ಗುರುವಾರ, ಏಪ್ರಿಲ್ 26, 2018

ದಿನೇಶ ಉಪ್ಪೂರ:

*ನನ್ನೊಳಗೆ - 93*

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಾನೂ ಮತ್ತು ಗೋಪಿ ರೂಮ್ ಮೇಟ್ಸ್ ಆಗಿದ್ದೆವು. ಅವನು ಬಿಎ.
ನಾನು ಬಿಎಸ್ಸಿ. ಸಂಜೆ ಕಾಲೇಜು ಮುಗಿಸಿಕೊಂಡು ಬಂದರೆ ಇಬ್ಬರೂ ಸೇರಿಬಸ್ ಸ್ಟಾಂಡ್ ಅವಿನಾಶ್ ಮೆಡಿಕಲ್ ಶಾಪಿಗೆ ಹೊರಡುವುದು.

 ಗೋಪಿ ಅಲಂಕಾರ ಪ್ರಿಯ. ಸಂಜೆಯೂ ಒಮ್ಮೆ ಸೋಪು ಹಾಕಿ ಮುಖ ತೊಳೆದು ತಲೆಗೆ ಅದೇನೋ ಕೂಲ್ ಆಗಲಿಕ್ಕೆ ಕ್ರೀಮ್ ಹಚ್ಚಿಕೊಂಡು ಮುಖಕ್ಜೆ ಫ್ಯಾರ್ ಅಂಡ್ ಲವ್ಲಿ ಹಚ್ಚಿ ಅದರ ಮೇಲೆ ಪೌಡರ್ ಹಾಕಿಕೊಳ್ಳುತ್ತಿದ್ದ. ಒಂದು ಕಾಲುಗಂಟೆ ಕನ್ನಡಿಯ ಮುಂದೆ ನಿಂತು ಆ ಕಡೆ ಈ ಕಡೆ ಮುಖ ತಿರುಗಿಸಿ ತಿರುಗಿಸಿ ನೋಡಿ ತಲೆಬಾಚಿಕೊಂಡು ಕಡೆಗೆ "ನೀನು ಬರದಿದ್ದರೆ ಬಿಡು ಮಾರಾಯಾ, ನಾನು ಮುಂದೆ ಹೋಗ್ತೆ" ಎಂದು ನನ್ನ ಹತ್ತಿರ ಬೈಸಿಕೊಂಡು ಆಮೇಲೆ ಹೊರಡುತ್ತಿದ್ದ. ಬಹಳ ಶೋಕಿ ಮನುಷ್ಯ.

 ಅವಿನಾಶ ಮೆಡಿಕಲ್ಸಿನಲ್ಲಿ ರಾಜ ಹೆಬ್ಬಾರ ನಮಗಿಬ್ಬರಿಗೂ ಸ್ನೇಹಿತ. ನಾನು ಮತ್ತು ಗೋಪಿ ಮೊದಲನೇ ವರ್ಷದ ವಿದ್ಯಾರ್ಥಿಗಳಾದರೆ ಅವನು ಅಂತಿಮ ವರ್ಷದಲ್ಲಿ ಓದುತ್ತಿದ್ದ. ಅಂಗಡಿಯಲ್ಲಿ ರಶ್ ಇದ್ದು ಗಿರಾಕಿಗಳು ತುಂಬಾ ಇದ್ದರೆ ನಾನೂ ಮತ್ತು ಗೋಪಿ ಅಲ್ಲಿಯೇ ಹೊರಗೆ ಇದ್ದ ಒಂದು ಬೆಂಚಿನಮೇಲೆ ಕುಳಿತುಕೊಂಡು ಆ ಕಡೆ ಈ ಕಡೆ ನೋಡುತ್ತಾ  ಯಾವ ಯಾವುದೋ ವಿಷಯವನ್ನು ಮಾತಾಡುತ್ತಾ ಕಾಲ ಕಳೆಯುತ್ತಿದ್ದೆವು. ರಾಜನಿಗೆ ಸ್ವಲ್ಪ ಪುರಸೊತ್ತು ಆದ ಕೂಡಲೇ ಅವನು ಹೊರಗೆ ಬರುತ್ತಿದ್ದ. ನಾವು ಮೂವರೂ ಹೋಟೆಲಿಗೆ ಹೋಗಿ ಕಾಫಿತಿಂಡಿ ಮುಗಿಸುತ್ತಿದ್ದೆವು. ಮತ್ತೆ ಪುನಹ ಅಂಗಡಿಗೆ ಬಂದು ಕುಳಿತುಕೊಳ್ಳುತ್ತಿದ್ದೆವು‌ ಕೆಲವೊಮ್ಮೆ ಅಂಗಡಿಯ ಒಳಗೂ ಹೋಗಿ ಮದ್ದು ಕೊಡುವ ಕೆಲಸದಲ್ಲಿ ರಾಜನಿಗೆ ಸಹಾಯವನ್ನೂ ಮಾಡುತ್ತಿದ್ದೆವು. ಯಕ್ಷಗಾನದಲ್ಲಿ ನಮಗೆ ಸಮಾನ ಆಸಕ್ತಿ. ಒಟ್ಡಿಗೇ ಆಟಕ್ಕೆ ಹೋಗುವುದು.

ಒಮ್ಮೆ ಹೀಗೆ ಮಾತಾಡುತ್ತಾ  "ನಾವೂ ಒಂದು ಆಟ ಮಾಡುವಾನಾ" ಎಂದು ಗೋಪಿ ಹೇಳಿದ. "ಹೋ" ಅಂತ ನಾನು ರಾಜ ಒಪ್ಪಿದೆವು. ನಾವು ಮೂವರು ವೇಷಮಾಡುವವರಾದರೆ ಜೊತೆಗೆ ಶಿವಸ್ವಾಮಿ ಹೊಳ್ಳರು ಎನ್ನುವ ಮಾಸ್ಟ್ರು ಗೋಪಾಲ ಶೆಟ್ಟಿಗಾರರು ಹಾಗೂ ನಮ್ಮ ಕಾಲೇಜಿನಲ್ಲಿ ಎಟೆಂಡರ್ ಕೆಲಸ ಮಾಡುತ್ತಿದ್ದ ಕುಮಾರ ಮತ್ತು ಹೊಳ್ಳರ ಪೈಕಿ ಒಬ್ಬ ಅವನ ಹೆಸರು ನೆನಪಿಲ್ಲ ಅವನು. ಹೀಗೆ ನಾವು ಕಲಾವಿದರ ಒಂದು ಪಟ್ಟಿ ಮಾಡಿದೆವು. ಭಾಗವತಿಕೆಗೆ ರಾಜನ ಅಪ್ಪಯ್ಯ ಸದಾನಂದ ಹೆಬ್ಬಾರರು. ಮದ್ದಲೆ ಬಾರಿಸಲು ನನ್ನ ಅಣ್ಣ ಸುರೇಶ ಉಪ್ಪೂರರು.  ಹಾರ್ಮೋನಿಯಂ ಬಾರಿಸಲು ಕೋಟ ಗಿಳಿಯಾರು ಶಾಲೆಯ ಎಟೆಂಡರ್ ಒಬ್ಬ ಬಾಬು ಅಂತ ಇದ್ದರು. ಸದಾನಂದ ಹೆಬ್ಬಾರರನ್ನು ಮಾತಾಡಿಸಿ ಒಪ್ಪಿಸಿಯಾಯಿತು. ಮಣೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದುದಿನ ರಾತ್ರಿ ಎಲ್ಲರೂ ಸೇರುವುದು ಅಂತ ನಿಶ್ಚಯವಾಯಿತು.

ನಿಶ್ಚಿತ ದಿನದಂದು ಆ ಮಣೂರು ಶಾಲೆಯಲ್ಲಿ ಎಲ್ಲರೂ ಸೇರಿದ ಮೇಲೆ ಎಂತ ಪ್ರಸಂಗ ಮಾಡುವುದು? ಅಂತ ಚರ್ಚೆಯಾಯಿತು. ಶ್ರೀ
ಸದಾನಂದ ಹೆಬ್ಬಾರರು "ರತ್ನಾವತಿ ಕಲ್ಯಾಣ ಮಾಡುವ" ಎಂದರು. ರಾಜನ ಭದ್ರಸೇನ, ಶಿವಸ್ವಾಮಿ ಹೊಳ್ಳರ ದೃಢವರ್ಮ, ಗೋಪಿಯ ಹಾಸ್ಯ,  ಗೋಪಾಲ ಶೆಟ್ಟಿಗಾರರ ವಿದ್ಯುಲ್ಲೋಚನ ಹಾಗೂ ನಾನು ರತ್ನಾವತಿ ಮಾಡಬೇಕು ಎಂದು ಹೆಬ್ಬಾರರು ಹೇಳಿದರು.

ನನಗೆ ಒಂದು ಕ್ಷಣ ಏನು ಹೇಳಬೇಕು ಎಂದೇ ತೋರಲಿಲ್ಲ. ಯಾಕೆಂದರೆ ಸ್ತ್ರೀ ವೇಷ ಮಾಡಲು ನನಗೆ ಇಷ್ಟವೇ ಇರಲಿಲ್ಲ. ಮತ್ತೇನಲ್ಲ ಮೀಸೆ ತೆಗೆಯುವುದು ಹೇಗೆ? ನಾಳೆಗೆ ಮತ್ತೆ ಕಾಲೇಜಿಗೆ ಹೋಗುವುದು ಬ್ಯಾಡವಾ? ಅಲ್ಲಿ ಎಲ್ಲರೂ ತಮಾಷೆ ಮಾಡುತ್ತಾರೆ ಎಂದು ಆತಂಕ. ಅದನ್ನೇ ಹೇಳಿದೆ. ಮತ್ತೆ ಮೀಸೆ ಇಟ್ಟುಕೊಂಡೇ ಯಾರಾದರೂ ಸ್ತ್ರೀ ವೇಷ ಮಾಡುತ್ತಾರಾ? ಮೀಸೆ ತೆಗೆಯುವುದೆ ಮತ್ತೆಂತ" ಎಂದರು ಹೆಬ್ಬಾರರು. ನಾನು ಸುಮ್ಮನಾದೆ.

ಮರುದಿನ ರಾಜನ ಹತ್ತಿರ "ನಾನು ಸ್ತ್ರೀ ವೇಷ ಮಾಡಲಾರೆ ಮೀಸೆ ತೆಗೆಯಲು ಸಾಧ್ಯವೇ ಇಲ್ಲ" ಎಂದು ನನ್ನ ತೀರ್ಮಾನ ಹೇಳಿದೆ. ನಮ್ಮ ಗುಂಪಿನಲ್ಲಿ ಬೇರೆ ಯಾರೂ ಸ್ತ್ರೀ ವೇಷ ಮಾಡುವವರು ಇರಲೂ ಇಲ್ಲ. ಹಾಗಾಗಿ ಅವನು "ನಿನ್ನ ವೇಷ ಚಂದ ಆತ್ತಾ. ನೀನೇ ಮಾಡು" ಎಂದು ಉಬ್ಬಿಸಲು ನೋಡಿದ. ನಾನು ಒಪ್ಪಲೇ ಇಲ್ಲ. ಈ ಗೋಪಿಯೊಬ್ಬ ಆಚೆಕಡೆಗೂ ಇದ್ದಾನೆ. ಈಚೆಕಡೆಗೂ ಇದ್ದಾನೆ. ಅವನು ಹೇಳಿದ್ದೂ ಸರಿ ಅನ್ನುತ್ತಾನೆ. ನಾನು ಹೇಳಿದ್ದೂ ಸರಿ ಅನ್ನುತ್ತಾನೆ. ಕೊನೆಗೆ ಮಾತಿಗೆ ಮಾತು ಬೆಳೆದು ಒಂದು ಸಲ ಸುಮ್ಮನೇ ವೇಷ ಹಾಕಿಸಿ ನೋಡುವ ಎಂದು ಗೋಪಿಯು ತೀರ್ಮಾನ ಹೇಳಿದ. ನನಗೆ ಅದನ್ನು ಒಪ್ಪಿಕೊಳ್ಳದೇ ಉಪಾಯವಿರಲಿಲ್ಲ. ಅರೆಮನಸ್ಸಿನಿಂದ ಒಪ್ಪಿದೆ.
ಅದೇ ಒಂದು ನಾಲ್ಕು ದಿನಕ್ಕೆ ಕುಂದಾಪುರದಲ್ಲಿ ಅಮೃತೇಶ್ವರಿ ಮೇಳದ ಆಟ ಇತ್ತು. ನಾವು ಸುಮಾರು ಆರುಗಂಟೆಗೆ ಚೌಕಿಗೆ ಹೋಗಿ ಪೀಠಿಕೆ ಸ್ತ್ರೀ ವೇಷ ಮಾಡುವವರನ್ನು ಮಾತಾಡಿಸಿದೆವು. ಆಗ ಬಹುಷ್ಯ ಗಾವಳಿ ಬಾಬು ಅನ್ನುವವರು ಪೀಠಿಕೆ ಸ್ತ್ರೀ ವೇಷ ಮಾಡುತ್ತಿದ್ದರು ಅಂತ ನೆನಪು. ಅವರಿಗೆ ನನ್ನ ಪರಿಚಯವಿತ್ತು. ಅಲ್ಲದೇ ಭಾಗವತರ ಮಗ ಅಲ್ಲವೇ? ಕಷ್ಟದಿಂದ ಮೀಸೆ ತೆಗೆಸಿಕೊಂಡು ಹೋಗಿದ್ದೆ. ಅಂತೂ ಬಾಬು ನನ್ನ ಮುಖಕ್ಕೆ ಬರೆದು ಸೀರೆ ಉಡಿಸಿ ಒಂದು ಸ್ತ್ರೀ ವೇಷ ಮಾಡಿಯೇ ಬಿಟ್ಟರು. ಛಾಯಾ ಸ್ಟುಡಿಯೋದ ಗೋವಿಂದ ಎನ್ನುವವರನ್ನು ರಾಜ ಕರೆಸಿದ್ದ ಅವರಿಂದ ನಾಲ್ಕಾರು ಪೋಟೋವನ್ನು ತೆಗೆಸಿದ್ದಾಯಿತು. ಕೂಡಲೇ ವೇಷ ಕಳಚಿ ಆಟ ನೋಡಿಕೊಂಡು ಬಂದೆವು.

