ಸೋಮವಾರ, ಅಕ್ಟೋಬರ್ 16, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 29

ಅಪ್ಪಯ್ಯನಿಗೆ ಕಾಲು ಸ್ವಲ್ಪ ಮಟ್ಟಿಗೆ ಗುಣವಾಗಿ, ಆ ವರ್ಷ ನವಂಬರ್ ಹೊತ್ತಿಗೆ ಮೇಳ ಪ್ರಾರಂಭವಾಗುತ್ತಿದ್ದಂತೆಯೇ ಮೇಳಕ್ಕೆ ಹೋದುದರಿಂದ, ನಾನು ಬೆಂಗಳೂರಿಗೆ ಹೋದೆ. ಅಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡೇ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ, ಅಣ್ಣನಿಗೆ ಸಹಾಯಕನಾಗಿ  ಮೂರು ತಿಂಗಳು ಕೆಲಸ ಮಾಡಿದ್ದಾಯಿತು. ನಂತರ ಅತ್ತಿಗೆಯ ಅಕ್ಕನ ಮಗ ದೀಪುವಿನ ಜೊತೆಗೂ ಅಲ್ಲಲ್ಲಿ ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಾಡಿದೆ. ಪ್ರಯೋಜನವಾಗಲಿಲ್ಲ. ಮನೆಮನೆಗೆ ಹಾಲುಕೊಡುವುದಾದರೆ ಬಾ ಎಂದು ಅವನ ಸ್ನೇಹಿತರೊಬ್ಬರು ಕರೆದರು. ಅದಕ್ಕೂ ಸೈ ಎಂದು ಒಂದೆರಡು ದಿನ ಅವರೊಟ್ಟಿಗೂ ಹೋದೆ. ಆದರೆ ಅದು ನನಗೆ ಹಿಡಿಸದ ಕೆಲಸ ಅನ್ನಿಸಿ ಮತ್ತೆ ಹೋಗಲಿಲ್ಲ. ಶಂಕರನಾರಾಯಣದ ಸಮೀಪದ ಕೊಂಡಳ್ಳಿಯ ರಂಗನಾಥ ಎನ್ನುವವರ ಪರಿಚಯವಾಗಿ ಅವರೊಂದಿಗೆ ಪಿಯರ್ಲೆಸ್ ಎಂಬ ಇನ್ಸುರೆನ್ಸ್ ಪಾಲಿಸಿ ಮಾಡುವ ಉದ್ಯೋಗವನ್ನು ಮಾಡುತ್ತಾ ನಾಲ್ಕಾರು ದಿನ ಅವರೊಂದಿಗೆ ಓಡಾಡಿದೆ. ನರಸಿಂಹ ಹಂದೇರು ಎಂಬ ಅಣ್ಣನ ಸ್ನೇಹಿತರು, ಅವರ ಅಂಗಡಿಯ ಸಮೀಪದ ಜನಾರ್ದನ ಲಾಡ್ಜ್ ಗೆ ಬಂದ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡು, ನನ್ನ ಬಗ್ಗೆ ಹೇಳಿ ಅವರನ್ನು ಕೆಲಸಕ್ಕಾಗಿ ಸಂದಿಸುವಂತೆ ಮಾಡಿದರು. ಅವರು ಇಂಗ್ಲೀಷಿನಲ್ಲಿ ಕೇಳಿದ ಪ್ರಶ್ನೆಗೆ, ನಾನು ಉತ್ತರಿಸಲು ತಡವರಿಸಿದೆ. ಅಲ್ಲಿಯೂ ಆಯ್ಕೆಯಾಗಲಿಲ್ಲ.

