ಶನಿವಾರ, ಅಕ್ಟೋಬರ್ 14, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 27

ಅಂತೂ ಮೂರು ವರ್ಷದ ಡಿಗ್ರಿಯನ್ನು ಆರಾಮವಾಗಿ ಪೂರೈಸಿದೆ. ಓದಿದರೆ ಓದಿದೆ. ಬಿಟ್ಟರೆ ಬಿಟ್ಟೆ. ಡಿಗ್ರಿಯ ಕೊನೆಯ ವರ್ಷದ ಪ್ರಾರಂಭದಲ್ಲಿ ನಮ್ಮ ರೂಮಿನಲ್ಲಿದ್ದ ಮಲಿಯಾಳಿ ಮಿತ್ರನಿಗೆ ಮದುವೆಯಾದ್ದರಿಂದ, ಅವನ ಸಂಸಾರ ಅಲ್ಲಿಗೇ ಬರುತ್ತದೆ ಎಂದು ನಾನು ಮತ್ತು ಗೋಪಿ, ಕೊಡ್ಗಿ ಕಂಪೌಂಡ್ ನ್ನು ಬಿಟ್ಟು, ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ನಮ್ಮ ಕಾಲೇಜಿನ ಪ್ರಾಧ್ಯಾಪಕರೇ ಆದ ಎ.ಸಿ.ತುಂಗರ ಮನೆಯ ಮಹಡಿಗೆ ನಮ್ಮ ವಾಸ್ತವ್ಯವನ್ನು ಬದಲಿಸಬೇಕಾಯಿತು. ಅಲ್ಲಿ ಸುಬ್ರಮಣ್ಯ ಐತಾಳ ಎನ್ನುವ ಪಡುಕೊಣೆಯ  ಸ್ನೇಹಿತನೊಬ್ಬನೂ ನಮ್ಮ ಜೊತೆಗೆ ಇದ್ದ. ಬರೀ ಪಾಪದ ಹುಡುಗ. ದೊಡ್ಡ ಸೋಡಾ ಗ್ಲಾಸ್ ಹಾಕುತ್ತಿದ್ದ. ಮೆಲ್ಲನೇ ಮಾತಾಡುತ್ತಿದ್ದ. ಹತ್ತು ಮಾತಾಡಿದರೆ ಒಂದು ಮಾತಾಡುವವನು. ಡಿಗ್ರಿಯ ನಂತರ ಬೆಂಗಳೂರಿನ ಯಾವುದೋ ಹೋಟೇಲಿನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಸ್ವಲ್ಪ ಅವಧಿಯಲ್ಲಿಯೇ ಕಾಯಿಲೆಯಿಂದ ತೀರಿಕೊಂಡನೆಂದು ಕೇಳಿದೆ.

 ಅಂತಿಮ ವರ್ಷದಲ್ಲಿರುವಾಗ ಬೊಟನಿಕಲ್ ಟೂರ್ ಅಂತ ಊಟಿ ಕೊಡೆಕೆನಲ್ ಗೂ ಹೋದ ನೆನಪು. ಆದರೆ ಆ ಪ್ರವಾಸದ ಕ್ಷಣಗಳು ಯಾವುದೂ ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಅಂತಿಮ ವರ್ಷದ ಕೆಮೆಸ್ಟ್ರಿ ಪರೀಕ್ಷೆಯ ಹಿಂದಿನ ದಿನ, ಕುಂದಾಪುರ ನರಿಬ್ಯಾಣದಲ್ಲಿ ಅಮೃತೇಶ್ವರೀ ಮೇಳದ “ಮಾಯಾ ಮೃಗಾವತಿ” ಆಟ ಇತ್ತು.  ಅದನ್ನು ಮಿಸ್ ಮಾಡಿಕೊಂಡರೆ ಆ ಆಟ ಮುಂದೆ ಸಿಗುವುದಿಲ್ಲವಲ್ಲ ಎಂದು ಅದಕ್ಕೂ ಹೋಗಿದ್ದೆ. ಆದರೂ ಫೈಲ್ ಆಗದೇ ಮಧ್ಯಮ ತರಗತಿಯಲ್ಲಿ ಪಾಸ್ ಆಗಿಬಿಟ್ಟೆ. ಮುಂದೇನು?. ಮುಂದೆ ಓದಲಿಕ್ಕೆ ಮನಸ್ಸಿಲ್ಲ. ಏನಾದರೂ ಕೆಲಸ ಹಿಡಿಯಬೇಕು. ಅಪ್ಪಯ್ಯ ಇದ್ದಾರಲ್ಲ?. ಅವರಿಗೆ ಎಲ್ಲರ ಪರಿಚಯ ಇದೆ. ಎಲ್ಲಾದರೂ ಒಂದು ಸಿಕ್ಕೀತು ಎಂಬ ಭಾವ.  ಸ್ವಲ್ಪ ದಿನ ಮನೆಯಲ್ಲಿ ಹಾಯಾಗಿ ಕಳೆಯಬೇಕು ಅಂತ ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ ಇದ್ದೆ.

