ ಹೇಳಿದ “ಇಲ್ಲಿಗೇ ಅಂತಲೇ ಒಮ್ಮೆ ಬರುವ. ಈಗ ಸರ್ ಹೇಳಿದಂತೆ ಹಿಂದಿರುಗುವ” ಎಂದ. ಎಲ್ಲರೂ ಒಪ್ಪಿ, ಅಲ್ಲಿಂದಲೇ ಕಣ್ಣು ತಣಿಯುವಷ್ಟು ಹೊತ್ತು ಆ ಪಾತಾಳಕ್ಕೆ ಮುತ್ತಿನ ಧಾರೆಯಂತೆ ಬೀಳುವ ನೀರನ್ನು ನೋಡಿ, ಹಿಂದಕ್ಕೆ ಬಂದು ಪುನಹ ಬೆಟ್ಟವನ್ನು ಏರತೊಡಗಿದೆವು.

ಸ್ವಲ್ಪ ಮೇಲೆ ಹೋಗುತ್ತಿದ್ದಂತೆ ಕೆಲವರ ಕಾಲಿಗೆ ಏನೋ ಚುಚ್ಚಿದಂತೆ ಆಗತೊಡಗಿತು. ನೋಡಿದರೆ ಕಪ್ಪುಕಪ್ಪು ಹುಳಗಳು.  ನಮ್ಮ ಕಾಲಿಗೆ ಕಚ್ಚಿ ರಕ್ತವನ್ನು ಹೀರುತ್ತಿವೆ. ಅದು ಇಂಬಳ. ಕಚ್ಚುವುದು ಗೊತ್ತಾಗುವುದೇ ಇಲ್ಲ. ಅದು ನಮ್ಮ ರಕ್ತ ಹೀರಿ ದೊಡ್ದದಾಗಿ, ಅವಕ್ಕೇ ಸಾಕು ಎನ್ನಿಸಿದ ಮೇಲೇ ನಮ್ಮನ್ನು ಬಿಟ್ಟು ಕೆಳಗೆ ಬೀಳುತ್ತವೆ. ಆಗ ನಮಗೆ ನೋವಾಗಿ ಚುರುಗುಟ್ಟುತ್ತದೆ. ಅದನ್ನು ಎಳೆದು ಬಿಡಿಸಿಕೊಳ್ಳಲು ಹೋದರೆ ತುಂಡಾಗುತ್ತದೆಯೇ ಹೊರತು, ಚರ್ಮವನ್ನು ಬಿಡುವುದಿಲ್ಲ. ನಮ್ಮ ಗುರುಗಳು ಮುಂಜಾಗ್ರತೆಯಿಂದ ಉಪ್ಪನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಬಂದದ್ದರಿಂದ ನಾವು ಬಚಾವಾದೆವು. ಅವರು ಎಲ್ಲರಿಗೂ ಸ್ವಲ್ಪ ಸ್ವಲ್ಪ ಉಪ್ಪನ್ನು ಕೊಟ್ಟು ಅದನ್ನು ಕರ್ಚೀಪ್ ಗೆ ಹಾಕಿ ಇಂಬಳ ಕಚ್ಚಿದಲ್ಲಿ ಒರೆಸಿಕೊಳ್ಳಿ ಅಂದರು. ನಾವು ಹಾಗೆಯೇ ಮಾಡಿದೆವು. ಅವುಗಳು ಚರ್ಮವನ್ನು ಬಿಟ್ಟು ಕೆಳಗೆ ಬಿದ್ದವು.

