ಗುರುವಾರ, ಅಕ್ಟೋಬರ್ 12, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 25

ಪ್ರತೀ ವರ್ಷ ನವಂಬರ್ ಒಂದರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತಾಳಮದ್ದಲೆ ನಡೆಯುತ್ತಿತ್ತು. ಬಹುಷ್ಯ ಅದು ಈಗಲೂ ಮುಂದುವರಿದಿದೆ. ಇಡೀ ರಾತ್ರಿಯ ತಾಳಮದ್ದಲೆ. ಒಂದು ಬಡಗುತಿಟ್ಟಿನ ಭಾಗವತಿಕೆಯಲ್ಲಿ ಇದ್ದರೆ ಇನ್ನೊಂದು ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಇರುತ್ತಿತ್ತು. ಕಾಲೇಜಿನ ತಾಳಮದ್ದಲೆ ಎಂದರೆ ಆಗಿನ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಗಳೆಲ್ಲ ಇರುತ್ತಿದ್ದರು. ನಮ್ಮ ಕಾಲೇಜಿನ ತಾಳಮದ್ದಲೆಯಲ್ಲಿ ಭಾಗವಹಿಸುವುದೆಂದರೆ ಕಲಾವಿದರಿಗೆ ಅದೊಂದು ಪ್ರತಿಷ್ಠೆಯ ವಿಷಯವಾಗಿತ್ತು. ಶೇಣಿಯವರು, ರಾಮದಾಸ ಸಾಮಗರು, ಪೆರ್ಲ ಕೃಷ್ಣ ಭಟ್ರು, ಕುಂಬ್ಳೆ ಸುಂದರ್, ಪ್ರಭಾಕರ ಜೋಷಿಯವರು, ತೆಕ್ಕಟ್ಟೆ ಆನಂದ ಮಾಸ್ಟ್ರು  ದಾಮೋದರ ಮಂಡೆಚ್ಚರು. ಬಲಿಪರು, ಅಪ್ಪಯ್ಯ, ಕಾಳಿಂಗ ನಾವಡರು ಮುಂತಾದ ಅತಿರಥ ಮಹಾರಥ ಕಲಾವಿದರು ಎಲ್ಲರೂ ಇರುವ ಒಂದು ದೊಡ್ಡ ಕಾರ್ಯಕ್ರಮವಾಗುತ್ತಿತ್ತು.

ಒಮ್ಮೆ ನಾನು ಓದುತ್ತಿರುವಾಗ ಆದ ತಾಳಮದ್ದಲೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ಆ ದಿನ ಮೊದಲ ಪ್ರಸಂಗ ವಾಲಿವಧೆ. ರಾಮದಾಸ ಸಾಮಗರ  ಮತ್ತು ಶೇಣಿಯವರ ರಾಮ ಮತ್ತು ವಾಲಿ. ಕೊನೆಯ ಸನ್ನಿವೇಶ. ಆ ಸಮಯದಲ್ಲಿ ಅವರ ವಾಗ್ಯುದ್ಧ ನೋಡಲೆಂದೆ ಜನ ಎಲ್ಲೆಲ್ಲಿಂದ ಬರುತ್ತಿದ್ದರು. ಇಡೀ ಹಾಲ್ ಪ್ರೇಕ್ಷಕರಿಂದ ತುಂಬಿತ್ತು. ಅಪ್ಪಯ್ಯನ ಕ್ರಮ ಅಂದರೆ,  ತಾಳಮದ್ದಲೆಯಲ್ಲಿ.  ಅರ್ಥದಾರಿಗಳು ಅವಧಿ ಮೀರಿ ಅರ್ಥ ಹೇಳಿದರೆ, ಬೋರ್ ಆಯಿತು ಅನ್ನಿಸಿದರೆ ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಲು ತಾಳವನ್ನು ಮೆಲ್ಲಗೆ ಕುಟ್ಟಿ ಸೂಚನೆ ಕೊಡುತ್ತಿದ್ದರು. ಮೂರು ಬಾರಿ ತಾಳ ಹೊಡೆಯುವುದರ ಒಳಗೆ ಅರ್ಥದಾರಿಗಳು ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಬೇಕು. ಅದು ತಾಳಮದ್ದಲೆ ಬಿದ್ದು ಹೋಗದೇ ಇರಲು ಮತ್ತು ನಿರ್ದಿಷ್ಟ ಅವಧಿಯಲ್ಲಿ ಕಾರ್ಯಕ್ರಮ ಮುಗಿಯಲು ಅಪ್ಪಯ್ಯ ಅನುಸರಿಸುತ್ತಿದ್ದ, ಹಾಗೂ ಅಪ್ಪಯ್ಯ ಮತ್ತು ಕಲಾವಿದರೊಳಗಿನ ಒಂದು ಅಲಿಖಿತ ಒಪ್ಪಂದ. ತಾಳಮದ್ದಲೆ ಶುರುವಾಗುವ ಮೊದಲು ಅಲ್ಲಿಯ ವ್ಯವಸ್ಥಾಪಕರೂ ಕಲಾವಿದರೂ ಈ ನಿಯಮವನ್ನು ತಿಳಿದಿರುತ್ತಿದ್ದರು.

