ಶನಿವಾರ, ಸೆಪ್ಟೆಂಬರ್ 30, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 18

ಆಗ ಪ್ರಿನ್ಸಿಪಾಲರಾಗಿದ್ದ ಪಿ. ಶಂಕರ ನಾರಾಯಣ ಕಾರಂತರು, ತುಂಬಾ ಒಳ್ಳೆಯವರು. ದೇವರಂತಹ ಮನುಷ್ಯರು. ಶಿಸ್ತು ಸಂಯಮಕ್ಕೆ ಮತ್ತೊಂದು ಹೆಸರಿನಂತಿದ್ದರು. ಅವರು ನಮ್ಮ ಕಾಲೇಜಿನ ಎದುರು ಎತ್ತರದ ಜಾಗದಲ್ಲಿ ನಿಂತು, ಆಗಾಗ ಬೆಳಿಗ್ಗೆ ನಮ್ಮನ್ನೆಲ್ಲಾ ಎದುರು ನಿಲ್ಲಿಸಿ ಎಸ್ಸೆಮ್ಲಿ ಮಾಡುತ್ತಿದ್ದರು. ಆಗ ಅವರು ಮಾಡುವ ಭಾಷಣ ಕೇಳುವುದೇ ಒಂದು ಅನುಭವ. ಕೆಲವೊಮ್ಮೆ ಹುಡುಗರು, ಹುಡುಗಿಯರಿಗೆ ಪತ್ರ ಬರೆದು ಆ ಹುಡುಗಿಯರಿಂದ ಅವರಿಗೆ ದೂರು ಬಂದರೆ, ಅಥವ ಯಾರಾದರೂ ಜಗಳಮಾಡಿ ಹೊಡೆದಾಡಿಕೊಂಡರೆ, ಕೂಡಲೆ ಅವರು ವಿಶೇಷ ಎಸ್ಸೆಮ್ಲಿ ಕರೆಯುತ್ತಿದ್ದರು. ಆಗ ನಮ್ಮನ್ನೆಲ್ಲ ಸೇರಿಸಿ ಅವರು ಭಾಷಣ ಮಾಡುವುದಿತ್ತು. “ಮಕ್ಕಳೇ , ನೀವು ಶಾಲೆಗೆ ಬರುವುದು ವಿದ್ಯೆ ಕಲಿಯಲಿಕ್ಕೆ. ಮನೆಯವರು ನಿಮ್ಮನ್ನು ಅವರ ಸುಖವನ್ನು ತ್ಯಾಗ ಮಾಡಿ ಇಲ್ಲಿಗೆ ಕಳಿಸುತ್ತಾರೆ. ಆದರೆ ಕೆಲವರು ಇಲ್ಲಿ ಬಂದು, ಮಾಡುವುದೇ ಬೇರೆ. ಯಾರು ಯಾರಿಗೋ ಲವ್ ಲೆಟರ್ ಬರೆಯುವುದು, ಹೊಡೆದಾಡಿ ಕೈಕಾಲು ಮುರಿದುಕೊಳ್ಳುವುದು ಮಾಡುತ್ತಾರೆ. ಇದೆಲ್ಲ ನನ್ನ ಹತ್ತಿರ ನಡೆಯುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ ಎಂದು ನನಗೆ ಗೊತ್ತಾಗುತ್ತದೆ. ಅವರಾಗಿಯೇ ನನ್ನ ಹತ್ತಿರ ಬಂದು ಮಾಡಿದ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು. ಆದರೆ ಇಲ್ಲಿ ಅವರ ಹೆಸರನ್ನು ಹೇಳಿ ಅವರ ಮರ್ಯಾದೆ ಕಳೆಯಲು ನನಗೆ ಮನಸ್ಸು ಇಲ್ಲ. ಆದರೆ ಅವರು ಇಲ್ಲಿಯೇ ಇದ್ದಾರೆ. ನಮ್ಮ ಮಧ್ಯವೇ ಅಂತಹಾ ಕೆಟ್ಟ ಹುಡುಗರೂ ಇದ್ದಾರೆ”. (ಒಮ್ಮೆ ಎಲ್ಲರನ್ನೂ ನೋಡುತ್ತಾರೆ. ಒಂದು ಸ್ವಲ್ಪ ಹೊತ್ತು ಎಲ್ಲ ಮೌನ ಆಮೇಲೆ). “ಅವರು ಅವರಾಗಿಯೇ ಅವರನ್ನು  ತಿದ್ದಿಕೊಂಡರೆ ಆಯಿತು. ಇಲ್ಲದಿದ್ದರೆ ನನಗೆ ಏನು ಮಾಡಬೇಕೆಂದು ಗೊತ್ತು. ಮಾಡಿಯೇ ಮಾಡುತ್ತೇನೆ” ಹೀಗೆ ಅವರ ಮಾತಿನ ದಾಟಿ ಸಾಗುತ್ತಿತ್ತು. ಆದರೆ ಯಾರನ್ನೂ ಕೆಟ್ಟ ಮಾತುಗಳಿಂದಾಗಲೀ, ಮನಸ್ಸಿಗೆ ನೋವು ಉಂಟು ಮಾಡುವ ಮಾತನ್ನಾಗಲೀ ಆಡುತ್ತಿರಲಿಲ್ಲ.

ನಾನು ಆ ವರ್ಷ ಹಿಂದಿಯ ಕ್ಲಾಸ್ ಇದ್ದಾಗ, ಅದಕ್ಕೆ ಹೋಗದೆ ಹೊರಗೇ ಕಾಲೇಜಿನ ಹಿಂದಿನ ಗಾಳಿಮರದ ಬುಡದಲ್ಲೋ, ಹತ್ತಿರದ ಕಿಣಿಯವರ ಹೋಟೆಲಿನಲ್ಲೋ ಕಾಲ ಕಳೆಯುತ್ತಾ ಇರುತ್ತಿದ್ದೆ. ಹಾಗೆಯೆ ಸ್ವಲ್ಪ ಕಾಲ ಕಳೆದಿರಬಹುದು. ಏನು ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಒಂದು ವರ್ಷ ಹಾಳಾಗುತ್ತದೆಯಲ್ಲ ಎಂಬ ಆತಂಕ. ಏನಾದರೂ ಮಾಡಲೇ ಬೇಕು ಎಂದು ನಿರ್ಧಾರ ಮಾಡಿ ಕೊನೆಗೆ, ಆಗ ಪ್ರಿನ್ಸಿಪಾಲರಾದ ಕಾರಂತರಲ್ಲಿಗೇ ಹೋಗಿ “ಸರ್, ನಾನು ಹೀಗೆ ಹೀಗೆ ಮಾಡಿದೆ” ಎಂದು ಎಲ್ಲವನ್ನೂ ತಿಳಿಸಿ, “ಏನಾದರೂ ದಾರಿ ತೋರಿಸಿ” ಎಂದು ಬೇಡಿಕೊಂಡೆ. ಅವರು ಮೊದಲು “ನಿಮಗೆಲ್ಲ ತಾವೇ ದೊಡ್ದ ಸಂಗತಿಯವರು ಎಂದು ಕೋಡು ಬಂದಿದೆ. ಹೋಗಿ ಹೋಗಿ ಪಾಠ ಹೇಳುವ ಗುರುಗಳನ್ನೇ ಎದುರು ಹಾಕಿಕೊಂಡಿದ್ದಿಯಲ್ಲ” ಎಂದು ಚೆನ್ನಾಗಿ ಬೈದರು, ಆಮೇಲೆ “ನಾನು ಹಿಂದಿ ಲೆಕ್ಚರರ್ ಹತ್ರ ಮಾತಾಡುತ್ತೇನೆ. ನೀನು ನಾಳೆಯಿಂದ ಕ್ಲಾಸಿಗೆ ಹೋಗು” ಎಂದರು. ನಾನು ಮೆಲ್ಲನೇ “ಹಿಂದಿ ಕ್ಲಾಸ್ ಬೇಡ ಸರ್. ನಾನು ಕನ್ನಡ ಕ್ಲಾಸಿಗೆ ಹೋಗುತ್ತೇನೆ. ಅನುಮತಿ ಕೊಡಿ.” ಅಂದೆ. ಅವರು ಕಣ್ಣು ಕೆಂಪು ಮಾಡಿ “ಈಗ ಮಧ್ಯದಲ್ಲಿ ಲ್ಯಾಂಗ್ವೇಜನ್ನು ಬದಲಾಯಿಸಲು ಆಗುವುದಿಲ್ಲ. ನೀನು ಹೋಗಬಹುದು” ಎಂದರು. ನಾನು ತಲೆ ತಗ್ಗಿಸಿ ಅಲ್ಲಿಯೇ ನಿಂತೆ. ಅಮೇಲೆ ಏನು ಅನ್ನಿಸಿತೋ “ನೀನು ನಾಳೆ ಬಾ. ವಿಚಾರಿಸಿ ಹೇಳುತ್ತೇನೆ” ಅಂದರು. ನನಗೆ ಅಷ್ಟು ಸಾಕಾಯಿತು. ಮರುದಿನ ತಪ್ಪದೇ ಅವರ ಕಛೇರಿಗೆ ಹೋದಾಗ “ಈ ವರ್ಷ ನೀನೆ ಯಾರ ಹತ್ತಿರವಾದರೂ ಪಾಠ ಹೇಳಿಸಿಕೊಂಡು ಕನ್ನಡ ಓದಿಕೊಂಡು ಪರೀಕ್ಷೆಗೆ ಕುಳಿತು ಪಾಸು ಮಾಡಿಕೊಂಡರೆ, ಮುಂದಿನ ವರ್ಷ ಕನ್ನಡ ಕ್ಲಾಸಿಗೆ ಸೇರಿಸಿಕೊಳ್ಳಬಹುದು” ಅಂದರು.  ನನಗೆ ಗೆದ್ದೆ ಅನ್ನಿಸಿತು. ನನಗೆ ಅದೇ ಬೇಕಾಗಿತ್ತು. ಮೊದಲ ಪಿಯುಸಿಯ ಕನ್ನಡ ಪುಸ್ತಕವನ್ನು ಖರೀದಿಸಿ, ನಾನೇ ಓದಿಕೊಂಡು ಪರೀಕ್ಷೆಗೆ ಹಾಜರಾದೆ. ನಿರೀಕ್ಷಿಸಿದಂತೆ ಪಾಸೂ ಆದೆ. ಎರಡನೇ ಪಿಯುಸಿಯಲ್ಲಿ ನನಗೆ ಕನ್ನಡ ಕ್ಲಾಸಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದರು. ಆದರೆ ಆ ಹಿಂದಿ ಲೆಕ್ಚರರ್ ಮಹೇಂದ್ರಕುಮಾರ್ ಎದುರು ಕಂಡರೆ ನಾನು  ಆ ದಾರಿ ಬಿಟ್ಟು ಅವರು ಎದುರು ಬರುವುದನ್ನು ತಪ್ಪಿಸಿಕೊಂಡು ತಿರುಗುತ್ತಿದ್ದೆ. ಕೊನೆಯ ತನಕವೂ ನಾನು ಅವರೊಂದಿಗೆ ಮಾತೇ ಆಡಲಿಲ್ಲ. ಎರಡನೇ ಪಿಯುಸಿಯಲ್ಲೂ ಕನ್ನಡದಲ್ಲಿ ನನಗೆ ಒಳ್ಳೆಯ ಮಾರ್ಕೇ ಬಂದಿತ್ತು.

ಕಾಲೇಜಿನಲ್ಲಿ ಪ್ರತೀ ವರ್ಷ ಕಾಲೇಜ್ ಡೆ ಅಂತ ಮಾಡುತ್ತಿರಲಿಲ್ಲ ಒಂದು ವರ್ಷ ವಾರ್ಷಿಕೋತ್ಸವ ಮಾಡಿದರೆ ಮತ್ತೊಂದು ವರ್ಷ ಪ್ರವಾಸ  ಮಾಡುತ್ತಿದ್ದರು. ಹಾಗಾಗಿ ನಾನು ಎಂಟನೇ ಕ್ಲಾಸಿನಲ್ಲಿ ಹತ್ತನೇ ಕ್ಲಾಸಿನಲ್ಲಿ ಮತ್ತು ಎರಡನೇ ಪಿಯುಸಿಯಲ್ಲಿ ನಡೆದ ವಾರ್ಷಿಕೋತ್ಸವದ ಯಕ್ಷಗಾನದಲ್ಲಿ ಮುಖ್ಯ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. ಆಗ ಭೋಜ ಶೆಟ್ರು ಎನ್ನುವ ಕಾಮರ್ಸ್ ಲೆಕ್ಚರರ್ ಇದ್ದರು. ಅವರೇ ಯಕ್ಷಗಾನದ ಜವಾಬ್ದಾರಿ ಹೊತ್ತು ಆಸಕ್ತಿಯಿಂದ ಕಾರ್ಯಕ್ರಮ ಮಾಡಿಸುತ್ತಿದ್ದರು. ನನಗೆ ಸ್ವಲ್ಪ ಯಕ್ಷಗಾನ ಕುಣಿತ ಗೊತ್ತಿರುವುದರಿಂದ ನಾನೇ ಉಳಿದವರಿಗೆ ಕುಣಿತವನ್ನು ಹೇಳಿಕೊಟ್ಟು ತಿದ್ದುತ್ತಿದ್ದೆ.  ಹಾಗಾಗಿ ನನಗೆ ಅಲ್ಲಿ ಸ್ವಲ್ಪ ಹೆಚ್ಚು ಮರ್ಯಾದೆ ಇತ್ತು. ಆರ್ಗೋಡು ಗೋವಿಂದರಾಯ ಶೆಣೈಯವರ ಭಾಗವತಿಕೆ, ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆಯ ಜೊತೆ ಇತ್ತು. ಮದನಸುಂದರಿ ಪರಿಣಯ ಅಥವ ಚಿತ್ರಕೇತ ವಿಜಯ ಎನ್ನುವ ಪ್ರಸಂಗದಲ್ಲಿ ಮದನಸುಂದರಿಯ ಪಾತ್ರ, ಹಾಗೂ ಶ್ವೇತಕುಮಾರ ಚರಿತ್ರೆಯಲ್ಲಿ ಶ್ವೇತಕುಮಾರ, ನಂತರ ಕರ್ಣಾರ್ಜುನ ಕಾಳಗದಲ್ಲಿ ಕರ್ಣನ ಪಾತ್ರವನ್ನೂ ಮಾಡಿದ್ದೆ.

 ಗೋವಿಂದ ರಾಯ ಶೆಣೈಯವರಿಗೆ ೨೦೧೬ ರಲ್ಲಿ ಉಡುಪಿಯಲ್ಲಿ ಒಂದು ಸನ್ಮಾನ ಮಾಡಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿ, ಆಗಲೇ ತುಂಬಾ ವೃದ್ದರಾಗಿದ್ದ ಅವರನ್ನು ಮಾತಾಡಿಸಿಕೊಂಡು ಬಂದೆ. ಆಗ ಅವರು “ಕಾಲೇಜಿನಲ್ಲಿ  ನೀನು ಕರ್ಣ ಮಾಡಿದ್ದೀಯಲ್ಲ. ನಾನೇ ಪದ ಹೇಳಿದ್ದಲ್ಲವಾ?” ಎಂದು ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪನ್ನು ಮಾಡಿಕೊಂಡರು. ನನಗೆ ಖುಷಿಯಾಯ್ತು. "ಅದನ್ನೂ ನೆನಪಿಟ್ಟಿದ್ದೀರಲ್ಲ" ಎಂದು ಅವರ ಕಾಲಿಗೆ ಬಿದ್ದು ನಮಸ್ಕರಿಸಿದೆ.

(ಮುಂದುವರಿಯುವುದು)

ಶುಕ್ರವಾರ, ಸೆಪ್ಟೆಂಬರ್ 29, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 17

ಇನ್ನೊಬ್ಬ ಶುಭಕರ ಶೆಟ್ಟಿ (ಹೆಸರು ಬೇರೆ) ಅಂತ ಇದ್ದ. ಅವನು ಮಾತು ಮಾತಿಗೆ “ನಾನು ದೇವರನ್ನು ನಂಬುವುದಿಲ್ಲ” ಅನ್ನುತ್ತಿದ್ದ. ನಾನು “ಹೌದೌದು ಎಲ್ಲರೂ ಹೇಳುವುದು ಹಾಗೆಯೇ. ಆದರೆ ಪ್ರಸಂಗ ಬಂದರೆ “ಓ ದೇವ್ರೇ ನೀನೇ ಕಾಪಾಡು ಅಂತಾರೆ” ಅನ್ನುತ್ತಿದ್ದೆ. ಅವನು “ನಾನು ಹಾಗೆ ಹೇಳುವವನೇ ಅಲ್ಲ ನನಗೆ ದೇವರ ಹೆದರಿಕೆಯೇ ಇಲ್ಲ” ಎನ್ನುವನು. ಅವನು ಪದೇಪದೇ ಹಾಗೆ ಹೇಳುವಾಗ ನನಗೆ ಒಮ್ಮೆ ಸಿಟ್ಟೇ ಬಂದು ಬಿಟ್ಟಿತು. ಒಂದು ಸಲ “ಹಾಗಾದರೆ ಪರೀಕ್ಷೆ ಮಾಡುವನ?” ಎಂದೆ. ಅವನು ಒಪ್ಪಿದ. ಅವನನ್ನು ಬಾ ಎಂದು  ಎಳೆದುಕೊಂಡೇ ಕಾಲೇಜಿನಿಂದ ಹಿಂದಿನ ಹಾಡಿಯಲ್ಲಿರುವ ಒಂದು ಮರದ ಬುಡದಲ್ಲಿರುವ ನಾಗಬನಕ್ಕೆ ಕರೆದುಕೊಂಡು ಹೋದೆ, ಅಲ್ಲಿ ಒಂದು ನಾಗನ ಕಲ್ಲನ್ನು ತೋರಿಸಿ “ಹಾಗಾದರೆ ಇದನ್ನು ಮುಟ್ಟು ನೋಡುವ” ಅಂದೆ. ಅವನು ಹೆದರಲೇ ಇಲ್ಲ!. “ಏನಾಗುತ್ತದೆ?” ಎಂದು ಸೀದಾ ಹೋಗಿ ಆ ನಾಗನ ಕಲ್ಲನ್ನು ಮುಟ್ಟಿದ್ದೇ ಅಲ್ಲದೇ ಅದನ್ನು ಸವರುತ್ತಾ ಕುಳಿತ! ನನಗೆ ಆಶ್ಚರ್ಯ, ಜೊತೆಗೆ ಹೆದರಿಕೆ. ಅವನು ಅಷ್ಟು ಧೈರ್ಯ ಮಾಡುತ್ತಾನೆ ಎಂದು ನಾನು ಎಣಿಸಿರಲಿಲ್ಲ. ಅವನಿಗೆ ಏನಾದರೂ ಆದರೆ!, ನಾಗರ ಹಾವು ಎದ್ದು ಬಂದು ಕಚ್ಚಿದರೆ! ಅಂತ. ಇಲ್ಲ. ಹಾಗೆ ಏನೂ ಆಗಲಿಲ್ಲ. ನನಗೆ ಒಳಗೊಳಗೆ ಭಯ. ಯಾಕೆಂದರೆ ನಾನು ದೇವರನ್ನು ನಂಬುವವನು. ಮಡಿಮೈಲಿಗೆಯ ಬಗ್ಗೆ ತಿಳಿದವನು. ಅವನೊಂದಿಗೆ ಸುಮ್ಮನೇ ಮರಳಿ ಕಾಲೇಜಿಗೆ ಬಂದೆ. ತಕ್ಷಣ ನನಗೆ ಒಂದು ಕತೆ ನೆನಪಾಯಿತು.

ನಮ್ಮ ಹಾಲಾಡಿ ಹಬ್ಬ ಒಂದು ಕಾಲದಲ್ಲಿ ತುಂಬಾ ವಿಜೃಂಭಣೆಯಿಂದ ನಡೆಯುತ್ತಿತ್ತಂತೆ. ಒಮ್ಮೆ ಹಬ್ಬದ ದಿನ ಅಲ್ಲಿಯ ತೇರನ್ನು ಎಳೆಯುವಾಗ ಯಾರೋ ಮೈಲಿಗೆಯವರು ಮಿಳಿಯನ್ನು ಮುಟ್ಟಿ ಎಳೆದರು. ಅದು ದೇವರಿಗೆ ಗೊತ್ತಾಯಿತು. ಆಗ ರಥ ಒಮ್ಮೆಲೆ ಗಡಗಡ ನಡುಗಿ ಬರಬರನೇ ತನ್ನಷ್ಟಕ್ಕೇ ನಡೆದು ರಭಸದಿಂದ ಅಲ್ಲಿಯೇ ಹತ್ತಿರವಿದ್ದ ವಾರಾಹಿ ನದಿಯ ಬ್ರಹ್ಮ ಗುಂಡಿಗೆ ಪರಿವಾರದೊಂದಿಗೆ ಹೋಗಿ ಬಿತ್ತಂತೆ. ಗುಂಡಿಯ ಒಳಗೆ ಹುಡುಕಿಸಿದರೂ ಸಿಗಲಿಲ್ಲ. ಈಜು ತಜ್ಞರಿಂದ ಮುಳುಗು ಹಾಕಿಸಿ ಎಷ್ಟು ಹುಡುಕಿಸಿದರೂ ಪ್ರಯೋಜನವಾಗಲಿಲ್ಲ. ಎಷ್ಟು ಹರಕೆ ಹೊತ್ತರೂ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದ ಹಾಗಾಯಿತು. ತೇರು ಸಿಗಲೇ ಇಲ್ಲವಂತೆ. ಅದರ ಅವಶೇಷವೂ ಸಿಗಲಿಲ್ಲ. ಆದರೆ  ಮರು ವರ್ಷದಿಂದ ಹಿಡಿದು ಈಗಲೂ ಹಾಲಾಡಿ ಹಬ್ಬದ ದಿನ ಮಧ್ಯಾಹ್ನ ಆ ಬ್ರಹ್ಮ ಗುಂಡಿಯ ಬಳಿಯ ನೀರಿಗೆ ಕಿವಿ ಆನಿಸಿ ಕೇಳಿದರೆ ಶಂಖ ಜಾಗಟೆ ಬಾರಿಸುವುದೂ ಗಟ್ಟಿಯಾಗಿ ಮಂತ್ರ ಹೇಳುವುದೂ ಕೇಳುತ್ತದೆಯಂತೆ. ಅಲ್ಲಿ ಈಗಲೂ ಹಬ್ಬ ಆಚರಣೆಯಾಗುತ್ತಿದೆ ಎಂದು ಪ್ರತೀತಿ. ಇರಲಿ

ನಾನು ಓದುತ್ತಿರುವಾಗ ಶಂಕರನಾರಾಯಣ ಕಾರಂತರು ಎಂಬವರು ನಮ್ಮ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಗೋಪಾಲ ಶೆಟ್ಟಿಗಾರ್ ಎನ್ನುವವರು ಕ್ರಾಫ್ಟ್ ಟೀಚರ್ ಆಗಿದ್ದರೆ, ಬಾಲಕೃಷ್ಣ ಶೆಟ್ಟಿ ಎನ್ನುವವರು ಪಿಟಿ ಟೀಚರ್ ಮತ್ತು ಕೆ.ವಿ.ಐತಾಳ್, ಸುಬ್ರಾಯ ಹಂದೆ, ಸುಬ್ರಮಣ್ಯ ಜೋಷಿ, ಸೀತಾರಾಮ ಮಧ್ಯಸ್ಥ, ಭೋಜರಾಜ ಶೆಟ್ಟಿ, ವಾದಿರಾಜ ಭಟ್, ಜಿ ರಾಮರಾಯಾಚಾರ್ಯ, ದೇವೇಗೌಡ, ಗುಣಗರು, ಮಹೇಂದ್ರಕುಮಾರ್, ಜನಾರ್ದನ ಎಸ್. ಮೊದಲಾದವರು ಪ್ರಾಧ್ಯಾಪಕರಾಗಿದ್ದರು. ಇನ್ನು, ಜೊತೆಯಲ್ಲಿ ಓದಿದವರು ನಲವತ್ತು ಐವತ್ತು ಮಂದಿ ಇದ್ದು ಅವರ ಹೆಸರನ್ನು ಹೇಳಲು ಹೋಗುವುದಿಲ್ಲ. ಅಕಸ್ಮಾತ್ ಬಿಟ್ಟುಹೋದರೆ ಬಿಟ್ಟುಹೋದವರು ಏಯ್ ನನ್ನನ್ನು ಮರೆತೇ ಬಿಟ್ಟಿಯಾ ಅಂದರೆ ಕಷ್ಟ. ಹಾಗಾಗಬಾರದು. ಇರಲಿ.

ನಾನು ಎಸ್. ಎಸ್. ಎಲ್. ಸಿ. ಮುಗಿಸಿ, ಅದೇ ಕಾಲೇಜಿನಲ್ಲಿ ಪಿಯುಸಿಗೆ ಸೇರಿ ಪಿ.ಸಿ.ಎಂ.ಬಿ. ತೆಗೆದುಕೊಂಡೆ. ನನಗೆ ಮುಂದೆ ಇಂತದ್ದೇ ಆಗಬೇಕು ಎಂಬ ಗುರಿ ಇರಲಿಲ್ಲವೆಂದು ಕಾಣುತ್ತದೆ. ನಾನು ಚಿತ್ರವನ್ನು ಚೆನ್ನಾಗಿ ಬಿಡಿಸುತ್ತಿದ್ದೆ ಎಂದು ಯಾರೋ ಹೇಳಿದರು ಎಂದು ಬಯಾಲಜಿ ತೆಗೆದುಕೊಂಡೆ ಎಂದು ನೆನಪು. ಅದರ ಜೊತೆಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಅಥವ ಹಿಂದಿ ಭಾಷೆಯ ಎರಡು ಸಬ್ಜಕ್ಟ್ ತೆಗೆದುಕೊಳ್ಳಬೇಕಾಗಿತ್ತು. ಹಿಂದಿ ಸುಲಭ, ಕನ್ನಡದಲ್ಲಿ ಮಾರ್ಕು ಪಡೆಯುವುದು ಕಷ್ಟ ಎಂದು ನನಗೆ ಸ್ನೇಹಿತರು ಹೇಳಿದರು ಎಂದು ಹಿಂದಿಯನ್ನು ಆರಿಸಿಕೊಂಡೆ. ಆದರೆ ಮೊದಲೇ ಹೇಳಿದಂತೆ ನಾನು ಹಿಂದಿಯನ್ನು ಎಸ್. ಎಸ್ .ಎಲ್. ಸಿ. ಯಲ್ಲಿ ಹದಿಮೂರು ಮಾರ್ಕು ಬರಲು ಎಷ್ಟು ಬೇಕೋ ಅಷ್ಟು ಮಾತ್ರ ಓದಿಕೊಂಡವನು.

