ಶುಕ್ರವಾರ, ಆಗಸ್ಟ್ 24, 2018

ದಿನೇಶ ಉಪ್ಪೂರ:     
ಕಥನದೊಳಗೆ            
ಸಂಸ್ಕಾರ
ಪುಟ 1                               -

ರಾಮ ಅಡಿಗರ ಮನಸ್ಸು ಬೆಳಿಗ್ಗೆಯಿಂದ ವಿಹ್ವಲಗೊಂಡಿತ್ತು. ಒಂದು ರೀತಿಯ ದುಗುಡ, ಏನೋ ಆತಂಕ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲೇ ಆಗುತ್ತಿಲ್ಲ. ನಸುಕಿನಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಅಡುಗೆಯ ಮನೆಯ ಎಲ್ಲ ಕೆಲಸವನ್ನು ಮುಗಿಸಿದರು. ಬಾವಿಯ ಕಟ್ಟೆಗೆ ಹೋಗಿ ಕೊಡಪಾನದಿಂದ ತಣ್ಣೀರನ್ನು ಎತ್ತಿ ತಲೆಗೆ ಝಳಝಳ ಹೊಯ್ದುಕೊಂಡು, ಸ್ನಾನ ಮಾಡಿ ಉಟ್ಟ ಪಾಣಿ ಪಂಚೆಯಿಂದ ಮೈಯನ್ನು ಒರೆಸಿಕೊಂಡು ದೇವರ ಶ್ಲೋಕಗಳನ್ನು ಬಾಯಿಯಲ್ಲಿ ಗುಣುಗುತ್ತಾ ದೇವರ ಕೋಣೆಗೆ ಬಂದು ದೇವರ ಮುಂದೆ ಕುಳಿತರೂ, ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ನಿತ್ಯ ಹೇಳುತ್ತಿದ್ದ ಮಂತ್ರಗಳು ಮಧ್ಯದಲ್ಲಿ ನಿಂತುಬಿಟ್ಟು ಸ್ಥಬ್ದವಾಗುತ್ತಿದೆ. ಮರೆತು ಹೋಗುತ್ತಿದೆ.
ದೇವರ ಕಿಂಡಿಯಲ್ಲಿದ್ದ ಹಿತ್ತಾಳೆಯ ತಟ್ಟೆಯಲ್ಲಿರುವ ಸಾಲಿಗ್ರಾಮದ ಮೇಲಿನ ನಿನ್ನೆಯ ಮಲಿನ ಹೂವುಗಳನ್ನು ತೆಗೆದರು. ದೇವರ ಪೂಜೆಯನ್ನೂ ಮುಂದುವರಿಸಲಾಗದೇ, ಹಾಗೆಯೇ ನೆಟ್ಟಗೆ ಕುಳಿತು ಅದನ್ನೇ ನೋಡುತ್ತಾ ಕುಳಿತರು.
ಮಗ ಪೋನ್ ಮಾಡದೇ ಎಷ್ಟು ದಿನವಾಯಿತು?. ಲಕ್ಷ್ಮಿ ಹಾಸಿಗೆ ಹಿಡಿದು ವರ್ಷವಾಗುತ್ತಾ ಬಂತಲ್ಲವೇ? ಪಾಪ, ಸ್ವಲ್ಪ ಎಚ್ಚರಾದರೂ ಮಗನ ಬಗ್ಗೆಯೇ ಕೇಳುತ್ತಾಳೆ. ವಾತದ ರೋಗ ಅವಳನ್ನು ಓಡಾಡದಂತೆ ಮಾಡಿ ಮಲಗಿಸಿಬಿಟ್ಟಿತು. ಮೊದಲು ಎಷ್ಟೆಲ್ಲಾ ಮಾಡಿದವಳು. ಇದ್ದ ಒಬ್ಬನೇ ಮಗನಿಗಾಗಿ  ತನ್ನ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟಳು. ಅವನೆದುರೇ ಇದ್ದು ತನಗೆ ಬೇರ ಪ್ರಪಂಚವೇ ಇಲ್ಲವೆಂದು, ಹಠ ಹಿಡಿದು ಓದಿಸಿ ಇಂಜಿನಿಯರ್ ಮಾಡಬೇಕೆಂದು ಅವನಿಗಾಗಿ ಬದುಕನ್ನೇ ಸವೆಸಿದಳು.
ಅವನು ಇಂಜಿನಿಯರೂ ಆದ. ಅವನು ಅಮೇರಿಕ ಸೇರಿದ ಮೇಲೆ ಮತ್ತೆ ಮನೆಯಲ್ಲಿ ತಾನು, ಅವಳು ಇಬ್ಬರೇ ಆಗಿಬಿಟ್ಟೆವು. ತಾನೂ ಯೌವನದಲ್ಲಿ ಗಟ್ಟಿ ಇರುವಾಗ ಸಾಕಷ್ಟು ದುಡಿದಿದ್ದರಿಂದ ಈಗ ತನ್ನದೇ ಆದ ಒಂದು ಮನೆ, ಆಸ್ತಿ ಅಂತ ಮಾಡಿಕೊಳ್ಳಲು ಆಯಿತು. ಬರೀ ಅವರಿವರ ಮನೆಯ ಪೌರೋಹಿತ್ಯವನ್ನೆ ಮಾಡಿ ಇಷ್ಟೆಲ್ಲ ಮಾಡಿದ್ದಲ್ಲವೇ? ಅದರಲ್ಲೇ ಮಗನನ್ನು ಓದಿಸಿದೆ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ. ಲಕ್ಷ್ಮಿಯೇ ಇದಕ್ಕೆಲ್ಲ ಕಾರಣ. ಅವಳ ದೂರಾಲೋಚನೆ, ಸಹಕಾರ ಇಲ್ಲದೇ ಇದ್ದರೆ ನಾನೂ ಹಿಂದಿನಂತೆ ಇನ್ನೂ ಆ ಮಂಜ ಭಟ್ಟರ ಹರಕು ಕೊಗಳಿನ ಅಡಿಯಲ್ಲೇ ಜೀವನ ಸಾಗಿಸಬೇಕಾಗಿತ್ತು.
ಹೂಂ. ಕಾಲ ಎಷ್ಟು ಬೇಗ ಮುಂದೆ ಬಂದು ಬಿಟ್ಟಿತು. ಮನುಷ್ಯನ ಪರಿಸ್ಥಿತಿ,ಮನಸ್ಥಿತಿಗಳೂ ಬದಲಾಗಿ ಹೋದವು. ಈಗ ತೋಟದ ಕೆಲಸ ಮಾಡಲು ಜನವೇ ಸಿಕ್ಕವುದಿಲ್ಲ. ಗದ್ದೆ ಬೇಸಾಯವನ್ನು ಕೈದುಮಾಡಿ ಎಷ್ಟೋ ಕಾಲವಾಯಿತು. ಎಲ್ಲ ಗದ್ದೆಗಳೂ ಹಡುಬೀಳುತ್ತಿವೆ. ಯಾವುದರಲ್ಲೂ ಮೊದಲಿನಂತೆ ಆಸಕ್ತಿಯಿಲ್ಲ. ಬೆಟ್ಟು ಗದ್ದೆಗೆಲ್ಲ ಗೇರು ಸಸಿ ಹಾಕಿ ನಾನು ಜೀವ ಸವೆಸಿ ಮಾಡಿದ ಗದ್ದೆಗಳನ್ನು ಪುನಃ ಜಡ್ಡು ಮಾಡಿಯಾಯಿತು.
ಇಷ್ಟಕ್ಕೂ ಇತ್ತೀಚೆಗೆ ‘ಇನ್ನು ಇದನ್ನೆಲ್ಲಾ ಮಾಡುವುದು ಯಾರಿಗಾಗಿ’ ಎಂಬ ಒಂದು ಸಣ್ಣಹುಳ ಅಡಿಗರ ತಲೆಗೆ ಹೋಗಿ ಇಷ್ಟೆಲ್ಲ ಅದ್ವಾನವಾದದ್ದು.
ಮಗ ಇನ್ನು ಬಂದು ಇಲ್ಲಿ ಇರಲು ಸಾಧ್ಯವೇ?
ಆದರೆ ನನಗೆ ಈ ಊರಿನ ಋಣ ಇನ್ನೂ ಮುಗಿಯಲಿಲ್ಲವಲ್ಲ.
ನನ್ನನ್ನು ನಂಬಿ ಪೌರೋಹಿತ್ಯಕ್ಕೆ ಕರೆಯುವ ಊರಿನ ಹತ್ತಾರು ಬ್ರಾಹ್ಮಣರ ಮನೆಗೆ ಹೋಗಿ ಅವರ ಮನೆಯ ಶ್ರಾದ್ಧವೋ, ಗಣಹೋಮವೋ ಸತ್ಯನಾರಾಯಣ ಕತೆಯೋ ಮಾಡಿ ಮಧ್ಯಾಹ್ನ ಅಲ್ಲಿಯೇ ಉಂಡು ಅವರು ಕೊಟ್ಟ ದಕ್ಷಿಣೆಯನ್ನು ಅಕ್ಕಿಕಾಯಿಯನ್ನು ಮನೆಗೆ ತಂದು, ಅದರಲ್ಲೇ ಸಂಸಾರದ ರಥ ಸಾಗುತ್ತದೆ.
ಅವಳಿಗೆ ಬೆಳಿಗ್ಗೆ ಅನ್ನವೋ ಗಂಜಿಯೋ ಮಾಡಿ, ಒಂದು ನೀರು ಸಾರೋ, ಗೊಜ್ಜೋ  ಮಾಡಿ ಇಟ್ಟರೆ ಆಯಿತು. ಅವಳೆ ಉಸ್ ಉಸ್ ಎನ್ನುತ್ತಾ ಅಡುಗೆ ಮನೆಗೆ ನಡೆದು ಬಂದು, ಉಂಡು ಮತ್ತೆ ಹಾಗೆ ಹಾಸಿಗೆಯನ್ನು ಸೇರುತ್ತಾಳೆ. ರಾತ್ರಿ ಊಟ ಹೇಗೂ ಇಲ್ಲ. ಇದ್ದ ಮುಸರೆ ಪಾತ್ರೆಗಳನ್ನು ತೊಳೆದು ಇಟ್ಟರೆ ಒಂದು ದಿನದ ಕಾರ್ಯಕ್ರಮ ಮುಗಿಯಿತು.
ಲಕ್ಷ್ಮಿಯ ನರಳಿಕೆ ಅಡಿಗರನ್ನು ಎಚ್ಚರಿಸಿತು.
ತನ್ನ ಮಗ ಕೈ ಮುಗಿದು ಪಕ್ಕದಲ್ಲಿ ತಾನು ಹೇಳುವ ಶ್ಲೋಕಗಳನ್ನು ಒಪ್ಪಿಸುತ್ತ ಇದ್ದ ಹಾಗೆ ಅನ್ನಿಸಿತು. ಕಣ್ಣು ತೆರೆದು ಎಡಮಗ್ಗುಲನ್ನು ನೋಡಿದರು. ಎಲ್ಲ ಭ್ರಮೆ. ಸಣ್ಣ ಮಂದಹಾಸವೊಂದು ಮುಖದಲ್ಲಿ ಮೂಡಿ ಮಾಯವಾಯಿತು. ಮಗ ಈಗ ಪೂಜೆ  ಜಪ ಯಾವುದನ್ನೂ ಮಾಡುವುದಿಲ್ಲವಂತೆ. ಅದೆಲ್ಲ ಅಮೇರಿಕದಲ್ಲಿ ಯಾರು ಮಾಡುತ್ತಾರೆ? ತನ್ನ ಕೆಲಸಗಳನ್ನೇ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲ ಅಂದನಲ್ಲ. “ಹೋ ಬಹಳ ಹೊತ್ತು ಕುಳಿತುಬಿಟ್ಟೆ. ಇನ್ನು ಹಂಜಾರರ ಮನೆಯ ಶ್ರಾದ್ಧಕ್ಕೆ ಹೋಗಬೇಕು” ಎಂದುಕೊಳ್ಳುತ್ತಾ ಬೇಗ ಬೇಗ ಪೂಜೆಯನ್ನು ಮುಂದುವರಿಸಿದರು.
ಅಂತೂ ಪೂಜೆ ಮುಗಿಯಿತು.
ತಾನು ಅಂಗಿಯನ್ನು ಹಾಕದೇ ಎಷ್ಟು ವರ್ಷವಾಯಿತೋ ಏನೋ ಅನ್ನಿಸಿಮುಖದಲ್ಲಿ ಒಂದು ನಗು ಮೂಡ ಮಾಯವಾಯಿತು.
ಒಂದು ಪಂಚೆಯನ್ನು ಉಟ್ಟು, ಹೆಗಲ ಮೇಲೊಂದು ಶಾಲನ್ನು ಹೊದೆದುಕೊಂಡು ಅಡಿಗರು ಹೊರಟುಬಿಟ್ಟರು. ಬಗಲಲ್ಲೊಂದು ಉದ್ದ ಮರದ ಜಲ್ಲಿನ ಕೊಡೆ, ಬಿಸಿಲಿಗೆ.
“ಲಕ್ಷ್ಮಿ, ಇವತ್ ಹಂಜಾರ್ರ ಮನೆಯ ಶ್ರಾದ್ದ ಇತ್ ಮಾರಾಯ್ತಿ.  ಹೋಯ್ ಬತ್ತೆ. ಅಡಿಗೆ ಮನೇಲಿ ಎಲ್ಲ ರೆಡಿಮಾಡಿ ಇಟ್ಟಿದ್ದೆ. ಹೆಚ್ ಓಡಾಡಿ ಆಯಾಸ ಮಾಡ್ಕಂಡ್ಬೇಡ. ಔಷಧಿಯನ್ನು, ಮಾತ್ರೆಯನ್ನೂ ನೆನಪು ಮಾಡಿ ತಕ್ಕೊ ಅಕಾ”. ಎಂದು  ಮಾಮೂಲಿನಂತೆ ಹೇಳಿ ಮೆಟ್ಟಿಲುಗಳನ್ನು ಇಳಿದು ಮೆಟ್ಟನ್ನು ಹಾಕಿಕೊಂಡು ಹೆಬ್ಬಾಗಿಲನ್ನು ಮುಂದೆ ಮಾಡಿಕೊಂಡು ಅಂಗಳಕ್ಕೆ ಇಳಿದು ಹೊರಟರು.