ಆದರೆ ಅಂದು ತಾಳಮದ್ದಲೆಯಲ್ಲಿ ಅಪ್ಪಯ್ಯ ಹಾಕಿದ ನಿಯಮವು  ಅಲ್ಲಿ ನಡೆಯಲಿಲ್ಲ. ಶೇಣಿಯವರು, ಸಾಮಗರು ಮಾತಿಗೆ ಮಾತು ಬೆಳೆದು ವಾದಕ್ಕೆ ಪ್ರತಿವಾದ ಮಾಡಿಕೊಳ್ಳುತ್ತಾ ಬಿಸಿಬಿಸಿಯಾಗಿ ಜೋರಿನಿಂದ ಅರ್ಥ ಹೇಳುತ್ತಿದ್ದರು. ಸಮಯದ ಅರಿವೆಯೇ ಅವರಿಗೆ ಇರಲಿಲ್ಲ. ಅಪ್ಪಯ್ಯ ಮೊದಲೇ ಹೇಳಿದಂತೆ ಒಂದು ತಾಳ ಹೊಡೆದು ಸೂಚನೆ ಕೊಟ್ಟರು. ಎರಡನೆಯ ಸಲವೂ ಆಯಿತು, ಆದರೆ ಅವರು ಮುಂದಿನ ಪದ್ಯಕ್ಕೆ ಬರುವಂತೆಯೇ ಕಾಣಲಿಲ್ಲ. ಆಮೇಲೆ ತುಂಬಾ ಅಸಮಾಧಾನದಿಂದ ಮೂರನೆಯ ಬಾರಿಯೂ ತಾಳ ಹೊಡೆದು ಸೂಚನೆಯನ್ನು ಕೊಟ್ಟಾಯಿತು. ಆದರೆ ಅರ್ಥದಾರಿಗಳು ಮಾತು ನಿಲ್ಲಿಸುವಂತೆ ಕಾಣಲಿಲ್ಲ. ಅಪ್ಪಯ್ಯನಿಗೆ ತಾಳ್ಮೆ ತಪ್ಪಿತು. ನಿಧಾನವಾಗಿ ಅವರ ಸ್ಥಾನದಿಂದ ಎದ್ದು ಆ ದೊಡ್ಡ ಹಾಲಿನಿಂದ ಹೊರಗೆ ಬಂದು, ಒಂದು ಕಂಬಕ್ಕೆ ಒರಗಿ ಕತ್ತಲನ್ನು ನೋಡುತ್ತಾ ನಿಂತು ಬಿಟ್ಟರು. ಸಭೆಯಲ್ಲಿ ಸೇರಿದ ಪ್ರೇಕ್ಷಕರೂ ಹಿಂದಿನಿಂದ, “ಸಾಕು, ಮುಂದೆ ಹೋಗಲಿ” ಎಂದು ಕೂಗಲು ಶುರು ಮಾಡಿದರು.

