ಮಂಗಳವಾರ, ಅಕ್ಟೋಬರ್ 17, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 30

 ಅಪ್ಪಯ್ಯನ ಅಪರ ಕ್ರಿಯೆಗಳನ್ನು ಅಣ್ಣಂದಿರೊಂದಿಗೆ ಮಾಡಿ ಮುಗಿಸಿದ ನಾನು, ಮತ್ತೆ ಪುನಹ ಬೆಂಗಳೂರಿಗೆ ಹೋದೆ. ಮನಸ್ಸು ಗೊಂದಲದ ಗೂಡಾಗಿತ್ತು. ಮುಂದೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದೇ, ಭವಿಷ್ಯವೆಲ್ಲ ಕತ್ತಲು ಎಂದೆನಿಸಿದ ಕಾಲ ಅದು. ಮನಸ್ಸಿನಲ್ಲಿ, ಹೀಗೆ ದಿನ ಹೋದರೆ, ನನ್ನ ಜೀವನ, ನೆಲೆ ಕಾಣುವುದೆ ಕಷ್ಟ ಎನ್ನಿಸತೊಡಗಿತು. ಸುಮ್ಮನೇ ಕಾಲತಳ್ಳಲು ತೊಡಗಿದೆ. ಮನಸ್ಸಿನ ಬೇಸರವನ್ನು ನೀಗಿಸಲು ಒಂದಷ್ಟು ಇಂಗ್ಲೀಷ್ ಸಿನೇಮಾಗಳಿಗೆ, ಪುರಭವನದಲ್ಲಿ, ರವೀಂದ್ರಕಲಾ ಕ್ಷೇತ್ರದಲ್ಲಿ ಆಗುತ್ತಿದ್ದ ನಾಟಕಗಳಿಗೆ ಹೋದೆ. ಅಣ್ಣಯ್ಯ ಖರ್ಚಿಗೆ ಕೊಡುತ್ತಿದ್ದ. ಕೊನೆಗೆ, ಹೀಗೆ ಅಲ್ಲಿ ಇಲ್ಲಿ ಕಾಣದ ಸ್ಥಳದಲ್ಲಿ ಸುಮ್ಮನೇ ಅಲೆದಾಡುವುದಕ್ಕಿಂತ, ಊರಲ್ಲೇ ಇರುವುದು ಮೇಲು ಎನ್ನಿಸಿತು. ಒಂದು ದಿನ ಅಣ್ಣನಿಗೂ ಹೇಳದೇ ಪುನಹ ಊರಿಗೆ ಬಂದುಬಿಟ್ಟೆ. ಅಮ್ಮನ ಹತ್ತಿರ “ಇನ್ನು ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಂದಲೇ ಕೆಲಸಕ್ಕೆ ಪ್ರಯತ್ನಿಸುತ್ತೇನೆ. ಆದರೆ ಆಯಿತು. ಇಲ್ಲದಿದ್ದರೆ, ಸುರೇಶ ಅಣ್ಣನಂತೆ ಇಲ್ಲಿಯೇ ಇದ್ದು, ನಾನೂ ಗಂಟಿ ಮೇಯಿಸಿಕೊಂಡು, ಗದ್ದೆಕೆಲಸ ಮಾಡಿಕೊಂಡಿರುತ್ತೇನೆಯೇ, ಹೊರತು ಎಲ್ಲಿಗೂ ಹೋಗುವುದಿಲ್ಲ” ಎಂದೆ.

