ಶುಕ್ರವಾರ, ಅಕ್ಟೋಬರ್ 13, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 26

ಆಗ ಕುಂದಾಪುರದ ನಮ್ಮ ಭಂಡಾರ್ಕಾರ್ಸ್ ಕಾಲೇಜು ಗಲಾಟೆಗೆ, ಸ್ಟ್ರೈಕ್ ಗೆ ಬಹಳ ಪ್ರಸಿದ್ಧಿಯಾಗಿತ್ತು. ಮಕ್ಕಳು ಎಷ್ಟು ಜೋರಾಗಿದ್ದರು ಎಂದರೆ ಒಮ್ಮೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ತುಂಬಾ ಗಲಾಟೆ ಮಾಡುತ್ತಿದ್ದಾಗ ಪ್ರಿನ್ಸಿಪಾಲರು ಬುದ್ಧಿ ಹೇಳಲು ಕ್ಲಾಸಿಗೆ ಬಂದರು. “ಹಾಗೆ ಮಾಡಬಾರದು ಹೀಗೆ ಮಾಡಬೇಕು” ಅಂತ ಉಪದೇಶವಾಯಿತು. ಅವರು ಬಂದಾಗ ಮತ್ತು ಅವರು ಮಾತನಾಡಿದ ಅಷ್ಟೂ ಹೊತ್ತು ಎಲ್ಲರೂ ಪಾಪದವರಂತೆ ಸುಮ್ಮನೇ ಕುಳಿತಿದ್ದರು. ಅವರು ಮಕ್ಕಳಿಗೆ ಚೆನ್ನಾಗಿ ಬೈದು ಮುಗಿಸಿ, ಕ್ಲಾಸಿನಿಂದ ತಿರುಗಿ ಹೊರಗೆ ಹೋಗಿ, ಪ್ಯಾಸೇಜಿನಲ್ಲಿ ಮುಂದೆ ಹೋಗುತ್ತಿದ್ದರಷ್ಟೆ. ಅವರ ಬೆನ್ನಿನ ಹಿಂದೆಯೇ ಡಮ್ ಡಮ್ ಶಬ್ದ. ಒಮ್ಮೆಲೇ ಹೌಹಾರಿದ ಅವರು ಹಿಂದೆ ನೋಡದೇ ಓಡಿ ಹೋಗಬೇಕಾಯಿತು. ಕ್ಲಾಸಿನ ಒಳಗಿನಿಂದ ಕಿಟಕಿಯ ಮೂಲಕ ಹೊರಗೆ ಅವರ ಹಿಂದೆಯೇ ಬೀಳುವಂತೆ ಯಾರೋ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಎಸೆದು ಬಿಟ್ಟಿದ್ದರು. 

