ಶುಕ್ರವಾರ, ಆಗಸ್ಟ್ 24, 2018

ದಿನೇಶ ಉಪ್ಪೂರ
ಕಥನದೊಳಗೆ– 2
ಸೇಡು
ಪುಟ 1
ನಾನು  ಭಂಡಾರ್ಕಾರ್ಸ್ ಕಾಲೇಜಿಗೆ ಹೋಗುವಾಗ, ನಾಡ ಗುಡ್ಡೆಯಂಗಡಿಯ ಜಯಪ್ರಕಾಶ ಶೆಟ್ಟಿ ಯಾನೆ ಪಕ್ಕ ಎಂಬವನ ಹೆಸರು ಆಗಾಗ ಕೇಳಿಬರುತ್ತಿದ್ದು ಅವನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ. ಒಂದು ತರದ ರೌಡಿ. ಅಂಗಿಗೆ ಗುಂಡಿ ಇದ್ದರೂ ಹಾಕದೇ ಕರಡದಂತಿದ್ದ ಎದೆಯ ಕಪ್ಪು ಕೂದಲನ್ನು ತೋರಿಸಿಕೊಂಡೇ ತಿರುಗುತ್ತಿದ್ದ. ಸದಾ ಹಿಂದೆ ಮುಂದೆ ನಾಲ್ಕಾರು ಜೊತೆಗಾರ ಪುಂಡು ಮಕ್ಕಳು.
ಭಂಡಾರ್ಕಾರ್ಸ್ ಕಾಲೇಜು ಅಂದರೆ ಆಗಿನ ಕಾಲದಲ್ಲಿ ರೌಡಿಗಳ ಕಾಲೇಜು ಅಂತಲೇ ಹೆಸರು ಪಡೆದಿತ್ತು. ಯಾವಾಗಲೂ ಗಲಾಟೆ, ಪೆಟ್ಟು ಆಗುವ ಕಾಲೇಜು ಅದು. ಆದ್ದರಿಂದ ಕೆಲವರು ತಮ್ಮ ಮಕ್ಕಳನ್ನು ಆ ಕಾಲೇಜಿಗೆ ಸೇರಿಸಲೂ ಹಿಂದೆ ಮುಂದೆ ನೋಡುತ್ತಿದ್ದರು.
ಆದರೆ ನಾವು ಕಾಲೇಜಿಗೆ ಹೋಗುವಾಗ ಅವನು ಇರಲಿಲ್ಲ. ಆದರೆ ಅವನ ಹೆಸರು, ಅವನು ಮಾಡಿದ ಕಿತಾಪತಿ ಮತ್ತು ಅವನು ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದುದು ಆಗಾಗ ಚರ್ಚಿತವಾಗುತ್ತಿದ್ದ ವಿಷಯವಾಗಿತ್ತು.
ಆವಾಗಿನ ಶಾಸ್ತ್ರಿ ಸರ್ಕಲ್ ನ ಹಿಂಭಾಗ ಇದ್ದ ಬಂಟ್ಸ್ ಹಾಸ್ಟೆಲ್ ಎಂಬ ಬಹುಮಹಡಿ ಕಟ್ಟಡದಲ್ಲಿ ಆಗುತ್ತಿದ್ದ ಗಲಾಟೆ. ಕಾಲೇಜ್ ಕ್ಯಾಂಪಸ್ ಒಳಗಡೆ, ಸ್ಟುಡೆಂಟ್ಸ್ ಇಲೆಕ್ಷನ್ ಸಮಯದಲ್ಲಿ ಮಾಡುತ್ತಿದ್ದ ಗುಂಪುಗಾರಿಕೆ. ನಾವು ಕಾಲೇಜಿಗೆ ಹೋಗುವಾಗಲೂ ಎಲ್ಲರ ಬಾಯಿಯಲ್ಲಿ ಕೇಳಿ ಬರುತ್ತಿತ್ತು. ಅವನು ತನ್ನ ಅಂಗಿಯ ಒಳಗೆ ಯಾವಾಗಲೂ ಉದ್ದದ ತಲವಾರ್ ಮತ್ತು ಸೊಂಟದಲ್ಲಿ ಒಂದು ಸೈಕಲ್ ಚೈನ್ ಇಟ್ಟುಕೊಂಡೇ ಓಡಾಡುತ್ತಿದ್ದನಂತೆ.
ಒಂದು ದಿನ ತಡರಾತ್ರಿ ತನ್ನ ಗುಂಪಿನ ಜೊತೆಗೆ ಯಾವುದೋ ಬಾರಿನಲ್ಲಿ ತಿಂದು, ಕುಡಿದು ಉಂಡು ಬೈಕಿನಲ್ಲಿ ಬರುವಾಗ, ಮತ್ತೊಂದು ಗುಂಪಿನವರು ರಸ್ತೆಯ ಪಕ್ಕದಲ್ಲಿ ಅಡಗಿ ಕುಳಿತು ಕಾಯುತ್ತಿದ್ದು, ಪಕ್ಕ ಯಾನೆ ಜಯಪ್ರಕಾಶ ಬಂದ ಕೂಡಲೇ ಕತ್ತಲೆಯಲ್ಲಿ ಸೈಕಲ್ ಚೈನನ್ನು ಬೀಸಿದರಂತೆ.
ಅದರ ಅರಿವಿಲ್ಲದ ಅವನು ಏನಾಗುತ್ತಿದೆ ಎಂದು ಗೊತ್ತಾಗುವುದರ ಒಳಗೆ ಬೈಕಿನೊಂದಿಗೆ ರಸ್ತೆಗೆ ಬಿದ್ದ. ಉಳಿದವರು ದಿಕ್ಕಾಪಾಲಾಗಿ ಓಡಿಹೋದರು. ನಿರ್ಜನ ರಸ್ತೆಯಲ್ಲಿ ನರಳುತ್ತಾ ಬಿದ್ದಿದ್ದ ಅವನನ್ನು, ಕೊನೆಗೆ ಎಷ್ಟೋ ಹೊತ್ತಿನ ಮೇಲೆ ನೋಡಿ, ಇವನ ನರಳಾಟವನ್ನು ಕೇಳಿ, ಯಾರೋ ಕಾರಿನಲ್ಲಿ ಹೋಗುವವರು, ಇವನನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು.
ಅಂದು ಬಿದ್ದು ತುಂಬಾ ಪೆಟ್ಟು ಮಾಡಿಕೊಂಡಿದ್ದ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ಮತ್ತೆ ಒಂದೆರಡು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣವಾಗಿ ಬಂದ ನಂತರವೂ ಮತ್ತೆ ಬಂಡಾಟ ಶುರುಮಾಡಿದ. ಅವನ ಮೇಲೆ ನಾಲ್ಕಾರು ಪೋಲೀಸ್ ಕೇಸೂ ಆಗಿತ್ತಂತೆ. ಅಂತೂ ನಾನು ಕಾಲೇಜು ಸೇರುವ ಮೊದಲೇ ಅವನ ಕಾಲೇಜೂ ಮುಗಿದಿತ್ತು.
ಅಂತಹ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ನನಗೆ ಮತ್ತೆ ಕಾಣ ಸಿಕ್ಕಿದ್ದು ಅವನು ನಮ್ಮ ಹಾಲಾಡಿ ಸಂತೆ ಮಾರ್ಕೆಟ್ ನ ದಕ್ಷಿಣ ದಿಕ್ಕಿಗೆ ಇರುವ ದೊಡ್ಡಮನೆ ಕೊಯ್ಕಾಡಿ ಶೇಕು ಶೆಟ್ರ ಮಗಳು ಮಿಣುಕು ಶೆಡ್ತಿಯನ್ನು ಮದುವೆಯಾಗಿ ನಮ್ಮ ಊರಿಗೆ ಬಂದಾಗ. ನಮ್ಮಲ್ಲಿ ಶೆಟ್ಟರ ಜಾತಿಯಲ್ಲಿ ಅಳಿಯ ಸಂತಾನದ ಪದ್ದತಿ ಇರುವುದರಿಂದ, ಅದರ ನಿಯಮದಂತೆ ಮದುವೆಯಾದ ಮೇಲೆ ಪಕ್ಕ, ತನ್ನ  ಹೆಂಡತಿಯ ಮನೆಯಲ್ಲಿ ಬಂದು ಇರತೊಡಗಿದ್ದ.
ನಾನು ನಮ್ಮ ಮನೆಯಿಂದ ಹಾಲಾಡಿಗೆ ಬರುವಾಗ ಆ ಕೊಯ್ಕಾಡಿ ಶೇಕು ಶೆಟ್ಟರ ಮನೆಯ ಮುಂದಿನ ಅಂಗಳದ ಬದಿಯಲ್ಲಿ ಹಾದು ಹೋಗಬೇಕಾಗಿದ್ದರಿಂದ ನಾನು ಕಾಲೇಜಿಗೆ ಹೋಗುವಾಗ ಆಗಾಗ ಅವನು ಎದುರು ಸಿಗುತ್ತಿದ್ದ.

**********"

ನಾನೂ ಅದೇ ಕಾಲೇಜಿಗೆ ಹೋಗುವುದನ್ನು ತಿಳಿದುಕೊಂಡ ಅವನು, ಕೆಲವೊಮ್ಮೆ ದಾರಿಯಲ್ಲಿ ಎದುರು ಸಿಕ್ಕಿದಾಗ ನನ್ನನ್ನು ಅಡ್ದಗಟ್ಟಿ ನಿಲ್ಲಿಸಿ ಮಾತಾಡಿಸುತ್ತಿದ್ದ. ಕಾಲೇಜಿನಲ್ಲಿ ಅವನು ಮಾಡಿದ ಕಿತಾಪತಿಯನ್ನು ಸಾಹಸಗಾಥೆಯಂತೆ ಎಳೆಎಳೆಯಾಗಿ ಬಣ್ಣಿಸುತ್ತಿದ್ದ, ನಾನು ಅವನ ದಪ್ಪವಾದ ಮೀಸೆ, ಕೆಂಪು ಕಣ್ಣು ಹಾಗೂ ಗಡಸು ಸ್ವರಕ್ಕೆ  ಸ್ವಲ್ಪ ಹೆದರಿಕೊಳ್ಳುತ್ತಿದ್ದು, ಅವನು ಹೇಳುತ್ತಿದ್ದುದನ್ನು ಸಹನೆಯಿಂದ ಕೇಳಿಕೊಳ್ಳುತ್ತಿದ್ದೆ.
