ಭಾನುವಾರ, ಅಕ್ಟೋಬರ್ 15, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 28

ಸುಮಾರು ಅದೇ ಸಮಯದಲ್ಲಿ, ಅಪ್ಪಯ್ಯ ಹಿಂದಿನ ದಿನದ ಆಟ ಮುಗಿಸಿ ಉತ್ತರ ಕನ್ನಡದಿಂದ ಕೋಟಕ್ಕೆಂದು ಹೊರಟವರು, ಬಸ್ಸು ಸಿಕ್ಕದೇ ಇದ್ದುದರಿಂದ ಲಾರಿಯನ್ನು, ಅದರ ಬಾಗಿಲನ್ನು ಹಿಡಿದುಕೊಂಡು ಹತ್ತುವಾಗ ಆಯತಪ್ಪಿ ಕಾಲು ಜಾರಿ ಕೆಳಕ್ಕೆ ಬಿದ್ದರು. ಬಿದ್ದ ಹೊಡೆತಕ್ಕೆ ಬಲಕಾಲು ತಿರುಚಿಹೋಯಿತು. ಆ ನೋವಿನಲ್ಲೇ ಕೋಟಕ್ಕೆ ಬಂದು ಡಾಕ್ಟರನ್ನು ನೋಡಿದಾಗ, ಕಾಲಿನ ಪಾದದ ಹತ್ತಿರ ಮೂಳೆಯು ಬಿರುಕು ಬಿಟ್ಟಿದೆ ಎಂದು ಎಕ್ಸ್ ರೇಯಲ್ಲಿ ಗೊತ್ತಾಯಿತು. ಹಾಗೆಯೇ ಅಲ್ಲಿ ಆಸ್ಪತ್ರೆ ಸೇರಿ ಶುಶ್ರೂಷೆ ಪಡೆದು ಬ್ಯಾಂಡೇಜು ಹಾಕಿಸಿಕೊಂಡರೂ ಬಹಳ ಸಮಯದವರೆಗೆ ನೋವು ಕಡಿಮೆಯಾಗಲಿಲ್ಲ. ಡಾಕ್ಟರ್ ರು “ವರ್ಷವಾಯಿತಲ್ಲ ಮೂಳೆ ಕೂಡಿಕೊಳ್ಳಲು ಸಮಯ ಹಿಡಿಯುತ್ತದೆ” ಎಂದರು. ಆ ವರ್ಷದ ಮೇಳದ ನಂತರದ ತಿರುಗಾಟಕ್ಕೆ ಹೋಗಲಿಕ್ಕಾಗಲಿಲ್ಲ. ಆಗ ನಾನೂ ಡಿಗ್ರಿ ಮುಗಿಸಿ ಮನೆಯಲ್ಲಿ ಇದ್ದುದರಿಂದ ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವು ನನಗೆ ಒದಗಿತು.

ಅಪ್ಪಯ್ಯನ ಜೊತೆಗೆ ಅವರಿಗೆ ಸಹಾಯಕನಾಗಿ ಅವರು ಹೋದಲ್ಲೆಲ್ಲಾ ನಾನೂ ಹೋಗಬೇಕಾಯಿತು. ಅವರಿಗೆ ನೋವು ಹೆಚ್ಚಾದಾಗ ಕಾಲು ಊರಲೇ ಆಗದ ಪರಿಸ್ಥಿತಿಯಲ್ಲಿ ಕೋಟ ಮಣೂರಿನ, ನನ್ನ ಅಕ್ಕನ ಮನೆಯಲ್ಲಿ ಅವರು ಇದ್ದರು. ಅವರಿಗೆ ಸ್ನಾನ ಮಾಡಿಸಲು, ಕಕ್ಕಸುಮನೆಯವರೆಗೆ ಬೆನ್ನಿನ ಮೇಲೆ ಉಪ್ಪಿನ ಮೂಟೆಯಂತೆ ಇರಿಸಿ ಎತ್ತಿಕೊಂಡು ಹೋಗಲೂ, ನಾನೇ ಜೊತೆಗೆ ನಿಂತೆ. ಅವರ ಜೊತೆಗೆ ಎಲ್ಲಾ ತಿರುಗಾಟಕ್ಕೂ ಜೊತೆಯಾಗಿ ಹೋಗುತ್ತಿದ್ದೆ. ಅವರಿಗೆ ಸಹಾಯವಾಗಲಿ ಎಂದು ಅವರ ಬ್ಯಾಗ್, ಕೊಡೆ ಹಿಡಿದುಕೊಳ್ಳುವುದು, ಬಸ್ಸು ಹತ್ತಲು ಸಹಾಯ ಮಾಡುವುದು ಮಾಡುತ್ತಾ, ಅವರ ಹಿಂದೆಯೇ ತಿರುಗುತ್ತಿದ್ದೆ. ಆಗ ಕಾರ್ಕಳ ವೆಂಕಟರಮಣ ದೇವಸ್ಥಾನ, ಕುಂದಾಪುರ ವೆಂಕಟರಮಣ ದೇವಸ್ಥಾನ, ಇತ್ಯಾದಿ ಕಡೆಗಳಲ್ಲಿ ಶೇಣಿಯವರು, ದೊಡ್ಡ ಸಾಮಗರು, ರಾಮದಾಸ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್ ರವರು, ಪ್ರಭಾಕರ ಜೋಷಿಯವರು ಮತ್ತು ಪೆರ್ಲ ಕೃಷ್ಣಭಟ್ರು ಮುಂತಾದ ಮಹಾ ಮಹಾ ಕಲಾವಿದರ ಅರ್ಥದಾರಿಕೆಯಲ್ಲಿ ಹಲವಾರು ತಾಳಮದ್ದಲೆ ನೋಡುವ ಅವಕಾಶ ನನಗೆ ಒದಗಿತ್ತು. ಆಗಿನ ಇಡೀರಾತ್ರಿಯ ತಾಳಮದ್ದಲೆಗಳಲ್ಲಿ ಜೊತೆ ಭಾಗವತರಾಗಿ ಕಾಳಿಂಗ ನಾವಡರೂ, ದಾಮೋದರ ಮಂಡೆಚ್ಚರು, ಬಲಿಪರು ದಾಸ ಭಾಗವತರೂ ಮೊದಲಾದವರು ಇರುತ್ತಿದ್ದರು. ದಾಮೋದರ ಮಂಡೆಚ್ಚರೊಂದಿಗೆ ಕೆಲವು ಕಡೆಗಳಲ್ಲಿ ಒಂದೇ ಪ್ರಸಂಗದಲ್ಲಿ ಅವರೊಂದು ಪದ್ಯ, ಇವರೊಂದು ಪದ್ಯ ಹೇಳಿ ಒಟ್ಟಿಗೇ ಭಾಗವತಿಕೆಯೂ ಆಗುತ್ತಿತ್ತು. ಕಾಳಿಂಗ ನಾವಡರು, ಧಾರೇಶ್ವರರು ಇದ್ದರಂತೂ ತಾಳಮದ್ದಲೆಗಳಲ್ಲಿ ಮೂವರೂ ಒಟ್ಟಿಗೇ ಪದ್ಯಹೇಳಿ ಅದೊಂದು ವಿಶೇಷ ಆಕರ್ಷಣೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮದ್ದಲೆಗಾರನಾಗಿ ದುರ್ಗಪ್ಪ ಗುಡಿಗಾರ್ ಹೇಗೂ ಕೋಟದ ಭಾಗವತಿಕೆ ಕೇಂದ್ರದಲ್ಲಿಯೇ ಉಳಿದುಕೊಂಡಿದ್ದು  ಅಪ್ಪಯ್ಯನ ಎಲ್ಲ ಕಾರ್ಯಕ್ರಮಗಳಿಗೂ ಜೊತೆಯಾಗಿ ಮದ್ದಲೆಗಾರನಾಗಿ ಇರುತ್ತಿದ್ದ. ತಾಳಮದ್ದಲೆಯಲ್ಲಿ ಪ್ರಮುಖ ಭಾಗದ ಒಂದೋ ಎರಡೋ ಪದ್ಯಗಳಿಗೆ ಅವನಿಗೆ ಮದ್ದಲೆ ಬಾರಿಸಲು ಸಂಪೂರ್ಣ ಅವಕಾಶವನ್ನು ಕೊಟ್ಟು ಅವನ ವಿದ್ವತ್ತನ್ನು ತೋರಿಸಲು ಅಪ್ಪಯ್ಯ ಅವಕಾಶ ಮಾಡಿಕೊಡುತ್ತಿದ್ದರು. ನಾನು ಸುಮ್ಮನೇ ಇರಬೇಕಲ್ಲ ಅಂತ, ಕೆಲವು ಕಡೆ ಹಾರ್ಮೋನಿಯಂ ಬಾರಿಸಲು ಕುಳಿತುಕೊಳ್ಳುತ್ತಿದ್ದೆ,

ಒಮ್ಮೆ ಮುದ್ರಾಡಿಯಲ್ಲಿ ಒಬ್ಬ ಡಾಕ್ಟರ್ ಅವರ ಹೆಸರು ಎಂ ಎಸ್ ರಾವ್ ಅಂತೆ. ಅಪ್ಪಯ್ಯನನ್ನು ಕರೆಸಿ, ಅವರ ಪದ್ಯಗಳನ್ನು ರೆಕಾರ್ಡ್ ಮಾಡಲು ಅಲೋಚಿಸಿ, ಮುದ್ರಾಡಿಗೆ ಬರಲು ಆಮಂತ್ರಿಸಿದ್ದರು. ಅಂಬಾತನಯ ಮುದ್ರಾಡಿಯವರು ಅಪ್ಪಯ್ಯ ಹಾಡುವ ಪದ್ಯದ ಸಂದರ್ಭ ಮತ್ತು ರಾಗ ತಾಳಗಳ ಹೆಸರಿನ ನಿರೂಪಣೆ ಮಾಡುವುದು ಎಂದು ನಿಶ್ಚಯವಾಗಿತ್ತು. ಮುದ್ರಾಡಿಯ ಒಂದು ಶಾಲೆಯಲ್ಲಿ ಆದ ಕಾರ್ಯಕ್ರಮ ಅದು. ದುರ್ಗಪ್ಪನಿಗೆ ಮುದ್ರಾಡಿಗೇ ಬರಲು ಹೇಳಿದ್ದು, ನಮಗೆ ಮುದ್ರಾಡಿಗೆ ಹೋದ ನಂತರವೇ ಅವನು ಬರಲಿಲ್ಲ ಎಂದು ತಿಳಿಯಿತು. ದುರ್ಗಪ್ಪನಿಗೆ ಅದೇನೋ ಕಾರಣದಿಂದ ಆವತ್ತು ಬರಲು ಅನನುಕೂಲವಾಯಿತು. ಈಗಿನ ಹಾಗೆ ಪೋನೋ ಮತ್ತೊಂದೋ ಅನುಕೂಲಗಳು ಆಗ ಇಲ್ಲದೇ ನಮಗೆ ತಿಳಿಸಲೂ ಅವನಿಗೆ ಆಗಲಿಲ್ಲ. ಆಗಲೇ ಕತ್ತಲಾಗಲು ಶುರುವಾಗಿತ್ತು. ಏನಾದರೂ ಮಾಡುವ ಅಂದರೆ ಮದ್ದಲೆಗಾರರೇ ಇಲ್ಲ. ಹೇಗೆ ಪದ್ಯ ಹೇಳುವುದು?. ಕೊನೆಗೆ ಅಂಬಾತನಯ ಮುದ್ರಾಡಿಯವರು ಹಿರಿಯಡ್ಕಕ್ಕೆ ಜನ ಹೋದರೆ ಗೋಪಾಲ ಬರಬಹುದು ಅಂದರು. ಡಾಕ್ಟರ್ ಒಪ್ಪಿ, ಅವರ ಕಾರನ್ನು ಕಳುಹಿಸಿ ಹಿರಿಯಡ್ಕ ಗೋಪಾಲರನ್ನು ಮದ್ದಲೆಯೊಂದಿಗೆ ಬರಲು ವಿನಂತಿಸಿಕೊಂಡರು. ಗೋಪಾಲರು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಬಂದರು. ನಂತರ ರಾತ್ರಿ ಸುಮಾರು ಎರಡು ಗಂಟೆಯವರೆಗೂ ಬೇರೆ ಬೇರೆ ಪ್ರಸಂಗಗಳಿಂದ ಆಯ್ದ ಹಲವಾರು ಪದ್ಯಗಳನ್ನು ಅಪ್ಪಯ್ಯ ಹೇಳಿದರು. ಡಾಕ್ಟರ್ ರ ಒತ್ತಾಯದ ಮೇರೆಗೆ ಆ ದಿನಗಳಲ್ಲಿ ಕಾಳಿಂಗ ನಾವಡರಿಂದ ಪ್ರಸಿದ್ಧಿಯಾಗಿದ್ದ "ನೀಲಗಗನದೊಳು ಮೇಘಗಳ" ಪದ್ಯವನ್ನೂ ಅಪ್ಪಯ್ಯ ಹಾಡಿದ್ದರು.

