ಶನಿವಾರ, ಆಗಸ್ಟ್ 25, 2018

ದಿನೇಶ ಉಪ್ಪೂರ:
#ಸಂಸ್ಕಾರ
ಕತೆಗೊಂದು ಕೊಂಡಿ

ಬೆಳಿಗ್ಗೆ ಬೆಳಿಗ್ಗೆ ಪೋನ್ ಕಿರುಚಿತು.

“ಹಲೋ……”

ಯಾರ್ರೀ ಅದು?  ಫೇಸ್ ಬುಕ್ ಲ್ಲಿ ದೊಡ್ಡದಾಗಿ ಒಂದು ಕತೆ ಬರ್ದು ಬಿಟ್ಟು, ಅದು ನಿಮ್ದೇ ಕತೆ ಅಂತ ಬೇರೆ ಹಾಕಿದ್ದೀರಲ್ಲ? ನಿಮಗೆ ತಲೆಗಿಲೆ ಸರಿ ಇಲ್ವಾ?

“ಯಾವ ಕತೆ ಸರ್? ನೀವು ಯಾರು ಮಾತಾಡುವುದು? ನಿಮಗೆ ಯಾರು ಬೇಕಿತ್ತು?”

“ನನಗೆಲ್ಲಾ ಗೊತ್ರಿ. ನನಗೆ ಅವಮಾನ ಮಾಡಬೇಕಂತಾನೆ ನೀವು ಹೀಗೆ ಬರೆದಿದ್ದು. ನಾನು ನಿಮ್ಮನ್ನು ಹೀಗೆ ಬಿಡುವುದಿಲ್ಲ. ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕ್ತೇನೆ. ಕೋರ್ಟ್ಗೆ ಮನೆಗೆ ಓಡಾಡ್ಸ್ ತೇನೆ.”

ಕೋರ್ಟ್ ನ ಸುದ್ದಿ ಕೇಳಿ ನನಗೆ ಸರಿಯಾಗಿ ಎಚ್ಚರವಾಯಿತು.

“ಸರ್, ನೀವು ಯಾರು? ನಿಮಗೆ ಏನು ಬೇಕು?”

“ಅದೇ ಸಂಸ್ಕಾರ ಅಂತ ಫೇಸ್ ಬುಕ್ ಕತೆ ಬರ್ದೀದಿರಲ್ಲ ನೀವೇ ತಾನೆ?”

“ಹೌದು.”

“ಮತ್ತೆ ನನ್ನದೇ ಕತೆ ಅಂತ ಬರ್ದಿದ್ದೀರಿ?”

ನನಗೆ ವಿಷಯ ಅರ್ಥವಾಯಿತು.

“ ಅದು ಹಾಗಲ್ಲ ಸಾರ್, ನೀವು ಇದನ್ನು ಇನ್ನೂ ಚೆನ್ನಾಗಿ…..”

“ಅದೆಲ್ಲ ಗೊತ್ತಿಲ್ಲರೀ ನಂಗೆ. ಅಲ್ಲ, ನನ್ನನ್ನು ಅಷ್ಟು ಕೆಟ್ಟದಾಗಿ ಚಿತ್ರಣ ಮಾಡೋದೇನ್ರಿ? ಕಾಲಕ್ಕೆ ಸರಿಯಾಗಿ ಹೊಂದ್ಕೋಬೇಕಪ್ಪಾ”

“ ಸರ್ , ನೀವು ಯಾವ ಪಾತ್ರ…..ಸರ್?

“ಅದೇ ಮಗ …… ಸದಾಶಿವ..”

“ಬೇಡ ಸರ್,  ನೀವು ಅಡಿಗರ ಪಾತ್ರ ತಗೊಳ್ಳಿ. ಅವರೇ ಕತೆಯ ಕೇಂದ್ರ ಬಿಂದು... ಅಲ್ವಾ?”

“ಬೇಡಾರಿ. ಅವರನ್ನು ನೀವು ಕೊಂದೇ ಬಿಟ್ರಲ್ಲ . ಇನ್ನೇನು ಮಾಡೋಕಾಗತ್ತೆ?”

ಹಾಗಾದ್ರೆ ಸೊಸೆಯ ಪಾತ್ರ…..

“ಬೇಡಾರಿ, ಈಗಿನ್ ಕಾಲದಲ್ಲಿ ಹೆಣ್ಮಕ್ಕಳನ್ನು ಬದಲಾಯಿಸುವುದು ಕಷ್ಷ. ಅದು ಬೇಡ”

“ಹಾಗಾದ್ರೆ ಆ ಅಡಿಗರ ಮೊಮ್ಮಗಳು ? …...‌ಆದು ಅಮೇರಿಕಾದಿಂದ ಅಮ್ಮನೊಟ್ಟಿಗೆ ಕೈ ಹಿಡಿದು ಬರತ್ತಲ್ಲಾ . ಅದು …?”