ಮುಂದೆ ದೀಪುವಿನ ಸ್ನೇಹಿತರೊಬ್ಬರ ಮೂಲಕ ಮಾರ್ಕೇಟ್ ಹತ್ತಿರದ ಒಂದು ಹಿಟ್ಟಿನ ಗಿರಣಿಯಲ್ಲಿ ಲೆಕ್ಕಬರೆಯುವ ಕೆಲಸ ಸಿಕ್ಕಿತು. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ಅದಕ್ಕೆ ಒಪ್ಪಿ ಅಲ್ಲಿ ಕೆಲಸ ಮಾಡಲುತೊಡಗಿದೆ. ಅಂಗಡಿಯಲ್ಲಿ ಮತ್ತು ಹೊರಗಡೆ ಎಲ್ಲಾ ಹಿಟ್ಟಿನ ಧೂಳು. ಅಲ್ಲಿ ವೃದ್ಧರೊಬ್ಬರು ಸುಮಾರು ಮುವ್ವತ್ತು ಮುವ್ವತ್ತೈದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಸಂಬಳ ತುಂಬಾ ಕಡಿಮೆ ಇತ್ತು. ಅವರು ಕನ್ನಡಕದ ಮೇಲ್ಬದಿಯಿಂದ ನೋಡುತ್ತಾ, ಯಾವಾಗಲೂ ಗೊಣಗುತ್ತಾ ಅವರ ಸಮಸ್ಯೆಗಳನ್ನೇ ಹೇಳುತ್ತಾ ಕಾಲತಳ್ಳುತ್ತಿದ್ದರು. ಅವರಿಗೆ ನಗುವೇ ಗೊತ್ತಿಲ್ಲವೇನೋ ಎಂಬಷ್ಟು ಗಂಭೀರವಾಗಿರುತ್ತಿದ್ದರು. ಹಾಗೂ ಹೀಗೂ ಒಂದು ತಿಂಗಳು ಕೆಲಸ ಮಾಡಿದ್ದಾಯಿತು. ಇನ್ನೇನು ಸಂಬಳದ ದಿನ ಬಂತು ಎನ್ನುವಾಗ ಆ ಕೆಲಸವೂ ಬೇಡ ಅನ್ನಿಸಿತು. ಅದೇ ಸಮಯಕ್ಕೆ ಉಡುಪಿಯಲ್ಲಿ ಜೋಡಾಟ ಇದೆ ಎಂದು ತಿಳಿದು, ನಾನೂ ಜೋಡಾಟ ನೋಡುವ ಹುರುಪಿನಿಂದ ಅಣ್ಣನ ಹತ್ತಿರ ಹೇಳಿ ಸೀದಾ ಊರಿಗೆ ಬಂದೆ. ನನ್ನ ಜೀವನದ ಮೊದಲ ದುಡಿಮೆಯ ತಿಂಗಳ ಸಂಬಳವನ್ನೂ ತೆಗೆದುಕೊಳ್ಳಲಿಲ್ಲ.

1984 ರ ಎಪ್ರಿಲ್ 11 ರಂದು ನಡೆದ ಹಿರೇಮಾಲಿಂಗೇಶ್ವರ ಮೇಳ ಮತ್ತು ಮೂಲ್ಕಿ ಮೇಳದ ಜೋಡಾಟ ಅದು. ಮೂಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪ ಆಚಾರ್ ರವರ ಭಾಗವತಿಕೆ. ಅಪ್ಪಯ್ಯ, ಧಾರೇಶ್ವರರೊಂದಿಗೆ ನಮ್ಮ ಹಿರೇಮಾಲಿಂಗೇಶ್ವರ ಮೇಳದಲ್ಲಿ. ಮೂಲ್ಕಿ ಮೇಳದಲ್ಲಿ ಜಗನ್ನಾಥ ಶೆಟ್ಟಿಯವರ ಕರ್ಣ ಆದರೆ, ನಮ್ಮ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆಯವರ ಕರ್ಣ. ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿಕೊಂಡು ಜಗಳ, ಗಲಾಟೆ ಆಗದಂತೆ ವ್ಯವಸ್ಥಾಪಕರು, ಸಾಕಷ್ಟು ಜಾಗ್ರತೆ ಮಾಡಿದ್ದರೂ ಮುಸುಕು ಹಾಕಿಕೊಂಡು ಆಚೆಗಿನ ಕಲಾವಿದರು ಈಚಿಗೆ, ಈಚಿನ ಕಲಾವಿದರು ಆಚೆಗೆ, ಕದ್ದು ಹೋಗಿ ಏನು ಹೊಸದು ಮಾಡುತ್ತಾರೆ ಎಂದು ನೋಡುತ್ತಿದ್ದರು. ನಮ್ಮ ಮೇಳದಲ್ಲಿ ಜೋಡಾಟದ ಹುಡಿಹಾರಿಸುವ ಕಲಾವಿದರು ಇಲ್ಲದಿದ್ದರೂ, ಇದ್ದ ಕಲಾವಿದರನ್ನೇ ಹುರಿದುಂಬಿಸಿ, ಬೇಕುಬೇಕಾದ ಸೂಚನೆಗಳನ್ನು ಕೊಟ್ಟು, ನಾಲ್ಕಾರು ದಿನಗಳಿಂದ ತಯಾರಿ ನೆಡೆಸಿ. ಅಂದು ರಾತ್ರಿ ಇಡೀ ರಂಗಸ್ಥಳದಲ್ಲಿ ಇದ್ದು ಕೆಲಸ ಮಾಡಿ, ಛಲತೊಟ್ಟು ಮೇಳದ ಜೋಡಾಟದಲ್ಲಿ ನಮ್ಮ ಮೇಳವನ್ನು ಗೆಲ್ಲಿಸಿ ಮರ್ಯಾದೆಯನ್ನು ಉಳಿಸಿದ, ಕೀರ್ತಿ ಅಪ್ಪಯ್ಯನಿಗೆ ಸಂದಿತು. ಅದೇ ಅಪ್ಪಯ್ಯನ ಕೊನೆಯ ಭಾಗವತಿಕೆಯಾಯಿತು.