 ನಾನು ಅಷ್ಟಾದರೂ ಸ್ತ್ರೀ ವೇಷ ಮಾಡಲು ಪೂರ್ತಿಯಾಗಿ ಒಪ್ಪಿಕೊಳ್ಳದೇ "ಗುರುಗುರು" ಮಾಡುತ್ತಿದ್ದೆ. ಒಂದೆರಡು ದಿನದಲ್ಲೇ ಪೋಟೋ ಗಳೂ ಬಂದವು. ರಾಜ ಅದನ್ನು ನನಗೆ ತೋರಿಸಿ "ನೋಡು ಎಷ್ಟು ಚಂದ ಇತ್ತು ಕಾಣು ನೀನೇ ನಮ್ಮ ಮೇಳದ ಸ್ತ್ರೀ ವೇಷದವನು" ಎಂದು ಮತ್ತಷ್ಟು ಉಬ್ಬಿಸಿದ. ಕೊನೆಗೂ ಎಲ್ಲರ ಒತ್ತಾಯಕ್ಕೆ ರತ್ನಾವತಿ ಕಲ್ಯಾಣದ ರತ್ನಾವತಿಯನ್ನು ಮಾಡಲು ಒಪ್ಪಿಕೊಂಡೆ.

 ಸದಾನಂದ ಹೆಬ್ಬಾರರು ರತ್ನಾವತಿಗೆ ಕೆಲಸ ಕಡಿಮೆ, ಕುಣಿಯಲು ಅವಕಾಶ ಇಲ್ಲ ಎಂದು ಮೊದಲಿಗೆ ಒಡ್ಡೋಲಗ ಆದ ಮೇಲೆ ರತ್ನಾವತಿಯ ಪ್ರವೇಶ ಮಾಡಿಸಿ ತಂದೆ ದೃಢವರ್ಮನ ಹತ್ತಿರ ಬಂದು ತನಗೆ ಮದುವೆ ಮಾಡಿಸು ಎಂದು ಕೇಳಿಕೊಳ್ಳುವ ಒಂದು ದೃಶ್ಯವನ್ನು ಸೇರಿಸಿ, ಒಂದೆರಡು ಪದ್ಯವನ್ನು ಅವರೇ ಹೊಸದಾಗಿ ಬರೆದು ಹೇಳುತ್ತಿದ್ದರು.

ಹತ್ತಾರು ಕಡೆಗಳಲ್ಲಿ ರತ್ನಾವತಿ ಕಲ್ಯಾಣ ಪ್ರದರ್ಶನವಾಯಿತು. ಕೊನೆಗೆ ಪ್ರಭಾಕರ ಐತಾಳ ಎಂಬವರು ನಮ್ಮೊಡನೆ ಸೇರಿಕೊಂಡು ಭದ್ರಸೇನ ಮಾಡುತ್ತಿದ್ದರು. ಆಗ ರಾಜ ವತ್ಸಾಖ್ಯ ಎಂಬ ಪಾತ್ರ ಮಾಡುತ್ತಿದ್ದ.

ಎಲ್ಲರೂ ಸೇರಿ ಮೀಸೆ ತೆಗೆಸಿದ ಸಿಟ್ಟು ನನಗಿನ್ನೂ ಕಡಿಮೆಯಾಗಿರಲಿಲ್ಲ. ಬರೀ ಸ್ತ್ರೀ ವೇಷ ಮಾಡಿ ಮಾಡಿ ನನಗೆ ಬೇಸರವಾಗತೊಡಗಿತ್ತು.

ಒಂದು ಸಲ ಆಟದ ದಿನ ನಾನು ರಾಜನ ಹತ್ರ  "ಇವತ್ತು ನಾನು ರತ್ನಾವತಿ ಮಾಡುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದೆ. ಅವನು ಮೊದಲು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ದರೂ ನಾನು ಪದೇಪದೆ ಹೇಳಿದಾಗ, "ಹಾಗಾದರೆ ನಾನು ಮಾಡೂದಾ?" ಎಂದ. ನಾನು ಅದನ್ನೇ ಗಟ್ಟಿಮಾಡಿಕೊಂಡು, ಹೌದು, ನೀನೂ ಮೀಸೆ ತೆಗೆದುಬಿಡು ನೋಡುವ ಈ ಒಂದು ಸಾರಿಯಾದರೂ ನೀನು ರತ್ನಾವತಿ ಪಾತ್ರ ಮಾಡು. ನಾನು ವತ್ಸಾಖ್ಯ ಮಾಡ್ತೇನೆ" ಎಂದೆ.

ಅಂತೂ ಅವನ ಮೀಸೆಯನ್ನೂ ತೆಗೆಸುವ ಹಟತೊಟ್ಟೆ. ಕೊನೆಗೆ ಅದೇ ಜಗಳವಾಗಿ ಸಂಜೆಯ ಹೊತ್ತಿಗೆ ಗೋಪಿಯ ಸಂಧಾನವಾಗಿ ಅವನು "ನೋಡಿಯೇ ಬಿಡುವ" ಎಂದು ಮೀಸೆಯನ್ನು ತೆಗೆದು ರತ್ನಾವತಿ ಮಾಡಲು ಸಿದ್ಧನಾದ. ನನಗೂ ಒಳಗೊಳಗೆ ನಗು. ಅಂದು ಅವನು ರತ್ನಾವತಿ ಮಾಡಿದ. ನಾನು ವತ್ಸಾಖ್ಯನ ಪಾತ್ರವನ್ನು ಮಾಡಿದೆ. ಅಂತೂ ನನ್ನ ಹಟ ಗೆದ್ದುಬಿಟ್ಟಿತು.  ಆದರೆ ಮುಂದಿನ ಸಲ ಮತ್ತೆ ನಾನೇ ರತ್ನಾವತಿಯನ್ನೇ ಮಾಡಬೇಕಾಯಿತು. ಅದನ್ನೆಲ್ಲ ನೆನಪಿಸಿಕೊಂಡರೆ ಈಗ ನಗು ಬರುತ್ತದೆ.

ಕಾಲೇಜು ಮುಗಿದ ನಂತರ ನಮ್ಮ ಬದುಕು ಬೇರೆ ಬೇರೆ ದಿಕ್ಕನ್ನು ಹಿಡಿದು ಪಯಣ ಸಾಗಿತು. ರಾಜ ಶಿರೂರಿನಲ್ಲಿ ಔಷಧಿ ಅಂಗಡಿಯನ್ನು ನಡೆಸಿದ. ನಂತರ ಈಗ ಹಂಗಾರಕಟ್ಟೆ ಕೇಂದ್ರವನ್ನು ಕಾರ್ಯದರ್ಶಿಯಾಗಿ ನಡೆಸುತ್ತಿದ್ದಾನೆ. ಗೋಪಿ ಯಾವಾಗಾದರೊಮ್ಮೆ ಉಡುಪಿಯಲ್ಲಿ ಸಿಗುತ್ತಿದ್ದ. ಆದರೆ ಅವನು ಅದೇನೋ ಸ್ವಂತ ವ್ಯಾಪಾರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದ. ನೋಡಲು ಹಿಂದಿನಂತೆಯೇ ಜಾಲಿಯಾಗಿಯೇ ಇದ್ದ. ಜೊತೆಗೆ ಕುಡಿತದ ಚಟವೂ ಅವನಿಗೆ ಅಂಟಿಕೊಂಡಿತು. ಮೊನ್ನೆ ಮೊನ್ನೆ ಅದೇ ವಿಪರೀತವಾಗಿ ಕೊನೆಯುಸಿರೆಳೆದ ಎಂಬ ಸುದ್ದಿಯೂ ಬಂದು ಹೀಗೆ ಒಮ್ಮೆ ಹಿಂದಿನದ್ದೆಲ್ಲ ನೆನಪಾಯಿತು.

ಶನಿವಾರ, ಏಪ್ರಿಲ್ 14, 2018

ದಿನೇಶ ಉಪ್ಪೂರ:

*ನನ್ನೊಳಗೆ - 92*

ನಮ್ಮ ಕಲ್ಲಟ್ಟೆ ಮನೆಯ ಅಂಗಳದ ಬಾವಿಕಟ್ಟೆಯ ಹತ್ತಿರದ ದಂಡೆಯ ಬದಿಯಲ್ಲಿ ಒಂದು ದೊಡ್ಡ ದಿವೆಲ್ಸಿನ ಮರ ಇತ್ತು. ಒಂದು ವರ್ಷ ಅದರಲ್ಲಿ ತುಂಬಾ ದಿವೆಲ್ಸಿನ ಕಾಯಿ ಆಗಿತ್ತು. ದಿವೆಲ್ಸಿನ ಕಾಯಿಯ ಹುಳಿ (ಸಾಂಬಾರ್)ಎಂದರೆ ನಮಗೆಲ್ಲ ಅಷ್ಟು ಪ್ರೀತಿ. ಪಳಿದ್ಯ(ಮಜ್ಜಿಗೆಹುಳಿ)ಯನ್ನೂ ಮಾಡುತ್ತಾರೆ. ಸಣ್ಣಗೆ ಕೊಚ್ಚಿ ಪಲ್ಯವನ್ನೂ ಮಾಡುತ್ತಾರೆ. ಎಣ್ಣೆಯಲ್ಲಿ ಕರಿದು ಬಜ್ಜಿಯನ್ನೂ ಪೋಡಿಯನ್ನು ಮಾಡಬಹುದು. ಅದರಲ್ಲೂ ಆ ದಿವೆಲ್ಸಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತೆಳುವಾಗಿ ಕತ್ತರಿಸಿ ಸ್ವಲ್ಪ ಖಾರ ಹಿಟ್ಟಿನಲ್ಲಿ ಮುಳುಗಿಸಿ ದೋಸೆಯ ಕಲ್ಲಿನ ಮೇಲೆ ಹಾಕಿ ಸಣ್ಣ ಬೆಂಕಿಯಲ್ಲಿ ಕಾಯಿಸಿ ಗರಿಗರಿ ಆಗಿ ಮಾಡುವ ಚಟ್ಟಿ ಅಂತೂ ತಿನ್ನಲು ಬಹಳ ರುಚಿಯಾಗಿರುತ್ತದೆ.

ಆ ವರ್ಷ ಇಡೀ ಮರವೇ ದಿವೆಲ್ಸಿನ ಕಾಯಿಗಳ ಭಾರಕ್ಕೆ ಕೆಳಕ್ಕೆ ಭಾಗಿಬಿಟ್ಟಿತ್ತು. ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಉಗ್ರಾಣಿ ಶಾಷ ಒಮ್ಮೆ ಬಂದಾಗ ಅದನ್ನು ನೋಡಿ, "ಅಮ್ಮಾ, ಅದೆಷ್ಟ್ ಕಾಯಿ ಬಿಟ್ಟಿತ್ ಮಾರಾಯ್ರೆ ಇದರಂಗೆ?, ಮರವೇ ಹಿಸ್ಕಂಡ್ ಬೀಳುವ ಹಾಂಗಿತ್ತಲ್ಲೆ" ಅಂದ.