ಆಗ ಮಹೇಂದ್ರಕುಮಾರ್ ಎಂಬವರು ಉತ್ತರ ಕರ್ನಾಟಕದ ಕಡೆಯ ಒಬ್ಬ ಲೆಕ್ಚರರು ಹಿಂದಿಯ ಪಾಠ ಕಲಿಸಲು ಇದ್ದರು. ಅವರು ಪಾಠವನ್ನು ಓದುತ್ತಾ ಹೋಗಿ ಒಂದು ಪಿರಿಯೆಡ್ನಲ್ಲಿ ಮೂರು ನಾಲ್ಕು ಪಾಠವನ್ನು ಒಮ್ಮೆಲೇ ಮಾಡಿಬಿಟ್ಟು, “ಏನಾದರೂ ಡೌಟ್ ಇದ್ದರೆ ಕೇಳಿ” ಎಂದು ಪಾಠಮುಗಿಸಿ ಸುಮ್ಮನಾಗುತ್ತಿದ್ದರು. ಅರ್ಥವಾಗದೇ ಇದ್ದರೂ ಯಾರೂ ಪ್ರತಿ ಮಾತನ್ನಾಡದೇ ಸುಮ್ಮನಿದ್ದು, ಕೊನೆಗೆ ಬಾಯಿಪಾಠ ಹೊಡೆದರೆ ಸೈ ಎಂದು ನಿರ್ಧರಿಸಿ ಸುಮ್ಮನಾಗುತ್ತಿದ್ದರು. ಮರುದಿನ ನಾವು ಅದನ್ನೇ ಓದಬೇಕಿತ್ತು. ನನಗಂತೂ ಹಿಂದಿ ಕಷ್ಟವಾದ್ದರಿಂದ  ಅರ್ಥವೇ ಆಗುತ್ತಿರಲಿಲ್ಲ. ಒಮ್ಮೆ ಸಿಟ್ಟು ಬಂದು ಅವರು “ಏನಾದರೂ ಡೌಟ್ ಉಂಟಾ?” ಅಂದಕೂಡಲೇ. ಎದ್ದು ನಿಂತು “ಎಲ್ಲಾ ಡೌಟೇ ಸರ್ ನನಗೆ. ಏನೂ ಅರ್ಥ ಆಗಲಿಲ್ಲ. ನೀವು ಹೀಗೆ ಹರಕೆ ತೀರಿಸಿದರೆ ನಮಗೆ ಹೇಗೆ ಅರ್ಥವಾಗಬೇಕು? ನೀವು ಪಾಠ ಮಾಡುವುದು ನೋಡಿದರೆ ನಿಮಗೆ ನಮಗೆ ಅರ್ಥವಾಗಬೇಕು ಎಂದು ಇಲ್ಲವೆಂದು ಕಾಣುತ್ತದೆ. ಹೀಗೆ ಬರಿದೇ ಓದುತ್ತಾ ಹೋಗುವ ಕೆಲಸ ನಾವೇ ಮಾಡಬಹುದಲ್ಲ ಸರ್” ಎಂದುಬಿಟ್ಟೆ. ಅವರು ಅದನ್ನು ನಿರೀಕ್ಷಿಸಿರಲಿಲ್ಲ. ತುಂಬಾ ಕೋಪದಿಂದ “ಮತ್ತೆ ಹೇಗೆ ಪಾಠ ಮಾಡಬೇಕು? ನಿನ್ನಿಂದ ನಾನು ಅದನ್ನು ಕಲಿತುಕೊಳ್ಳಬೇಕೇ? ನೀನು ನನಗೆ ಪಾಠಮಾಡಲು ಹೇಳಿಕೊಡುವುದೇ?” ಎಂದು ಹಾರಾಡಿದರು. “ನಾನು ನಿಮ್ಮನ್ನೆಲ್ಲಾ ಸಾಕಿ ಉದ್ಧಾರ ಮಾಡುತ್ತೇನೆ ಎಂದು ಹಣೆಯಮೇಲೆ ಬರೆದುಕೊಂಡು ತಿರುಗಬೇಕೇ?” ಎಂದೂ, ಕೊನೆಯಲ್ಲಿ “ನನಗೇನು? ಹೇಗೆ ಪಾಠ ಮಾಡಿದರೂ ಸಂಬಳ ಬರುತ್ತದೆ. ನಿಮ್ಮ ಹಂಗೇನು?” ಎನ್ನುವ ತನಕವೂ ಮಾತಾಡಿದರು. ಇಡೀ ಕ್ಲಾಸ್ ಮೌನವಾಗಿತ್ತು. ನಾನು ಮತ್ತೆ ಮಾತಾಡಲಿಲ್ಲ. ನನ್ನ ಪಕ್ಕದಲ್ಲಿ ಕುಳಿತವರು “ನೀನು ಹಾಗೆ ಹೇಳಬಾರದಿತ್ತು, ಸುಮ್ಮನಿರು ಕುಳಿತುಕೋ” ಎಂದು ಹೇಳಿದರು. ಆದರೆ ನಾನು ಹೆದರಲಿಲ್ಲ. ಕುಳಿತುಕೊಳ್ಳಲೂ ಇಲ್ಲ. ಕೊನೆಗೆ ಅವರು “ನೋಡು ಉಪ್ಪೂರ್, ನೀನು ಇಷ್ಟು ಹೇಳಿದ ಮೇಲೆ ನಾನು ನಿನಗೊಂದು ಚಾನ್ಸ್ ಕೊಡುತ್ತೇನೆ. ನಿನಗೆ ನನ್ನ ಪಾಠ ಇಷ್ಟ ಆಗದೇ ಇದ್ದರೆ, ಈಗಲೇ ನೀನು ಹೊರಗೆ ಹೋಗಬಹುದು ಮತ್ತು ನಾಳೆಯಿಂದ ಬಾರದೆಯೂ ಇರಬಹುದು. ನಾನು ಯಾರಿಗೂ ಕಂಪ್ಲೆಂಟ್ ಕೊಡುವುದಿಲ್ಲ. ನಿನ್ನಂತವರು ಇಲ್ಲದಿದ್ದರೂ ನನಗೆ ನಷ್ಟವಿಲ್ಲ” ಅಂದರು. ನನಗೆ ಬೇಸರವಾಗಲಿಲ್ಲ. ಧೈರ್ಯ ಎಲ್ಲಿತ್ತೋ, ನನ್ನ ಪುಸ್ತಕವನ್ನು ತೆಗೆದುಕೊಂಡು ಸೀದಾ ಹೊರಗೆ ಬಂದುಬಿಟ್ಟೆ.

(ಮುಂದುವರಿಯುವುದು)
ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 16

ನಾನು ಶಂಕರನಾರಾಯಣದ ಹೈಸ್ಕೂಲ್ ಗೆ ಹೋಗುವಾಗ ನಮ್ಮ ಮನೆ ಚೇರ್ಕಿಯಿಂದ ಹಾಲಾಡಿಗೆ ಮೂರು ಮೈಲಿ, ಅಲ್ಲಿಂದ ಶಂಕರನಾರಾಯಣದ ಹೈಸ್ಕೂಲ್ ಗೆ ಐದು. ಒಟ್ಟು ಎಂಟು ಮೈಲಿ ನಡೆದು ಹೋಗಬೇಕಾಗಿತ್ತು. ನನಗೆ ಕಾಲು ನೋವು ಇದ್ದುದರಿಂದ ಕಷ್ಟವಾಗುತ್ತದೆ ಎಂದು ಅಪ್ಪಯ್ಯ ಶಂಕರನಾರಾಯಣದಲ್ಲಿ ಪುಟ್ಟಮ್ಮ ಬಾಯರಿ ಎಂಬವರ ಮನೆಯಲ್ಲಿ ಮಾತಾಡಿ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ನಾನು ಅಲ್ಲಿ ಉಳಿದದ್ದು ಕೇವಲ ಆರು ತಿಂಗಳು ಮಾತ್ರ. ಅಲ್ಲಿ ಸರಿಯಾಗುವುದಿಲ್ಲ ಎಂದು ಚೇರಿಕೆಯ ಮನೆಯಿಂದಲೇ ಹೈಸ್ಕೂಲಿಗೆ ಹೋಗಿ ಬರಲು ಶುರುಮಾಡಿದೆ.

ನಂತರ ಕೃಷ್ಣಮೂರ್ತಿ ಅಣ್ಣಯ್ಯನು ಅವನ ಹತ್ತಿರವಿದ್ದ ಒಂದು ಸೈಕಲ್ ನ್ನು ನನಗೆ ಉಪಯೋಗವಾಗುತ್ತದೆ ಎಂದು ತಿಳಿದು, ಬೆಂಗಳೂರಿನಿಂದ ಬಸ್ಸಿನಲ್ಲಿ ಹಾಕಿ ಕಳಿಸಿದ. ಹಾಗಾಗಿ ನಾನು ಸೈಕಲ್ ಕಲಿಯುವುದಾಯಿತು. ಹಾಲಾಡಿಯಿಂದ ನಮ್ಮ ಮನೆಯವರೆಗೆ ಗದ್ದೆಯ ಅಂಚಿನಲ್ಲಿ ಸೈಕಲ್ ನ್ನು ಒದ್ದಾಡಿ ದೂಡಿಕೊಂಡು ತಂದು, ಮನೆಯ ಹತ್ತಿರದ ನೆರೆಮನೆಯವರ ವಿಶಾಲ ಜಡ್ಡಿನಲ್ಲಿ ಸೈಕಲ್ಲನ್ನು ಹಲವಾರು ಸಾರಿ ಬೀಳಿಸಿ, ಏಳಿಸಿ ಸೈಕಲ್ ಬ್ಯಾಲೆನ್ಸನ್ನು  ಕಲಿತದ್ದಾಯಿತು. ಆಗಲೇ ಒಮ್ಮೆ ಶಂಕರನಾರಾಯಣಕ್ಕೆ ಅದರಲ್ಲೇ ಹತ್ತಿಕೊಂಡು ಹೋಗಿ, ಬಸ್ ನಿಲ್ದಾಣದ ಹತ್ತಿರದ ದೊಡ್ಡ ತಿರುವಿನಲ್ಲಿ ಬ್ರೇಕ್ ಹಾಕಲು ಗೊತ್ತಾಗದೇ, ಗೋಪು ಶೇಟ್ ಎಂಬವರ ಮನೆಯ ಗೋಡೆಗೆ ಗುದ್ದಿದ್ದೂ ಅಯಿತು. ಪುಣ್ಯಕ್ಕೆ ಸೈಕಲ್ಲಿಗೂ, ನನಗೂ ಹೆಚ್ಚು ಪೆಟ್ಟಾಗಲಿಲ್ಲ.

ಆದರೆ ದಿನಾ ಸೈಕಲನ್ನು ಹಾಲಾಡಿಯಿಂದ ಮನೆಗೆ ತರುವುದು ಸಾಧ್ಯವಿರಲಿಲ್ಲ. ಹಾಗಾಗಿ ಹಾಲಾಡಿ ಕೃಷ್ಣರಾಜ ಗೋಳಿಯವರನ್ನು ಬೇಡಿ, ಅವರ ಅಂಗಡಿಯ ಬದಿಯ ಉಪ್ಪಿನ ಚೀಲ ಹೇರಿ ಇಟ್ಟಿರುವ ಗೋಡೌನಿನ ಒಂದು ಮೂಲೆಯಲ್ಲಿ ಅದನ್ನು ಇಟ್ಟು, ಮನೆಗೆ ನಡದೇ ಬರಲು ಶುರುಮಾಡಿದೆ. ಆಮೇಲೆ ದಿನಾ ಮನೆಯಿಂದ ಹಾಲಾಡಿಯವರೆಗೆ ನಡೆದು, ನಂತರ ಹಾಲಾಡಿಯಲ್ಲಿ ಗೋಳಿಯರ ಅಂಗಡಿಯ ಬದಿಯ ಗೋಡೌನಿನಲ್ಲಿ ಇಡುತ್ತಿದ್ದ ಸೈಕಲ್ ನ್ನು ಏರಿ ಶಂಕರನಾರಾಯಣ ಹೈಸ್ಕೂಲಿಗೆ ಹೋಗುತ್ತಿದ್ದೆ. ಪುನಹ ಅಲ್ಲಿಯೇ ಸೈಕಲ್ ಇರಿಸಿ ಮನೆಗೆ ನಡೆದು ಬರುತ್ತಿದ್ದೆ. ಬರುವಾಗ ಕೆಲವೊಮ್ಮೆ ಗೋಳಿಯವರ ಅಂಗಡಿಯ ಪಕ್ಕದಲ್ಲಿಯೇ ಇರುವ ಕರಣಿಕರ ಹೋಟೇಲಿನಲ್ಲಿ ನೆಲಗಡಲೆ ಬಜೆಯನ್ನು (ಆಗ ನಾಲ್ಕಾಣೆ ಎಂದು ನೆನಪು) ಪಡೆದು, ಒಂದೊಂದೇ ಬೀಜವನ್ನು ತಿನ್ನುತ್ತಾ ಮನೆಗೆ ಬರುತ್ತಿದ್ದೆ.

ನಮ್ಮ ಹಾಲಾಡಿ ಶಾಲೆಯಲ್ಲಿ ಹಿಂದಿ ಮೇಸ್ಟ್ರು ಇಲ್ಲದೇ ಇರುವುದರಿಂದ ನಮಗೆ ಐದನೇ ಕ್ಲಾಸಿಗೆ ಹಿಂದಿ ಸಬ್ಜಕ್ಟೇ ಇರಲಿಲ್ಲ. ಅದು ಐಚ್ಛಿಕ ಎಂದು. ಆದ್ದರಿಂದ ಏಳನೆ ಕ್ಲಾಸಿನಲ್ಲಿ ಪಬ್ಲಿಕ್ ಪರೀಕ್ಷೆ ಇದ್ದರೂ ನಮಗೆ ಹಿಂದಿ ಇಲ್ಲದೇ ತೊಂದರೆಯಾಗಲಿಲ್ಲ. ಆದರೆ ಶಂಕರನಾರಾಯಣದ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸಲ್ಲಿ ಸಂಸ್ಕೃತವೂ ಒಂದು ಸಬ್ಜಕ್ಟ್ ಇದ್ದು, ನಾವು ಹಿಂದಿ ಕಲಿಯಲೇ ಬೇಕಾಯಿತು. ಮತ್ತು ಎಸ್. ಎಸ್. ಎಲ್. ಸಿ. ಯಲ್ಲಿ ಒಟ್ಟು ಹದಿಮೂರು ಮಾರ್ಕನ್ನಾದರೂ ಆ ವಿಷಯದಲ್ಲಿ ಪಡೆದು ಪಾಸಾಗಬೇಕಿತ್ತು. ಅದ್ದರಿಂದ ನಾವು ಎಷ್ಟು ಬೇಕೋ ಅಷ್ಟನ್ನೇ ಕಲಿತು ಹಿಂದಿಯನ್ನು ಕಡೆಗಣಿಸಿದ್ದೆವು.

 ಕನ್ನಡ ನನ್ನ ಆಸಕ್ತಿಯ ಸಬ್ಜಕ್ಟು. ಆಗ ಕನ್ನಡಕ್ಕೆ ಮಹಾಬಲೇಶ್ವರ ಸೋಮಯಾಜಿಗಳು ಎನ್ನುವ ಅಧ್ಯಾಪಕರೊಬ್ಬರಿದ್ದರು. ಅವರು ಪಾಠವೇನೋ ಚೆನ್ನಾಗಿ ಮಾಡುತ್ತಿದ್ದರೂ ಪ್ರತೀ ದಿನವೂ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬಾರದೇ ತಡವಾಗಿಯೇ ಬರುತ್ತಿದ್ದುದರಿಂದ ಪ್ರಿನ್ಸಿಪಾಲರಿಂದ ಬೈಸಿಕೊಳ್ಳುತ್ತಿದ್ದರು. ಮನೆಯಲ್ಲಿ ಪೂಜೆ ಗದ್ದೆ ಕೆಲಸ, ಪುರೋಹಿತಿಕೆ ಅದೂ ಇದೂ ಅಂತ ಎಲ್ಲವನ್ನೂ ಮೈಮೇಲೆ ಹಾಕಿಕೊಂಡು ಮಾಡುತ್ತಿದ್ದರು. ಬಾಯಿಯಲ್ಲಿ ಯಾವಾಗಲೂ ಎಲೆಯಡಿಕೆ ಇರುತ್ತಿತ್ತು.  ವೇಸ್ಟಿಯನ್ನು ಚಂದವಾಗಿ ಉಟ್ಟು ತೋಳಿಲ್ಲದ ಅಂಗಿಯನ್ನು ಧರಿಸಿ ಬರುತ್ತಿದ್ದರು.

ನಾನು ಎಸ್.ಎಸ್. ಎಲ್. ಸಿಯಲ್ಲಿ ಇರುವಾಗ ನನಗೆ ಉಪನಯನವಾಯಿತು. ಸಂಧ್ಯಾವಂದನೆಯ ಮಂತ್ರಗಳನ್ನೆಲ್ಲಾ ದಾಮೋದರ ಅಣ್ಣಯ್ಯನಿಂದ ಕೇಳಿ ಕೇಳಿ ಕನ್ನಡ ನೋಡ್ಸಿನ ಕೊನೆಯಲ್ಲಿ ಬರೆದಿಟ್ಟುಕೊಂಡಿದ್ದೆ. ಒಮ್ಮೆ ನನ್ನ ನೋಡ್ಸನ್ನು ಪರಿಶೀಲಿಸುತ್ತಿರುವಾಗ ಅದನ್ನು ಸೋಮಯಾಜಿಯವರು ನೋಡಿಬಿಟ್ಟರು. ಆಗ ಏನೂ ಹೇಳಲಿಲ್ಲ. ನನ್ನ ನೋಡ್ಸನ್ನು ಹಿಡಿದುಕೊಂಡು ಹೋಗಿಯೇಬಿಟ್ಟರು. ಆಮೇಲೆ ಬಂದು ತೆಗೆದುಕೊಂಡು ಹೋಗು ಎಂದು ಕಣ್ಣುಸನ್ನೆಯಲ್ಲೇ ಹೇಳಿದ್ದಾಯಿತು. ನನಗೆ ಏನಾಯಿತೆಂದು ಗೊತ್ತಾಗಲಿಲ್ಲ. ಆದರೂ ಹೆದರಿಕೊಂಡು ಅವರ ಸ್ಟಾಪ್ ರೂಮಿಗೆ ಹೋದಾಗ, ನನ್ನನ್ನು ಅವರ ಮುಂದೆ ಕುರ್ಚಿಯಲ್ಲಿ ಕೂರಿಸಿಕೊಂಡು, “ಇದೆಂತದಾ? ಹೀಂಗೆ ಸಂಧ್ಯಾವಂದನೆ ಮಾಡೂದಾ ನೀನು? ಹೀಗೆ ತಪ್ಪು ತಪ್ಪು ಮಂತ್ರ ಹೇಳಿ ಸಂಧ್ಯಾವಂದನೆ ಮಾಡಿದರೆ ನರಕಕ್ಕೆ ಹೋಗುತ್ತಿ? ಯಾರು ಹೇಳಿಕೊಟ್ಟದ್ದು ಇದು?”. ಎಂದು ಬರೆಸಿದವರಿಗೂ ಒಂದು ಸಹಸ್ರನಾಮ ಹಾಕಿದರು. ನನಗೂ ನಿಮಗೆ ಬೇರೆಕೆಲಸ ಇಲ್ಲ ಸುಮ್ಮನೇ ಬ್ರಾಹ್ಮಣರಾಗಿ ಹುಟ್ಟಿಕೊಂಡಿರಿ. ಒಂದು ನೇಮ ನಿಷ್ಠೆ ಬೇಡವೇ? ಎಂದು ಚೆನ್ನಾಗಿ ಬೈದು, ಅದರಲ್ಲಿರುವ ತಪ್ಪುಗಳನ್ನೆಲ್ಲ ಒಂದೊಂದಾಗಿ ನನ್ನ ಮುಂದೆಯೇ ನನ್ನಿಂದಲೇ ತಿದ್ದಿ ಬರೆಸಿ, ಸರಿಪಡಿಸಿ, ಉಚ್ಚಾರವನ್ನೂ ಹೇಳಿಕೊಟ್ಟು ಕಳುಹಿಸಿಕೊಟ್ಟರು.

ನಾನು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿಗೆ ಹೋಗುವಾಗ ಪ್ರಕಾಶ (ಹೆಸರು ಬೇರೆ ಇರಬಹುದು)ಅಂತ ಒಬ್ಬ ಹುಡುಗ ಇದ್ದ. ಅವನ ಅಜ್ಜ ದೊಡ್ಡ ಪುರೋಹಿತರು. ಪ್ರಕಾಶನೂ ಓದುವುದರಲ್ಲಿ, ಇನ್ನೊಂದರಲ್ಲಿ ಬಹಳ ಹುಷಾರು. ಒಮ್ಮೆ ನಾನು ಅಕ್ಟೋಬರ್ ರಜೆಗೆ ಕೋಟದ ಅಕ್ಕನ ಮನೆಯಲ್ಲಿ ಬಂದು ಇದ್ದಿದ್ದೆ. ಪ್ರಕಾಶನ ಅಜ್ಜನ ಮನೆಯೂ ಕೋಟ. ನಾನು ಅಕ್ಕನ ಮನೆಗೆ ಹೋಗುವ ವಿಚಾರ ಅವನಿಗೆ ತಿಳಿಸಿದ್ದೆ.
ಅವನು ಅದುಹೇಗೋ ಅವರಿವರನ್ನು ವಿಚಾರಿಸಿಕೊಂಡು, ನನ್ನ ಅಕ್ಕನ ಮನೆಗೆ ನನ್ನನ್ನು ಹುಡುಕಿಕೊಂಡು ಬಂದ. ಅನಿರೀಕ್ಷಿತವಾಗಿ ಅವನನ್ನು ಕಂಡು ಆಶ್ಚರ್ಯವಾಗಿ “ಏನಪ್ಪಾ? ನೀನು ಇಲ್ಲಿ” ಅಂದೆ. ಅದಕ್ಕೆ ಅವನು “ಮಾರಾಯಾ, ಒಂದು ಗಂಡಾಂತರ ಆಯ್ತಲ್ಲ. ಇವತ್ತು ಅಜ್ಜನ ಮನೆಯ ನವರಾತ್ರಿ ಊಟಕ್ಕೆ ಅಂತ ಬಂದೆ. ಬಂದು ನೋಡ್ತೇನೆ. ಜನಿವಾರವೇ ಇಲ್ಲ. ಎಲ್ಲೋ ಬಿದ್ದು ಹೋಯ್ತು. ಹಾಗಂತ ಜನಿವಾರ ಇಲ್ಲದೇ ಹೋದರೆ ಮರ್ಯಾದೆ ಹೋಗುತ್ತದೆ.” ಎಂದ. ಕೊನೆಗೆ ಗಂಭೀರವಾಗಿ “ಈ ಊರಿನಲ್ಲಿ ಜನಿವಾರ ಎಲ್ಲಿ ಸಿಕ್ಕುತ್ತದೆ ಅಂತ ಕೂಡ ನನಗೆ ಗೊತ್ತಿಲ್ಲ. ಈಗ ನೀನು ಒಂದು ಉಪಕಾರ ಮಾಡು. ನಿನ್ನ ಜನಿವಾರ ಇವತ್ತು ಒಂದು ದಿನದ ಮಟ್ಟಿಗೆ ನನಗೆ ಕೊಡು. ಸಂಜೆಯೇ ವಾಪಾಸು ಮುಟ್ಟಿಸುತ್ತೇನೆ” ಎಂದ. ದೋಸ್ತಿಯಲ್ಲವೇ? ನನಗೆ ಉಪಕಾರ ಮಾಡದೇ ಬೇರೆ ದಾರಿ ಇರಲಿಲ್ಲ. ಅವನು ಕೊಡದೇ ಬಿಡುವವನೂ ಅಲ್ಲ. ಅಂತೂ ತೆಗೆದು ಕೊಟ್ಟೆ. ಅವನು “ಮಾರಾಯ, ಇದನ್ನು ಯಾರ ಹತ್ರವೂ ಹೇಳಬೇಡ, ಮನೆಯಲ್ಲಿ ಗೊತ್ತಾದ್ರೆ ಕೊಂದೇ ಹಾಕತ್ರು”. ಅಂದ. ನಾನು “ಆಯಿತು” ಎಂದು ನಗಾಡಿದೆ. ಅವನು ಸಂಜೆ ಪುನಹ ಊರಿಗೆ ಹೋಗುವಾಗ ಅದನ್ನು ಕೊಟ್ಟೂ ಹೋದ. ಅವನು ಆಗ ಓದುವುದರಲ್ಲೂ ಎಷ್ಟು ಬುದ್ದಿವಂತ ಇದ್ದಿದ್ದ ಅಂದರೆ ಪಿಯುಸಿಯಲ್ಲಿ ತೊಂಬತ್ತೊ ತೊಂಬತೈದೋ ಪರ್ಸೆಂಟ್ ಮಾರ್ಕ್ ಬಂದಿದ್ದರೂ ಕಡಿಮೆಯಾಯಿತು ಅಂತ ಅದನ್ನು ರಿಜೆಕ್ಟ್ ಮಾಡಿ ಮರುವರ್ಷ ಪುನಹ ಪರೀಕ್ಷೆಗೆ ಕುಳಿತಿದ್ದ. ಆದರೆ ಗ್ರಹಚಾರಕ್ಕೆ ಎರಡನೇ ಸಲ ಮೊದಲನೆಯ ಸಲಕ್ಕಿಂತ ಸ್ವಲ್ಪ ಕಡಿಮೆಯೇ ಮಾರ್ಕ್ ಬಂತು.

ಆದರೆ ಅವನು ಮುಂದೆ ಓದಿದ ಹಾಗೆ ಕಾಣುವುದಿಲ್ಲ. ಅವನ ಊರಿನಲ್ಲಿಯೇ, ಪೇಟೆಯ ಬದಿಯಲ್ಲಿ ಒಂದು ಭವಿಷ್ಯ ಹೇಳುವ ಆಫೀಸು ತೆರೆದು, ದೊಡ್ಡ ಜೋತಿಷ್ಯಗಾರನಾಗಿ ಪ್ರಸಿದ್ಧನಾದ ಅಂತ ಕೇಳಿದೆ. ಒಮ್ಮೆ ಅವನ ನೆನಪಾಗಿ ನೋಡಿಬರುವ ಎಂದು ಅವನ ಊರಿಗೆ ಅವನನ್ನು ಹುಡುಕಿಕೊಂಡು ಹೋಗಿದ್ದೆ. ಪಾಪ ಅದೇನೋ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಈಗ ಜೋತಿಷ್ಯ ಹೇಳುವುದನ್ನು ಬಿಟ್ಟು, ಮನೆಯಲ್ಲೇ ಇದ್ದಾನೆ ಅಂತ ತಿಳಿಯಿತು. ಮನೆಯ ದಾರಿ ಸರಿಯಾಗಿ ತಿಳಿಯದೇ ವಾಪಾಸು ಬಂದೆ.

