ಮಂಗಳವಾರ, ಫೆಬ್ರವರಿ 6, 2018

ದಿನೇಶ ಉಪ್ಪೂರ:

*ನನ್ನೊಳಗೆ - 70*

ನಾನು ಚಿಕ್ಕವನಿರುವಾಗ, ನೋಡಿದ ಜೋಡಾಟ ಅಂದರೆ ಈಗಿನ ಕಾಲದಂತೆ ಇರುವ ಎರಡು ರಂಗಸ್ಥಳ ಆಸುಪಾಸು ಜೋಡಿಸಿ ಇಟ್ಟು ಮಾಡುವ ಕೂಡಾಟ ಆಲ್ಲ. ಕಲಾವಿದರು ಅವರವರೊಳಗೆ ಮಾತಾಡಿಕೊಂಡು ಒಟ್ಟಾರೆ ಕುಣಿದು ಬರೀಗೌಜು ಮಾಡಿ ಗಮ್ಮತ್ತು ಮಾಡುವ ಆಟ ಆಗಿರಲಿಲ್ಲ.  ಅಲ್ಲಿ ಆಗ ಒಂದು ತರಹದ ಯುದ್ಧದ ವಾತಾವರಣವೇ ಇರುತ್ತಿತ್ತು. ಸ್ಪರ್ಧೆ ಇತ್ತು ಏನೇ ಆದರೂ ಈ ಸಲ ಬಿಡುವುದಿಲ್ಲ ನಾವು ಕಡಿಮೆಯವರಲ್ಲ ಎಂಬ ಛಲ ಪ್ರತೀ ಕಲಾವಿದರಲ್ಲೂ ಇರುತ್ತಿತ್ತು.

ಆಗ ಆಗುತ್ತಿದ್ದ ಅಮೃತೇಶ್ವರಿ ಮತ್ತು ಸಾಲಿಗ್ರಾಮ ಮೇಳದ ಜೋಡಾಟ ಅದು ಮೇಳದ, ಕಲಾವಿದರ ಪೈಪೋಟಿ ಎಂಬುದಕ್ಕಿಂತ ಆಯಾಯ ಮೇಳಗಳ ಊರಿನವರ, ಮೇಳದ ಅಭಿಮಾನಿಗಳ ಸ್ವಾಭಿಮಾನದ ಪ್ರಶ್ನೆಯೂ ಆಗಿತ್ತು. ಈ ಸಲ ನಮ್ಮ ಮೇಳವೇ ಗೆಲ್ಲುವುದು,  ಆ ಮೇಳದಲ್ಲಿ ಇರುವವರನ್ನು ಈ ಸಲ ಒಂದು ಕೈ ನೋಡಿಯೇ ಬಿಡುವುದು ಎಂದು ಜೋಡಾಟದ ದಿನ ಬರುವವರೆಗೂ ಗುಸುಗುಸು ಮಾಡಿ ಸುದ್ದಿ ಹಬ್ಬಿಸುತ್ತಿದ್ದರು. ಪ್ರಸಂಗವನ್ನು ಎರಡು ಮೇಳದವರು ಸೇರಿಯೇ ನಿರ್ಣಯಿಸುತ್ತಿದ್ದರು. ಒಂದು ಮೇಳದವರು ಕುಣಿತ ಹೊಡ್ತ ಯುದ್ಧ ಇರುವ ಪ್ರಸಂಗ ಕೇಳಿದರೆ ಇನ್ನೊಂದು ಮೇಳಕ್ಕೆ ಬೇರೆ ಬೇರೆ ತರಹದ ವೇಷ ವಿಜೃಂಭಣೆ ಶೃಂಗಾರ ಚಮತ್ಕಾರ ಇರುವ ಪ್ರಸಂಗ ಕೇಳುತ್ತಿದ್ದರು. ತಾಮ್ರದ್ವಜ ಕಾಳಗ ನಮ್ಮದು ಎಂದರೆ ಇನ್ನೊಬ್ಬರು ವೀರಮಣಿ ಕಾಳಗ ಎನ್ನುತ್ತಿದ್ದರು. ಒಬ್ಬರು ಕೀಚಕ ವಧೆ ಅಂದರೆ ಇನ್ನೊಬ್ಬರು  ವಾಲಿ ವಧೆ ಅನ್ನುತ್ತಿದ್ದರು. ಆದರೆ ಎಲ್ಲರಲ್ಲೂ ಹುರುಪು ಉತ್ಸಾಹ. "ಬನ್ನಿ, ಈ ಸಲ ಒಂದು ಆಟ ನೋಡಲೇ ಬೇಕು ನೀವು " ಅಂತ ಕಲಾವಿದರೂ, ಏನೋ ರಹಸ್ಯ ಇರುವ ಹಾಗೆ ಗುರುತಿನವರನ್ನು ಆಟಕ್ಕೆ ಆಮಂತ್ರಿಸುತ್ತಿದ್ದರು. ತಮ್ಮ ಮೇಳವನ್ನು ಹೊಗಳಿ ಅಲ್ಲಿಗಿಂತ ನಾವೇನು ಕಮ್ಮಿ? ಅಲ್ಲಿ ಅಂತವರಿದ್ದರೆ ನಮ್ಮಲ್ಲಿ ಇಂತವರು ಇದ್ದಾರೆ ಎಂದು ಕೊಚ್ಚಿಕೊಳ್ಳುತ್ತಿದ್ದರು. ಆ ಕಲಾವಿದರು ಜೋಡಾಟಕ್ಕೆ ಹೇಳಿಸಿದವರಲ್ಲ ಎಂದು ಮತ್ತೊಂದು ಮೇಳದವರನ್ನು ದೂರುತ್ತಿದ್ದರು.

 ಸುಮಾರು ಒಂದು ತಿಂಗಳಿಂದಲೂ ತಯಾರಿ ನಡೆಸಿ, ಮೇಳದಲ್ಲಿರುವ ಎಲ್ಲ ವೇಷಗಳ ಸಾಮಾನುಗಳಿಗೆ ಬೇಗಡೆ ಹಚ್ಚುವುದು, ಆಭರಣಕ್ಕೆ ಹಚ್ಚಿದ ಮಸುಕಾದ ಕನ್ನಡಿಗಳನ್ನು ತೆಗೆದು ಹೊಸದು ಹಾಕುವುದು. ಹರಿದ ಬಟ್ಟೆಗಳನ್ನು ಹೊಲಿಸಿ, ರಿಪೇರಿ ಮಾಡುವುದು ಕೇದಗೆಮುಂದಲೆಯ ಅಟ್ಟೆಗಳನ್ನು ಸಿದ್ಧ ಮಾಡುವುದು, ಹುಲ್ಲಿನ ಜಡೆ ಮಾಡುವುದು ಹೀಗೆ. ಹೊಸಹೊಸ ಜರಿ ಸೀರೆ, ದಗಲೆ, ಕಸೆ ಸೀರೆಗಳನ್ನು ಯಜಮಾನರ ಹಿಂದೆ ಅಲೆದು ಅಲೆದು ತಲೆ ತುರಿಸಿಕೊಂಡು ಒಲಿಸಿ ಕಾಡಿಬೇಡಿ ತರಿಸಿಕೊಳ್ಳುತ್ತಿದ್ದರು. ಹೀಗೆ ಒಟ್ಟು ಹಗಲಲ್ಲೂ ನಿದ್ದೆ ಮಾಡದೇ ಈ ವರ್ಷ ಹೇಗೆ ಎದುರು ಮೇಳದವರನ್ನು ಸೋಲಿಸುವುದು ಎಂಬುದೇ ಚರ್ಚಿಯ ವಿಷಯವಾಗಿ ಕಾಲಕಳೆಯುತ್ತಿದ್ದರು.. ಹಾಗೂ ಯಾರಾದರೂ ಗುರುತಿನವರು ಸಿಕ್ಕರೆ ಎದುರು ಮೇಳದವರು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಜೋಡಾಟಕ್ಕಿಂತ ಒಂದು ವಾರದ ಹಿಂದಿನ ಎಲ್ಲ ಆಟಗಳಲ್ಲಿ ಕುಣಿದು ಕುಣಿದು ಜೋಡಾಟಕ್ಕೆ ಮೈಯನ್ನು ಹದಗೊಳಿಸುತ್ತಿದ್ದರು. ಭಾಗವತರಿಗೆ ಅಥವ ಮೇಳದ ಮೇನೇಜರ್ ಆದವರಿಗೆ  ಕಲಾವಿದರಿಗೆ ಆಯಾಯ ದಿನದ ಪ್ರಸಂಗದಲ್ಲಿ ವೇಷ ಬರೆಯುವ ಪುಸ್ತಕದಲ್ಲಿ ಜೋಡಾಟದ ದಿನ ಏನೇನು ಎಚ್ಚಿರಿಕೆ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಹಲವಾರು ಸೂಚನೆಗಳನ್ನೂ ಬರೆಯುವುದೇ ಕೆಲಸ.