ಹುಯ್ಯಾರು ಹಿರಣ್ಣಯ್ಯ ಶೆಟ್ರು, ಸೌಡ ಆನಂದ ಶೆಟ್ರು, ಆವರ್ಸೆ ಭೋಜ ಶೆಟ್ರು, ಚೋರಾಡಿ ಹಿರಿಯಣ್ಣ ಶೆಟ್ರು, ಕೊಳ್ಕೆಬೈಲು ಸಂಜು ಶೆಟ್ರು, ಹೀಗೆ ನಮ್ಮ ಊರಿನಲ್ಲಿ ಒಂದೊಂದು ಪ್ರಾಂತ್ಯಕ್ಕೆ ಒಬ್ಬೊಬ್ಬ ದೊಡ್ಡ ಬಂಟ್ಸ್ ಸಾಹುಕಾರರು. ಅವರಲ್ಲಿ ಈ ಕೊಯ್ಕಾಡಿ ಶೇಕು ಶೆಟ್ರೂ ಒಬ್ಬರು. ಹಾಲಾಡಿ ಹೊಳೆಯ ಸಣ್ಣ ಸೇತುವೆಯ ದಕ್ಷಿಣ ಭಾಗದ, ಹೊಳೆಯ ಬದಿಯಿಂದ ಹಿಡಿದು ಪಶ್ಚಿಮಕ್ಕೆ ಕಣ್ಣುಹಾಯಿಸುವಷ್ಟು ದೂರದವರೆಗೂ ಶೇಕು ಶೆಟ್ಟರದೇ ಗದ್ದೆಗಳು ತೋಟಗಳು.
ಆ ಬಯಲಿನ ದಕ್ಷಿಣ ಭಾಗದ ಎತ್ತರದ ಗುಡ್ಡೆಯಲ್ಲಿ ದೊಡ್ಡದಾಗಿ ಕಾಣುವ ಉಪ್ಪರಿಗೆ ಮನೆಯೇ ಶೆಟ್ಟರದ್ದು. ಮನೆಯ ಮುಂದೆ ದೊಡ್ಡ ಹೆಬ್ಬಾಗಿಲು, ಅದರ ಮುಂದೆ ದೊಡ್ಡ ಜಗಲಿ.  ಅವರಲ್ಲಿ ಇರುವ ಅಷ್ಟೂ ಗದ್ದೆಗಳನ್ನು ಹಾಡಿ ಗುಡ್ಡೆಗಳನ್ನು ವಿಂಗಡಿಸಿ ವಿಂಗಡಿಸಿ ಹಲವಾರು ಒಕ್ಕಲುಗಳಿಗೆ ಗೇಣಿಗೆ ಸಾಗುವಳಿ ಮಾಡಲು ಕೊಟ್ಟಿದ್ದರಿಂದ, ಅವರ ಮೇಲೆ ಅಧಿಕಾರ ಚಲಾಯಿಸಿಕೊಂಡು ಶೆಟ್ಟರು  ಬಹಳ ಕಾಲದಿಂದ ಮೆರೆಯುತ್ತಿದ್ದರು. ಕಣ್ಣಿಗೆ ಕಾಣುವಷ್ಟು ದೂರ ಹಸಿರೋ ಹಸಿರು. ಒಕ್ಕಲುಗಳೂ ಶೆಟ್ಟರನ್ನು ಭಯ ಭಕ್ತಿ ಗೌರವದಿಂದ ಕಾಣುತ್ತಿದ್ದರು.
ಶೆಟ್ರು ಜಗುಲಿಯಲ್ಲಿ ಕುಳಿತು ಒಮ್ಮೊಮ್ಮೆ ಎಲ್ಲಾ ಒಕ್ಕಲುಗಳನ್ನು ಕರೆಸಿ ಪಂಚಾಯಿತಿಕೆ ಮಾಡುವುದಿತ್ತು. ಕುಶಲೋಪರಿಯ ಸಭೆ ಮಾಡುವುದಿತ್ತು. ಊಟ ಹಾಕಿಸಿ ಗಮ್ಮತ್ತು ಮಾಡುವುದಿತ್ತು. ಕೋಳಿಪಡೆ ಮಾಡಿಸಿ ಮಾಂಸದ ಊಟ ಹಾಕಿಸಿ ಗೌಜು ಮಾಡಿಸುವುದಿತ್ತು.
ಹೆಬ್ಬಾಗಿಲಿನ ಮುಂದೆ ಆರಾಮ ಕುರ್ಚಿಯಲ್ಲಿ ಕುಳಿತು ಶೆಟ್ಟರು ಹಣೆಯ ಮೇಲೆ ಅಡ್ಡಲಾಗಿ ಕೈ ಇಟ್ಟು ಕಿರುಗಣ್ಣು ಮಾಡಿ ತಮ್ಮ ಬಯಲು ಗದ್ದೆಗಳನ್ನು  ನೋಡುವುದನ್ನು ನೋಡುವುದೇ ಒಂದು ಚಂದ. ಎಲ್ಲಿ ನೋಡಿದರೂ ಹಸಿರು ಭತ್ತದ ಬೆಳೆಗಳು. ತೆಂಗು ಅಡಿಕೆತೋಟಗಳು. ಮನೆಯ ಮುಂದೆಯೇ ದೊಡ್ಡ ಅಂಗಳ. ಪಕ್ಕದಲ್ಲೇ, ದೊಡ್ಡ ತರಕಾರಿ ಹಿತ್ತಲು.
ಆ ಶೆಟ್ಟರ ಜಾಪು ಏನು? ದೌಲತ್ತು ಏನು? ಉಟ್ಟ ಪಂಚೆಯ ಒಂದು ಸೆರಗನ್ನು ಕೈಯಲ್ಲಿ ಹಿಡಿದು, ನಿಧಾನವಾಗಿ ಸುತ್ತಲೂ ನೋಡುತ್ತಾ ರಾಜ ಗಾಂಭೀರ್ಯದಿಂದ ನಡೆದು ಎದುರು ಬರುವಾಗ, ಸರಿಯಾದ ಸರಿ ದೃಷ್ಟಿ ಇದ್ದರೂ ಕಿರುಗಣ್ಣಿಂದ ನೋಡಿ,
“ಹೋ ಮಾಣಿ? ಎಲ್ಲಿಗ್ ಹ್ವಾತ್ ಸವಾರಿ? ಅಪ್ಪಯ್ಯ ಬಂದೀರಾ?”
ಎಂದು ನಕ್ಕು ಹೇಳಿ, ನಾನು ಅವರ ಮಾತನ್ನು ಕೇಳಿಸಿಕೊಂಡು ಪ್ರತಿಯಾಗಿ ನಕ್ಕು, ಉತ್ತರಕ್ಕೆ ಸಿದ್ಧನಾಗುವುದರ ಒಳಗೆ,  ಉತ್ತರಕ್ಕೂ ಕಾಯದೇ ಮುಂದೆ ಹೋಗುವ ಗತ್ತು, ಯಾರನ್ನೂ ಮರುಳು ಮಾಡೀತು.
ಆಗಿನ ಕಾಲವೂ ಹಾಗೆಯೇ ಇತ್ತಲ್ಲವೇ?. ನಮಗೆ ಇರುವ ಆರು ಎಕರೆ ಭೂಮಿಯಲ್ಲಿ, ನಾವೂ ಸುಮಾರು ಐದು ಎಕರೆಯಷ್ಟನ್ನು ಒಕ್ಕಲುಗಳಿಗೇ ಗೇಣಿಗೆ ಕೊಟ್ಟಿದ್ದೆವು. ನನ್ನ ಅಣ್ಣಂದಿರು ಓದಲಿಕ್ಕೆ, ಕೆಲಸಕ್ಕೆ ಅಂತ ಬೇರೆ ಬೇರೆ ಊರುಗಳಿಗೆ ಹೋದರು. ಮನೆಯಲ್ಲಿ ಬೇಸಾಯ ಮಾಡುವವರು ಗಟ್ಟಿ ಆಳು ಅಂತ ಯಾರೂ ಇರಲಿಲ್ಲ. ಎಲ್ಲ ಅಮ್ಮನದೇ ಯಜಮಾನಿಕೆ. ಯಜಮಾನಿಕೆ ಅಂದರೆ ಏನು ಮಣ್ಣು?.
ಗದ್ದೆಯ ಕೆಲಸಗಳು, ಹಟ್ಟಿಗೆ ಸೊಪ್ಪು, ಗಂಟಿಗಳ ಆರೈಕೆ ಎಲ್ಲಾ ನೋಡುತ್ತಿದ್ದುದು, ಆ ನಮ್ಮ ಒಕ್ಕಲುಗಳೆ. ಅವರಿಗೆ ಗೇಣಿಗೆ ಕೊಟ್ಟ ಗದ್ದೆಯ ಹೂಟಿ ಕೊಯ್ಲುಗಳ ಜೊತೆಗೆ ನಮ್ಮದನ್ನೂ ಅವರೇ ಮಾಡಿಕೊಡುವುದು. ನಾವು ಬರೀ “ಅದು ಆಗಿಲ್ಲ.  ಇದು ಆಗಿಲ್ಲ” ಅಂತ ಆತಂಕ ತೋರಿಸುವುದು ಅಷ್ಟೆ. ಆಗ ಯಾರಾದರೂ ಒಕ್ಕಲು ಗಂಡಸರು ಬಂದು, “ನೀವು ತಲೆಬಿಸಿ ಮಾಡ್ಬೇಡಿಯಮ್ಮ ನಾವೆಲ್ಲ ಇಲ್ಯಾ? ಏನಾರು ಮಾಡ್ವ” ಎನ್ನುತ್ತಾರೆ. ಆಗ ಅಮ್ಮನಿಗೆ ಸಮಾಧಾನ.