 ಬೆಟ್ಟದ ಮಧ್ಯ ಭಾಗಕ್ಕೆ ಬಂದಾಗ ಒಂದು ದೇವಸ್ಥಾನ ಹಾಗೂ ಒಬ್ಬ ಭಟ್ರ ಮನೆ ಸಿಕ್ಕಿತು. ನಮಗೆ  ಆಶ್ಚರ್ಯ, ಅವರು ಇಲ್ಲಿ ಹೇಗೆ ಇದ್ದು ಜೀವನ ಸಾಗಿಸುತ್ತಾರೆ ಎಂದು. ಯಾಕೆಂದರೆ ಆ ಪ್ರದೇಶದಲ್ಲಿ ಅವರೊಬ್ಬರದೇ ಮನೆ. ಅವರಿಗೆ ಏನು ಸಾಮಾನು ಬೇಕಾದರೂ ಬೆಟ್ಟದಿಂದ ಕೆಳಗೆ ಇಳಿದು ನಾಗೋಡಿಗೋ ಕೊಲ್ಲೂರಿಗೋ ಬರಬೇಕು. ಒಂದು ಸರಿಯಾದ ರಸ್ತೆ ಸಹ ಇರಲಿಲ್ಲ. ಅವರನ್ನು ಮಾತಾಡಿಸಿದ ನಾವು, ಮಧ್ಯಾಹ್ನ ನಮ್ಮ ಎಲ್ಲರಿಗೂ ಊಟಕ್ಕೆ ವ್ಯವಸ್ಥೆ ಮಾಡಬಹುದೇ? ಎಂದು ಕೇಳಿದೆವು. ಅವರು ಒಪ್ಪಿದ್ದರಿಂದ ಮಧ್ಯಾಹ್ನದ ಊಟದ ಸಮಸ್ಯೆ ಬಗೆಹರಿದಂತಾಯಿತು. ಪುನಹ ಬೆಟ್ಟ ಹತ್ತಲು ಶುರುಮಾಡಿದೆವು. ಸುಮಾರು ಮಧ್ಯಾಹ್ನದ ಹೊತ್ತಿಗೆ ನಾವು ಕೊಟಚಾದ್ರಿಯ ತುದಿಯಲ್ಲಿ ಇದ್ದೆವು.  ನಮ್ಮ ಎದುರೇ ಮೋಡಗಳು ಹತ್ತಿಯ ಮುದ್ದೆ ಮುದ್ದೆಯಂತೆ ತೇಲಿತೇಲಿ ಸಾಗುತ್ತಿತ್ತು. ಕೆಳಗೆ ಸುತ್ತಮುತ್ತ ಹಸಿರೇ ಹಸಿರು. ಮೇಲಿನಿಂದ ಕೆಳಗೆ ನೋಡುವಾಗ ಮರಗಿಡಗಳು ಬೆಟ್ಟಗುಡ್ಡಗಳು ರಾಶಿಹಾಕಿದಂತೆ ಕಾಣುತ್ತಿತ್ತು.

ನಮಗೆ ಖುಷಿಯೋ ಖುಷಿ. ಅತ್ಯಂತ ಎತ್ತರದಲ್ಲಿ ಆಕಾಶದಲ್ಲಿ ಮೋಡಗಳೊಂದಿಗೆ ನಾವಿದ್ದೇವೆ. ಸುತ್ತಲ ಪ್ರಕೃತಿ ಸೌಂದರ್ಯ ನಮ್ಮನ್ನು ಮುಗ್ದರನ್ನಾಗಿಸಿತ್ತು. ಕೆಲವರು ಸಂತೋಷ ತಾಳಲಾಗದೇ ಕುಣಿಯತೊಡಗಿದರು. ಗಟ್ಟಿಯಾಗಿ ಹುಚ್ಚರಂತೆ ಕೂಗುಹಾಕಿದರು. ಅಲ್ಲೊಂದು ಕಲ್ಲಿನ ಮಂಟಪ.  ಸರ್ವಜ್ಞಪೀಠ. ಅಲ್ಲಿಯೇ ಕುಳಿತು ಮನಸ್ಸು ತಣಿಯುವವರೆಗೆ ಆ ಸೌಂದರ್ಯವನ್ನು ಸವಿದದ್ದಾಯಿತು. ಅಷ್ಟರಲ್ಲೇ ಹೊಟ್ಟೆ ತಾಳಹಾಕಲು ಶುರು ಮಾಡಿದ್ದರಿಂದ ಎಲ್ಲರೂ ಒಟ್ಟಾಗಿ ಪುನಹ ಬೆಟ್ಟವನ್ನು ಇಳಿದು ಭಟ್ರ ಮನೆಗೆ ಬಂದು ತಲುಪಿದೆವು. ಅಲ್ಲಿಯ ಒಂದು ಕೆರೆಯಲ್ಲಿ ಕೆಲವರು ಸ್ನಾನ ಮಾಡಿದರು ನೀರು ಮಂಜುಗಡ್ಡೆಯಷ್ಟು ತಣ್ಣಗಾಗಿತ್ತು. ಒಮ್ಮೆ ನೀರಿಗಿಳಿದರೆ ಆಮೇಲೆ ಆ ಹವೆಗೆ ಹೊಂದಿಕೆಯಾಗಿ ಹಿತವಾಗಿದ್ದು.  ಕೆರೆಯಿಂದ ಮೇಲೆ ಬರುವುದೇ ಕಷ್ಟವಾಯಿತು. ಅಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಹತ್ತುಹತ್ತು ಮಂದಿ ಸರದಿಯಂತೆ ಊಟ ಮಾಡಿದೆವು.

ಸಂಜೆಯವರೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಗುಡ್ಡವನ್ನು ಏರಿ ಕೊಟಚಾದ್ರಿಯ ಶಿಖರ ತಲುಪಿದೆವು. ಆಚೆ ಈಚೆ ತಿರುಗಿದೆವು. ಒಂದು ಬದಿಯಲ್ಲಿ ಚಿತ್ರಮೂಲ ಎಂದು ಬೋರ್ಡು ಹಾಕಿದ್ದರು. ಪಕ್ಕದಲ್ಲಿಯೇ ಇಳಿದು ಹೋಗಲು ಕಾಲುದಾರಿ. ಮರಗಳು ಬೀಳುಗಳನ್ನೇ ಆಧಾರಕ್ಕೆ ಹಿಡಿದುಕೊಂಡು ಇಳಿಯಬೇಕಾಗಿತ್ತು. ಎಲ್ಲಾದರು ಕ್ಷಣಕಾಲ ಆಯತಪ್ಪಿದರೆ ಕೆಳಗೆ ಪಾತಾಳ. ಮೂಳೆ ಸಹ ಸಿಗಲಾರದು. ಅಷ್ಟು ಆಳದ ಕಣಿವೆ. ಜಾಗ್ರತೆಯಿಂದ ಒಬ್ಬೊಬ್ಬರಾಗಿ ಪಕ್ಕದವರಿಗೆ ಎಚ್ಚರಿಕೆ ಹೇಳುತ್ತಾ ನಿಧಾನವಾಗಿ ಇಳಿಯುತ್ತಾ ಸಾಗಿದೆವು. ಅದೊಂದು ಅವಿಸ್ಮರಣೀಯ ಅನುಭವ. ಅಂತೂ ಆ ಬೆಟ್ಟದ ಸಂಧಿಯಲ್ಲಿ ಒಂದು ಕಲ್ಲು ಬಾಯ್ತೆರೆದು ಇದ್ದಂತಹ ಗುಹೆಗೆ ತಲುಪಿದ್ದಾಯಿತು. ಅಲ್ಲಿ ಸುಮಾರು ಹತ್ತಿಪ್ಪತ್ತು ಜನ ನಿಲ್ಲುವಷ್ಟು ಮಾತ್ರಾ ಸಮತಟ್ಟಾದ ಸ್ಥಳ ಇತ್ತು. ಯಾವುದೋ ಮುನಿ ಅಲ್ಲಿಕುಳಿತು ತಪಸ್ಸು ಮಾಡಿದ್ದರಂತೆ. ಮುಂದೆ ಕೆಳಗೆ ಪಾತಾಳ. ಕೆಳಗೆ ನೋಡಲಿಕ್ಕೇ ಹೆದರಿಕೆಯಾಗುತ್ತಿತ್ತು. ಎಲ್ಲೆಲ್ಲೂ ಮರಗಳ ತುದಿಯೇ ಕಾಣುತ್ತಿತ್ತು. ಆಯತಪ್ಪಿದರೆ. ದೇವರೇ ಗತಿ. ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಪುನಹ ಆ ಕೊರಕಲಿನ ದಾರಿಯಲ್ಲಿ ಹತ್ತಿಕೊಂಡು ಮೇಲೆ ಬಂದೆವು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತ್ತು. ಆ ರಾತ್ರಿ ಅಲ್ಲಿಯೇ ಉಳಿಯುವ ನಿರ್ಧಾರ ನಮ್ಮದು.