ಅಂತೂ ಇಂತೂ ಕೊನೆಗೆ ವಾದವನ್ನು ಮುಗಿಸಿದ ಆ ಕಲಾವಿದರು, ಮುಂದಿನ ಪದ್ಯಕ್ಕೆ ಭಾಗವತರನ್ನು ನೋಡಿದರೆ, ಭಾಗವತರು ಎಲ್ಲಿದ್ದಾರೆ? ಅವರ ಸ್ಥಾನ ಖಾಲಿ. ಮದ್ದಲೆ ಬಾರಿಸುತ್ತಿದ್ದ ದುರ್ಗಪ್ಪ ಆಚೆ ಈಚೆ ನೋಡುತ್ತಿದ್ದಾನೆ. ಭಾಗವತರು ಇಲ್ಲ. ಹಾರ್ಮೋನಿಯಂ ಬಾರಿಸುತ್ತಿದ್ದವರಿಗೂ ಗೊತ್ತಿಲ್ಲ. ತಾಳ ಮದ್ದಲೆ ನಿಂತಿತು. ವ್ಯವಸ್ಥಾಪಕರನ್ನು ಕರೆಸಿ  ಭಾಗವತರು ಎಲ್ಲಿ ಅಂತ ಹುಡುಕಿಸುವುದಾಯಿತು. ಯಾರೋ “ಅವರು ಹೊರಗೆ ಇದ್ದಾರೆ” ಅಂದರು. ವ್ಯವಸ್ಥಾಪಕರು ಓಡಿ ಭಾಗವತರನ್ನು ಕಂಡು, “ಏನು ಇಲ್ಲಿದ್ದೀರಿ? ಏನಾಯಿತು? ಬನ್ನಿ ಪದ್ಯಕ್ಕಾಯಿತು” ಎಂದರೆ, ಅಪ್ಪಯ್ಯನಿಂದ, “ಅವರಿಗೆ ಭಾಗವತಿಕೆ ಯಾಕೆ? ಅವರೇ ಅರ್ಥ ಹೇಳಿ ಮುಗಿಸಲಿ, ಅವರು ನನ್ನ ಸೂಚನೆಯನ್ನು ಪಾಲಿಸಲಿಲ್ಲ, ತಾಳಮದ್ದಲೆ ಹಾಳಾದರೆ ನಾನು ಇದ್ದು ಏನು ಮಾಡಿದಂತಾಯಿತು?” ಎನ್ನುವ ಉತ್ತರ ಬಂತು. ಕೊನೆಗೆ “ಹಾಗಲ್ಲ, ಹೀಗೆ. ಸಮಾಧಾನ ಮಾಡಿಕೊಳ್ಳಿ. ತಾಳಮದ್ದಲೆ ನಿಂತರೆ ನಮ್ಮ ಮರ್ಯಾದೆ  ಹೋಗುತ್ತದೆ ಬನ್ನಿ”, ಎಂದು ಗೋಗರೆದ ಮೇಲೆ ಅಪ್ಪಯ್ಯ ಪುನಹ ಬಂದು ಭಾಗವತಿಕೆಗೆ, ಅವರ ಸ್ವಸ್ಥಾನದಲ್ಲಿ ಕುಳಿತರು ಅಂತಾಯಿತು. ನಂತರ ಎಲ್ಲರು ಒಂದು ತರಹ ಬಿಗುವಾಗಿಯೇ ಇದ್ದರು. ಮುಂದೆ ಏನಾಗುತ್ತದೋ? ಯಾರು ಯಾರೊಡನೆ ಮಾತಿಗಿಳಿದು ಜಗಳ ಶುರುವಾಗುತ್ತದೋ ಅಂತ ಆತಂಕದಿಂದಲೇ ತಾಳಮದ್ದಲೆ ಮುಂದುವರಿಯಿತು. ಆದರೆ ಹೆಚ್ಚುಕಡಿಮೆ ಒಂದು ಅರ್ಧಗಂಟೆಯ ಅಂತರದಲ್ಲಿ ಪೂರ್ವದಲ್ಲಿ ನಿರ್ಣಯಿಸಿದ ಅವಧಿಯಲ್ಲಿಯೇ ಆ ಪ್ರಸಂಗವೂ ಮುಗಿಯಿತು, ಮುಂದಿನ ಪ್ರಸಂಗಕ್ಕೆ ಮುಂದಿನ ಭಾಗವತರಿಗೆ ಅಪ್ಪಯ್ಯ ತಾಳವನ್ನು ಹಸ್ತಾಂತರಿಸಿದರು.