ನಮ್ಮ ಎಲ್ಲಾ ಗದ್ದೆಗಳಿಗೆ ಯಾವ ಕಾಲಕ್ಕೆ ಏನು ಮಾಡಬೇಕು? ಯಾವ ಬೀಜ ಹಾಕಬೇಕು? ಯಾವಾಗ ಹೂಟಿ ಮಾಡಬೇಕು? ನೆಟ್ಟಿ ಮಾಡಬೇಕು? ಯಾವಾಗ ಕೊಯ್ಲು ಮಾಡಬೇಕು? ಯಾವ ಯಾವ ಧಾನ್ಯ ಹಾಕಬೇಕು? ಎಂದು ಎಲ್ಲವನ್ನೂ ನಿರ್ಧರಿಸಿ ಆಯಾಯ ಕಾಲಕ್ಕೆ ಕುಂದಿಲ್ಲದೇ ಮಾಡಿಕೊಡುತ್ತಿದ್ದವರು ಅವರೆ.
ಅದೇಕೋ ಒಮ್ಮೆ ರಾತ್ರಿ ತಿಂಗಳ ಬೆಳಕಲ್ಲೂ ಗದ್ದೆಯ ಹೂಟಿ ಮಾಡುತ್ತಿದ್ದರಪ. ಕೇಳಿದರೆ ಹಗಲು ಝಳಝಳ ಬಿಸಿಲು. ಎತ್ತುಗಳಿಗೆ ಕಷ್ಟವಾಗುತ್ತದೆ. ಬೇಗ ದಣಿವಾಗುತ್ತದೆ. ರಾತ್ರಿ ತಂಪಿರುತ್ತದೆಯಲ್ಲ ಅದಕ್ಕೆ ಅನ್ನುತ್ತಿದ್ದರು. ಆದರೆ ಅಮ್ಮ ಹೇಳುತ್ತಿದ್ದುದೇ ಬೇರೆ. “ನನಗೆ ಗೊತ್ತು. ಅವರದ್ದು ಗದ್ದೆ ಕೆಲಸ ಮಾಡುವಾಗ, ನಮ್ಮದು ತಡವಾಗಿ ಹೋಗಿ, ನಮಗೆ ಬೇಸರ ವಾಗಬಾರದು ಅಂತ ಹಾಗೆ ಮಾಡುತ್ತಿದ್ದರು ಅನ್ನುತ್ತಿದ್ದಳು.
ರಾತ್ರಿ ಎಷ್ಟು ಎಷ್ಟು ಹೊತ್ತಿಗೋ ಬಂದು, ನಮ್ಮ ಮನೆಯ ಗಂಟಿ ಕರುಗಳಿಗೆ, ಹುಲ್ಲು, ಅಕ್ಕಚ್ಚು, ಬೈರುಗಳನ್ನು ಕೊಟ್ಟಿಗೆ ಬಾಗಿಲಿನ ಮೂಲಕ ಒಳಗೆ ಬಂದು ಹಾಕುತ್ತಿದ್ದರು. ನಮ್ಮ ಮನೆ ಅವರದೇ ಮನೆ ಎಂಬಷ್ಟು ಅಧಿಕಾರ, ಆ ಒಕ್ಕಲುಗಳಿಗೆ. ಅಧಿಕಾರವಾ ಅದು ? ಅಲ್ಲ ಅಭಿಮಾನ. ಗೇಣಿಗೆ ಅಂತ ನಾವು ಗದ್ದೆಗಳನ್ನು ಅವರಿಗೆ ಕೊಟ್ಟಿದ್ದೆವಲ್ಲ. ಜೀವನಕ್ಕೊಂದು ಹೊತ್ತು ತುತ್ತಿಗೆ, ಊಟಕ್ಕೆ ದಾರಿ ಮಾಡಿಕೊಟ್ಟಿದ್ದೆವಲ್ಲ. ಆ ಋಣಕ್ಕೆ.
ಯಾರ ಮನೆಯಲ್ಲಾದರೂ ಹೆರಿಗೆಯೋ, ಮರಣವೋ ಆದರೆ,  ಹುಷಾರಿಲ್ಲದಿದ್ದರೆ ಅದು ಅವರೊಬ್ಬರ ಸಂತೋಷ ಸಂಕಟ ಮಾತ್ರ ಆಗುತ್ತಿರಲಿಲ್ಲ. ಅದು ಇಡೀ ನಮ್ಮ ಊರಿನದ್ದೇ ಭಾವ ಆಗುತ್ತಿತ್ತು. ಎದುರು ಸಿಕ್ಕಿದರೆ ಮಾತಿಗೆ ಬೇರೆ ವಿಷಯ ಬೇಕಾಗುತ್ತಿರಲಿಲ್ಲ.
ಆದರೆ ಒಕ್ಕಲು ಮಸೂದೆ ಎಂಬ ರಾಕ್ಷಸ ಕಾನೂನು ಬಂದ ನಂತರ ನಮ್ಮೂರಿನ ಪರಿಸ್ಥಿತಿಯೇ ಬದಲಾಯಿತು.

""""""*****



ಒಕ್ಕಲು ಮಸೂದೆ ಕಾಯಿದೆ ಬರುತ್ತಿದ್ದ ಹಾಗೆ ಒಡೆಯ ಒಕ್ಕಲುಗಳ ನಡುವಿನ ಮನೋಭಾವವೇ ಬದಲಾಗಿ ಹೋಯಿತಲ್ಲ. ಬರೀ ನಿಂತದ್ದರಿಂದ ಆ ನೆಲ ನಮ್ಮದು ಎಂಬ ಕಾನೂನು ಅದು. ಮನುಷ್ಯ ಮನುಷ್ಯರ ಮಧ್ಯದ ವಿಶ್ವಾಸ ನಂಬಿಕೆಗಳಿಗೆ ಕೊಡಲಿಯಿಟ್ಟ ಕಾನೂನು. ಅಂತಹ ಒಂದು ಕಾನೂನು ಬಂದು ಒಡೆಯರು ಒಕ್ಕಲುಗಳು ಅಂತ ಏನು, ಒಬ್ಬರು ಇನ್ನೊಬ್ಬರನ್ನು ನಂಬಿಕೆಯಿಂದ ಕಾಣದ ಹಾಗಾಯಿತು.
ಬೇರೆಯವರದು ನಮ್ಮದು ಎಂದು ಸಾಧಿಸುವುದರ ಜೊತೆಗೆ ನಮ್ಮದನ್ನು ಇನ್ನೊಬ್ಬರು ಅಪಹರಿಸದ ಹಾಗೆ ನೋಡುವುದೂ ಜನರ ಕೆಲಸವಾಯಿತು. ಎದುರಿಗೆ ಬಂದು ಎದೆಕೊಟ್ಟು ಅಂತಃಕರಣಪೂರ್ವಕವಾಗಿ ಮಾತಾಡುತ್ತಿದ್ದವರೂ “ಹೌದು ಹಾಂಗೆ ಹೇಳ್ತ್ರಪ, ಮತ್ತೆಂತ ಮಾಡೂದ್, ಇವರು ಹೀಂಗ್ ಹೇಳಿದ್ರಲೆ ಅಂತ ನಾನ್ ಮಾಡಿದಿ” ಎಂಬ ಅತಂತ್ರಧೋರಣೆಯ ಮಾತುಗಳು ಆತ್ಮೀಯರೆನ್ನಿಸಿಕೊಂಡವರಿಂದಲೇ ಕೇಳಬೇಕಾಯಿತು.
ಶೆಟ್ಟರು ಅನೂಚಾನವಾಗಿ ನನ್ನದು ಎಂದು ತಿಳಿದು ಬೀಗುತ್ತಾ, ಮೆರೆಯುತ್ತಾ ಇದ್ದ ಭೂಮಿಗಳು, ಗದ್ದೆಗಳು, ತೋಟ ಹಾಡಿಗಳು, ರಾತ್ರಿ ಬೆಳೆಗಾಗುವುದರೊಳಗೆ ಅವರದಲ್ಲ ಅದನ್ನು ಅನುಭವಿಸುತ್ತಿರುವವರದು ಎಂದಾಯಿತು. ಒಕ್ಕಲುಗಳು ಹೇಳದೇ ಕೇಳದೇ ಇವರ ಭೂಮಿಗಳಿಗೆ ತಮ್ಮದು ಎಂದು ಡಿಕ್ಲರೇಶನ್ ಕೊಟ್ಟಿದ್ದರಿಂದ, ಶೆಟ್ರ ಮನಸ್ಸು ಮಂಕಾಯಿತು. ಇದು ಹೀಗೂ ಆಗಲು ಸಾಧ್ಯವೇ ಎಂದು ದಿಗಿಲುಗೊಂಡ ಅವರ ದರ್ಬಾರು ಕಳೆಗುಂದಿತು.
ಒಕ್ಕಲುಗಳು ಕೂಲಿಗಳು ನಂತರ ಶೆಟ್ಟರ ಎದುರು ಬಂದು ಮುಖ ತೋರಿಸದೇ, ಎದುರಿಗೆ ಬಾರದೇ ತಲೆ ತಪ್ಪಿಸಿಕೊಂಡು ತಿರುಗಾಡಲು ಶುರುಮಾಡಿದರು. ಶೆಟ್ಟರೇ ಕರೆ ಕಳಿಸಿದರೂ ಏನೋ ಒಂದು ಸುಳ್ಳು ನೆವಹೇಳಿ ತಪ್ಪಿಸಿಕೊಳ್ಳಲು ದಾರಿ ಹುಡುಕಿಕೊಳ್ಳುತ್ತಿದ್ದರು.