**************

ಈಗ ಹರೀನ್ ಗುಡ್ಡೆಗೆ ಎಲ್ಲಾ ಕಡೆಯಿಂದಲೂ ಸರಕಾರದವರು ಮುಳ್ಳು ಬೇಲಿ ಹಾಕಿಬಿಟ್ಟಿದ್ದಾರೆ. ಅಲ್ಲಿ ಗೋವೆ ಮರಗಳನ್ನು ನೆಟ್ಟು ಅದು ಫಸಲು ಬಂದಮೇಲೆ ವರ್ಷವರ್ಷವೂ ಗುತ್ತಿಗೆಗೆ ಕೊಡುವುದಂತೆ. ಎಲ್ಲಕಡೆ ಅಗಳು ತೋಡಿ ಮನುಷ್ಯರು ಗಂಟಿಕರುಗಳು ಆ ಪ್ರದೇಶಕ್ಕೆ ಹೋಗದಂತೆ ಮಾಡಿಬಿಟ್ಟಿದ್ದಾರೆ. ಮುಂಚಿನಂತೆ ಮನೆಯ ಗಂಟಿಗಳಿಗೆ ಮಳೆಗಾಲದಲ್ಲಿ ಮೇವಿನ ತಾಣವಾಗಿದ್ದ ಆ ಗುಡ್ಡಿಗೆ, ಈಗ ಯಾರೂ ಪ್ರವೇಶಿಸದ ಹಾಗಾಗಿಬಿಟ್ಟಿದೆ.

ಮೊದಲಾದರೆ ಆ ಗುಡ್ಡೆಯ ಪಶ್ಚಿಮಭಾಗದಲ್ಲಿ ಇರುವ ಹಲವಾರು ಮೆಟ್ಟಿಲುಗಳನ್ನು ಹತ್ತಿ ಹತ್ತಿ ಹೋಗಿ ವಿಶಾಲವಾದ ಹರಿನ್ ಗುಡ್ಡೆಯಲ್ಲಿ ನಡೆದು ಹಾಯ್ಕಾಡಿಗೆ ಹೋಗಲಿಕ್ಕೆ ಬಹಳ ಸುಲಭವಿತ್ತು. ಆದರೆ ಈಗ ಗೋರಾಜಿಗೆ ಹೋಗಿ, ಅಲ್ಲಿಂದ ಕಾಸಾಡಿಗೆ ಬಂದು ತಾರುರಸ್ತೆಯಲ್ಲೇ ಸೇರಿ ನಡೆದು ಹಾಯ್ಕಾಡಿಗೆ ಹೋಗಬೇಕು.

ಹಾಯ್ಕಾಡಿ ಪೇಟೆಯಲ್ಲೇ ಸ್ವಲ್ಪ ಕೆಳಗೆ, ತೆಂಕುಬದಿಯ ಗದ್ದೆಯ ಬೈಲಿಗೆ ಇಳಿದರೆ ಅದರ ಮೇಲ್ ಬದಿಯ ಎತ್ತರದ ಜಾಗದಲ್ಲಿ ಇರುವುದೇ ಎಂಕಪ್ಪ ಹಂಜಾರರ ಮನೆ. ಏನಿಲ್ಲವೆಂದರೂ ಮುಕ್ಕಾಲು, ಒಂದು ಗಂಟೆಯ ದಾರಿ.

ದೇವರ ಸ್ರೋತ್ರಗಳನ್ನು ತನ್ನಷ್ಟಕ್ಕೇ ಬಾಯಿಯಲ್ಲಿ ಹೇಳುತ್ತಾ, ತಲೆಯಡಿ ಮಾಡಿಕೊಂಡು ಅಡಿಗರು ಮೆಲ್ಲನೆ ನಡೆಯತೊಡಗಿದರು.

ಎಂಕಪ್ಪ ಹಂಜಾರರ ತಂದೆ ರಾಮ ಹಂಜಾರರ ಕಾಲದಿಂದಲೂ ಅವರು ಆ ಊರಿಗೆ ಬಂದಂದಿನಿಂದ ಅವರ ಮನೆಗೆ ತಾನೆ ಪೌರೋಹಿತ್ಯ ಮಾಡಿದವನು. ಆದರೆ ಅವರ ಮಕ್ಕಳ ಕಾಲದಲ್ಲಿ ಅಂದರೆ, ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಆ ಮನೆಯಲ್ಲಿ ಹಿಂದಿನಷ್ಟು ಸಲಿಗೆ, ಆತ್ಮೀಯತೆ ತನಗೆ ಇಲ್ಲ. ಅನುಕೂಲಸ್ಥರು. ಮಕ್ಕಳೆಲ್ಲ ಓದಿ ಪರವೂರಿನಲ್ಲಿದ್ದಾರೆ.

ಆ ಮನೆಯಲ್ಲಿ ಮೊದಲು ಹೋಗು ಬಾ ಅನ್ನುತ್ತಿದ್ದವನು ಈಗ ಅವರ ಮನೆಯ ಮಕ್ಕಳಿಗೂ “ನೀವು” ಅನ್ನುತ್ತಿದ್ದೇನೆ. ಏಕೋ ಆ ಮನೆಯಲ್ಲಿ ಮೊದಲಿನ ಹಾಗೆ ಬೆರೆತು ಮಾತನಾಡಲು ಆಗುತ್ತಿಲ್ಲ. ಅವರ ಮನೆ ಎಂದರೆ ಏನು? ಎಲ್ಲರ ಮನೆಯಲ್ಲೂ ಹಾಗೆಯೇ ಆಗಿಬಿಟ್ಟಿದೆ. ನಾವು ಹಿಂದಿನ ಕಾಲದವರು, ಈಗಿನವರಂತೆ ಮುಂದುವರಿದಿಲ್ಲ ಎಂಬ ಭಾವ. ಈಗಿನ ಮಕ್ಕಳೇ ಹಾಗೆ ಹಿರಿಯರನ್ನು ಅವರ ಆಚರಣೆಗಳನ್ನು ತಾತ್ಸಾರ ಮಾಡುತ್ತವೆ.

ರಾಮ ಹಂಜಾರರ ಮಕ್ಜಳಲ್ಲಿ, ಇಬ್ಬರು ಮಕ್ಕಳು ಈಗ ಎರಡು ಮೂರು ವರ್ಷದಿಂದ ಬೆಂಗಳೂರಿನಲ್ಲೇ ಇದ್ದವರು ಅಲ್ಲಿಯೇ ಶ್ರಾದ್ಧ ಮಾಡುತ್ತಾರೆ. ಈ ಎಂಕಪ್ಪ ಹಾಗೂ ಕಿರಿಯವ ಶೀನ ಹಂಜಾರ ಮಾತ್ರಾ ಇಲ್ಲಿ ಮಾಡುವವರು.

ಶೀನನೂ ಅದೆಲ್ಲೋ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದು ಶ್ರಾದ್ಧದ ದಿನವೇ ಬಂದು, ನೆಂಟನಂತೆ ಇದ್ದು ಹೋಗುವವ. ಇವರಿಗೆ ಶ್ರಾದ್ಧ ಅಂದರೆ ಬರೀ ಹರಕೆ ಬಲಿ. ಒಂದು ಶ್ರದ್ಧೆ ಇಲ್ಲ. ಸಮರ್ಪಣೆ ಇಲ್ಲ ಮಾಡದಿದ್ದರೆ ಯಾರಾದರೂ ಏನಾದರೂ ಹೇಳುತ್ತಾರೆ ಎಂಬ ಹೆದರಿಕೆ ಅಷ್ಟೆ.

ಈಗಂತೂ ಮಗ ಹೇಳಿದ ಹಾಗೆ ಎಲ್ಲವೂ ಕಾಂಟ್ರಾಕ್ಟ್.  ಈ ಶ್ರಾದ್ಧವೂ ಯಾರಾದರೂ ಕಾಂಟ್ರಾಕ್ಟ್ ವಹಿಸಿಕೊಂಡು ಮಾಡುವ ಭಟ್ಟರಿದ್ದರೆ, ಅದನ್ನೂ ಹಣ ಕೊಟ್ಟು ಮಾಡಿಸಿ ಪ್ರಸಾದ ಕಳಿಸಲು ಹೇಳುತ್ತಿದ್ದರೋ ಏನೊ.

ಮುಂದೆ ಆ ಕಾಲವು ಬಂದರೂ ಬಂದೀತು.

ಹೀಗೆ ಏನೇನೋ ಯೋಚಿಸುತ್ತಾ ಅಡಿಗರು ಹಂಜಾರರ ಮನೆಯ ಎದುರಿನ ಅಡಿಕೆ ತೋಟವನ್ನು ಹಾದು ಅಂಗಳಕ್ಕೆ ಬಂದರು. ಅಲ್ಲಿಯೇ ಇದ್ದ ಬಾವಿಕಟ್ಟೆಯ ನೀರಿನ ಟಾಂಕಿಯಿಂದ ಒಂದು ಚೊಂಬಿನಲ್ಲಿ ನೀರು ತೆಗೆದು ಕಾಲಿನ ಹಿಂಬದಿಗೆ ಹೊಯ್ದುಕೊಂಡು ಮೆಟ್ಟಲೇರಿ ಮನೆಯ ಒಳಗೆ ಹೋದರು.

**""***"**********

ಎಂಕಪ್ಪ ಹಂಜಾರರು ಅಡಿಗರನ್ನು ನೋಡಿ, “ಬನ್ನಿ ಬನ್ನಿ” ಎಂದು ಹೇಳಿ ಒಳಗೆ ಕೋಣೆಗೆ ಹೋಗಿ ಒಂದು ಬಣ್ಣದ ಚಾಪೆಯನ್ನು ಚಾವಡಿಯಲ್ಲಿ ಹಾಸಿ “ಕುಳಿತುಕೊಳ್ಳಿ. ಸ್ವಲ್ಪ ಬಾಯಾರಿಕೆಗೆ...” ಎಂದು ಉಪಚರಿಸಿದರು. ಒಂದು ತಟ್ಟೆಯಲ್ಲಿ ಬೆಲ್ಲದ ತುಂಡು, ತಂಬಿಗೆಯಲ್ಲಿ ನೀರು, ಒಂದು ಲೋಟವನ್ನು ತಂದು ಅವರ ಹೆಂಡತಿ ಅಡಿಗರ ಮುಂದೆ ಇಟ್ಟು, “ಬಂದ್ರಿಯಾ” ಎಂದು ನಗೆ ಬೀರಿ ಮಾತಾಡಿಸಿದರು.

ಅಡಿಗರು ಚಾವಡಿಯಲ್ಲಿ ಚಾಪೆಯಲ್ಲಿ ಕಾಲು ನೀಡಿ ಕುಳಿತು, “ಎಂತಹಾ ಶೆಖೆ ಮರ್ರೆ” ಎಂದು ತನ್ನ ಪಾಣಿಪಂಚೆಯಲ್ಲಿ ಮುಖವನ್ನು ಒರೆಸಿಕೊಂಡು, ಅದನ್ನೇ ಗಿರಿಗಿಟಿಯಂತೆ ಸುತ್ತಲೂ ತಿರುಗಿಸುತ್ತಾ ಗಾಳಿ ಹಾಕಿಕೊಂಡು ಲೋಟಕ್ಕೆ ನೀರು ಬಗ್ಗಿಸಿ, ಬೆಲ್ಲದ ತುಂಡನ್ನು ಬಾಯಿಗೆ ಎಸೆದು, ನೀರನ್ನು ಗಟಗಟನೆ ಕುಡಿದು, “ಎಲ್ಲಾ ರೆಡಿಯಾ?” ಎಂದರು.

“ಹೌದಪ” ಎಂದ ಹಂಜಾರರು, ಒಂದು ದರ್ಭೆಯ ಕಟ್ಟನ್ನು ಒಂದು ಕತ್ತಿಯನ್ನು ತಂದು ಚಾವಡಿಯಲ್ಲಿ  ಅವರ ಎದುರಿಗೆ ಹಾಕಿದರು.

ಅಡಿಗರು ದರ್ಭೆಯ ಕಟ್ಟನ್ನು ಬಿಡಿಸಿ, ಅದನ್ನು ಕತ್ತರಿಸಿ “ಈ ವರ್ಷ ಶ್ರಾದ್ದಕ್ಕೆ ಎಷ್ಟ್ ಜನ? ಎಲ್ಲರೂ ಬತ್ರಾ” ಎಂದು ಮಾಮೂಲಿನಂತೆ ಕೇಳಿದರು. ಹಂಜಾರರು “ಇಲ್ಯೆ ನಾವಿಬ್ರೆ ಸೈ. ಉಳಿದವ್ರು ಬೆಂಗ್ಳೂರಲ್ಲೆ ಮಾಡ್ತರಂಬ್ರು” ಎಂದರು. ಅಡಿಗರು ದರ್ಭೆಯನ್ನು ಕತ್ತರಿಸಿ ಶ್ರಾದ್ಧ ಕ್ರಿಯೆಗೆ ಬೇಕಾದ ಪವಿತ್ರ, ಸಣ್ಣ ಸಣ್ಣ ದರ್ಭೆ ಕಟ್ಟು ಇತ್ಯಾದಿಗಳನ್ನು ಮಾಡಲು ಶುರುಮಾಡಿದರು.

ಅಷ್ಟರಲ್ಲಿ ಎಂಕಪ್ಪ ಹಂಜಾರರ ತಮ್ಮನೂ ಬಂದು ಅದೂ ಇದು ಲೋಕಾಭಿರಾಮ ಮಾತಾಡಿದ. ಅವನು ಬರೀ ಅವನ ತಾಪತ್ರಯಗಳನ್ನೇ ಹೇಳುತ್ತಿದ್ದಾನೆ ಎಂದು ಅಡಿಗರಿಗೆ ಅನ್ನಿಸಿ ಬೇಕೋ ಬೇಡವೋ ಅಂತ ಒಂದೆರಡು ಮಾತಾಡಿದರು.

ಶ್ರಾದ್ಧ ಶುರುವಾಯಿತು.
ಅಡಿಗರು ಅಂದ ಮೇಲೆ ಎಲ್ಲವೂ ಚೊಕ್ಕ. ಶಿಸ್ತು ಎಲ್ಲವೂ ಹೇಗೆ ಆಗಬೇಕೋ ಹಾಗೇ ಆಗಬೇಕು.

ಸುಮಾರು ಒಂದು ಗಂಟೆಯ ಸುಮಾರಿಗೆ ಶ್ರಾದ್ಧ ಮುಗಿದೂ ಹೋಯಿತು.

ಹಂಜಾರರ ಹೆಂಡತಿ “ನಿಮ್ಮ ಮಗ ಬಂದಿದ್ನೆ?” ಎಂದು ವಿಚಾರಿಸಿದರು. “ಇಲ್ಲ ಮರ್ರೆ ಅವ ಎರಡ್ ಮೂರ್ ವರ್ಷಕ್ ಒಂದ್ಸಾರಿ ಬಪ್ದ್ ಅಲ್ದೆ?” ಸ್ವರದಲ್ಲಿ ಏಕೋ ನಡುಕವುಂಟಾಗಿ ತಾನು ಒಂಟಿ ಎಂಬ ಭಾವ ಅಡಿಗರ ಮನಸ್ಸಿನಲ್ಲಿ ಮೂಡಿ ಮಾಯವಾಯಿತು.

*********

“ನಮ್ ಮಾಣಿ, ಶಂಕ್ರನಾರಾಯ್ಣ ಮದರ್ ತೆರೆಸಾ ಶಾಲಿಗ್ ಹ್ವಾಪದೆ. ಅವ ಬಪ್ಪು ಹೊತ್ತಾಯ್ತ. ಇಲ್ಲೆ ಪ್ಯಾಟಿಗ್ ಹೋಯಿ, ಕರ್ಕಂಡ್ ಬತ್ತೆ ಅಕ್ಕಾ?”
ಎಂದು ಅಂಗಿ ಹಾಕಿಕೊಳ್ಳುತ್ತಾ ಎಂಕಪ್ಪ ಹಂಜಾರರು ಹೊರಗೆ ಹೊರಟರು.

“ ಮನೆಯಲ್ಲಿ ಆಗುವ ಇಂತಹ ವಿಶೇಷ ಕಟ್ಲೆಯ ದಿನ ಆದ್ರೂ, ಮಕ್ಳು ಮನೆಗಿರ್ಕೆ. ಇಲ್ದಿದ್ರೆ ಅವುಕೆ ಈ ಕ್ರಮ, ಸಂಸ್ಕಾರ, ಸಂಪ್ರದಾಯ ಎಲ್ಲ ಹ್ಯಾಂಗ್ ಗೊತ್ತಾತ್ತೆ?”
ಅಂದರು ಅಡಿಗರು.
“ಅವು ರಜೆ ಮಾಡೂಕ್ ಎಡಿಯಾ ಅಂತ್ವೆ. ಪಾಠ ಮಿಸ್ ಆತ್ತಂಬ್ರ್. ನಮಗಂತೂ ಓದೂಕಾಯ್ಲಿಲ್ಲೆ. ಮಕ್ಳಾರೂ ಓದ್ವಷ್ಟ್ ಓದ್ಕಣ್ಲಿ”
ಎಂದು ನಗುತ್ತಾ ಹೊರಟರು ಹಂಜಾರರು.
ಸಂಸ್ಕಾರ ಇದ್ದೂ ಇಂದು ನನ್ನ ಮಗ ಏನು ಮಾಡುತ್ತಿದ್ದಾನೆ, ಎಂದುಕೊಂಡರು ಅಡಿಗರು.

ಮನಸ್ಸು ತನ್ನ ಬಾಲ್ಯಕ್ಕೆ ಓಡಿತು. ಅಪ್ಪಯ್ಯನಿಂದಲೇ ವೇದ ಪಾರಾಯಣ ಪಾಠ ಹೇಳಿಸಿಕೊಂಡ ನಾನು, ಅಪ್ಪಯ್ಯ ಹೋದ ಪೌರೋಹಿತ್ಯದ ಮನೆಗೆಲ್ಲ ಅವರ ಹಿಂದೆ ಹೋಗುತ್ತಿದ್ದೆ. ಅವರ ಸೇವೆಯೇ ನನ್ನ ಬದುಕು ಅಂದುಕೊಂಡಿದ್ದೆ. ಅವರೂ ಹಾಗೆಯೇ ಅವರ ಸೇವೆಗೇ ನಾನು ಹುಟ್ಟಿದ್ದು ಎಂಬಂತೆ ಇದ್ದರು. ಸುತ್ತಮುತ್ತಲಿನ ಬ್ರಾಹ್ಮಣರ ಮನೆಯಲ್ಲಿ ನನಗೆ ಎಷ್ಟೊಂದು ಗೌರವ ಇತ್ತು. ದಾರಿಯಲ್ಲಿ ಸಿಕ್ಕಿದರೆ ಮಾತಾಡಲು ಅಂಜುತ್ತಿದ್ದರು. ಎದುರು ಬರುವಾಗ ದಾರಿ ಬಿಟ್ಟು ಬದಿಗೆ ಸರಿಯುತ್ತಿದ್ದರು.

ಆದರೆ  ಈಗ? ನನ್ನನ್ನು ನೋಡಿದರೆ ಯಾರೂ ಗೌರವ ಕೊಡುತ್ತಾರೆ ಎಂಬ ವಿಶ್ವಾಸವೇ ಇಲ್ಲ. ಪರಿಚಿತರೇ ಆದರೂ ದೂರದಿಂದಲೇ  ನೋಡಿ ನಕ್ಕು ಹಾಗೆಯೇ ಹೋಗುತ್ತಾರೆ.