(ಮುಂದುವರಿಯುವುದು)

ಬುಧವಾರ, ಸೆಪ್ಟೆಂಬರ್ 27, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 15

 ಗುಂಡ್ಮಿ ದಿ. ಕಾಳಿಂಗ ನಾವಡರು, ಗುಂಡ್ಮಿ ಸದಾನಂದ ಐತಾಳರು, ಕೆ. ಜಿ. ರಾಮರಾಯರು, ಸುಬ್ರಹ್ಮಣ್ಯ ದಾರೇಶ್ವರ, ಕೆ.ಪಿ. ಹೆಗಡೆ, ಆರ್. ಪಿ, ಹೆಗಡೆ, ನಾರಾಯಣ ಶಬರಾಯ, ಬೈಲೂರು ಸುಬ್ರಮಣ್ಯ ಐತಾಳರು, ವಿಶ್ವೇಶ್ವರ ಸೋಮಯಾಜಿಗಳು, ಕೊಳಗಿ ಕೇಶವ ಹೆಗಡೆ, ವಿಷ್ಣು ಹೆಗಡೆ, ಹಾಲಾಡಿ ರಾಘವೇಂದ್ರ ಮಯ್ಯ ಮೊದಲಾಗಿ, ಇಂದು ಭಾಗವತರಾಗಿ ಮೆರೆಯುತ್ತಿರುವ ಹೆಚ್ಚಿನವರೆಲ್ಲ ಹಂಗಾರಕಟ್ಟೆಯ ಭಾಗವತಿಕೆ ಕೇಂದ್ರದ ಕೊಡುಗೆಯ, ಅಪ್ಪಯ್ಯನ ಶಿಷ್ಯರೆ.

ಅದೇ ಸಮಯದಲ್ಲಿ ನನ್ನ ಅಕ್ಕನ ಮಗ ವೆಂಕಟೇಶ, ಗಿಳಿಯಾರು ಶಾಲೆಯಲ್ಲಿ ಓದುತ್ತಿದ್ದ. ಹೆಚ್. ಶ್ರೀಧರ ಹಂದೆಯವರು ಮತ್ತು ಕಾರ್ಕಡ ಶ್ರೀ ನಿವಾಸ ಉಡುಪರು ಗಿಳಿಯಾರು ಶಾಲೆಯ ವಾರ್ಷಿಕೋತ್ಸವಕ್ಕೆ ಒಂದು ಯಕ್ಷಗಾನ ಮಾಡುವ ಯೋಚನೆ ಮಾಡಿ, ಮಕ್ಕಳಿಗೆ ಕುಣಿತ ಹೇಳಿಕೊಟ್ಟು ಟ್ರಯಲ್ ಮಾಡಿಸುತ್ತಿದ್ದರು. ನಾನೂ ಅವನ ಜೊತೆಗೆ ಟ್ರಯಲ್ ಗೂ ಹೋಗುತ್ತಿದ್ದೆ. ಹಾಗಾಗಿ ನನ್ನನ್ನೂ ಕರೆದು ನೀನೂ ಒಂದ್ ವೇಷ ಮಾಡ್ತೀಯಾ? ಎಂದು ವೇಷ ಮಾಡಲು ಅವಕಾಶ ಮಾಡಿಕೊಟ್ಟರು.ನಾನು ಒಪ್ಪಿ ಮಾಡಿದೆ. ರತ್ನಾವತಿ ಕಲ್ಯಾಣ ಪ್ರಸಂಗ. ವೆಂಕಟೇಶನ ಭದ್ರಸೇನ, ಮೋಹನದಾಸ ಶ್ಯಾನುಭೋಗನ ಹಾಸ್ಯ, ಅವನ ಅಣ್ಣ ಗಣೇಶ ಶ್ಯಾನುಭೋಗನ ವತ್ಯಾಖ್ಯ. ಗಿರೀಶ ಹಂದೆಯ ರತ್ನಾವತಿ ಮಂಜುನಾಥ ಐತಾಳನ ಚಿತ್ರಕೇತ, ಅವನ ಅಣ್ಣ ದಿನೇಶ ಹಂದೆಯ ದೃಢವರ್ಮ. ನನ್ನದು ಕಿರಾತ, ವಿಂದ್ಯಕೇತ. ನಾನೂ ಅಲ್ಪಸ್ವಲ್ಪ ಕುಣಿತ ಕಲಿತಿದ್ದರೂ ಶ್ರೀಧರ ಹಂದೆಯವರು ಕುಣಿತದ ಅಂಗ ಆಕಾರವನ್ನು ಚಂದ ಮಾಡಿದರು. ಮಾತು, ಗತ್ತು ಗಾಂಭೀರ್ಯ ಕಲಿಸಿದರು.

ಅದೇ ಕಾಲದಲ್ಲಿ ಕಾರ್ಕಡ ಶ್ರೀನಿವಾಸ ಉಡುಪರು ಮತ್ತು ಹೆಚ್. ಶ್ರೀಧರ ಹಂದೆಯವರೂ ಸೇರಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಪ್ರಾರಂಭಿಸಿದರು. ನಾನೂ ಮಕ್ಕಳ ಮೇಳದಲ್ಲಿ ಎರಡು ಮೂರು ವರ್ಷ ವೇಷ ಮಾಡಿದ್ದೆ. ವೃಷಸೇನದಲ್ಲಿ ಭೀಮ, ದ್ರುಪದ ಗರ್ವಭಂಗದಲ್ಲಿ ದ್ರೋಣ, ಕೃಷ್ಣಾರ್ಜುನದಲ್ಲಿ ಬಲರಾಮ ಇತ್ಯಾದಿ ವೇಷವನ್ನೂ ಮಾಡಿ ಬೆಂಗಳೂರು, ಧಾರವಾಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಅಂತ ಹಲವಾರು ಕಡೆಗಳಲ್ಲಿ ಪ್ರದರ್ಶನವನ್ನೂ ಕೊಟ್ಟಿದ್ದೆವು. ಮೇಲೆ ತಿಳಿಸಿದವರಲ್ಲದೇ ಆಗ ಮಕ್ಕಳ ಮೇಳದಲ್ಲಿ ಸತೀಶ ಕಲ್ಕೂರ, ಸತೀಶ ಕಾಮತ್, ಸತೀಶ ತುಂಗ, ಮಹೇಶ ಉಡುಪ, ರಾಮದೇವ ಉರಾಳ, ಮಹಮ್ಮದ್ ರಫಿ, ಗುರುಪ್ರಸಾದ ಐತಾಳ, ನಂತರ ಮಹೇಶ ಅಡಿಗ ಸುರೇಶ ಅಡಿಗ ಮೊದಲಾದವರು ಇದ್ದರು. ಭಾಗವತರಾಗಿ ಸ್ವತಹ ಶ್ರೀಧರ ಹಂದೆಯವರೇ ಇದ್ದರೆ, ಮದ್ದಲೆಗಾರರಾಗಿ ಬಿರ್ತಿ ಬಾಲಕೃಷ್ಣ ಮತ್ತು ಚಂಡೆವಾದಕರಾಗಿ ಮಣೂರು ಮಾಧವ ಇದ್ದರು. ಎಲ್ಲವೂ ಶಿಸ್ತು ಎಲ್ಲರೂ ಶಿಸ್ತು. ದೂರದ ಊರಿಗೆ ಆಟಕ್ಕೆ ಹೋದರೆ ವಿಪರೀತ ತಿನ್ನಲು, ತಿರುಗಲೂ ನಿರ್ಭಂದ. ಆರೋಗ್ಯ ಕೆಡುತ್ತದೆ ಎಂದು. ಕಾಯಿಲೆಯಾದರೆ ಅಷ್ಟು ಮುತುವರ್ಜಿಯಿಂದ ಶುಶ್ರೂಷೆ. ವೇಷ ಮಾಡಿಕೊಂಡು ರಂಗಸ್ಥಳದಲ್ಲಿ ಕುಣಿದು ದಣಿದು ಚೌಕಿಗೆ ಬಂದರೆ ಗಾಳಿಹಾಕಲು ಗ್ಲೂಕೋಸ್ ಪುಡಿ ನೀರಿಗೆ ಹಾಕಿ ಕುಡಿಸಲು ಉಡುಪರು ಸಿದ್ಧವಾಗಿ ನಿಲ್ಲುತ್ತಿದ್ದರು. ಜೊತೆಗೆ " ಹ್ವಾ , ಬೆಸ್ಟ್ ಆಯ್ತ". ಅಂತ ಕೈ ತೋರುಬೆರಳು ಮುದ್ರೆ ಮಾಡಿ, ಬೆನ್ನು ತಟ್ಟಿ ಹುರಿದುಂಬಿಸುವುದು ಬೇರೆ.

ಬ್ರಹ್ಮಾವರ ಸುಬ್ಬಣ್ಣ ಭಟ್ಟರ ವೇಷಭೂಷಣದ ಜೊತೆಗೆ, ನಮಗೆ ಮುಖ ಬರೆದು ವೇಷ ಕಟ್ಟಿ ಬಿಡಲು, ಹಾರಾಡಿ ರಾಮಗಾಣಿಗರ ಮಗ ಸಂಜೀವಣ್ಣ, ಮೀಸೆ ಬಾಲಣ್ಣ, ಮರಿಯಾಚಾರ್, ಕೃಷ್ಣಸ್ವಾಮಿ ಜೋಯಿಸ್ ಮೊದಲಾದವರೂ ಇದ್ದರು.

ಆಗ ರಜೆಯಲ್ಲಿ ಪ್ರತೀದಿನ ಸಂಜೆ ಹೆಚ್. ಶ್ರೀಧರ ಹಂದೆಯವರ ಮನೆಯ ಎದುರಿನ ಅಂಗಳದಲ್ಲಿ ಅಥವ ಹಿಂದಿನ ಹಾಡಿಯ ಮಾವಿನ ಮರದ ಬುಡದಲ್ಲಿ ಟ್ರಯಲ್ ಮಾಡಿಸುತ್ತಿದ್ದರು. “ಮಕ್ಕಳೇ ಇದು ರಂಗಸ್ಥಳ” ಎಂದು ಕೈ ತೋರಿಸಿ ಸುತ್ತ ಒಂದು ಕಾಲ್ಪನಿಕ ರೇಖೆಯನ್ನು ಎಳೆದು, ಅದರ ಒಳಗೆ ನಮಗೆ ಕುಣಿತ ಅರ್ಥ ಹೇಳಿಕೊಡುತ್ತಿದ್ದರು. ಜೊತೆಗೆ ಶ್ರೀನಿವಾಸ ಉಡುಪರೂ ಇರುತ್ತಿದ್ದರು. ಅದೊಂದು ನನ್ನ ಜೀವನದಲ್ಲಿ ಮರೆಯಲಾರದ ಅನುಭವ. ಆ ಶಿಸ್ತು, ಹೀಗೆಯೇ ಆಗಬೇಕು ಎನ್ನುವ ಖಚಿತತೆ, ಕಲೆಯ ಬಗೆಗಿನ ಕಾಳಜಿ, ಹಾರಾಡಿ ರಾಮ ಹೀಗೆ ಕುಣಿಯುತ್ತಿದ್ದರು, ಹಾರಾಡಿ ಕುಷ್ಟ ಹೀಗೆ ಮುಖ ತಿರುಗಿಸಿ ಕೇದಗೆಮುಂದಲೆ ಜಗ್ಗನೇ ಮಿಂಚುವಂತೆ ಮಾಡುತ್ತಿದ್ದರು, ಕೊಕ್ಕರ್ಣೆ ನರಸಿಂಹ ಹೀಗೆ ಪಾತ್ರದ ಒಳಗೆ ತನ್ಮಯರಾಗಿ ಮಾತನಾಡುತ್ತಿದ್ದರು ಎಂದು ಮಧ್ಯ ಮಧ್ಯ ವಿವರಣೆ. ಕಲೆಯ ಬಗೆಗಿನ ಆ ಸ್ನೇಹಿತ ದ್ವಯರ ಕಾಳಜಿ ಗೌರವ, ತೊಡಗಿಸಿಕೊಳ್ಳುವಿಕೆ ಅನನ್ಯವಾದುದು. ಟ್ರಯಲ್ ನಡೆಯುತ್ತಿದ್ದಾಗ ಮಧ್ಯ ಅವರ ಮನೆಯಲ್ಲಿ ನಾವು, ಮಕ್ಕಳಿಗೆಲ್ಲಾ ಕಾಫಿತಿಂಡಿ ವ್ಯವಸ್ಥೆ ಆಗುತ್ತಿತ್ತು. ಅಲ್ಲಿ ಎರಡೋ ಮೂರೋ ವರ್ಷ ಮಾತ್ರ ಇದ್ದೆ. ನನಗೆ ಹಾಲಾಡಿಯಿಂದ ಟ್ರಯಲ್ ಗೂ ಹೋಗುವುದು ಕಷ್ಟವಾಯಿತು. ರಜೆಯಲ್ಲಿ ಮಾತ್ರ ಅಕ್ಕನ ಮನೆಯಲ್ಲಿ ಇದ್ದಾಗ  ಹೋಗಬಹುದಿತ್ತು. ಆದರೆ  ಆ ಮೇಳ ಅಮೇರಿಕಕ್ಕೆ ಹೋಗುವ ಹಿಂದಿನ ವರ್ಷ ನಾನು “ಎತ್ತರವಾಗಿಬಿಟ್ಟೆ” ಎಂದು ನಿವೃತ್ತಿಗೊಳಿಸಿದ್ದರಿಂದ ನನಗೆ ವಿದೇಶಕ್ಕೆ ಹೋಗುವ ಅವಕಾಶ ತಪ್ಪಿಹೋಯಿತು. ಈಗಲೂ ಆ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ನಾವಿರುವಾಗ ಇದ್ದ ಅದೇ ಶಿಸ್ತು, ಕುಣಿತ, ಮಾತು, ಗತ್ತು, ಉಳಿಸಿಕೊಂಡು ಅದೇ ಮಟ್ಟದಲ್ಲಿ ಅಲ್ಲಲ್ಲಿ ಪ್ರದರ್ಶನ ನೀಡಿ ಯಕ್ಷಗಾನಕ್ಕೊಂದು ಮಾದರಿಯೆನಿಸಿದೆ. ನಾನೂ ಅದರಲ್ಲಿ ಇದ್ದಿದ್ದೇನೆ ಎಂಬುದೇ ನನಗೊಂದು ಹೆಮ್ಮೆಯ ವಿಷಯ.

ಆ ಒಂದು ಕೃತಜ್ಞತೆಯನ್ನು ಸಲ್ಲಿಸಲು ಪುನಹ ನಲವತ್ತು ವರ್ಷಗಳ ನಂತರ, ಮೊನ್ನೆ ೨೦೧೩ ರಲ್ಲಿ ಶ್ರೀಧರ ಹಂದೆಯವರನ್ನು, ಆಗಿನ ನಾವೆಲ್ಲಾ  ಮಕ್ಕಳು ಈಗ ಎಲ್ಲೆಲ್ಲೋ ಇದ್ದು ಜೀವನದ ದಾರಿಯನ್ನು ಕಂಡುಕೊಳ್ಳುತ್ತಿರುವವರು,  ದೊಡ್ಡವರಾಗಿ ಡಾಕ್ಟರ್ ಇಂಜಿನಿಯರ್ ಆಫೀಸರ್ ಆಗಿ ಎಲ್ಲೆಲ್ಲಿಯೋ ಇದ್ದವರನ್ನು  ಹುಡುಕಿ ಕರೆದು, ಪುನಹ ಸೇರಿಕೊಂಡು ಒಂದು ಲಕ್ಷದ ಮೊತ್ತವನ್ನು ಕೊಟ್ಟು ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದೆವು. ನಾವು ಅಂದು ಆಡಿದ ಅದೇಪ್ರಸಂಗ ಅದೇ ಪಾತ್ರಧಾರಿಗಳು ಅದೇ ಪಾತ್ರವನ್ನು ಮಾಡಿ ಅವರ ಸಮ್ಮುಖದಲ್ಲಿ ಕೃಷ್ಣಾರ್ಜುನ, ವೃಷಸೇನ ಪ್ರಸಂಗಗಳನ್ನು ಪುನಹ ಅವರಿಂದಲೇ ಟ್ರಯಲ್ ಮಾಡಿಸಿಕೊಂಡು ಪ್ರದರ್ಶಿಸಿ ಗುರುವಂದನೆಯನ್ನು ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಡಿ ಬಾಲ್ಯವನ್ನು  ಮತ್ತೊಮ್ಮೆ ಕಂಡೆವು. ನನ್ನ ಒಂದು ಮುತುವರ್ಜಿಯಿಂದ ಅದನ್ನು ಮಾಡಿದ್ದು ಎಂದು ಹೇಳಿಕೊಳ್ಳಲೂ ನನಗೆ ಹೆಮ್ಮೆಯಿದೆ.

(ಮುಂದುವರಿಯುವುದು)

ಮಂಗಳವಾರ, ಸೆಪ್ಟೆಂಬರ್ 26, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 14

 ನಾನು ಹಾಲಾಡಿ ಶಾಲೆಗೆ ಸೇರಿದಾಗ, ಹಾಲಾಡಿ ನಾರಾಯಣ ಪೈಗಳು ಹೆಡ್ ಮಾಸ್ತರರು, ಮತ್ತು ರಾಜೀವ ಶೆಟ್ರು, ಶೇಷಪ್ಪ ಶೆಟ್ರು ರಾಜೂ ಭಂಡಾರ್ರು ದಾಕ್ಷಾಯಿಣಿಮೇಡಂ, ರಾಜೀವಿಮೇಡಂ, ಮುಂತಾದವರು ಅಲ್ಲಿ ಮೇಷ್ಟ್ರಾಗಿದ್ದರು. ನನ್ನ ಜೊತೆಗಾರರ ಪೈಕಿ ನೆನಪಿಗೆ ಬರುವವರೆಂದರೆ ಮಣಿಗೇರಿ ಚಂದ್ರಶೇಖರ ಶೆಟ್ಟಿ,  ಗಣಪತಿ ಮಿತ್ಯಾಂತ, ಕುದ್ರು ಮನೆ ರಘುರಾಮ ಶೆಟ್ಟಿ, ಶೇರ್ಡಿ ಸುರೇಶ ಶೆಟ್ಟಿ, ಹಾಲಾಡಿ ಮೇಲ್ಪೇಟೆ ಅಬ್ಬಾಸ್ ಸಾಹೇಬ್, ಮೂಡ್ಲಮಕ್ಕಿ ಶ್ರೀಕಾಂತ ಮಿತ್ಯಾಂತ, ಹಾಲಾಡಿ ವೆಂಕಟು, ನಿತ್ಯಾನಂದ ಶೆಣೈ, ಕೃಷ್ಣಾನಂದ ಶೆಣೈ, ಹಾಲಾಡಿ ಬಾಲಕೃಷ್ಣ ಶೆಟ್ಟಿ, ರಾಜು ಕುಲಾಲ, ಗಣಪು ದೇವಾಡಿಗ, ಗಾಯತ್ರಿ ಅಡಿಗ, ಚೋರಾಡಿ ವೀಣಾ ಹಂಜಾರ್ ಹೀಗೆ ಕೆಲವರು.
ಆಗ ಐದನೇ ಕ್ಲಾಸಿನಿಂದ ಇಂಗ್ಲೀಷ್ ಕಲಿಯಬೇಕಾಗಿತ್ತು. ನಾರಾಯಣ ಪೈಗಳು ಇಂಗ್ಲೀಷಿಗೆ. ನನಗೆ ಇಂಗ್ಲೀಷ್ ಬಹಳ ಕಷ್ಟವೆ. ಏನು ಮಾಡಿದರೂ ತಲೆಗೆ ಹೋಗದು. ಶೇಷ ಮಾಸ್ಟ್ರು ಲೆಕ್ಕಕ್ಕೆ. ಅದೂ ಕಷ್ಟವೆ. ಈ ಶಾಲೆ ಅಂತ ಯಾಕೆ ಮಾಡಿದರೋ ಅನ್ನಿಸುತ್ತಿತ್ತು. ಅಶ್ವತ್ಥದ ಎಲೆಯನ್ನು ಕಿವಿಗೆ ಸಿಕ್ಕಿಸಿಕೊಂಡು ಹೋದರೆ ಮಾಷ್ಟ್ರು ಹೊಡೆಯುವುದಿಲ್ಲ ಅಂತ ಯಾರೋ ಹೇಳಿದರು ಅಂತ, ದಿನವೂ ಕಿವಿಗೆ ಒಂದುಎಲೆಯನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದೆ. ಆದರೂ ಪೆಟ್ಟು ತಪ್ಪುತ್ತಿರಲಿಲ್ಲ. ಬೆಳಿಗ್ಗೆ ಬೇಗನೇ ಶಾಲೆಯ ಹತ್ತಿರವೇ ಇರುವ ಮಾರಿಕಾನು ಅಮ್ಮನ ದೇವಸ್ಥಾನಕ್ಕೆ ಹೋಗಿ “ಇವತ್ತು ಮಾಸ್ಟ್ರು ಹೊಡೆಯದೇ ಇರಲಪ್ಪ” ಎಂದು ಕೈಮುಗಿದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಅಷ್ಟಾದರೂ ಮನೆಯಲ್ಲಿ ಮಾತ್ರಾ ಪುಸ್ತಕ ತೆಗೆದು ನೋಡುತ್ತಿರಲಿಲ್ಲ. ಮನೆಲೆಕ್ಕ ಮಾಡುವುದಂತೂ ಮರೆತೇಹೋಗುತ್ತಿತ್ತು. ಏನೇನೋ ಆಟಗಳು, ಹೊರಗಡೆ ಸುತ್ತಾಡುವುದು. ಚಿತ್ರ ಬಿಡಿಸುವದು, ಪದ್ಯ ಬರೆಯುವುದು, ಪೇಪರ್ ಕತ್ತರಿಸಿ ಅದರಿಂದ ಏನೇನೋ ಮಾಡುವುದು, ಹೀಗೆ. ಅದೇ ನನ್ನ ಲೋಕವಾಗಿತ್ತು. ಆದ್ದರಿಂದ ನಾನು ಓದಿನಲ್ಲಿ ಮುಂದೆ ಅಂತ ಆದದ್ದೇ ಇಲ್ಲ. ಅಜ್ಜಿಯ ಪುಣ್ಯಕ್ಕೆ ಎಲ್ಲಾದರೂ ನೂರಕ್ಕೆ ನೂರು ಸಿಕ್ಕಿದರೆ ನನ್ನ ಗತ್ತು ಒಮ್ಮೆ ಹೆಚ್ಚಾಗುತ್ತಿತ್ತೇ ವಿನಹ, ಮುಂದಿನ ಸಲ ಅಷ್ಟೇ ಪಡೆಯಬೇಕು ಎಂದು ಛಲ ಬಂದದ್ದೇ ಇಲ್ಲ. ಆದರೆ ಪರೀಕ್ಷೆಯ ಸಮಯದಲ್ಲಿ ಒದ್ದಾಡಿಕೊಂಡು ಓದಿ, ಯಾವ ವರ್ಷವೂ ಪೈಲಾಗದೇ ಮುಂದೆ ಮುಂದೆ ಹೋಗುತ್ತಿದ್ದೆ.
ಬೆಳಿಗ್ಗೆ ಹೋದರೆ ಸಂಜೆಗೇ ಮನೆಗೆ ಬರುವುದು. ಮಧ್ಯಾಹ್ನ ಊಟಕ್ಕೆ ಮೊದಮೊದಲು ಬುತ್ತಿ ತೆಗೆದುಕೊಂಡು ಹೋಗುತ್ತಿದ್ದರೂ  ಅಮೇಲಾಮೇಲೆ ಅದು ಸೇರುವುದಿಲ್ಲ ಎಂದು ಬೇಡ ಎನ್ನುತ್ತಿದ್ದೆ. ಅದಕ್ಕೆ ಅತ್ತೆ “ಮಾಣಿ, ಉಪವಾಸ ಇಪ್ಕಾಗ. ಏಂತಾರು ತಿನ್ನು” ಎಂದು, ಪ್ರತೀದಿನ ಇಪ್ಪತೈದು ಪೈಸೆ ಕೊಟ್ಟು ಕಳುಹಿಸುತ್ತಿದ್ದರು. ನಾನು ಹಾಲಾಡಿ ಭಾಸ್ಕರ ಮಿತ್ಯಾಂತರ ಹೋಟೇಲಿನಲ್ಲಿ ಅದರಲ್ಲಿ ಇಪ್ಪತ್ತು ಪೈಸೆಗೆ ಎರಡು ಇಡ್ಲಿ ತೆಗೆದುಕೊಳ್ಳುತ್ತಿದ್ದೆ. ಉಳಿದ ಐದು ಪೈಸೆಗೆ ಚೋಕಲೇಟೋ, ಪೆಪ್ಪರಮೆಂಟೋ ಬಾಯಿಯಲ್ಲಿ ಇಟ್ಟುಕೊಂಡು ಚೀಪುವಂತಾದ್ದು ಕೊಂಡು ಕೊಳ್ಳುತ್ತಿದ್ದೆ.
ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ, ಪ್ರತೀ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುತ್ತಿದ್ದರು. ಆಟದ ತಿರುಗಾಟ ಇಲ್ಲದ ಅವಧಿ ಅದು. ಸುಮಾರು ಜುಲೈ ಆಗಸ್ಟ್ ನಲ್ಲಿ ಬರುವುದರಿಂದ  ಅಪ್ಪಯ್ಯನೂ ಇರುತ್ತಿದ್ದರು. ಮಧ್ಯಾಹ್ನ ಪೂಜೆ, ಸಮಾರಾಧನೆಯಾದರೆ ರಾತ್ರಿ ಭಜನೆ ಮುಗಿದು ರಾತ್ರಿ ಊಟದ ನಂತರ ತಾಳಮದ್ದಲೆಯೂ ಇರುತ್ತಿತ್ತು. ಅಪ್ಪಯ್ಯ “ಹೂವ ತರುವರ ಮನೆಗೆ” “ಕೃಷ್ಣಾ ನೀ ಬೇಗನೆ ಬಾರೋ” “ಕೃಷ್ಣ ಮೂರ್ತಿ ಕಣ್ಣಮುಂದೆ ನಿಂತಿದಂತಿದೆ” “ರಘುಪತಿ ರಾಘವ ರಾಜಾರಾಮ್” ಮೊದಲಾದ ಭಜನೆಯನ್ನು ಇಳಿಯ ಸ್ವರದಲ್ಲಿ ಹೇಳುತ್ತಿದ್ದರು. ಅದು ನನಗೆ ತುಂಬಾ ಇಷ್ಟವಾಗುತ್ತಿತ್ತು. ಆಸುಪಾಸಿನ ಊರಿನ ಕೆಲವರೂ ಭಜನೆ ಹೇಳುವವರೂ ಬಂದು ಒಂದೆರಡು ಭಜನೆಯನ್ನು ಹೇಳುತ್ತಿದ್ದರು. ನಂತರ ಊಟ. ಆಮೇಲೆ ಬೆಳಗಿನವರೆಗೆ ತಾಳಮದ್ದಲೆ. ಅದಕ್ಕೆ ಶಂಕರನಾರಾಯಣದ ಆರೂರು ಸರ್ವೋತ್ತಮ ಶೇಟ್ರು, ಕೊರಗಯ್ಯ ಶೆಟ್ರು, ನಾಗಪ್ಪ ಪೋರೆಸ್ಟರ್, ಹಾಲಾಡಿ ಜಯವಂತ ಕಾಮತ್ರೂ, ಕರುಣಾಕರ ಶೆಟ್ರು, ಶಂಕರನಾರಾಯಣ ಶಿವರಾಮ ಶೆಟ್ರು ಮುಂತಾದವರು ಖಾಯಂ ಆಗಿ ಬರುತ್ತಿದ್ದರು. ಚಂದ್ರಶೇಖರ ಕೆದ್ಲಾಯರೂ, ಕೆ.ಜಿ ನಾರಾಯಣ ಮುಂತಾದವರೂ ಕೆಲವೊಮ್ಮೆ ಬಂದದ್ದಿದೆ. ಇನ್ನು, ಐರೋಡಿ ಸದಾನಂದ ಹೆಬ್ಬಾರರೂ, ಕೋಟದ ಕೆ. ಎಲ್. ಐತಾಳರೂ (ಇವರು ಭಜನೆ ಹೇಳುತ್ತಿದ್ದರು), ಹೆಚ್. ಶ್ರೀಧರ ಹಂದೆಯವರೂ, ನಮ್ಮ ಭಾವ ಪಿ.ಶ್ರೀಧರ ಹಂದೆಯವರೂ ಬಂದಿದ್ದಿದೆ.
 ಒಮ್ಮೆ ತೆಕ್ಕಟ್ಟೆ ಆನಂದ ಮಾಸ್ಟ್ರು ಬರುವಾಗ ಗದ್ದೆಯ ಬೆಳೆಯ ರಕ್ಷಣೆಗೆ ಹಾಕಿದ ಬೇಲಿಯನ್ನು ದಾಟಲು ಕಷ್ಟವಾಗಿ, ಅವರ ಹೊಟ್ಟೆ ತೊಡಮೆಗೆ ಸಿಕ್ಕಿ ಅದ್ವಾನವಾಗಿತ್ತಂತೆ. ಕೆಲವರು ರಾತ್ರಿ ಬರುವಾಗ ಗದ್ದೆಯ ಕಂಟದ ಬದಿಗೆ ಕಾಲು ಹಾಕಿ ಗದ್ದೆಗೆ ಬಿದ್ದು, ಎದ್ದು ಅನುಭವ ಮಾಡಿಕೊಂಡದ್ದೂ ಇತ್ತು. ಕಂಟದ ಬದಿಯ ಹುಲ್ಲಿನಲ್ಲಿ ಕೆಸರನ್ನು ಕಾಣದೇ ಮೆಟ್ಟಿ ಜಾರಿ ಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡು ಮನೆಗೆ ಬಂದು ತೊಳೆದುಕೊಂಡದ್ದೂ ಇದೆ. ನಮ್ಮ ಕಲ್ಲಟ್ಟೆಯ ಮನೆಯ ತನಕ ವಾಹನ ಬರುವುದಿಲ್ಲ. ಕತ್ತಲೆಯಲ್ಲಿ ಬ್ಯಾಟರಿ ಲೈಟು ಹಿಡಿದುಕೊಂಡು ಅದರ ಮಿಣುಕು ಮಿಣುಕು ಬೆಳಕಿನಲ್ಲಿ ಮೂರುಮೂರುವರೆ ಮೈಲಿ ಹಾಡಿಯಲ್ಲಿ, ಗದ್ದೆಯ ಅಂಚಿನಲ್ಲಿ ಅಂತ ನಡೆದೇ ಬರಬೇಕಿತ್ತು. ಎರಡೆರಡು ಕಡೆ ದಾರಿಯಲ್ಲಿ ಸಿಗುವ ಹೊಳೆಗೆ ಅಡ್ಡಹಾಕಿದ ಸಂಕದಲ್ಲಿ ಸರ್ಕಸ್ ಮಾಡಿ ದಾಟಿ ಬರಬೇಕಾಗಿತ್ತು. ಆದರೂ ತಾಳಮದ್ದಲೆಯ ಚಟ. “ನಮ್ಮ ಉಪ್ಪೂರರ ಮನೆಯ ಕಾರ್ಯಕ್ರಮ ಎಂಬ ಮೋಹ”. ಈಗಲೂ ಕೆಲವರು ಆಗಿನ ಭಜನೆಯನ್ನು, ತಾಳಮದ್ದಲೆಗಳನ್ನು ನೆನಪು ಮಾಡಿಕೊಳ್ಳುವುದಿದೆ.
ಕಲ್ಲಟ್ಟೆಯಲ್ಲಿರುವಾಗ ನಾನೂ ಮತ್ತು ಅತ್ತೆಯೂ ಪ್ರತೀದಿನ ಸಂಜೆ ಭಜನೆಯನ್ನು ಮಾಡುತ್ತಿದ್ದೆವು. ಅತ್ತೆಯ ಸ್ವರ ತುಂಬಾ ಚೆನ್ನಾಗಿತ್ತು. ನಾನು ಭಜನೆಗೆ ಬರುವುದಿಲ್ಲ ಎಂದರೂ ಅವರು ಬಿಡುತ್ತಿರಲಿಲ್ಲ. “ಬಾ ಮಾಣಿ ಕೂತುಕೊ” ಎಂದು ಒತ್ತಾಯಿಸಿ, ಏನಾದರೂ ತಿಂಡಿಯ ಆಸೆ ತೋರಿಸಿಯಾದರೂ ಹತ್ತಿರ ಕೂರಿಸಿಕೊಳ್ಳುತ್ತಿದ್ದರು. ನಾನು ಅವರ ಜೊತೆಯಲ್ಲಿ ರಾಘವೇಂದ್ರ ಸ್ವಾಮಿಗಳ ಭಜನೆಯನ್ನು ಮಾಡುತ್ತಿದ್ದೆ.
ನಾನು ಏಳು ಅಥವ ಎಂಟನೇ ಕ್ಲಾಸಲ್ಲಿ ಇರುವಾಗಿನ ಮಾತು. ಅರ್ಧವಾರ್ಷಿಕ ಪರೀಕ್ಷೆ ಮುಗಿದು ರಜೆ ಸಿಕ್ಕಿದ ನಂತರ ಕೋಟದ ಅಕ್ಕನ ಮನೆಗೆ ಹೋಗಿದ್ದೆ. ಆಗ ಅಕ್ಕನಮನೆ ಕೋಟದ ಅಮೃತೇಶ್ವರೀ ದೇವಸ್ಥಾನದಿಂದ ಒಂದು ಪರ್ಲಾಂಗ್ ಪಶ್ಚಿಮಕ್ಕೆ ಇರುವ ಕದ್ರಿಕಟ್ಟು ಎಂಬಲ್ಲಿ ಇತ್ತು. ಅಪ್ಪಯ್ಯನೂ ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನದ ಹೊರಪೌಳಿಯ ಉಪ್ಪರಿಗೆಯ ಮೇಲೆ ಭಾಗವತಿಕೆಯ ಕೇಂದ್ರದಲ್ಲಿ ಭಾಗವತಿಕೆಯನ್ನು ಕಲಿಸಿಕೊಡುತ್ತಿದ್ದರು. ಬೇಳಂಜೆ ತಿಮ್ಮಪ್ಪ ನಾಯ್ಕ ಮದ್ದಲೆ ಕಲಿಸಿಕೊಡುವುದಕ್ಕೆ. ಕಲಿಯಲು ಬಂದವರು ದೇವಸ್ಥಾನದ ಒಂದು ಕೋಣೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಬೆಳಿಗ್ಗೆ ಒಂಬತ್ತು ಗಂಟೆಗೆ ಅಪ್ಪಯ್ಯ ಅಲ್ಲಿಗೆ ಹೋದರೆ, ಮಧ್ಯಾಹ್ನ ಒಂದು ಗಂಟೆಯವರೆಗೆ ಕಲಿಸಿ ಮಧ್ಯಾಹ್ನಮನೆಗೆ ಬಂದು ಊಟ ಮಾಡಿ ಮತ್ತೆ ಎರಡು ಗಂಟೆಗೆ ಪುನಹ ಹೋಗಿ ಸಂಜೆ ಐದು ಗಂಟೆಯವರೆಗೆ ಭಾಗವತಿಕೆ ಕಲಿಸಿ ಮರಳುತ್ತಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ನಾನೂ ಅಪ್ಪಯ್ಯನ ಜೊತೆಗೆ ಅವರು ಹೇಳಿಕೊಡುವ ಕ್ಲಾಸಿಗೆ ಹೋಗುತ್ತಿದ್ದೆ. ಐರೋಡಿ ಸದಾನಂದ ಹೆಬ್ಬಾರರ ಮುತುವರ್ಜಿಯಿಂದ ಪ್ರಾರಂಭಗೊಂಡ ಅವರ ಕನಸಿನ ಗುರುಕುಲವಾಗಿತ್ತು ಅದು. ಸುಮಾರು ಮುವ್ವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಭಾಗವತಿಕೆ, ಚಂಡೆ, ಮದ್ದಲೆ ಕಲಿಯುತ್ತಿದ್ದರು. ಅಪ್ಪಯ್ಯನನ್ನು ಮಾತಾಡಿಸಿಕೊಂಡು ಹೋಗಲೂ ಹಲವಾರು ಜನ ಅವರ ಅಭಿಮಾನಿಗಳು ಬರುತ್ತಿದ್ದರು. ಅವರಿಗೋಸ್ಕರ ಅಪ್ಪಯ್ಯ ಪದ್ಯಗಳನ್ನು ಹಾಡುತ್ತಿದ್ದರು. ಕೆಲವರು ಅಲ್ಲಿಗೆ ಬಂದು ರೆಕಾರ್ಡ್ ಕೂಡಾ ಮಾಡಿಕೊಳ್ಳುತ್ತಿದ್ದರು.