 ಕಲ್ಲಟ್ಟೆಯಲ್ಲಿ, ಅತ್ತೆಗೆ ಮಕ್ಕಳಿಲ್ಲದಿರುವುದರಿಂದ ಅವರ ಕೊನೆಯ ಕಾಲದಲ್ಲಿ ಅಪ್ಪಯ್ಯನೇ ಅವರ ಆಗುಹೋಗುಗಳನ್ನು ನೋಡಿಕೊಂಡರು. ಅತ್ತೆಗೋ ಈ ಮುದ್ದಿನ ತಮ್ಮ “ನಾರ್ಣಪ್ಪು” ಅಂದರೆ ಅಷ್ಟು ಆಸೆ. ಮೇಳದಲ್ಲಿದ್ದಾಗ ಚೇರಿಕೆಯ ಮನೆಗೆ ಬಂದವರು, ಕಲ್ಲಟ್ಟೆಗೆ ಬಂದು, ಮಾತಾಡಿಸಿ ಹೋಗದಿದ್ದರೆ ಬೇಸರ ಮಾಡಿಕೊಳ್ಳುತ್ತಿದ್ದರು. ಅಪ್ಪಯ್ಯನಿಗೂ ಒಬ್ಬಳೇ ಅಕ್ಕ. ಅವಳು ಅಂದರೆ ಅಷ್ಟೇ ಅಕ್ಕರೆ.

ಆಗ ನಮ್ಮ ಚಂದ್ರ ಭಟ್ಟರಿಗೆ, ಅಪ್ಪಯ್ಯನೇ ನಮ್ಮ ತಾಯಿಯ ಸಂಬಂಧದ ಕಡೆಯ ಮಾರ್ವಿ ಮಹಾಬಲ ಹೆಬ್ಬಾರರ ಮಗಳನ್ನು ತಂದು ಮದುವೆ ಮಾಡಿಕೊಟ್ಟರು. ಅವರಿಗೆ ಅತ್ತೆಯ ಜೊತೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಅವರು, ಅವರ ಹೆಂಡತಿ ಮಕ್ಕಳೂ ಅತ್ತೆಯನ್ನು ನೋಡಿಕೊಂಡು ಕಲ್ಲಟ್ಟೆಯಲ್ಲಿಯೇ ಇದ್ದರು. ಮತ್ತೊಬ್ಬಳು ಸೇಸಿ ಮರಾಠಿ ಎಂಬ ಪ್ರಾಯದ ಹೆಂಗಸೂ, ನಮ್ಮ ಮನೆಗೆ ಬಂದರೆ ವಾರಗಟ್ಟಳೆ ಇದ್ದು, ಉಂಡು ಹೋಗುತ್ತಿದ್ದಳು. ಅವಳೇ, ಚಂದ್ರ ಭಟ್ರ ಹೆಂಡತಿ ಸರಸ್ವತಿ ಅಕ್ಕ, ಅವರ ಎಲ್ಲ ಹೆರಿಗೆ ಮತ್ತು ಮಕ್ಕಳ ಬಾಣಂತನವನ್ನು ನಮ್ಮ ಮನೆಯಲ್ಲೇ ಇದ್ದು ಓಡಾಡಿ ಮಾಡಿದವಳು.