ಶೆಟ್ಟರ ಸಿಟ್ಟು ಶೆಡವು ಹೆಚ್ಚಾಯಿತು, ಕೊನೆಗೆ ಹತಾಶರಾಗಿ ಶೆಟ್ಟರೇ ಕೆಲವು ಒಕ್ಕಲುಗಳನ್ನು ಕರೆದು, “ತಾವಾಗಿಯೇ ಸ್ವಲ್ಪ ಸ್ವಲ್ಪ ಗದ್ದೆಗಳನ್ನು ಬಿಟ್ಟು ಕೊಡುತ್ತೇನೆ. ರಾಜಿಗೆ ಬನ್ನಿ” ಎಂದರೂ ಯಾರೂ ಬರಲಿಲ್ಲ.
ಶೆಟ್ಟರು ವೃಥಾ ಎಲ್ಲರ ಮೇಲೂ ಹರಿಹಾಯಲು ಶುರು ಮಾಡಿದ್ದರಿಂದ ನಾಯಕರಾಗಿದ್ದ ಶೆಟ್ಟರು ಕಳೆಗುಂದಿ, ಬಸವಳಿದು, ದುಷ್ಷ, ಅಮಾನವೀಯ ಕಾನೂನಿನ ಮುಂದೆ ಖಳನಾಯಕರಾಗಬೇಕಾಯಿತು. ಕಡೆಗೂ ಬದುಕುವುದಕ್ಕೊಂದಷ್ಟು ತನ್ನದೇ ಭೂಮಿಯನ್ನು ಉಳಿಸಿಕೊಳ್ಳುವುದರಲ್ಲಿ ಶೆಟ್ಟರು ಯಶಸ್ವಿಯಾದರೂ, ಹೈರಾಣಾಗಿಬಿಟ್ಟರು.
ಅಸಹಾಯಕ ಶೂರರಾಗಿ ಬಹುತೇಕ ಏಕಾಂಗಿಯಾಗಿ ಬಿಟ್ಟಿದ್ದರೂ, ಅವರ ದರ್ಪ, ದೌಲತ್ತು ಮೊದಲಿನ ಹಾಗೆಯೇ ಇತ್ತು. ಆಷ್ಟೇ ಅಲ್ಲದೆ, ಎದುರಿಗೆ ಬಂದು ವಿನಯ ತೋರಿಸುತ್ತಿದ್ದ ಕೆಲವು ಸ್ನೇಹಿತರೂ, ಇವರಿಂದ ಲಾಭಪಡೆದು ಚೇಲಾಗಳಂತೆ ಹಿಂದೆ ಮುಂದೆ ಸುತ್ತಾಡುತ್ತಿದ್ದ ಬಂಧುಗಳು, ಒಕ್ಕಲುಗಳು ಹಿಂದಿನಿಂದ ಇವರನ್ನು ತಮಾಷೆ ಮಾಡುವ ಹಾಗಾಯಿತು.
ಅಂತಹ ಕಾಲದಲ್ಲಿ ಅವರ ಒಬ್ಬಳೇ ಮಗಳು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದವಳು, ಓದಿನಲ್ಲಿ ಹಿಂದೆ ಬಿದ್ದು, ಎಸ್ ಎಸ್ ಎಲ್ ಸಿ.ಯಲ್ಲಿ ಡುಮ್ಕಿ ಹೊಡೆದು ಪಾಸ್ ಆಗದೇ ಇದ್ದುದರಿಂದ, ಇನ್ನೂ ಅವಮಾನವಾದಂತಾಗಿ ಶೆಟ್ಟರು, ಅವಳಿಗೆ ,
“ಇನ್ನು ನೀನು ಓದಿದ್ದು ಸಾಕು. ಒಂದು ಮದುವೆ ಮಾಡಿಸುವ”
ಎಂದು ಹೊರಟಿದ್ದೇ, ಮೇಲೆ ಹೇಳಿದ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಮನೆಯವರೊಂದಿಗೆ ಮಾತಾಡಿ ಸಂಬಂಧ ಕುದುರಿಸಿ, ಗಡದ್ದಾಗಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆತರುವುದರಲ್ಲಿ ಪ್ರಕರಣ ಅಂತ್ಯವಾಗಿತ್ತು.
ಆದರೆ ಆ ಅಳಿಯನೂ ಮಾವನಂತೆಯೇ ಸ್ವಲ್ಪ ದರ್ಪದವನೂ, ದರ್ಬಾರಿಯೂ ಆದ್ದರಿಂದ, ಅವರ ಮಧ್ಯ ಸರಿಬರದೇ ಇರಲು ಹೆಚ್ಚು ಕಾಲ ಬೇಕಾಗಲಿಲ್ಲ. ಮತ್ತೆ ಮತ್ತೆಯಂತೂ ಮಾತುಕತೆಯೇ ಇರಲಿಲ್ಲವಂತೆ. ಮನೆಯಲ್ಲಿ ಮಾವ ಇದ್ದರೆ, ಅಳಿಯ ಇಲ್ಲ. ಅಳಿಯ ಇದ್ದರೆ, ಮಾವ ಇಲ್ಲ ಎಂಬಂತಾಯಿತು.
ಇಬ್ಬರೂ ಮುಷುಂಡಿಗಳೆ.
ಆದರೆ ಗ್ರಹಚಾರಕ್ಕೆ, ಮದುವೆಯಾದ ಒಂದೆರಡು ವರ್ಷದಲ್ಲಿ  ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಗೆ ಬೆನ್ನಿನ ಮೂಳೆಯಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು.

*""""*""*****




ಬಹುಷ್ಯ ಕಾಲೇಜಿಗೆ ಹೋಗುವಾಗ ಸೈಕಲ್ ಚೈನಿನಿಂದ ಹೊಡೆಸಿಕೊಂಡಾಗ ಆದ ಬೆನ್ನು ಮೂಳೆಯ ನೋವು, ಕಗ್ಗಡಿಯಾಗಿ ಒಳಗಿಂದೊಳಗೇ ಹಾಗೆಯೇ ಉಳಿದು ಕೊಂಡು ಇದ್ದಿರಬೇಕು. ಒಮ್ಮೆ ಮಾಡಿದ ಔಷಧಿ ಪಥ್ಯಗಳಿಂದ ತಾತ್ಕಾಲಿಕವಾಗಿ ಅಡಗಿದ ನೋವು, ಮತ್ತೆ ಇಷ್ಟು ಕಾಲದ ನಂತರ ಹೆಡೆಯೆತ್ತಿ ಕಾಡತೊಡಗಿತು.
ಕಂಡವರು ಹೇಳಿದ ಮದ್ದನ್ನು ಮಾಡಿಸಿದ್ದಾಯಿತು. ಮಣಿಪಾಲದಲ್ಲಿ ತೋರಿಸಿಯಾಯಿತು. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೀರೂ ಕುಡಿದಾಯಿತು. ಪಕ್ಕ ಯಾನೆ ಜಯ ಪ್ರಕಾಶ ಶೆಟ್ಟಿ, ಸೋತು ಹಣ್ಣಾಗಿ ಬಿಟ್ಟ.
ಆಸ್ಪತ್ರೆಗೆ ಹೋಗಿ ಗುಣ ಅಂತ ಆಗಿ,  ಮನೆಗೆ ಬಂದ ಕೆಲವು ದಿನ, ನೋವು ಸ್ವಲ್ಪ ಕಡಿಮೆಯಾದಂತೆ ತೋರಿದರೂ, ಕಡೆಕಡೆಗೆ  ಏಳಲೂ ಆಗದೇ ಅವನು ಹಾಸಿಗೆ ಹಿಡಿದ. ಓಡಾಡಲಿಕ್ಕೇ ಆಗದ ಪರಿಸ್ಥಿತಿ. ಬೆನ್ನು ನೋವಿನಿಂದ ಹಾಸಿಗೆಯಲ್ಲಿಯೇ ಇದ್ದು ನರಳತೊಡಗಿದ.
ಮಲಗಿದಲ್ಲೇ ಅಂತ ಆದ ಮೇಲೆ ಅವನ ಪರಿಸ್ಥಿತಿ ಮತ್ತೂ ಚಿಂತಾಜನಕವಾಯಿತು.  ಆಗಾಗ ಕೊಡಬೇಕಾದ ಇಂಜೆಕ್ಷನ್ ವಗೈರೆಗೆ ಒಬ್ಬ ಡಾಕ್ಟರರನ್ನು ಗೊತ್ತು ಮಾಡಬೇಕಾಯಿತು. ಇಂಜೆಕ್ಷನ್ ತೆಗೆದುಕೊಳ್ಳುವುದು ಕೇವಲ ನೋವು ನಿವಾರಣೆಗೇ ಆದರೂ, ಅದನ್ನು ತೆಗೆದುಕೊಳ್ಳದಿದ್ದರೆ ಪಕ್ಕಯಾನೆ ಜಯಪ್ರಕಾಶ ಶೆಟ್ಟಿಯ ಸೊಂಟದ ನೋವು ತೀವ್ರವಾಗಿ ಅವನ ಬೊಬ್ಬೆಗೆ, ಕಿರುಚಾಟಕ್ಕೆ ಎಣೆಯೇ ಇಲ್ಲವಾಗುತ್ತಿತ್ತು. ಮನೆಗೆ ಬಂದು ಇಂಜೆಕ್ಷನ್ ಆದರೂ ಕೊಡಲು ಒಬ್ಬ ಡಾಕ್ಟರ್ ಬೇಕಾಯಿತು.
ಒಬ್ಬರು ಸಿಕ್ಕಿದರು. ಪಕ್ಕ ಯಾನೆ ಜಯಪ್ರಾಕಾಶ ಶೆಟ್ಟಿಯ ಮಾವನ ಸ್ನೇಹಿತರೇ ಆದ, ಸದಾಶಿವ ಶೆಟ್ಟಿ ಎನ್ನುವವರು.