(ಮುಂದುವರಿಯುವುದು)

ಸೋಮವಾರ, ಸೆಪ್ಟೆಂಬರ್ 25, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 13

ಬ್ರಾಹ್ಮಣರಲ್ಲಿ ಉಪನಯನವಾದ ಮೇಲೆ, ಊಟಕ್ಕೆ ಕುಳಿತಾಗ ಮಾತಾಡಬಾರದು ಎಂಬ ಒಂದು ರಿವಾಜಿದೆ. ಆದರೆ ಹೆಚ್ಚಿನವರು ಶಾಸ್ತ್ರಕ್ಕೆ ನಾಲ್ಕು ದಿನ ಸುಮ್ಮನಿದ್ದು, ಆಮೇಲೆ ಮಾಮೂಲಿಯಾಗಿ ಮಾತ ಕತೆಯಾಡುತ್ತಾರೆ. ಆದರೆ ಈ ನಮ್ಮ ಭಟ್ಟರು  ಊಟ ಮಾಡುವಾಗ ಮಾತನಾಡದೇ ಇರುವ ನಿಯಮವನ್ನು ಪಾಲಿಸುತ್ತಿದ್ದರು. ಊಟಕ್ಕೆ ಕುಳಿತಾಗ “ಬೇಕು, ಬೇಡ” ಎನ್ನುವುದೆಲ್ಲ ಕೈಸನ್ನೆ, ಕಣ್ಣುಸನ್ನೆಯಲ್ಲೆ. ಒಮ್ಮೆ ಅವರ ಹೆಂಡತಿ, ಮಕ್ಕಳ ಜೊತೆಗೆ ನೆಂಟರ ಮನೆಗೆ ಊಟಕ್ಕೆ ಹೋಗಿದ್ದರಂತೆ. “ ತೊಟ್ಟಿಲಲ್ಲಿರುವ ಮಗು ನಿದ್ರೆ ಮಾಡಿದೆ. ಅದು ಏಳುವುದರ ಒಳಗೆ ಬಂದರೂ ಬಂದೇನು” ಎಂದು ಗಂಡನನ್ನು ಒಪ್ಪಿಸಿ “ಸ್ವಲ್ಪ ನೋಡುತ್ತಾ ಇರಿ” ಎಂದು ನೆನಪಿಸಿ ಹೋಗಿದ್ದರು. ಅದು ಅವರ ಮೂರನೆಯದೋ ನಾಲ್ಕನೆಯದೋ, ಸಣ್ಣ ಮಗು, ಹೊರಗೆ ಚಾವಡಿಯಲ್ಲಿ ತೊಟ್ಟಿಲಲ್ಲಿ ನಿದ್ದೆ ಮಾಡುತ್ತಿತ್ತು.
ಮಧ್ಯಾಹ್ನ ಊಟದ ಸಮಯ. ಭಟ್ಟರು ಊಟಕ್ಕೆ ಕುಳಿತು ಎಲೆಗೆ ಅನ್ನ ಹಾಕಿಕೊಂಡು, ಜಲಪ್ರೋಕ್ಷಣೆ ಮಾಡಿಕೊಂಡು ಪರಿಸಿಂಚನವಾಗಿ, ಓಂ ಅಮೃತೋ ಪತ್ತರಣಮಸಿ ಮುಗಿಸಿ, ಇನ್ನೇನು ಸಾರು ಬಡಿಸಿಕೊಂಡು ಊಟ ಪ್ರಾರಂಭಿಸಿದ್ದರಷ್ಟೆ. ಆಗಲೇ ತೊಟ್ಟಿಲಲ್ಲಿ ಮಲಗಿದ್ದ ಮಗು ಒಮ್ಮೆಲೇ ಎದ್ದು ಕೂಗತೊಡಗಿತು. ಏನು ಮಾಡುವುದು? ಭಟ್ಟರು ಒಬ್ಬರೆ ಮನೆಯಲ್ಲಿ. ಊಟದ ಮಧ್ಯೆ ಎದ್ದರೆ, ಪುನಹ ರಾತ್ರಿಯವರೆಗೆ ಊಟ ಮಾಡುವ ಹಾಗಿಲ್ಲ. ಮಧ್ಯಾಹ್ನದ ಊಟ ಅಲ್ಲಿಗೇ ಮುಗಿಯಿತು. ಹಾಗಂತ ಊಟ ಮಾಡುವಾಗ ಮಾತನಾಡಿ, ಮಗುವಿಗೆ “ತಾನು ಇಲ್ಲಿ ಅಡುಗೆಯ ಮನೆಯಲ್ಲಿ ಇದ್ದೇನೆ” ಎನ್ನುವ ಹಾಗೂ ಇಲ್ಲ. ಏನು ಮಾಡುವುದು? ಅತ್ತ ಧರೆ, ಇತ್ತಪುಲಿ. ಎದ್ದರೆ ಮತ್ತೆ ಮಧ್ಯಾಹ್ನ ಊಟ ಇಲ್ಲ, ಮಾತನಾಡಿದರೆ ಇಷ್ಟರವರೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಬಂದ ವೃತಭಂಗ. ಭಟ್ರಿಗೆ ಭಾರೀ ಸಂದಿಗ್ಧ. ಮನೆಯಲ್ಲಿ ಯಾರೂ ಇಲ್ಲವೆಂದು ಮಗು ಗಾಬರಿಯಿಂದ ಬಿಕ್ಕಿಬಿಕ್ಕಿ ಮತ್ತೂ ಗಟ್ಟಿಯಾಗಿ ಅಳುತ್ತಿದೆ. ಸ್ವಲ್ಪ ಹೊತ್ತು ಹೋದರೆ ತೊಟ್ಟಿಲಿನಿಂದ ಕೆಳಗೆ ಬಿದ್ದರೂ ಬಿದ್ದೀತು. ಧರ್ಮ ಸಂಕಟ. ಅಂತೂ ಕೊನೆಗೆ ಮಗುವಿನ ಮೇಲಿನ ಮಮತೆಯೇ ಗೆದ್ದಿತು.  “ಮಗೂ.  ಮರ್ಕ್ ಬೇಡ್ವಾ, ನಾನು ಇಲ್ಲೇ ಇದ್ನಲೆ. ಬಾ” ಎಂದು ಗಟ್ಟಿಯಾಗಿ ಹೇಳಿ, ವೃತಭಂಗ ಮಾಡಿಕೊಂಡರಂತೆ. ಮಗು ಅಳು ನಿಲ್ಲಿಸಿ ಸುಮ್ಮನಾಯಿತು. ಅದನ್ನು ಅವರು ಪ್ರತೀಸಲ ವಿಶೇಷ ಊಟದ ಸಮಯದಲ್ಲಿ, “ಈ ಮಗುವಿನಿಂದ ನನ್ನ ವೃತವೊಂದು ಭಂಗವಾಯಿತು ಮರ್ರೆ” ಎಂದು ಆ ಕತೆಯನ್ನು ಗಹಗಹಿಸಿ ನಗುತ್ತಾ ಅವರ ಗಟ್ಟಿಯಾದ ಸ್ವರದಲ್ಲಿ ಹೇಳಿ ಬಣ್ಣಿಸುತ್ತಿದ್ದರು. ನಂತರ ಅವರು ಪುರೋಹಿತಿಕೆಯಿಂದ ಅಲ್ಪಸ್ವಲ್ಪ ಕೈಯಲ್ಲಿ ದುಡ್ಡು ಮಾಡಿಕೊಂಡು ಹುಣಿಸೇಮಕ್ಕಿಯ ಹತ್ತಿರ ಆಸ್ತಿಯನ್ನು ಖರೀದಿಸಿ, ಒಂದು ಮನೆಯನ್ನು ಕಟ್ಟಿಸಿಕೊಂಡು ಅಲ್ಲಿಗೇ ಹೋದರು.
ನಾನು ತುಂಬಾ ಚಿಕ್ಕವನಿರುವಾಗ ನಡೆದ ಘಟನೆಯಿರಬಹುದು. ಇದೂ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಟ್ಟಿದೆ. ಚೇರಿಕೆಯಲ್ಲಿ, ಬೆಳಿಗ್ಗೆ ಅಮ್ಮ ಹಟ್ಟಿಗೆ ಹೋಗಿ ಎಮ್ಮೆಯ ಹಾಲು ಕರೆದು, ಒಂದು ಉಗ್ಗದಲ್ಲಿ ಹಾಕಿ ರಮೇಶಣ್ಣಯ್ಯನಿಗೆ ಕೊಡುತ್ತಿದ್ದಳು, ಅವನು ಪ್ರತೀದಿನ ಅದನ್ನು ಕಲ್ಲಟ್ಟೆಯ ಅತ್ತೆಯ ಮನೆಗೆ ಕೊಟ್ಟು, ಹಾಗೆಯೇ ಶಂಕರನಾರಾಯಣದ ಹೈಸ್ಕೂಲಿಗೆ ಹೋಗುತ್ತಿದ್ದನಂತೆ. ಅತ್ತೆಯ ಮನೆಯಲ್ಲಿ ಆಗ ಕರಾವು ಇರಲಿಲ್ಲವೋ ಅಥವ ನಮ್ಮ ಮನೆಯಲ್ಲಿ ಹಾಲು ಹೆಚ್ಚಿಗೆ ಇರುತ್ತಿತ್ತೋ ಗೊತ್ತಿಲ್ಲ. ನಮ್ಮ ಮನೆಯ ಹಿಂದಿನ ಮಕ್ಕಿಗದ್ದೆಯನ್ನು ದಾಟಿ, ನಮ್ಮ ಜಾಗದ ಅಂಚಿನಲ್ಲಿರುವ ಸರಕಾರಿ ಹಾಡಿಯನ್ನು ಹೊಕ್ಕು, ಆಚೆ ಬದಿಯಿಂದ ಇಳಿದರೆ ಚೋರಾಡಿ ಬಯಲು ಸಿಗುತ್ತದೆ. ಅಲ್ಲಿಂದ ಚೋರಾಡಿ ಕಂಬಳಗದ್ದೆಯ ಅಂಚಿನಲ್ಲಿ ನಡೆದು, ಹಾಗೆಯೇ ಹೊಳೆಯ ಬದಿಯಲ್ಲಿಯೇ ಮುಂದೆ ಹೋಗಿ, ಮತ್ತೆ ಬೈಲುಮನೆ ಪುಟ್ಟನ ಮನೆಯ ಪಕ್ಕದ ಅವರ ಹಟ್ಟಿಯ ಹೊರಬದಿಯಿಂದ ಮೇಲೆ ಹತ್ತಿದರೆ, ಆ ದಾರಿ ಸೀದಾ ಕಲ್ಲಟ್ಟೆಯ ಅತ್ತೆಯ ಮನೆಯನ್ನು ಸೇರುತ್ತದೆ. ಅಂದಾಜು ಮೂರುಮೈಲಿ ದೂರ ಇರಬಹುದು. ಹಾಲಾಡಿ ಪೇಟೆಗೆ ಬರಬೇಕಾದರೆ ಮತ್ತೆ ಉತ್ತರಕ್ಕೆ ಅಂದಾಜು ಅಷ್ಟೇ ದೂರ ನಡೆಯಬೇಕು. ಅಲ್ಲಿಂದ ಐದು ಮೈಲಿ ಶಂಕರನಾರಾಯಣದ ಹೈಸ್ಕೂಲಿಗೆ. ನಡೆದೇ ಹೋಗುವುದು. ಬೆಳಿಗ್ಗೆ ಮನೆಯಿಂದ ಹೊರಡುವುದೇ ತಡವಾದರೆ ಬೇಗ ಬೇಗ ಹೋಗಬೇಕು. ಇಲ್ಲದಿದ್ದರೆ ಕ್ಲಾಸಿಗೆ ತಡವಾಗುತ್ತದೆ.
ಚೋರಾಡಿ ಬೈಲಿಗೆ ಇಳಿಯುವ ಸ್ಥಳದಲ್ಲಿ ಒಂದೆರಡು ಕುಂಬಾರರ ಮನೆಯೂ ಸಿಗುತ್ತದೆ. ಅವುಗಳ ಪಕ್ಕದ ದಾರಿಯಲ್ಲೇ ನಡೆದು ಮುಂದೆ ಹೋಗಬೇಕು. ಅದನ್ನು ಹಾದು ಹೋಗುವಾಗ ಆ ಮನೆಯ ಹೆಂಗಸರು ಅಣ್ಣಯ್ಯನ ಗುರುತು ಹಿಡಿದು. “ಅಯ್ಯಾ. ಅತ್ತೆ ಮನಿಗೆ ಹೊರಟ್ರ್ಯಾ?” ಎಂದು ರಾಗವಾಗಿ ಮಾತಾಡಿಸುವರು. ಇವನು ಮೊದಲೇ ನಾಲ್ಕು ಮಾತಾಡಿದರೆ ಒಂದು ಆಡುವವನು. ತಡವಾಗಿದೆ ಬೇರೆ. ಅವರ ಪ್ರಶ್ನೆಗೆ “ಹೂ ಹಾ” ಎನ್ನುವುದರ ಒಳಗೆ ಅವನು ಮಾರು ದೂರ ಮುಂದೆ ಹೋಗಿಯಾಯಿತು. ಆದರೂ ಆ ಹೆಂಗಸರು ಬಿಡದೆ “ಅದೆಂತಾ ಅಯ್ಯ, ಕೈಯಂಗ್ ಹಿಡ್ಕಂಡದ್?”. ಅಂದರೆ ಅಣ್ಣಯ್ಯನಿಗೆ ಇವರಿಗ್ಯಾಕೆ ಸುಮ್ಮನೇ ಬೇಡದ ತನಿಖೆ? ಅಂತ ಸಿಟ್ಟು. ಆದರೆ ಅವರು ಬಿಡಬೇಕಲ್ಲಾ. ಇವನಿಗೆ ಕೇಳಲಿಲ್ಲ ಎಂದು ಪುನಹ “ಅಯ್ಯಾ ಅದೆಂತದೆ?” ಅಂದರು. ಇವನು “ಕಾಂತಿಲ್ಯಾ? ಪಾತ್ರ” ಎಂದು ಮುಂದೆ ಹೋಗುತ್ತಿದ್ದನಂತೆ. ಹಾಲು ಅನ್ನುವುದಿಲ್ಲ ಪುಣ್ಯತ್ಮ. ಅವರು ಈ “ಅಯ್ಯನಿಗೊಂದ್ ಸಿಟ್ಟಪ” ಎಂದು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಹಾಗಂತ ಅಷ್ಟು ಹೇಳಿಸಿಕೊಂಡರೂ ಮರುದಿನ ಮತ್ತೆ ಈ ಅಯ್ಯನನ್ನು ಕಂಡ ಕೂಡಲೇ ಅವರಿಗೆ ಮಾತಾಡಿಸಲೇಬೇಕು.
ಬಿದ್ಕಲ್ಕಟ್ಟೆಯಲ್ಲಿ ಆಗ ಜನಾರ್ದನ ಎಂಬ ಆಯುರ್ವೇದ ಪಂಡಿತರಿದ್ದರು. ಅವರ ಕೈಗುಣ ಬಹಳ ಒಳ್ಳೆಯದಿತ್ತು. ನಮ್ಮ ಕಲ್ಲಟ್ಟೆ ಅತ್ತೆಗೆ ಹುಷಾರಿಲ್ಲದಿದ್ದಾಗ ಅವರದೇ ಔಷಧಿ ಆಗಬೇಕು. ಬೇರೆ ಡಾಕ್ಟರರ ಔಷಧ ತಂದರೆ, ಅದು ಅವರಿಗೆ ತಾಗುತ್ತಿರಲಿಲ್ಲ. ಅಂದರೆ ಗುಣವಾಗುತ್ತಿರಲಿಲ್ಲ. ಅವರು ಬಿದ್ಕಲ್ಕಟ್ಟೆಗೆ ಹೋಗಿಯೇ ಮದ್ದು ತರಲು ಮಕ್ಕಳನ್ನು ಓಡಿಸುತ್ತಿದ್ದರು. ಒಮ್ಮೊಮ್ಮೆ ನೆನಪು ಹೋಗಿಯೋ ಉದಾಶೀನವಾಗಿಯೋ ಮದ್ದು ತರದೇ ಇದ್ದಲ್ಲಿ ಅಥವ ಬೇರೆ ಡಾಕ್ಟರ್ ರ ಮದ್ದು ತಂದರೆ ಅವರು ತೆಗೆದುಕೊಳ್ಳುತ್ತಲೇ ಇರಲಿಲ್ಲ. ಮತ್ತು  “ನಿಮಗೆಲ್ಲಾ ನಾನು ಅಂದರೆ ಸಸಾರ” ಎಂದು ಅತ್ತು ಕರೆದು ಆಕಾಶ ಪಾತಾಳ ಒಂದು ಮಾಡುತ್ತಿದ್ದರು.
ಒಮ್ಮೆ ಹಾಗೆ ಅವರಿಗೆ ಜ್ವರ ಬಂದಾಗ, ರಮೇಶಣ್ಣಯ್ಯ ಹಾಲಾಡಿಯ ಡಾಕ್ಕರ್ ಒಬ್ಬರ ಮದ್ದು ತಂದು ಕೊಟ್ಟು “ಇದು ಜನಾರ್ದನ ಪಂಡಿತರದ್ದು “ ಅಂದ. ಅದನ್ನು ಅತ್ತೆ ಅದನ್ನು ಕುಡಿದರು. ಅವರ ಜ್ವರ ಗುಣವಾಯಿತು. ಆಮೇಲೆ ಅತ್ತೆಗೆ “ಅದು ಹಾಲಾಡಿ ಸರಕಾರಿ ಆಸ್ಪತ್ರೆಯ ಮದ್ದು” ಎಂದು ನಿಜ ಸಂಗತಿ ಹೇಳಿ ಕಣ್ಣುಮಿಟುಕಿಸಿದ. ಅವರು “ನೀನ್ ಹೀಂಗ್ ಮಾಡುದಾ? ಮಾಣಿ” ಎಂದು ಬಾಯ್ತುಂಬಾ ನಕ್ಕರಂತೆ.
(ಮುಂದುವರಿಯುವುದು)