ಅದೇ ಸಮಯಕ್ಕೆ ಡಿಗ್ರಿ ಓದುವಾಗ ಬಿದ್ಕಲ್ ಕಟ್ಟೆಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಮಾಡಿದ ಸಾಲ, ಆರೇಳು ಸಾವಿರವಾಗಿ, ಒಂದು ನೋಟೀಸು ನಮ್ಮ ಮನೆಗೆ ಬಂದಿತು. ಯಾವುದೇ ಕೆಲಸವೂ ಇಲ್ಲದ, ಸಂಪಾದನೆಯೂ ಇಲ್ಲದ ನಾನು ದಿಗಿಲುಬಿದ್ದೆ. ಹೀಗೆಯೇ ಬಡ್ಡಿಗೆ ಬಡ್ಡಿ ಸೇರಿ, ಅದೇ ದೊಡ್ಡ ಮೊತ್ತವಾದರೆ ತೀರಿಸುವುದು ಎಲ್ಲಿಂದ?. ಕಂಗಾಲಾದೆ. ರಮೇಶ ಅಣ್ಣಯ್ಯ ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿಯೇ ಕೆಲಸ ಮಾಡುತ್ತಿದ್ದುದರಿಂದ, ಅಮ್ಮನ ಸಲಹೆಯಂತೆ, ಅವನಿಗೆ ನನ್ನ ಪರಿಸ್ಥಿತಿಯನ್ನು ತಿಳಿಸಿ, ಒಂದು ದೀರ್ಘವಾದ ಪತ್ರ ಬರೆದು “ಏನಾದರೂ ಮಾಡಲು ಸಾಧ್ಯವೇ?” ಎಂದು ಬೇಡಿದೆ. ಅವನೂ ಆಗ ಕೋಟದ ಮಣೂರಿನಲ್ಲಿ ಮನೆ ಮಾಡಿದ್ದು, ಸಾಲ ಸೋಲ ಮಾಡಿಕೊಂಡಿದ್ದ. ಸಾಕಷ್ಟು ಹಣದ ಅಡಚಣೆ ಇದ್ದರೂ, “ನಿನಗೆ ಕೆಲಸ ಸಿಗುವವರೆಗೆ, ನಾನು ತಿಂಗಳಿಗೆ ಐವತ್ತು ರೂಪಾಯಿಯನ್ನು ನಿನ್ನ ಆ ಸಾಲದ ಖಾತೆಗೆ ಜಮಾ ಮಾಡುತ್ತಾ ಬರುತ್ತೇನೆ. ಮುಂದೆ ನೋಡುವ” ಎಂದು ಪತ್ರ ಬರೆದು ಧೈರ್ಯ ಹೇಳಿದ. ಆಗ ಸ್ವಲ್ಪ ಧೈರ್ಯ ಬಂತು.

ಮನೆಯಲ್ಲಿ ಸುಮ್ಮನೇ ಕುಳಿತಿರಲಾರದೇ ಬೆಳಿಗ್ಗೆ ಗಂಟಿಗಳನ್ನು ಮನೆಯ ಹಿಂದಿನ ಮಾರ್ವಿ ಅಣೆಗೋ (ಬೆಟ್ಟ), ಮಕ್ಕಿಗದ್ದೆಗೋ ಹೋಗಿ ಮೇಯಿಸಿಕೊಂಡು ಬರುತ್ತಾ, ಮಧ್ಯಾಹ್ನದ ಮೇಲೆ ಏನಾದರೂ ಗದ್ದೆಯ ಕೆಲಸದಲ್ಲಿ ಸುರೇಶಣ್ಣನಿಗೆ ಸಹಾಯ ಮಾಡುತ್ತಾ ದಿನ ಕಳೆದೆ. ಮನೆಯಲ್ಲಿ ಅಪ್ಪಯ್ಯ ತಂದು ಇರಿಸಿದ್ದ ರಾಮಾಯಣ, ಜೈಮಿನಿ ಭಾರತ, ಮಹಾಭಾರತಗಳನ್ನೆಲ್ಲ ಓದಿಯಾಯಿತು. ಹಳೆಯ ಪ್ರಸಂಗ ಪುಸ್ತಕಗಳನ್ನು ಓದತೊಡಗಿದೆ. ಯಾರು ಯಾರೋ ಪ್ರಸಂಗಕರ್ತರು ಬರೆದು, ಅಪ್ಪಯ್ಯನಿಗೆ “ಆಡಲು ಸಾಧ್ಯವೇ? ನೋಡಿ” ಎಂದು ತಂದುಕೊಟ್ಟ ಹಲವಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳೂ ಮನೆಯಲ್ಲಿ ಇದ್ದವು. ಅವುಗಳನ್ನೆಲ್ಲಾ ಒಮ್ಮೆ ಓದಿ ಮಗುಚಿ ಹಾಕಿದ್ದಾಯಿತು. ಆ ಪ್ರಸಂಗ ಪುಸ್ತಕಗಳನ್ನು ಓದುತ್ತಿದ್ದಂತೆಯೇ ಅವುಗಳಲ್ಲಿ ಇರುವ ಪದ್ಯಗಳ ಪ್ರಾಸ, ಧಾಟಿ, ಛಂದಸ್ಸುಗಳು, ಸಾಹಿತ್ಯಗಳು, ನನ್ನನ್ನು ಆಕರ್ಷಿಸಿತು. ತಾಳಗಳಿಗೆ ಅನುಗುಣವಾಗಿ ಮಟ್ಟುಗಳ ಪ್ರಕಾರ ಅವುಗಳ ಒಂದು ಟಿಪ್ಪಣಿಯನ್ನು ಮಾಡಿದೆ. ನಾನೇ ಒಂದು ಪ್ರಸಂಗ ಬರೆಯಬಾರದೇಕೆ? ಅನ್ನಿಸಿತು. ಆ ಕಾಲದಲ್ಲಿ ನನ್ನ ಮನಸ್ಸಿನಲ್ಲಿ ಪರಿಣಾಮ ಬೀರಿದ್ದ ಭಾಸನ ಪ್ರತಿಮಾ ಪ್ರಸಂಗದ ಕತೆಯನ್ನು ಆರಿಸಿಕೊಂಡು, ಅದರ ದೃಶ್ಯಗಳನ್ನು ವಿಂಗಡಿಸಿಕೊಂಡೆ. ನನ್ನ ಮನಸ್ಸಿಗೆ ಬಂದಂತೆ ಪದ್ಯಗಳನ್ನು ರಚಿಸುತ್ತಾ ಹೋದೆ. ಗಂಟಿಗಳನ್ನು ಮೇಯಿಸುವಾಗಲೆಲ್ಲ ಕಿಸೆಯಲ್ಲಿ ಒಂದು ಕಾಗದ, ಮತ್ತು ಪೆನ್ನನ್ನು ಇಟ್ಟುಕೊಂಡು ಮನಸ್ಸಿನಲ್ಲಿ ಪದ್ಯದ ಜೋಡಣೆಯನ್ನು ಮಾಡಿಕೊಳ್ಳುತ್ತಾ, ಅಲ್ಲೇ ಬರೆದುಕೊಂಡು ಮನೆಗೆ ತಂದು ಒಂದು ಪುಸ್ತಕದಲ್ಲಿ ಬರೆದಿಟ್ಟು ಕೊಳ್ಳತೊಡಗಿದೆ.