ರಂಗಸ್ಥಳದಲ್ಲಿ ಕಲಾವಿದರು ಪದ್ಯವನ್ನು ಎತ್ತುಗಡೆ ಮಾಡಿ ಮಧ್ಯ ಮಧ್ಯ ಕೆಲವು ಪದಗಳನ್ನು ಮಾತ್ರ ಹೇಳಬೇಕು. ಒಳ್ಳೆಯ ಸ್ವರದ ಕಲಾವಿದರಿದ್ದರೆ ಭಾಗವತರು ಅವರಿಗೆ ಪದ್ಯದ ನಿರ್ದಿಷ್ಟ ಪದವನ್ನು ಹೇಳಲು ಅವಕಾಶ ಮಾಡಿಕೊಟ್ಟು, ಅದರ ಮುಂದಿನ ಪದವನ್ನು ಅದೇ ಶೃತಿಯಲ್ಲಿ ಹೇಳುವುದು ಸಂಪ್ರದಾಯ. ಆಗಿನ ಕಾಲದ ಒಬ್ಬ ಪ್ರಸಿದ್ಧ ಕಲಾವಿದರು ಅವರ ಪಾತ್ರದಲ್ಲಿ ಬರುವ ಇಡೀ ಪದ್ಯವನ್ನು ಹೇಳುತ್ತಿದ್ದರು. ಆದರೆ ಅಪ್ಪಯ್ಯನಿಗೆ ಅದು ಕಿರಿಕಿರಿಯಾಗುತ್ತಿತ್ತು. “ನೀವೇ ಎಲ್ಲ ಪದ್ಯ ಹೇಳುವುದಾದರೆ, ನಾವು ಭಾಗವತರು ಅಂತ ಯಾಕೆ ಇರುವುದು?” ಎಂದು ಅವರಿಗೆ ಒಮ್ಮೆ ಹೇಳಿಯೂ ಹೇಳಿದರು. ಆದರೆ ಅವರು ಆಟದ ವಿಶೇಷ ಆಕರ್ಷಣೆಯಾಗಿ, ಅತಿಥಿ ಕಲಾವಿದರಾಗಿ ಬರುತ್ತಿದ್ದುದರಿಂದ ಮತ್ತು ಅಪ್ಪಯ್ಯ ಮತ್ತು ಅವರ ಜೋಡಿಯನ್ನು ಪ್ರೇಕ್ಷಕರೂ ಬಯಸುತ್ತಿದ್ದುದರಿಂದ ಆ ಕಲಾವಿದರು ಅದಕ್ಕೆ ಅಷ್ಟು ಗಮನವನ್ನು ಕೊಡಲಿಲ್ಲ ಅಂತ ಕಾಣುತ್ತದೆ. ಅಪ್ಪಯ್ಯನಿಗೆ ಒಮ್ಮೆ ಸಿಟ್ಟು ಬಂದು, ಆ ಕಲಾವಿದರ ಪಾತ್ರವು ರಂಗಸ್ಥಳಕ್ಕೆ ಬಂದಾಗ ಅವರ ಮಾಮೂಲಿ ಶೃತಿಗಿಂತ ಮೇಲಿನ ಸ್ಥಾಯಿಯಲ್ಲಿ ಶೃತಿಯನ್ನು ಇಟ್ಟು ಪದ್ಯ ಹೇಳಿದರು. ಅವರಿಗೆ ಆ ಏರುಶೃತಿಯಲ್ಲಿ ಪದ್ಯಕ್ಕೆ ಬಾಯಿ ಹಾಕುವುದೇ ಕಷ್ಟವಾಯಿತು. ಆಗ ಆ ಕಲಾವಿದರ ಒಬ್ಬ ಕಟ್ಟಾ ಅಭಿಮಾನಿಗಳು, “ಉಪ್ಪೂರರು ಅವರಿಗೆ ಬೇಕಂತಲೇ ಅವಕಾಶ ನೀಡದೇ ಪಾತ್ರ ಕಳಪೆಯಾಗುವಂತೆ ಮಾಡಿ ಆಟವನ್ನೇ ಹಾಳು ಮಾಡಿದರು” ಎಂದು ಟೀಕೆ ಮಾಡಿದರು. ಅದು ಅಪ್ಪಯ್ಯನಿಗೆ ತಿಳಿಯಿತು. ಆ ಅಭಿಮಾನಿಗಳೂ ಅಪ್ಪಯ್ಯನ ಸ್ನೇಹಿತರೆ.