ಆದರೆ ನನ್ನ ಮಗ?  ನಮ್ಮ ಊರಿನಲ್ಲೇ ಹೆಚ್ಚಿನವರಿಗೆ  ಪರಿಚಯವಿಲ್ಲ. ಹೆಚ್ಚು ಅವರಿವರ ಮನೆಗೆ ಹೋಗಿ ಬಂದವನೆ ಅಲ್ಲ. ನೆಂಟರಿಷ್ಟರೊಡನೆ ಬೆರೆಯುತ್ತಲೇ ಇರಲಿಲ್ಲ ಚಿಕ್ಕಂದಿನಿಂದಲೂ ಓದುವ ನೆಪದಲ್ಲಿ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ಆಗ ಅವನ ಅಮ್ಮನೂ ಅದನ್ನು ಸಮರ್ಥಿಸಿದಳು.
ನಾನು ಅಪ್ಪಯ್ಯನಿಗೆ ಹೆದರುತ್ತಿದ್ದೆನಾ? ಹೆದರಿಕೆಯೇ ಅದು? ಅಲ್ಲ. ಅದು ಗೌರವ. ಅಪ್ಪಯ್ಯ ನನಗೆ ಜೋರು ಮಾಡಿದ್ದೇ ಇಲ್ಲ. ಕಾಲ ಬಹಳ ಬದಲಾಗಿ ಹೋಯಿತು. ಈಗ ಮಗ ಮನೆಯಲ್ಲಿದ್ದಾಗ ಆಪ್ಯಾಯತೆಯಿಂದ ಇಲ್ಲಿ ಬಾ ಎಂದು ಕರೆಯಬೇಕು ಅನ್ನಿಸಿದರೂ, ಅವನು ಕುಳಿತಲ್ಲಿಂದ ಎದ್ದು ಬರುತ್ತಾನೆ ಎಂಬ ವಿಶ್ವಾಸ ನನಗಿಲ್ಲ. ಹಾಗಂತ. ಅದನ್ನು ಪರೀಕ್ಷೆ ಮಾಡಲು ಹೋಗಲಿಕ್ಕೂ ಧೈರ್ಯವಿಲ್ಲ. ಈಗೀಗ ಮನೆಗೆ ಬಂದರೂ ನನ್ನನ್ನು ಕಂಡರೆ ಕಣ್ಣು ತಪ್ಪಿಸಿಕೊಂಡು ತಿರುಗುತ್ತಾನೆ. ಎದುರಿಗೆ ಬಂದು ನಿಲ್ಲುವುದೇ ಇಲ್ಲ. ಮಾತುಕತೆಯಂತೂ ಇಲ್ಲವೇ ಇಲ್ಲ. ದೈವ ಭಕ್ತಿ ಪೂಜೆ ಪುನಸ್ಕಾರ ಎಲ್ಲ ನನ್ನ ಕಾಲಕ್ಕೇ ಮುಗಿಯಿತಾ ಅಂತ.

ಈಗ ಅಲ್ಲಿಯೂ ಪೂಜೆ ಮಾಡುತ್ತಾನಾ? ಹೊತ್ತಿನಿಂದ ಹೊತ್ತಿಗೆ ಸರಿಯಾಗಿ ಸ್ನಾನವನ್ನೂ ಮಾಡುತ್ತಾನೋ ಇಲ್ಲವೊ. ಹಿಂದೆ ಒಮ್ಮೆ ಮನೆಯಲ್ಲಿರುವಾಗ ಅದನ್ನೆಲ್ಲ ಹೇಳಿದರೆ “ಅದೆಲ್ಲ ನಿಮ್ ಕಾಲದಲ್ಲಾಯ್ತು. ಈಗ ಚೆನ್ನಾಗಿ ದುಡಿಯಬೇಕು, ಹಣ ಮಾಡಬೇಕು. ಕಾಲಕ್ಕೆ ತಕ್ಕಂತೆ ಬದಲಾಗಬೇಕು” ಅಂದಿದ್ದ. ಯಾವುದು ಬದಲಾವಣೆ? ನಮ್ಮ ನಮ್ಮ ಸಂಸ್ಕಾರವನ್ನು ಕಿತ್ತೊಗೆಯುವುದಾ? ಹಿರಿಯವರಿಗೆ ಗೌರವ ಕೊಡದಿರುವುದಾ? ಪಾಶ್ಚಾತ್ಯರನ್ನು ಅನುಕರಿಸುವುದಾ? ಎಂದರೆ,
“ಅದೆಲ್ಲ ನಿಮಗೆ ಗೊತ್ತಾಗುವುದಿಲ್ಲ” ಅನ್ನುತ್ತಾನೆ.

ಹೌದು ನಾನೇ ಹೆಡ್ಡನಾದೆ.

ನಾಳೆಯ ದಿನಗಳನ್ನು ಯೋಚಿಸಲೇ ಇಲ್ಲ. ನನ್ನ ಲಕ್ಷ್ಮಿಯೂ ಹೇಳಿದಳಲ್ಲ. ಮಗ ಓದಲಿಕ್ಕೆ ಹುಷಾರಿದ್ದಾನೆ. ಓದುವಷ್ಟು ಓದಿಸುವ ಅಂತ. ಮಗ ಓದಿ ಓದಿ ಮೇಲೆ ಮೇಲೆ ಹೋದ. ನಾವು ಹಿಂದುಳಿದೆವು. ಚೆನ್ನಾಗಿ ಓದಿ ದುಡಿದು ಹಣವನ್ನು ನೀರಿನಂತೆ ಖರ್ಚು ಮಾಡುವ ಮಗ, ಎಲ್ಲಾದರೂ ಇರಲಿ ಸುಖವಾಗಿ ಇರಲಿ ಎನ್ನುವುದಕ್ಕಿಂತ ಕಷ್ಟವೋ ಸುಖವೊ ಮಗ ಕಣ್ಣಮುಂದೆಯೇ  ಇರಲಿ ಎಂದು ಬಯಸುವುದು ಸ್ವಾರ್ಥ ಅಂತ ಆಗುತ್ತದೆಯಾ?
“ಊಟಕ್ಕೇಳಿ”
ಅಂದರು ಹಂಜಾರರು.


******""****



ಊಟದ ಶಾಸ್ತ್ರ ಆಯಿತು.

ಊಟ ಮುಗಿದು ಒಂದು ವೀಳ್ಯ ಹಾಕಿ,  ಒಂದು ಗಳಿಗೆ ಚಾವಡಿಯಲ್ಲಿ ದಿಂಬಿಗೆ ಆನಿಸಿ ಕಣ್ಣು ಮುಚ್ಚಿದ ಅಡಿಗರು,  ಐದು ನಿಮಿಷದಲ್ಲಿಯೇ ಎದ್ದು ಹೆಂಡತಿಯ ನೆನಪಾಗಿ ಪಾಣಿ ಪಂಚೆಯನ್ನು ಕೊಡಕಿ ಹೆಗಲಿಗೇರಿಸಿ,
"ಹಂಜಾರ್ರೆ, ನಾನು ಇನ್ನು ಬತ್ತೆ"
ಎಂದು ಹೊರಡಲು ಅನುವಾದರು.
ಹಂಜಾರರು ಒಂದು ಹರಿವಾಣದಲ್ಲಿ ಅಕ್ಕಿ, ಕಾಯಿ, ಎಲೆ ಅಡಿಕೆ ಇಟ್ಟು ದಕ್ಷಿಣೆ ನೀಡಿ ಕಾಲಿಗೆ ನಮಸ್ಕರಿಸಿದರು.
“ಆಯುಷ್ಮಾನ್ ಭವ”
ಎಂದು ಆಶೀರ್ವದಿಸಿದ ಅಡಿಗರು ಎದ್ದು ಹೊರಟು ನಿಂತರು.

ಹಂಜಾರರ ಹೆಂಡತಿ ಒಳಗೆ ಹೋಗಿ ಒಂದು ಲೋಟ ಕಾಫಿಯನ್ನು ತಂದು ಕೊಟ್ಟು,

“ಲಕ್ಷ್ಮಿಯಮ್ಮ ಹ್ಯಾಂಗಿದ್ರೆ?” ಎಂದು ಕೇಳಿದರು.

ಅಲ್ಲಿಯೇ ಮತ್ತೆ ಚಾವಡಿಯ ತುದಿಯಲ್ಲಿ ಕುಳಿತ ಅಡಿಗರು,

“ಏನ್ ಹೇಳೂದ್? ಮನ್ಕಂಡಲ್ಲೇ ಅನ್ಭವಿಸ್ತಾ ಇದ್ಲು. ಏನೂ ಮಾಡ್ಕಂಬ್ಕಾತಿಲ್ಲೆ. ಇವತ್ತಂತೂ ತುಂಬಾ ಸೋತಂಗ್ ಕಾಂತಿತ್. ನಾನ್ ಬತ್ತೆ. ಇವತ್ ಉಂಡ್ಲೊ ಇಲ್ಯೋ?”

“ಒಟ್ಟಾರೆ ಕಷ್ಟ ಅಲ್ದಾ?”

“ಎಂತಾ ಮಾಡೂದ್ ಹೇಳಿ. ಆ ನಮ್ಮ ಬೆಳ್ಳ ನಾಯ್ಕನ ಕಿರೀ ಹೆಣ್ ಒಂದ್ ಎಷ್ಟ್ ಹೊತ್ತಿಗಾರೂ ದಿನಾ ಬಂದ್ ಕಸ ಗುಡಿಸಿ, ನೆಲ ಒರೆಸಿ ಬಟ್ಟೆ ಒಗ್ದ್ ಹಾಕಿ ಹ್ವೋತ್. ಅದಕ್ ಎಂತಾರೂ ಕೊಡುದ್”

ಅವರು ಕೊಟ್ಟ ಕಾಫಿಯನ್ನು ಘಟಘಟ ಕುಡಿದು, ಪೊಟ್ಟಣದಲ್ಲಿ ಹಾಕಿ ಕೊಟ್ಟ ಸಿಹಿಯನ್ನು ತೆಗೆದುಕೊಂಡು ಅಂಗಳಕ್ಕಿಳಿದರು.

ಮತ್ತೆ ಮನಸ್ಸಿನಲ್ಲಿ ದುಗುಡ ತುಂಬಿಕೊಂಡಿತು. ಇಂದು ಯಾಕೆ ಹೀಗೆ ಆಗುತ್ತಿದೆ?. ಇತ್ತೀಚೆಗೆ ಮನದ ಒಳಗೆ ಏನೋ ಒಂದು ರೀತಿಯ ಭಯ. ಒಂದು ರೀತಿಯ ಅನಿಶ್ಚಿತತೆ.
ಲಕ್ಷ್ಮೀ ನರಸಿಂಹಾ ಮನಸ್ಸಿಗೆ ನೆಮ್ಮದಿಕೊಡಿ ಎಂದು ದೇವರನ್ನು ಧ್ಯಾನಿಸಿದರು.

ಮನೆಗೆ ಬಂದು ಅಂಗಳದಲ್ಲಿ ಮೆಟ್ಟನ್ನು ಕಳಚಿಟ್ಟು,
“ಉಸ್ಸಪ್ಪ”

ಎಂದು ಜಗಲಿಯ ಮೇಲೆ ಕಾಲು ನೀಡಿ ಕುಳಿತು ಕೊಂಡರು.

“ಹ್ವಾ, ಉಂಡ್ಯಾ? ಎಂತಾ ಮಾಡಿದೆ? ನಿದ್ದೆ ಬಂತಾ?” ಎಂದು ಕುಳಿತಲ್ಲಿಂದಲೇ ಹೆಂಡತಿಯನ್ನು ಕೂಗಿ ವಿಚಾರಿಸಿದರು.

ಉತ್ತರ ಬರಲಿಲ್ಲ.