ಆಯಿತು ಅವರನ್ನು ಕಂಡು ಮಾತಾಡಿ ಗೊತ್ತು ಮಾಡಿದರು. ಅವರದ್ದು ಮೂಡುಹಾಲಾಡಿಯ ಬಸ್ ಸ್ಟಾಂಡ್ ಹತ್ತಿರದ ಉತ್ತರ ಬದಿಯ ಎತ್ತರದ ಜಾಗದಲ್ಲಿ ಸಾಲಾಗಿ ಇರುವ ಕಳಿನ್ ಸಾಹೇಬರು ಎಂಬವರ ಕಟ್ಟಡದಲ್ಲಿ ಇರುವ ಒಂದು ಬಾಡಿಗೆ ಶಾಪು.
ಪಕ್ಕದಲ್ಲೇ ಸರಕಾರಿ ಧರ್ಮಾಸ್ಪತ್ರೆಯೂ ಇದ್ದುದರಿಂದ, ಅವರಲ್ಲಿಗೆ ಗಿರಾಕಿಗಳು ಹೆಚ್ಚಿಗೆ ಬರುತ್ತಿರಲಿಲ್ಲ. ಅವರಿಗೆ ವಾರಕ್ಕೊಮ್ಮೆ ಕೊಯ್ಕಾಡಿಯ ಶೆಟ್ಟರ ಮನೆಗೆ ಬಂದು ಪಕ್ಕನಿಗೆ ಇಂಜೆಕ್ಷನ್ ಕೊಡುವುದೂ ಕಷ್ಟವಾಗದೇ ಇರುವುದರಿಂದ, ಅದರಿಂದ ಖಾಯಂ ಆದಾಯವೂ ಬರುತ್ತಿದ್ದುದರಿಂದ ಅವರು ಆ ಹೊಣೆಯನ್ನು ವಹಿಸಿಕೊಂಡರು.
ಕೊಯ್ಕಾಡಿ ಶೆಟ್ಟರ ಮನೆಯಲ್ಲಿ ಒಂದು ದೊಡ್ಡ ಆಲ್ಶೇಶಿಯನ್ ನಾಯಿ ಇತ್ತು. ಅದು ಯಾವಾಗಲೂ ಈ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಭಂಟ. ಅವನ ಹಾಸಿಗೆಯ ಬಳಿಯೇ ಕುಳಿತಿರುತ್ತಿತ್ತು.  ಅವನನ್ನು ಕಂಡರೆ ಆ ನಾಯಿಗೆ ಪಂಚಪ್ರಾಣ. ಅವನ ಊಟ ತಿಂಡಿಗಳಲ್ಲಿ ಅದಕ್ಕೊಂದು ಪಾಲು.
ಆದರೆ ಅದೇಕೋ ಗೊತ್ತಿಲ್ಲ. ಆ ನಾಯಿಗೆ ಈ ಸದಾಶಿವ ಡಾಕ್ಟರರನ್ನು ಕಂಡರೆ ಆಗುತ್ತಿರಲಿಲ್ಲವಂತೆ. ಸದಾಶಿವ ಡಾಕ್ಟರು ಬಂದರೆ ಸಾಕು, ಅದು ಅವರ ಮೇಲೆ ಎರಗಿ ಕಚ್ಚಲು ಹೋಗುತ್ತಿತ್ತು.
ಹಾಗಾಗಿ ಆ ಡಾಕ್ಟರರು ಬರುವ ದಿನ ಮೊದಲಾಗಿ ತಿಳಿದು, ಅವರು ಬರುವ ಸಮಯದಲ್ಲಿ ಅದನ್ನು ಸರಪಳಿಯಿಂದ ಕಟ್ಟಿ ಹಾಕುತ್ತಿದ್ದರು. ಆದರೂ ಅವರು ಬಂದು ಇಂಜೆಕ್ಷನ್ ಕೊಟ್ಟು, ಶೆಟ್ಟರ ಹೆಂಡತಿ, ಮಿಣುಕು ಶೆಡ್ತಿ ಕೊಡುವ ಕಾಫಿ ತಿಂಡಿಯನ್ನು ಸೇವಿಸಿ, ಅವಳು ಅವರ ಬ್ಯಾಗನ್ನು ಹೊತ್ತು, ಅವರ ಹಿಂದೆ ಹಿಂದೆಯೆ ಹೋಗಿ, ಮನೆಯ ಅಂಗಳದ ಮುಂದಿನ ಗದ್ದೆಗಳನ್ನು ಉತ್ತರಿಸಿ, ಆಚೆಗೆ ಹೋಗಿ ಅವರು ಅಲ್ಲಿ ಇರಿಸುತ್ತಿದ್ದ, ಬೈಕಿನವರೆಗೆ ಹೋಗಿ, ಡಾಕ್ಟರರನ್ನು ಕಳಿಸಿ ಬರುವವರೆಗೂ ಅದು ಗುರುಗುಟ್ಟುತ್ತಾ ಇರುತ್ತಿತ್ತು.
ಕೆಲವರು ಆ ಡಾಕ್ಟರಿಗೂ, ಮಿಣಕು ಶೆಡ್ತಿಗೂ ಏನೋ ಸಂಬಂಧ ಇದೆ, ಹಾಗಾಗಿ ಆ ನಾಯಿಗೆ ಡಾಕ್ಟರ್ ರನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದರು.
ಅಂತೂ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ಮಲಗಿದಲ್ಲೇ ಆಗಿ ಆಗಲೇ ವರ್ಷವಾಗುತ್ತಾ ಬಂದಿತ್ತು.

***********




ನಾನು ಕುಂದಾಪುರದ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಮನೆಗೆ ಬಂದೆ. ಆದರೆ ನಮ್ಮ ಮನೆ ಇರುವುದು ಹಾಲಾಡಿಯಿಂದ ದಕ್ಷಿಣ ದಿಕ್ಕಿನಲ್ಲಿ. ಸುಮಾರು ಐದು ಮೈಲಿ ದೂರದಲ್ಲಿ. ನಡೆದೇ ಹೋಗಬೇಕು. ರಸ್ತೆ ಸೌಕರ್ಯ ಇಲ್ಲ. ಹಲವಾರು ಗದ್ದೆ ಬಯಲು, ಹಾಡಿ ಗುಡ್ಡವನ್ನೂ, ತೋಡಿಗೆ ಹಾಕಿದ ಸಂಕವನ್ನು ದಾಟಿ, ಬೇಲಿಗಳನ್ನು ಹಾರಿ ದಾಟಿಕೊಂಡೇ ಹೋಗಬೇಕು. ನನಗೆ ಡಿಗ್ರಿಯಾದ ಮೇಲೆ ಮುಂದೆ ಓದುವ ಅನುಕೂಲವಿಲ್ಲದಿದ್ದುದರಿಂದ ನಾನು ಮನೆಯಲ್ಲಿ ಅಣ್ಣನೊಂದಿಗೆ ಅದೂ ಇದೂ ಕೆಲಸ ಮಾಡುತ್ತಾ, ಪ್ರತಿ ದಿನ ಸಂಜೆಯ ಹೊತ್ತಿಗೆ ಹಾಲಾಡಿಯವರೆಗೆ ನಡೆದು ಬಂದು ಗೋಳೇರ ಜೀನಸಿಅಂಗಡಿಯಲ್ಲಿ, ಎದುರಿನ ದೊಡ್ಡ ಚಾವಡಿಯಂತಹ ಜಾಗದ ಬೆಂಚಿನಲ್ಲಿ ಕುಳಿತು, ಅವರು ತರಿಸುವ ನಾಲ್ಕಾರು ದಿನಪತ್ರಿಕೆಗಳನ್ನು ಓದುತ್ತಿದ್ದೆ. ಪೇಪರಲ್ಲಿ ಬೇಕಾಗಿದ್ದಾರೆ ಎಂಬ ಕಾಲಂ ನ್ನು ತಪ್ಪದೇ ನೋಡಿ, ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕುತ್ತಿದ್ದೆ. ಮತ್ತು ಕತ್ತಲಾಗುವ ಮೊದಲು ಮನೆಯನ್ನು ಸೇರಿಕೊಳ್ಳುತ್ತಿದ್ದೆ.
ನಮ್ಮ ಮನೆಯಿಂದ ಹಾಲಾಡಿಗೆ ನಾವು ನಾಲ್ಕಾರು ಬೇರೆ ಬೇರೆ ದಾರಿಗಳಲ್ಲಿ ಹೋಗಬಹುದಾಗಿತ್ತು. ಅದರಲ್ಲಿ ಒಂದು ದಾರಿ, ಅಂದರೆ ನಾವು ಮನೆಯ ಮುಂದಿನ ಬಯಲನ್ನು ಒಂದು ಸಣ್ಣ ಹೊಳೆಯ ಸಂಕವನ್ನು ಏರಿ, ಗುಡ್ಡದಲ್ಲಿ ಸ್ವಲ್ಪ ದೂರ ಸಾಗಿ, ತಟ್ಟುವಟ್ಟು ಬಯಲಿಗೆ ಇಳಿದು ದಾಟಿ ಕುಚ್ಚಾಲಿನ ಹಾಡಿಯಲ್ಲಿ ನಡೆಯುತ್ತಾ ಬಂದು, ಒಂದು ಸಣ್ಣ ಗುಡ್ಡವನ್ನು ದಾಟಿದರೆ ಅದು ಇಳಿಯುವುದು ಕೊಯ್ಕಾಡಿಯ ಆ ಶೇಕು ಶೆಟ್ಟರ ಮನೆಯ ಹಿಂದಿನ ಹಟ್ಟಿಯ ಪಕ್ಕದಲ್ಲಿ.