 ಆಗ ಅತ್ತೆ, "ಮಾರಾಯಾ ಅದಕ್ಕೊಂದು ನೀನು ಕಣ್ಣ್ ಹಾಕ್ಬೇಡ. ಮೊದಲೇ ನಿನ್ನ ಕಣ್ಣು ಕೆಟ್ಟದ್ದು ಅಂತ ಜನ ಹೇಳ್ತ್ರು" ಎಂದು ನಗಾಡಿದರು. ಅವನು ನಗುತ್ತಾ, "ಕಣ್ಣ್ ಬೀಳೂದಾ? ಸುಮ್ನೆ ಆಯ್ಕಣಿ, ಮತ್ತೆಂತ ಇಲ್ಯಾ?" ಎಂದು ಹಲ್ಲು ಕಿಸಿದು ನಗಾಡಿದ. ಮತ್ತು ನಮ್ಮ ಮನೆಯ ಜಗಲಿಯ ಮೇಲೆ ಬಂದು ಕುಳಿತು ಅದು ಇದು ಮಾತಾಡಿ, ಒಂದು ವೀಳ್ಯವನ್ನು ಹಾಕಿ, "ಹಾಂಗಾರೆ ನಾನು ಬತ್ ನೆ" ಎಂದು ಹೇಳಿ ತನ್ನ ಮನೆಯ ಕಡೆಗೆ ಹೊರಟ. ಅವನು ಆಚೆಗೆ ಹಾಗೆ ಹೋದನೋ ಇಲ್ಲವೊ, ಇತ್ತ ದಿವೆಲ್ಸಿನ ಕಾಯಿ ಇದ್ದ ಆ ಮರದ ಒಂದು ಗೆಲ್ಲು "ಪಟಾರ್" ಎಂದು ಮುರಿದು ಕೆಳಗೆ ಬಿತ್ತು. ಅದರಲ್ಲಿದ್ದ ದಿವೆಲ್ಸಿನ ಕಾಯಿಯೆಲ್ಲ ನೆಲಕ್ಕೆ ಬಿದ್ದು ಒಡೆದು ಹಾಳಾಗಿಬಿಟ್ಟಿತು.

ಅದು ದಿವೆಲ್ಸಿನ ಕಾಯಿಯ ಭಾರಕ್ಕೆ ಹಾಗೆ ಗೆಲ್ಲು ಮುರಿದು ಬಿದ್ದಿದ್ದಿರಬಹುದು. ಕಾಕತಾಳೀಯವಾಗಿ ಆ ಶಾಷ ಹಾಗೆ ಹೇಳಿಹೋದ ಸ್ವಲ್ಪ ಹೊತ್ತಿಗೇ ಬೀಳಬೇಕೆ? ಅವನ ಕಣ್ಣುತಾಗಿಯೆ ಗೆಲ್ಲುಮುರಿದು ಕಾಯಿಯೆಲ್ಲ ಹಾಳಾಯಿತು ಎಂದು ನಂಬಿದ ಅತ್ತೆಗೆ ಅದರಿಂದ ಬಹಳ ಬೇಸರವಾಯಿತು. ಆ ಶಾಷನ ಕಣ್ಣು ತಾಗಿಯೇ ಹಾಗಾಯಿತು ಎಂದು, ಶೇಷನಿಗೆ ಚೆನ್ನಾಗಿ ಬೈದು ಅವನನ್ನು ಇನ್ನು ಮನೆಗೆ ಸೇರಿಸಿಕೊಳ್ಳಬಾರದು ಎಂದು ನಿರ್ಧಾರವನ್ನೂ ಎಲ್ಲರಿಗೂ ಹೇಳಿದರು. ಅಷ್ಟಕ್ಕೆ ಅವರ ಸಿಟ್ಟು ತಣಿಯಲಿಲ್ಲ. "ಛೆ ಹೀಗಾಯ್ತಲ್ಲ. ಅವನು ಬರಲಿ, ಅವನ ಬಲಿ ತೆಗೆಯುತ್ತೇನೆ" ಎಂದು ಕಣ್ಣಲ್ಲಿ ನೀರು ತಂದುಕೊಂಡು ಒಂದು ಪ್ರತಿಜ್ಞೆಯನ್ನೂ ಮಾಡಿದರು.

 ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಮಧ್ಯಾಹ್ನ ನಮ್ಮ ಮನೆಯ ಕೆಲಸದ ಆಳು ರಾಮ ಮರಾಠಿಯನ್ನು ಕರೆದು, "ಆ ಶಾಷ ಎಲ್ಲಿದ್ದ ಎಂದು ನೋಡಿ ಬಾ. ಅವನನ್ನು ನಾನು ಬರಲಿಕ್ಕೆ ಹೇಳಿದ್ದೆ ಎಂದು ಕರೆದುಕೊಂಡು ಬಾ" ಎಂದು ಆಜ್ಞೆಯನ್ನೂ ಮಾಡಿದರು. ರಾಮ ತಕ್ಷಣವೇ ಹೊರಟು ಶಾಷನ ಮನೆಗೆ ಹೋದರೆ, ಅವನು ಅಲ್ಲಿ ಇರಲಿಲ್ಲ. ಹಾಲಾಡಿ ಪೇಟೆಗೆ ಹೋಗಿರಬಹುದು ಎಂದು ಮನೆಯ ಅಕ್ಕ ಪಕ್ಕದವರು ಹೇಳಿದರು. ಪೇಟೆಗೂ ಹೋಗಿ, ಶಾಷ ಎಲ್ಲೆಲ್ಲಿ ಇರಬಹುದು ಎಂದು ಒಂದು ಅಂದಾಜಿನ ಮೇಲೆ ಹುಡುಕಿ, ಅಂತೂ ಅವನನ್ನು ಪತ್ತೆಮಾಡಿ "ಅಮ್ಮ ಬರಲಿಕ್ಕೆ ಹೇಳಿದರು" ಎಂದು ಸುದ್ದಿ ಮುಟ್ಟಿಸಿ ಬಂದ.

ಶಾಷ ಮೊದಲಿನಿಂದಲೂ ನಮ್ಮ ಮನೆಗೆ ವಿಧೇಯನಾಗಿದ್ದವನು. ಅಲ್ಲಿ ಇಲ್ಲಿ ತಿರುಗಾಟಕ್ಕೆ ಮಾತುಕತೆಗೆ ಬೇಕಾದವನು. ಅವನು, ಅತ್ತೆ ಬರಲು ಹೇಳಿದರು ಎಂದ ಕೂಡಲೇ ಅವನ ಎಲ್ಲ ಕೆಲಸವನ್ನು ಬಿಟ್ಟು ಸಂಜೆಯ ಹೊತ್ತಿಗೆ ಓಡೋಡಿ ಬಂದ.

ಅವನು ಬಂದ ಕೂಡಲೇ ಅತ್ತೆ ಅವನ ಮೇಲೆ ಇದ್ದ ಸಿಟ್ಟನ್ನೆಲ್ಲಾ ಕಾರಿದರು. "ನೀನು ಬೆಳಿಗ್ಗೆ ಹಾಗೆ ಹೇಳಿದ್ದರಿಂದಲೇ ಮರ ಬಿದ್ದು ಹೋಯಿತು. ನಿನ್ನ ಕಣ್ಣು ತಾಗಿ ಹೀಗೆ ಆಯಿತು. ನಿನ್ನ ಕಣ್ಣು ಹೊಟ್ಟಿಹೋಗಲಿ" ಎಂದು ಅವನಿಗೆ ಮಾತನಾಡಲೂ ಬಿಡದೇ ಚೆನ್ನಾಗಿ ಬೈದು ಅವನನ್ನು ಕರೆದುಕೊಂಡು ಮರದ ಬಳಿಗೆ ಬಂದು, "ನೀನು ಮರವನ್ನು ಮುಟ್ಟಬೇಕು, ಮತ್ತು ನನ್ನದು ತಪ್ಪಾಯಿತು ಎಂದು ಹೇಳಬೇಕು" ಎಂದು ಒಂದೇ ಸಮನೆ ಅವನಿಗೆ ಬೈದು, "ನೀನು ಮರವನ್ನು ಮುಟ್ಟಿ ತಪ್ಪಾಯಿತು ಅನ್ನದೆ ಇದ್ದರೆ ಇನ್ನು ನಮ್ಮ ಮನೆಗೆ ಬರುವುದೇ ಬೇಡ" ಎಂದೂ ಆಡಿಬಿಟ್ಟರು.

ಇವರ ರೌದ್ರಾವತಾರ ನೋಡಿದ ಆ ಶಾಷ ತನ್ನ ತಪ್ಪು ಏನು ಎಂದು ಗೊತ್ತಾಗದಿದ್ದರೂ ಮನೆಗೆ ಬರುವುದು ಬೇಡ ಎಂದದ್ದರಿಂದ ಮೆತ್ತಗಾಗಿ ಬಿಟ್ಟ. ಅತ್ತೆ ಹೇಳಿದಂತೆ ಮರದ ಬಳಿಗೆ ಹೋಗಿ, ಮರವನ್ನು ಮುಟ್ಟಿ "ಎಂತ ಅಮ್ಮ, ನೀವ್ ಹೀಂಗ್ ಯ್ಯಾಕ್ ಮಾಡ್ತ್ರಿ?  ನಾನು ಎಂತದೂ ಮಾಡ್ಲಿಲ್ಲೆ. ನೀವು ಹೀಂಗ್ ನನ್ನ ಮೇಲೆ ಅಪ್ವಾದ ಹೊರ್ಸುದಾ? ಇಗಣಿ ಏನೇ ಆಯ್ಲಿ ನೀವ್ ಬೇಸರ ಮಾಡಕಂಬುಕಾಗ ಅಂದೇಳಿ ನಾನು ಮರವನ್ನು ಮುಟ್ಟಿದಿ. ತಪ್ಪಾಯ್ತು ಅಂದಿ" ಎಂದು ದುಃಖದಿಂದ ನುಡಿದು ಮತ್ತೆ ಸೀದಾ ಜಗಲಿಗೆ ಬಂದು ಸುಮ್ಮನೇ ಕುಳಿತ. ಆದರೆ ಅಷ್ಟಕ್ಕೂ ಅತ್ತೆಯ ಸಿಟ್ಟು ಶಾಂತವಾಗಲಿಲ್ಲ. ಅತ್ತೆ ಅವನನ್ನೂ ಮಾತಾಡಿಸಿ ಸಮಾಧಾನ ಮಾಡುವ ಗೋಜಿಗೂ ಹೋಗಲಿಲ್ಲ. ಅವನು ಹಾಗೆ ಸುಮಾರು ಹೊತ್ತು ಕುಳಿತು ಕುಳಿತು ಸಾಕಾಗಿ ನಂತರ ನಿಧಾನವಾಗಿ ಎದ್ದು ತನ್ನಮನೆಗೆ ಪೆಚ್ಚುಮೋರೆ ಹಾಕಿಕೊಂಡು ಹೊರಟು ಹೋದ.

ಒಂದು ನಾಲ್ಕಾರು ದಿನ ಮತ್ತೆ ನಮ್ಮ ಮನೆಯ ಕಡೆಗೆ ಅವನು ಸುಳಿಯಲಿಲ್ಲ.ಒಂದು ವಾರದ ನಂತರ ಮತ್ತೆ ಅತ್ತೆಯೇ ನಮ್ಮ ಆಳು ರಾಮನನ್ನು ಕರೆದು, " ನೋಡ್ ಮಾರಾಯಾ, ಆ ಶಾಷ ಒಬ್ಬ ಎಲ್ಲಿ ಸತ್ತ್ ಹೋದ ಅಂತ ನೋಡ್ಕೊಂಡು ಬಾ, ಬದ್ಕಿ ಇದ್ರೆ ಅಮ್ಮ ಬಪ್ಕೆ ಹೇಳೀರ್ ಅಂತ ಹೇಳಿ ಕರ್ಕಂಡೆ ಬಾ ಕಾಂಬ" ಎಂದು ಹೇಳಿಕಳಿಸಿದರು. ರಾಮ ಹೋಗಿ ಶಾಷನಿಗೆ ಅದನ್ನು ಹೇಳಿ ಬಂದ.

ಶಾಷ, ಆಗಲೇ ಹೊರಟು ನಮ್ಮ ಮನೆಗೆ ಬಂದು, ಹಿಂದೆ ಆದದ್ದಲ್ಲವನ್ನೂ ಮರೆತು, " ಏನ್ ಶ್ಯೆಖಿ ಮರ್ರೆ, ಹ್ಯಾಯ್ ಅಮ್ಮಾ, ಬಪ್ಪುಕ್ ಹೇಳಿದ್ರಿಯಂಬ್ರಲೆ?" ಎಂದು ನಗುತ್ತಾ ಜಗಲಿಯ ಮೇಲೆ ಕುಳಿತು, " ತಿಂಬುಕೆ ಒಂದ್ ವೀಳ್ಯ ಕೊಡಿ ಕಾಂಬ. ಹಾಂಗೆ ಒಂದ್ ಚೂರ್ ಹೊಯ್ಸೊಪ್ " ಅಂದ.

ಶುಕ್ರವಾರ, ಏಪ್ರಿಲ್ 13, 2018

ದಿನೇಶ ಉಪ್ಪೂರ:

*ನನ್ನೊಳಗೆ- 91*

ನಾನು ಹಾಲಾಡಿ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯೇ ಹತ್ತಿರವಿರುವ ಪೋಸ್ಟ್ ಆಫೀಸಿಗೆ ಮಧ್ಯಾಹ್ನ ಊಟವಾದ ಮೇಲೆ ಆಗಾಗ ಹೋಗಿ ಬರುವುದಿತ್ತು. ಅಲ್ಲಿ ಹಿರಿಯಣ್ಣ ನಾಯಕ್ ಎನ್ನುವವರು ಪೋಸ್ಟ್ ಮಾಸ್ಟರ್ ಆಗಿದ್ದರು. ಪೋಸ್ಟ್ ಆಫೀಸ್ ಅಂದರೆ ಅದು ರಸ್ತೆ ಬದಿಯಲ್ಲಿರುವ ಒಬ್ಬರ ಮನೆಯ ಮುಂಭಾಗದ ಒಂದು ಕೋಣೆ. ಕೋಣೆ ಅಂದರೆ ಬಹುಷ್ಯ ಗೋಡೌನ್ ತರಹದ ಒಂದು ದೊಡ್ಡ ಜಾಗ ಅಂತ ನೆನಪು. ಅದರ ಒಳಗೆ ಹಿಂದಿನ ಭಾಗ ಕತ್ತಲು ಕತ್ತಲು.  ಅಂತಹ ಎತ್ತರದ ಎರಡು ಕೋಣೆಯ ಮಧ್ಯದ ಹೆಬ್ಬಾಗಿಲಿನಿಂದ ಒಳಗೆ ಹೋದರೆ ಅಲ್ಲಿ ಮನೆ. ಆ ಕಟ್ಟಡದ ಗೋಡೆಗಳನ್ನು ಶಿಲೆಕಲ್ಲಿನಿಂದಲೇ ಕಟ್ಟಲಾಗಿತ್ತು.

ಆ ಪೋಸ್ಟ್ ಆಫೀಸಿನ ಬಾಗಿಲು ಎಂದರೆ ಹಲವಾರು ಹಲಗೆಗಳನ್ನು ಜೋಡಿಸಿ ಉದ್ದಕ್ಕೂ ಮೇಲಿನ ಮರದ ಚೌಕಟ್ಟಿಗೆ ಸಾಲಾಗಿ ಸಿಕ್ಕಿಸಿ ಪೇರಿಸಿ ಇಡುವುದು. ಆದರೆ ಒಂದೇ ಕಡೆಯಲ್ಲಿ ಮಾತ್ರ ಹಾಗೆ ಚೌಕಟ್ಟಿನ ತೂತಿಗೆ ಹಲಗೆಯನ್ನು ಎತ್ತಿ ಸಿಕ್ಕಿಸಿಲು ಆಗುವುದು. ನಂತರ ಹಲಗೆಯನ್ನು ಮುಂದೆ ದೂಡಬೇಕು. ತೆಗೆಯುವಾಗಲೂ ಸಿಕ್ಕಿಸಿದ ಜಾಗದಲ್ಲಿಗೇ ದೂಡಿ ತಂದು ಹಲಗೆಯನ್ನು ಈಚೆಗೆ ತೆಗೆಯಬೇಕಾಗುತ್ತಿತ್ತು. ಮತ್ತು ಅದೇ ಜಾಗದಲ್ಲಿ ಎರಡು ಮೂರು ಹಲಗೆಯನ್ನು ಸೇರಿಸಿ ಒಂದು ಕಬ್ಬಿಣದ ಸರಳು ಸಿಕ್ಕಿಸಿ ಬೀಗ ಹಾಕುವುದು. ಈಗ ಅಂತಹ ಬಾಗಿಲು ಎಲ್ಲಿಯೂ ಇಲ್ಲವೇನೋ ಅನ್ನಿಸುತ್ತದೆ.

ಅಚ್ಚುತ ಅಂತ ಒಬ್ಬರು ಬಟ್ಟೆ ಹೊಲಿಯುವವರು ಅಲ್ಲಿಯೇ ಎದುರಲ್ಲಿ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಬಟ್ಟೆ ಹೊಲಿಯುತ್ತಿದ್ದರು. ನಾನು ಡಿಗ್ರಿ ಮುಗಿದು ಕಲ್ಲಟ್ಟೆಯಲ್ಲಿ ಇದ್ದು ಕೆಲಸ ಹುಡುಕುತ್ತಾ ಅಲೆದಾಡುತ್ತಿದ್ದಾಗ ಒಂದು ನಾಲ್ಕೈದು ತಿಂಗಳು ಅವರ ಹತ್ತಿರ ಹೋಗಿ ಹೊಲಿಗೆಯನ್ನು ಕಲಿತಿದ್ದೆ. ಅವರು ನನಗೆ ಅಂಗಿಗೆ ಗುಂಡಿ ಇಡಲು ಮತ್ತು ಗುಂಡಿಯ ತೂತಿಗೆ ಕೈ ಹೊಲಿಗೆ ಹಾಕಲು, ಹಳೆಯ ರಿಪೇರಿಗೆ ಬಂದ ಬಟ್ಟೆಗೆ ಕೈ ಹೊಲಿಗೆ ಹಾಕಲು ಹೇಳಿಕೊಟ್ಟಿದ್ದರು. ಆದರೆ ಹೊಲಿಗೆ ಮೆಶನ್ ಮಾತ್ರ ಮುಟ್ಟಲು ಬಿಡುತ್ತಿರಲಿಲ್ಲ. ಮೊದಲು ಕೈ ಹೊಲಿಗೆ ಮಾಡಲು ಸರಿಯಾಗಿ ಕಲಿಯಿರಿ ಆಮೇಲೆ ಹೇಳಿಕೊಡುತ್ತೇನೆ ಎನ್ನುತ್ತಿದ್ದರು. ಒಮ್ಮೆ ಅವರು ಹೊರಗೆ ಏನೋ ಕೆಲಸಕ್ಕೆ ಹೋಗಿದ್ದಾಗ ನಾನು ಹೊಲಿಗೆ ಮಿಶನ್ ನಲ್ಲಿ ಹೊಲಿಯಲು ಹೋಗಿ, ಮಿಶನ್ ನಲ್ಲಿ ದಾರ ಸಿಕ್ಕಿಹಾಕಿಕೊಂಡಿದ್ದು ಅವರಿಂದ ಬೈಸಿಕೊಂಡಿದ್ದೆ. ಆಮೇಲೆ ಅವರಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟೆ.

 ಅವರಿಗೆ ಹಿಂದೆ ಒಮ್ಮೆ ಯಾವುದೋ ಬಸ್ಸಿನ ಕೆಳಗೆ ಬಿದ್ದು ಎಕ್ಸಿಡೆಂಟ್ ಆಗಿದ್ದು ಎದೆಯ ಮೂಳೆಗಳೆಲ್ಲ ಮುರಿದಿತ್ತಂತೆ. ಹಾಗಾಗಿ ಎದೆಯ ಭಾಗ ಬೆನ್ನಿಗೆ ಒತ್ತಿದಂತೆ ಚಪ್ಪಟೆಯಾಗಿ ಇತ್ತು. ಅವರಿಗೆ ಮದುವೆ ಆಗಲಿಲ್ಲ. ಮತ್ತು ವಯಸ್ಸಾದಂತೆ ಅದೇ  ಚಿಂತೆಯಾಗಿ ಒಂದು ರೀತಿಯ ಮತಿಭ್ರಮಣೆಯಾದವರಂತೆ ಅವರಷ್ಟಕ್ಕೇ ಅವರು ಮಾತಾಡುತ್ತಿದ್ದರಂತೆ. ಕೊನೆಗೆ ಹಾಲಾಡಿ ಬಸ್ ನಿಲ್ದಾಣದ ಹತ್ತಿರದ ಒಬ್ಬ ವೇಶ್ಯೆಯ ಮನೆಯ ಹೊರಗಿನ ಜಗಲಿಯಲ್ಲೇ ಪ್ರತೀದಿನ ಹೋಗಿ ಕುಳಿತು ರಾತ್ರಿ ಕಳೆಯುತ್ತಿದ್ದರಂತೆ. ಅವಳು ಇಲ್ಲಿಗೆ ಬರಬೇಡ ಹೋಗು ಎಂದು ಬೈದು ಹೋಗಲು ಹೇಳಿದರೂ ಇವರು ಅಲ್ಲಿಯೇ ಇರುತ್ತಿದ್ದರಂತೆ. ಹಾಗೆಯೇ ಒಂದು ದಿನ ಅವರು ಸತ್ತು ಹೋದರು.

ನಮ್ಮ ಪೋಸ್ಟ್ ಆಫೀಸಿನಲ್ಲಿ ಮೊದಲಿಗೆ ಅಣ್ಣಪ್ಪಯ್ಯ ಶ್ಯಾನುಭೋಗ್ ಅಂತ ಒಬ್ಬರು ಪೋಸ್ಟ್ ಮೆನ್ ಇದ್ದರು. ಪೋಸ್ಟ್ ಮೆನ್ ಅಂದರೆ ಅವರನ್ನು ನಾವು ಐಡಿಯಲ್ ಪೋಸ್ಟ್ ಮೆನ್ ಅಂತ ಕರೆಯಬಹುದು. ಅವರು ಸಪೂರ ಉದ್ದ ಆಳು. ಜುಬ್ಬ ಪೈಜಾಮ ಹಾಕಿ, ತಲೆಗೆ ಒಂದು ಟೋಪಿ ಧರಿಸುತ್ತಿದ್ದರು. ಸೈಕಲ್ಲಿನಲ್ಲಿಯೇ ಪ್ರಯಾಣ ಮಾಡಿ ಮನೆಮನೆಗೆ ಪತ್ರವನ್ನು ಕೊಂಡುಹೋಗಿ ಕೊಡುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ಕಾಲದ ನಂತರ ಅಚ್ಚುತ, ಆಮೇಲೆ ಭಾಸ್ಕರ ಮಿತ್ಯಾಂತರು ಪೋಸ್ಟ್ ಮೆನ್ ಆದರು ಎಂದು ಕಾಣುತ್ತದೆ.

ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಆ ದಿನದ ಪತ್ರಗಳ ಒಂದು ದೊಡ್ಡ ಚೀಲವು ಹನುಮಾನ್ ಎಂಬ ಬಸ್ಸಿನಲ್ಲಿ ಬರುತ್ತಿತ್ತು. ಅಲ್ಲಿಗೆ ಬರುವಾಗ ಡ್ರೈವರ್ ಬಸ್ ನ ವೇಗವನ್ನು ಸ್ವಲ್ಪ ನಿಧಾನಮಾಡುತ್ತಿದ್ದು,ಆಗ ಆ ಚೀಲವನ್ನು ಬಸ್ಸಿನ ಕಂಡಕ್ಟರ್ ನಮ್ಮ ಪೋಸ್ಟ್ ಆಫೀಸಿನ ಎದುರೇ ಎಸೆದು ಹೋಗುತ್ತಿದ್ದರು. ಅದರ ಬಾಯಿಯನ್ನು ಹಗ್ಗದಿಂದ ಕಟ್ಟಿ, ಕಪ್ಪಗಿನ ರಾಳವನ್ನು ಬಿಸಿಮಾಡಿ, ಹಚ್ಚಿ ಶೀಲು ಮಾಡಿ ಯಾರೂ ಅನಧಿಕೃತವಾಗಿ ಪತ್ರವನ್ನು ಹೊರಕ್ಕೆ ತೆಗೆಯದಂತೆ ಮಾಡಿರುತ್ತಿದ್ದರು.

ಆ ಬಸ್ಸು ಬಂದುದನ್ನು ಕಂಡ ಕೂಡಲೇ ನಾವೆಲ್ಲ ಶಾಲೆಯಿಂದ ಆ ಪೋಸ್ಟ್ ಆಫೀಸಿಗೆ ಓಡುತ್ತಿದ್ದೆವು. ಅಷ್ಟರಲ್ಲಿ ಪೋಸ್ಟ್ ಮಾಸ್ಟರ್ ರು ಪೋಸ್ಟ್ ಬ್ಯಾಗ್ ನ ಬಾಯಿಯಲ್ಲಿ ಇರುವ ಹಗ್ಗವನ್ನು ಕತ್ತರಿಸಿ ಶೀಲ್ ಓಪನ್ ಮಾಡಿ ತೆಗೆದು ಅದರಲ್ಲಿದ್ದ ಪತ್ರಗಳನ್ನೆಲ್ಲ ಒಂದು ಟೇಬಲ್ ಮೇಲೆ  ಸುರಿಯುತ್ತಿದ್ದರು. ಪೋಸ್ಟ್ ಮೆನ್ ರು ಆ ಒಂದೊಂದೇ ಪತ್ರಗಳಿಗೆ ಟಪ್ ಟಕ್ ಟಪ್ ಟಕ್ ಅಂತ ಆ ದಿನದ ತಾರೀಕು ಇರುವ ಶೀಲನ್ನು ಹೊಡೆಯುತ್ತಿದ್ದರು. ಆ ಮೇಲೆ ಎಲ್ಲಾ ಪತ್ರಗಳನ್ನು ಪೋಸ್ಟ್ ಮಾಸ್ಟರ್ ಎದುರಿನ ಟೇಬಲ್ ಮೇಲೆ ತಂದು ಇಡುತ್ತಿದ್ದರು.

 ಪೋಸ್ಟ್ ಮಾಸ್ಟರ್ ಒಂದೊಂದಾಗಿ ಪತ್ರವನ್ನು ಎತ್ತಿ ಕಣ್ಣು ಸಣ್ಣದು ಮಾಡಿ, ಆ ಪತ್ರದ ಹೆಸರು ಮತ್ತು ವಿಳಾಸವನ್ನು ಗಟ್ಟಿಯಾಗಿ ಓದಿ ಹೇಳಿ ಅವುಗಳನ್ನು ಸ್ಥಳದ ಪ್ರಕಾರ ವಿಂಗಡಿಸಿ ಇಡುತ್ತಿದ್ದರು. ಆಗ ಅವರ ಟೇಬಲ್ಲಿನ  ಸುತ್ತ  ನಿಂತು ಸುತ್ತುವರಿದುಕೊಂಡಿದ್ದ ನಾವು, ನಮ್ಮ ಮನೆಯ ಅಥವ ನಮ್ಮ ಪಕ್ಕದ ಮನೆಯವರಿಗೆ ಪತ್ರ ಬಂದಿದ್ದರೆ, ಅವರು ಆ ಹೆಸರನ್ನು ಹೇಳಿದ ಕೂಡಲೇ  "ನನಗೆ ಕೊಡಿ" ಎಂದು ಗಟ್ಟಿಯಾಗಿ ಕೂಗಿ, ಆ ಪತ್ರವನ್ನು ತೆಗೆದುಕೊಳ್ಳುತ್ತಿದ್ದೆವು. ಅದನ್ನು ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿತ್ತು.

ಈ ಕೆಲಸವು ನಾವು ಶಾಲೆಗೆ ಹೋಗುವಾಗಿನ ದೈನಂದಿನ ಕೆಲಸದ ಒಂದು ಭಾಗವೇ ಆಗಿತ್ತು. ಹಾಗೆ ಬಂದ ಪತ್ರಗಳು ಕೆಲವೊಮ್ಮೆ ಎರಡು ಮೂರು ದಿನಗಳವರೆಗೆ ನಮ್ಮ ಶಾಲೆಯ ಚೀಲದಲ್ಲಿಯೇ ಉಳಿಯುವುದೂ ಇತ್ತು. ಮನೆಯವರಿಗೆ ಪೋಸ್ಟ್ ಮಾಸ್ಟರ್ ರಿಂದ ಪತ್ರ ಬಂದ ವಿಷಯ ತಿಳಿದು, ಆನಂತರ ನಮ್ಮ ತನಿಖೆ ಆದರೆ ಏನಾದರೂ ಸುಳ್ಳು ಹೇಳಲು ಸಿದ್ಧವಾಗಿ ಇರಬೇಕಾಗುತ್ತಿತ್ತು.

ಬುಧವಾರ, ಏಪ್ರಿಲ್ 4, 2018

ದಿನೇಶ ಉಪ್ಪೂರ:

*ನನ್ನೊಳಗೆ-90*

ಮೊನ್ನೆ ಊರಿಗೆ ಹೋಗಿದ್ದಾಗ ಅತ್ತಿಗೆ ಹೇಳಿದರು. "ನಮ್ಮ ಮನೆಯ ಮೇಲು ಬದಿಯ ಹಾಡಿಯಲ್ಲಿರುವುದು ನಮ್ಮ ಮೂಲ ನಾಗ ಅಲ್ಲ ಅಂತೆ ಮಾರಾಯಾ. ಇನ್ನು ಅದು ಎಲ್ಲಿದೆ ಅಂತ ಹುಡುಕಿಕೊಂಡು ಹೋದರೆ ಸೈ" ಅಂದರು. ಎರಡು ವರ್ಷದ ಹಿಂದೆಯಷ್ಟೇ ಯಾರೋ ಜ್ಯೋತಿಷ್ಯರು ಹೇಳಿದರು ಅಂತ ಆ ನಾಗನ ಕಲ್ಲು ಭಿನ್ನ ಆಗಿದೆ ಎಂದು, ಹೊಸದಾಗಿ ನಾಗನನ್ನು ಪ್ರತಿಷ್ಟೆ ಮಾಡಿಸಿ, ದೋಷ ಪರಿಹಾರಕ್ಜಾಗಿ ಆಶ್ಲೇಷ ಬಲಿಯನ್ನು ನಾಗಕಲಶಹೋಮವನ್ನು ಹಲವಾರು ಬ್ರಾಹ್ಮಣ ಪುರೋಹಿತರನ್ನು ಕರೆಸಿ ವಿದ್ಯುಕ್ತವಾಗಿ ಮಾಡಿಸಿದ್ದೆವಲ್ಲ. ಈಗ ಆ ನಾಗನೇ ನಮ್ಮದಲ್ಲ ಅಂದರೆ ಹೇಗೇ? ಎಂದೆ. ಏನೋ ಮಾರಾಯ ನಂಗೊಂದೂ ಗೊತ್ತಾತಿಲ್ಲೆ ಎಂದರು.

 ನಾನೂ ಚಿಕ್ಕವನಿರುವಾಗ ನೆರೆಕರೆಯ ಒಕ್ಕಲುಮನೆಯವರು ಬಾಳೆಗೊನೆಯನ್ನು ತಂದು, " ಒಮ್ಮೆ ನಾಗನಿಗೆ ಒಪ್ಪಿಸಿಕೊಡಿ ಅಯ್ಯ", "ಒಂದು ತನು ಹಾಕಿ ಅಯ್ಯ" ಎಂದು ಹೇಳುತ್ತಿದ್ದರು. ಆಗ ನಾನು ಸ್ನಾನಮಾಡಿ ಪಾಣಿಪಂಚೆಯನ್ನು ಉಟ್ಟು ಮಡಿಯಲ್ಲಿ ಅವರು ತಂದ ಹಣ್ಣುಕಾಯಿಯನ್ನು ನಾಗನಿಗೆ ಅರ್ಪಿಸಿ, ನಾಗನ ಕಲ್ಲಿಗೆ ಹಾಲು ಎರೆದು, ಬಾಳೆಹಣ್ಣಿನ ತುದಿಮುರಿದು, ಗೊತ್ತಿದ್ದ ಮಂತ್ರವನ್ನು ಹೇಳಿ ಆರತಿಮಾಡಿ, ಪೂಜೆ ಮಾಡುವುದು ಇತ್ತು. ಮನೆಯಲ್ಲಿ ಗಂಟಿಕರುಗಳಿಗೆ ಹುಷಾರಿಲ್ಲದಾಗ, ಏನಾದರೂ ಗಂಭೀರವಾದ ಸಮಸ್ಯೆಗಳು ಕಾಯಿಲೆಗಳು ಬಂದಾಗ, ನಾಗನಿಗೆ ಒಂದು ಕಲಶವಿಟ್ಟು ಪೂಜೆಮಾಡುತ್ತೇವೆ ಎಂದು ಹರಕೆ ಹೊತ್ತು ಅದರಂತೆ ನಡೆದುಕೊಳ್ಳುವುದು ಇತ್ತು. ಅದರಿಂದ  ನಮ್ಮ ಕಷ್ಟಪರಿಹಾರ ಮಾಡಿಕೊಳ್ಳುವುದು ಹಿಂದಿನಿಂದಲೂ  ಬಂದದ್ದು.

ನನ್ನ ಕಛೇರಿಯ ಸಹೋದ್ಯೋಗಿಗಳೊಬ್ಬರು ಶೆಟ್ಟರಿದ್ದರು. ಅವರ ಅಣ್ಣನಿಗೆ ಇದ್ದಕ್ಕಿದ್ದಂತೆ ಒಮ್ಮೆ ಹುಷಾರಿಲ್ಲದ ಹಾಗಾಗಿ ಪ್ರಜ್ಞೆ ತಪ್ಪಿ ಕೋಮಕ್ಕೆ ಹೋದರಂತೆ. ಅವರನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಚಿಕಿತ್ಸೆಮಾಡಿದರೂ ಏನೂ ಪ್ರಯೋಜನವಾಗದಿದ್ದಾಗ ಜ್ಯೋತಿಷ್ಯರ ಮೊರೆ ಹೋದರು. ಅವರು "ನಿಮ್ಮ ಮೂಲನಾಗನ ಉಪದ್ರ" ಎಂದು ಹೇಳಿದರು. ಮತ್ತು ಅದು ಎಲ್ಲಿ ಯಾವ ದಿಕ್ಕಿನಲ್ಲಿ ಇದೆ ಎಂದೂ ಕೆಲವು ಕುರುಹುಗಳನ್ನು ಹೇಳಿ ಅಲ್ಲಿಗೆ ಹೋಗಿ ಪರಿಹಾರಮಾಡಿಕೊಳ್ಳಿ ಎಂದರು.

 ಸರಿ. ಅವರು ತಿಳಿಸಿದ ಹಾಗೆ ಯಾರು ಯಾರನ್ನೋ ವಿಚಾರಿಸುತ್ತಾ ಸ್ಥಳವನ್ನು ಅರಸುತ್ತಾ ನನ್ನ ಆ ಸಹೋದ್ಯೋಗಿಗಳು ಬಂದದ್ದು ಹಳ್ಳಿಯ ನಮ್ಮ ಮನೆಗೆ.

 ನಾವು ಚಿಕ್ಕಂದಿನಿಂದಲೂ ಪೂಜೆ ಮಾಡುತ್ತಿದ್ದ ನಮ್ಮ ತೋಟದ ಮಧ್ಯ ಇರುವ ನಾಗ ಅವರ ಮೂಲನಾಗ ಅಂತ ಆಯಿತು. ಗೊತ್ತಾದ ಮೇಲೆ ಅದಕ್ಕೆ ಏನಾಗಬೇಕೋ ಅದನ್ನು ಮಾಡಿಸುತ್ತೇವೆ ಎಂದು ಹರಕೆ ಹೊತ್ತರಂತೆ. ಅವರ ಅಣ್ಣ ಕಣ್ಣುಬಿಟ್ಟು ಹುಷಾರಾದರಂತೆ. ಅವರು ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಒಬ್ಬ ಆರೋಡ ಪ್ರಶ್ನೆಯನ್ನು ಹೇಳುವ ದೊಡ್ಡ ಜ್ಯೋತಿಷ್ಯರನ್ನು ಕರೆದುಕೊಂಡು ಅವರ ಕುಟುಂಬದವರೆಲ್ಲಾ  ಸೇರಿಕೊಂಡು ನಮ್ಮ ಮನೆಗೆ ಒಂದುದಿನ ಬಂದೇ ಬಿಟ್ಟರು.

ನಾವೂ ಆಚೀಚೆಯ ಹಿರಿಯರನ್ನು ವಿಚಾರಿಸಿದಾಗ ಅವರು ಸಣ್ಣವರಿರುವಾಗ ಮೇಲೆ ಮಕ್ಕಿಯ ಬಳಿಯ ವಿಶಾಲ ಜಾಗದಲ್ಲಿ ಹಳೆಯ ಒಂದು ಬಾಗಿಲ ದಾರಂದ, ಅರೆಯುವ ಕಲ್ಲು, ಹಾಳುಬಿದ್ದ ಗೋಡೆ ಎಲ್ಲ ಇದ್ದಿತ್ತಪ ಎಂದು ಹೇಳಿದರು. ಮತ್ತೆ ಕೆಲವರು ಇಲ್ಲಿ ಮೊದಲು ದೊಡ್ಡ ಶ್ರೀಮಂತಿಕೆಯಲ್ಲಿ ಮೆರೆದ ಶೆಟ್ರು ಒಬ್ಬರಿದ್ದರಂತೆ. ಆಮೇಲೆ ಅವರ ಸಂಸಾರದ ಆಂತರಿಕ ಕಲಹದಿಂದಾಗಿ ಆ ಆಸ್ತಿಯನ್ನು ಮಾರಿ ಎಲ್ಲಿಗೋ ಹೋದರಂತೆ ಅಂದದ್ದೂ ನನ್ನ ಸಹೋದ್ಯೋಗಿ ಶೆಟ್ಟರ ಕತೆಗೆ ಹೊಂದಾಣಿಕೆಯಾಯಿತು. ಆರೋಡ ಪ್ರಶ್ನೆಯಲ್ಲಿ ಅವರ ಪೂರ್ವಿಕರು ಅಲ್ಲಿ ಇದ್ದದ್ದು ಹೌದು ಎಂದದ್ದು ಮೇಲಿನ ಮಾತು ಧೃಡವಾಯಿತು.

ಆರೋಡ ಪ್ರಶ್ನೆಯಲ್ಲಿ ಆ ಜ್ಯೋತಿಷಿಗಳು ಗಹನವಾದ ಹಲವು ಸಂಗತಿಗಳನ್ನು ತಿಳಿಸಿ, ನೀವು ಮೂಲನಾಗನನ್ನು ಬಿಡುವ ಹಾಗಿಲ್ಲ, ಅದಕ್ಕೆ ನಡೆದುಕೊಳ್ಳದೇ ಇರುವುದರಿಂದ ಇನ್ನೂ ಕಷ್ಟಗಳು ಬರಬಹುದು. ಅಲ್ಲಿಯೇ ಒಂದು ನಾಗಮಂಡಲ ಮಾಡಿ ಆ ನಾಗನಿಗೆ ಕಳೆಬರುವಂತೆ ಮಾಡಬೇಕೆಂದೂ ಪ್ರತೀವರ್ಷವೂ ಪೂಜೆ ಸಲ್ಲಿಸಬೇಕೆಂದೂ ತಿಳಿಸಿದರು. ಹಣವಿದ್ದವರವರು ಅದನ್ನು ಮುಂದೆ ಮಾಡಿಯಾರು.

ಅಲ್ಲಿಗೆ ನಾವು ಚಿಕ್ಕಂದಿನಿಂದಲೂ ಪೂಜಿಸಿಕೊಂಡು ಬಂದ ನಮ್ಮ ನಾಗ ಅವರ ಮೂಲನಾಗವೆಂದು ನಾವು ತಿಳಿಯಬೇಕಾಯಿತು. ಹಾಗೆಯೇ ಈಗ ನಮ್ಮ ಜ್ಯೋತಿಷ್ಯರು ಹೇಳಿದ ಮಾತಿನಂತೆ ನಮ್ಮ ಮೂಲ ನಾಗ ಎಲ್ಲಿ ಇದೆಯೆಂದು ನಾವೀಗ ಹುಡುಕುವುದಾಯಿತು. ಕೆಲವು ಸ್ನೇಹಿತರು ನಾಗರಪಂಚಮಿಯನ್ನು ಆಚರಿಸುವವರು ಅವರ ಮೂಲನಾಗ ಎಲ್ಲಿ ಇದೆಯೆಂದು ತಿಳಿದು ಪ್ರತೀವರ್ಷ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಿಬರುವುದನ್ನೂ ನಾನು ನೋಡಿದ್ದೆ.

ಇದೇ ರೀತಿ ಕುಲದೇವರು ಯಾವುದು ಎಂಬ ಬಗ್ಗೆಯೂ ನಮ್ಮದು ಗೊಂದಲವಿದೆ. ಒಬ್ಬರು ನೀಲಾವರ ಅಂದರೆ, ಮತ್ತೊಬ್ಬರು ಅನಂತೇಶ್ವರ ಅನ್ನುತ್ತಾರೆ.ಇನ್ನು ಕೆಲವರು ಕುಂಜಾರುಗಿರಿ ಅಂದರು. ಒಬ್ಬರು ಈಶ್ವರ ಅಂದರೆ ಮತ್ತೊಬ್ಬರು ಅಮ್ಮನವರು ಅನ್ನುತ್ತಾರೆ.

ಮೊದಲು ಬಡತನದಿಂದ ಬದುಕಿಗಾಗಿ ಅನ್ನವನ್ನು ಹುಡುಕಿಕೊಂಡು ಯಾವ ಯಾವ ಊರನ್ನೋ ಸೇರುತ್ತೇವೆ. ಅಲ್ಲಿಯ ಬದುಕಿನ ಜಂಜಾಟದಲ್ಲಿ ಹಿಂದಿನ ದೇವರನ್ನೋ ದಿಂಡರನ್ನೋ ಮರೆತುಬಿಡುತ್ತೇವೆ. ಆದರೆ ಕಷ್ಟಕಾರ್ಪಣ್ಯಗಳು ತಲೆದೋರಿದಾಗ ಮತ್ತೆ ಮೂಲವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ನಾಸ್ತಿಕರು ಅನ್ನುವವರು ಏನೇ ಹೇಳಲಿ ನಮ್ಮ ಮೂಲ ದೇವರು, ಮೂಲನಾಗ, ಮೂಲದೈವ ಎಂದು ನಮ್ಮ ದಕ್ಷಿಣಕನ್ನಡ ಉಡುಪಿಯಲ್ಲಿ ಇತ್ತೀಚೆಗೆ ಅದೆಷ್ಟೋ ದೇವಸ್ಥಾನಗಳು ನಾಗಬನಗಳ ಸ್ಥಳಗಳು ಜೀರ್ಣೋದ್ಧಾರವಾಗಿ ಇಂದು ಅಭಿವೃದ್ಧಿಯಾಗಿದೆ ಎನ್ನುವುದು ಸುಳ್ಳಲ್ಲ. ಇದರಿಂದ ಒಂದು ಧಾರ್ಮಿಕ ಶ್ರದ್ಧೆ, ಪಾಪಭೀರುತ್ವ ಮನಸ್ಸಿನಲ್ಲಿ ನೆಲೆಯೂರುತ್ತದೆ ಎಂಬುದು ಅಷ್ಟೇ ಸತ್ಯ.

 ನಮ್ಮ ಊರಿನ ಪಕ್ಕದ ಬೇಸಾಯಗಾರರೊಬ್ಬರು ತಮ್ಮ ಹಿರಿಯರ ಆಸ್ತಿಯನ್ನು ಏನೋ ಕಾರಣದಿಂದ ಮಾರಾಟಮಾಡಿ ಪೇಟೆಗೆ ಹೋಗಿ ಮನೆಮಾಡಿಕೊಂಡು ಇದ್ದರು. ಆದರೆ ಸ್ವಲ್ಪ ಸಮಯದಲ್ಲೇ ಅವರಿಗೆ ಏಳ್ಗತಿಯಾಗದೇ,ಮನಸ್ಸಿನ ನೆಮ್ಮದಿ ಕಳೆದುಕೊಂಡು ಹಲವು ತಾಪತ್ರಯಗಳನ್ನು ಎದುರಿಸಿ ಕೊನೆಗೆ ಮನೆಯ ದೇವರಿಗೆ ಪೂಜೆಯಿಲ್ಲದೇ ಹಾಗಾಯಿತು ಎಂದು ಜ್ಯೋತಿಷಿಗಳು ಹೇಳಿದರು ಎಂದು ನಂತರ ಮೊದಲಿನದಕ್ಕಿಂತ ಹೆಚ್ಚು ಹಣ ಕೊಟ್ಟು ಅದೇ ಆಸ್ತಿಯನ್ನು ಮತ್ತೆ ತೆಗೆದುಕೊಂಡರು ಎಂದು ಹೇಳುವುದನ್ನು ಕೇಳಿದ್ದೆ.

ಸೋಮವಾರ, ಏಪ್ರಿಲ್ 2, 2018

ದಿನೇಶ ಉಪ್ಪೂರ:

*ನನ್ನೊಳಗೆ- 89*

ನಾನು ನನ್ನ ಅಜ್ಜಯ್ಯನನ್ನು ಕಾಣಲಿಲ್ಲ. ಯಾರಾದರೂ ನನ್ನ ಅಜ್ಜಯ್ಯನ ಸುದ್ದಿಯನ್ನು ಹೇಳಿದರೆ ನನಗೆ ನೆನಪಾಗುವುದು ಅವರು ತಾಳ ಹೇಳಿಕೊಡುತ್ತಿದ್ದ ಕ್ರಮವನ್ನು ಮನೆಯಲ್ಲಿ ವರ್ಣಿಸುತ್ತಿದ್ದ ರೀತಿ. ಅವರು ಹೇಳಿಕೊಟ್ಟರು ಅಂದರೆ ತಾಳದ ಲಯ, ಗತಿ ಅಷ್ಟು ನಿಖರವಾಗಿರುತ್ತಿತ್ತು ಅಂತ ಲೆಕ್ಕ. ಹೇಳಿಕೊಟ್ಟ ತಾಳ ಸರಿಯಾಯಿತು ಅಂತ ಅನ್ನಿಸದೇ ಇದ್ದರೆ ಅವರು ಮುಂದಿನ ತಾಳವನ್ನು ಹೇಳಿಕೊಡುತ್ತಲೇ ಇರಲಿಲ್ಲ. ಒಮ್ಮೆ ಕಲಿಯುವವರಿಗೆ ಇದು ಜಿತ ಆಗುವುದಿಲ್ಲ ಅಂತ ಅವರಿಗೆ ಅನ್ನಿಸಿದರೆ ನೇರವಾಗಿ "ಇದು ನಿಂಗ್ ಆಪ್ದಲ್ಲಾ. ನೀನು ನಾಳೆಯಿಂದ ಬಪ್ದ್ ಬ್ಯಾಡ. ನೀನ್ ಗೊಬ್ರ ಹೊರುಕೇ ಸೈ" ಎಂದು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರಂತೆ.

 ವಂಡಾರು ಬಸವ, ಮೊಳ್ಳಳ್ಳಿ ಹೆರಿಯ, ಗಾವಳಿ ಬಾಬು, ಎಂ ಎ ನಾಯ್ಕ, ಚೋರಾಡಿ ವಿಠಲ, ರಾಘವೇಂದ್ರ ಮಯ್ಯ ಮೊದಲಾದವರು ನಮ್ಮ ಮನೆಯಲ್ಲೇ ಇದ್ದು ಮನೆಕೆಲಸ ಮಾಡಿಕೊಂಡು ಅಥವ ಪ್ರತೀ ದಿನ ಸಂಜೆ ನಮ್ಮ ಮನೆಗೆ ಬಂದು ತಾಳ, ಕುಣಿತ ಅಭ್ಯಾಸ ಮಾಡಿ ಮೇಳಕ್ಕೆ ಸೇರಿ ಜೀವನದ ದಾರಿಯನ್ನು ಕಂಡುಕೊಂಡವರು.

ಅಜ್ಜಯ್ಯ ಅಂದರೆ ಶ್ರೀನಿವಾಸ ಉಪ್ಪೂರರು, ಅವರಿಗೆ ಸಿಟ್ಟು ಮೂಗಿನ ಮೇಲೆ. ಒಮ್ಮೆ ಒಬ್ಬರು ತಾಳಾಭ್ಯಾಸ ಮಾಡಲು ಸಂಜೆ ಬಂದು, ರಾತ್ರಿ ಪಾಠ ಹೇಳಿಸಿಕೊಂಡು ಮನೆಗೆ ಹೋಗುತ್ತಿದ್ದರು. ಅವರಿಗೆ ಲಯವಿಲ್ಲದ್ದರಿಂದ ತಾಳ ಕಲಿಯುವುದು ಕಷ್ಟವಾಯಿತು. ಎಷ್ಟು ಹೇಳಿಕೊಟ್ಟರೂ ಅವನಿಗೆ ತಾಳ ತಪ್ಪಿ ಹೋಗುತ್ತಿತ್ತು. ಅಜ್ಜಯ್ಯ ಒಮ್ಮೆ ಜಗಲಿಯ ಮೇಲೆ ಚಿಮಣಿ ಬೆಳಕಿನಲ್ಲಿ ಅವನನ್ನು ಎದುರಿಗೆ ಚಟ್ಟಮುಟ್ಟ ಹಾಕಿ ಕೂರಿಸಿ, (ಸಿದ್ದಾಸನ ಹಾಕಿ)  ತಾವೂ ಹಾಗೆಯೇ ಕುಳಿತು ತಿ ತ್ತಿ ತೈ ಹೇಳಿ ಕೊಡಲಾರಂಭಿಸಿದರು. ಅಜ್ಜಯ್ಯ ಮೊದಮೊದಲು ಕೈಯಲ್ಲಿ ತಾಳ ಹೊಡೆಯುತ್ತಿದ್ದವರು, ಕೊನೆಗೆ ತಮ್ಮ ತೊಡೆಯಮೇಲೆ ಕೈಯಲ್ಲಿ ತಟ್ಟತೊಡಗಿದರು. ಹೇಳಿಹೇಳಿ ಸಾಕಾಗಿ ಅವನು ತಪ್ಪಿದ ಕೂಡಲೇ ಒಮ್ಮೆ ಜೋರಾಗಿ ಇವರ ತೊಡೆಯಿಂದ ಕೈ ಎತ್ತಿ ಅವನ ತೊಡೆಯ ಮೇಲೆ ಗಟ್ಟಿಯಾಗಿ ತೈ ಎಂದು ಕೈಯಲ್ಲಿ ಬಡಿದ ಹೊಡೆತಕ್ಕೆ ಅವನಿಗೆ ತೊಡೆಯಲ್ಲಿ ಇವರ ಕೈಯೇ ಮೂಡುವಷ್ಟು ಬರೆ ಎದ್ದು, ನೋವಿನಲ್ಲಿ ಕಣ್ಣು ಕತ್ತಲೆ ಬರುವಂತಾಯಿತು. ಆ ರಾತ್ರಿ ಹೋದವನು ಇವರ ತಾಳವೂ ಬೇಡ ಪೆಟ್ಟೂ ಬೇಡ ಎಂದು ಮರುದಿವಸದಿಂದ ನಾಪತ್ತೆಯಾದನಂತೆ.

ಇನ್ನೊಮ್ಮೆ ಮತ್ತೊಬ್ಬ ಹಾಗೆ ಸಂಜೆ ಕಲಿಯಲು ಬಂದವನು "ದೀಂತ ತದ್ದಿನ್ನಾಂತ ತದ್ದಿನ್ನಾಂತ" ಅಂತ ಕಲಿಸಿಕೊಟ್ಟದ್ದನ್ನು ಮರುದಿನ ಅದನ್ನು ಸರಿಯಾಗಿ ಕಲಿತು ಬರಬೇಕು ಎಂದು ತಾಕೀತು ಮಾಡಿದಾಗ, ಪಾಪ, ರಾತ್ರಿ ಮನೆಗೆ ಹೋಗುವಾಗಲೂ ದಾರಿಯಲ್ಲಿಯೂ ತದ್ದಿನಾಂತ ತದ್ದಿನ್ನಾಂತ ಹೇಳುತ್ತಾ ತಾಳ ಬಡಿಯುತ್ತಾ ಹೋಗುವಾಗ, ಬೈಲಿನ ಗದ್ದೆಯ ಕಂಟದಲ್ಲಿ ಕಾಲು ಜಾರಿ ಕೆಸರಿಗೆ ಬಿದ್ದುಬಿಟ್ಟನಂತೆ. ಅಯ್ಯಬ್ಬ ಅಂತ ಹೇಳುತ್ತಾ ಕೈ ಊರಿದ. ತಾಳ ತಪ್ಪಿತ್ತು. ಉಚ್ಚಾರದ ಜೊತೆಗೆ ಅಯ್ಯಬ್ಬ ಎಂಬುದೂ ಸೇರಿಕೊಂಡಿತು. ಮರುದಿನ ಪಾಠ ಒಪ್ಪಿಸುವಾಗ ಅಯ್ಯಬ್ಬ ದೇಂತಾಂತ ಅಂತ ಆಗಿತ್ತಂತೆ. ಅಜ್ಜಯ್ಯನಿಗೆ ಸಿಟ್ಟು ಬಂದು "ಅಯ್ಯಬ್ಬ ಎಂತದ್ದು ನಿನ್ನ ಕರ್ಮವಾ" ಅಂತ ಮತ್ತಷ್ಟು ಬೈದರಂತೆ.

ಅವರು ಆಟಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಗುರುತಿನವರು ಸಿಕ್ಕಿದರೆ ಅಜ್ಜಯ್ಯ ಪ್ರಸಿದ್ದ ಭಾಗವತರಲ್ವಾ? ಅವರನ್ನು ಮಾತಾಡಿಸುವ ಆಸೆ. ಇವರಿಗೆ ಸ್ವಲ್ಪ ಗತ್ತು ಬಿಗುಮಾನ.  "ಅಯ್ಯ ಇವತ್ತು ಎಲ್ ಆಟವೇ?" ಅವನು ವಿನಯದಿಂದ ಕೇಳಿದರೆ, ಅಜ್ಜಯ್ಯ "ಮುಂಡಕೊಡ"ಲ್ಲಿ ಅಂದ್ರು. ಅವನು ಅಷ್ಟಕ್ಕೇ ಬಿಡದೇ "ಅಯ್ಯ ಎಂತಾ ಪರಸಂಗೊ?" ಎಂದಾಗ ಅಜ್ಜಯ್ಯ "ಕೀಚಕ ವಧೆ" ಅಂದರು. ಅವನು, "ಕೀಚಕ ಮಾಡಿದ್ ಯಾರ್ ಅಯ್ಯ" ಅಂದ. ಇವರನ್ನು ಮಾತಾಡಿಸುವ ಆಸೆಯಿಂದ ಇವರ ಹಿಂದೆಯೇ ನಿಧಾನವಾಗಿ ಗದ್ದೆಯ ಅಂಚಿನಲ್ಲಿ ಹಿಂಬಾಲಿಸಿದ. ಅಜ್ಜಯ್ಯ, "ಗಣಪತಿ ಪ್ರಭು" ಎಂದು ಗಂಭೀರವಾಗಿ ಉತ್ತರಿಸಿದರು. ಆದರೆ ಅವನ ಮಾತು ಮುಗಿಯುವುದಿಲ್ಲ. "ಮೊನ್ನಿ ಆಂಟ ಎಲ್ಲೇ?" ಅಂದ. ಇವರು "ಜನ್ನಾಡಿ" ಎಂದರು ಅಜ್ಜಯ್ಯನಿಗೆ ಇದೆಂತ ಕರೆಕರೆ ಎಂತ ಅನ್ನಿಸಲು ಶುರುವಾಗಿತ್ತು. ಅಷ್ಟಕ್ಕೆ ಅವನು, "ಎಂತ ಪರಸಂಗ್ವೊ?" ಎಂದ ಇವರು ಅಸಹನೆಯಿಂದ "ಇಂದ್ರಕೀಲಕ" ಎಂದರು. "ಇಂದ್ರ ಕೀಲಕ ಯಾರ್ ಮಾಡಿದ್ದೇ" ಅವನ ಮುಗ್ಧ ಪ್ರಶ್ನೆ.

 ಅಜ್ಜಯ್ಯನಿಗೆ ನಗು ತಡೆಯಲಾಗಲಿಲ್ಲ. "ನಿನ್ನಪ್ಪ ಬೋಳಿ ಮಗನೇ. ಹೋತ್ಯಾ ಇಲ್ಲ್ಯಾ?" ಎಂದು ಜೋರು ಮಾಡಿ ಅವನನ್ನು ಓಡಿಸಿದರಂತೆ. ಪಾಪ ಅವನಿಗೆ ಇಂದ್ರ ಕೀಲಕ ಒಂದು ಪಾತ್ರ ಅಲ್ಲ ಎಂದು ಕೂಡ ಗೊತ್ತಿರಲಿಲ್ಲ.

ಭಾನುವಾರ, ಏಪ್ರಿಲ್ 1, 2018

ದಿನೇಶ ಉಪ್ಪೂರ:

*ನನ್ನೊಳಗೆ-88*

ನಾನು ಕುಂಜಿಬೆಟ್ಟಿನ ಕೆಇಬಿ ವಸತಿಗೃಹದಲ್ಲಿ ಇದ್ದ ಸಮಯ. ಆಗ ಒಮ್ಮೆ ಸಡನ್ನಾಗಿ ಮುರಾ ಮಾರ್ಕೆಟ್ ಎಂಬ ಒಂದು ಅಂಗಡಿ ಇದ್ದಕ್ಕಿದ್ದಂತೆ ತೆರೆಯಿತು. ಅಲ್ಲಿ ಯಾವ ಸಾಮಾನು ಇದೆ, ಯಾವ ಸಾಮಾನು ಇಲ್ಲ ಎಂದು ಹೇಳಲಿಕ್ಕಿಲ್ಲ.  ಟಿವಿ, ಫ್ರಿಜ್ಜು, ಗ್ರೈಂಡರ್, ವಾಶಿಂಗ್ ಮಿಶನ್ ಡೈನಿಂಗ್ ಟೇಬಲ್, ಮಂಚ, ಕಪಾಟು ಎಲ್ಲವೂ ಇತ್ತು. ಒಂದುವೇಳೆ ಇಲ್ಲದಿದ್ದರೂ ನಿಮಗೆ ಬೇಕಾದುದನ್ನು ತರಿಸಿಕೊಡುತ್ತಿದ್ದರು.  ಎಲ್ಲ ಸಾಮಾನುಗಳಿಗೂ ಅರ್ಧ ದರ. ಆದರೆ ಒಂದು ಶರತ್ತು. ಅಂದರೆ ಹಣ ಮುಂಗಡ ಪಾವತಿ ಮಾಡಬೇಕು. ಹದಿನೈದು ದಿನದ ನಂತರ ನಿಮಗೆ ಬೇಕಾದ ಸಾಮಾನು ಹಸ್ತಾಂತರ.

 ಮೊದಮೊದಲು ಯಾರೂ ನಂಬಲಿಲ್ಲ. ಆದರೂ ಕೆಲವರು ಸಣ್ಣ ಸಣ್ಣ ಸಾಮಾನು ಅಂದರೆ ಇಸ್ತ್ರಿ ಪೆಟ್ಟಿಗೆ, ಕುಕ್ಕರು ಚಪ್ಪಲಿ ಕುರ್ಚಿ ಮೊದಲಾದುವನ್ನು ತೆಗೆದುಕೊಂಡರು. ಹೌದು! ಅರ್ಧ ಬೆಲೆಯಲ್ಲಿ ಅದು ಸಿಕ್ಕಿತ್ತು. ಅವರಿಗೆ ಖುಷಿಯೋ ಖುಷಿ. ಖುಷಿಯಾದ ಮೇಲೆ ತಮ್ಮ ಗೆಲುವನ್ನು, ಬುದ್ಧಿವಂತಿಕೆಯನ್ನು ಇತರರಲ್ಲಿ ಹಂಚಿಕೊಳ್ಳಲೇ ಬೇಕಲ್ಲ. ಇನ್ನೊಬ್ಬರಿಗೂ ಹೇಳಿದರು. ಸರಿ. ಅಲ್ಲಿ ರಶ್ ಶುರುವಾಯಿತು. ಕೊನೆಕೊನೆಗೆ ದೊಡ್ಡ ದೊಡ್ಡ ವಸ್ತುಗಳಿಗೂ ಅರ್ಧ ಬೆಲೆಕೊಟ್ಟು ಬುಕ್ ಮಾಡಿದ್ದಾಯಿತು. ನಮ್ಮದು ಬುದ್ಧಿವಂತರ ಊರು ಅಂತ ಮೊದಲೇ ತೀರ್ಮಾನವಾಗಿತ್ತಲ್ಲ.