ಹಾಗೆಯೇ ಸ್ವಲ್ಪ ಹೊತ್ತು ಕುಳಿತಿದ್ದು, ಮೆಲ್ಲನೇ ಎದ್ದು, ಕಾಲಿಗೆ ನೀರು ಹಾಕಿಕೊಂಡು, ಒಳಗೆ ಚಾವಡಿಗೆ ಬಂದು, ಕೊಡೆಯನ್ನು ಮಾಡಿಗೆ ಸಿಕ್ಕಿಸಿ, ಅಡುಗೆ ಮನೆಗೆ ಹೋದರು.

ಎಲ್ಲವೂ ಎಲ್ಲಿ ಇಟ್ಟಿದ್ದಾರೋ ಅಲ್ಲಿಯೇ ಇತ್ತು.

ಹಾಗಾದರೆ ಇವಳು ಊಟವನ್ನೇ ಮಾಡಲಿಲ್ಲ.

ಮೆಲ್ಲನೇ ನಡೆದು ಪಡಸಾಲೆಗೆ ಬಂದರು. ಒಮ್ಮೆ ಹಾಗೆಯೇ ಕಿಟಕಿಯಿಂದ ಹೊರಗೆ ತೋಟದ ಕಡೆಗೆ ದೃಷ್ಟಿ ಹಾಯಿಸಿದರು. ಏಕೋ ಇತ್ತಿತ್ತಲಾಗೆ ತಾನು ಇಷ್ಟಪಟ್ಟು ಬೆಳೆಸಿದ ತೆಂಗು ಅಡಿಕೆ ಮರಗಳೇ ತನಗೆ ಅಪರಿಚಿತವಾದಂತೆ ಕಾಣುತ್ತಿದೆ. ಯಾವುದೂ ಬೇಡ ಅನ್ನಿಸಲಿಕ್ಕೆ ಶುರುವಾಗಿದೆ.

ಯಾವತ್ತೂ ಒಮ್ಮೆ ಹೋಗಿ, ಪ್ರತೀ ಅಡಿಕೆ ಮರದ ಬುಡದಲ್ಲಿ ಎಡದ ಕೈಯಲ್ಲಿ ಮರವನ್ನು ಆನಿಸಿ ಹಿಡಿದುನಿಂತು, ಒಮ್ಮೆ ತಲೆ ಎತ್ತಿ ಮರದ ತುದಿಯನ್ನು ಕಣ್ಣು ಕಿರಿದು ಮಾಡಿ ನೋಡಿದರೆ, “ಹೋ, ಇದೆಲ್ಲ ತನ್ನದೇ” ಎಂದು ಅಭಿಮಾನದಿಂದ ಸಮಾಧಾನ ಪಟ್ಟುಕೊಳ್ಳುತ್ತಿದ್ದವರಿಗೆ, ಇತ್ತೀಚೆಗೆ ತೋಟದ ಕಡೆಗೂ ಹೋಗಿ ಬರಲು ಮನಸ್ಸಾಗಿರಲಿಲ್ಲ. ಕೆಲಸಕ್ಕೆ ಸರಿಯಾಗಿ ಜನವೂ ಸಿಕ್ಕುವುದಿಲ್ಲ.

ಮಲಗುವ ಕೋಣೆಗೆ ಬಂದರು.

“ಹ್ವಾ ಹ್ಯಾಂಗಿದ್ದೆ?”

ಎಂದು ಹೇಳುತ್ತಾ, ಮಂಚದ ಕಾಲುಬದಿಯಲ್ಲಿ ಮೆಲ್ಲನೇ ಕುಳಿತರು.

“ಈಗೀಗ ಈ ಶ್ರಾದ್ದವೋ, ಪೂಜೆಯೋ ನಮ್ಮ ಬ್ರಾಹ್ಮಣರಿಗೂ ಬ್ಯಾಡ ಆಯಿತ್ ಮಾರಾಯ್ತಿ. ಒಟ್ ಹರ್ಕಿಬಲಿ ತೀರ್ಸ್ತೊ” ಅಂದರು.
……………….

ಹೆಂಡತಿ ಮಗ್ಗುಲು ಮಲಗಿದವಳು ತಿರುಗಲಿಲ್ಲ.

“ಹಾಂ ಹೂಂ” ಇಲ್ಲ

ನಿಧಾನವಾಗಿ ಅವಳ ಕಾಲನ್ನು ನೇವರಿಸಿದರು.

ಆಗಲೂ ಉತ್ತರವಿಲ್ಲ.

************

ಉತ್ತರಬಾರದಿದ್ದಾಗ ಸ್ವಲ್ಪ ಗಾಬರಿಯಾಗಿ ಎದ್ದು ತಲೆದಿಸೆಗೆ ಬಂದು ಹೊದೆವಸ್ತ್ರವನ್ನು ಸರಿಸಿ ಹಣೆಯನ್ನು ಮುಟ್ಟಿನೋಡಿದರು.

ಆದರೂ ಲಕ್ಷ್ಮಿ ಸ್ಪಂದಿಸದಾಗ,

“ಹ್ವಾ ಎಂತ ಆತ್?”

ಎಂದು ಆಪ್ಯಾಯತೆಯಿಂದ ನುಡಿದರು.

ಅದಕ್ಜೂ ಉತ್ತರವಿಲ್ಲ .

ಪುನಃ

“ಲಕ್ಷ್ಮೀ “

ಎಂದು ಮೈಯನ್ನು ಅಲುಗಾಡಿಸಿ ಗಟ್ಟಿಯಾಗಿ ಕರೆದರು.

ಲಕ್ಷ್ಮಿ ನಿಧಾನವಾಗಿ ಕಣ್ಣು ತೆರೆದು ಗಂಡನತ್ತ ತಿರುಗಿದರು.

ಮೆಲ್ಲನೆ
“ನಂಗೆ ಏನೂ ಎಡುದಿಲ್ಯೆ. ಇನ್ನೂ ಎಷ್ಟ್ ದಿನ ಈ ಗ್ವಾಲೆಯೋ? ಆ ಯಮನಿಗೆ ಇನ್ನೂ ಕರುಣೆ ಬರಲಿಲ್ಲೆ”
ಎಂದು ನೋವಿನಿಂದ ನರಳಿ ಹೇಳಿದರು.

“ನಾನ್ ಎಷ್ಟ್ ಸಲ ಹೇಳಿದ್ದೆ ನಿಂಗೆ? ನೀನು ಹೀಂಗೆ ನಬಿಯುದ್ ಬ್ಯಾಡ. ನನ್ ಕೈಯಲ್ಲಿ ನೋಡುಕ್ ಆತಿಲ್ಲೆ.  ಒಮ್ಮೆ ಮಣಿಪಾಲಕ್ ಹ್ವಾಪ ಎಂದು. ಆ ಡಾಕ್ಟರ ಹೇಳಿರಲೆ. ನೀನು ಬ್ಯಾಡ ಬ್ಯಾಡ ಅಂತ್ಲೆ ಹೇಳಿಯೇ ಕಾಲ ಕಳೆದೆ. ಎಂತ ಆತ್ ಅಂತ್ಲೂ ಸಮಾ ಹೇಳುದಿಲ್ಲೆ. ಇವತ್ ಒಂದ್ ಮುಷ್ಟಿ ಉಣಲೂ ಇಲ್ಲೆ.”

ಅದಕ್ಕೂ ಉತ್ತರವಿಲ್ಲ.

“ಇನ್ ನಿನ್ ಮಾತು ನಾನು ಕೇಳಿದಿಲ್ಲೆ. ರಾಮ ನಾಯ್ಕನಿಗ್ ಪೋನ್ ಮಾಡಿ ಈಗಲೇ ಕಾರ್ ತಪ್ಪುಕೆ ಹೇಳ್ತೆ”

ಎಂದು ನಿರ್ಧಾರದಿಂದ ಎದ್ದು, ಚಾವಡಿಗೆ ಬಂದು ಹಾಲಾಡಿಯಲ್ಲಿ ಬಾಡಿಗೆ ಕಾರನ್ನು  ಓಡಿಸುತ್ತಿದ್ದ ರಾಮ ನಾಯ್ಕನಿಗೆ ಪೋನ್ ಮಾಡಿ ಕಾರು ತರಲು ಹೇಳಿದರು

ಅಡಿಗರು ಮಣಿಪಾಲಕ್ಕೆ ಹೊರಡಲು ಗಡಿಬಿಡಿಯಲ್ಲಿ ಸಿದ್ದತೆ ಮಾಡತೊಡಗಿದರು.

ಯಾವಾಗಲೂ

“ಬೇಡ್ದೆ , ನಾನ್ ಸತ್ರೆ ಇಲ್ಲೆ ಸಾಯ್ತೆ”

ಎಂದು ಹೇಳುತ್ತಿದ್ದ ಲಕ್ಷ್ಮಿಯಮ್ಮ ಇವತ್ತು ಉತ್ತರ ಕೊಡಲಾರದಷ್ಟು ಬಳಲಿದ್ದರು. ಅದನ್ನು ನೋಡಿ ಅವಳಿಗೆ ಆಗುವ ನೋವು ಎಷ್ಟು ಎಂಬುದನ್ನು ಎಣಿಸಿಕೊಂಡು ಅಡಿಗರು ಮತ್ತಷ್ಟು ಆತಂಕಗೊಂಡರು.

ಕಾರು ಬಂದು ನಿಂತ ಶಬ್ದ ಆಯಿತು.

“ರಾಮ, ಬಾ ಎಲ್ಲ ರೆಡಿ ಮಾಡ್ಕಂಡ್ ಆಯ್ತು. ಒಂದು ಚಾ ಕುಡ್ಕೊ. ಅವಳನ್ ಹೊತ್ಕಂಡ್ ಕಾರಿಗೆ ಹಾಕ್ವಾ. ಮಣಿಪಾಲಕ್ ತಕಂಡ್ ಹ್ವಾಪ. ಮುಂದಿದ್ ದೇವರ ಕಂಡಂಗೆ ಆತ್”
ಎಂದು ಅದು ತನಗೂ ಅವನಿಗೂ ಅನ್ವಯಿಸುತ್ತದೆ ಎಂಬಂತೆ ಹೇಳಿದರು.

ಅಡಿಗರು ಅವನ ಉತ್ತರಕ್ಕೆ ಕಾಯಲಿಲ್ಲ.

ಅವನು ಅಡಿಗರು ಕೊಟ್ಟ ಚಾ ಕುಡಿದು, ಬಾವಿಕಟ್ಟೆಗೆ ಹೋಗಿ ಲೋಟವನ್ನು ಕುಚುಕುಚು ಮಾಡಿ ತೊಳೆದು, ತಂದು ಜಗಲಿಯ ಮೂಲೆಯಲ್ಲಿ ಕವುಚಿಹಾಕಿ ಮೆಟ್ಟಿಲು ಹತ್ತಿ ಒಳಗೆ ಬಂದ.

ಇಬ್ಬರೂ ಲಕ್ಷ್ಮಿಯಮ್ಮನನ್ನು ಎತ್ತಿ ಕೂರಿಸಿ, ಆಚೆ ಒಬ್ಬರು, ಈಚೆ ಒಬ್ಬರು ರಟ್ಟೆ ಹಿಡಿದು, ಆನಿಸಿ ಹಿಡಿದುಕೊಂಡು ಒಂದು ರೀತಿಯಲ್ಲಿ ಹೇಳುವುದಾದರೆ ಎಳೆದುಕೊಂಡೇ ಹೋಗಿ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಿದರು.