ಅಲ್ಲಿಂದ ಹಾಗೆ ಕೆಳಗೆ ಇಳಿದು, ಮತ್ತೆ ಅವರ ಮನೆಯನ್ನು ಬಳಸಿಕೊಂಡು ಎದುರಿನ ಅಂಗಳದ ಪಕ್ಕದಲ್ಲಿ ನಡೆದು ಬರಬೇಕು. ಅಂಗಳದ ಮತ್ತೊಂದು ಬದಿಯಲ್ಲಿ ದೊಡ್ಡ ಕಣಿ, ಪ್ರಪಾತ. ಮಣ್ಣು ಜರಿದು ಹೋಗಬಾರದು ಅಂತ ಅಲ್ಲಿ ನಾಲ್ಕಾರು ಹಲಸು, ಮಾವಿನ ಮರಗಳನ್ನು ನೆಟ್ಟಿದ್ದರು. ಬಾಳೆಲೆ ಕಸಕಡ್ಡಿಗಳನ್ನು ಅಲ್ಲಿಯೇ ಎಸೆಯುತ್ತಿದ್ದರು. ಅಲ್ಲಿಂದ ಅಂಗಳಬದಿಯಲ್ಲೇ ಮುಂದಕ್ಕೆ ಹೋಗಿ ಮೆಟ್ಟಲಲ್ಲಿ ಇಳಿದು, ಗದ್ದೆಯ ಬಯಲಿಗೆ ಹೋಗಿ ಅದನ್ನು ದಾಟಬೇಕು.
ಅವರ ಮನೆಯ ಅಂಗಳದ ಹತ್ತಿರದ ಮೆಟ್ಟಲಿನ ಮತ್ತೊಂದು ಮಗ್ಗುಲಲ್ಲಿ ಒಂದು ದೊಡ್ಡ ಕೆರೆ. ಅದಕ್ಕೆ ಗುಮ್ಮಿ ಅನ್ನುತ್ತಾರೆ ಅವರು. ಬಯಲು ದಾಟಿದ ನಂತರ ಒಂದು ಸಣ್ಣ ತೋಡು. ಅಲ್ಲಿಂದ ಮುಂದಿನ ಓಣಿಯಲ್ಲಿ ಸಾಗುತ್ತಾ ಬಂದರೆ ಆ ದಾರಿ, ಹಾಲಾಡಿ ಬಂಡಸಾಲೆಯ ಪೋಸ್ಟ್ ಆಫೀಸ್ ನ ಎದುರಿಗೆ ಹಾಲಾಡಿ ರಸ್ತೆಯನ್ನು ಸೇರುತ್ತದೆ. ಆಮೇಲೆ ರಸ್ತೆಯಲ್ಲಿ ನಡೆದು ಮೂಡು ಹಾಲಾಡಿಗೆ ಬಂದು ಗೋಳೇರ ಅಂಗಡಿಗೆ ಬರಬಹುದು. ನಾನು ಸಾಮಾನ್ಯವಾಗಿ ಆ ದಾರಿಯಲ್ಲಿಯೇ ಹಾಲಾಡಿಗೆ ಬರುತ್ತಿದ್ದೆ.
ಆದರೆ ನಾನು ಬಾಲ್ಯದಲ್ಲಿ ಕಂಡ ಬಯಲಿನ ಹಸಿರು ಸಮೃದ್ಧತೆ ಎಲ್ಲೆಲ್ಲೂ ಹಸಿರುತುಂಬಿ ನಳನಳಿಸುವ ಬೆಳೆ ಈಗ ಸ್ವಲ್ಪ ಮಂಕಾದಂತೆ ಕಾಣುತ್ತದೆ. ಈಗೀಗ ರೈತರಿಗೆ ಬೇಸಾಯದ ಬಗ್ಗೆ ಅಷ್ಟೇನೂ ಆಸಕ್ತಿಯೂ ಇಲ್ಲದೇ ಬೇಕೋ ಬೇಡವೋ ಎಂದು ಬೆಳೆ ಬೆಳೆಯುತ್ತಿದ್ದಾರೆ.
ತರಕಾರಿ ಮತ್ತು ನಿತ್ಯ ಸಿಗುವ ವಸ್ತುಗಳನ್ನು ಮನೆಯಲ್ಲಿ ಬೆಳೆಯದೇ ಪೇಟೆಯಿಂದ ತರುತ್ತಿದ್ದರು. ಅತ್ತ ಸರಕಾರವೂ ರೈತರಿಗೆ ಪ್ರೋತ್ಸಾಹಧನ, ಕೃಷಿ ಸಾಲ ಇತ್ಯಾದಿಗಳ ಆಕರ್ಷಣೆಯನ್ನು ಅಂಗೈಗೆ ಹಚ್ಚಿದ ಬೆಲ್ಲದಂತೆ ತೋರಿಸುತ್ತಾ ಓಟು ಕೀಳುವ ರಾಜಕಾರಣವಾಗಿ ಬದಲಾಗುತ್ತಿತ್ತು. ನಿಜವಾಗಿ ದುಡಿದು ತಿನ್ನುವವರೂ ಕೆಲವು ಪ್ರಭಾವಿ ವ್ಯಕ್ತಿಗಳ ಹಿಂದೆ ಬಿದ್ದು ಹೇಗೆ ದುಡಿಯದೇ ಗಳಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದರು.
ಜನರಲ್ಲಿ ಪೇಟೆಯ ಆಕರ್ಷಣೆ, ಒಳಗೆ ಏನೂ ಇಲ್ಲದಿದ್ದರೂ ಹೊರಗೆ ಶೋಕಿಯಾಗಿ ಮೆರೆಯುವ ಮನೋಭಾವ ಎಲ್ಲೆಲ್ಲೂ ಕಾಣಿಸತೊಡಗಿತು.
ಆ ಸದಾಶಿವ ಡಾಕ್ಟರು ಎಂಬವರು ಯಾವುದೋ ಒಂದು ಕಡೆಯಿಂದ ನೋಡಿದರೆ ನನ್ನ ಹಾಗೆಯೇ ಕಾಣುತ್ತ ಇದ್ದರು ಅಂತ ಕೆಲವರು ಹೇಳುತ್ತಿದ್ದರು. ಆ ಮಿಣಕು ಶೆಡ್ತಿಯೂ, ಯಾವಾಗಲಾದರೂ ನಾನು ದಾರಿಯಲ್ಲಿ ದಾಟಿ ಹೋಗುವಾಗ, ಎದುರು ಸಿಕ್ಕಿದರೆ ಹೇಳುವುದಿತ್ತು.  
"ಹ್ವಾಯ್  ಅಯ್ಯ, ನಿಮ್ಮನ್ನು ಕಂಡ್ರೆ ನಂಗೆ ಆ ಸದಣ್ಣನ್ ಕಂಡಾಂಗೆ ಆತ್ ಮರ್ರೆ"
ಅಂತ.
ಸದಣ್ಣ ಅಂದರೆ ಅದೇ ಡಾಕ್ಟರರು, ಸದಾಶಿವ ಶೆಟ್ರು. ಆ ಡಾಕ್ಟ್ರು ಆವಾಗ ಅಲ್ಲಿಗೆ ಆಗಾಗ ಬರುತ್ತಿದ್ದರಲ್ಲ.
ಆದರೆ ನನಗೆ ಗೊತ್ತಿದ್ದ ಹಾಗೆ ಆ ಡಾಕ್ಟರರ ತಲೆಯ ಮುಂದಿನ ಭಾಗದ ಕೂದಲು ಉದುರಿಹೋಗಿ ಬೋಳಾಗಿತ್ತು. ಮತ್ತು ಅವರು ಸದಾ ಕನ್ನಡಕ ಹಾಕುತ್ತಿದ್ದರು. ಮತ್ತು ವಯಸ್ಸಿನಲ್ಲಿ ನನಗಿಂತ ತುಂಬಾ ಹಿರಿಯರಾಗಿದ್ದರು.
ನಾನು ಸುಮ್ಮನೇ ನಕ್ಕು ಮುಂದೆ ಹೋಗುತ್ತಿದ್ದೆ.


************




ಇದೆಲ್ಲ ಸುಮಾರು ಹತ್ತು ಹನ್ನೆರಡು ವರ್ಷದ ಹಿಂದಿನ ಕತೆ.
ಆಮೇಲೆ ನನಗೆ ಒಂದು ಸರಕಾರಿ ಕೆಲಸ ಸಿಕ್ಕಿ, ಮದುವೆಯೂ ಆಗಿ ಒಬ್ಬ ಮಗನೂ ಇದ್ದಾನೆ. ನಾವು ದೂರದ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿ, ಮತ್ತೆ ಉಡುಪಿಗೆ ಬಂದು ಸೆಟ್ಲ್ ಆಗಿದ್ದೇವೆ. ಅಮ್ಮ ಅಪ್ಪಯ್ಯ ತೀರಿಹೋದ ಮೇಲೆ ಊರಿಗೆ ಹೋಗುವುದು ತೀರಾ ಕಡಿಮೆ.
ಇದ್ದಕ್ಕಿದ್ದಂತೆ ಒಮ್ಮೆ ಮಳೆಗಾಲದಲ್ಲಿ ನನಗೆ ನಾಲ್ಕು ದಿನ ರಜೆ ಸಿಕ್ಕಿದಾಗ, ಊರಿಗೆ ಹೋಗಿ ಬರುವ ಅಂತ ಮನಸ್ಸಾಯಿತು. ಬಸ್ಸಿನಲ್ಲಿ ಹಾಲಾಡಿಗೆ ಹೊರಟೆವು. ಸಂಜೆಯ ಹೊತ್ತಿಗೆ  ಹಾಲಾಡಿಗೆ ಬಂದು, ಪೋಸ್ಟ್ ಆಫೀಸಿನ ಹತ್ತಿರ ಬಸ್ಸನ್ನು ಇಳಿದೆವು.