ಮೇಳದ ಅಭಿಮಾನಿಗಳಿಗೂ ಅದೊಂದು ಪ್ರತಿಷ್ಠೆಯ ಪ್ರಶ್ನೆ. ತಮ್ಮ ಮೇಳ ಹಿಂದೆ ಬೀಳಬಾರದು ಅಂತ. ಅದಕ್ಕಾಗಿ ಏನೇನು ತಯಾರಿ ಆಗಿದೆ ಎಂದು ಆಗಾಗ ಬಂದು ವಿಚಾರಿಸಿಕೊಂಡುಹೋಗುವುದೂ ಇತ್ತು.

ಜೋಡಾಟದ ದಿನ ಬರುತ್ತಿದ್ದಂತೆಯೇ ಎಲ್ಲ ಕಲಾವಿದರಿಗೂ ಒಂದು ರೀತಿಯ ಉದ್ವೇಗ. ತಳಮಳ. ಮೇಳದ ಕಲಾವಿದರ ಮಕ್ಕಳಾದ ನಮ್ಮಂತವರಿಗೂ ಮಾತಾಡಲು ಅದೇ ಸುದ್ದಿ. ಈ ಸಲ ಏನಾಗುತ್ತದೋ ಅಂತ ಆತಂಕ. ಕಲಾವಿದರೆಲ್ಲರಿಗೂ ಆರೋಗ್ಯ ಸರಿ ಇರಲಪ್ಪ, ಯಾರೂ ಎರಡು ಮನಸ್ಸು ಮಾಡಿ ಜೋಡಾಟದ ದಿನ ಕೈ ಕೊಡದೇ ಇರಲಿ. ಭಾಗವತರ ಸ್ವರ ಬಿದ್ದು ಹೋಗದಿರಲಿ. ಸಾರಾಯಿ ಕುಡಿದು ಆಟಕ್ಕೆ ಕಳಪು ಹಾಕುವ ಕಲಾವಿದರು ಅಂದು ಸರಿಯಾಗಿ ಇರಲಿ  ಎಂದು ದೇವರಲ್ಲಿ ಬೇಡುತ್ತಿದ್ದೆವು. ಮೇಳದ ಪ್ರತೀ ಕಲಾವಿದರಿಂದ ಹಿಡಿದು ಟೆಂಟಿನ ಕಂಬ ಹುಗಿಯುವ ಕಾರ್ಮಿಕನವರೆಗೂ ಎಲ್ಲರೂ ಎದುರಿನ ಮೇಳದಲ್ಲಿ ಜೋಡಾಟದ ಹುರುಪಿನ ಕಲಾವಿದರಿದ್ದರೆ ಅವರೊಬ್ಬರಿಗೆ ಆದಿನ ಏನಾದರೂ ತೊಡಕು ಆಗಲಿ ಎಂದೂ ಹಾರೈಸಿ ಜಯ ನಮಗೆ ಸಿಗಬೇಕು ಅನ್ನಿಸುವಷ್ಟು ಒತ್ತಡ ಕ್ಕೊಳಗಾಗುತ್ತಿದ್ದರು.