ನಾನು ಛಂದಸ್ಸನ್ನು ಅಭ್ಯಾಸ ಮಾಡಿದವನಲ್ಲ. ನನಗೆ ತೋಚಿದಂತೆ, ಹಲವು ಹಳೆಯ ಪ್ರಸಂಗಗಳ ಪದ್ಯಗಳನ್ನು ಅನುಕರಿಸಿಕೊಂಡೇ, ಅದೇ ಅಳತೆಯಲ್ಲಿ, ದಾಟಿಯಲ್ಲಿ, ಆಗ ಭಾಸನ ಪ್ರತಿಮಾ ನಾಟಕವನ್ನು ಆಧರಿಸಿ “ಪ್ರತಿಮಾ ಪ್ರಸಂಗ”ವನ್ನೂ, ಶೂರ್ಪನಖಿಯ ಕತೆಯನ್ನು ಆಧರಿಸಿ “ಚಂದ್ರನಖಿ” ಎಂಬ ಪ್ರಸಂಗವನ್ನೂ ಬರೆದೆ. ಚಂದ್ರಶೇಖರ ಕಂಬಾರರ “ಮತಾಂತರ” ಎಂಬ ನಾಟಕ ಆಗ ಯಾವುದೋ ವಿಶೇಷಾಂಕದಲ್ಲಿ ಬಂದಿದ್ದು, ಅದನ್ನು ಪ್ರತಿ ಮಾಡಿಕೊಂಡು ಆ ನಾಟಕದ ಸಂಭಾಷಣೆಗೆ ಮಧ್ಯ ಮಧ್ಯ ಯಕ್ಷಗಾನದ ಪದ್ಯಗಳನ್ನು ಬರೆದು ಸೇರಿಸಿ “ಸಂಗರ” ಎಂಬ ಒಂದು ಸಾಮಾಜಿಕ ಸಮಸ್ಯೆಯ ಪ್ರಸಂಗವನ್ನೂ ಬರೆದಿದ್ದೆ. ಮತ್ತು ಹಾಲಾಡಿ ಮೇಳದವರು ಕೇಳಿದರು ಅಂತ, ನನ್ನದೇ ಒಂದು ಕಾಲ್ಪನಿಕ ಕತೆಯನ್ನು ಹೆಣೆದುಕೊಂಡು, “ಮೋಹನ ಕಲ್ಯಾಣಿ” ಎಂಬ ಪ್ರಸಂಗವನ್ನೂ ಬರೆದೆ. ಅದನ್ನು ಹಾಲಾಡಿ ಮೇಳದಲ್ಲಿ ಆಡಿದ್ದರು. ಇದರ ವಿಷಯವಾಗಿ ಮುಂದೆ ಹೇಳುತ್ತೇನೆ.

ನಮ್ಮ ಮನೆಗೆ ಒಂದು ಕಾಲಕ್ಕೆ ದೊಡ್ಡ ಭಾಗವತರಾಗಿದ್ದ, ಮಾರ್ವಿ ವಾದಿರಾಜ ಹೆಬ್ಬಾರರು ಆಗಾಗ ಬರುತ್ತಿದ್ದರು. ಅವರು ನಮ್ಮ ಕಲ್ಲಟ್ಟೆಯ ಮನೆಗೆ ಬಂದು, ಹತ್ತಾರು ದಿನ ನಮ್ಮ ಮನೆಯಲ್ಲಿಯೇ ಇದ್ದು ಹೋಗುತ್ತಿದ್ದರು. ಅವರು ಇದ್ದರೆ ಮನೆಯಲ್ಲಿ ಸುಮ್ಮನೇ ಇರುತ್ತಿರಲಿಲ್ಲ. ತೆಂಗಿನ ಹೆಡೆಯಿಂದ ಮಡಲನ್ನೋ, ಅದರ ತುದಿಯ ಭಾಗದಿಂದ ಬೀಸಣಿಗೆಯನ್ನೋ ಏನಾದರೂ ಮಾಡುತ್ತಾ. ಯಕ್ಷಗಾನ ಪದ್ಯಗಳನ್ನು ಗುಣುಗುತ್ತಾ ಇರುತ್ತಿದ್ದರು. ಮೇಳದ ಅವರ ಅನುಭವಗಳನ್ನು ಕೇಳಿದರೆ, ಅದೆಲ್ಲ ಈಗ ಯಾರಿಗೆ ಬೇಕು ಮಾರಾಯಾ? ಎಂದು, ನೆನಪಾದ ಕೆಲವು ಸಂಗತಿಗಳನ್ನು ಹೇಳಿ ಮೆಲುಕು ಹಾಕುತ್ತಿದ್ದರು. ಅವರಿಗೆ ನನ್ನ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಿದೆ. ಅವರು ಖುಷಿಪಟ್ಟು, “ಹೋ ಒಳ್ಳೆಯ ಪ್ರಾಸ, ಸಾಹಿತ್ಯ ಎಲ್ಲ ಇತ್ತಲೆ” ಎಂದು ಮೆಚ್ಚುಗೆಯ ಮಾತನ್ನು ಹೇಳಿದ್ದರು. ಈಗಿನ ಪ್ರಸಂಗಕರ್ತರಿಗೆ ಅದೆಲ್ಲ ಬ್ಯಾಡ ಮಾರಾಯ. ಭಾಗವತರಂತೂ ನೀನು ಏನು ಬರೆದು ಕೊಟ್ಟರೂ, ಅವರ ಕಿಸೆಯಿಂದ ಶಬ್ದಗಳನ್ನು ಸೇರಿಸಿಯೇ, ಏನೋ ಒಂದು ಹೇಳುತ್ತಾರೆ, “ಕೌರವಗಂಜುತೆಂದ” ಎಂದು ನಾವು ಬರೆದರೆ ಅವರು “ಕೌರವ ಗಂಜಿ ತಿಂದ” ಎಂದು ಹಾಡಿದರೂ ಹಾಡಿದರೆ, ಸ್ವರವೊಂದು ಗಟ್ಟಿ ಇದ್ದರೆ ಈಗ ಒಳ್ಳೆಯ ಭಾಗವತ” ಎಂದು ನಗೆಯಾಡಿದ್ದರು. ಅವರೂ ಕೆಲವು ಪ್ರಸಂಗಗಳನ್ನು ಬರೆದಿದ್ದರು

. ರಾಜಕೀಯ ವಿಷಯದ, "ಕಾಶ್ಮೀರ ವಿಜಯ," "ಹಾಲಾಡಿ ಕ್ಷೇತ್ರ ಮಹಾತ್ಮೆ", "ಬೇಡರಕಣ್ಣಪ್ಪ" ಎನ್ನುವ ಪ್ರಸಂಗಗಳನ್ನು ಅವರ ಹುಡುಗಾಟಿಕೆಯ ಕಾಲದಲ್ಲೇ ಬರೆದುದಾಗಿತ್ತು. ಅಪ್ಪಯ್ಯನ ಒತ್ತಾಯದ ಮೇರೆಗೆ ಅವರು ಶಂಕರನಾರಾಯಣ ಕ್ಷೇತ್ರ ಮಹಾತ್ಮೆ, ಎಂಬ ಪ್ರಸಂಗವನ್ನೂ ಬರೆದಿದ್ದರು. ಆದರೆ ಇದೊಂದನ್ನು ಬಿಟ್ಟು ಯಾವುದೂ ಅಚ್ಚಾಗಲಿಲ್ಲ. ಹಾಗಾಗಿ ಅವುಗಳ ಹಸ್ತಪ್ರತಿಗಳೂ ಈಗ ಸಿಗಲಿಕ್ಕಿಲ್ಲವಾದ್ದರಿಂದ, ಅವು ಕಾಲಗರ್ಭದಲ್ಲಿ ಮರೆಯಾದಂತೆಯೆ ಸೈ.

ಮಾರ್ವಿ ವಾದಿರಾಜ ಹೆಬ್ಬಾರರು ಅವರ ಯೌವನದ ಕಾಲದಲ್ಲಿ ಪ್ರಸಿದ್ಧರಾದ ಭಾಗವತರಾಗಿದ್ದರು. ಅವರ ಅಣ್ಣ ರಾಮಕೃಷ್ಣ ಹೆಬ್ಬಾರರ ಹನುಮಂತ, ಮತ್ತು ಇವರ ಭಾಗವತಿಕೆಯ ಲಂಕಾದಹನ, ರಾಮಾಂಜನೇಯ ಪ್ರಸಂಗಗಳು ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ಮೆರೆದಾಡಿತ್ತಂತೆ. ಕೋಟದ ಆಸುಪಾಸಿನ ಹತ್ತಾರು ಮೈಲಿಗಳ ವಿಸ್ತೀರ್ಣದಲ್ಲೇ, ಆ ವರ್ಷದ ಇಡೀ ಒಂದು ತಿರುಗಾಟವನ್ನೇ ಮಾಡಿದ್ದರಂತೆ. ಆದರೆ ಒಂದು ತರಹದ ಮೂಡಿ ಆಸಾಮಿ. ಆಟಕ್ಕೆ ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ನಂಬುವಂತಿಲ್ಲ. ಎಲ್ಲಾದರೂ, ಯಾರ ಮನೆಯಲ್ಲಾದರೂ ಉಳಿದರು ಅಂದರೆ, ಆಟಕ್ಕೆ ಕೈಕೊಟ್ಟರು ಅಂತಲೇ ಲೆಕ್ಕ.

ಅವರ ಹೆಂಡತಿ ಬಸುರಿಯಾಗಿದ್ದಾಗಲೇ ತೀರಿಕೊಂಡರಂತೆ. ಆಮೇಲೆ ಅವರು ಮದುವೆಯಾಗಲಿಲ್ಲ. ಒಂಟಿ ಬಾಳು. ಎಲ್ಲೆಲ್ಲೋ ಹೋಗುತ್ತಿದ್ದರು. ಹೋಗಿ ನಾಲ್ಕಾರು ದಿನ ಇರುತ್ತಿದ್ದರು. ನಾನು ನೋಡುವಾಗಲೇ ಅವರಿಗೆ ಸುಮಾರು ಎಪ್ಪತ್ತರ ಮೇಲೆ ವಯಸ್ಸಾಗಿತ್ತು. ದಾರಿಯಲ್ಲಿ ಹೋಗುವಾಗ ಮೈ ತೇಲುತ್ತಿತ್ತು. ಗದ್ದೆಯ ಅಂಚಿನಲ್ಲಿ ಅವರು ನಡೆಯುತ್ತಿದ್ದರೆ, ಎಲ್ಲಿ ಬೀಳುತ್ತಾರೋ ಎಂದು ಭಯವಾಗುತ್ತಿತ್ತು. ಆದರೆ “ನಮ್ಮ ಮನೆಯಲ್ಲೇ ಇರಿ. ಎಲ್ಲಿಗೆ ಹೋಗುತ್ತೀರಿ?” ಎಂದರೆ ಅವರು ಕೇಳುವವರಲ್ಲ. ಹೊರಡಬೇಕು ಅನ್ನಿಸಿದಾಗ, ಅವರ ಒಂದು ಬಟ್ಟೆಯ ಚೀಲದ ಗಂಟನ್ನು ಬಗಲಿಗಿರಿಸಿಕೊಂಡು, ಸಣ್ಣಗೆ ನಗುತ್ತಾ, “ ನಾನ್ ಬರ್ತೆ” ಎನ್ನುತ್ತಾ ಒಂದು ಜಲ್ಲನ್ನು ಊರಿಕೊಂಡು, ಹೊರಟೇ ಬಿಡುತ್ತಿದ್ದರು. ಅವರು ಹಾಲಾಡಿಯಲ್ಲಿ ಒಬ್ಬ ವೇಶ್ಯೆಯ ಮನೆಯಲ್ಲೂ ಇರುತ್ತಿದ್ದರು. “ಅಲ್ಲಿಗೆಲ್ಲಾ ಯಾಕೆ ಹೋತ್ರಿ ಮರ್ರೆ?” ಅಂದರೆ, ಸುಮ್ಮನೇ ಒಂದು ನಗು ಅಷ್ಟೆ. ಅವರ ಜೀವಿತದ ಕೊನೆಯ ಕಾಲದಲ್ಲಿ, ಕಾಲು ನೋವಾಗಿ, ಹುಣ್ಣಾಗಿ, ಹಾಸಿಗೆಯ ಮೇಲೆ ಮಲಗಿಯೇ ಇದ್ದಾಗಲೂ, ಆ ಹೆಂಗಸೇ ಅವರನ್ನು ಚೆನ್ನಾಗಿ ಸೇವೆಮಾಡಿ ನೋಡಿಕೊಂಡದ್ದಂತೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