ಭಾನುವಾರ, ಸೆಪ್ಟೆಂಬರ್ 24, 2017



ದಿನೇಶ ಉಪ್ಪೂರ:
*ನನ್ನೊಳಗೆ*

ಭಾಗ 12


ಹುಯ್ಯಾರು ಹಿರಿಯಣ್ಣ ಶೆಟ್ರು ನಮ್ಮ ಊರ ಪಟೇಲರು. ಈಗಿನ ಪ್ರತಾಪಚಂದ್ರ ಶೆಟ್ರ ತಂದೆಯವರು. ಅವರ ಮನೆಯು ಹಯ್ಕಾಡಿ ಎಂಬಲ್ಲಿ ಇತ್ತು. ಪಟೇಲರು ಎಂದರೆ ಅಷ್ಟು ಪ್ರಭಾವಿಗಳು. ಆಸುಪಾಸು ಊರಿನಲ್ಲೂ ಅವರ ಹೆಸರು ಹೇಳಿದರೆ ಜನರು ಹೆದರುತ್ತಿದ್ದರು. ಅಷ್ಟೇ ಗೌರವಿಸುತ್ತಿದ್ದರು. ಒಕ್ಕಲು ಮಸೂದೆಯ ಕಾಲಕ್ಕಿಂತ ಮೊದಲು ಅವರಿಗೆ ನಮ್ಮ ಚೇರಿಕೆ, ಗೋರಾಜಿ, ಕಾಸಾಡಿ, ಹುಯ್ಯಾರು, ಹಯ್ಕಾಡಿ ಅಂತ ಎಲ್ಲಾ ಕಡೆಯಲ್ಲೂ ಗದ್ದೆಯ ಒಡೆತನವಿದ್ದು, ಅದರ ಬೇಸಾಯವನ್ನು ದುಡಿದು ತಿನ್ನುವ ಎಷ್ಟೋ ಒಕ್ಕಲುಗಳಿಂದ ಮಾಡಿಸಿ ಗೇಣಿ ಪಡೆಯುತ್ತಿದ್ದರು. ಎಷ್ಟೋ ಸಂಸಾರಗಳು ಪ್ರಾಮಾಣಿಕವಾಗಿ ದುಡಿದು, ಗೇಣಿ ಸಲ್ಲಿಸಿ ಸುಖ ಕಷ್ಟ ಅವರಲ್ಲಿ ಹೇಳಿ ಅವರೊಂದಿಗೆ ಹಂಚಿಕೊಂಡು ಅವರಿಗೆ ನಿಷ್ಠರಾಗಿ ತೃಪ್ತಿಯಿಂದ ಬಾಳುತ್ತಿದ್ದರು. ಕಷ್ಟವೆಂದು ಅವರ ಬಳಿಗೆ ಹೋದವರು ಯಾರೂ ನಿರಾಶರಾಗಿ ಬಂದದ್ದೇ ಇಲ್ಲ. ಹುಯ್ಯಾರು ಪಟೇಲರು ಅಂದರೆ ಎಲ್ಲರೂ ನಿಯತ್ತಿನಿಂದ ಇರುತ್ತಿದ್ದರು. ಹುಯ್ಯಾರು ಪಟೇಲರು ಹೇಳಿದರು ಅಂದರೆ ಸುಳ್ಳೂ ಸತ್ಯವಾಗುತ್ತಿತ್ತು. “ಅವರು ಹೇಳಿದ್ದಾ, ಹಂಗಾರೆ ಅದೇ ಸಮ” ಎಂದು. ಊರಿನಲ್ಲಿ ಕಳ್ಳತನವೋ ಕೊಲೆಯೋ ಜಗಳವೋ ಆಗಿ ಪೋಲೀಸರು ಬರಬೇಕಾದರೂ ಮೊದಲು ಪಟೇಲರಲ್ಲಿ ಹೋಗಿ ವಿಷಯ ತಿಳಿಸಿ ಅವರ ಅನುಮತಿ ಪಡೆದೇ ಬರಬೇಕಾಗಿತ್ತು. ಸಾಮಾನ್ಯವಾಗಿ ಯಾವ ಕೇಸೂ ಪೋಲೀಸು ಠಾಣೆ, ಅಥವ ಕೋರ್ಟಿಗೆ ಅವರಿಗೆ ತಿಳಿಯದೇ ಹೋಗುತ್ತಿರಲಿಲ್ಲ. ಅವರ ಮನೆಯಲ್ಲಿಯೇ ಊರಿನ ಎಷ್ಟೋ ಗೃಹಕಲಹಗಳು ಇತ್ಯರ್ಥವಾಗುತ್ತಿತ್ತು. ಅವರೇ ಕಾನೂನಾಗಿದ್ದರು. ತಪ್ಪು ಮಾಡಿದವರಿಗೆ, ಕಳ್ಳತನ ಮಾಡಿದವರಿಗೆ ಅವರೇ ಅವರ ಕೆಲಸದ ಆಳುಗಳಿಂದಲೇ ಶಿಕ್ಷೆ ಕೊಡಿಸುತ್ತಿದ್ದರು. ಉದ್ಧಟರನ್ನೊ ತಪ್ಪಿತಸ್ಥರನ್ನು ಚೆನ್ನಾಗಿ ಥಳಿಸಿ, ಅವರ ಮನೆಯ ತೌಡುಕೋಣೆಗೆ ಎರಡುಮೂರು ದಿನಗಳವರೆಗೆ ಕೂಡಿ ಹಾಕುತ್ತಿದ್ದರಂತೆ. ಆಮೇಲೆ ಅಷ್ಟೇ ಉಪಚಾರ ಮಾಡಿ, ಬುದ್ಧಿ ಹೇಳಿ ಕಳಿಸುತ್ತಿದ್ದರು.
ಅಪ್ಪಯ್ಯನೆಂದರೆ ಅವರಿಗೆ ಏನೋ ಆದರ, ಪ್ರೀತಿ. ಮೊದಮೊದಲು ಮನೆಯ ಕಡುಬಡತನದ ಪರಿಸ್ಥಿತಿಯಲ್ಲಿ, ಅವರೇ ಅವರಿವರಿಂದ ವಿಷಯ ತಿಳಿದು, ಅಪ್ಪಯ್ಯನನ್ನು ಅವರ ಮನೆಗೆ ಕರೆಸಿಕೊಂಡು ಅದೂ ಇದೂ ಮಾತಾಡಿಸಿ, “ಏನು ಉಪ್ಪೂರ್ರೆ, ಊಟಕ್ಕೆ ಏನಾದ್ರೂ ಉಳಿಸ್ಕಂಡಿದ್ರ್ಯಾ? ಇಲ್ಯಾ?” ಅಂತ ಕೇಳಿ, ಉಪಚಾರ ಮಾಡಿ, ನಮ್ಮ ಮನೆಗೆ ಆಳಿನ ಮೂಲಕ ಅಕ್ಕಿಮುಡಿಯನ್ನು ಹೊರಿಸಿ ಕಳಿಸಿಕೊಡುತ್ತಿದ್ದರಂತೆ. ನನಗೂ ಅಪ್ಪಯ್ಯನೊಂದಿಗೆ ಪಟೇಲರ ಮನೆಗೆ ಹೋಗಿ ಅವರ ಮನೆಯ ದೊಡ್ಡ ಚಾವಡಿಯಲ್ಲಿ ಕುಳಿತು ಪಟೇಲರು ಬರುವುದನ್ನು ಕಾಯುತ್ತಿದ್ದ ನೆನಪಿದೆ. ಪ್ರಾರಂಭದಲ್ಲಿ ನಮ್ಮ ಮನೆಯೂ ಅವರ ಸಹಾಯವಿಲ್ಲದಿದ್ದರೆ ಕಟ್ಟಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿತ್ತು. ನಮ್ಮ ಮನೆಯಲ್ಲಿ ಏನಾದರೂ ದೇವರ ಕಾರ್ಯದ ವಿಶೇಷ ಊಟವಿದ್ದರೆ ಅಥವ ಮದುವೆ, ಉಪನಯನಗಳಲ್ಲಿ,  ಮೊದಲು ಅವರ ಮನೆಗೆ ಹೋಗಿ ಆಮಂತ್ರಣ ಕೊಟ್ಟು ಬರಬೇಕು. ಆಮೇಲೆ ಆ ಕಾರ್ಯಕ್ರಮ ಮುಗಿದ ಮೇಲೂ, ದೇವರ ಪ್ರಸಾದವನ್ನೂ, ಮಾಡಿದ ಸಿಹಿತಿಂಡಿಯನ್ನು ಅವರ ಮನೆಗೆ ಕೊಟ್ಟು ಬರುವ ಕ್ರಮ ಇತ್ತು. ಒಟ್ಟಾರೆ ಅವರು ನಮ್ಮ ಊರಿಗೇ ಅರಸರಂತಿದ್ದರು. ಒಮ್ಮೆ ಬಹಳ ಹಿಂದೆ ಚುನಾವಣೆಯ ಸಮಯದಲ್ಲಿ ನಮ್ಮ ಊರಿನಲ್ಲಿ ಓಪನ್ಓಟ್ ಆಗಿತ್ತು ಎಂದು ಜನ ಹೇಳುತ್ತಿದ್ದ ನೆನಪು. ಅಂದರೆ ಯಾರಿಗೆ ಓಟು ಹಾಕಬೇಕು ಅಂತ ಅವರು ತಿಳಿಸಿದವರಿಗೇ ಅವರ ಎದುರೇ ಕೂತು ಓಟು ಹಾಕಿಸಿದ್ದರು ಎಂದು ಪ್ರತೀತಿ. ಆಗ ನಾವೆಲ್ಲ ಇನ್ನೂ ಸಣ್ಣ ಮಕ್ಕಳು. ಈಗ ಕಾಲವೆಲ್ಲಾ ಬದಲಾಗಿ ಹೋಗಿದೆ. ಜನರಲ್ಲಿ ನಿಷ್ಠೆ ನಿಯತ್ತುಗಳೇ ಮರೆಯಾಗುತ್ತಿದೆ. ಹಣವೊಂದಿದ್ದರೆ ಏನೂ ಮಾಡಲು ಸಾಧ್ಯ ಎಂದು ಭಾವಿಸಿಕೊಳ್ಳುವವರೇ ತುಂಬಿಹೋಗಿದ್ದಾರೆ. ಹೊರತು ವಿಶ್ವಾಸ, ನಂಬಿಕೆ ಇವು ಯಾವುದೂ ಬದುಕಿಗೆ ಅನಿವಾರ್ಯವಲ್ಲವೆಂಬ ಭಾವನೆ ಮನುಷ್ಯನನ್ನು ಆವರಿಸಿದೆ. ಇರಲಿ
ಐದನೆಯ ಕ್ಲಾಸಿಗೆ ಮುದೂರಿ ಶಾಲೆಯಿಂದ ಹಾಲಾಡಿ ಶಾಲೆಗೆ ಸೇರಿದಂತೆಯೇ ನನ್ನ ಮನೆಯೂ ಚೇರಿಕೆಯಿಂದ ಕಲ್ಲಟ್ಟೆಗೆ ವರ್ಗಾವಣೆಯಾಯಿತು, ನನ್ನ ಅತ್ತೆಯ ಮನೆಯಲ್ಲಿ ಯಾರಾದರೂ ಮಕ್ಕಳು ಬೇಕು ಎಂದು, ನನ್ನನ್ನು ಕಲ್ಲಟ್ಟೆಯ ಮನೆಯಲ್ಲಿ ಇರಲು ಹೇಳಿದರು. ಅಲ್ಲಿ ಇರುವವರೆಂದರೆ, ನಾನು, ಆ ಅತ್ತೆ ಮತ್ತು ಚಂದ್ರ ಭಟ್ಟರು, ಅವರ ಹೆಂಡತಿ ಸರಸ್ವತಕ್ಕ ಅವರ ಮಕ್ಕಳು. ನಮ್ಮ ಅಂಗಳದ ಆಚೆ ಬದಿಯಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಎಂಬ ಪುರೋಹಿತರ ಮನೆ. ಅವರಿಗೆ ಅತ್ತೆಯೇ ಆಶ್ರಯ ಕೊಟ್ಟದ್ದು. ಅದೆಲ್ಲಿಂದಲೋ ನೆಲೆಕೇಳಿಕೊಂಡು ಬಂದ ಅವರಿಗೆ ಕರುಣೆ ತೋರಿ, ಒಂದು ಹುಲ್ಲಿನ ಸೂರನ್ನೂ ಕಟ್ಟಿಸಿಕೊಟ್ಟು ಸಾಗೋಳ್ಳಿಗೆ ಸ್ವಲ್ಪ ಭೂಮಿಯನ್ನೂ ಗೇಣಿಗೆ ಕೊಟ್ಟಿದ್ದರು. ಅವರು ಊರಿನ ಆಚೆಈಚೆ ಮನೆಗಳ ಬ್ರಾಹ್ಮಣರ ಮನೆಯಲ್ಲಿ  ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಮನೆಯೆಂದರೆ ಎಡಭಾಗದಲ್ಲಿ ಒಂದು ಚಿಕ್ಕ ಅಡಿಗೆ ಮನೆ, ಪಕ್ಕದಲ್ಲಿ ಒಂದು ಚಾವಡಿ. ಅಷ್ಟೆ. ಮಣ್ಣಿನ ನೆಲ ಅದು ಬ್ಯಾಟರಿ ಸೆಲ್ಲಿನ ಒಳಗಿನ ಕಪ್ಪನ್ನೊ ಅಥವ ಕರಿಯನ್ನೋ ಬೆರೆಸಿ ಚೆನ್ನಾಗಿ ಒರೆಯುವ ಕಲ್ಲಿನಿಂದ ಒರೆದು ನಯಗೊಳಿಸಿದ, ಯಾವಾಗಲೂ ಸುಮಾರಾಗಿ ಸೆಗಣಿಯ ವಾಸನೆ ಬೀರುವ ಕಂದು ಬಣ್ಣದ ನೆಲ. ಎದುರುಗಡೆ ಒಂದು ಕಿರು ಅಂಗಳ. ಪಕ್ಕದಲ್ಲೇ ತುಳಸಿ ಗಿಡಗಳ, ದಾಸವಾಳ ಮತ್ತು ಇತರ ಬಣ್ಣಬಣ್ಣದ ಹೂವಿನ ಸಣ್ಣ ತೋಟ. ಒಂದು ತೆಂಗಿನ ಮಡಲಿನಿಂದ ಮಾಡಿದ ದಿಡಕಿಯ ಮರೆ. ಅಡುಗೆಯ ಮನೆಯ ಬಾಗಿಲು ಬಿಟ್ಟರೆ ಮತ್ತೆ ಬಾಗಿಲೇ ಇರಲಿಲ್ಲ. ಚಾವಡಿಯಲ್ಲೇ ಅವರು ಮಲಗುತ್ತಿದ್ದುದು. ದೇವರ ಕೋಣೆಯು ಅಡುಗೆಯ ಮನೆಯ ಒಳಗೆ ಇತ್ತು. ಅವರು ನಮ್ಮ ಮನೆಯ ಮೇಲೆ ಎಷ್ಟು ಅವಲಂಬಿತರಾಗಿದ್ದರೆಂದರೆ ಸ್ನಾನಕ್ಕೆ ಕುಡಿಯುವ ನೀರಿಗೆ ನಮ್ಮ ಮನೆಗೇ ಬರಬೇಕು. ಅವರ ಒಂದು ದನವೂ, ನಮ್ಮ ಮನೆಯ ಹಟ್ಟಿಯಲ್ಲಿ ಇರುವುದು. ಅಲ್ಲಿಗೇ ಅವರೆ ಬಂದು ಅವರ ದನಕ್ಕೆ ಹುಲ್ಲು ಹಾಕುವುದು, ಹಾಲು ಕರೆಯುವುದೂ ಮಾಡುತ್ತಿದ್ದರು. ಸಣ್ಣ ವಯಸ್ಸಿನಲ್ಲಿ ಕೆಲವೊಂದು ಘಟನೆಗಳು ಹೇಗೆ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಬಗ್ಗೆ  ಒಂದು ಸ್ವಾರಸ್ಯವಾದ ಕತೆ ಹೇಳುತ್ತೇನೆ. 

(ಮುಂದುವರಿಯುವುದು)

ಶನಿವಾರ, ಸೆಪ್ಟೆಂಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 11

ಮಳೆಗಾಲದಲ್ಲಿ ಶಾಲೆಗೆ ರಜೆ ಬಂತೆಂದರೆ ನಮ್ಮ ಕಾಟದಿಂದ ಮನೆಯವರಿಗೆಷ್ಟು ತಲೆಬಿಸಿಯೋ, ನಮಗೆ ಅಷ್ಟೇ ಸ್ವಾತಂತ್ಯ್ಮದ ಖುಷಿ. ಆಚೀಚೆ ಮನೆಯವರ  ಗಂಟಿಗಳ ಜೊತೆಗೆ ಸ್ನೇಹಿತರೊಂದಿಗೆ, ನಮ್ಮ ಗಂಟಿಗಳನ್ನು ಹರೀನ್ ಗುಡ್ಡೆಗೆ ಮೇಯಿಸಲು ಅಟ್ಟಿಕೊಂಡು ಹೋಗುವುದೂ ಅದರಲ್ಲಿ ಒಂದು. ಬೆಳಿಗ್ಗೆ ಹೋದರೆ ಸಂಜೆಯಾದರೂ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಕತ್ತಲಾದರೂ ಮನೆಗೆ ಬರುವ ಮನಸ್ಸಾಗುವುದಿಲ್ಲ. ಗುಡ್ಡೆಯಲ್ಲಿ ಅದೂ ಇದೂ ಹಣ್ಣು ಪಣ್ಣು ಇರುತ್ತದಲ್ಲ. ಅದನ್ನೇ ಹಸಿವಾದರೆ ತಿಂದುಕೊಂಡು ಇರಬಹುದು. ಕಿಸ್ಕಾರ ಹಣ್ಣಿನಿಂದ ಹಿಡಿದು ಗರಚನ ಹಣ್ಣು ಇದರ ಕಾಯಿ ಹುಳಿ ಆದರೆ ಬಹಳ ರುಚಿ, ಸೂರಿ ಹಣ್ಣು, ಜಡ್ಮುಳ್ ಹಣ್ಣು, ಬುರ್ಕಿ ಹಣ್ಣು, ಚೇಂಪಿ ಹಣ್ಣು,  ನೇರಳೆ, ಬನ್ನೇರಳೆ ಒಂದಾ ಎರಡಾ. ಮನೆಯಲ್ಲಿ ಬೈಯದೇ ಇರುತ್ತಿದ್ದರೆ  ಒಂದೆರಡು ದಿನ ಅಲ್ಲಿಯೇ ಕಳೆಯಬಹುದಿತ್ತು ಎಂದೂ ಮನಸ್ಸಾಗುತ್ತದೆ. ಆದರೆ ಒಂದು ಕಷ್ಟವೆಂದರೆ ಅಲ್ಲಿ ಮಲಗಲಿಕ್ಕೆ ಸರಿಯಾದ ಜಾಗ ಇಲ್ಲ. ಮಳೆಗಾಲ, ಚಳಿ ಬೇರೆ. ಮಳೆ ಬಂದರೆ ಕಷ್ಟ. ಮಳೆಗೆ ಅಂತ ಕಂಬಳಿಕುಪ್ಪಿ ತೆಗೆದುಕೊಂಡು ಹೋಗುತ್ತಿದ್ದರೂ ಅಲ್ಲಿ ಮಲಗುವ ಧೈರ್ಯ ಹುಚ್ಚುತನದ್ದೇ. ಆದರೆ ಅಲ್ಲಿಯ ಪ್ರಕೃತಿ ಸೌಂದರ್ಯ ಸೌಂದರ್ಯವೆ. ಎಲ್ಲಿ ನೋಡಿದರೂ ಸಮತಟ್ಟಾದ ಜಾಗದ ನೆಲಕ್ಕೆ ಹಾಸಿದಂತೆ ಕರಡ ಎಂಬ ಹಸಿರುಹುಲ್ಲು. ಅಲ್ಲಲ್ಲಿ ಗೋವೆಮರಗಳು, ನೇರಳೆಮರಗಳು, ಮುಳ್ಳುಪೊದೆಗಳು, ಕಲ್ಲು ಬಂಡೆಗಳು. ಅಲ್ಲಿ ಒಂದು ಕಡೆಯಲ್ಲಿ ದೊಡ್ಡ ಧೂಪದ ಮರದ ಬುಡದಲ್ಲಿ ಯಾರೋ ಕಲ್ಲಿನ ಕಟ್ಟೆಯನ್ನು ಕಟ್ಟಿ ಕುಳಿತುಕೊಳ್ಳಲೂ ವ್ಯವಸ್ಥೆ ಮಾಡಿದ್ದರು. ಬೇಸರವಾದರೆ ಹಾಗೆಯೇ ಮುಂದಕ್ಕೆ ಹೋಗಿ ಸ್ವಲ್ಪ ಕೆಳಗೆ ಇಳಿದರೆ ಹರಿಯುವ ನೀರಿನ ತೊರೆ. ಬೇಕೆನಿಸಿದರೆ ನೀರಿನಲ್ಲಿ ಕುತ್ತಿಗೆಯವರೆಗೆ ಮುಳುಗಿ ಕುಳಿತುಕೊಳ್ಳಬಹುದು. ಹರಿಯುವ ನೀರು, ಬಾಯಾರಿದರೆ ಕುಡಿಯಲೂ ಆಗುತ್ತದೆ.
 ಈಗ ಆ ಗುಡ್ಡೆಯನ್ನು ಪೋರೆಸ್ಟ್ ಇಲಾಖೆ ಸ್ವಾಧೀನ ಮಾಡಿಕೊಂಡು ಸುತ್ತಲೂ ಬೇಲಿ ಹಾಕಿದೆಯಂತೆ. ಪ್ರತೀ ವರ್ಷ ಗೇರು ಮರವನ್ನು ಗುತ್ತಿಗೆಗೆ ಕೊಟ್ಟು ಕಾವಲು ಕಾಯುವುದಲ್ಲದೇ, ಊರಿನವರ ದನಗಳು ಬಿಡಿ, ಮನುಷ್ಯರಿಗೇ ಹೋಗಲು ಬಿಡುವುದಿಲ್ಲವಂತೆ. ಈಗ ಹಳ್ಳಿಯ ಮನೆಗಳಲ್ಲಿ ಗಂಟಿಗಳೂ ಕಡಿಮೆಯಾಗಿವೆ. ಅಷ್ಟೆಲ್ಲ ದೂರ ಹೋಗಿ ಮೇಯಿಸುವುದಕ್ಕೂ ಮನೆಯಲ್ಲಿ ಜನ ಇಲ್ಲ .
ಹಾಲಾಡಿ ಪೇಟೆಯಲ್ಲಿ ರಾಮಣ್ಣ ಶೆಟ್ರು (ಹೆಸರು ಮೋನಪ್ಪ ಶೆಟ್ರು ಅಂತ ವಿವೇಕ ಮಿತ್ಯಂತಾಯರು ತಿಳಿಸಿದರು)  ಅಂತ ಒಬ್ಬರು ಮುದುಕರಿದ್ದರು. ಅವರಿಗೆ ಸ್ವಲ್ಪ ಅರೆಮರುಳು. ಪೇಟೆಯ ರಸ್ತೆಯುದ್ದಕ್ಕೂ ತನ್ನಷ್ಟಕ್ಕೆ ಏನಾದರೂ ಮಾತನಾಡುತ್ತಾ ಹೋಗುತ್ತಿದ್ದರು. ಬೋಳು ತಲೆ, ಕುರುಚಲು ಗಡ್ಡ. ಆದರೆ ಯಾರಿಗೂ ಉಪದ್ರವ ಮಾಡುವುದಾಗಲೀ, ಹೆದರಿಸುವುದಾಗಲೀ ಮಾಡಿದವರಲ್ಲ. ನಾವು ಹಾಲಾಡಿ ಶಾಲೆಗೆ ಹೋಗುವಾಗ ಹಿರಿಯಣ್ಣ ನಾಯ್ಕರ ಮನೆಯಲ್ಲಿ ನಮ್ಮ ಮಧ್ಯಾಹ್ನದ ಬುತ್ತಿಯನ್ನು ಇಟ್ಟು ಹೋಗುತ್ತಿದ್ದೆವು. ಮಧ್ಯಾಹ್ನ ಅಲ್ಲಿಗೇ ಬಂದು ಊಟ ಮಾಡಿ ಹೋಗುವುದಿತ್ತು. ಆ ಹಿರಿಯಣ್ಣ ನಾಯ್ಕರ ಮನೆಯ ಎದುರಿಗೇ ಅವರ ಜವುಳಿ ಅಂಗಡಿ ಇತ್ತು. ಅವರೂ ನಮ್ಮ ಅಪ್ಪಯ್ಯನ ಯಕ್ಷಗಾನದ ಅಭಿಮಾನಿಗಳು. ಅನುಭವಿಗಳು. ನಾವು ಚಿಕ್ಕವರಿರುವಾಗ ಅಲ್ಲಿಯೇ ಅಪ್ಪಯ್ಯನ ಜೊತೆಗೆ ಹೋಗಿ ಬಟ್ಟೆ ತೆಗೆದು ಅದೇ ಅಂಗಡಿಯ ಎದುರು ಇರುವ ಅಚ್ಚುತ ಎಂಬವರಲ್ಲಿ ಅಳತೆ ಕೊಟ್ಟು ಅಂಗಿ ಚೆಡ್ಡಿ ಹೊಲಿಸುತ್ತಿದ್ದೆವು.
 ಈ ರಾಮಣ್ಣ ಶೆಟ್ರ ಮನೆ ಅಲ್ಲಿಯೇ ಎಲ್ಲೋ ಹತ್ತಿರದಲ್ಲಿ ಇದ್ದು ಹೆಚ್ಚಾಗಿ ಅಲ್ಲಿಯೇ ಆಚೆ ಈಚೆ ರಸ್ತೆಯಲ್ಲಿ ತಮ್ಮಷ್ಟಕ್ಕೇ ಮಾತಾಡಿಕೊಳ್ಳುತ್ತಾ ತಿರುಗಾಡುತ್ತಿದ್ದರು. ಅವರು ಹೆಚ್ಚು ಹೇಳುತ್ತಿದ್ದುದು ಹಾಲಾಡಿ ಮೇಳದ ಬಗ್ಗೆಯೇ. ಹ್ವಾಯ್ ನಿಮ್ಗ್ ಗೊತ್ತಿತ್ತಾ ? ಹಾಲಾಡಿ ಮೇಳ ಮುಂದಿನ ವರ್ಷ ಏಳತ್ತೆ. ಎನ್ನುವುದು ತಮ್ಮಷ್ಟಕ್ಕೆ. ನಮ್ಮ ಅಜ್ಜಯ್ಯ ಇರುವ ಕಾಲದಲ್ಲಿ ಹಾಲಾಡಿ ಮೇಳ ಇತ್ತಂತೆ. ಅಮೇಲೆ ಅದು ಏನೋ ಕಾರಣದಿಂದ ನಿಂತು ಹೋಗಿತ್ತು. ಆದರೆ  ಶೆಟ್ರು ಹಾಲಾಡಿ ಮೇಳ ಮುಂದಿನ ವರ್ಷ ಏಳುತ್ತದೆ ಎಂದು ಆಗಾಗ ಹೇಳುತ್ತಿದ್ದುದು ನಮಗೆ ತಮಾಷೆ.  ನಾವೂ ಅವರು ಎದುರಾದರೆ ಸಾಕು “ಹ್ವಾಯ್ ಹಾಲಾಡಿ ಮೇಳ ಏಳತ್ತಾ ಈ ವರ್ಷ? ಅಂತ ಕೇಳುವುದು. ಅವರು “'ಹೌದು. ಈ ವರ್ಷ ತಿರುಗಾಟ ಆಗೀಯೇ ಸಿದ್ದ' ಅಂತ. ನಾವು “ಕಲಾವಿದರು ಯಾರ್ಯಾರು ಮರ್ರೆ?  ಅಂದರೆ ಅವರು “ಯಾರ ಯಾರದೋ ಹೆಸರು ಹೇಳುತ್ತಾ ಮುಂದೆ ಹೋಗಿಯಾಯಿತು. ಪಾಂಡೇಶ್ವರ ಪುಟ್ಟ, ಕೊಳ್ಕೆಬೈಲ್ ಶೀನ, ಬಣ್ಣದ ಕುಷ್ಟ, ಕೊಕ್ಕರ್ಣೆ ನರಸಿಂಹ, ಮಾರ್ವಿ ಹೆಬ್ಬಾರ್ರು, ಅಂಪಾರ್ ವೈದ್ಯರು ಹೀಗೆ, ಅವರು ಹೇಳುವ ಕಲಾವಿದರಲ್ಲಿ ಕೆಲವರು ಆಗಲೇ ವಯಸ್ಸಾಗಿ ಸತ್ತೂ ಹೋಗಿಯಾಗಿತ್ತು. ನಮಗೆ ತಮಾಷೆ. ಹಾಲಾಡಿ ಮೇಳ ನಿಂತಿದ್ದರಿಂದಲೇ ಅವರಿಗೆ ತಲೆ ಕೆಟ್ಟಿತು ಅಂತ ಹೇಳುತ್ತಿದ್ದರು. ಆದರೆ ಅವರು ಈಗ ಇಲ್ಲದಿರಬಹುದು. ಯಾಕೆಂದರೆ ಅವರು ಆಗಲೇ ತುಂಬಾ ಮುದುಕರಾಗಿದ್ದರು. ಆದರೆ ಅಚ್ಚರಿ ಎಂದರೆ ಅವರ ಕನಸಿನ ಹಾಲಾಡಿ ಮೇಳ ಕೆಲವರ ಮುತುವರ್ಜಿಯಿಂದ ಪುನಹ ಪ್ರಾರಂಭವಾಗಿಯೇ ಬಿಟ್ಟಿತು. ಈಗಲೂ ಅದು ಯಶಸ್ವಿಯಾಗಿ ತಿರುಗಾಟ ಮಾಡುತ್ತಿದೆ. ಅವರು ಈಗ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೋ. ಅಥವ ಅವರ ಹುಚ್ಚೂ ಬಿಟ್ಟುಹೋಗುತ್ತಿತ್ತೋ ಯಾರಿಗೆ ಗೊತ್ತು.
ಆಚೆ ಮನೆಯ ಸುಬ್ರಾಯ ಭಟ್ರ ಮನೆಯಲ್ಲಿ ಮಾತ್ರ ರೇಡಿಯೋ ತಂದಿದ್ದರು. ಪ್ರತೀ ಬುಧವಾರ ರಾತ್ರಿ, ಶುಕ್ರವಾರ ಸಂಜೆ ಅದರಲ್ಲಿ ಯಕ್ಷಗಾನ ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲವಾದ್ದರಿಂದ ಅದನ್ನು ಕೇಳಲು ನಮ್ಮ ಬಿಡಾರ ಅಲ್ಲಿಗೆ ಹೋಗುತ್ತಿತ್ತು.
ಶಾಲೆಯಿಂದ ಬಂದ ಕೂಡಲೇ ಚಾವಡಿಯ ಬಲಬದಿಯ ಗೋಡೆಗೆ ಹೊಡೆದ ಮೊಳೆಗೆ ಚೀಲ ಸಿಕ್ಕಿಸಿ ಡ್ರೆಸ್ ಬದಲಾಯಿಸಿ ಮುಂದಿನ ಕೆಲಸ. ವಿದ್ಯುತ್ ಇರಲಿಲ್ಲ. ಚಿಮಣಿ ದೀಪದ ಸುತ್ತಲೂ ಕುಳಿತು ಓದುತ್ತಿದ್ದೆವು. ಮನೆಯಲ್ಲಿ ದೊಡ್ಡವರು ಕತ್ತಲಲ್ಲಿ ಕುಳಿತು ಮಾತಾಡುವಾಗ ಅವರ ಸ್ವರ ಎಲ್ಲಿಂದಲೋ ಕೇಳುತ್ತಿರುವಂತೆ ಭಾಸವಾಗುತ್ತಿತ್ತು. ಬರೆಯಲು ಜಗಲಿಯಲ್ಲಿ ಕೂತು ಚಾವಡಿಯ ಮೇಲೆ ಸ್ಲೇಟ್ ಇಟ್ಟು ಬರೆಯುವುದೂ ಪುಸ್ತಕ ಓದುವುದೂ ಮಾಡುತ್ತಿದ್ದೆವು. ರಾತ್ರಿ ಬೇಗ ಊಟ, ನಿದ್ದೆ. ಚಿಮಣಿ ಎಣ್ಣೆಯ ದೀಪ ಆದುದರಿಂದ ಚಿಮಣಿ ಎಣ್ಣೆ ಉಳಿಸಲು ಬೇಗ ಮಲಗುತ್ತಿದ್ದೆವು. ಚಾವಡಿಯಲ್ಲಿ ಎಲ್ಲರೂ ಮಲಗುವುದರಿಂದ ನಿದ್ದೆ ಬರುವವರೆಗೆ ಅದೂ ಇದೂ ಮಾತಾಡುತ್ತಾ ಮಲಗುತ್ತಿದ್ದೆವು. ನೆಂಟರು ಯಾರಾದರೂ ಬಂದಿದ್ದರೆ ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಅವರ ಮಾತುಕತೆ ಕತ್ತಲಲ್ಲೇ ನಡೆಯುತ್ತಿತ್ತು.

(ಮುಂದುವರಿಯುವುದು)

ಶುಕ್ರವಾರ, ಸೆಪ್ಟೆಂಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ ೧೦

ಹೀಗೇ ಮನೆಯಲ್ಲಿ ತಿರುಗಾಡುವಾಗ ಒಮ್ಮೆ ಆಚೆಮನೆ ಮತ್ತು ನಮ್ಮ ಮನೆಯ ಮಧ್ಯ ಭಾಗದಲ್ಲಿ ಇರುವ ಅಂಗಳದ ಮೂಲೆಯಲ್ಲಿ ಒಂದು ಜೊತೆ ಚಪ್ಪಲಿಯನ್ನು ಕಂಡೆ. ಹೊಸದೇನಲ್ಲ. ಯಾರೋ ಮರೆತು ಬಿಟ್ಟಿರಬೇಕು, ಅದು ನಮ್ಮ ಮನೆಯದ್ದಲ್ಲ ಎಂದು ಗೊತ್ತು. ಆದರೂ ಯಾರೋ ಬಿಟ್ಟು ಹೋಗಿದ್ದಾರೆ. ಬಿಳಿ ಚಪ್ಪಲಿ, ಚಂದ ಇತ್ತು. ಕಾಲಿಗೆ ಹಾಕಿಕೊಂಡೆ. ದೊಡ್ಡವರ ಚಪ್ಪಲಿಯಾದ್ದರಿಂದ ಕಾಲು ಮುಂದಕ್ಕೆ ಹೋಗಿ ಹಿಂದಿನ ಭಾಗ ಖಾಲಿ ಉಳಿಯಿತು. ಅದನ್ನು ಕತ್ತರಿಸಿದರೆ ಸರಿಯಾದೀತು ಅಂತ ತಲೆಗೆ ಹೋಯಿತು. ತಡ ಮಾಡಲಿಲ್ಲ. ಅದನ್ನು ಮನೆಗೆ ತಂದು ಚಪ್ಪಲಿಯ ಹಿಂದಿನ ಭಾಗವನ್ನು ಕತ್ತಿಯಲ್ಲಿ ಕಡಿದು ಕತ್ತರಿಸಿ ಹಾಕಿದೆ. ಹಾಕಿ ನೋಡಿದೆ. ನನ್ನ ಮಾಮೂಲಿ ಚಪ್ಪಲಿಗಿಂತ ಅದು ಚಂದ ಇತ್ತಲ್ಲ. ಕುಷಿಯಾಯಿತು. ಹಾಕಿಕೊಂಡು ಚಪ್ಪಲಿಯನ್ನು ನೆಲಕ್ಕೆ ತಾಗಿಸಿ ಜಾರಿಸುತ್ತಾ ತಿರುಗಾಡಲು ಶುರು ಮಾಡಿದೆ. ಅಮ್ಮನೋ, ಯಾರೋ ಅದನ್ನು ಕಂಡವರು “ಅದು ಯಾರದ್ದು ಮಾಣಿ? ಎಲ್ಲಿಂದ ತಂದೆ?” ಎಂದರೆ “ಅಲ್ಲಿ ಬಿದ್ದಿತ್ತಪ” ಎಂದು ಹಾರಿಕೆಯ ಉತ್ತರ ಕೊಟ್ಟೆ.
ಮರುದಿನ ಆಚೆಯ ಮನೆಯ ಸುಬ್ರಾಯ ಭಟ್ರ ಮನೆಯಲ್ಲಿ ಗಲಾಟೆ ಎದ್ದಿತ್ತು. ಅವರ ಹೆಂಡತಿ ಶಖು ಅಕ್ಕನ ಚಪ್ಪಲಿ ಕಾಣೆಯಾಗಿತ್ತು. “ಇಲ್ಲಿಯೇ ಇಟ್ಟಿದ್ದೆ. ಎಲ್ಲಿ ಹೋಯಿತು?” ಅಂತ. ಇದು ನನ್ನ ಎರಡನೆಯ ಅಥವ ಮೂರನೆಯ ಕ್ಲಾಸಿನಲ್ಲಿ ಇರುವಾಗ ನಡೆದದ್ದಿರಬಹುದು. ಆ ಸುಬ್ರಾಯ ಭಟ್ರು ನನ್ನ ಮಾಸ್ಟ್ರು ಕೂಡ ಆಗಿದ್ದರು. ಅವರ ಹುಡುಕಾಟದಲ್ಲಿ ಅದು ನಮ್ಮ ಮನೆಯಲ್ಲಿ ಪತ್ತೆಯಾಯಿತು. ಆದರೆ ಅದನ್ನು ಹಾಕಿಕೊಳ್ಳುವಂತಿರಲಿಲ್ಲ.  ಹಿಂದಿನ ಭಾಗ ಕತ್ತರಿಸಿದ್ದೆನಲ್ಲ. ನಾನು ಏನೂ ತಿಳಿಯದವನಂತೆ ಸುಮ್ಮನೇ ಇದ್ದೆ. ಅಮ್ಮನೇ ಹೇಳಿದಳು “ಅದು ನಮ್ಮ ಮಾಣಿಯ ಕೆಲಸ ಇರ್ಕ್ ಮರ್ರೆ. ಯಾವುದೋ ಮೆಟ್ಟು ಹಾಕಿಕೊಂಡು ತಿರುಗುತ್ತಿತಪ” ಅಂದಳು. ಸರಿ, ಮಾಸ್ಟ್ರಿಂದ ಬುಲಾವ್ ಬಂತು. ನಾನು ಒಮ್ಮೆ ಹೋಗದೇ ತಡಮಾಡಿದರೂ ಕೊನೆಗೆ ಎರಡನೇ ಕರೆ ಬಂದಾಗ ತಪ್ಪಿಸಿಕೊಳ್ಳಲಾರದೇ ಹೋಗಿ ಅವರ ಮುಂದೆ ಪಾಪದವನಂತೆ ತಲೆ ತಗ್ಗಿಸಿ ನಿಂತೆ. ಅವರು ಒಮ್ಮೆ ಜೋರು ಮಾಡಿ “ ಹೌದನ? ನಿನ್ನ ಕೆಲ್ಸವನಾ ಇದು? ಅಷ್ಟೂ ಗೊತ್ತಾತಿಲ್ಯಾ ನಿಂಗೆ? ಬೇರೆಯವರ ವಸ್ತು ಕದ್ದಿದ್ದೂ ಅಲ್ಲದೇ ಅದನ್ನು ಕತ್ತರಿಸಿ ಹಾಕಿಕೊಳ್ಳದ ಹಾಗೆ ಮಾಡಿಬಿಟ್ಯಲ್ಲ. ಇನ್ನು ಹೀಗೆಲ್ಲಾ ಮಾಡಬಾರದು. ಹೋಗು,.” ಅಂತ ಬುದ್ಧಿಹೇಳಿ ಬಿಟ್ಟುಬಿಟ್ಟರು. ನಮ್ಮ ಮಾಸ್ಟ್ರು ಅಲ್ಲವೇ ? ಒಮ್ಮೆ ಬಚಾವಾದರೆ ಸಾಕಿತ್ತು. ನಾಳೆ ಮತ್ತೆ ಶಾಲೆಯಲ್ಲಿ ಇದರ ಬಗ್ಗೆ ಪುನಹ ಪಾಠ ಉಂಟೋ ಏನೋ ಎಂದುಕೊಳ್ಳುತ್ತಾ ಮನೆಗೆ ಬಂದೆ.
ಇನ್ನೊಮ್ಮೆ ಏನಾಯಿತೆಂದರೆ, ನಾವು ಕಲ್ಲಟ್ಟೆಯ ಅತ್ತೆ ಮನೆಗೆ ಹೋದಾಗ ಅಲ್ಲಿ ನಮ್ಮ ಮನೆಯವರೂ, ಕಲ್ಲಟ್ಟೆಯ ಮನೆಯವರೂ ಸೇರಿ ಹಲಸಿನ ಹಪ್ಪಳ ಮಾಡುವ ಸಿದ್ಧತೆ ಮಾಡಿದ್ದರು. ಒಳ್ಳೆಯ ಸೊಳೆ ಇರುವ ಹತ್ತಾರು ಹಲಸಿನ ಕಾಯಿಯನ್ನು ತಂದು, ಕಡಿದು ಹಾಕಿದರು. ಅದನ್ನು ಸೇಡು ಸೇಡು ಮಾಡಿ ಮುಳ್ಳು ತೆಗೆದು ಒಬ್ಬರು ಹಾಕಿದರೆ ಎಲ್ಲರೂ ಸುತ್ತ ಕುಳಿತು ಸಾರೆ ಬಿಡಿಸಿ ಸೊಳೆ ತೆಗೆದರು. ಅದನ್ನು ಅಟ್ಟದಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಅರೆಯುವ ಕಲ್ಲಿನಲ್ಲಿ ಹಾಕಿ ಒನಕೆಯಲ್ಲಿ ಕುಟ್ಟಿ ಹದವಾಗಿ ಹಿಟ್ಟು ಮಾಡಿ ಅದನ್ನು ಉಂಡೆ ಉಂಡೆ ಮಾಡಿ ಇಟ್ಟದ್ದೂ ಆಯಿತು. ಇನ್ನು ಅದನ್ನು ಒಂದು ಒತ್ತು ಮಣೆಗೆ ಹಾಕಿ ಒತ್ತಿ, ಹಪ್ಪಳ ಮಾಡಿ ಚಾಪೆಯಲ್ಲಿ ಹಾಕಿ ಒಣಗಿಸಿದರೆ  ಹಪ್ಪಳ ರೆಡಿ. ಮನೆಯಲ್ಲಿ ತುಂಬಾ ಜನ ಹೆಂಗಸರೂ, ಮಕ್ಕಳೂ ಇದ್ದರೆ ಅದೊಂದು ಸಂಭ್ರಮದ ಕೆಲಸ. ಆದರೆ ಆ ಹಿಟ್ಟು ಸ್ವಲ್ಪ ಖಾರಖಾರ ಇದ್ದರೆ ನಮಗೆ ಹಪ್ಪಳಕ್ಕಿಂತ ಹಲಸಿನ ಹಪ್ಪಳದ ಹಿಟ್ಟಿಗೆ ಬಜಬಜ ತೆಂಗಿನ ಎಣ್ಣೆ ಹಾಕಿಕೊಂಡು ಬಿಸಿಬಿಸಿಯಿರುವಾಗಲೇ ತಿನ್ನಲು ಇಷ್ಟ.
ನಾನು ಮೆಲ್ಲ ಅಮ್ಮನ ಹಿಂದಿನಿಂದ ಹೋಗಿ ಗುಸುಗುಸು ಮಾಡಿ ಬೇಡಿದ ಕೂಡಲೆ ಅಮ್ಮ ಒಮ್ಮೆ ಹಿಟ್ಟನ್ನು ಕೈಮೇಲೆ ಹಾಕಿದಳು ಅಂತಾಯಿತು. ಅದು ತಿಂದಾದ ಕೂಡಲೇ ಮತ್ತೆ ತಿನ್ನಲು ಆಸೆಯಾಯ್ತು. ಅಮ್ಮನೋ ಯಾರೋ “ “ಆಚೆ ಹೋಗ್ ಮಾಣಿ, ಈಗಲೇ ಎಲ್ಲ ತಿಂದರೆ ಹಪ್ಪಳ ಅಂತ ಮಾಡುವುದು ಯಾಕೆ?.. ಈಗ ಬೇಡ, ಹಪ್ಪಳ ಮಾಡಿಯೇ ತಿನ್ನುವ” ಎಂದರು. ನನಗೆ ಮರ್ಯಾದೆ ಹೋಯಿತು. ಬೇಕೆಂದು ಹಠ ಹಿಡಿದು ಅಳಲು ಶುರು ಮಾಡಿದೆ. ನೆಲದ ಮೇಲೆ ಬಿದ್ದು ಹೊರಳಾಡಿ ಕಿರುಚಾಡಿದೆ. ಗೋಳಾಡಿದೆ. ಕೊನೆಗೆ ನನ್ನ ರಂಪಾಟ ನೋಡಿ ಅತ್ತೆಗೆ ಸಿಟ್ಟು ಬಂತು. “ ಸುಮ್ನೇ ಆಯ್ಕಂತ್ಯಾ ಇಲ್ಯಾ? ಹೆಚ್ಚು ಹಠ ಮಾಡಿದ್ರೆ ತಲೆಯ ಮೇಲೆ ಸೆಗಣಿನೀರು ಹೊಯ್ಕಾತ್” ಅಂದರು. ಎಲ್ಲರಿಗೂ ನನ್ನ ಬೊಬ್ಬೆ ಕೇಳಿ ರಗಳೆಯಾಗಿರಬೇಕು.  ಮನೆಕೆಲಸದ ರಾಮನಿಗೆ ಇಂದಕ್ಕ ಅನ್ನುವವರು ಆಗ ಆ ಮನೆಯಲ್ಲೇ ಅತ್ತೆಯ ಜೊತೆ ಇದ್ದವರು “ ಮಾಣಿ ರಗ್ಳಿ ಜಾಸ್ತಿ ಆಯ್ತ್. ಸೆಗಣಿ ತಕಂಬಾ ರಾಮ. ಬಾಲ್ದಿಗೆ ಹಾಕಿ ನೀರಲ್ಲಿ ಕರಡಿ(ಕದಡಿ) ಹೊಯ್ವ” ಎಂದರು. ನಾನು ಹೆದರಲಿಲ್ಲ. ನಮ್ಮ ಶ್ರೀಧರ ಅಣ್ಣನೂ ಅಲ್ಲಿಯೇ ಇದ್ದು ಎಲ್ಲರೂ ಸೇರಿ ನನ್ನ ರಟ್ಟೆ ಹಿಡಿದು ಬಾವಿಕಟ್ಟೆಗೆ ಎಳೆದುಕೊಂಡೇ ಹೋದರು. ತಪ್ಪಿಸಿಕೊಳ್ಳುವ, ಬೊಬ್ಬೆ ಹೊಡೆಯುವ ನನ್ನ ಹೋರಾಟ ಮುಂದುವರಿದಿತ್ತು. ಅಷ್ಟರಲ್ಲಿ ಅನುಮಾನಿಸಿ ನಿಂತು ನೋಡುತ್ತಿದ್ದ ಕೆಲಸದ ರಾಮನಿಗೆ, ಮತ್ತೊಮ್ಮೆ ಆಜ್ಞೆಯಾಯ್ತು. ಅವನು ಏನಾದರೂ ಮಾಡಿಕೊಳ್ಳಲಿ ಎಂದು ಹಟ್ಟಿಗೆ ಹೋಗಿ ಒಂದು ಬೊಗಸೆ ಸೆಗಣಿಯನ್ನು ತಂದುಕೊಟ್ಟ. ಅದನ್ನು ಮತ್ಯಾರೋ ಬಾಲ್ದಿಗೆ ಹಾಕಿ ನೀರಿನಲ್ಲಿ ಕರಡಿ(ಕದಡಿ)ಯೇ ಬಿಟ್ಟರು. ನನ್ನನ್ನು ಎಳೆದು ಮಧ್ಯ ನಿಲ್ಲಿಸಿ ತಲೆಯ ಮೇಲೆ ಹೋಯ್ದೇ ಬಿಟ್ಟರು. ನನಗೆ ಏನಾಗುತ್ತದೆ ಅಂತ ಗೊತ್ತಾಗುವುದರ ಒಳಗೆ ಉಸಿರು ಕಟ್ಟಲು ಶುರುವಾಯಿತು. “ದಮ್ಮಯ್ಯ ಬಿಟ್ಟು ಬಿಡಿ. ಇನ್ನು ಮಾಡುವುದಿಲ್ಲ” ಎಂದು ಗೋಗರೆದೆ. ಹರಸಾಹಸ ಮಾಡಿ ಬಿಡಿಸಿಕೊಂಡು ಓಡಿಬಿಟ್ಟೆ. ಒಮ್ಮೆ ಶುದ್ದ ಆಯಿತು.. ಅಂದಿನಿಂದ ಬಹಳ ದಿನಗಳವರೆಗೆ ನಾನು ಹಠ ಮಾಡಿದರೆ ’ಬಾಲ್ದಿ ತರ್ಕಾ? ಸಗಣಿ ನೀರು ಸುರಿಕಾ” ಎನ್ನುವವರೆ. ನನಗೆ ಆ ಭಯಂಕರ ಅನುಭವದಿಂದ ಹೆದರಿಕೆಯಾಗಿ, ಹಠ ಬಿಟ್ಟು ಸುಮ್ಮನಾಗುತ್ತಿದ್ದೆ.

(ಮುಂದುವರಿಯುವುದು)

ಗುರುವಾರ, ಸೆಪ್ಟೆಂಬರ್ 21, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  9

ನನಗೆ ದೊಡ್ಡ ರಹಸ್ಯವೊಂದು ತಿಳಿದಂತಾಯಿತು. ಅಷ್ಟು ದೊಡ್ಡ ವೇಷಧಾರಿಯಾದರೂ ಮಂಜು ನಾಯ್ಕರಿಗೆ ದಿಗಣ ಕುಣಿಯಲಿಕ್ಕೆ ಬರುವುದಿಲ್ಲ ಎಂಬುದು. ವಿಷಯ ಗೊತ್ತಾದ ಮೇಲೆ ಅದನ್ನು ಯಾರ ಬಳಿಯಾದರೂ ಹೇಳಬೇಕಾಯಿತು. ನನ್ನ ಅಕ್ಕನ ಮಗ ವೆಂಕಟೇಶ, ಅದೇ ಒಂದೆರಡು ದಿನದಲ್ಲಿ ಅವನ ಅಪ್ಪಯ್ಯನೂ ಮೇಳದ ಯಜಮಾನರೂ ಆದ ಶ್ರೀಧರ ಹಂದೆಯವರೊಂದಿಗೆ ಆಟ ನೋಡಲು ಕ್ಯಾಂಪಿಗೆ ಬಂದಾಗ, ಅವನಲ್ಲಿ ಈ ಗುಟ್ಟು ಹೇಳಿದೆ. “ನಿನಗೆ ಗೊತ್ತಾ? ಮಂಜು ನಾಯ್ಕರಿಗೆ ದಿಗಣ ಕುಣಿಯಲು ಬರುವುದಿಲ್ಲವಂತೆ”. ಎಂದು. ಅವನು ಒಪ್ಪಲಿಲ್ಲ. “ಸಾಧ್ಯವೇ ಇಲ್ಲ” ಅಂದ.  ನಾನು ಬಿಡಲಿಲ್ಲ. ಆ ದಿನ ಪರೀಕ್ಷೆ ಮಾಡುವುದು ಎಂದು ತೀರ್ಮಾನವಾಯಿತು. ಆ ದಿನದ ರಾತ್ರಿ ಆಟದಲ್ಲೂ ಅವರು ದಿಗಣದ ಕುಣಿತ ಕುಣಿಯದೇ ಪದ್ಯವನ್ನೇ ನೇರ ಎತ್ತುಗಡೆ ಮಾಡಿದರು. ಅವನಿಗೂ ದೃಢವಾಯಿತು. ಮಂಜು ನಾಯ್ಕರಿಗೆ ಗೊತ್ತಿಲ್ಲದ ಕುಣಿತವೊಂದು ನಮಗೆ ಗೊತ್ತಿದೆ ಅಂತ ಆಯತು. ದೊಡ್ಡ ಸಂಗತಿ. ಅಷ್ಟಕ್ಕೇ ಬಿಡಲಾದೀತೇ? ಇನ್ನು ಅವರನ್ನೇ ಕೇಳಿ ಅಂತಿಮ ತೀರ್ಮಾನ ಮಾಡುವುದೆಂದು ಎಣಿಸಿದೆವು.
ನಾವಿಬ್ಬರೂ ಮರುದಿನ ರಾತ್ರಿ ಚೌಕಿಯಲ್ಲಿ ಮಂಜುನಾಯ್ಕರು ಮುಖಕ್ಕೆ ಬಣ್ಣ ಹಚ್ಚುತ್ತಾ ಕುಳಿತಾಗಲೇ, ಮೆಲ್ಲನೇ ಹೋಗಿ ಆಚೆಬದಿ ಒಬ್ಬರು, ಈಚೆಬದಿ ಒಬ್ಬರು ಕುಳಿತೆವು. ಅದೂ ಇದೂ ಮಾತಾಡುತ್ತಾ, “ನೀನು ಕೇಳು, ನೀನು ಕೇಳು” ಅಂತ ನಮ್ಮ ನಮ್ಮೊಳಗೆ ಕೈಸನ್ನೆ, ಕಣ್ಣು ಸನ್ನೆ ಆಯಿತು. ಕೊನೆಗೆ ನಾನೇ ಧೈರ್ಯಮಾಡಿ ಕೇಳಿಯೇಬಿಟ್ಟೆ. “ಹೌದಾ? ನಿಮಗೆ ದಿಗಣ ಕುಣಿಯಲು ಬರುವುದಿಲ್ಲವಂತಲ್ಲಾ” ಎಂದು. ಅವರು ತಿರುಗಿ ನನ್ನನ್ನು ಒಮ್ಮೆ ನೋಡಿ. “ಆಂ! ನಿನಗೆ ಯಾರು ಹೇಳಿದ್ದದು?” ಎಂದರು. ಅವರು ಸ್ವಲ್ಪ ಗಟ್ಟಿಯಾಗಿಯೇ ಹೇಳಿದ್ದರಿಂದ ಆಚೆ ಈಚೆ ಕುಳಿತವರಿಗೂ ಅದು ಕೇಳಿಸಿತು. “ಏನಂತೆ?” ಎಂದು ಎಲ್ಲರೂ ತಿರುಗಿ ನೋಡಿದರು. “ನಮ್ಮ ಭಾಗ್ವತರ ಮಾಣಿ, ಅಡ್ಡಿಲ್ಲೆ ಮರ್ರೆ! ನನಗೆ ದಿಗಣ ಕುಣೀಲಿಕ್ಕೆ ಬತ್ತಿಲ್ಲೆ. ಅಂಬ್ರು” ಎಂದು ಜೋರಾಗಿ ಹೇಳಿ ನಗಾಡಿದರು. ದೊಡ್ಡ ಸಾಮಗರು ಅಲ್ಲಿಯೇ ಹಿಂದಿನ ಬದಿಯಲ್ಲಿ ಅಂಗಾತ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು ನಿದ್ರೆಯಲ್ಲಿದ್ದವರಂತೆ ನಟಿಸುತ್ತಾ ನಮ್ಮ ಮಾತನ್ನು ಕೇಳುತ್ತಿದ್ದರು. ಎಲ್ಲರೂ ನಗಾಡಿಯಾಯಿತು.  ಯಾರು ಹೇಳಿದ್ದು? ಹೇಗೆ ಗೊತ್ತಾಯಿತು? ಅಂತ ಎಲ್ಲರೂ ಪ್ರಶ್ನೆ ಕೇಳುವವರೆ. ಸಾಮಗರು ಏನೂ ತಿಳಿಯದವರಂತೆ, ಸಂಬಂಧವೇ ಇಲ್ಲದವರಂತೆ ಸುಮ್ಮನೇ ಮಲಗಿದ್ದರು. ಅಲ್ಲಿಗೆ, ಅದು ಸುಳ್ಳು ಎಂದು ತಿಳಿಯಲು ನಮಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ನಮಗೆ ನಾಚಿಕೆಯಾಯಿತು. ನಾನೂ ವೆಂಕಟೇಶನೂ ಅಲ್ಲಿಂದ ಮೆಲ್ಲನೆ ತಪ್ಪಿಸಿಕೊಂಡು ಓಡಿಯೇಬಿಟ್ಟೆವು. ಅಂತೂ ಮುಂದೆ ತುಂಬಾ ಸಮಯದವರೆಗೆ, ನನ್ನನ್ನು ನೋಡಿದ ಕೂಡಲೇ ಅವರೆಲ್ಲಾ ಅದನ್ನೇ ಆಡಿ ಆಡಿ ತಮಾಷೆ ಮಾಡುತ್ತಿದ್ದರು.
ಚಂದ್ರ ಭಟ್ರು ಮಳೆಗಾಲದಲ್ಲಿ ಮನೆಯಲ್ಲಿ ಇರುವಾಗ ಗುಡ್ಡೆಯ ಮೇಲೆಲ್ಲಾ ತಿರುಗಿ, ಒಂದು ಸಪೂರ ಜಾತಿಯ ಬೀಳು ತರುತ್ತಿದ್ದರು. ಅದನ್ನು ಬಿಗಿಯಾಗಿ ನೆಯ್ದು ಅದರಲ್ಲಿ ವೀಳ್ಯಹಾಕುವ ಎಲೆ ಪೆಟ್ಟಿಗೆ, ಬಿಸಿ ಪಾತ್ರೆ ಇಡಲು ಇರಕಿ, ತರಕಾರಿ ಪಲ್ಯ ಬಿಸಿಯಲ್ಲಿ ನೀರು ಸೋಸುವುದಕ್ಕೆ ಸಿಬ್ಬಲು, ಕೊಡಪಾನ ಇಡುವ ಚಂಡೆ ಇತ್ಯಾದಿ ಅನೇಕ ಪರಿಕರಗಳನ್ನು ಮಾಡುತ್ತಿದ್ದರು. ಗಂಟಿಗಳು ದೂರಕ್ಕೆ ಹೋದರೆ ಗೊತ್ತಾಗಲಿ ಎಂದು ಅವುಗಳ ಕುತ್ತಿಗೆಗೆ ಮರಾಣಿ ಮಾಡಿಕಟ್ಟುತ್ತಿದ್ದರು. ಬೆಳೆದ ದೊಡ್ಡ ಬಿದಿರಿನ ಅಂಡೆಗೆ ಆಚೆ ಈಚೆ ದೇವಸ್ಥಾನದ ಗಂಟೆಯ ಮಗುವಿನಂತಹದ್ದನ್ನು ಮರದಲ್ಲಿ ಕತ್ತರಿಸಿಮಾಡಿ ದನಗಳ ಕುತ್ತಿಗೆಗೆ ಕಟ್ಟುತ್ತಿದ್ದರು. ದನಗಳು ಮೇಯುವಾಗ, ಕುತ್ತಿಗೆ ಅಲ್ಲಾಡಿಸಿದಾಗ ಅದು ಬಿದಿರಿನ ಅಂಡೆಗೆ ಜೋರಾಗಿ ಹೊಡೆದುಕೊಂಡು ಶಬ್ಧ ಆಗುತ್ತಿತ್ತು. ಕೆಲವೊಮ್ಮೆ ಆ ಮರಾಣಿ ನಮ್ಮ ಕುತ್ತಿಗೆಯಲ್ಲೂ ರಾರಾಜಿಸಿ ಆಟದ ವಸ್ತುವಾಗುತ್ತಿತ್ತು.
ಒಮ್ಮೆ ಯಕ್ಷಗಾನದ ಕಿರೀಟವನ್ನೂ ಬೀಳಿನಲ್ಲಿ ನೆಯ್ದು ಮಾಡಿ ಅದಕ್ಕೆ ಬಣ್ಣ ಹಚ್ಚಿ ಬೇಗಡೆ, ಕನ್ನಡಿಚೂರು ಹಚ್ಚಿ ಚೆನ್ನಾಗಿ ಕಾಣುವಂತೆ ಮಾಡಿದ್ದರು. ಹತ್ತಿ, ರಟ್ಟು, ಬಳೆ, ಕೊಡೆಯಹಿಡಿ, ಹುರಿ ಹಗ್ಗ ಇತ್ಯಾದಿಗಳನ್ನೆಲ್ಲ ಬಳಸಿಕೊಂಡು ವೀರಭದ್ರನ ಮುಖವಾಡ ಮಾಡಿದ್ದರು. ಅವರು ಕುಳಿತು ತನ್ಮಯರಾಗಿ ಅದನ್ನೆಲ್ಲಾ ಮಾಡುವಾಗ ನೋಡುವುದೇ ನಮಗೊಂದು ಕುಷಿ. ಅವರು ಮೂಡ್ ಇಲ್ಲದಿದ್ದ ದಿನ ಕೆಲಸ ನಿಲ್ಲಿಸಿದರೆ, ನಾವೇ “ಅದನ್ ಅಲ್ಲಿಗೇ ಬಿಟ್ರ್ಯಲೆ” ಎಂದು ನೆನಪಿಸಿ, ಕೆಲಸ ಮುಂದುವರಿಯುವಂತೆ ಮಾಡುತ್ತಿದ್ದೆವು. ಅಲ್ಲದೇ ಅವರು ಹಳೆಯ ಪಂಚೆಯನ್ನು ಹರಿದು ಅದರಲ್ಲಿ ಹುಲ್ಲನ್ನು ಬಿಗಿಯಾಗಿ ಸುತ್ತಿ ಕೇದಗೆ ಮುಂದಲೆಯ ಅಟ್ಟೆಯನ್ನು, ಅದಕ್ಕೆ ಸುತ್ತಲು ಹುಲ್ಲಿನ ಜಡೆಯನ್ನು ಮಾಡಿ, ಕೇದಗೆಮುಂದಲೆಯನ್ನು ಮನೆಯಲ್ಲೇ ತಯಾರು ಮಾಡಿದ್ದರು. ಅದನ್ನು ಕಟ್ಟಿಕೊಂಡು ಕಪ್ಪುಬಟ್ಟೆಯನ್ನು ಸುತ್ತಿ ಬಾಳೆಯ ಹಗ್ಗದಲ್ಲಿ ಬಿಗಿದು ಗೋಣಿದಾರ, ಟ್ವೈನ್ ದಾರವನ್ನು ಮೇಲಿನಿಂದ ಟೇಪ್ ನಂತೆ ಸುತ್ತಿ ಕೇದಗೆಮುಂದಲೆ ಸಿದ್ಧವಾಗುತ್ತಿತ್ತು. ಡ್ರೆಸ್ ಎಂದರೆ ಅಮ್ಮನ ಹಳೆಯ ಸೀರೆ, ಮನೆಯಲ್ಲಿರುವ ಹಳೆಯ ಬೆಡ್ ಶೀಟ್, ಗೋಣಿಚೀಲ, ಜಮಖಾನಗಳು. ಅವನ್ನೇ ಉಪಯೋಗಿಸಿಕೊಂಡು ವೇಷವನ್ನು ಮಾಡಿಕೊಳ್ಳುವುದು ನನಗೆ ಕುಷಿಯಾದ ಸಂಗತಿಯಾಗಿತ್ತು. ಮುಖಕ್ಕೆ ಪೌಡರ್, ಕುಂಕುಮ, ಅರಶಿನ, ಕಣ್ಣಿಗೆ ಕಾಡಿಗೆಗಳನ್ನು ಹಚ್ಚಿಕೊಂಡು. ವೇಷ ತಯಾರಾಗಿ ಮನ ಬಂದಂತೆ ಕುಣಿದು, ನಮ್ಮ ಆಟ ಜೋರಾಗಿ ನಡೆಯುತ್ತಿತ್ತು.

(ಮುಂದುವರಿಯುವುದು)

ಬುಧವಾರ, ಸೆಪ್ಟೆಂಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  8

ಮನೆಯ ಆಸುಪಾಸು ಎಲ್ಲಿ ಆಟವಾದರೂ ಅಪ್ಪಯ್ಯನ ಜೊತೆ ನಾನು ಹೋಗುವುದಿತ್ತು. ಸ್ವಲ್ಪ ಹೊತ್ತು ಆಟ ನೋಡಿ ಅಪ್ಪಯ್ಯ ಕೊಡಿಸಿದ ಮುಂಡಕ್ಕಿ ಉಪ್ಕರಿ, ನೆಲಗಡಲೆ ತಿಂದು ಮಲಗುವುದು. ಚೌಕಿಯಲ್ಲಿ ಮಲಗುವುದಾದರೆ ಶಾಲನ್ನೂ ಕೊಡುತ್ತಿದ್ದರು. ಕಲಾವಿದರೂ, ನಾನು “ಭಾಗವತರ ಮಗ” ಎಂಬುದರಿಂದ ನನ್ನನ್ನು ಒಲಿಸಿಕೊಳ್ಳಲು ತಿಂಡಿ, ಮಿಠಾಯಿ ಕೊಡಿಸುತ್ತಿದ್ದರು. ಅಪ್ಪಯ್ಯ, ರಂಗಸ್ಥಳಕ್ಕೆ ಬಂದಾಗ ನಾನೂ ಅವರ ಹಿಂದೆ ಸ್ವಲ್ಪ ಜಾಗ ಮಾಡಿ, ಅಲ್ಲಿಯೇ ಕುಳಿತು, ಹಿಂದಿನಿಂದ ಆಟ ನೋಡುತ್ತಿದ್ದುದೂ ನೆನಪಿದೆ. ಬೆಳಿಗ್ಗೆ ಅವರೊಂದಿಗೇ ಮನೆಗೆ ಬರುವುದು. ಡೇರೆ ಮೇಳ ಆದ ಮೇಲೆ ನಾವು ಆಟಕ್ಕೆ ಹೋದರೆ ಮುಂದಿನ ಸಾಲಿನ ಕುರ್ಚಿಯಲ್ಲಿ ಕುಳಿತು ಆಟ ನೋಡುವವರು. ನಿದ್ದೆ ಬಂದರೆ ಅಲ್ಲಿಯೇ ನಿದ್ದೆ.
ಒಮ್ಮೆ ಹಾಲಾಡಿಯಲ್ಲಿ ಆಟ. ಸಾಲಿಗ್ರಾಮ ಮೇಳದಲ್ಲಿ ಅಪ್ಪಯ್ಯ ಇದ್ದ ಸಮಯ. ಆ ವರ್ಷ ಮೇಳದಲ್ಲಿ ಕೆರೆಮನೆ ಮಹಾಬಲ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರೂ ಇದ್ದಿದ್ದರು. ಬೆಳಿಗ್ಗೆ ನಾವು ಆಟ ನೋಡಿ ಮುಗಿಸಿ ಅಪ್ಪಯ್ಯನಿಗಿಂತ ಬೇಗ ಮನೆ ಸೇರಿದೆವು. ನನ್ನ ಅಕ್ಕನ ಮಗ ವೆಂಕಟೇಶನೂ ಆಗ ನಮ್ಮ ಮನೆಯಲ್ಲಿ ಇದ್ದ. ಬೆಳಿಗ್ಗೆಯೇ ನಮ್ಮ ಆಟ ಶುರುವಾಯಿತು, ನಮ್ಮ ಮನೆಯ ಅಂಗಳದಲ್ಲಿ. “ಎಲವೊ ಪಾರ್ಥ ಕೇಳು” ಅಂತ ನಾನು ಕುಣಿದರೆ. “ಕಳವಿನಲ್ಲಿ ಬೆಂಗಡೆಯೊಳ್” ಅಂತ ಅವನ ಕುಣಿತ. ಕೈಯಲ್ಲಿ ತೆಂಗಿನ ಹೆಡೆಮಂಡೆಯ ಆಯುಧ. ಅದನ್ನು ಅಂಗಳದ ಕಂಬಕ್ಕೆ ಹೊಡೆದು ನಮ್ಮ ಯುದ್ಧ ಸಾಗಿತ್ತು. ಅಷ್ಟರಲ್ಲಿ ಮಹಾಬಲ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರನ್ನು ಅಪ್ಪಯ್ಯ, ನಮ್ಮ ಮನೆಗೆ ಕರೆದುಕೊಂಡು ಬಂದರು. ಅವರು ನಮ್ಮ ಅವತಾರ ನೋಡಿ ನಕ್ಕಿದ್ದೇ ನಕ್ಕಿದ್ದು. ಮುಂದೆ ಬಹುಕಾಲ ನನ್ನನ್ನು ಕಂಡಾಗಲೆಲ್ಲಾ ಮಹಾಬಲ ಹೆಗಡೆಯವರು “ಎಲವೋ ಪಾರ್ಥ ಕೇಳು” ಎಂದು ತಮಾಷೆ ಮಾಡುತ್ತಿದ್ದರು.
ಎಪ್ರಿಲ್ ನಲ್ಲಿ ಪರೀಕ್ಷೆ ಮುಗಿದು ಪಾಸು ಪೈಲು ಹೇಳಿ, ರಜೆ ಸಿಕ್ಕಿದ ಮರುದಿನವೇ ಅಪ್ಪಯ್ಯ ಮನೆಗೆ ಯಾವಾಗ ಬರುತ್ತಾರೆ ಎಂದು ಅಮ್ಮನನ್ನು ಕಾಡುವುದೇ ಕೆಲಸ. ಹತ್ತಿರ ಎಲ್ಲಾದರೂ ಆಟ ಇದ್ದರೆ, ಅಪ್ಪಯ್ಯ ಮನೆಗೆ ಬರುತ್ತಲೇ ನಾನೂ ಅವರ ಜೊತೆಗೆ ಮೇಳಕ್ಕೆ ಹೊರಟೆ. ವೇಷ ಮಾಡುವುದಕ್ಕಲ್ಲ, ಆಟ ನೋಡಿ ಊರು ತಿರುಗಿ ಗಮ್ಮತ್ತು ಮಾಡುವುದಕ್ಕೆ. ಅಪ್ಪಯ್ಯ ಮೇಳದಲ್ಲಿ ಇರುವುದರಿಂದ ನಮಗೆ ಪ್ರವೇಶ ಉಚಿತ, ಅರ್ಧ ರಾತ್ರಿಯ ಮೇಲೆ ಆರಾಮ ಕುರ್ಚಿಯಲ್ಲೇ ನಿದ್ದೆ ಖಚಿತ. ಆಗಲೇ ದಾಮೋದರಣ್ಣಯ್ಯನಿಂದ ತಾಳ ಕಲಿತು ಮಳೆಗಾಲದಲ್ಲಿ ಮನೆಯಲ್ಲಿರುವ ಚಂದ್ರಶೇಖರ ಭಟ್ಟರಿಂದ ಕುಣಿತವನ್ನೂ ಕಲಿತಿದ್ದರೂ, ಆಟದಲ್ಲಿ ವೇಷಮಾಡುವ ಧೈರ್ಯ ಇರಲಿಲ್ಲ. ಆದರೂ ಬಾಲ ಚಂದ್ರಹಾಸ, ವಿಷ್ಣು, ಸಹದೇವ ಅಂತ ಒಂದೆರಡು  ಸಣ್ಣ ವೇಷ ಮಾಡಿದ್ದೆ. ಅಪ್ಪಯ್ಯನೂ ವೇಷ ಮಾಡಲು ಅಂತಹ ಒತ್ತಾಯ ಮಾಡಿದವರಲ್ಲ. ಆಟ ನೋಡುವುದು. ನಿದ್ದೆ ಬಂದರೆ ಅಲ್ಲೇ ನಿದ್ದೆ ಮಾಡುವುದು. ಮರುದಿನ ವ್ಯಾನಿನಲ್ಲಿ ಆ ಊರಿಂದ ಮತ್ತೊಂದೂರಿಗೆ ಪ್ರಯಾಣ ಮಾಡುವುದು. ಅಲ್ಲಿ ಬಿಡಾರದಲ್ಲಿ ನಿದ್ದೆ ಅಥವ ಅಪ್ಪಯ್ಯ ಯಾರಾದರೂ ಅಭಿಮಾನಿಗಳ ಮನೆಗೆ ಹೋದರೆ ಅವರೊಂದಿಗೆ ಹೋಗುವುದು. ಕೆಲವು ಕಡೆಯಲ್ಲಂತೂ ಅಪ್ಪಯ್ಯ, ಅವರ ಕೋರಿಕೆಯ ಮೇರೆಗೆ ಮನೆಯಲ್ಲಿ ಪದ್ಯವನ್ನೂ ಹಾಡುವುದಿತ್ತು. ಆಗ ಮದ್ದಲೆಗಾರರನ್ನೂ ಕರೆಸುತ್ತಿದ್ದರು, ಅಂತೂ ಆಗ ನೋಡಿದ ಆಟಕ್ಕೆ ಲೆಕ್ಕವಿಲ್ಲ.
ಆಟ ನೋಡುವುದಕ್ಕಿಂತ ಮರುದಿನ, ಆ ಊರಿನಿಂದ ಮತ್ತೊಂದೂರಿಗೆ ಹೋಗುವಾಗ ದಾರಿಯಲ್ಲಿ ಅಪ್ಪಯ್ಯ ಮತ್ತು ಕಲಾವಿದರು ಹಿಂದಿನ ದಿನ ಆಟದ ವಿಮರ್ಶೆ ಚರ್ಚೆ ಮಾಡುತ್ತಿದ್ದುದನ್ನು ಕೇಳುವುದೇ ನನಗೆ ಹೆಚ್ಚಿನ ಆಸಕ್ತಿಯ ವಿಷಯ. ಅದರಲ್ಲೂ ದೊಡ್ಡ ಸಾಮಗರು, ಕೆರೆಮನೆ ಸಹೋದರರೂ, ಶಿರಿಯಾರ ಮಂಜು, ವೀರಭದ್ರ ನಾಯ್ಕರಂತ ಅನುಭವಿ ಕಲಾವಿದರು ಎಲ್ಲರೂ ಒಟ್ಟಿಗೇ ಇದ್ದ ತಿರುಗಾಟದ ವರ್ಷ ಅದು. ಪಾತ್ರದ ಬಗ್ಗೆ ಅವರವರೊಳಗೆ ವಿಮರ್ಶೆ ವಾದಗಳೂ ನಡೆಯುತ್ತಿದ್ದವು. ಕೆಲವೊಮ್ಮೆ ಜಗಳವೂ ಆಗುತ್ತಿತ್ತು.
ಒಮ್ಮೆ ಏನಾಯಿತು ಎಂದರೆ,  ಶಿರಿಯಾರ ಮಂಜು ರಂಗಸ್ಥಳಕ್ಕೆ ಪ್ರವೇಶ ಮಾಡುವಾಗ ಯಾವುದೋ ಒಂದು ಪ್ರಸಂಗದಲ್ಲಿ ತೆರೆ ಒಡ್ಡೋಲಗವಾಗಿ ಅರ್ಧ ಚಂದ್ರಾಕೃತಿಯ ಕುಣಿತವಾದ ಮೇಲೆ ನೇರ ಪದ್ಯ ಎತ್ತುಗಡೆ ಮಾಡಿ ಕುಣಿದರು. ಅದು  ಭೀಷ್ಮ ಭೀಷ್ಮ ಭೀಷ್ಮದಲ್ಲಿ ದೇವವೃತನೋ. ಅಥವ ರತ್ನಾವತಿಕಲ್ಯಾಣದ ವತ್ಸಾಖ್ಯನೋ, ಮತ್ತೊಂದೊ ಸರಿಯಾಗಿ ನೆನಪಿಲ್ಲ. ಸಾಮಾನ್ಯವಾಗಿ ಎಲ್ಲರೂ ತೆರೆ ಒಡ್ಡೋಲಗದ ಪ್ರವೇಶದ ನಂತರ ಅರ್ಧ ಚಂದ್ರಾಕೃತಿಯ ಕುಣಿತವಾದ  ಮೇಲೆ ಕುಣಿಯುವ ದಿಗಣ ಕುಣಿಯಲಿಲ್ಲ. ನಾನೂ ಕುಣಿತವನ್ನು ಆಗಷ್ಟೇ ಕಲಿತದ್ದು. ತಪ್ಪು ಗೊತ್ತಾಯಿತು. ನಾನು ರಾತ್ರಿ ಚೌಕಿಯಲ್ಲಿ ಎಲ್ಲ ವೇಷಧಾರಿಗಳು ಮುಖಕ್ಕೆ ಬಣ್ಣ ಹಾಕಿಕೊಳ್ಳುವುದನ್ನು ನೋಡುತ್ತಾ, ಅವರ ಪಕ್ಕದಲ್ಲೇ ಮಂಡಿಯೂರಿ ಕುಳಿತು, ಅದೂ ಇದೂ ಮಾತಾಡುವುದಿತ್ತು. ಆವತ್ತು ದೊಡ್ಡ ಸಾಮಗರ ಪಕ್ಕದಲ್ಲಿ, ಅವರು ಬಣ್ಣ ಹಚ್ಚಿಕೊಳ್ಳುವಾಗ, ಅದೂ ಇದೂ ಮಾತಾಡುತ್ತಾ, ಮಧ್ಯದಲ್ಲಿ “ಅಲ್ಲ ಮರ್ರೆ, ನಿನ್ನೆ ಮಂಜು ನಾಯ್ಕರು ದಿಗಣ ಕುಣಿಯಲೇ ಇಲ್ಲ” ಎಂದೆ. ಅವರು ಬಣ್ಣ ಹಚ್ಚುವುದನ್ನು ನಿಲ್ಲಿಸಿ, ನನ್ನ ಕಡೆ ತಿರುಗಿ ಅಶ್ಚರ್ಯದಿಂದ ನನ್ನನ್ನು ನೋಡುತ್ತಾ “ಹೋ ಮಾಣಿ, ನಿನಗೆ ಗೊತ್ತಿಲ್ಯಾ? ಅದೊಂದು ಗುಟ್ಟಿನ ಸಂಗತಿ. ಅವರಿಗೆ ದಿಗಣ ಕುಣಿಯಲು ಬರುವುದಿಲ್ಲ. ಆದರೆ ಇದನ್ನು ಯಾರಿಗೂ ಹೇಳುದ್ ಬೇಡ, ನಿನ್ನಲ್ಲಿಯೇ ಇರಲಿ”. ಎಂದು ಮೆಲ್ಲನೇ ಕಿವಿಯಲ್ಲಿ ಹೇಳಿದರು.

(ಮುಂದುವರಿಯುವುದು)
ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  7

ನಾಗಪ್ಪ ಮಯ್ಯರು ಅಂದರೆ ನಮ್ಮ ಭಾಗವತ ರಾಘವೇಂದ್ರ ಮಯ್ಯರ ತಂದೆಯವರುಪರಸ್ಥಳದಲ್ಲಿ ಇದ್ದುದರಿಂದ ಒಬ್ಬ ಒಕ್ಕಲು ಆ ಮನೆಯಲ್ಲಿ ಇದ್ದು ಅವರ ಬೇಸಾಯವನ್ನು ನೋಡಿಕೊಳ್ಳುತ್ತಿದ್ದರು. ಅವರು ಅಲ್ಲಿಗೆ ಬಂದುದರಿಂದ ಒಕ್ಕಲನ್ನು ಬಿಡಿಸಿ ಅವರೇ ವಾಸಿಸತೊಡಗಿದ್ದರಿಂದ ಕೆಳಗೆ ಜಾಗ ಸಾಲದಾಗಿ, ನಾವೂ ಆ ಮನೆಯ ಉಪ್ಪರಿಗೆಯನ್ನು ಸೇರಬೇಕಾಯಿತು. ಆದರೆ ನಾನು ಆ ಶಾಲೆಗೆ ಸೇರಿದ ವರ್ಷವೋ ಅಥವ ಮರುವರ್ಷವೋ ನಮ್ಮ ಶಾಲೆ ಮಯ್ಯರ ಮನೆಯ ಹಿಂದಿನ ಹಾಡಿಯ ದಕ್ಷಿಣ ದಿಕ್ಕಿಗೆ ಇರುವ ಜಡ್ಡಿನ ಸಮತಟ್ಟು ಜಾಗದಲ್ಲಿ ಮಣ್ಣಿನ ಗೋಡೆ, ಹುಲ್ಲು ಮಾಡಿನೊಂದಿಗೆ ಸ್ವತಂತ್ರವಾಯಿತು. ಅಲ್ಲಿಯೇ ಸುತ್ತ ಮುತ್ತ ಇರುವ ಗೋರಾಜಿ ಪ್ರಭಾಕರ ಹಾಲಂಬಿಯವರ ಮಕ್ಕಳು, ರಾಮಚಂದ್ರ ಹಂಜಾರರ ಮಕ್ಕಳು, ನಮ್ಮ ಚೇರಿಕೆಯ ರಾಮಣ್ಣ ಶೆಟ್ರ ಮಕ್ಕಳು, ಮೇಲ್ಚೇರಿಕೆ ಹೂವ ಹಾಂಡನ ಮಕ್ಕಳು, ಕೆಳಮನೆ ರಾಮಣ್ಣ ಶೆಟ್ರ ಮಕ್ಕಳು, ಉಪಾಯ್ದರಬೆಟ್ ಪರಮೇಶ್ವರ ಆಚಾರಿಯ ಮಕ್ಕಳೂ ಮೇಲ್ಚೇರಿಕೆ ಮಂಜುನಾಥ ಭಟ್ರ ಮಕ್ಕಳು, ಮೂಡಾರಿ ಅನಂತಯ್ಯ ಭಟ್ರ ಮಕ್ಕಳೂ, ಮುದೂರಿ ಸಾವಿತ್ರಮ್ಮನ ಮಕ್ಕಳೂ ಮುಂತಾಗಿ ಸುತ್ತಮುತ್ತ ಇರುವ ಹಳ್ಳಿಯ ಎಲ್ಲರು ಅದೇ ಶಾಲೆಯಲ್ಲಿ ಓದಿದವರು. ಅಂತೂ ನಾನು ಆ ಶಾಲೆಗೆ ಸೇರಿದಾಗ ಒಂದು ಹದಿನೈದು ಇಪ್ಪತ್ತರ ಅಂದಾಜು ಮಕ್ಕಳಿದ್ದರು. ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಇದ್ದರೂ ಎಲ್ಲಾ ಕ್ಲಾಸುಗಳ ಮಕ್ಕಳೂ, ಹುಡುಗ ಹುಡುಗಿಯರೂ ಒಟ್ಟಿಗೇ ಕುಳಿತುಕೊಳ್ಳುತ್ತಿದ್ದೆವು. ಆ ವರ್ಷ ಬಾಲಕೃಷ್ಣ ಶೆಟ್ರಿಗೆ ವರ್ಗವಾಗಿ ನಮ್ಮ ನೆರೆಮನೆಯ ತಮ್ಮಯ್ಯ ಭಟ್ರ ಮಗ ಸುಬ್ರಾಯ ಭಟ್ಟರೇ ನಮಗೆ ಮಾಸ್ಟರರಾಗಿ ಬಂದರು.
ಆ ವರ್ಷದ ಅಂತ್ಯದಲ್ಲಿ ನಾವು ನಮ್ಮ ಗೋರಾಜಿ ಮತ್ತು ಹತ್ತಿರದ ಕಾಸಾಡಿ ಶಾಲೆಯ ಮಕ್ಕಳು ಒಟ್ಟಿಗೇ ಸೇರಿ ಶಾಲೆಯ ವಾರ್ಷಿಕೋತ್ಸವ ಆಚರಿಸಿದೆವು. ಲೇಜಿಮ್ ಕೋಲಾಟದಲ್ಲಿ ಭಾಗವಸಿದ್ದುದಲ್ಲದೇ, ಒಂದು  ಸಾಮಾಜಿಕ ನಾಟಕದಲ್ಲಿ ಪಾರ್ಟು ಮಾಡಿದ ನೆನಪು ನನಗೆ ಇನ್ನೂ ಇದೆ. ಆ ನಾಟಕದಲ್ಲಿ ನನ್ನದು ಹಾಸ್ಯ ಪಾತ್ರ. ನನಗೆ ಒಂದು ಜುಟ್ಟು ಕಟ್ಟಿದ್ದರು. ನಾಟಕದಲ್ಲಿ ಒಂದು ಹುಡುಗಿಯನ್ನು ತಮಾಷೆ ಮಾಡುವ ದೃಶ್ಯ ಇತ್ತು. ಆಗ ಹೇಳುವ ಪದ್ಯ “ ಎಳೆಎಳೆ ಪ್ರಾಯದ ಹೆಣ್ಣು, ಹುಳಿಹುಳಿ ಮಾವಿನ ಹಣ್ಣು” ಅಂತ ಏನೋ ಒಂದಿತ್ತು. ಆ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಯ್ತು. ನನಗೆ ಆ ನಾಟಕದಲ್ಲಿ ಪ್ರೈಸ್ ಕೂಡ ಕೊಟ್ಟಿದ್ದರು. ಒಟ್ಟಿಗೆ ಮೂರ್ನಾಲ್ಕು ಪ್ರೈಸ್. ಒಂದು ಪ್ರೈಸ್ ತೆಗೆದುಕೊಂಡು ಒಳಗೆ ಬರುವಷ್ಟರಲ್ಲೇ ಇನ್ನೊಂದು ಪ್ರೈಸ್ ಗೆ ಕರೆದರು. ಮೊದಲ ಪ್ರೈಸನ್ನು ಒಳಗೆ ಬಂದು ಮೂಲೆಯಲ್ಲಿದ್ದ ಒಂದು ಚೀಲಕ್ಕೆ ಹಾಕಿ ಪುನಹ ಓಡಿದೆ. ಗಡಿಬಿಡಿಯಲ್ಲಿ ನನ್ನ ಪ್ರೈಸನ್ನು ಹಾಕಿದ್ದು ಬೇರೆಯವರ ಚೀಲದಲ್ಲಿ. ಪ್ರೈಸ್ ಅಂದರೆ ಸೋಪಿನ ಬಾಕ್ಸೊ, ಪ್ಲಾಸ್ಟಿಕ್ ಲೋಟವೋ ಏನೋ ಒಂದು. ಆದರೆ ನನಗೆ ಅದೆ ಚಿನ್ನ. ನಾಲ್ಕು ಜನರ ಎದುರು ಕೊಟ್ಟದ್ದಲ್ಲವೇ?  ಮನೆಗೆ ಬಂದು ನೋಡಿದರೆ ಪ್ರೈಸ್ ಯಾವುದೂ ಇಲ್ಲ. ನಾನು ಗಡಿಬಿಡಿಯಲ್ಲಿ ಹಾಕಿದ್ದು ಯಾರೊ ಬೇರೆಯವರ ಚೀಲಕ್ಕೆ. ಹೊಟ್ಟೆಯೆಲ್ಲ ಉರಿದು ಹೋಯಿತು.
ಅಂತೂ ಆ ಶಾಲೆಯ ಮಣ್ಣಿನ ಗೋಡೆ ಹುಲ್ಲಿನ ಮಾಡು ಮುಂದಿನ ಮಳೆಗಾಲದಲ್ಲಿ ಬಿದ್ದು ಹೋಗುತ್ತದೆ ಎನ್ನುವ ಹಾಗಿದ್ದು, ಮುಂದಿನ ವರ್ಷ ಹುಲ್ಲು ಹೊದೆಸುವುದೂ ಕಷ್ಟವಾಗಿ ಅಲ್ಲಿ ಕಾಲ ಕಳೆಯುವುದು ಕಷ್ಟ ಎಂಬ ಸ್ಥಿತಿ ಬಂತು. ಹಾಗಾಗಿ ಊರಿನ  ಕೆಲವು ಗಣ್ಯರೊಡನೆ  ಚರ್ಚಿಸಿ, ನಮ್ಮ ಶಾಲೆಯು ಮಳೆಗಾಲಕ್ಕೆ ಮುಂಚೆ, ಮುದೂರಿ ಈಶ್ವರ ದೇವಸ್ಥಾನದ ಹೊರಪೌಳಿಗೆ ಸ್ಥಳಾಂತರವಾಯಿತು. ಹಾಗಾಗಿ ನಮ್ಮದು ಗೋರಾಜಿ ಶಾಲೆ, ಹೋಗಿ ಮುದೂರಿ ಶಾಲೆ ಅಂತ ಆಯಿತು. ನಾವೇ ಶಾಲೆಯ ಬೆಂಚುಗಳನ್ನು, ಮಾಸ್ಟರರ ಟೇಬಲ್ ಕುರ್ಚಿಗಳನ್ನು  ಹೊತ್ತು ಸಾಗಿಸಿದೆವು. ನಾಲ್ಕಾರು ಬೆಂಚು, ಒಂದು ಟೇಬಲ್ಲು, ಒಂದು ಕುರ್ಚಿ, ಒಂದು ದೊಡ್ಡ ಕರಿ ಹಲಗೆ, ಒಂದು ಕಪಾಟು ಇಡಲಿಕ್ಕೆ ಎಷ್ಟು ಜಾಗ ಬೇಕು?. ಅಷ್ಟೇ ನಮ್ಮ ಶಾಲೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಕಾಣದಿರಲಿ ಎಂದು ಒಂದು ದಿಡ್ಕಿಯನ್ನು ಮಾಡಿಸಿದ್ದರು. ಅಂತೂ ಅಲ್ಲಿ ನಾಲ್ಕನೆಯ ಕ್ಲಾಸಿನವರೆಗೆ ಓದಿ ಐದನೇಯ ಕ್ಲಾಸಿಗೆ ಹಾಲಾಡಿ ಶಾಲೆಗೆ ಸೇರಿದೆ.
ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಾಗ ನಾನು ಮನೆಯಲ್ಲಿ ಹಗಲು ಇರುತ್ತಿದ್ದುದು ಕಡಿಮೆ. ಮೇಲೆ ಉದುರಿ ಹೋಗದಂತೆ ಬುಜಕ್ಕೆ ಲಾಡಿ ಇರುವ ದೊಗಲೆ ಚಡ್ಡಿಯನ್ನು ಹಾಕಿಕೊಂಡು ಆಚೆಮನೆ ತಮ್ಮಯ್ಯ ಭಟ್ರ ಮನೆ, ಪಕ್ಕದಲ್ಲಿರುವ ಶಂಕ್ರಾಚಾರಿಯ ಮನೆ, ಬೈಲಿನ ಬದಿಯಲ್ಲಿರುವ ರಾಮಣ್ಣ ಶೆಟ್ರ ಮನೆ, ಕೊಮೆ ಬಚ್ಚಿಯ ಮನೆ ಹೀಗೆ ಊರಲ್ಲೆಲ್ಲಾ ಓಡಾಡುತ್ತಿದ್ದೆ. ಎಲ್ಲಿಗೂ ಹೋಗಲು ಮನಸ್ಸಾಗದೇ ಇದ್ದರೆ ಸೀದಾ ಮನೆಯ ಎದುರು ಗದ್ದೆಯ ಆಚೆಯಿರುವ ಶೇಡಿ ಗುಡ್ಡಿಗೋ, ಅದರಾಚೆ ಸ್ವಲ್ಪ ದೂರದಲ್ಲಿರುವ ಹರಿನ್ ಗುಡ್ದೆ ಎಂಬ ವಿಶಾಲವಾದ ಗುಡ್ದೆಗೋ, ಮೇಲೆ ಹಕ್ಕಲಿನ ಗೋವೆ ಮರಗಳ ತಾಣಕ್ಕೋ ಅದೂ ಅಲ್ಲದಿದ್ದರೆ ಮೇಲು ಗದ್ದೆಯ ತುದಿಯಲ್ಲಿರುವ ಕೆರೆಯ ಬುಡಕ್ಕೋ ಹೋಗಿ ಆಟ ಆಡಿ ಸಮಯ ಕಳೆಯುತ್ತಿದ್ದೆ.
ಮಳೆಗಾಲದಲ್ಲಿ ಶಾಲೆಯ ರಜೆಯ ಅವಧಿಯಲ್ಲಿ ಅಕ್ಕನ ಮಕ್ಕಳು “ಹಾಲಾಡಿ ಅಪ್ಪಯ್ಯ”ನ ಮನೆ ಎಂದು ನಮ್ಮಲ್ಲಿಗೆ ಬಂದರೆ, ನಮ್ಮದು ಜಮದಗ್ನಿ ಎಂಬ ಬೆಟ್ಟದ ತಾವಿಗೋ,  ನಾಗರ್ತಿ ಎಂಬ ನಾಗಬನ ಇರುವ ಕಾಡಿನ ಸುಂದರ ತಾಣಕ್ಕೋ, ಹರಿನ್ ಗುಡ್ಡೆಯ ನೀರಿನ ತೊರೆ ಇರುವ ಜಾಗಕ್ಕೋ ಹೋಗಿ ಚಾರಣ ಆಗುತ್ತಿತ್ತು, ಬೆಳಿಗ್ಗೆ ಹೋದರೆ  ದಿನವಿಡೀ ಅಲ್ಲಿ ಕಳೆದು ಸಂಜೆ ಮನೆಗೆ ಬರುತ್ತಿದ್ದೆವು. ಆ ತಿರುಗಾಟ, ಒಡನಾಟ, ಬಾಲ್ಯದ ನೆನಪು ಅತೀ ಮಧುರವಾದದ್ದು.

(ಮುಂದುವರಿಯುವುದು)

ಸೋಮವಾರ, ಸೆಪ್ಟೆಂಬರ್ 18, 2017

*ನನ್ನೊಳಗೆ*
ಭಾಗ 6
ಅಪ್ಪಯ್ಯ ಮಳೆಗಾಲದಲ್ಲಿ ಕೆಲವೊಮ್ಮೆ ಆಟ, ತಾಳಮದ್ದಲೆ ತಿರುಗಾಟ ಇಲ್ಲದೇ ಇರುವಾಗ ಮನೆಯಲ್ಲೇ ಇರುತ್ತಿದ್ದರು. ಅವರು ಇದ್ದಾಗ ಸಂಜೆ ಮನೆಯಲ್ಲಿ ದೀಪ ಹಚ್ಚಿದ ಕ್ಷಣದಿಂದ ರಾತ್ರಿ ಮಲಗುವವರೆಗೂ ನಮ್ಮ ಮನೆಯಲ್ಲಿ ಭಾಗವತಿಕೆ, ಮದ್ದಲೆಗಳದೇ ಸದ್ದು. ಆಗಲೇ ಅನ್ನ ಮತ್ತು ಒಲೆಯ ಬಿಳಿಬೂದಿಯಿಂದ ಬೋನ ತಯಾರಿಸಿ ಮದ್ದಲೆಯ ಬಲಕ್ಕೆ ಹಚ್ಚಿ, ಒಲ ತೆಗೆದು  ನಮ್ಮನೆಯ ಚಾವಡಿಯಲ್ಲಿ ಕುಳಿತು ಸುರೇಶಣ್ಣ, ಗೌರೀಶಣ್ಣ ಮದ್ದಲೆ ಬಾರಿಸಲು ಸಿದ್ಧರಾದರೆ, ಅಪ್ಪಯ್ಯ ಸ್ವಲ್ಪ ದೂರದಲ್ಲಿ ಕುಳಿತು ಹೇಳಿ ಕೊಟ್ಟಂತೆ ಶ್ರೀಧರಣ್ಣಯ್ಯ ಭಾಗವತಿಕೆ ಮಾಡುವುದು. ನಾನು ಚಿಕ್ಕವ ಹಾರ್ಮೋನಿಯಂ ಬಾರಿಸುವುದು. ಆಗ ನಮ್ಮ ಮನೆಯ ವಾತಾವರಣ ಸುಮಾರಿಗೆ ಗಂಧರ್ವ ಲೋಕಕ್ಕೆ ಏನೂ ಕಡಿಮೆ ಇರುತ್ತಿರಲಿಲ್ಲ. ಒಮ್ಮೊಮ್ಮೆ ಆಚೀಚೆ ಮನೆಯವರೂ ಬಂದು ಕೇಳುತ್ತಾ ಕುಳಿತುಕೊಳ್ಳುವುದಿತ್ತು. ರಾತ್ರಿ ಅಮ್ಮ ಕಾದೂ ಕಾದೂ ಸಾಕಾಗಿ “ ಹಂಗಾರೆ ಊಟ ಮಾಡಿ ಮುಂದುವರ್ಸೂಕಾಗ್ದಾ?” ಎಂದಾಗಲೇ ನಮಗೆ ಸಮಯದ ಅರಿವಾಗುವುದು. ಅಪ್ಪಯ್ಯ, ಮಧ್ಯ ಮಧ್ಯ ಹಾಡುಗಳನ್ನು ನಿಲ್ಲಿಸಿ ಆ ಪದ್ಯದ ಸಂದರ್ಭ, ರಾಗ, ಆಲಾಪನೆಗಳನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಹಾಗೂ ಆ ಪದ್ಯಗಳಿಗೆ ಅವರು ನೋಡಿದ ಅರ್ಥದಾರಿಗಳು ಹೇಗೆ ಅಭಿನಯ ಮಾಡುತ್ತಿದ್ದರು? ಯಾವ ರೀತಿ ಅರ್ಥ ಹೇಳುತ್ತಿದ್ದರು? ಎಂದು ವಿವರಿಸುತ್ತಿದ್ದರು. ಕೆಲವೊಮ್ಮೆ ಮೇಳದಲ್ಲಿ ನಡೆದ ವಿನೋದದ ಪ್ರಸಂಗಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದರು.     

ಅಪ್ಪಯ್ಯ ಬೆಳಿಗ್ಗೆ ಬೇಗನೇ ಏಳುವುದು. ಮನೆಯಲ್ಲಿ ಅವರ ಡ್ರೆಸ್ ಎಂದರೆ ಸೊಂಟಕ್ಕೆ ಒಂದು ಪಾಣಿಪಂಚೆ. ಹೆಗಲಲ್ಲೊಂದು ಶಾಲು, ಅಷ್ಟೆ. ಐದುವರೆ ಆರಕ್ಕೇ ಎದ್ದರೆ ಆ ನಸುಬೆಳಕಿನಲ್ಲಿ  ನಮ್ಮ ಬೈಲು ಮತ್ತು ಬೆಟ್ಟಿನ ಎಲ್ಲಾ ಗದ್ದೆಯ ಅಂಚುಗಳಲ್ಲಿ ಹಾಡಿಯ ಮೂಲೆ ಮೂಲೆಗಳಲ್ಲಿ ನಡೆದು ಒಂದು ಸರ್ಕೀಟ್ ಹೊಡೆಯಬೇಕು. ನಂತರ ದೂರದ ಹಾಡಿಯ ಹಳುವಿನ ಮರೆಯಲ್ಲಿ ಕುಳಿತು, ದೇಹ ಬಾಧೆ ಮುಗಿಸಿ, ಮೇಲಿನ ದೊಡ್ಡ ಕೆರೆಯಲ್ಲಿ ಇಳಿದು ಶುಚಿ ಮಾಡಿಕೊಳ್ಳಬೇಕು. ಅಲ್ಲೆ ಮೇಲ್ಬದಿಯಲ್ಲಿ ಇದ್ದ ಬೆಳ್ಳನ ಮನೆಯ ಹೊರಗೆ ನಿಂತು, ಅವನ ಹೆಂಡತಿಯನ್ನು ಕರೆದೂ “ಬಾಯಿ,  ಹುಷಾರಿದ್ಯಾ? ಮಕ್ಳೆಲ್ಲ ಹ್ಯಾಂಗಿದ್ದೋ? ಎಂತ ಮಾಡ್ತೊ?” ಎಂದು ವಿಚಾರಿಸಿಕೊಳ್ಳುವುದು, ಹಾಗೇ ಅಡಿಕೆ ತೆಂಗಿನ ತೋಟದ ಬದಿಯಲ್ಲೇ, ಎಲ್ಲ ಮರದ ತಲೆಯನ್ನು, ಬುಡವನ್ನು ನೋಡುತ್ತಾ ನಡೆದು ಬರುವುದು. ಬರುವಾಗ ಒಂದು ಗೋವೆ ಎಲೆಯನ್ನೋ, ಮಾವಿನ ಎಲೆಯನ್ನೋ ಕೊಯ್ದು, ಅದರ ದಂಟನ್ನು ಹರಿದು ಬೇರ್ಪಡಿಸಿ ಚೆನ್ನಾಗಿ ಸುತ್ತುವರು. ನಂತರ ಅದರ ತುದಿಯನ್ನು ಬಾಯಿಯಲ್ಲಿ ಕಚ್ಚಿ ಹರಿದು ಉಗಿದು, ಉಳಿದ ಭಾಗದಲ್ಲಿ ಹಲ್ಲನ್ನು ಚೆನ್ನಾಗಿ ಉಜ್ಜುವರು. ನಂತರ ಅದೇ ಎಲೆಯ ದಂಟಿನಿಂದ ನಾಲಿಗೆಯನ್ನೂ ಕೀಸಿ ಸ್ವಚ್ಛಗೊಳಿಸಿಕೊಳ್ಳುವುದು. ನಂತರ ಮನೆಗೆ ಬಂದು ಕಾಫಿಯ ಸೇವನೆ. ಅವರು ಮನೆಯಲ್ಲಿ ಇದ್ದರೆ ನಾನೂ ಅವರ ಬಾಲವೇ. ಅವರು ಹೋದಲ್ಲೆಲ್ಲಾ ಹೋಗುತ್ತಿದ್ದೆ.

 ಹಾಗೆಯೇ ತೋಟದಲ್ಲಿ ಗುಡ್ಡೆಯಲ್ಲಿ ತಿರುಗುವಾಗ ಎಲ್ಲಾದರೂ ಸಿಕ್ಕಿದ ಮೊಳಕೆ ಬಂದ ಹಲಸಿನಬೀಜವೋ, ಮಾವಿನ ಗೊರಟೋ ಅಥವ ಗೋವೆಬೀಜವೋ ಸಿಕ್ಕರೆ, ಅದನ್ನು ಜಾಗ್ರತೆಯಾಗಿ ಕೈಯಲ್ಲಿ ಹಿಡಿದು ಮನೆಗೆ ತಂದರು. ನಂತರ ಹಟ್ಟಿಯಲ್ಲಿ ಇರುವ ಗೊಬ್ಬರವನ್ನು ಒಂದು ಹೆಡಗೆಯಲ್ಲಿ (ಬುಟ್ಟಿ) ತುಂಬಿಕೊಂಡು, ಗುಡ್ಡೆಯಲ್ಲೋ, ತೋಟದ ಎತ್ತರ ಜಾಗದಲ್ಲೋ ಸ್ವಲ್ಪ ಮಣ್ಣು ಅಗೆದು ಅದನ್ನು ನೆಟ್ಟು, ಮೇಲೆ ಸ್ವಲ್ಪ ಗೊಬ್ಬರ ಹಾಕಿ ಮಣ್ಣು ಮುಚ್ಚಿ ಬರುವರು. ಹಾಗಾಗಿ ಅವರು ಅಂದು ನೆಟ್ಟ ಎಷ್ಟೋ ಮಾವಿನ ಗಿಡಗಳೆ, ಗೋವೇ, ಹಲಸಿನ ಗಿಡಗಳೇ ಮರಗಳಾಗಿ ಇಂದು ಅಪ್ಪಯ್ಯನ ನೆನಪಿನೊಂದಿಗೆ ಫಲ ಕೊಡುತ್ತಿವೆ.

ಸುಮಾರು ಹತ್ತು ಗಂಟೆಯ ಹಾಗೆ ಕಲ್ಲಟ್ಟೆಯ ಮನೆಯಲ್ಲಿರುವ ಅವರ ಅಕ್ಕ ಅಂದರೆ ನನ್ನ ಅತ್ತೆಯ ಮನೆಗೆ ಹೋಗಿ ಮಾತಾಡಿಸಿ ಬರುತ್ತೇನೆ ಎಂದು ಹೊರಟರೆ ಪುನಃ ನಾನು ಅವರ ಬಾಲವಾಗಿ ಅವರೊಂದಿಗೆ ಹೊರಡುತ್ತೇನೆ. ದಾರಿಯಲ್ಲಿ ಸಿಗುವ ಊರಿನ ಕೆಲವರು, “ಅಯ್ಯಾ ಮನಿಗ್ ಬಂದೀರ್ಯಾ? ಇವತ್ತು ರಜಿಯಾ? ನಾಳೆ ಎಲ್ ಆಟ? ಎಂತಾ ಪ್ರಸಂಗ?” ಎಂದು ಕೇಳಿದರೆ, ಅಪ್ಪಯ್ಯ ನಕ್ಕು ತಾಳ್ಮೆಯಿಂದ ಅವರಿಗೆ ಉತ್ತರಿಸುತ್ತಾರೆ. ಅತ್ತೆಯನ್ನು ಮಾತಾಡಿಸಿ ಸುಖ ಕಷ್ಟ ವಿಚಾರಿಸಿ ಕೈಯಲ್ಲಿ ಹಣವಿದ್ದರೆ ಅಕ್ಕನ ಕೈಯಲ್ಲಿ ಇರಿಸಿ, ಮನೆಯ ದಾರಿ ಹಿಡಿದರೆ, ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದು ಊಟ. ನಂತರ ಸ್ವಲ್ಪ ಹೊತ್ತು ಮಲಗಿದರೆ. ಸಂಜೆ ಎದ್ದು ಕಾಫಿ ಗೀಪಿ ಕುಡಿದು ಅದೂ ಇದೂ ಮಾತಾಡಿ ಮೇಳದ ಕ್ಯಾಂಪ್ ಎಲ್ಲಿದೆಯೋ ಅಲ್ಲಿಗೆ ಹೊರಡುತ್ತಾರೆ. ಒಟ್ಟಾರೆ ಅಪ್ಪಯ್ಯ ಮತ್ತು ಅವರ ದಿನಚರಿ ವ್ಯಕ್ತಿತ್ವ ನನಗೆ ಆದರ್ಶ.  ಎಲ್ಲಾ ಮಕ್ಕಳಿಗೂ ತಂದೆಯೆಂದರೆ ಹಾಗೆಯೇ ಇರಬಹುದು. ಇರಲಿ.

 ಐದು ವರ್ಷ ತುಂಬಿದ ಕೂಡಲೆ, ನನ್ನನ್ನು, ನನ್ನ ಒತ್ತಿನ ಅಣ್ಣ ಗೌರೀಶ, ಸುರೇಶರೊಂದಿಗೆ ಎರಡು ಮೈಲಿ ದೂರದ ಗೋರಾಜಿ ಶಾಲೆಗೆ ಸೇರಿಸಿದರು. ಬಹುಷ್ಯ ನನ್ನ ಅವತಾರ ಹೀಗಿತ್ತು. ದೊಗಲೆ ಚಡ್ಡಿ, ಕಾಲಿನ ತನಕದ ದೊಡ್ಡದಾಗಿ ಇಳಿಬಿಟ್ಟ ಚೀಲ, ಮೂಗಿನಲ್ಲಿ ಸಿಂಬಳ. ಶಾಲೆಯೆಂದರೆ ಅದು ಗೋರಾಜಿ ನಾಗಪ್ಪ ಮಯ್ಯರ ಮನೆಯ ಪಡುಬದಿಯ ಒಂದು ಸಣ್ಣ ಕೋಣೆ. ಮನೆಯ ಎದುರು ದೊಡ್ಡ ದೊಡ್ಡ ಬೈಲು ಗದ್ದೆಗಳು. ಸಾಕಷ್ಟು ಎತ್ತರವೂ ಇಲ್ಲದ ಇಕ್ಕಟ್ಟು ಇಕ್ಕಟ್ಟು ಜಾಗ. ಆ ಕೋಣೆಗೆ ಒಂದು ಬದಿ ಕಿಟಕಿಯೇ ಇರಲಿಲ್ಲವೆಂದು ನೆನಪು. ಒಂದು ದೊಡ್ಡ ಪತ್ತಾಸಿನ ತುಂಬಾ ಏನೇನೋ ಮಕ್ಕಳ ಪುಸ್ತಕಗಳು. ಮನೆಯ ಪಕ್ಕದ ಮಕ್ಕಿ ಗದ್ದೆಯೇ ನಮ್ಮ ಆಟದ ಮೈದಾನ. ಹತ್ತಿರದಲ್ಲೇ ಒಂದು ಗೋಪಾಲಕೃಷ್ಣ ದೇವಸ್ಥಾನ. ಒಬ್ಬರೇ ಮೇಷ್ಟ್ರು, ಅವರು ಬಾಲಕೃಷ್ಣ ಶೆಟ್ರು. ಬಹಳ ಒಳ್ಳೆಯ ಮೇಷ್ಟ್ರು. ಆಗಾಗ ನಮ್ಮ ಮನೆಗೂ ಬರುತ್ತಿದ್ದರು. ಅವರಿಗೆ ಯಕ್ಷಗಾನದ ಹುಚ್ಚು. ನಮ್ಮ ಶ್ರೀಧರ ಅಣ್ಣಯ್ಯನಿಂದ ಅವರು ಸ್ವಲ್ಪ ಕುಣಿತವನ್ನೂ ಕಲಿತಿದ್ದರಂತೆ.

(ಮುಂದುವರಿಯುವುದು)