ಮತ್ತೊಮ್ಮೆ ಅಪ್ಪಯ್ಯ ಬೆಂಗಳೂರಿನ ಆಟಕ್ಕೆ ಹೋಗಬೇಕಾಯಿತು. ನಾನು ಮತ್ತು ಅಪ್ಪಯ್ಯ ಮರುದಿನ ಬೆಳಗಿನ ಒಳಗೆ ಬೆಂಗಳೂರು ತಲುಪಬೇಕೆಂದು ಆಲೋಚನೆ ಮಾಡಿ ಹಿಂದಿನ ದಿನ ಸಂಜೆಯೇ ಕೋಟದಿಂದ ಹೊರಟವರು, ಸುಮಾರು ಹತ್ತು ಗಂಟೆಯ ಹೊತ್ತಿಗೆ ಶಿವಮೊಗ್ಗ ತಲುಪಿದೆವು. ಆಗ ನೇರವಾಗಿ ಬೆಂಗಳೂರಿಗೆ ಹೋಗುವ ಬಸ್ಸು ಸಿಗಲಿಲ್ಲವೋ ಏನೋ ಸರಿಯಾಗಿ ನೆನಪಾಗುವುದಿಲ್ಲ. ಶಿವಮೊಗ್ಗದಲ್ಲಿ ವಿಚಾರಿಸುವಾಗ ಬೆಳಿಗ್ಗೆ ನಾಲ್ಕರವರೆಗೆ ಬೆಂಗಳೂರಿಗೆ ಬಸ್ಸು ಇಲ್ಲ ಎಂದು ತಿಳಿಯಿತು. ಅಪ್ಪಯ್ಯ ಏನು ಮಾಡ್ವ ಮಾಣಿ, ಹೀಗಾಯಿತಲ್ಲ? ಎಂದು ನನ್ನನ್ನು ಕೇಳಿದರು. ನಾನು “ಕಾಯುವ. ಮತ್ತೇನು ಮಾಡುವುದು?” ಎಂದೆ. ಅಷ್ಟು ರಾತ್ರಿಯಲ್ಲಿ ಯಾವುದೇ ರೂಮು ಹಿಡಿಯುವುದು ಸಾಧ್ಯವಿರಲಿಲ್ಲ. ಅಪ್ಪಯ್ಯನ ಪರಿಚಯ ಇರುವವರು ಶಿವಮೊಗ್ಗದಲ್ಲಿ ಕೆಲವರು ಇದ್ದರೂ ಇಷ್ಟು ರಾತ್ರಿಯ ಹೊತ್ತಿನಲ್ಲಿ ಹೋಗಿ ಉಪದ್ರವ ಕೊಡುವುದು ಸರಿಯಲ್ಲ ಎಂದು ಅಪ್ಪಯ್ಯನಿಗೆ ಅನಿಸಿರಬೇಕು. ಅಲ್ಲಿಯೇ ಬಸ್ ನಿಲ್ದಾಣದ ಎದುರು ಇರುವ ಒಂದು ಹೋಟೇಲಿನ ಹೊರಗಿನ ಜಗುಲಿಯೇ ನಮಗೆ ಆಶ್ರಯದಾಣವಾಯಿತು. ಅಲ್ಲಿಯೇ ಕುಳಿತು ಅದೂಇದೂ ಮಾತಾಡುತ್ತಾ ಆ ರಾತ್ರಿ ಕಾಲಕಳೆದೆವು. ಬೆಳಗ್ಗೆ ಸುಮಾರು ಐದು ಗಂಟೆಗೆ ಬೆಂಗಳೂರಿಗೆ ಹೋಗುವ ಬಸ್ಸೊಂದು ಬಂತು. ಅದರಲ್ಲಿ ಕುಳಿತು ಬೆಳಿಗ್ಗೆ ತಡವಾಗಿ  ಬೆಂಗಳೂರು ತಲುಪಿದೆವು. ಆ ಬೆಳಿಗ್ಗೆಯೇ ಕೆಲವರನ್ನು ಮಾತಾಡಿಸಬೇಕಿತ್ತು ಎಲ್ಲಾ ಹಾಳಾಯಿತಲ್ಲ ಎಂದು ಅಪ್ಪಯ್ಯ ಅಲವತ್ತುಕೊಂಡರು. ಬೆಂಗಳೂರಿನಲ್ಲಿ ಗುರುನರಸಿಂಹ ಛತ್ರದ ಮೆನೇಜರ್ ಆಗಿದ್ದ ಕೃಷ್ಣಮೂರ್ತಿ ಅಣ್ಣಯ್ಯನ ಮನೆಯಲ್ಲಿ ಉಳಿದುಕೊಂಡೆವು.  