ಆಟದ ದಿನ ಬೆಳಗ್ಗೆ ಯಾರು ಬೇಗ ಬಂದು ಆಟದ ಗರ ಪ್ರವೇಶಿಸುತ್ತಾರೆ ಎಂಬುದರಲ್ಲೂ ಪೈಪೋಟಿ. ಆಗ ಜೋಡಾಟ ಆಡಿಸುವವರು ಪೂರ್ವ ಪಶ್ಚಿಮವಾಗಿ ಎದುರು ಬದುರು ರಂಗಸ್ಥಳ ಕಟ್ಟಿಸುತ್ತಿದ್ದರು. ಈಗಿನಂತೆ ಒಂದರ ಪಕ್ಕದಲ್ಲಿ ಇನ್ನೊಂದಲ್ಲ. ಪ್ರೇಕ್ಷಕರು ಮಧ್ಯದಲ್ಲಿ ಆಚೆ ಈಚೆ ಎಲ್ಲ ಕಡೆಯಲ್ಲಿಯೂ ಕುಳಿತು ಆಟ ನೋಡಬಹುದಿತ್ತು.  ಹತ್ತಿರವಾದರೆ ನೆಲದಲ್ಲಿ ದೂರದಲ್ಲಿಯಾದರೆ ಕುರ್ಚಿ. ಮೊದಲು ಬಂದವರು ಪಶ್ಚಿಮದ ಬದಿಯ ರಂಗಸ್ಥಳವನ್ನು ಆರಿಸಿಕೊಳ್ಳುತ್ತಿದ್ದರು. ನಂತರ ಬಂದವರಿಗೆ ಉಳಿದ ಬದಿ. ಮೊದಲು ಬಂದ ಮೇಳದವರು ರಂಗಸ್ಥಳದಲ್ಲಿ ರಥ ಕಟ್ಟಿ ಸ್ಥಾಪನೆಯಾದರೆ ಸೈ. ಪಶ್ಚಿಮ ದಿಕ್ಕೇ ಏಕೆಂದರೆ ಅವರು ಪೂರ್ಭಿಮುಖವಾಗಿ ಕುಣಿಯುತ್ತಾರಲ್ಲ ಅದು ಸೂರ್ಯ ಉದಯಿಸುವ ದಿಕ್ಕು. ಪಶ್ಚಿಮಕ್ಕೆ ಮುಖ ಮಾಡಿ ಕುಣಿಯುವವರು ಸೂರ್ಯ ಮುಳುಗುವುದನ್ನು ನೋಡುವವರು ಸೋಲುವವರು ಎಂಬ ನಂಬಿಕೆ.

ಆಗಿನ ಜೋಡಾಟ ಎಂದರೆ ಈಗಿನ ಕಾಲದ ಹಾಗೆ ಹೊಂದಾಣಿಕೆಯ ಆಟವಲ್ಲ. ಏನೇ ಆಗಲಿ ನಾವು ಮೈ ಹುಡಿಮಾಡಿಕೊಳ್ಳುವುದಿಲ್ಲ ಎಂಬ ಕಲಾವಿದರಿರಲಿಲ್ಲ. ಎಲ್ಲರೂ ಶಕ್ತಿ ಮೀರಿ  ಕುಣಿಯುವವರೆ. ಮೇಳದ ಮರ್ಯಾದೆಯ ಪ್ರಶ್ನೆ. ಒಂದು ಪ್ರಸಂಗ ಏನೋ ಆಗಿ ಸೋಲುತ್ತದೆ ಅನ್ನಿಸಿದ ಕೂಡಲೇ ಆಟವನ್ನು ಓಡಿಸಿ ಮುಂದಿನ ಪ್ರಸಂಗಕ್ಕೆ ಹಾರುವುದೆ. ಎದುರಿನವರಿಗೆ ಸ್ಪರ್ಧೆಗೆ ಅವಕಾಶವೇ ಇಲ್ಲದ ಹಾಗೆ ಮಾಡುವುದೂ ಇತ್ತು.  