ಎಷ್ಟು ದೂರದವರೆಗೆ ಕಣ್ಣು ಹಾಯಿಸಿದರೂ ದೃಷ್ಟಿಗೆ ತಡೆ ಎಂಬುದೇ ಇರಲಿಲ್ಲ. ಅಲ್ಲಲ್ಲಿ ತೆಂಗಿನ ತೋಟಗಳು ಹರಡಿಹೋದಂತೆ. ಮನೆಗಳೂ ಚಿಕ್ಕಚಿಕ್ಕದಾಗಿ ಬೆಂಕಿಪೊಟ್ಟಣದ ಹಾಗೆ ಕಾಣುತ್ತಿತ್ತು. ಹರಿಯುವ ನದಿಯು ಭೂಮಾತೆಯ ಸೀರೆಯ ಸೆರಗಿನಂತೆ ಅಡ್ಡಾದಿಡ್ಡಿಯಾಗಿ ಊರೂರನ್ನು ಸುತ್ತುಬಳಸಿ ಹರಿಯುವುದನ್ನು ಕಂಡು ಪುಳಕವಾಯಿತು. ಪಶ್ಚಿಮದ ಆಗಸವು ಆಗಲೇ ಕೆಂಪು ಅರಶಿಣ ಮಿಶ್ರವಾಗಿ ಮೋಡದ ಮರೆಯಲ್ಲಿ ಸೂರ್ಯ ಕಣ್ಣುಮುಚ್ಚಾಲೆಯಾಡಿದಂತೆ ಆಗಾಗ ಎದುರಿಗೆ ಬಂದು ಹೋಗಿ, ಬಂದು ಹೋಗಿ ಮಾಡುತ್ತಿದ್ದ. ಕೊನೇಗೊಮ್ಮೆ ಕಡಲ ಅಂಚಿನಲ್ಲಿ ಮೋಡಗಳ ಮಧ್ಯದಲ್ಲಿ ಅಂತರ್ಧಾನನಾದ. ಹಾಗೆಯೇ ಆ ಸೌಂದರ್ಯವನ್ನು ಸವಿಯುತ್ತಾ ನಮ್ಮನಮ್ಮೊಳಗೆ ಮಾತಾಡುತ್ತಾ ಸಮಯಹೋಗಿ ಕತ್ತಲಾವರಿಸಿದ್ದೇ ಗೊತ್ತಾಗಲಿಲ್ಲ.

ಸೂರ್ಯಾಸ್ತಮಾನದ ಸುಂದರ ಕ್ಷಣಗಳನ್ನು ಕಂಡೆವು. ಕತ್ತಲಾವರಿಸುತ್ತಿದ್ದಂತೆ ತಾಳಲಾರದಷ್ಟು ಚಳಿ. ತಲೆಗೆ ಕಿವಿಗೆ ಬಟ್ಟೆ ಸುತ್ತಿಕೊಂಡು ಸ್ವೆಟರ್ ಶಾಲುಗಳನ್ನು ಹೊದೆದುಕೊಂಡೆವು, ಸೌದೆಯ ಚೂರುಗಳನ್ನು ಅಲ್ಲಲ್ಲಿಹುಡುಕಿ ತಂದು ಒಟ್ಟು ಮಾಡಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡೆವು. ಆಗ ಮತ್ತೆ ಹಾಡು ಕುಣಿತ ಜೊತೆಯಲ್ಲಿ ತಂದ ಚಪಾತಿ ಪಲ್ಯ ಸೇವನೆ. ಎಲ್ಲರೂ ಕುಣಿದು ದಣಿದು ನಿದ್ದೆ ಮಾಡಿದರು. ಬೆಳಿಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಬೆಟ್ಟವನ್ನು ಇಳಿದು ಬಂದು ಭಟ್ರರ ಮನೆಗೆ ಬಂದೆವು. ಮೊದಲೇ ಅವರಿಗೆ ತಿಳಿಸಿದ್ದರಿಂದ ಅವರು ಮಾಡಿದ ಇಡ್ಲಿಯನ್ನು ತಿಂದು ಕಾಫಿಯನ್ನು ಕುಡಿದೆವು. ಬಳಿಕ ಅಲ್ಲಿಂದ ಹೊರಟು, ಬೆಟ್ಟವನ್ನು ಇಳಿದು ಎಲ್ಲರೂ ಹೋಗುವ ಮಾಮೂಲು ದಾರಿಯಲ್ಲಿ ನಡೆದು ಮಧ್ಯಾಹ್ನವಾಗುವಷ್ಟರಲ್ಲಿ ಕೊಲ್ಲೂರು ಸೇರಿ ಅಲ್ಲಿಂದ ಕುಂದಾಪುರಕ್ಕೆ ಬಂದು ನಮ್ಮ ನಮ್ಮ ಗೂಡನ್ನು ಸೇರಿಕೊಂಡೆವು.(ಈ ಭಾಗದಲ್ಲಿ ಇದು ಕೇವಲ ವರದಿ ಅಂತ ಆಗಬಾರದು ಎಂಬ ದೃಷ್ಟಿಯಿಂದ ಕೆಲವು ಸಂಗತಿಗಳನ್ನು ಸ್ವಾರಸ್ಯಕರವಾಗಿ ಬರೆಯಬೇಕಾಯಿತು)

(ಮುಂದುವರಿಯುವುದು)