“ಅದ್ಯಾಕ್ರಿ ? ಮಣ್ಣಿಗೆ.  ಒಂದೇ ಒಂದು ಡೈಲಾಗಿಲ್ಲ”

“ಇಲ್ಲ ಸರ್, ಅದಕ್ಕೆ ಮುಂದೆ ಒಳ್ಳೆಯ ಅವಕಾಶ ಇದೆ.”

ಪೋನ್ ಕಟ್ಟಾಯ್ತು.

“ಅಯ್ಯಬ್ಬ”

ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.


**************

ದಿನೇಶ ಉಪ್ಪೂರ

ಕಥನದೊಳಗೆ.

*#ಸಂಸ್ಕಾರ* ಕತೆಗೆ

*ಎರಡನೇ ಕೊಂಡಿ*

ಪೋನ್ ರಿಂಗ್ ಆಯ್ತು.

ನಾನು ಪುನಃ ಇದೇನಪ್ಪಾ ಅಂತ ಹೆದರುತ್ತಲೇ ಎತ್ತಿಕೊಂಡೆ.

“ಸರ್ , ನಾನು ಫೇಸ್ ಬುಕ್ ಲ್ಲಿ ನೀವು ಬರೆದ ನಿಮ್ಮ ಸಂಸ್ಕಾರ ಕತೆ ಓದಿದೆ. ನಾನೂ ಅದರಲ್ಲಿ ಬಂದ ಸದಾಶಿವನ ಪಾತ್ರದ ಹಾಗೆ. ತುಂಬಾ ಆಸಲೇಶನ್ ಸರ್ . ನನ್ನ ಅಪ್ಪ ಅಮ್ಮ ಊರಲ್ಲಿ ಇಬ್ಬರೇ ಇದ್ದಾರೆ. ನನ್ನ ಜೊತೆಗೆ ಬಂದು ಇರಲು ಒಪ್ಪುವುದಿಲ್ಲ. ನನಗೂ ಅಲ್ಲಿ ಹೋಗಿ ಇರಲಿಕ್ಕೆ ಆಗುತ್ತಿಲ್ಲ. ನನ್ಬ ಹೆಂಡತಿಯೂ ದುಡಿಯುತ್ತಾ ಇದ್ದಾಳೆ. ತುಂಬಾ ಕಾಂಪಿಟೀಶನ್ ಯುಗ ಅಲ್ವಾ ಸರ್. ನೀವು ಒಟ್ಟಾರೆ ಏನೋ ಬರೆದ್ರಿ ಅಂತ ನಾನು ಹೇಳುವುದಲ್ಲ. ನೋಡಿ ಸರ್ , ನಾನು ನನ್ನ ಮಗನಿಗೆ ಎಲ್ ಕೆ ಜಿ ಗೆ ಸೇರಿಸ್ಲಿಕ್ಕೆ ಎರಡು ಲಕ್ಷ ಡೆಪೋಸಿಟ್ ಮಾಡಿ ಬಂದೆ. ಮತ್ತೆ ಒಬ್ಬ ಮಗಳು ಇದ್ದಾಳೆ.ಅವಳ ಅವಶ್ಯಕತೆ ಪೂರೈಸಲಿಕ್ಕೆ ಈಗಲೇ ಕಷ್ಟ ಆಗ್ತಿದೆ. ಇಂತಹ ಕಂಡೀಶನ್ ನಲ್ಲಿ ಅಪ್ಪ ಅಮ್ಮ ಇದ್ದಲ್ಲಿಗೆ ಹೋಗಿ ಇರುವುದು ಸಾಧ್ಯವಾ? “

ನಾನು ಸುಮ್ಮನಿದ್ದೆ.

“ಪ್ರಯತ್ನಿಸಿದರೆ ಭಾವನಾತ್ಮಕವಾಗಿ ಬರೆಯುವುದು ಸುಲಭ. ಅಲ್ವ ಸರ್.”

“…………..”

“ಬೇಸರಿಸಬೇಡಿ”

“ನೋಡಿ,  ನನ್ನ ಹತ್ರ ಇದಕ್ಕೂ ಒಂದು ಸಲಹೆ ಇದೆ. ಆದರೆ ಅದು ನಿಮಗೆ ಹೊಂದಿಕೆ ಆಗುತ್ತಾ ಇಲ್ವಾ ಗೊತ್ತಿಲ್ಲ”

“ಹೇಳಿ ಸರ್,  ಅದರಿಂದ ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಅನ್ನಿಸಿದರೆ ಖಂಡಿತಾ ಮಾಡ್ತೇನೆ”

“ನಿಮ್ಮ ಹೆಂಡ್ತಿಯೂ ದುಡಿಯುತ್ತಾ ಇದ್ದಾರೆ ಅಂದ್ರಿ ಅಲ್ವಾ?”
“ಹೌದು.”