 ಅವನಿಗೆ ಹೇಗೆ ಇದು ಪೂರೈಸುತ್ತದೆ? ಅಂತಲೂ ಚರ್ಚೆಯಾಯಿತು. ಅವನ ಹತ್ತಿರವಿದ್ದ ಕಳ್ಳಹಣವನ್ನು ಬೆಳ್ಳಗೆ ಮಾಡುತ್ತಾನೆ ಅಂದರು ಕೆಲವರು. ಅವನು ಮೋಸಮಾಡಿ ಓಡಿಹೋಗುವುದಂತೂ ಗ್ಯಾರಂಟಿ ಅಂದರು. ಅವನು ನಮ್ಮ ಊರಿನವರನ್ನೇ ಕೆಲಸಕ್ಕೆ ಇಟ್ಟು ಕೊಂಡಿದ್ದ. ಹಾಗೆ ಮಾಡಲು ಆಗುವುದಿಲ್ಲ ಅಂದರು ಮತ್ಯಾರೋ. ಏನೇ ಆಗಲಿ. ಹಾಗೆ ಓಡಿಹೋಗುವ ಮೊದಲೇ ಒಂದಷ್ಟು ಸಾಮಾನು ಹೊಡೆದುಕೊಳ್ಳುವ ಅಂತಲೂ ಕೆಲವರ ಲೆಕ್ಕಾಚಾರವಾಯಿತು.
 
ಅಂತೂ ಎಲ್ಲರು ಎಣಿಸಿದಂತೆ ಒಂದು ದಿನ ಬೆಳಿಗ್ಗೆ ಎಲ್ಲರನ್ನೂ ನಂಬಿಸಿ ಗರಿಷ್ಟ ಜನರ ಅರ್ಧ ಹಣವು ಬಂದ ಒಂದು ದಿನ, ಅಲ್ಲಿನ ಕೆಲಸದವರಿಗೂ ಹೇಳದೆ, ಹಣದೊಂದಿಗೆ ಅವನು ಜಾಗ ಖಾಲಿ ಮಾಡಿದ. ಬೆಳಿಗ್ಗೆ ವಾಕಿಂಗ್ ಹೋದವರು ನೋಡುವಾಗ ಆ ಅಂಗಡಿಯಲ್ಲಿ ಇದ್ದ ಬದ್ದ ಸಾಮಾನುಗಳನ್ನು ಯಾರ್ಯಾರೋ ತೆಗೆದುಕೊಂಡುಹೋಗುತ್ತಿದ್ದರು. ಅಕ್ಕಪಕ್ಕದ ಜನ ಸೇರಿ ಕೈಗೆ ಸಿಕ್ಕಿದನ್ನು ಲೂಟಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ಕೆಲವರು ತಮ್ಮ ಹಣ ಹೋಯಿತು ಎಂದು ಬೊಬ್ಬೆ ಹಾಕಿದರು. ಮತ್ತೆ ಕೆಲವರು ಅಲ್ಲಿ ಕೆಲಸಕ್ಕೆ ಇದ್ದ ಹುಡುಗರನ್ನು ಹುಡುಕಿ ಎಳೆದು ತಂದು ಹೊಡೆದರು. ಬೈದರು. ಬೊಬ್ಬೆ ಹೊಡೆದರು. ಪೋಲೀಸ್ ಕಂಪ್ಲೆಂಟ್ ನ್ನೂ ಕೊಟ್ಟಾಯಿತು. ಸ್ವಲ್ಪ ದಿನ ಯಾರ ಬಾಯಿಯಲ್ಲಿ ಕೇಳಿದರೂ ಅದೇ ಸುದ್ಧಿ. ಮತ್ತೆ ಎಲ್ಲವೂ ತಣ್ಣಗಾಯಿತು‌.

ಇದೇನು ಹೊಸದಲ್ಲ. ಈಗಲೂ ಎಷ್ಟೋ ಪೈನಾನ್ಸ್ ಕಂಪೆನಿಗಳು ಹೀಗೆ ಸಾರ್ವಜನಿಕರನ್ನು ನಂಬಿಸಿ ಅವರಿಂದ ಠೇವಣಿ ಅಂತ ಹೆಚ್ಚಿಗೆ ಬಡ್ಡಿಯ ಆಸೆ ತೋರಿಸಿ ಪಡೆದು ಒಂದು ದಿನ ಇದ್ದಕ್ಕಿದ್ದಂತೆ ಮಾಯವಾದ ಎಷ್ಟು ಉದಾಹರಣೆ ನಮ್ಮಲ್ಲಿಲ್ಲ. ಚೈನ್ ಸಿಸ್ಟಂ ನಲ್ಲಿ ಮೂರುಜನ ಹೊಸಬರನ್ನು ಮಾಡಿದರೆ ನಮ್ಮ ಹಣವಾಪಾಸ್ ಎನ್ನುವ ಸ್ಕೀಮ್ ಗಳು. ಶೇರು ಪೇಟೆಯೂ ಒಂದು ತರಹದಲ್ಲಿ ಹಾಗೆಯೇ ಅಲ್ಲವೇ.

ಹಿಂದೆ ನಮ್ಮ ರಾಜ್ಯದಲ್ಲಿ ತಾಂಡವವಾಡುತ್ತಿದ್ದ, ದೈನಂದಿನ ಲಾಟರಿಯಲ್ಲಿ ಹಣ ಹಾಕಿ ಕಳೆದುಕೊಂಡವರೆಷ್ಟು ಜನ ಇಲ್ಲ. ನಮ್ಮ ಆಫೀಸಿನಲ್ಲಿ ಇದ್ದ ಒಬ್ಬರಿಗೆ ಆಗ ತಲೆಯೇ ಕೆಟ್ಟುಹೋಗಿ, ಎಲ್ಲಿ ಎದುರಾದರೂ ಇವತ್ತು ಈ ನಂಬರ್ ಆ ನಂಬರ್ ಅಂತ, ಬರೀ ನಂಬರ್ ಗಳನ್ನೇ ಹೇಳುತ್ತಿದ್ದರು.

ಆದರೂ ಈ  ಜನ ಎಚ್ಚೆತ್ತುಕೊಳ್ಳುವುದಿಲ್ಲ. ಎಲ್ಲಿಯವರೆಗೆ ಟೋಪಿ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲಿಯವರೆಗೆ ಟೋಪಿ ಹಾಕುವವರಿರುತ್ತಾರೆ ಎಂಬ ಮಾತಿನಂತೆ ನಾಳೆ ಮತ್ತೆ ಅಂತಹ ಅಂಗಡಿ ಬಂದರೆ ಜನ ಮುಗಿಬೀಳುತ್ತಾರೆ. ಎಲ್ಲರಿಗೂ ಶ್ರಮವಿಲ್ಲದೇ ಲಾಭ ಬರಬೇಕೆಂಬ ಆಸೆ. ಇನ್ನೊಬ್ಬರಿಗೆ ಮೋಸವಾದರೂ ಅಡ್ಡಿಲ್ಲ ನಮಗೆ ಇದ್ದಕ್ಕಿದ್ದಂತೆ ಹಣ ಸಿಗಲಿ ಎಂಬ ಮನೋಭಾವ. ಮತ್ತೂ ಬೇಕು ಎಂಬ ದುರಾಶೆ. ಯಾಕೆ ಹೀಗೆ?.

ನಮ್ಮ ಹಿರಿಯರು ಹೀಗೆ ಇರಲಿಲ್ಲ. ಅವರಿಗೆ ಇನ್ನೊಬ್ಬರದ್ದು ಎಂದಿಗೂ ಬೇಡವಾಗಿತ್ತು. ನಮಗೆ ಸಿಕ್ಕುವುದು ಸಿಕ್ಕಿದರೆ ಸಾಕು.  ಆದರೆ ನಮ್ಮದು ನಮಗೆ ಸಿಕ್ಕದಿದ್ದರೆ ಪ್ರಾಣ ಹೋದರೂ ಬಿಡುವವರಲ್ಲ. ಇದ್ದುದರಲ್ಲಿಯೇ ತೃಪ್ತಿ. ಇನ್ನೊಬ್ಬರದು ಎಂದೂ ನಮ್ಮದಲ್ಲ ಎಂಬ ಭಾವ.
ಶಿವರಾಮ ಕಾರಂತರ ಯಾವುದೋ ಒಂದು ಕಾದಂಬರಿಯಲ್ಲಿ, ಮಗನು ಕೆಲಸಕ್ಕೆ ಹೋಗುವ ಧನಿಗಳ ಮನೆಯಿಂದ ರಾತ್ರಿ ಬರುವಾಗ ದಾರಿಯಲ್ಲಿ ಬಿದ್ದ ಒಂದು ತೆಂಗಿನಕಾಯಿಯನ್ನು, ಮನೆಗೆ ತಂದ ಎಂದು ಗೊತ್ತಾಗಿ ತಾಯಿ ಗಲಾಟೆ ಮಾಡುತ್ತಾಳೆ. ಕೊನೆಗೆ ಆ ಮಗ ಇನ್ನು ಹಾಗೆ ಮಾಡುವುದಿಲ್ಲ ಎಂದು ತಾಯಿಗೆ ಭಾಷೆಯನ್ನು ಕೊಟ್ಟದ್ದೂ ಅಲ್ಲದೇ, ಆ ತೆಂಗಿನಕಾಯಿಯನ್ನು ಧನಿಗೇ ಹಿಂತಿರುಗಿಸಿ ಕ್ಷಮೆ ಕೇಳುವವರೆಗೂ ಆ ತಾಯಿ ಬಿಡುವುದಿಲ್ಲ.

ಈಗ ಹಾಗಿನ ತಾಯಂದಿರು ಅಪರೂಪ. ಮತ್ತು ಓದಿದ ಮಕ್ಕಳು ತಾಯಿಯ ಮಾತನ್ನು ಕೇಳುವುದು ಕಡಿಮೆ. ಮತ್ತು ಎಲ್ಲರೂ ಹೋರಾಟವೇ ಇಲ್ಲದ ಬದುಕನ್ನು ಬಯಸುವವರು. ಧರ್ಮಕ್ಕೆ ಸಾಲ ಕೊಡಿ. ಕೊಟ್ಟ ಸಾಲದ ಬಡ್ಡಿ ಮನ್ನಾ ಮಾಡಿ. ಯೋಗ್ಯತೆ, ಅರ್ಹತೆ ಇಲ್ಲದಿದ್ದರೂ "ಭಾಗ್ಯ"ವನ್ನು ಪಡೆಯಿರಿ ಎಂಬ ಧೋರಣೆಯ, ಕಣ್ಣ ಮುಂದಿನ ಸರಕಾರದ ಎಲ್ಲ ಸ್ಕೀಮ್ ಗಳೂ ಅಂತದ್ದೇ ಆಗಿದೆಯಲ್ಲ.  ಜನರ ತೆರಿಗೆ ಹಣವನ್ನು ಅವರೂ ತಿನ್ನಬೇಕು, ಅವರ ಚೇಲಾಗಳಿಗೂ ಹಂಚಬೇಕು. ಅನ್ಯಾಯ ತಪ್ಪುಗಳನ್ನು ನೋಡಿದಾಗಲೂ ನಮಗ್ಯಾಕೆ? ನಮ್ಮ ತಲೆಗೆ ಬರುವಾಗ ನೋಡಿಕೊಂಡರೆ ಸಾಕು ಎಂಬಂತೆ ಬದುಕಬೇಕು.

 ಯಾಕೆ ಹೀಗಾಗಿದೆ?. ನಮ್ಮ ಮನಸ್ಸನ್ನೇ, ನಮ್ಮ ಸುತ್ತಲೇ ಸ್ವಚ್ಚ ಇಟ್ಟುಕೊಳ್ಳದ ನಾವು, ಊರಿನ ಸ್ವಚ್ಛತೆಯ ಬಗ್ಗೆ ಹೇಳಲು ಅರ್ಹತೆ ಪಡೆಯುತ್ತೇವೆಯೇ? "ಅವರು ಮಾಡಲಿಲ್ಲ" ಮತ್ತೆ ಅವರು ಇರುವುದು ಯಾತಕ್ಕೆ? ಎನ್ನುವುದು ತಪ್ಪಲ್ಲವೇ?. ಇಂತಹ ಮನೋಭಾವ ಮುಗಿಯುವುದು ಎಂದು?. ಮತ್ತೆ ಹಿಂದಿನ ಒಬ್ಬರನ್ನು ಇನ್ನೊಬ್ಬರು ನಂಬುವ, ವಿಶ್ವಾಸದಿಂದ ಕಾಣುವ ಕಾಲ ಬರುತ್ತದೆಯೇ?