ಏನಾದರೂ ಹೊಸದನ್ನು ತುರುಕಿಸಿ ಎದುರು ಮೇಳದ ಕಲಾವಿದರನ್ನು ತಬ್ಬಿಬ್ಬು ಮಾಡಿದರೂ ಮಾಡಿದರೆ. ಹಾಗಾಗಿ ಕೊನೆಕೊನೆಗೆ  ಮೇಳದ ಯಜಮಾನರುಗಳು ಒಂದು ಮೀಟಿಂಗ್ ಮಾಡಿ ಕೆಲವು ನಿಯಮಗಳನ್ನು ಹಾಕಿಕೊಂಡು ಅದರಂತೆ ಮಾಡಬೇಕು ಎಂದು ತೀರ್ಮಾನಿಸುವಂತಾಯಿತು. ಒಂದು ಪ್ರಸಂಗದಲ್ಲಿ ಇಂತಿಷ್ಟೇ ಪದ್ಯ ಇರಬೇಕು ಇಂತದ್ದೇ ದೃಶ್ಯ ಇರಬೇಕು  ಒಡ್ಡೋಲಗದಲ್ಲಿ ಇಂತಿಷ್ಟೇ ವೇಷ ಇರಬೇಕು ಅದರಲ್ಲೂ ಯಾವುದು ಕಿರೀಟ ಯಾವುದು ಮುಂಡಾಸು ಯಾವುದಕ್ಕೆ ಕೇದಗೆಮುಂದಲೆ ಅಂತಲೂ ನಿಯಮವಾಯಿತು. ಅಷ್ಟಾದರೂ ಒಮ್ಮೆ ಮುಂಡಾಸು ಅಂತ ಮಾತ್ರ ಇತ್ತು ಅಂತ ಒಂದು ಮೇಳದಲ್ಲಿ   ಕೆಂಪು ಮುಂಡಾಸಿನ ಬದಲು ಬಲರಾಮನಿಗೆ ಹಸಿರು ಮುಂಡಾಸು ಕಟ್ಟಿ ಎದುರು ಮೇಳದವರನ್ನು ತಬ್ಬಿಬ್ಬು ಮಾಡಿದ್ದೂ ಆಗಿತ್ತು. ಸುಧನ್ವ ಕಾಳಗದಲ್ಲಿ ಅರ್ಜುನ ಸೋತ ಕೂಡಲೆ ಕೃಷ್ಣ ಪ್ರವೇಶದ ಬದಲು ಪದ್ಯದಲ್ಲಿ ಮೊದಲರ್ಧ ಭಾಗದಲ್ಲಿರುವಂತೆ ಧರ್ಮರಾಜನನ್ನು ಸಂತೈಸಿ ಬಂದ ಎನ್ನುವ ಭಾಗಕ್ಕೆ ಧರ್ಮರಾಜನ ಯಾಗದ ದೃಶ್ಯ ಮಾಡಿ ಅವನಿಗೆ ಕೃಷ್ಣ ಧೈರ್ಯ ಹೇಳಿ ನಂತರ ಅರ್ಜುನನಲ್ಲಿ ಬರುವುದು ಒಂದು ಮೇಳದಲ್ಲಿ ಮಾಡಿದಾಗ ಆಚೆ ಮೇಳದಲ್ಲಿ ಧರ್ಮರಾಯ ಪಾತ್ರವೇ ಇಲ್ಲದೇ ಗಡಿಬಿಡಿಯಾಗಿ ಅಭಿಮಾನಿಗಳು ಗಲಾಟೆ ಮಾಡಿ ಆಟ ನಿಲ್ಲಿಸಿದ ಪ್ರಕರಣವೂ ಒಮ್ಮೆ ಆಗಿತ್ತು. ಒಮ್ಮೆ ಮೀನಾಕ್ಷಿ ಕಲ್ಯಾಣದ ಈಶ್ವರ ಬ್ಯಾಟರಿ ಯಿಂದ ಮಾಡಿದ ಬಣ್ಣಬಣ್ಣದ ಲೈಟಿನ ಚಂದ್ರನನ್ನು ಧರಿಸಿ ರಂಗಸ್ಥಳಕ್ಕೆ ಬಂದಿದ್ದ. ಹಿಂದಿನ ಸಲ ಆಚೆ ಮೇಳದಲ್ಲಿ ಗುಟ್ಟಿನಲ್ಲಿ ತಂದು ಮೂರು ಚಂಡೆ ಭಾರಿಸಿದ ಎಂದು ಮುಂದಿನ ಸಲ  ಈ ಮೇಳದಲ್ಲಿ ಯಾರನ್ನೆಕಾಡಿ ಬೇಡಿ ಏಳು ಚಂಡೆಗಳನ್ನು ತಂದು ಸಾಲಾಗಿ ಇಟ್ಟು ನಿಂತುಕೊಂಡು ಹೊಡೆದು ವಿಕ್ರಮ ಸಾಧಿಸಿದ್ದಾಯಿತು.