ಅಂದು ಮುರಳೀಧರ  ಎನ್ನುವವರ ಉಪನಯನದ ಪ್ರಯುಕ್ತ ಸಂಜೆ ಒಂದು ಆಟವನ್ನು ಪ್ರಾಯೋಜಿಸಿದ್ದರು. ಪ್ರಸಂಗ ಬಬ್ರುವಾಹನ ಕಾಳಗ. ಭಾಗವತರಾಗಿ ಧಾರೇಶ್ವರ, ಕಾಳಿಂಗ ನಾವಡರ ಜೊತೆಗೆ ಅಪ್ಪಯ್ಯ ಇದ್ದರೆ, ತೀರ್ಥಹಳ್ಳಿ ಗೋಪಾಲರ ಬಬ್ರುವಾಹನ, ಕೋಟ ವೈಕುಂಠನ ಚಿತ್ರಾಂಗದೆ, ಕೊಳಗಿ ಅನಂತ ಹೆಗಡೆಯವರ ಅರ್ಜುನ, ಮತ್ತು ಸಿರಿಮಠ ಪಂಜು, ಚಂದ್ರ ಭಟ್ರು ಹಳದೀಪುರ ಗಜಾನನ ಭಂಡಾರಿ ಮೊದಲಾದವರು ಇದ್ದು ಪ್ರದರ್ಶನ ತುಂಬಾ ಚೆನ್ನಾಗಿ ಆಗಿತ್ತು. ಅದರಲ್ಲಿ ನಾನೇ ಹಾರ್ಮೋನಿಯಂ ಬಾರಿಸಿದ್ದು, ಆ ದಿನದ ಉಪನಯನದ ಜೊತೆ ಅದನ್ನೂ ವಿಡಿಯೋ ಚಿತ್ರೀಕರಣ ಮಾಡಿರುವುದರಿಂದ ಅದೊಂದು ಅಪ್ಪಯ್ಯನ ಏಕಮಾತ್ರ ವಿಡಿಯೋದ ದಾಖಲೀಕರಣವಾದಂತಾಗಿದೆ.

ಅದೇ ಸಮಯದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿಯೂ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಮರುದಿನ ರೇಡಿಯೋ ಪ್ರೋಗ್ರಾಮ್ ಪ್ರಸಂಗ “ಕಂಸ ವಧೆ”. ಜಲವಳ್ಳಿ ವೆಂಕಟೇಶ ರಾವ್ ರವರ ಕಂಸ, ಹೊನ್ನಪ್ಪ ಗೋಕರ್ಣ ರ ಅಕ್ರೂರ ಕೊಳಗಿ ಅನಂತ ಹೆಗಡೆಯವರ ಕೃಷ್ಣ, ಶಿರಳಗಿ ಭಾಸ್ಕರ ಜೋಷಿಯವರ ಗೋಪಿಕಾ ಸ್ತ್ರೀ. ಅದರಲ್ಲಿ ಕೃಷ್ಣ ಗೋಪಿಕಾಸ್ತ್ರೀಯರನ್ನು ಸಂತೈಸುವ ಸಂದರ್ಭಕ್ಕೆ ನನ್ನ ಮೆಚ್ಚಿನ ಅಪ್ಪಯ್ಯನ ಪದ್ಯ “ಪೋಗಿ ಬರುವೆ ಗೋಪ ನಾಗವೇಣಿಯರೆ”.... ಪದ್ಯವನ್ನು ಅಳವಡಿಸಿದರೆ ಲಾಯಿಕ್ ಆತಿತ್.  ಎಂದು ಹೇಳಿದೆ. ಅವರು ಕೂಡಲೇ ಒಪ್ಪಿ ಆ ಆಕಾಶವಾಣಿ ಕಾರ್ಯಕ್ರಮದಲ್ಲಿ ಆ ಪದ್ಯವನ್ನು ಅಳವಡಿಸಿಕೊಂಡು ತುಂಬಾ ಸೊಗಸಾಗಿ ಹಾಡಿದ್ದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