ಆಗಲೇ ಸಂಜೆಯಾಗುತ್ತಾ ಬಂದದ್ದರಿಂದ ಸ್ವಲ್ಪ ಸ್ವಲ್ಪ ಕತ್ತಲು ಆವರಿಸುತ್ತಿತ್ತು. ಪೂರ್ತಿ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳುವ ಎಂದು ಗಡಿಬಿಡಿಯಿಂದ ಬೇಗ ಬೇಗ ಹೊರೆಟವು. ಓಣಿಯಲ್ಲಿ ನಡೆದು, ತೋಡಿಗೆ ಹಾಕಿದ ಸಂಕವನ್ನು ದಾಟಿ, ಮುಂದಿನ ಗದ್ದೆ ಬಯಲಿನ ಕಂಟದಲ್ಲಿ ಕೆಸರಿನಲ್ಲಿ ಕಾಲನ್ನು ತೋಯಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ದಾಟಿದೆವು.
ಈಗ ಮೊದಲಿನ ಹಾಗೆ ಉತ್ಸಾಹದಿಂದ ಬೇಸಾಯವನ್ನು ಮಾಡುವವರಿಲ್ಲ. ಕೆಲವು ಗದ್ದೆಗಳು ಬೇಸಾಯ ಮಾಡದೇ ಇದ್ದು ಹಡಲು ಬಿದ್ದಿತ್ತು. ಹಿಂದೆ ಹಸಿರಿನಿಂದ ನಳನಳೆದುತ್ತಿದ್ದ ಭತ್ತದ ಗದ್ದೆಗಳೆಲ್ಲ ಈಗ ಕಳೆ ಬೆಳೆದು ಕಾಂತಿಹೀನವಾಗಿತ್ತು.
ಮಧ್ಯೆ ಮಧ್ಯೆ ಅಲ್ಲೊಂದು ಇಲ್ಲೊಂದು ಗದ್ದೆ ನಟ್ಟಿ ಮಾಡಿದ್ದರೂ ಹಿಂದಿನಂತೆ ಬೆಳೆ ನಳನಳಿಸುತ್ತಿರಲಿಲ್ಲ. ಶೆಟ್ರರ ವಿಶಾಲ ಗದ್ದೆ ಬಯಲು ಯಾವುದೋ ವೈಭವದ ಅವಶೇಷದಂತೆ ಕಾಣುತ್ತಿತ್ತು.
ಯಾರೋ ಎದುರಿನಿಂದ ಕೊಡೆಹಿಡಿದುಕೊಂಡು ಬರುತ್ತಿದ್ದರು. ಮೊದಲಾದರೆ ಗದ್ದೆಗಿ ಇಳಿದು ನಮಗೆ ದಾರಿ ಮಾಡಿಕೊಡುತ್ತಿದ್ದರು. ಈಗ ಕಂಟದ ಬದಿಯಲ್ಲಿ ಬ್ಯಸಲೆನ್ಸ್ ಮಾಡುತ್ತಾ ನಮ್ಮನ್ನು ದಾಟಿದರು. ಯಾರೋ ಪರಿಚಿತ ಮುಖ ಅನ್ನಿಸಿತು. ಅವರು ತಿರುಗಿ ನೋಡದಿದ್ದರೂ ನಾನೇ ಮಾತಾಡಿಸಿದೆ.
ಹ್ಯಾಯ್ ಇದು ನಟ್ಟಿ ಮಾಡುವ ಸಮಯ ಅಲ್ದಾ?
ಅವರು ತಿರುಗಿನಿಂತು ಉತ್ತರಿಸಿದರು,
ಹೌದು ನಿಮಗೆ ಎಲ್ಲಾಯಿತು. ಈಗ ನಟ್ಟಿಮಾಡೂಕೆ ಜನವೇ ಸಿಕ್ಕುದಿಲ್ಲೆ. ಮನೆಯಲ್ಲಿಯೂ ಒಬ್ಬೊಬ್ಬರು ಇಬ್ಬಿಬ್ಬಿರು ಇಪ್ಪುದಲ್ದೆ? ಹೆಂಗಸರೆಲ್ಲ ಬೀಡಿ ಕಟ್ಟುಕೆ ಹ್ವಾತ್ವೆ. ಗಂಡಸರು ಕಾರ್ಖಾನಿ ಕೆಲಸಕ್ಕೆ ಹ್ವಾತ್ರು. ಹಾಂಗಾಯಿ ಈಗ ನಟ್ಟಿ ಬೇಸಾಯ ಮಾಡ್ವವರೇ ಇಲ್ಲೆ.
ಮತ್ತೆ ಉಬುಕೆ?
ನೀವ್ ಎಲ್ಲಿದ್ರಿ? ಈಗ ಸರ್ಕಾರವೇ ಒಂದ್ ರುಪಾಯಿಗೆ ಬೇಕಂಬಷ್ಟು ಅಕ್ಕಿ ಕೊಡತ್ತಲೆ.
ಎಂತಹಾ ಧಗಾ.? ವಂಚನೆ. ಭೂಮಿ ತಾಯಿ ಇವರನ್ನೆಲ್ಲ ಕ್ಷಮಿಸಿಯಾಳೇ? ಬೆಂಕಿ ಬೇಂಕಿಯಾಗಿ ಉರಿದು ಇವರನ್ನೆಲ್ಲಾ ಸುಟ್ಟು ನಾಶ ಮಾಡಲಿಕ್ಕಿಲ್ಲವೇ? ಏನೋ.
ಅವರಿಗೆ ಏನೂ ಅನ್ನಿಸಲಿಲ್ಲ ಮುಂದೆ ಹೊರಟುಹೋದರು.
ಕೊಯ್ಕಾಡಿ ಶೆಟ್ಟರ ಮನೆಯ ಅಂಗಳದ ಎದುರಿನ ಮೆಟ್ಟಲುಗಳನ್ನು ಹತ್ತಿ ಮೇಲೆ ಬರುತ್ತಿದ್ದೆನಷ್ಟೆ.
ನನ್ನನ್ನು ನೋಡಿದ ಅವರ ಮನೆಯ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಕೂಗುತ್ತಾ ಓಡಿ ಬಂದು, ನನ್ನ ಮೇಲೆ ಎರಗಲು ಹಾರಿತು. ನನಗೆ ಒಮ್ಮೆಲೇ ಗಾಬರಿಯಾಯಿತು. ಸಣ್ಣಗೆ ಮಳೆಯೂ ಬರುತ್ತಿದ್ದುದರಿಂದ ನಾನು ಕೊಡೆಯನ್ನು ಹಿಡಿದಿದ್ದೆ, ಯಾವ ಧೈರ್ಯವೋ ಒಮ್ಮೆಲೇ ಕೊಡೆಯನ್ನು ಪಕ್ಕನೇ ಅಡ್ಡ ಹಿಡಿದೆ. ಆಗಲೇ ಆ ನಾಯಿ ಮುದಿಯಾಗುತ್ತಾ ಬಂದಿದ್ದು, ಬಹುಷ್ಯ ಅದರ ಗುರಿ ಸ್ವಲ್ಪ ತಪ್ಪಿದ್ದಿರಬೇಕು. ಅಥವ ನನ್ನ ಕೊಡೆಯು ಇದ್ದಕ್ಕಿದ್ದಂತೆ ಅಡ್ಡ ಬಂದುದರಿಂದ ಹೆದರಿ ಅದರ ಗತಿಯನ್ನು ಸ್ವಲ್ಪ ಬದಲಾಯಿಸಿತೋ ಏನೋ.,
ಅಂತೂ ಒಮ್ಮೆಲೇ ಹಾರಿದ ರಭಸಕ್ಕೆ ನನ್ನ ಕೊಡೆಯ ಮುಂದಿನ ಭಾಗಕ್ಕೆ ರಪಕ್ಕನೇ ಬಡಿದು, ಮುಂದಕ್ಕೆ ಜಿಗಿದು, ನನ್ನ ಮುಂಭಾಗದಿಂದ ದಾಟಿ ಎಡಬದಿಯ ದೊಡ್ಡ ಪ್ರಪಾತಕ್ಕೆ ಬಿದ್ದು ಬಿಟ್ಟಿತು. ಅದರ ತಲೆಯು ಯಾವುದೋ ಚೂಪಾದ ಕಲ್ಲಿಗೆ ಬಡಿದಿದ್ದಿರಬೇಕು. ಒಮ್ಮೆಲೇ ಅದರ ಗೌವ್ ಗೌವ್ ಸ್ವರ ಮಾಯವಾಗಿ ಕುಯ್ ಕುಯ್ ಆಗಿ ಸ್ವಲ್ಪ ಹೊತ್ತಿನಲ್ಲಿಯೇ ಅದೂ ನಿಂತು ಹೋಯಿತು.
ನಾನು ಹೆದರಿಕೆಯಿಂದ ಗಡಗಡ ನಡುಗುತ್ತಿದ್ದೆ. ನನ್ನ ಹೆಂಡತಿ ಜೋರಾಗಿ ಅಯ್ಯೋ ಏನಾಯ್ತು? ಎಂದು ಕೂಗುತ್ತಿದ್ದಳು. ಮಗ ಇನ್ನೂ ಮೆಟ್ಟಲು ಹತ್ತುತ್ತಾ ಕೆಳಗೆ ಇದ್ದವನು, ಓಡೋಡಿ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡ. ಅಷ್ಟರಲ್ಲಿ ಆ ಶೆಟ್ಟರ ಮನೆಯ ದೊಡ್ಡ ಹೆಬ್ಬಾಗಿಲನ್ನು ತೆರೆದು ಒಬ್ಬರು "ಯಾರದು? ಯಾರದು?"ಎನ್ನುತ್ತಾ ಕೈಯಲ್ಲಿ ಒಂದು ಕೊಡೆಯನ್ನು ಹಿಡಿದುಕೊಂಡು ಬಿಡಿಸುತ್ತಾ ಓಡಿಬಂದರು
ನಾನು "ಎಂತ ಮರ್ರೆ, ನಿಮ್ಮ ನಾಯಿ ನನ್ನನ್ ಕೊಲ್ತಿತ್ತಲೆ.... ಎಂದು ತೊದಲಿದೆ. ಅವರು "ಎಂತ ಆಯ್ತು ? ಎಂತ ಆಯ್ತು? ಎನ್ನುತ್ತ  ಹತ್ತಿರ ಓಡಿ ಬಂದರು. ನಾನು "ಎಂತ ಆಗಲಿಲ್ಲ ಪುಣ್ಯಕ್ಕೆ. ನಿಮ್ಮ ನಾಯಿ ಇಲ್ಲೆ ಕೆಳಗೆ ಬಿತ್ತು ಕಾಣಿ" ಎಂದು ತೊದಲಿದೆ.