ಮರುದಿನ ಕುಂದಾಪುರದಲ್ಲಿ ಆಟ, ಭಸ್ಮಾಸುರ ಮೋಹಿನಿ, ವಿಶೇಷ ಆಕರ್ಷಣೆಯಾಗಿ ಚಿಟ್ಟಾಣಿಯವರ ಭಸ್ಮಾಸುರದ ಎದುರು, ಕುಮಾರಿ ಸುಜಾತಳ (ಸುಬ್ರಮಣ್ಯ ಧಾರೇಶ್ವರರ ಹೆಂಡತಿ) ಮೋಹಿನಿ. ಜೋಡಾಟ ಮುಗಿಸಿ ಅಪ್ಪಯ್ಯ, ದಣಿದಿದ್ದರೂ, ಮನೆಗೆ ಬಂದು ಜೋಡಾಟದ ವಿಷಯವನ್ನು ಹೇಳಿ ನಗುತ್ತಾ, “ ಕಂಡ್ರ್ಯಾ? ನಾವು ಬಿಟ್ಟ್ ಕೊಡೂದುಂಟಾ? ಹೇಗಾಯ್ತು? ಎಂದು ಯುದ್ಧದಲ್ಲಿ ಗೆದ್ದ ವೀರರಂತೆ ಗೆಲುವಿನಿಂದ ಮಾತಾಡಿದರು.  ಮಧ್ಯಾಹ್ನ ಊಟಮಾಡಿ, ನಂತರ ಮಲಗಿ ಸ್ವಲ್ಪ ವಿಶ್ರಾಂತಿಯನ್ನೂ ಪಡೆದರು. ಸಂಜೆ ಕುಂದಾಪುರದ ಆಟಕ್ಕೆ ಹೊರಟವರು, ನನ್ನನ್ನು ಕರೆದು “ಆಟಕ್ ಬತ್ಯಾ ಮಾಣಿ? ಬಪ್ದಾದ್ರೆ ಹೊರಡು” ಎಂದರು. ನನಗೆ ಜೋಡಾಟದ ನಿದ್ದೆಯ ಮಂಪರು ಇಳಿದಿರಲಿಲ್ಲ. “ಇವತ್ತು ಬತ್ತಿಲ್ಲೆ, ನೀವ್ ಹೋಯಿನಿ, ಆ ಚಿಟ್ಟಾಣಿಯ ಭಸ್ಮಾಸುರ ಕಂಡ್ ಕಂಡ್ ಸಾಕಾಯ್ತ್” ಎಂದು ಮನೆಯಲ್ಲಿಯೇ ಉಳಿದೆ.

ವಿಧಿಯ ಆಟ. ನಾನು ಆ ದಿನ ಅವರೊಂದಿಗೆ ಹೋಗಿದ್ದರೆ ಅಪ್ಪಯ್ಯನ ಅಂತಿಮ ಕ್ಷಣದಲ್ಲಿ ಅವರೊಂದಿಗೆ ಇರುವ ಅವಕಾಶವಾದರೂ ಸಿಗುತ್ತಿತ್ತು. ಅದೇ ದಿನ, ಅಪ್ಪಯ್ಯ ರಂಗಸ್ಥಳಕ್ಕೆ ಹೋಗುವ ಮೊದಲು ಎಂದಿನಂತೆ ಮುಖ ಮಾರ್ಜನ ಮಾಡಿ, ಕಚ್ಚೆ ಹಾಕಿ ಪಂಚೆ ಉಟ್ಟು, ಜುಬ್ಬ ತೊಟ್ಟು ಚೌಕಿಯಲ್ಲಿ ಕನ್ನಡಿ ಎದುರು ಕುಳಿತು, ತಲೆಗೆ ಕೆಂಪು ಮುಂಡಾಸನ್ನು ಕಟ್ಟಿಕೊಳ್ಳುತ್ತಿರುವಾಗ ಎದೆನೋವು ಬಂದು, ಕುಳಿತಲ್ಲೇ ಎದೆ ಹಿಡಿದುಕೊಂಡು ಹಿಂದಕ್ಕೆ ಬಿದ್ದುಬಿಟ್ಟರಂತೆ. ಜನ ಸೇರಿದರು. “ಏನಾಯ್ತು