************

ಅಡಿಗರು ಮತ್ತೆ ಒಳಗೆ ಹೋಗಿ ಕೈಚೀಲದಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿ ಉಳಿಯಲು ಬೇಕಾದ ಬಟ್ಟೆ ತಟ್ಟೆಯೊಂದಿಗೆ ಬಂದು, ಹೊರಬಾಗಿಲಿಗೆ ಬೀಗ ಹಾಕಿದರು.  
ಮನೆಯ ಹಿಂದಿನ ಕೂಲಿಯಾಳು ರಾಧು ಬಾಯಿಯ ಮನೆಯ ಎದುರು ಹೋಗಿ ಕೂಗಿ ಹೇಳಿದರು,

“ಬಾಯಿ, ನಾನ್ ಮಣಿಪಾಲಕ್ಕೆ ಹೆಂಡತಿಯನ್ನು ಕರ್ಕಂಡ್ ಹ್ವಾತೆ, ಮನೆ ಕಡೆ ಸ್ವಲ್ಪ ನೋಡ್ಕೊ ಮಾರಾಯ್ತಿ. ಇಗಾ ಮನೆ ಬೀಗದ್ ಕೈ ನಿನ್ನತ್ರ ಇರ್ಲಿ” ಎಂದು ಹೇಳಿ ಕೀಯನ್ನು ಕೊಟ್ಟು, ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೆಂಡತಿಗೆ ತಾಗಿ ಕುಳಿತರು.

“ಹ್ವಾಪ”
ಎಂದರು.

ತುಂಬಾ ಆಯಾಸವಾದಂತೆ ಅನಿಸಿತು. ತಮ್ಮ ಉಪ್ಪರಿಗೆಯ ದೊಡ್ಡ ಮನೆಯತ್ತ ತಿರುಗಿ ನೋಡಿದರು. ಕಣ್ಣಿನಲ್ಲಿ ಅಯಾಚಿತವಾಗಿ ಒಂದುಹನಿ ನೀರು ಇಳಿಯಿತು.

ಕಾರು ಹೊರಟಿತು.

ಮಣಿಪಾಲದಲ್ಲಿ ಡಾಕ್ಟರರು ಪರಿಚಯದವರೆ. ಲಕ್ಷ್ಮಿಯನ್ನು ಒಂದು ವಾರ್ಡಿಗೆ ಸೇರಿಸಿಯಾಯಿತು. ಇಲ್ಲಿ ಕೆಲವರಾದರೂ ನನ್ನ ಉಡುಗೆ ತೊಡುಗೆಯನ್ನು ನೋಡಿ ಸ್ವಲ್ಪ ಗೌರವ ಕೊಡುತ್ತಾರೆ.

ಒಬ್ಸರ್ವೇಶನ್ ಅಂತೆ.

ಏನೇನೋ ಟೆಸ್ಟ್ ಗಳಾದವು.

ಅಂತೂ ರಾತ್ರಿ ತಡವಾಗಿ ಡಾಕ್ಟರು ಬಂದರು.

“ಅಡಿಗ್ರೆ, ಹೆದರೂದ್ ಬ್ಯಾಡ. ಒಳ್ಳೆ ಟೈಮಿಗೆ ಕರ್ಕಂಡ್ ಬಂದ್ರಿ. ಇನ್ನೂ ಸ್ವಲ್ಪ ತಡಾ ಮಾಡಿದ್ರೆ ಬಹಳ ಕಷ್ಟ ಇದ್ದಿತ್ತು. ಎಲ್ಲ ಟೆಸ್ಟ್ ಮಾಡಿದ್ವೊ. ನೋಡುವಾ” ಎಂದರು.

ಅಡಿಗರು ಮಗ ಸದಾಶಿವನಿಗೆ ಪೋನ್ ಮಾಡಿ ವಿಷಯ ತಿಳಿಸಿದರು.

*ಅಮ್ಮನಿಗ ಹುಷಾರಿಲ್ಲೆ ಮಾರಾಯಾ, ಮಣಿಪಾಲಕ್ ಕರ್ಕಂಡ್ ಬಂತ್ ನೀನ್ ಸ್ವಲ್ಪ ಪುರ್ಸೊತ್ ಮಾಡ್ಕಂಡ್ ಬತ್ಯಾ?” ಎಂದರು.

ವಿಷಯವನ್ನು ಕೇಳಿದ ಮಗ ಹೇಳಿದ,

“ಹೌದಾ ಅಪ್ಪಯ್ಯ, ಎಷ್ಟ್ ಖರ್ಚಾದ್ರೂ ಅಡ್ಡಿಲ್ಲೆ. ನಾನ್ ಇಲ್ಲಿಂದ್ಲೆ ಡಾಕ್ಟರಿಗೆ ಮಾತಾಡ್ತೆ. ಅಪ್ಪಯ್ಯ, ನೀವು ಹೆದ್ರಬೇಡಿ. ಧೈರ್ಯದಿಂದಿರಿ” ಅಂದ,

“ಎಂತ ಧೈರ್ಯವೋ ಮಗಾ?, ನಿಂಗ್ ಸ್ವಲ್ಪ ಪುರಸೊತ್ ಮಾಡ್ಕಂಡ್ ಬಪ್ಪುಕಾತ್ತಾ? ನಂಗೆ ಕೈಕಾಲೆ ಆಡುದಿಲ್ಲೆ. ಎಂತ ಮಾಡ್ಕಂದೇಳಿ ಗೊತ್ತಾತಿಲ್ಲೆ ಮಾರಾಯಾ. ತುಂಬ ಹೆದ್ರಿಕಿ ಆತ್” ಎಂದರು.

ಎಂದೂ ಹೀಗೆ ಮಾತಾಡದ ಅಪ್ಪಯ್ಯನ ಮಾತು ಕೇಳಿ ಸ್ವಲ್ಪ ಅಧೀರನಾದರೂ, ಅವನು

“ನಂಗೆ ಈಗ ರಜೆ ಸಿಕ್ಕೂದಿಲ್ಲ. ತುಂಬ ಕೆಲಸ. ಕಂಪ್ನಿಯವ್ರ್ ನನ್ನ ಮೇಲೇ ಡಿಪೆಂಡ್ ಆಯರ್ ಸ್ವಲ್ಪ ಧೈರ್ಯ ತಗೊಳ್ಳಿ. ಎಲ್ಲ ಸಮಾ ಆತ್”

ಎಂದು ಹೇಳಿದ.

ಅವನಿಗೆ ನನ್ನ ಮನಸ್ಥಿತಿಯ ಅರಿವಾಗಬೇಕಿದ್ದರೆ ಅವನಿಗೆ ನನ್ನಷ್ಟು ವರ್ಷವಾಗಬೇಕೋ ಏನೋ ಎಂದುಕೊಂಡರು ಅಡಿಗರು.

ಆದರೆ ಆ ಲಕ್ಷ್ಮಿಯಮ್ಮ ಮರುದಿನ ಬೆಳಗನ್ನು ನೋಡಲೇ ಇಲ್ಲ.



********"***



ಡಾಕ್ಟರರು ಬಂದು,

“ಅಡಿಗರೆ, ಕ್ಷಮಿಸಿ, ಎಲ್ಲ ಅವನ ಇಚ್ಚೆ. ನಾವು ಮಾಡೂದನ್ನು ಮಾಡಿದ್ದೇವೆ”

ಎಂದು ಅಡಿಗರನ್ನು ಸಂತೈಸಿದರು.

ಅಡಿಗರ ಮನಸ್ಸು ಶೂನ್ಯವಾಗಿತ್ತು.

ಒಳಗೆ ಅಂಧಕಾರ.

ಏನು ಮಾಡಬೇಕೆಂದೇ ತಿಳಿಯಲಿಲ್ಲ.

ಮಗನಿಗೆ ಪೋನ್ ಮಾಡಿದರು.

“ಎಲ್ಲ ಮುಗಿತ್ ಮಗಾ”

ಎಂದು ಗದ್ಗದಿತರಾಗಿ ವಿಷಯ ತಿಳಿಸಿದರು.

ಮಗ  ಮಾತಾಡಲಿಲ್ಲ

ಸ್ವಲ್ಪ ಗಡಸಿನಿಂದಲೇ,

“ರಜೆ ಹಾಕಿ ಕೂಡಲೇ ಬಾ. ಬಾಡಿಯನ್ನು ಐಸ್ ಲ್ಲಿ ಇಡ್ತೇವೆ. ಎಲ್ಲ ಆಯ್ಕಲೆ”

ಅಂದರು.

ಮಗ ಮತ್ತೂ ಸ್ವಲ್ಪ ಹೊತ್ತು ಮೌನವಾಗಿದ್ದು ಮತ್ತೆ ಮೆಲ್ಲನೇ ಹೇಳಿದ.

“ಅಪ್ಪಯ್ಯ, ನಾನು ಬರುವುದು ಎರಡು ದಿನ ಆದೀತು. ಅಷ್ಟರವರೆಗೆ ಯಾಕೆ ಇಡ್ತೀರಿ?  ನೀವು ಮುಂದುವರಿಸಿ. ನಮ್ಮ ಮಗುವಿಗೂ ಅಷ್ಟು ಹುಷಾರಿಲ್ಲ. ಸಣ್ಣದು. ನನಗೆ ಅಮ್ಮನು ಇನ್ನೂ ಜೀವಂತ ಇರುವ ಹಾಗಿನ ಮುಖವೆ ಕಣ್ಣ ಮುಂದೆ ಬರ್ತಾ ಇತ್ . ಅದು ಹಾಂಗೇ ಇರಲಿ”

ಎಂದು ಹೇಳಿದ.

ಅಡಿಗರಿಗೆ ಗಂಟಲು ಕಟ್ಟಿತು.

ಯಾಂತ್ರಿಕವಾಗಿ ಪೋನ್ ಇಟ್ಟರು.

ಹೌದು ನಾನು ಕಳೆದುಕೊಂಡದ್ದು ಕೇವಲ ಒಬ್ಬ ನನ್ನ ಮಗನನ್ನು ಮಾತ್ರ ಅಲ್ಲ. ನನ್ನ ಇಡೀ ಬದುಕನ್ನು, ನೆಮ್ಮದಿಯನ್ನು ಅನೂಚಾನವಾಗಿ ನಡೆಸಿಕೊಂಡು ಬಂದ, ಆಚರಿಸಿಕೊಂಡು ಬಂದ ಧರ್ಮವನ್ನು. ಮಗನನ್ನು ದೊಡ್ಡದಾಗಿ ಓದಿಸುತ್ತೇನೆ ಎಂಬ ಭ್ರಮೆಯಲ್ಲಿ, ನಾನೇ ನಮ್ಮ ಕುಲ ಪರಂಪರೆ ಆಚಾರ ವಿಚಾರ ಎಲ್ಲ ಎಲ್ಲವನ್ನೂ ಚಿವುಟಿ ಹಾಕಿದೆ. ನಮ್ಮ ವಂಶಕ್ಕೆ ನಾನೇ ಮುಕ್ತಾಯ ಹಾಡಿದೆ. ಕೊನೆಯವನಾಗಿಬಿಟ್ಟೆ.

ಹಿಂದಿನ ಕಾಲದಲ್ಲೂ ನಮ್ಮ ಕುಲದಲ್ಲಿ ಓದಿದವರಿರಲಿಲ್ಲವೇ? ಅದಕ್ಕಾಗಿ ತನ್ನ ಸಕಲ ಸುಖ ಸಂತೋಷವನ್ನು ಬಲಿಗೊಟ್ಟು ಯಶಸ್ಸು ಹೊಂದಿದವರಿರಲಿಲ್ಲವೇ? ಯಾಕಿಲ್ಲ?