 ಆಗ ಮೇಳದ ಅಭಿಮಾನಿಗಳೂ ಅಷ್ಟೆ ಮೇಳ ಸೋಲುತ್ತದೆ ಅಂತ ಅನಿಸಿದ ಕೂಡಲೆ ಏನಾದರೂ ಸಣ್ಣ ಪುಕಾರು ತೆಗೆದು ಎದುರು ಬಂದು ನಿಲ್ಲಿಸಿ ನಿಲ್ಲಿಸಿ ಅಂತ ಬೊಬ್ಬೆ ಹೊಡೆದಾಯಿತು. ಆಟ ನಿಂತ ಮೇಲೆ ಒಂದಷ್ಟು ಜನ ಸೇರಿದರು. ಜೋಡಾಟಕ್ಕೆ ನಿಯೋಜಿಸಿದ ನಿರ್ಣಾಯಕರಿಗೆ ಆಟದ ಕಲಾವಿದರ ಸ್ಪರ್ಧೆಯನ್ನು ನಿಯಂತ್ರಿಸುವುದರ ಜೊತೆಗೆ ಇಂತವರನ್ನು ಸುಧಾರಿಸುವುದೂ ಒಂದು ಕೆಲಸ ಆಗುತ್ತಿತ್ರು. ಕಲಾವಿದರಲ್ಲಿ ಕುಮಚಟ್ಟು ಮಂಡಿ ದಿಗಣ ಹೊಡೆದು ಹೊಡೆದು ತಾ ಮೇಲು ತಾ ಮೇಲು ಅಂತ ಕುಣಿಯುವಾಗ ಈ ನಿರ್ಣಾಯಕರು ಗಂಟೆ ಹೊಡೆದು ನಿಲ್ಲಿಸಲು ಸೂಚನೆ ಕೊಡುತ್ತಾರೆ. ಕೆಲವು ಸಲ ಗಂಟೆ ಹೊಡೆದರೂ ಕಲಾವಿದರೂ ಕೇಳದಿದ್ದಾಗ, ಎರಡೂ ರಂಗಸ್ಥಳ ದ ಮಧ್ಯಬಂದು ಅವರು ಕೂಗ ಬೇಕಾಗುತ್ತಿತ್ತು. ಆಗ ಈ ಮೇಳದ ಅಭಿಮಾನಿಗಳೂ ನುಗ್ಗುವುದಿತ್ತು.

  ನಾವು ಜೋಡಾಟಕ್ಕೆ ಹೋಗುವುದು ಅಂತಹ ಸ್ವಾರಸ್ಯಗಳು ನಡೆಯುತ್ತದೆ ಅಂತಲೇ ಆಗಿತ್ರು. ತಮ್ಮ ತಮ್ಮ ಮೇಳದ ಅಭಿಮಾನಿಗಳಿಗೆಂದೇ ಮುಂದಿನ ಸಾಲಿನಲ್ಲಿ ಒಂದಷ್ಟು ಸೀಟುಗಳನ್ನು ಕಾಯ್ದಿರಿಸುತ್ತಿದ್ದರು. ಜೋಡಾಟದಲ್ಲಿ ಬರೀ ಭಾಗವತರ ಬೊಬ್ಬೆ ಚಂಡೆ ಮದ್ದಲೆಗಳ ಗದ್ದಲ ಅಂತ ಅನ್ನಿಸಿದರೂ ಪ್ರಸಂಗ ಗೊತ್ತಿರುವುದೇ ಆಗುತ್ತಿದ್ದರಿಂದ ಕಲಾವಿದರು ಯಾವ ಪದ್ಯಕ್ಕೆ ಹೇಗೆ ಕೆಲಸ ಮಾಡಿದರು ಎಷ್ಟು ಕುಣಿದರು ಏನು ಹೊಸತನ್ನು ಮಾಡಿ ವಿಸ್ಮಯ ಸೃಷ್ಟಿಮಾಡಿದರು ಎಂದೇ ನೋಡಲು ಜನ ಹೋಗುವುದು. ಪದ್ಯಕ್ಕೆ ಅರ್ಥ ನೆಪಕ್ಕೆ ಮಾತ್ರ ಆಚೆಯ ಮೇಳದ ಕಲಾವಿದರು ಮುಂದಿನ ಪದ್ಯಕ್ಕೆ ಹೋದರೆ ಇವರು ಆಚೆ ನೋಡಿಕೊಂಡು ಅರ್ಥವನ್ನೇ ಹಾರಿಸಿಬಿಟ್ಟು ಮುಂದಿನ ಪದ್ಯ ಎತ್ತು ಗಡಿ ಮಾಡುತ್ತಿದ್ದರು.  