ಉಪ್ಪೂರರೇ?” ಎಂದು ಆದರಿಸಿ ಕುಳ್ಳಿರಿಸಿದರು. “ಏನೋ, ಸ್ವಲ್ಪ ಎದೆ ನೋಯಿತ್ತಪ. ಹೋತ್ ಬಿಡಿ. ರಂಗಸ್ಥಳಕ್ ಹೋಪು ಹೊತ್ ಆಗಿಯೇ ಹೋಯ್ತಲ್ಲ. ಸ್ವಲ್ಪ ಸುಧಾರಿಸಿಕೊಂಡು ರಂಗಸ್ಥಳಕ್ಕೆ ಹೋಗ್ತೆ” ಅಂದರು ಅಪ್ಪಯ್ಯ. ಆದರೆ ದೇವರ ಇಚ್ಛೆಯೇ ಬೇರೆ ಇತ್ತು. ಸುದ್ಧಿ ತಿಳಿದು ಗುರುತಿನವರೆಲ್ಲ ಚೌಕಿಗೆ ಬಂದರು. ಅವರ ಪರಿಸ್ಥಿತಿಯನ್ನು ನೋಡಿ ಪರೀಕ್ಷೆ ಮಾಡಿದ ಒಬ್ಬ ಡಾಕ್ಟರ್ ರು, ಕೂಡಲೇ ಮಣಿಪಾಲಕ್ಕೆ ಕರೆದೊಯ್ಯಬೇಕೆಂದು ತಿಳಿಸಿದರು. ಚಿಟ್ಟಾಣಿಯವರನ್ನು ಕುಣಿಸಲು ತಯಾರಾಗಿ ರಂಗಸ್ಥಳಕ್ಕೆಂದು ಹೊರಟ ಅವರನ್ನು, ಕೂಡಲೆ ವ್ಯಾನಿನಲ್ಲಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೋಗುವಾಗ ಎದೆ ನೋವು ಇದ್ದರೂ, “ತಡಿನಿ. ಎರಡು ಪದ್ಯ ಹೇಳಿ ಬತ್ತೆ. ಇಲ್ದಿದ್ರೆ ಜನ ಗಲಾಟೆ ಮಾಡೂರ್” ಅಂದರಂತೆ.

ಬೆಳೆಗ್ಗೆಯ ಹೊತ್ತಿಗೆ ಮನೆಯಲ್ಲಿದ್ದ ನಮಗೆಲ್ಲಾ ಸುದ್ಧಿ ಬಂತು, ನಾವೂ ಕೂಡಲೇ ಹೊರಟು, ಮಣೂರಿನ ಅಕ್ಕನ ಮನೆಗೆ ಬಂದೆವು, ಅಲ್ಲಿಂದ ಮಣಿಪಾಲಕ್ಕೆ ಅಕ್ಕನೊಂದಿಗೆ ಹೊರಡುವುದು ನಮ್ಮ ಆಲೋಚನೆಯಾಗಿತ್ತು. ಆದರೆ ಅಷ್ಟರಲ್ಲಿ ಮಣಿಪಾಲಕ್ಕೆ ಹೋಗಿ ಬಂದ, ಶ್ರೀಧರ ಅಣ್ಣಯ್ಯ, ಭಾವಯ್ಯ, “ಈಗ ಸ್ವಲ್ಪ ಅಡ್ಡಿ ಇಲ್ಲ. ಇನ್ನು ಇಪ್ಪತ್ತನಾಲ್ಕು ಗಂಟೆಯ ಒಳಗೆ ಪುನಹ ಹಾರ್ಟ್ ಎಟ್ಯಾಕ್ ಆಗದಿದ್ದರೆ ತೊಂದರೆ ಇಲ್ಲವಂತೆ. ಒಬ್ಸರ್ವೇಶನ್ ನಲ್ಲಿ ಇಟ್ಟಿದ್ದಾರೆ” ಅಂದರು. ಆಗ ನಾವೂ “ಹಾಗಾದರೆ ನಿಧಾನವಾಗಿ ಹೋದರಾಯಿತು” ಎಂದು ಕೋಟದಲ್ಲೆ ಉಳಿದೆವು.