ತನ್ನ ಒಂದು ಸಣ್ಣ ಮಾತು ನಡೆಯಲಿಲ್ಲವೆಂದು ಅನ್ನವಿತ್ತು ಆಶ್ರಯನೀಡಿದ ರಾಜನ ಆಶ್ರಯವನ್ನೇ ಧಿಕ್ಕರಿಸಿ ಬಂದಿದ್ದರಂತೆ ನಮ್ಮ ಹಿರಿಯರೊಬ್ಬರು. ಅವರ ದೃಢತೆ ವ್ಯಕ್ತಿತ್ವಕ್ಕೆ ಯೋಗ್ಯತೆಗೆ ಶರಣಾದ ಆ ರಾಜ ಇವರು ಹೋದ ಊರಿನಲ್ಲಿಯ ದೇವಸ್ಥಾನದಲ್ಲೇ ದೊಡ್ಡ ಸ್ಥಾನವನ್ನು ನೀಡಿ ಗೌರವಿಸಿದನಂತೆ. ನಮ್ಮಲ್ಲೂ ಓದಿದವರಿದ್ದರು, ಪ್ರಖಾಂಡ ಪಂಡಿತರೂ ಇದ್ದರು. ಆದರೆ ಯಾರೂ ಹೀಗೆ ತಾನು ಕಲಿತ ವಿದ್ಯೆಯನ್ನು ತನ್ನ ಸುಖಕ್ಕಾಗಿ ವಿನಿಯೋಗಿಸಲಿಲ್ಲ. ತನ್ನ ತನವನ್ನು ಮಾರಿಕೊಂಡು ಧನದ ಹಿಂದೆ ಹೋಗಲಿಲ್ಲ. ಇನ್ನೊಬ್ಬರ ದಾಸ್ಯವನ್ನು ಸ್ವೀಕಾರ ಮಾಡಲಿಲ್ಲ.

“ಹ್ವಾಯ್, ನೀವು  ನಮ್ ಮುದೂರಿ ಅಡಿಗ್ರಲ್ದಾ? ಇಲ್ಲೆಂತ ಮಾಡ್ತಿದ್ರಿ?  ಯಾರಿದ್ರು?”

ಎಂಬ ಒಬ್ಬ ಊರಿನ ಪರಿಚಿತರ ಧ್ವನಿಯಿಂದ ಅಡಿಗರು ಎಚ್ಚೆತ್ತರು.

ಅಡಿಗರು ತನ್ನ ಲಕ್ಷ್ಮಿ ಅಸ್ತಂಗತಳಾದ ವಿಷಯ ಹೇಳಿದರು.

“ಹೌದಾ, ಅಮ್ಮ ಹ್ವಾದ್ರಂತಾ? ಪಾಪ. ಬಾಳ ದಿನದಿಂದ ಮಲಗಿ ದಲ್ಲೇ ಆಯ್ ಇದ್ರ್ ಅಲ್ದಾ? ಬಿಡುಗಡೆ ಸಿಕ್ತು. ಪುಣ್ಯ ಮಾಡಿರ್ ಬಿಡಿ. ಅಲಾ, ನೀವು ಹೀಗ್ ಸುಮ್ನೆ ಕೂಕಂಡ್ರೆ ಆತ್ತಾ? ಮುಂದಿದೆಲ್ಲ ಆಪದ್ ಬ್ಯಾಡ್ದಾ? ಬನ್ನಿ ಬನ್ನಿ  ನಮ್ ಗುರ್ತ ಇಪ್ಪವ್ರೊಬ್ರು ಇಲ್ ಇದ್ರ್”

ನಂತರ ಮುಂದಿನ ಎಲ್ಲ ಕೆಲಸಗಳು ಯಾಂತ್ರಿಕವಾಗಿ ನಡೆಯಿತು.

ಪೋನ್ ಮಾಡಿ ಊರಲ್ಲಿ ಕೆಲವು ಆಪ್ತರಿಗೆ ಹೇಳಿದ್ದರಿಂದ ಅದು ಬಾಯಿಯಿಂದ ಬಾಯಿಗೆ ಹೋಗಿ, ಹಾಲಾಡಿ ಪೇಟೆಯಲ್ಲಿ ನೂರಾರು ಜನ ಸೇರಿದ್ದರು.

ಅಂತೂ ಮನೆಗೆ ಹೆಂಡತಿಯ ಶವವನ್ನು ತಂದು, ಊರವರ ಸಹಕಾರದಿಂದ ದಹನವನ್ನೂ ಮಾಡಿದ್ದಾಯಿತು.

ಇನ್ನು ಮಗನ ಬರವನ್ನು ಕಾಯುವುದಾಯಿತು.

***********


ಎರಡನೇ ದಿನಕ್ಕೆ ಮಗ ಬಂದ. ಜೊತೆಯಲ್ಲಿ ಸೊಸೆ, ಮತ್ತು ಅವರ ಸಣ್ಣ ಹೆಣ್ಣುಮಗಳು.

ನಾನೇ ಜಾತಕ ನೋಡಿ ಆರಿಸಿ ಮಾಡಿದ ಮದುವೆ. ಬಹುಷ್ಯ ಮಗ ನನ್ನ ಮಾತನ್ನು ಕೇಳಿ ಒಪ್ಪಿ ಸ್ವೀಕರಿಸಿದ ಮಾತು ಅದೊಂದೆ. ಊರಿಗೇ ಔತಣ ಹಾಕಿಸಿದೆ. ಮಗ ಅಮೇರಿಕಾದಲ್ಲಿ ಇದ್ದಾನೆ. ಏನು ಸಂಭ್ರಮ ಆಗ?

ಆರಾಮ ಕುರ್ಚಿಯಲ್ಲಿ ಒರಗಿ ಕುಳಿತಿದ್ದ ಅಡಿಗರ ಮುಖದಲ್ಲಿ ಒಂದು ವಿಷಾದದ ನಗೆ ಮೂಡಿತು.

ಅವನ ಅಮ್ಮನ ಒತ್ತಾಯಕ್ಕೆ ನಾಲ್ಕಾರು ಭಾರಿ ಈ ಮನೆಗೆ ಬಂದಿದ್ದರಲ್ಲ. ಆದರೆ ಅವರು ಎಂದೂ ನಮ್ಮ ಮನೆಯವರಾಗಿ ಬರಲೇ ಇಲ್ಲ. ಇರಲೇ ಇಲ್ಲ.

ಬರುತ್ತಲೇ ಒಮ್ಮೆ ಅಡಿಗರನ್ನು ಮಾತಾಡಿಸಿದ ಮಗ ಸೊಸೆಯರು, ಅವರ ಸಾಮಾನಿನೊಂದಿಗೆ ಹೋಗಿ ಉಪ್ಪರಿಗೆ ಸೇರಿಕೊಂಡರು. ಇನ್ನು ಅವರು ಕೆಳಗೆ ಬರುವುದು ರಾತ್ರಿ ಊಟಕ್ಕೆ.

ಅಡುಗೆಗೆ ಅಂತ ಲಕ್ಷ್ಮಿಯ ಪೈಕಿಯ ಮಾರ್ವಿಯ ಒಂದು ಮಾಣಿ ಮನೆಯಲ್ಲಿಯೇ ಉಳಿದುಕೊಂಡಿದ್ದ.

ಅಷ್ಟರ ಒಳಗೆ ಅಡಿಗರು ಸುಮಾರಾಗಿ ಮನೆಯ, ಹಾಗೂ ಮುಂದಿನ ಬದುಕಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದರು.

ಆದರೆ ಗಾಢ ಮೌನ.

ಮಗ ಮನೆಯಲ್ಲಿ ಇದ್ದರೂ, ಅಪ್ಪ ಮಗನ ಮಧ್ಯ ಮಾತಿಲ್ಲ. ಕತೆಯಿಲ್ಲ.

ಅವನು ಮನೆಯಿಂದ ಹೊರಗೂ ಹೋಗಲಿಲ್ಲ.

ಹಾಗೆಯೇ ಮತ್ತೆ ಎರಡು ದಿನ ಕಳೆಯಿತು.

ಆ ರಾತ್ರಿ ಊಟವಾದ ಮೇಲೆ ಚಾವಡಿಯಲ್ಲಿ ಕುಳಿತು, ಮಗನನ್ನು ಕರೆದು ಕೇಳಿದರು.

“ನೋಡು ಮಗು, ಹೀಂಗ್ ಮಾಡೀರ್ ಹ್ಯಾಂಗೆ? ಸುಮ್ನೇ ಇದ್ರ್ ಆತ್ತಾ? ಮುಂದಿನ ಕಾರ್ಯ ಎಲ್ಲ ಎಲ್ಲಿ ಮಾಡೂದು? ಹೇಗೆ ಮಾಡುವುದು? ಅಂತ ಯೋಚನೆ ಏನಾದ್ತೂ ಮಾಡಿದ್ಯಾ? ಈಗಿನ ಈ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಾಡುವುದು ಕಷ್ಟ ಅಂತ ಕಾಣುತ್ತದೆ. ಎಲ್ಲದಕ್ಕೂ ಇನ್ನೊಬ್ರ ಕೈಯನ್ನೆ ಕಾಣ್ಕಾತ್. ನಮ್ಗೇ ಮಾಡೂ ಕಾತಿಲ್ಲೆ. ನಂಗೆ ವಯಸ್ಸಾಯ್ತು. ನಿಂಗೆ ಗೊತ್ತಾಗುದಿಲ್ಲೆ. ಎಷ್ಟ್ ಅಂತ ಇನ್ನೊಬ್ರ ಕೈ ಕಾಂಬೂಕಾತ್?  ಹಾಗಂತ ಗೋಕರ್ಣದಲ್ಲಿ ಮಾಡಿದ್ರೆ ಶ್ರೇಷ್ಠ ಅಂತ್ರಪ. ಎಂತ ಮಾಡೂದ್ ಗೊತ್ತಾತಿಲ್ಲೆ. ಇಲ್ಲೇ ತೀರ್ಥಬೈಲಂಗೂ ಮಾಡ್ಲಕ್. ಎಲ್ಲ ವ್ಯವಸ್ಥೆ ಇತ್ತಂಬ್ರಪ. ನಾಳೆ ಹೋಯಿ ಮಾತಾಡಿ ಬರ್ಲಕ್ಕಾ?”

ಮಗ ಅದಕ್ಕೂ ಮಾತಾಡಲಿಲ್ಲ.  

ಆದರೆ ಬೆಳಿಗ್ಗೆ ಎದ್ದವನೇ ಅಂಗಿ ಹಾಕಿಕೊಂಡು ಹೊರಟುಬಿಟ್ಟ. ಬರುವಾಗ ರಾತ್ರಿಯಾಗಿತ್ತು.

ರಾತ್ರಿ ಊಟ ಮಾಡುವಾಗ ಮೆಲ್ಲನೆ, “ಅಪ್ಪಯ್ಯ, ನಾನ್ ಇವತ್ ತೀರ್ಥಬೈಲಿಗೆ ಹೋಗಿ ಬಂದೆ.  ಎಲ್ಲ ವ್ಯವಸ್ಥೆ ಆಯ್ತ್” ಎಂದ.

ಚಾವಡಿಯ ಮಂಚದ ಮೇಲೆ ಮಲಗಿದ್ದ ಅಡಿಗರು ಆಗಲಿ ಎಂದು ಮಗನ ಕಡೆಗೆ ತಿರುಗಿ ನಗೆಬೀರಿದರು.

ಮಗ ಸ್ವಲ್ಪ ಹೊತ್ತು ಸುಮ್ಮನಿದ್ದು,

“ನಾನ್ ಒಂದ್ ಮಾತ್ ಹೇಳ್ತೆ. ನೀವ್ ಸಿಟ್ ಮಾಡೂಕಾಗ.” ಅಂದ.

ಅಡಿಗರು ಏನು ಎನ್ನುವಂತೆ ಮಗನನ್ನು ನೋಡಿದರು.

“ನನಗೆ ರಜೆ ಇಲ್ಲ. ಇನ್ನು ಎರಡು ದಿನದಲ್ಲಿ ನಾನು ಕೆಲಸಕ್ಕೆ ಹಿಂದೆ ಹೋಗ್ದಿದ್ರೆ, ನನ್ನ ಕೆಲಸವೇ ಹೋತ್. ಅದಕ್ಕೆ ಅದಕ್ಕೆ ನಾನು ನಾಳೆ ಹೊರ್ಡತೇನೆ”

ಎಂದು ತಡೆದು ತಡೆದು ಹೇಳಿದ.

ಅಡಿಗರಿಗೆ ಒಮ್ಮೆ ಅವನು ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗಲಿಲ್ಲ.

ಒಮ್ಮೆಲೆ ಎದ್ದು ಸ್ವರ ಏರಿಸಿ,

“ಸತ್ ಹ್ವಾದ್ ನಿನ್ ಅಮ್ಮ ಮಾರಾಯಾ. ಪಿಂಡಾ ಇಡಬೇಕಾದವ ನೀನು”

ಎಂದು ಅಬ್ಬರಿಸಿದರು.

*********

ಅವರು ತನ್ನನ್ನು ಕಂಟ್ರೊಲ್ ಮಾಡಲು ಪ್ರಯತ್ನಿಸಲಿಲ್ಲ.

ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ.

ಹಾಗೆಯೇ ಹಿಂದಕ್ಕೆ ಸರಿದು ಮಂಚದ ಮೇಲೆ ಕುಳಿತು ಸಮಾಧಾನದಿಂದ ಹೇಳಿದರು.

ಆದ್ರೆ ಹೆತ್ತು ಮುದ್ದುಮಾಡಿ ವಿದ್ಯೆಬುದ್ಧಿ ಕಲಿಸಿ ನಿನ್ನನ್ ಈ ಮಟ್ಟಕ್ ತಂದ ಆ ಅಮ್ಮನ ಸದ್ಗತಿಗೆ ಸಂಸ್ಕಾರ ಮಾಡೂದಿಲ್ಲೆ ಅನ್ನುವಷ್ಟು ನೀನು ಓದಿಕೊಂಡಿದ್ದೆ ಎಂದು ನಾನ್ ಕನಸು ಮನಸಿನಲ್ಲೂ ಎಣಸಿರ್ಲಿಲ್ಲೆ. ಇಷ್ಟಕ್ಕೂ ಇದೆಲ್ಲ ಯಾರದ್ದು?, ನಮ್ಮ ಹಿರಿಯವರಿಂದ, ಲಾಗಾಯ್ತಿನಿಂದ ನಮಗೆ ಬಂದದ್ದು. ಈ ನೆಲ. ಉಪ್ಪರಿಗೆ ಮನೆ, ಆಸ್ತಿ. ಮನೆದೇವರು. ಪೌರೋಹಿತ್ಯ. ಇಲ್ಲಿಯ ಮಣ್ಣಿನ ಒಂದೊಂದು ಕಣವೂ, ಜಾಗದ ಮೂಲೆಮೂಲೆಯೂ ನಮಗೆ ಎಷ್ಟು ಪರಿಚಿತ. ಆಪ್ತವಾಗಿ ಇತ್. ನನ್ನ ಮೈಯ ರಕ್ತದ ಒಂದೊಂದು ಕಣದಲ್ಲೂ ಇಲ್ಲಿಯ ಅನುಭೂತಿ ಹರೀತಾ ಇತ್ ಮಗೂ. ನಿಂಗೋ ಪಾಲು ಗೀಲು  ಅಂತ ಕೇಳುವ ದಾಯಾದಿಗಳೂ ಇಲ್ಲ. ಇಷ್ಟೆಲ್ಲಾ ಇದೆ. ಇದೆಲ್ಲಾ ಯಾರಿಗೆ?. ಇದೂ ಊರೇ ಅಲ್ದಾ? ನಿನ್ನ ಇಷ್ಟೊತ್ತಿನ್ ವರೆಗಿನ ದುಡಿತದ ಹಣ ತಕೊಂಡ್ ಬಂದರೆ, ಇಲ್ಲಿ ಬಂದು ಮರ್ಯಾದೆಯಿಂದ ಬದುಕುಕ್ಕೆ ಇದೆಲ್ಲ ಸಾಕಾತಿಲ್ಯಾ? ಸಮಸ್ಯೆ ಎಲ್ಲಾ ಬದಿಗೂ ಇರತ್.

“ಅಪ್ಪಯ್ಯ, ನಾನ್ ಇಲ್ ಇಪ್ದಾ? ಇವಳು ಇದಕ್ ಒಪ್ಪೂಳಾ?”

ಸ್ವಲ್ಪ ಹೊತ್ತು ಮೌನ,

ನಂತರ ಮಗನೇ ಮೆಲ್ಲನೇ ಮಾತಾಡಿದ.

ಅಪ್ಪಯ್ಯಾ, ಅಷ್ಟ್ ಸೆಂಟಿಮೆಂಟ್ ಆಪೂದ್ ಬ್ಯಾಡ ನೀವು. ನನಗೆ ಈ ಪೂಜೆ ಪುನಸ್ಕಾರ  ಇದರಲ್ಲಿಯೆಲ್ಲ ನಿಮ್ಮಷ್ಟ್ ನಂಬಿಕೆ ಇಲ್ಲೆ. ಬೇಜಾರ್ ಮಾಡ್ಕಂಡ್ಬೇಡಿ.

……………...

ಸತ್ ಮೇಲ್ ಎಂತ ಆತ್ತೋ, ಎಲ್ ಇರತ್ತೋ? ಯಾರಿಗೂ ಗೊತ್ತಿಲ್ಲೆ. ಅದೆಲ್ಲ ನಮ್ ನಮ್ಮ ಮನಸ್ಥಿತಿ, ನಂಬಿಕೆ ಇದ್ದ ಹಾಂಗೆ ಅಲ್ದಾ?”.

“………………”

ಈ ಸಂಸ್ಕಾರ, ಉತ್ತರಕ್ರಿಯೆ, ಶ್ರಾದ್ಧ ಇವೆಲ್ಲ ಹಾಂಗೆ. ಈಗ ಬೇರೆ ಬೇರೆ ಜಾತಿಯಲ್ ಹೀಂಗೆ ಮಾಡ್ತ್ರಾ?

“ಈಗ ನಾನೇ ನಿಮ್ ಮಗಳು ಆಗಿದ್ದೆ ಅಂತ ಇಟ್ಕಳಿ. ಆಗ ಏನ್ ಮಾಡ್ತಿದ್ರಿ? ಯಾರ ಹತ್ರ ಪಿಂಡ ಹಾಕಿಸ್ತಿದ್ರಿ?

ಅಡಿಗರಿಗೆ ಮಾತು ತೋಚಲಿಲ್ಲ. ಮಂಚದ ಮೇಲೆ ಹಾಗೆಯೇ ಮಲಗಿದರು.  ಕಣ್ಣು ತೆರೆಯಲಿಲ್ಲ.

“ಅಮ್ಮ ಹೋದ ದುಃಖ ನನಗೂ ಇಲ್ಯಾ? ನಾನ್ ತೋರ್ಸ್ಕಂಬುದ್ ಇಲ್ಲೆ ಅಷ್ಟೆ. ಆದ್ರೆ ನಂಗೆ ಅದ್ರಲ್ಲೆಲ್ಲ ಅಷ್ಟು ನಂಬಿಕೆ ಇಲ್ಲೆ. ಅಮ್ಮ ಹೇಗೂ ಹೋದ್ಲು. ಇನ್ನು ಅವಳ ನೆನಪು ಮಾತ್ರಾ. ನಿಮಗೆ ನಂಬಿಕೆ ಇದ್ರೆ ನೀವು ಮಾಡಿ” ಎಂದು ಹೇಳಬೇಕಾದ್ದನ್ನು ಹೇಳಿ ಮುಗಿಸಿದಂತೆ ನಿಟ್ಟುಸಿರು ಬಿಟ್ಟು ಕುಳಿತಲ್ಲಿಂದ ಎದ್ದು ಹೊರಟ.

ಅಡಿಗರು ಒಮ್ಮೆಲೇ ಎದ್ದು ನಿಂತು ಕೈಯನ್ನು ಮುಂದಕ್ಕೆ ಚಾಚಿ ಮಗನಿಗೆ ಆದೇಶವೆಂಬಂತೆ,

“ ಎದ್ರು ಮಾತಾಡ್ ಬ್ಯಾಡಾ”

ಎನ್ನುತ್ತಾ, ಕೂಗಿ ಹೇಳಿ, ಮತ್ತೊಂದು ಕೈಯಲ್ಲಿ ಎದೆಯನ್ನು ಹಿಡಿದುಕೊಂಡು, ನೋವಿನಿಂದ,
“ಲಕ್ಷ್ಮೀ ನರಸಿಂಹಾ”

ಎಂದು ಹೇಳುತ್ತಾ, ಮುಂದಕ್ಕೆ ಕುಸಿದು ಜಗಲಿಗೆ ಬಿದ್ದುಬಿಟ್ಟರು.

“ಅಯ್ಯೋ, ಅಪ್ಪಯ್ಯಾ, ಎಂತಾ ಆಯ್ತು? ಎಂತಾ ಆಯ್ತು?. ಕಣ್ ಬಿಡಿ. ಅಪ್ಪಯ್ಯಾ, ತಪ್ಪಾಯ್ತು ದಮ್ಮಯ್ಯ, ಇನ್ನು ಹಾಂಗ್ ಹೇಳುದಿಲ್ಲೆ. ನೀವು ಹೇಳಿದಾಂಗೇ ಕೇಂತೆ. ಎದ್ರು ಮಾತಾಡೂದಿಲ್ಲ”

ಎನ್ನುತ್ತಾ ಓಡಿಬಂದು ತಂದೆಯನ್ನು ಅಪ್ಪಿ ಹಿಡಿದುಕೊಂಡ.

*ಅಪ್ಪಯ್ಯಾ, ಮಾತಾಡಿ ಮಾತಾಡಿ”

ಎಂದು ಅಡಿಗರ ಮೈಯನ್ನು ಎರಡೂ ಕೈಯಿಂದ ಹಿಡಿದು ಅಲುಗಾಡಿಸಿದ.

ಅಡಿಗರ ಮುಖ ಪ್ರಶಾಂತವಾಗಿತ್ತು.

****************

*ಮುಗಿಯಿತು*

*ನಿಮ್ಮ ಪ್ರತಿಕ್ರಿಯೆ ಬರಲಿ*.
*ಇದು ನಿಮ್ಮದೇ ಕತೆ. ಇನ್ನೂ ಚಂದ ಮಾಡಿ ಬರೆಯಬಹುದಿತ್ತಾ? ಹೇಗೆ? ಯಾವ ಭಾಗದಲ್ಲಿ?*
*ಮುಂದಿನ ಕತೆ ಶೀಘ್ರದಲ್ಲಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