ಆಗ ಶಾಸ್ತ್ರಿ ವೃತ್ತದ ಹತ್ತಿರವೇ ರಸ್ತೆಯ ಆಚೆ ಮೂಡುದಿಕ್ಕಿನಲ್ಲಿ, ದೊಡ್ಡ ಬಂಟ್ಸ್ ಹಾಸ್ಟಲ್ ಇತ್ತು. ಈಗ ಇಲ್ಲ. ಅದನ್ನು ಕೆಡವಿ ದೊಡ್ಡ ಮದುವೆ ಹಾಲ್ ಮಾಡಿದ್ದಾರೆ. ಅಲ್ಲಿ ಊರ ಪರ ಊರ ಬಂಟ್ಸ್ ನವರ ಮಕ್ಕಳು, ಕಾಲೇಜಿನಲ್ಲಿ ಓದುವವರು ಮಾತ್ರ ಇರುತ್ತಿದ್ದರು. ಅಲ್ಲಿಯ ಮಕ್ಕಳಲ್ಲಿಯೇ ಎರಡು ಗುಂಪು. ಯಾವಾಗಲೂ ಹೊಡೆದಾಟ. ಗಲಾಟೆ. ಆಗ ಜಯಪ್ರಕಾಶ,  ಉದಯ ಅಂತೆಲ್ಲಾ ಯಾರುಯಾರೋ ಬಹಳ ಜೋರು ಜೋರಿನ, ಭರ್ತಿ ಆಳಿನ ಗಡ್ಡ ಮೀಸೆ ಬಿಟ್ಟು ಗತ್ತಿನಲ್ಲಿ ತಿರುಗುವ ಮಕ್ಕಳು ಇದ್ದರು. ಅವರು ಶರ್ಟಿನ ಮೇಲಿನೆರಡು ಗುಂಡಿಯನ್ನು ಹಾಕದೇ, ಅವರ ಅಗಲವಾದ ಎದೆಯನ್ನು ತೋರಿಸುತ್ತಾ ನಾಲ್ಕಾರು ಮಕ್ಕಳ ಜೊತೆಗೆ ಬರುತ್ತಿದ್ದರೆ, ಅವರನ್ನು ನೋಡಿದ ನಾವು ಬದಿಗೆ ಸರಿದು ದಾರಿ ಬಿಡುತ್ತಿದ್ದೆವು. ನಮಗೆ ಹೆದರಿಕೆಯಾಗುತ್ತಿತ್ತು. ಕೆಲವು ಹುಡುಗರು ಅವರ ಅಂಗಿಯ ಒಳಗೆ ತಲವಾರು, ಕತ್ತಿಯನ್ನು, ಸೈಕಲ್ ಚೈನನ್ನು ಇರಿಸಿಕೊಂಡು ತಿರುಗುತ್ತಿದ್ದರು ಅಂತಲೂ ಹೇಳುತ್ತಿದ್ದರು.

ಒಮ್ಮೆ ಒಂದು ಗಲಾಟೆ ಪ್ರಕರಣದಲ್ಲಿ ಹೊಡೆದಾಟವಾಗಿ ಒಂದಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾದರು. ಅವರಲ್ಲೇ ವೈರ ಬೆಳೆದು ಪೋಲೀಸ್ ಕೇಸ್ ಆಯಿತು. ಅವರಲ್ಲೇ ಒಂದು ಪಕ್ಷದವರ ದೂರಿನ ಮೇಲೆ, ವಿಚಾರಣೆ ಮಾಡಲು, ಆಗಿನ ಬಹಳ ಜೋರು ಸ್ಟ್ರಿಕ್ಟ್ ಅಂತ ಹೆಸರುವಾಸಿಯಾಗಿದ್ದ, ಎಸ್. ಐ. ಭಾವ ಎನ್ನುವವರು ಅಲ್ಲಿನ ಕೆಲವು ಹುಡುಗರಿಗೆ ಪೋಲೀಸ್ ಸ್ಟೇಶನ್ನಿಗೆ ಬರಹೇಳಿದರು. ಇವರು ಹೋಗಲೇ ಇಲ್ಲ. ಕರೆಯಲು ಬಂದ ಪೋಲೀಸರಿಗೆ “ಧೈರ್ಯವಿದ್ದರೆ ಅವರೇ ಇಲ್ಲಿಗೆ ಬಂದು ಕರೆಯೊಯ್ಯಲಿ” ಎಂಬ ಸವಾಲು ಬೇರೆ. ಎಸ್ ಐ ಯವರಿಗೂ ಹುರುಪು. ಕೈಯಲ್ಲಿರುವ ಅಧಿಕಾರದ ಧೈರ್ಯ. ಅವರು ಜೋರಿನಿಂದಲೇ ಏನಾಗುತ್ತದೆ?. ನೋಡಿಯೇ ಬಿಡುತ್ತೇನೆ ಎಂದು ಹಾಸ್ಟೆಲ್ಲಿಗೆ ಅವರ ಬುಲೆಟ್ ಹತ್ತಿಕೊಂಡು ಬಹಳ ರಭಸದಿಂದ ಬಂದೇ ಬಿಟ್ಟರು.