“ಹಾಗಾದರೆ ನೀವು ನಿಮ್ಮ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಅವರನ್ನು ಕನ್ವಿನ್ಸ್ ಮಾಡಿ ಊರಿಗೆ ಬಂದು ಬಿಡಿ. ನಿಮ್ಮ ತಂದೆತಾಯಿಗಳ ಸೇವೆ ಮಾಡಿ. ಅವರ ಕಾಲದ ನಂತರ ಪುನಃ ಹೋಗಿ ನಿಮ್ಮವರನ್ನು ಕೂಡಿಕೊಂಡರೆ ಆಯ್ತು.”

“ಸಲಹೆ ಒಳ್ಳೆಯದೇ. ಆದರೆ ಅನುಸರಿಸುವುದು ಅಷ್ಟು ಸುಲಭ ಅಲ್ಲ ಸರ್”

ನಾನೇ ಪೋನ್ ಇಟ್ಟು ಬಿಟ್ಟೆ.


******************


*ಮೂರನೇ ಕೊಂಡಿ*

ಮತ್ತೆ ಪೋನ್

ಎತ್ತಿಕೊಂಡೆ

“ ಹಲೋ ಅಂಕಲ್ , ನಾನು ವರುಣ್ ಅಂತ ಬೆಂಗಳೂರ್ ನಿಂದ ಮಾತಾಡ್ತಿದೀನಿ. ನಿಮ್ಮ ಸಂಸ್ಕಾರ ಕತೆ ಹೇಗೋ ಕಣ್ಣಿಗೆ ಬಿತ್ತು. ಓದಿದೆ.”

“…,.............”

“ತುಂಬಾ ಭಾವುಕನಾಗಿದೀನಿ ಅಂಕಲ್. ನಮ್ಮಪ್ಪ ಹಳ್ಳಿಯಲ್ಲಿದ್ದ ನಮ್ಮ ಹಿರಿಯರ ಆಸ್ತಿಯನ್ನೆಲ್ಲ ಮಾರಿಬಿಟ್ಟ. ನಾವು ಚಿಕ್ಕವರಿರುವಾಗ ಅಲ್ಲೆಲ್ಲ ಹೋಗಿ ಬರ್ತಿದ್ವಿ. ನಂಗೆ ಬಹಳ ಇಷ್ಟವಾದ ಜಾಗ ಅದು. ಏನೋ ಅಪ್ಪ ಹಣದ ವಿಷಯದಲ್ಲಿ ದೊಡ್ಡಪ್ಪನ ಜೊತೆಗೆ ಜಗಳ ಮಾಡಿಬಿಟ್ಟು , ಪಾಲು ತಗೊಂಡು ಅದನ್ನೆಲ್ಲ ಮಾರಿಬಿಟ್ಟರು. ದೊಡ್ಡಪ್ಪನೂ ಆ ಹಳ್ಳಿಬೇಡ ಅಂತ ಅದನ್ನು ಮಾರಿಬಿಟ್ಟು ಪೇಟೆ ಹತ್ರ ಮನೆ ಮಾಡ್ಕೊಂಡ್ ಇದಾರೆ.
ನಿಮ್ಮ ಕತೆ ಓದುತ್ತಾ ಇದ್ದಹಾಗೆ ಅದೆಲ್ಲ ಇದ್ದಿದ್ರೆ …. ಅಂತ ಅನ್ನಿಸಿ ನಂಗೆ ಕಣ್ಣಲ್ಲಿ ನೀರು ಬಂತು.

“ಮಗೂ, ಇದಕ್ಕೆ ನನ್ನ ಹತ್ರ ಒಂದು ಪರಿಹಾರ ಇದೆ.”

“ಏನು ಅಂಕಲ್?”

“ನಿಮ್ಮ ತಂದೆಯವರು ಮುಂದೆ ರೇಟ್ ಬರುತ್ತದೆ ಅಂತ ಬೆಂಗಳೂರಲ್ಲೋ ಆಸುಪಾಸಲ್ಲೋ ಒಂದಷ್ಟು ಸೈಟ್ ತೆಗೆದು ಹಾಕಿಟ್ಟಿರಬಹುದು ಅಲ್ವಾ?”

“ಹೌದು. ಇದೆ ಅಂಕಲ್”

“ಸ್ವಲ್ಪ ಪ್ರೆಶರ್ ಹಾಕು. ಅದನ್ನು ಮಾರಿಬಿಟ್ಟು ನಿಮ್ಮ ಹಿರಿಯರು ಇದ್ದ ಜಾಗ ಮನೆ ಮತ್ತೆ ಕೊಂಡುಕೊಳ್ಳುಕ್ಕೆ ಆಗುತ್ತಾ ನೋಡು.ಆದ್ರೆ ಈಗ ಅದಕ್ಕೆ ಬೆಲೆ ಇರದೇ ಇರಬಹುದು. ಹಳ್ಳಿ ಕೊಂಪೆ ಆಗಿರಬಹುದು. ನೀನು ಮುದುಕ ಆದಾಗ ಅದರ ನಿಜವಾದ ಬೆಲೆ ನಿಂಗೆ ಗೊತ್ತಾಗುತ್ತದೆ”

“ಆಯ್ತು ಅಂಕಲ್ . ತುಂಬಾ ಥ್ಯಾಂಕ್ಸ್”


*************

*ಕೊನೆಯ ಕೊಂಡಿ*

ಕಾಲಿಂಗ್ ಬೆಲ್ ಆಯ್ತು.

ಹೋಗಿ ಬಾಗಿಲು ತೆರೆದೆ.

ನಮ್ಮ ಕಾಲೋನಿಯಲ್ಲೇ ನಾಲ್ಕು ಮನೆ ಆಚೆಗೆ ಇದ್ದ ಮುದುಕರೊಬ್ಬರು ನಗುತ್ತಾ ನಿಂತಿದ್ದರು.

“ಬನ್ನಿ , ಬನ್ನಿ “

ಅಂತ ಒಳಗೆ ಕರೆದೆ.

“ಇರಲಿ,  ಇರಲಿ”

ಅನ್ನುತ್ತಾ ಅವರು ಬಂದು ಸೋಫಾದ ಮೇಲೆ ಕುಳಿತರು.

“ನಾನು ನಿಮ್ಮ ಕತೆ ಓದಿದ್ದೆ.

“ಹೌದಾ ? ತುಂಬಾ ಕುಷಿಯಾಯ್ತು ಸರ್”

“ನೀವು ಹೇಳುವುದೆಲ್ಲ ಸರಿ. ಆದರೆ ಈಗ ನನ್ನನ್ನೇ ನೋಡಿ. ಸರಕಾರಿ ಕೆಲಸ. ಬೇರೆ ಬೇರೆ ಊರು, ಟ್ರಾನ್ಸಫರ್,  ತಿರುಗಾಟ. ಈ ಹಿರಿಯರ ಆಚಾರ ಅನುಷ್ಟಾನ ಅಂದ್ರೆ ಕಷ್ಟವೇ. ಅಲ್ವ. ನಮಗೆ ಮಾಡಬೇಕು ಅಂತಿರುತ್ತದೆ. ಆದರೆ ಹೋದಲ್ಲೆಲ್ಲ ಅದಕ್ಕೆ ಅನುಕೂಲ ಬೇಕಲ್ಲ.ಈಗ ವಯಸ್ಸಾಯ್ತು.

“………..”

“ಬೇಸರ ಮಾಡಬೇಡಿ. ತುಂಬಾ ಭಾವುಕವಾಗಿ ಬರೆದಿದ್ದೀರಿ. ನನಗೂ ಫೀಲ್ ಆಯ್ತು. ಹೇಳಿ.  ನಿಮ್ಮ ದೃಷ್ಟಿಯಲ್ಲಿ ನನ್ನಂತವನು ಏನು ಮಾಡಬಹುದು”

ಪಾಪ . ಸುಮಾರು ಎಪ್ಪತ್ತರ ಗಡಿದಾಟಿದ ಮುದುಕರು
“ಬೇಸರಪಡಿಸಿದನೇ” ಅನ್ನಿಸಿತು.

ಆದರೂ ಸ್ವಲ್ಪ ಕೂಲಾಗಿ ಹೇಳಿದೆ.

“ಯಾಕೆ ಸರ್ ? ನಿಮಗೆ ಇನ್ನು ಆಯಸ್ಸೂ ಇದೆ. ಅವಕಾಶವೂ ಇದೆ. ಮನಸ್ಸು ತೆರೆಯಬೇಕಷ್ಟೆ.”

ಅವರು ಗಟ್ಟಿಯಾಗಿ ನಕ್ಕರು.

“ನಿಮ್ಮನ್ನು ಸೋಲಿಸುವವರಿಲ್ಲಪ್ಪ”

ಎನ್ನುತ್ತಾ ಎದ್ದರು.

ನಾನು ,

“ಸ್ವಲ್ಪ ಕಾಫಿ ಕುಡಿದು ಹೋಗಿ”

ಎಂದು ಒತ್ತಾಯಿಸಿದೆ.

******************

*ಮುಗಿಯಿತು*.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