ಆದರೆ ಮಧ್ಯಾಹ್ನ ಎರಡು ಗಂಟೆಗೆ ಹೊತ್ತಿಗೆ ಪುನಹ ಹಾರ್ಟ್ ಎಟ್ಯಾಕ್ ಆಗಿ “ಅಪ್ಪಯ್ಯ ಹೋದರು” ಎಂಬ ವಾರ್ತೆ ಸಿಕ್ಕಿತು. ನಾವೆಲ್ಲ ಏಳು ಮಂದಿ ಗಂಡುಮಕ್ಕಳು ಇದ್ದರೂ, ಸಾಯುವ ಆ ಕೊನೆಯ ಕಾಲಕ್ಕೆ ನಾವು ಯಾರೂ ಅವರ ಬಳಿ ಇರಲಿಲ್ಲ. ಅವರು ಸಾಕಿದ ಮಗ, ಚಂದ್ರ ಭಟ್ರು ಮಾತ್ರ ಇದ್ದರು. ಅವರೇ ಅಪ್ಪಯ್ಯನ ಬಾಯಿಗೆ ನೀರು ಬಿಡಬೇಕಾಯಿತು. ಹೆಣವನ್ನು ಅಂದು ರಾತ್ರಿಯೇ ಮನೆಗೆ ಹೊತ್ತು ತಂದರು.  ಹಿಂದೆಯೇ ಹಲವಾರು ಜನ ಅಭಿಮಾನಿಗಳೂ ಬಂದಿದ್ದರು. ನಮ್ಮ ಮನೆಯವರೆಗೆ ರಸ್ತೆ ಇರಲಿಲ್ಲ. ಹಾಡಿಯಲ್ಲಿ, ಬೈಲುಗದ್ದೆಯ ಅಂಚಿನಲ್ಲಿ, ಹೊಳೆಗೆ ಹಾಕಿದ ಸಂಕವನ್ನು ದಾಟಿಕೊಂಡು ಮೂರು ಮೈಲಿ ನಡೆದುಕೊಂಡೇ ಬರಬೇಕು. ಸುದ್ಧಿ ತಿಳಿದ ಅಪ್ಪಯ್ಯನ ಅಭಿಮಾನಿಗಳು ರಾತ್ರಿಯಾಗಿದ್ದರೂ, ಆ ಕತ್ತಲಲ್ಲಿ ಮನೆಯನ್ನು ಹುಡುಕಿಕೊಂಡು, ಗುಂಪು ಗುಂಪಾಗಿ ಅವರ ಅಂತಿಮ ದರ್ಶನಕ್ಕಾಗಿ ಬರತೊಡಗಿದರು. ಪುರೋಹಿತರು “ಮಕ್ಕಳೆಲ್ಲ ಹತ್ತಿರವೇ ಇದ್ದಾರಲ್ಲ. ಕಾಯುವುದು ಬೇಡ. ಮುಂದುವರಿಸುವ” ಅಂದರು. “ಮೂಗಿನಲ್ಲಿ ರಕ್ತ ಬರುತ್ತಿದೆ ಕಾಯುವುದು ಸರಿಯಲ್ಲ” ಎಂದು ಇನ್ನು ಯಾರೋ ಹೇಳಿದರು. ಹಾಗಾಗಿ ಬೆಂಗಳೂರಿನಲ್ಲಿ ಇದ್ದ ಇಬ್ಬರು ಮಕ್ಕಳು ಬರುವವರೆಗೂ ಕಾಯುವುದೂ ಸಾಧ್ಯವಾಗಲಿಲ್ಲ. ಅಂದು ಮಧ್ಯರಾತ್ರಿಯ  ಹೊತ್ತಿಗೆ ಅಪ್ಪಯ್ಯನ ದೇಹವನ್ನು ಚಿತೆಯ ಮೇಲಿಟ್ಟು, ನೆರೆದ ನೂರಾರು ಜನರ ಸಮಕ್ಷಮದಲ್ಲಿ  ಬೆಂಕಿ ಇಟ್ಟು ಅವರನ್ನು ಮರಳಿ ಬಾರದ ಲೋಕಕ್ಕೆ, ಭಾರದ ಹೃದಯದಿಂದ ಮೌನವಾಗಿ ಕಳಿಸಿಕೊಟ್ಟೆವು. ಬೆಳಗ್ಗಿನವರೆಗೂ ಜನ ಬರುತ್ತಲೇ ಇದ್ದರು. “ಸ್ವಲ್ಪ ಕಾಯಬೇಕಿತ್ತು. ಕೊನೆಯಲ್ಲಿ ಅವರ ಮುಖವನ್ನು ನೋಡಲಿಕ್ಕೂ ಅವಕಾಶವಿಲ್ಲದ ಹಾಗಾಯಿತು” ಎಂದು ಹಲವರು ದುಃಖಿಸುತ್ತಾ ಹಿಂದೆ ಹೋದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