ಅದು ಚೌಕಾಕಾರದ ಮೂರು ಮಹಡಿಯ ದೊಡ್ಡ ಕಟ್ಟಡ. ಪಶ್ಚಿಮದ ರಸ್ತೆಯ ಭಾಗದಲ್ಲಿ ಹೆಬ್ಬಾಗಿಲು ಇದ್ದರೆ, ಮಧ್ಯದಲ್ಲಿ ವಿಶಾಲವಾದ ಬೈಕ್ ಸೈಕಲ್ ಗಳನ್ನು ಇಡುವ ದೊಡ್ಡ ಅಂಗಳದಂತಹ ವಿಶಾಲ ಸ್ಥಳ. ಎಸ್ ಐ ಯವರು ಅಲ್ಲಿಗೆ ಹೋಗಿ ಮಧ್ಯದಲ್ಲಿ ನಿಂತು. ಆಚೆ ಈಚೆ ನೋಡಿದರು. ಕಡೆಗೆ ಮೇಲೆ ನೋಡಿ, ಕೇಸ್ ಇರುವ ಹುಡುಗರ ಹೆಸರು ಹಿಡಿದು ಗಟ್ಟಿಯಾಗಿ ಕೂಗಿ, “ಯಾರದು ಕಾಲೇಜಿನಲ್ಲಿ ನ್ಯೂಸೆನ್ಸ್ ಮಾಡಿದ್ದು? ಹೊರಗೆ ಬನ್ನಿ” ಎಂದು ಕರೆದರು.

ಆದರೆ ಯಾರೂ ಹೊರಗೆ ಬರಲಿಲ್ಲ. ಅವರ ಸುತ್ತ ಇದ್ದ ಕೈಕೆಳಗಿನ ನಾಲ್ಕಾರು ಪೋಲೀಸರು ಆಗಲೇ ಎಚ್ಚರಿಸಿದ್ದರಿಂದ ಸೀದಾ ರೂಮಿನ ಒಳಗೆ ನುಗ್ಗಿ ಹೋಗಲು ಧೈರ್ಯ ಸಾಲಲಿಲ್ಲ ಎಂದು ಕಾಣುತ್ತದೆ. ಎಸ್. ಐ.ಯವರು  ಕೋಪದಿಂದ ಕುದಿದರು. ಅದು ತಮಗೆ ಆದ ಅವಮಾನ ಎಂದು ಅವರ ಸ್ಥಾನ ಮಾನ, ಅಧಿಕಾರವೂ ಎಚ್ಚರಿಸಿತು. ಆಮೇಲೆ ಅಲ್ಲಿಯೇ ಅಂಗಳದಲ್ಲಿ ಇರಿಸಿದ್ದ ಕೆಲವು ಸೈಕಲ್ಲುಗಳನ್ನು ಕೆಳಗೆ ಹಾಕಿ ಅದರ ಮೇಲೇ ಬೈಕ್ ಹಾರಿಸಿ ಕೆಲವು ಸೈಕಲ್ಲುಗಳನ್ನು ಪುಡಿಮಾಡಿದರು. ಆದರೂ ಹುಡುಗರು ಯಾರೂ ಹೊರಗೆ ಬರಲಿಲ್ಲ. ಎಸ್. ಐ. ಯವರು ಮತ್ತೆ ಜೋರಾಗಿ ಅರಚಿ ಕರೆದರು. ಅಷ್ಟರಲ್ಲಿ ಅನಿರೀಕ್ಷಿತವಾದ ಘಟನೆಯೊಂದು ನಡೆದುಬಿಟ್ಟಿತು. ಮೇಲಿನಿಂದ ಪದಾರ್ಥವನ್ನು ಅರೆಯಲು ಉಪಯೋಗಿಸುವ ದೊಡ್ಡ ಕಲ್ಲಿನ ಮಗುವನ್ನು  ಯಾರೋ ದೊಪ್ಪೆಂದು ಕೆಳಗೆ ಎತ್ತಿ ಹೊತ್ತು ಹಾಕಿದರು. ಪುಣ್ಯಕ್ಕೆ ಅದು ಎಸ್. ಐ. ಯವರಿಗಿಂತ ಸ್ವಲ್ಪ ಹಿಂದೆ ಬಿದ್ದುದರಿಂದ ಅವರಿಗೆ ಏನೂ ಪೆಟ್ಟಾಗಲಿಲ್ಲ. ಆದರೆ ಬೈಕ್ ನ ಹಿಂದಿನ ಒಂದು ಬದಿಯ ಮೇಲೆ ಬಲವಾಗಿ ಬಿದ್ದುದರಿಂದ ಅದು ಜಕಮ್ ಆಯಿತು. ಕಲ್ಲು ದಡ್ ದಡ್ ಎಂದು ಸದ್ದು ಮಾಡುತ್ತಾ ಹೋಗಿ ಮೂಲೆಯಲ್ಲಿ ಬಿದ್ದಿತು. ಮೇಲೆ ನೋಡಿದರೆ ಯಾರೂ ಇಲ್ಲ. ಎಲ್ಲರಿಗೂ ಗಾಬರಿಯಾಯಿತು. ಇಂತಹಾ ಸಂದರ್ಭದಲ್ಲಿ ಮತ್ತೆ ಎಲ್ಲಾ ಮಕ್ಕಳು ಒಂದಾಗಿದ್ದರು. ಅವರಲ್ಲೇ ಒಗ್ಗಟ್ಟು. ಯಾರೂ ಬಾಯಿಬಿಡುವುದಿಲ್ಲ.

ಆಗ ಎಸ್. ಐ. ಯವರಿಗೆ ಸ್ವಲ್ಪ ಹೆದರಿಕೆಯಾಯಿತು. ಈ ಹಿಂದು ಮುಂದಿಲ್ಲದ ಬಿಸಿ ರಕ್ತದ ಮಕ್ಕಳ ದೆಸೆಯಿಂದ ಕೈ ಕಾಲು ಮುರಿದುಕೊಂಡರೆ ಮತ್ತೆ ರಗಳೆ ಯಾಕೆ? ಎಂದೂ ಅನ್ನಿಸಿರಬೇಕು. ಅದೂ ಅಲ್ಲದೇ ಅಲ್ಲಿರುವುದು ಪ್ರಭಾವಿ ವ್ಯಕ್ತಿಗಳ, ಶ್ರೀಮಂತರ ಮಕ್ಕಳೇ ಅಂತಲೂ ಗೊತ್ತಾಗಿರಬೇಕು. ಆದರೆ ಹಾಗೆಯೇ ಹಿಂದೆ ಹೋದರೆ ಅವರ ಮರ್ಯಾದೆ ಏನಾಗುತ್ತದೆ? ಕೂಡಲೇ ಸಿಟ್ಟಿನಿಂದ, “ನೀವು ನನ್ನನ್ನು ಏನು ಅಂತ ತಿಳಿದಿದ್ದೀರಿ? ಇದನ್ನು ಹೀಗೆಯೇ ಬಿಡುವುದಿಲ್ಲ. ಕೋರ್ಟಿನಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ.” ಎನ್ನುತ್ತಾ ಅವರ ಸಹಚರರೊಂದಿಗೆ ಜಾಗ ಖಾಲಿ ಮಾಡಿದರು. ಅಂತೂ ಅವರಿಗೂ ಏನೂ ಮಾಡಲಾಗಲಿಲ್ಲ. ಮುಂದೆ ಏನಾಯಿತೋ ಗೊತ್ತಾಗಲಿಲ್ಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