ಅತ್ತೆ ಹೃದಯಾಘಾತದಿಂದ ತೀರಿಕೊಂಡರು. ರಾತ್ರಿ ನಮ್ಮೊಡನೆ ಮಾತಾಡಿ ಮಲಗಿದವರು, ಬೆಳಿಗ್ಗೆ ಏಳುವಾಗ ಉಸಿರಿರಲಿಲ್ಲ. ಸುಖಮರಣ. ಆದರೆ ಬದುಕಿರುವವರೆಗೆ ಅವರು ಆ ಊರಿನ ರಾಣಿಯಂತೆ ಗೌರವಯುತವಾಗಿಯೇ ಬದುಕಿದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಶಂಕರನಾರಾಯಣ ಅಡಿಗರು, ಅವರು ಸಾಯುವ ಮೊದಲು, ಅವರ ಮಕ್ಕಳಿಂದ ಅತ್ತೆಗೆ ತೊಂದರೆ ಆಗದೇ ಇರಲಿ ಎಂದು, ಕಲ್ಲಟ್ಟೆಯ ಆಸ್ತಿ ಮತ್ತು ಮನೆಯು, ಅತ್ತೆಯು ಬದುಕಿ ಇರುವವರೆಗೆ ಅವರ ಅನುಭೋಗಕ್ಕೆ ಹಕ್ಕು ಇರುತ್ತದೆ ಎಂದು ವೀಲು ಬರೆದಿಟ್ಟು ಕಾಲವಾಗಿದ್ದರು.

 ಅತ್ತೆಯು ಸತ್ತಾಗ, ಅಷ್ಟರವರೆಗೆ ಆ ಮನೆಗೆ ಬಂದು ಹೋಗಿ ಮಾಡದೇ ಇದ್ದ, ಶಂಕರನಾರಾಯಣ ಅಡಿಗರ ಮಗನಾದ ಬಾಬು ಅಡಿಗರು ಕುಂದಾಪುರದಲ್ಲಿ ವಕೀಲರಾಗಿದ್ದವರು, ಅತ್ತೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ಮನೆಗೆ ಬಂದು ನಮ್ಮೊಡನೆ ಸ್ನೇಹದಿಂದಲೇ ಮಾತಾಡಿಸಿ ಹೋಗಿದ್ದರು. ಅತ್ತೆಯ ಗಂಡ ಅಂದರೆ ನಮ್ಮ ಮಾವ ರಾಮಕೃಷ್ಣ ಹೆಬ್ಬಾರರ ಮಗನಾದ ರತ್ನಾಕರ ಎನ್ನುವವರು, ನಮ್ಮ ಅತ್ತೆಯ ಉತ್ತರ ಕ್ರಿಯೆಯನ್ನು ಮಾಡಲು ಒಪ್ಪಿ, ನಮ್ಮ ಮನೆಯಲ್ಲೇ ಇದ್ದು ಎಲ್ಲ ಅಪರಕಾರ್ಯಗಳನ್ನು ಮಾಡಿದ್ದರು.

ಅತ್ತೆಯು ತೀರಿಕೊಂಡ ನಂತರ, ಚೇರಿಕೆಯಲ್ಲಿ ದಾಮೋದರ ಅಣ್ಣಯ್ಯನ ಸಂಸಾರವನ್ನು ಇರಿಸಿ, ಅಪ್ಪಯ್ಯ, ಅಮ್ಮ ಮತ್ತು ನಾವೆಲ್ಲ ಕಲ್ಲಟ್ಟೆಗೆ ಬಂದು ಅಲ್ಲಿ ನೆಲೆಸಿದೆವು. ಮುಂದೆಯೂ ನಾವೇ ಆ ಮನೆಯಲ್ಲಿ ವಾಸವಾಗಿದ್ದೆವು. ಅವರ ಗಂಡ ಶಂಕರನಾರಾಯಣ ಅಡಿಗರು ಕಕ್ಕುಂಜೆ ಗ್ರಾಮದ ಪಟೇಲರಾಗಿದ್ದವರು. ಅವರಿಗೆ ಉಗ್ರಾಣಿಯಾಗಿ ಇದ್ದು, ಸದಾ ಅವರ ಹಿಂದೆ ತಿರುಗುತ್ತಿದ್ದ, ಶೇಷ ಮಡಿವಾಳ ಎನ್ನುವವ, ಅಡಿಗರ ಕಾಲದ ನಂತರವೂ ಕಲ್ಲಟ್ಟೆಯ ನಂಟನ್ನು ಬಿಡಲಿಲ್ಲ. ಆಗಾಗ ಬಂದು ಹೋಗಿ ಮಾಡುತ್ತಿದ್ದ. ಅವನ ಹೆಂಡತಿ ರುಕ್ಕು ಎನ್ನುವವಳಂತೂ ಅತ್ತೆ ಇರುವಾಗ ಆಗಾಗ ನಮ್ಮ ಮನೆಗೆ ಬಂದು, ಒಂದಷ್ಟು ಅದೂ ಇದೂ ಪಟ್ಟಾಂಗ ಹೊಡೆದು, ಊರಿನ ಸುದ್ದಿಯೆಲ್ಲಾ ಮಾತಾಡಿ, ಹಿಂದಿನ ದಿನ ನೆನೆಸಿ ಇಟ್ಟ ನೋಳಿ ಸೊಪ್ಪಿನಲ್ಲಿ ಅತ್ತೆಗೆ ಚೆನ್ನಾಗಿ ತಲೆ ಸ್ನಾನ ಮಾಡಿಸಿ ಉಪಚಾರ ಮಾಡುತ್ತಿದ್ದಳು. ಪ್ರತೀ ವರ್ಷ ದೀಪಾವಳಿಯ ಸ್ನಾನದ ದಿನ ಅವಳೇ, ನಮಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಹಾಗೆ ಬಂದವಳು ನಮ್ಮ ಮನೆಯಲ್ಲೇ ಮಧ್ಯಾಹ್ನ ಉಂಡು, ಜಗಲಿಯಲ್ಲಿ ಮಲಗಿ, ಸಂಜೆಯವರೆಗೆ ಇದ್ದು ಅತ್ತೆಯಿಂದ ಹಳೆಯ ಸೀರೆ, ತರಕಾರಿ, ತೆಂಗಿನಕಾಯಿ ಅಂತ ಏನಾದರೂ ಬೇಡಿ, ಗೆದ್ದುಕೊಂಡೇ ಹೋಗುತ್ತಿದ್ದಳು.

ಅತ್ತೆ ಇರುವವರೆಗೆ ಸುತ್ತಮುತ್ತಲು ಇದ್ದ ಒಕ್ಕಲುಗಳು, ಮನೆಗೆ ಬಂದು ಹೋಗುತ್ತಾ “ಅಮ್ಮಾ, ಒಂದ್ ವೀಳ್ಯ ಕೊಡಿ ಕಾಂಬ”. ಎಂದು , ಹೊರಗಿನ ಜಗಲಿಯಲ್ಲಿ ಕುಕ್ಕರುಕಾಲಿನಲ್ಲಿ ಕುಳಿತು ಮಾತಾಡಿಸಿ ಹೋಗುತ್ತಿದ್ದರು. “ಅಮ್ಮಾ. ಇಂದು ಪೇಟೆಗೆ ಯಾರೂ ಹೋಪರ್ ಇಲ್ಯೆ. ಒಂದು ಚೂರ್ ಕಾಫಿ ಪುಡಿ ಕೊಡ್ತ್ರ್ಯೆ?. ಸಕ್ಕರೆ ಕೊಡಿನ್ಯೆ ಬೆಲ್ಲ ಕೊಡಿನ್ಯೆ. ಕಡಿಕ್ ತಂದು ಕೊಡತಿ” ಎಂದು ಕಡ ತೆಗೆದುಕೊಂಡು ಹೋಗಿ, ಮತ್ತೆ ಯಾವಾಗಲಾದರೂ ಹಿಂದಿರುಗಿಸುತ್ತಿದ್ದರು. ಅತ್ತೆಯೂ ಅವರ ಸುಖಕಷ್ಟಕ್ಕೆ ಆಗುತ್ತಿದ್ದುದರಿಂದ ಆಗಾಗ ಕೈಗಡವಾಗಿ ಹಣವನ್ನೂ ಕೊಡುತ್ತಿದ್ದರು.