ಪದ್ಯದ ಮಧ್ಯ ಆಚೆಯವರು ಮಂಡಿ ಹಾಕಿ ಸ್ಪರ್ಧೆಗೆ ಕರೆದರೆ ಇವರು ಅಲ್ಲಿಯೇ ಮಂಡಿಹಾಕಲು ಕುಳಿತಾಯಿತು. ಒಂದು ಮೇಳದವರು ಆಟ ಓಡಿಸಿದರೆ ಇನ್ನೊಂದು ಮೇಳದವರು ಅವರನ್ನು ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದರು. ರಾತ್ರಿ ಕತ್ತಲೆಯಲ್ಲಿ ಒಂದು ಮೇಳದ ಕಲಾವಿದರು ಮುಸುಕು ಹಾಕಿಕೊಂಡು ಮತ್ತೊಂದು ಮೇಳದ ಚೌಕಿಗೆ ಮೆಲ್ಲನೆ ನುಸುಳಿ ಬಂದು ಇವರು ಏನು ಮಾಡುತ್ತಿದ್ದಾರೆ ಮುಂಡಾಸಿಗೆ ಎಷ್ಟು ಅಟ್ಟೆ ಇರಿಸುತ್ತಾರೆ? ರತಿಕಲ್ಯಾಣದಂತ ಪ್ರಸಂಗ ಆದರೆ  ದಿಬ್ಬಣ ಅಂತ ಎಷ್ಟು ಜನ ಸೇರಿಸುತ್ತಾರೆ?. ಎಂದು ತಿಳಿದುಕೊಂಡು ಹೋಗಿ, ಅದನ್ನೇ ಅಲ್ಲಿಯೂ ಮಾಡುತ್ತಿದ್ದರು ಅಥವ ಅವರಿಗಿಂತ ನಾವು ಅಡ್ಡಿಲ್ಲ ಎಂದು ತೀರ್ಮಾನಿಕೊಳ್ಳುತ್ತಿದ್ದರು.

ರತಿ ಕಲ್ಯಾಣ ಮೀನಾಕ್ಷಿ ಕಲ್ಯಾಣದಂತಹ ಪ್ರಸಂಗಗಳಲ್ಲಿ ದಿಬ್ಬಣಕ್ಕೆ ಅಡುಗೆಯಮನೆಯ ಪಾತ್ರೆಗಳು ಚರಿಗೆ ಹಂಡೆಗಳು ಸೌಟು ಸಟ್ಟಗಗಳು ಚೌಕಿಯ ವಸ್ತ್ರದ ಗಂಟುಗಳೆಲ್ಲ ರಂಗಸ್ಥಳಕ್ಕೆ ಬರುತ್ರಿದ್ದವು. ರತಿಕಲ್ಯಾಣದ ದೂತ ದ್ರೌಪದಿಯ ಚಂಡಿಯ ರೂಪವನ್ನು ಕಂಡು ಆ ದಿನ ಒಂದರ ಮೇಲೆ ಒಂದು ಚೌಕಿಯಲ್ಲಿ ಇದ್ದ ಎಲ್ಲ ದಗಲೆ ಅಂಗಿಗಳನ್ನು ಹಾಕಿಕೊಂಡು ಬಂದು ರಂಗಸ್ಥಳದಲ್ಲೇ ಚಂಡಿಯ ಮೇಲೆ ಒಂದೊಂದರಂತೆ ಎಸೆದು ಕೊನೆಗೆ ಬರೀ ಮೈಯಲ್ಲಿ ಓಡುತ್ತಿದ್ದ. ಏನಾಗುತ್ತದೆ ಎಂದು ಕ್ಷಣಕ್ಷಣಕ್ಕೂ ಕುತೂಹಲ. ಅಂತೂ ಬೆಳಿಗ್ಗೆಯವರೆಗೆ ಆಟ ಆಗಿ ಆಟ ಮುಗಿಯಿತು ಅಂತ ಆಗಿ ಬೆಳಿಗ್ಗೆ ಯಜಮಾನರಿಂದ ವೀಳ್ಯ ಪಡೆಯುವುದರಲ್ಲೂ ತಾಮುಂದು ತಾಮುಂದು ಅಂತ ಪೈಪೋಟಿ.

ಅದೊಂದು ಸಂಭ್ರಮ ಕೊನೆಗೆ ನಿರ್ಣಾಯಕರು ಯಾರನ್ನೂ ಬಿಡಲಾರದೇ ಒಂದುಪ್ರಸಂಗ ಅವರು ಗೆದ್ದರು ಇನ್ನೊಂದು ಇವರದೇ ಮೇಲಾಯಿತು ಎಂದು ತೀರ್ಮಾನಿಸುತ್ತಿದ್ದರು. ಆ ಜೋಡಾಟದ ಸುದ್ಧಿಯು ಆಟ ಮುