ಬುಧವಾರ, ಅಕ್ಟೋಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 24

ನಮಗೆ ಹೆದರಿಕೆ. ಎಲ್ಲಿ ಯಾವ ಕಾಡುಪ್ರಾಣಿಯ ಸುಳಿವನ್ನೋ, ಇನ್ನೇನನ್ನೋ ಕಂಡನೋ ಅಂತ. ಬೀಸುವ ಗಾಳಿಯನ್ನು ಬಿಟ್ಟರೆ ಎಲ್ಲ ಸ್ತಬ್ದ. ಆಗ ಸುಮ್ಮನಿರಲು ಹೇಳಿದವನೇ “ನೋಡಿ, ಎಲ್ಲೋ ನೀರು ಬೀಳುವ ಶಬ್ಧ ಕೇಳುತ್ತಿದೆ ನೋಡಿ. ಇಲ್ಲೆಲ್ಲೋ ಜಲಪಾತ ಇರಬೇಕು. ಹೋಗಿ ನೋಡುವ” ಅಂದ. ನಮಗೆ ನಿರಮ್ಮಳವಾಯಿತು. ಮತ್ತೆ ನಮಗೆ ಉಮೇದು. “ಹೌದು ನೋಡಿಯೇ ಬಿಡುವ” ಅಂತ ಶಬ್ಧ ಕೇಳಿದ ದಿಕ್ಕಿಗೆ ತಿರುಗಿ, ಪೊದೆಯ ಮಧ್ಯ ದಾರಿ ಮಾಡಿಕೊಂಡು ಅಲ್ಲಲ್ಲಿ ಕಲ್ಲು ಮುಳ್ಳುಗಳನ್ನು ಹಾದು ಏಳುತ್ತಾ ಬೀಳುತ್ತಾ ಇಳಿಜಾರಿನಲ್ಲಿ ಮರಗಳನ್ನು ಹಿಡಿದುಕೊಂಡು ಒಬ್ಬರ ಹಿಂದೆ ಮತ್ತೊಬ್ಬರು ಆದರಿಸಿಕೊಳ್ಳುತ್ತಾ ಮುಂದೆ ನಡೆದೆವು. ಸ್ವಲ್ಪ ದೂರ ಹೋದ ಮೇಲೆ ಕಡಿದಾದ ದಾರಿಯಲ್ಲಿ ಇಳಿದು ಹೋಗಿ ಹಾಗೆ ಕಣ್ಣು ಹಾಯಿಸಿ ನೋಡಿದರೆ,

ಏನು ನೋಡುವುದು?. ದೂರದಲ್ಲಿ ದೊಡ್ದ ಜಲಪಾತ. ಧಾರೆ ಧಾರೆಯಾಗಿ ಮೇಲಿನಿಂದ ಸುರಿಯುವ ಹಾಲಿನಂತಹ ನೀರು ದೂರದಲ್ಲಿ ಕಾಣಿಸಿತು. ಪಕ್ಕದಲ್ಲಿರುವವರ ಮಾತೂ ಕೇಳದಷ್ಟು ಜೋರಾಗಿ ಬೋರ್ಗರೆಯುವ ಸದ್ದು. ಅದಕ್ಕೆ ಏನೋ ಹೆಸರಿದೆ. ನನಗೀಗ ನೆನಪಿಗೆ ಬರುತ್ತಿಲ್ಲ. ಸುಮಾರು ಐನೂರು ಆರುನೂರು ಅಡಿ ಎತ್ತರದಿಂದ ದುಮುಕುವ ನೀರನ್ನು ನೋಡಿಯೇ ನಾವು ಮೈಮರೆತೆವು. ಅದರ ಬುಡಕ್ಕೇ ಹೋಗುವ ಎಂದ ಒಬ್ಬ. ನಮ್ಮ ಗುರುಗಳು “ಬೇಡ ಅದರ ಬುಡಕ್ಕೆ ಹೋಗಲು ಸರಿಯಾದ ದಾರಿ ಇಲ್ಲ.  ಅಲ್ಲದೇ ಕೊಟಚಾದ್ರಿ ತುದಿಯನ್ನು ಮುಟ್ಟುವುದು ಕಷ್ಟ, ತಡವಾಗಬಹುದು” ಅಂದರು. ನಾವೂ ನೋಡಿಯೇ ನೋಡಿದೆವು. ಜಲಪಾತದ ಬುಡಕ್ಕೆ ಹೋಗುವುದೂ ಅಷ್ಟು ಸುಲಭವಿರಲಿಲ್ಲ. ಅಷ್ಟು ಕಡಿದಾದ ಪೊದೆ ಮರ ಬೀಳುಗಳು ಇರುವ ಜಾಗ ಅದು. ಅಷ್ಟರಲ್ಲಿ ಮತ್ತೊಬ್ಬ ಹೇಳಿದ “ಇಲ್ಲಿಗೇ ಅಂತಲೇ ಒಮ್ಮೆ ಬರುವ. ಈಗ ಸರ್ ಹೇಳಿದಂತೆ ಹಿಂದಿರುಗುವ” ಎಂದ. ಎಲ್ಲರೂ ಒಪ್ಪಿ, ಅಲ್ಲಿಂದಲೇ ಕಣ್ಣು ತಣಿಯುವಷ್ಟು ಹೊತ್ತು ಆ ಪಾತಾಳಕ್ಕೆ ಮುತ್ತಿನ ಧಾರೆಯಂತೆ ಬೀಳುವ ನೀರನ್ನು ನೋಡಿ, ಹಿಂದಕ್ಕೆ ಬಂದು ಪುನಹ ಬೆಟ್ಟವನ್ನು ಏರತೊಡಗಿದೆವು.

ಸ್ವಲ್ಪ ಮೇಲೆ ಹೋಗುತ್ತಿದ್ದಂತೆ ಕೆಲವರ ಕಾಲಿಗೆ ಏನೋ ಚುಚ್ಚಿದಂತೆ ಆಗತೊಡಗಿತು. ನೋಡಿದರೆ ಕಪ್ಪುಕಪ್ಪು ಹುಳಗಳು.  ನಮ್ಮ ಕಾಲಿಗೆ ಕಚ್ಚಿ ರಕ್ತವನ್ನು ಹೀರುತ್ತಿವೆ. ಅದು ಇಂಬಳ. ಕಚ್ಚುವುದು ಗೊತ್ತಾಗುವುದೇ ಇಲ್ಲ. ಅದು ನಮ್ಮ ರಕ್ತ ಹೀರಿ ದೊಡ್ದದಾಗಿ, ಅವಕ್ಕೇ ಸಾಕು ಎನ್ನಿಸಿದ ಮೇಲೇ ನಮ್ಮನ್ನು ಬಿಟ್ಟು ಕೆಳಗೆ ಬೀಳುತ್ತವೆ. ಆಗ ನಮಗೆ ನೋವಾಗಿ ಚುರುಗುಟ್ಟುತ್ತದೆ. ಅದನ್ನು ಎಳೆದು ಬಿಡಿಸಿಕೊಳ್ಳಲು ಹೋದರೆ ತುಂಡಾಗುತ್ತದೆಯೇ ಹೊರತು, ಚರ್ಮವನ್ನು ಬಿಡುವುದಿಲ್ಲ. ನಮ್ಮ ಗುರುಗಳು ಮುಂಜಾಗ್ರತೆಯಿಂದ ಉಪ್ಪನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಬಂದದ್ದರಿಂದ ನಾವು ಬಚಾವಾದೆವು. ಅವರು ಎಲ್ಲರಿಗೂ ಸ್ವಲ್ಪ ಸ್ವಲ್ಪ ಉಪ್ಪನ್ನು ಕೊಟ್ಟು ಅದನ್ನು ಕರ್ಚೀಪ್ ಗೆ ಹಾಕಿ ಇಂಬಳ ಕಚ್ಚಿದಲ್ಲಿ ಒರೆಸಿಕೊಳ್ಳಿ ಅಂದರು. ನಾವು ಹಾಗೆಯೇ ಮಾಡಿದೆವು. ಅವುಗಳು ಚರ್ಮವನ್ನು ಬಿಟ್ಟು ಕೆಳಗೆ ಬಿದ್ದವು.

 ಬೆಟ್ಟದ ಮಧ್ಯ ಭಾಗಕ್ಕೆ ಬಂದಾಗ ಒಂದು ದೇವಸ್ಥಾನ ಹಾಗೂ ಒಬ್ಬ ಭಟ್ರ ಮನೆ ಸಿಕ್ಕಿತು. ನಮಗೆ  ಆಶ್ಚರ್ಯ, ಅವರು ಇಲ್ಲಿ ಹೇಗೆ ಇದ್ದು ಜೀವನ ಸಾಗಿಸುತ್ತಾರೆ ಎಂದು. ಯಾಕೆಂದರೆ ಆ ಪ್ರದೇಶದಲ್ಲಿ ಅವರೊಬ್ಬರದೇ ಮನೆ. ಅವರಿಗೆ ಏನು ಸಾಮಾನು ಬೇಕಾದರೂ ಬೆಟ್ಟದಿಂದ ಕೆಳಗೆ ಇಳಿದು ನಾಗೋಡಿಗೋ ಕೊಲ್ಲೂರಿಗೋ ಬರಬೇಕು. ಒಂದು ಸರಿಯಾದ ರಸ್ತೆ ಸಹ ಇರಲಿಲ್ಲ. ಅವರನ್ನು ಮಾತಾಡಿಸಿದ ನಾವು, ಮಧ್ಯಾಹ್ನ ನಮ್ಮ ಎಲ್ಲರಿಗೂ ಊಟಕ್ಕೆ ವ್ಯವಸ್ಥೆ ಮಾಡಬಹುದೇ? ಎಂದು ಕೇಳಿದೆವು. ಅವರು ಒಪ್ಪಿದ್ದರಿಂದ ಮಧ್ಯಾಹ್ನದ ಊಟದ ಸಮಸ್ಯೆ ಬಗೆಹರಿದಂತಾಯಿತು. ಪುನಹ ಬೆಟ್ಟ ಹತ್ತಲು ಶುರುಮಾಡಿದೆವು. ಸುಮಾರು ಮಧ್ಯಾಹ್ನದ ಹೊತ್ತಿಗೆ ನಾವು ಕೊಟಚಾದ್ರಿಯ ತುದಿಯಲ್ಲಿ ಇದ್ದೆವು.  ನಮ್ಮ ಎದುರೇ ಮೋಡಗಳು ಹತ್ತಿಯ ಮುದ್ದೆ ಮುದ್ದೆಯಂತೆ ತೇಲಿತೇಲಿ ಸಾಗುತ್ತಿತ್ತು. ಕೆಳಗೆ ಸುತ್ತಮುತ್ತ ಹಸಿರೇ ಹಸಿರು. ಮೇಲಿನಿಂದ ಕೆಳಗೆ ನೋಡುವಾಗ ಮರಗಿಡಗಳು ಬೆಟ್ಟಗುಡ್ಡಗಳು ರಾಶಿಹಾಕಿದಂತೆ ಕಾಣುತ್ತಿತ್ತು.

ನಮಗೆ ಖುಷಿಯೋ ಖುಷಿ. ಅತ್ಯಂತ ಎತ್ತರದಲ್ಲಿ ಆಕಾಶದಲ್ಲಿ ಮೋಡಗಳೊಂದಿಗೆ ನಾವಿದ್ದೇವೆ. ಸುತ್ತಲ ಪ್ರಕೃತಿ ಸೌಂದರ್ಯ ನಮ್ಮನ್ನು ಮುಗ್ದರನ್ನಾಗಿಸಿತ್ತು. ಕೆಲವರು ಸಂತೋಷ ತಾಳಲಾಗದೇ ಕುಣಿಯತೊಡಗಿದರು. ಗಟ್ಟಿಯಾಗಿ ಹುಚ್ಚರಂತೆ ಕೂಗುಹಾಕಿದರು. ಅಲ್ಲೊಂದು ಕಲ್ಲಿನ ಮಂಟಪ.  ಸರ್ವಜ್ಞಪೀಠ. ಅಲ್ಲಿಯೇ ಕುಳಿತು ಮನಸ್ಸು ತಣಿಯುವವರೆಗೆ ಆ ಸೌಂದರ್ಯವನ್ನು ಸವಿದದ್ದಾಯಿತು. ಅಷ್ಟರಲ್ಲೇ ಹೊಟ್ಟೆ ತಾಳಹಾಕಲು ಶುರು ಮಾಡಿದ್ದರಿಂದ ಎಲ್ಲರೂ ಒಟ್ಟಾಗಿ ಪುನಹ ಬೆಟ್ಟವನ್ನು ಇಳಿದು ಭಟ್ರ ಮನೆಗೆ ಬಂದು ತಲುಪಿದೆವು. ಅಲ್ಲಿಯ ಒಂದು ಕೆರೆಯಲ್ಲಿ ಕೆಲವರು ಸ್ನಾನ ಮಾಡಿದರು ನೀರು ಮಂಜುಗಡ್ಡೆಯಷ್ಟು ತಣ್ಣಗಾಗಿತ್ತು. ಒಮ್ಮೆ ನೀರಿಗಿಳಿದರೆ ಆಮೇಲೆ ಆ ಹವೆಗೆ ಹೊಂದಿಕೆಯಾಗಿ ಹಿತವಾಗಿದ್ದು.  ಕೆರೆಯಿಂದ ಮೇಲೆ ಬರುವುದೇ ಕಷ್ಟವಾಯಿತು. ಅಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಹತ್ತುಹತ್ತು ಮಂದಿ ಸರದಿಯಂತೆ ಊಟ ಮಾಡಿದೆವು.

ಸಂಜೆಯವರೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಗುಡ್ಡವನ್ನು ಏರಿ ಕೊಟಚಾದ್ರಿಯ ಶಿಖರ ತಲುಪಿದೆವು. ಆಚೆ ಈಚೆ ತಿರುಗಿದೆವು. ಒಂದು ಬದಿಯಲ್ಲಿ ಚಿತ್ರಮೂಲ ಎಂದು ಬೋರ್ಡು ಹಾಕಿದ್ದರು. ಪಕ್ಕದಲ್ಲಿಯೇ ಇಳಿದು ಹೋಗಲು ಕಾಲುದಾರಿ. ಮರಗಳು ಬೀಳುಗಳನ್ನೇ ಆಧಾರಕ್ಕೆ ಹಿಡಿದುಕೊಂಡು ಇಳಿಯಬೇಕಾಗಿತ್ತು. ಎಲ್ಲಾದರು ಕ್ಷಣಕಾಲ ಆಯತಪ್ಪಿದರೆ ಕೆಳಗೆ ಪಾತಾಳ. ಮೂಳೆ ಸಹ ಸಿಗಲಾರದು. ಅಷ್ಟು ಆಳದ ಕಣಿವೆ. ಜಾಗ್ರತೆಯಿಂದ ಒಬ್ಬೊಬ್ಬರಾಗಿ ಪಕ್ಕದವರಿಗೆ ಎಚ್ಚರಿಕೆ ಹೇಳುತ್ತಾ ನಿಧಾನವಾಗಿ ಇಳಿಯುತ್ತಾ ಸಾಗಿದೆವು. ಅದೊಂದು ಅವಿಸ್ಮರಣೀಯ ಅನುಭವ. ಅಂತೂ ಆ ಬೆಟ್ಟದ ಸಂಧಿಯಲ್ಲಿ ಒಂದು ಕಲ್ಲು ಬಾಯ್ತೆರೆದು ಇದ್ದಂತಹ ಗುಹೆಗೆ ತಲುಪಿದ್ದಾಯಿತು. ಅಲ್ಲಿ ಸುಮಾರು ಹತ್ತಿಪ್ಪತ್ತು ಜನ ನಿಲ್ಲುವಷ್ಟು ಮಾತ್ರಾ ಸಮತಟ್ಟಾದ ಸ್ಥಳ ಇತ್ತು. ಯಾವುದೋ ಮುನಿ ಅಲ್ಲಿಕುಳಿತು ತಪಸ್ಸು ಮಾಡಿದ್ದರಂತೆ. ಮುಂದೆ ಕೆಳಗೆ ಪಾತಾಳ. ಕೆಳಗೆ ನೋಡಲಿಕ್ಕೇ ಹೆದರಿಕೆಯಾಗುತ್ತಿತ್ತು. ಎಲ್ಲೆಲ್ಲೂ ಮರಗಳ ತುದಿಯೇ ಕಾಣುತ್ತಿತ್ತು. ಆಯತಪ್ಪಿದರೆ. ದೇವರೇ ಗತಿ. ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಪುನಹ ಆ ಕೊರಕಲಿನ ದಾರಿಯಲ್ಲಿ ಹತ್ತಿಕೊಂಡು ಮೇಲೆ ಬಂದೆವು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತ್ತು. ಆ ರಾತ್ರಿ ಅಲ್ಲಿಯೇ ಉಳಿಯುವ ನಿರ್ಧಾರ ನಮ್ಮದು.