ಆವಾಗಿನ ಒಂದು ಆಕಸ್ಮಿಕ ಬೆಳವಣಿಗೆಯೆಂದರೆ ಇಂದಿರಾಗಾಂಧಿ ಸರಕಾರದ ಒಕ್ಕಲು ಮಸೂದೆ ಕಾನೂನು ಬಂದದ್ದು. ಉಳುವವನೇ ಭೂಮಿಯ ಒಡೆಯ. ನಿಜವಾದ ಅಧಿಕಾರವಿದ್ದ ಯಜಮಾನನಿಗೆ ಭೂಮಿ ಇಲ್ಲ. ಆದರೆ ನಾವು ನಮಗಿದ್ದ ಬೇಸಾಯವನ್ನು ಮಾಡಲು, ಕೆಲಸಕ್ಕೆ ಜನ ಹಾಕಿಕೊಂಡು ಮಾಡಿದರೆ ಅಸಲಾಗುವುದಿಲ್ಲವೆಂದು ಮನೆಯ ಹತ್ತಿರದ ಮರಾಠಿ ಮತ್ತು ಕುಡುಬಿಯರು ಅಂತ ಹತ್ತಾರು ಮನೆಯವರಿಗೆ ಮುಕ್ಕಾಲಂಶ ಗದ್ದೆಗಳನ್ನು ಗೇಣಿಗೆ ಕೊಟ್ಟಿದ್ದು ಅವರು ನಿಷ್ಠೆಯಿಂದ ದುಡಿದು, ವರ್ಷ ವರ್ಷ ಗೇಣಿಯನ್ನು ಕೊಟ್ಟು ನಮ್ಮ ಅತ್ತೆ ಇರುವವರೆಗೆ ಅವರನ್ನು ಗೌರವವಾಗಿಯೇ ಕಾಣುತ್ತಿದ್ದರು.

ಅತ್ತೆಯ ಕಾಲಾನಂತರ ಅದೇ ಅವಧಿಯಲ್ಲಿ ಬಂದ ಒಕ್ಕಲು ಮಸೂದೆ ಕಾಯಿದೆಯು, ಕಲ್ಲಟ್ಟೆಯ ಮನೆಯ ಸ್ಥಿತಿಗತಿಯನ್ನು ಬದಲಾಯಿಸಲು ಬಂದಂತಾಯಿತು. ಒಕ್ಕಲುಗಳೆಲ್ಲಾ ಸ್ವಂತ ಬುದ್ಧಿಯನ್ನು ಬಿಟ್ಟು, ಅವರು  ಬೇಸಾಯ ಮಾಡುತ್ತಿದ್ದ ಗದ್ದೆಗಳೆಲ್ಲಾ, ಅವರದೇ ಎಂದು ಹೇಳಿ ಅದಕ್ಕೆ ಡಿಕ್ಲರೇಶನ್ ಕೊಟ್ಟರು. ಆದರೆ ಅಲ್ಲಿರುವ ಆ ಅಸ್ತಿಯು ಅತ್ತೆಯ ಕಾಲದ ನಂತರ, ಅಡಿಗರ ಮಕ್ಕಳಿಗೆ ಅವರ ಪೀಳಿಗೆಗೆ ಸೇರಬೇಕಿತ್ತು. ಅವರು  ನಮ್ಮನ್ನು ಅಲ್ಲಿಂದ ಹೋಗಲು ಒತ್ತಾಯ ಮಾಡದೇ ಇದ್ದುದರಿಂದ ನಾವೇ ಅದನ್ನು ಅನುಭೋಗಿಸಿಕೊಂಡು ಬರುತ್ತಿದ್ದೆವು. ಆದರೆ ಅಲ್ಲಿ ವಾಸಮಾಡಿ ಕೊಂಡಿದ್ದರಿಂದ ನಾವೇನು ಅಡಿಗರಿಗೆ ಗೇಣಿಯನ್ನೋ ಮತ್ತೊಂದನ್ನೋ ಕೊಡುತ್ತಿರಲಿಲ್ಲ. ಆದರೆ ಈ ಒಕ್ಕಲು ಮಸೂದೆಯ ಕಾನೂನಿನಿಂದ ಅದು ನಮಗೂ ಇಲ್ಲ, ಅಡಿಗರಿಗೂ ಇಲ್ಲ ಅಂತ ಆಗುತ್ತದೆ ಎಂದು ಅಪ್ಪಯ್ಯ ಮುಂದಿನ ಸಾಧ್ಯತೆಗಳ ಬಗ್ಗೆ ಕುಂದಾಪುರದಲ್ಲಿ ಒಬ್ಬ ವಕೀಲರಲ್ಲಿ ಹೋಗಿ, ಅಭಿಪ್ರಾಯ ಕೇಳಿದಾಗ ಹೇಳಿದ್ದನ್ನು ಅಪ್ಪಯ್ಯ ನಂಬಬೇಕಾಯಿತು. ಅವರು ಅಪ್ಪಯ್ಯನ ಅಭಿಮಾನಿಗಳೂ ಆಗಿದ್ದು, “ನೀವು ಸುಮ್ಮನಿದ್ದರೆ ಆಗುವುದಿಲ್ಲ. ಕೊನೆಗೆ ಆ ಆಸ್ತಿ ಯಾರಿಗೂ ಇಲ್ಲದ ಹಾಗಾಗುತ್ತದೆ” ಅಂತ ಹೇಳಿದ್ದನ್ನು ಕೇಳಿ ಅಪ್ಪಯ್ಯನೂ ನಾವು ಮಾಡುತ್ತಿದ್ದ ಬೇಸಾಯದ ಗದ್ದೆ ಮತ್ತು ಗೇಣಿಗೆ ಕೊಟ್ಟ ಗದ್ದೆಯನ್ನೂ ಸೇರಿಸಿ ಅಡಿಗರಿಗೆ ಆ ಆಸ್ತಿ ನಮ್ಮ ಅನುಭೋಗದ್ದು ಎಂದು ಡಿಕ್ಲರೇಶನ್ ಕೊಟ್ಟರು. ಅಪ್ಪಯ್ಯನಿಗೆ ಈ ಮಾರ್ಗ ಸುತರಾಂ ಇಷ್ಟವಿರಲಿಲ್ಲ. ಆದರೂ ನಮ್ಮ ಒಕ್ಕಲುಗಳು ಸ್ವಲ್ಪವೂ ನಮಗೆ ತಿಳಿಸದೇ, ಹೀಗೆ ಮಾಡಿದರಲ್ಲ ಎಲ್ಲವೂ ಕೈ ತಪ್ಪಿ ಹೋಗುತ್ತದೆ ಎಂದು ಹಾಗೆ ಮಾಡಲೇ ಬೇಕಾಯಿತು. ಆದರೆ ಅದರಿಂದ, ಆವರೆಗೆ ನಮ್ಮ ಬಗ್ಗೆ ಸ್ವಲ್ಪ ಮೃದುವಾಗಿದ್ದ ಅಡಿಗರ ಕುಟುಂಬದೊಂದಿಗೆ ಮತ್ತೆ ನಿಷ್ಠುರವಾಗಬೇಕಾಯಿತು. ಡಿಕ್ಲರೇಶನ್ ವ್ಯಾಜ್ಯ ಕೋರ್ಟಿನಲ್ಲಿ ನಡೆದು ನಡೆದು ನಮ್ಮ ಕುಂದಾಪುರದ ವಕೀಲರಿಗೆ ಅಪ್ಯಯ್ಯನಿಂದ ಹಣ ಸಂದಾಯವಾಗುತ್ತಲೇ ಬಂದದ್ದು ಮಾತ್ರವಾಗಿ, ಕೇಸು ಮುಂದೆ ಮುಂದೆ ಹೋಯಿತು. ನಂತರ ಕೋರ್ಟಿನಲ್ಲಿಯೇ ತೀರ್ಮಾನವಾಗಿ ಇಡೀ ಆಸ್ತಿಯನ್ನು  ನಮಗೂ, ನಮ್ಮ ಒಕ್ಕಲುಗಳಿಗೂ ಅಷ್ಟಷ್ಟನ್ನು ಪಾಲು ಅಂತ ಮಾಡಿ ತೀರ್ಮಾನ ಕೊಟ್ಟರು. ಆಗಲೇ ಒಕ್ಕಲುಗಳಲ್ಲಿ ನಿಷ್ಠುರವಾಗಿದ್ದರಿಂದ ’ಏನಾದರೂ ಬಿಡುವುದಿಲ್ಲ’ ಎಂದು ಆ ತೀರ್ಪಿಗೆ, ಆಕ್ಷೇಪಿಸಿ, ಅಪ್ಪಯ್ಯ ಮೇಲಿನ ಕೋರ್ಟಿನಲ್ಲಿ ಅಫೀಲು ಮಾಡಿದರು. ಅಂತೂ ಅಪ್ಪಯ್ಯನ ಕಾಲದವರೆಗೂ ಆ ಟ್ರಿಬ್ಯುನಲ್ ವ್ಯಾಜ್ಯ ಇತ್ಯರ್ಥ ಆಗಲೇ ಇಲ್ಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