“ಹೌದಾ ಮರ್ರೆ ಈಗ ಅದಕ್ಕೆ ಕಣ್ಣು ಸಮಾ ಕಾಂತಿಲ್ಯೆ?” ಎನ್ನುತ್ತಾ ಗಡಿಬಿಡಿಯಲ್ಲಿ ಅವನು ಮತ್ತೆ ಮನೆಯ ಒಳಗೆ ಹೋಗಿ, ಒಂದು ಬ್ಯಾಟರಿಯನ್ನು ತಂದ. ಅಂಗಳದ ತುದಿಯಲ್ಲಿ ನಿಂತು, ಕೆಳಗೆ ಬೆಳಕು ಬಿಟ್ಟ.
ನಾಯಿ ಪ್ರಪಾತದ ಮಧ್ಯ ಧರೆಯಲ್ಲಿ ಒಂದು ಬೇರಿಗೆ ಸಿಕ್ಕಿ ಬಿದ್ದಿತ್ತು. ಅವನು "ಟೀಪು, ಟೀಪು, ಬಾರಾ ಬಾರಾ" ಎಂದು ಕೂಗಿದ.
ಅದು ಏಳಲಿಲ್ಲ.
ಕೊನೆಗೆ “ಎಂತ ಮರ್ರೆ ? ಹೋಯ್ತಾ ಅಂತ. ಆ ಸಣ್ಣ ಶೆಟ್ರ ಸತ್ ಹೋದ ಮೇಲೆ, ಈ ನಾಯಿ ತಣ್ಣಗೆ ಆಯಿತ್. ಕೂಗುದೇ ಕೈದ್ ಮಾಡಿತ್ ಮರ್ರೆ. ಅದ್ ಇಷ್ಟ್ ಕೂಗಿದ್ದು, ನಾನ್ ಕೇಣಲೆ ಇಲ್ಲೆ" ಅಂದ.
ನಾನು ಅಷ್ಟರೊಳಗೆ ಸ್ವಲ್ಪ ಸುಧಾರಿಸಿಕೊಂಡಿದ್ದೆ.
"ಹೋ ಜಯಪ್ರಕಾಶ ಶೆಟ್ರು ತೀರಿಕೊಂಡ್ರಾ?" ಅಂದೆ.
"ಹೌದು. ಅವರು ಹೋಗಿ ಏಳೆಂಟು ವರ್ಷವೇ ಆಯ್ತಲ್ಲ ಮರ್ರೆ. ನೀವು ಯಾರು?” ಎಂದ.
ನನ್ನ ಪರಿಚಯ ಹೇಳಿ ಅವನು ಯಾರೆಂದೂ ಕೇಳಿದೆ.
ಅವನು ಅಲ್ಲಿಯ ಒಬ್ಬ ಕೂಲಿಯಾಳು. ದೊಡ್ಡ ಶೆಟ್ರು ಅಂದರೆ ಶೇಕು ಶೆಟ್ರು ಈಗ ಹಾಸಿಗೆಯಲ್ಲಿಯೇ. ಅವರಿಗೆ ಉಬ್ಬಸವಂತೆ. ಅವರನ್ನು ನೋಡಿಕೊಳ್ಳಲು ಅವನು ಇದ್ದನಂತೆ.
"ಮನೆಯಲ್ಲಿ ಬೇರೆ ಯಾರೂ ಇಲ್ಲವಾ? ಎಂದೆ. ಅವನು "ಇಲ್ಲ ಮಾರಾಯ್ರೆ. ನಾವೇ ಸೈ" ಅಂದ.
ನಾನು "ಮಿಣುಕು ಶೆಡ್ತಿಯವರು ಅಂತ ಒಬ್ರು ಇದ್ದಿದ್ರಲ್ಲ" ಅಂದೆ.
ಅದಕ್ಕೆ ಅವನು, "ಅವರು ಈಗ ಬೊಂಬಾಯಿಯಂಗೆ ಇದ್ರು. ಇಲ್ಲಿಗೆ ವರ್ಷಕ್ಕೆ ಒಂದೆರಡು ಸಲ ಬರ್ತು ಅಷ್ಟೆ" ಅಂದ.
"ಬೊಂಬಾಯಿಯಲ್ಲಿ ಅವರಿಗೆ ಯಾರು ಇದ್ದಾರೆ?" ಎಂದದ್ದಕ್ಕೆ ಅವನು,
"ಅಲ್ ಯಾರೂ ಇಲ್ಲೆ. ಆಚಿಪೇಟೆಯ ರಾಜೀವಿಗೂ, ಈ ಅಮ್ಮಂಗೂ ದೋಸ್ತಿಯಾಯ್ತು. ಅವರೇ ಕರ್ಕ್ಕೊಂಡು ಹೋದ್ರು" ಅಂದ.
ನನಗೆ ಗೊತ್ತಾಯಿತು.
ರಾಜೀವಿ ಅಂದರೆ ಹಾಲಾಡಿ ಪೇಟೆಯಲ್ಲಿ ಇರುವ ಒಬ್ಬ ಸೂಳೆಯರವಳು, ದೇವದಾಸಿ. ನಾನು ಸುಮ್ಮನಾದೆ.
ಅವನೇ ಹೇಳಿದ "ತಾನೂ, ನನ್ನ ಹೆಂಡ್ತಿಯೂ ಇಲ್ಲಿ ಇಪ್ದು. ಮಲ್ಕಂಡೆ ಇದ್ದ ಹಳೆಯ ಶೆಟ್ರಿಗೆ ಊಟ ಬೇಯಿಸಿ ಹಾಕಿ, ಮನೆ ನೋಡ್ಕಂಡ್ ಇದ್ದೊ ,ಆ ಮಿಣುಕಮ್ಮ ಶೆಡ್ತಿಯರೇ ಬೊಂಬಾಯಿಯಿಂದ ಆಗಾಗ ದುಡ್ಡು ಕಳಿಸತ್ರೆ” ಅಂದ.
ಅವನು ಪುನಃ ಏನೋ ನೆನಪಾದಂತೆ, "ಈ ನಾಯಿಗ್ ಎಂತ ಆಯ್ತು ಮರ್ರೆ!" ಎಂದು ಮತ್ತೆ ಆ ದೊಡ್ಡ ಧರೆಯ ಅಂಚಿಗೆ ಬ್ಯಾಟರಿ ಬೆಳಕನ್ನು ಬಿಡುತ್ತಾ ನೋಡಿದ.
ಕಡೆಗೆ ಮೆಲ್ಲನೆ ಕೆಳಗೆ ಇಳಿಯತೊಡಗಿದ.
ಒಂದು ಹಲಸಿನ ಮರದ ಬೇರಿಗೆ ಸಿಕ್ಕಿಹಾಕಿಕೊಂಡ ಆ ನಾಯಿ ಆಗಲೇ ಪ್ರಾಣ ಬಿಟ್ಟಿತ್ತು.
ನಾನು ಆಗಲೇ ಮಳೆಗೆ ಒದ್ದೆಯಾದ ನನ್ನ ಕನ್ನಡಕವನ್ನು ತೆಗೆದು, ಕರ್ಚೀಪಿನಿಂದ ಒರೆಸಿಕೊಂಡು, ಮುಂದೆ ಬೋಳಾಗಿದ್ದ ನನ್ನ ತಲೆಯನ್ನು ನೇವರಿಸಿಕೊಂಡೆ.
ಆಗಲೇ ಕತ್ತಲಾಗಲು ಶುರುವಾಗಿತ್ತು.
ಮಳೆಯೂ ಸಣ್ಣಗೆ ಸುರಿಯುತ್ತಿತ್ತು.
ಅವನು ಅಷ್ಟರಲ್ಲಿ ಆ ನಾಯಿಯ ಕಾಲನ್ನು ಹಿಡಿದು ಎಳೆದು ಮೇಲೆ ತಂದು ಅಂಗಳದಲ್ಲಿ ಹಾಕಿದ.
ಇನ್ ಇದನ್ ಎಂತ ಮಾಡೂದಂತ ಕಾಣಕ್ ಎಂದು ಅವನಷ್ಟಕ್ಕೇ ಹೇಳಿಕೊಂಡ.
"ಮಾರಾಯಾ, ಇಲ್ಲಿಯೇ ಕತ್ತಲಾಗಿ ಬಿಟ್ಡಿತಲ್ಲ. ನಮಗೊಂದು ಬ್ಯಾಟರಿಯಾದರೂ ಕೊಡು. ನಾಳೆ ಮತ್ತೆ ಬರುವಾಗ ವಾಪಾಸು ಕೊಡ್ತೇನೆ" ಎಂದೆ.
“ಅಕ್ಕೆ, ಒಂದ್ ಬ್ಯಾಟರಿ ಇರ್ಕ್.  ತಡೀನಿ ತಂದ್ ಕೊಡ್ತಿ” ಅಂತ ಹೇಳಿ ಅವನು ಬ್ಯಾಟರಿಯನ್ನು ತರಲು ಒಳಗೆ ಹೋದ.
ಸಣ್ಣಗೆ ಮಳೆಯಲ್ಲಿ ಸುತ್ತಲೂ ಕತ್ತಲು ಆವರಿಸುತ್ತಿತ್ತು.
  • ಮುಗಿಯಿತು  -

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