ಎಷ್ಟು ದೂರದವರೆಗೆ ಕಣ್ಣು ಹಾಯಿಸಿದರೂ ದೃಷ್ಟಿಗೆ ತಡೆ ಎಂಬುದೇ ಇರಲಿಲ್ಲ. ಅಲ್ಲಲ್ಲಿ ತೆಂಗಿನ ತೋಟಗಳು ಹರಡಿಹೋದಂತೆ. ಮನೆಗಳೂ ಚಿಕ್ಕಚಿಕ್ಕದಾಗಿ ಬೆಂಕಿಪೊಟ್ಟಣದ ಹಾಗೆ ಕಾಣುತ್ತಿತ್ತು. ಹರಿಯುವ ನದಿಯು ಭೂಮಾತೆಯ ಸೀರೆಯ ಸೆರಗಿನಂತೆ ಅಡ್ಡಾದಿಡ್ಡಿಯಾಗಿ ಊರೂರನ್ನು ಸುತ್ತುಬಳಸಿ ಹರಿಯುವುದನ್ನು ಕಂಡು ಪುಳಕವಾಯಿತು. ಪಶ್ಚಿಮದ ಆಗಸವು ಆಗಲೇ ಕೆಂಪು ಅರಶಿಣ ಮಿಶ್ರವಾಗಿ ಮೋಡದ ಮರೆಯಲ್ಲಿ ಸೂರ್ಯ ಕಣ್ಣುಮುಚ್ಚಾಲೆಯಾಡಿದಂತೆ ಆಗಾಗ ಎದುರಿಗೆ ಬಂದು ಹೋಗಿ, ಬಂದು ಹೋಗಿ ಮಾಡುತ್ತಿದ್ದ. ಕೊನೇಗೊಮ್ಮೆ ಕಡಲ ಅಂಚಿನಲ್ಲಿ ಮೋಡಗಳ ಮಧ್ಯದಲ್ಲಿ ಅಂತರ್ಧಾನನಾದ. ಹಾಗೆಯೇ ಆ ಸೌಂದರ್ಯವನ್ನು ಸವಿಯುತ್ತಾ ನಮ್ಮನಮ್ಮೊಳಗೆ ಮಾತಾಡುತ್ತಾ ಸಮಯಹೋಗಿ ಕತ್ತಲಾವರಿಸಿದ್ದೇ ಗೊತ್ತಾಗಲಿಲ್ಲ.

ಸೂರ್ಯಾಸ್ತಮಾನದ ಸುಂದರ ಕ್ಷಣಗಳನ್ನು ಕಂಡೆವು. ಕತ್ತಲಾವರಿಸುತ್ತಿದ್ದಂತೆ ತಾಳಲಾರದಷ್ಟು ಚಳಿ. ತಲೆಗೆ ಕಿವಿಗೆ ಬಟ್ಟೆ ಸುತ್ತಿಕೊಂಡು ಸ್ವೆಟರ್ ಶಾಲುಗಳನ್ನು ಹೊದೆದುಕೊಂಡೆವು, ಸೌದೆಯ ಚೂರುಗಳನ್ನು ಅಲ್ಲಲ್ಲಿಹುಡುಕಿ ತಂದು ಒಟ್ಟು ಮಾಡಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡೆವು. ಆಗ ಮತ್ತೆ ಹಾಡು ಕುಣಿತ ಜೊತೆಯಲ್ಲಿ ತಂದ ಚಪಾತಿ ಪಲ್ಯ ಸೇವನೆ. ಎಲ್ಲರೂ ಕುಣಿದು ದಣಿದು ನಿದ್ದೆ ಮಾಡಿದರು. ಬೆಳಿಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಬೆಟ್ಟವನ್ನು ಇಳಿದು ಬಂದು ಭಟ್ರರ ಮನೆಗೆ ಬಂದೆವು. ಮೊದಲೇ ಅವರಿಗೆ ತಿಳಿಸಿದ್ದರಿಂದ ಅವರು ಮಾಡಿದ ಇಡ್ಲಿಯನ್ನು ತಿಂದು ಕಾಫಿಯನ್ನು ಕುಡಿದೆವು. ಬಳಿಕ ಅಲ್ಲಿಂದ ಹೊರಟು, ಬೆಟ್ಟವನ್ನು ಇಳಿದು ಎಲ್ಲರೂ ಹೋಗುವ ಮಾಮೂಲು ದಾರಿಯಲ್ಲಿ ನಡೆದು ಮಧ್ಯಾಹ್ನವಾಗುವಷ್ಟರಲ್ಲಿ ಕೊಲ್ಲೂರು ಸೇರಿ ಅಲ್ಲಿಂದ ಕುಂದಾಪುರಕ್ಕೆ ಬಂದು ನಮ್ಮ ನಮ್ಮ ಗೂಡನ್ನು ಸೇರಿಕೊಂಡೆವು.(ಈ ಭಾಗದಲ್ಲಿ ಇದು ಕೇವಲ ವರದಿ ಅಂತ ಆಗಬಾರದು ಎಂಬ ದೃಷ್ಟಿಯಿಂದ ಕೆಲವು ಸಂಗತಿಗಳನ್ನು ಸ್ವಾರಸ್ಯಕರವಾಗಿ ಬರೆಯಬೇಕಾಯಿತು)

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