ಆ ಅಭಿಮಾನಿಗಳು ಯಾವುದೇ ಆಟವಾಗಲಿ, ತಾಳಮದ್ದಲೆಯಾಗಲಿ ಅವರ ಟೇಪ್ ರೆಕಾರ್ಡರ್ ತಂದು, ಎಲ್ಲಾ ಕಡೆಯಲ್ಲೂ ಇಡೀ ಆಟವನ್ನು ರೆಕಾರ್ಡ್ ಮಾಡುತ್ತಿದ್ದರು. ಒಮ್ಮೆ ಅವರು  ಕಾಲೇಜಿನ ತಾಳಮದ್ದಲೆಯಲ್ಲಿ ಟೇಪ್ ರೆಕಾರ್ಡರ್ ತಂದು ಎಂಪ್ಲಿಪಯರಿಗೆ  ವಯರನ್ನು ಸಿಕ್ಕಿಸಿದ್ದು ನೋಡಿದ ಅಪ್ಪಯ್ಯನಿಗೆ ಒಮ್ಮೆಲೇ ಸಿಟ್ಟು ಬಂದು, ಅವರನ್ನು ಕರೆದು, “ಮೊದಲು ಅದನ್ನು ತೆಗೆಯಿರಿ. ನೀವು ನನ್ನ ಪದ್ಯ ಸಮ ಇಲ್ಲವೆಂದು ಹೇಳಿಕೊಂಡು ತಿರುಗುತ್ತೀರಲ್ಲ. ನನ್ನ ಪದ್ಯ ರೆಕಾರ್ಡ್ ಮಾಡುವುದು ಬೇಡ” ಎಂದು ಹಟ ಹಿಡಿದರು. ಅವರು ಎಂಪ್ಲಿಪೈರಿಂದ  ವಯರ್ ನ್ನು ತೆಗೆಯುವಲ್ಲಿಯವರೆಗೆ ಬಿಡಲಿಲ್ಲ. ನಮಗೆಲ್ಲ ಆಶ್ಚರ್ಯ. ಯಾರು ಬೇಕಾದರೂ “ಉಪ್ಪೂರರೇ, ನಮ್ಮ ಕಡೆಗೆ ಯಾವಾಗಲಾದರೂ ಒಮ್ಮೆ ಬನ್ನಿ. ಒಂದು ನಾಲ್ಕು ಪದ್ಯ ಹೇಳಿದರೆ ಕೇಳುವ ಆಶೆಯಿದೆ” ಎಂದರೆ ನೆನಪಿಟ್ಟುಕೊಂಡು ಅವಕಾಶವಾದಾಗ ಅವರ ಮನೆಗೆ, ಮದ್ದಲೆಯವನನ್ನು ಕರೆದುಕೊಂಡು ಹೋಗಿ, ಒಂದಷ್ಟು ಪದ್ಯವನ್ನು ಹೇಳಿ ಮೆಚ್ಚಿಸಿ ಬರುತ್ತಿದ್ದ ಅಪ್ಪಯ್ಯನಿಗೆ ಅಷ್ಟು ಸಿಟ್ಟು ಬಂದದ್ದು ನೋಡಿದ್ದೇ, ನಾವು ಅದೇ ಮೊದಲ ಸಲ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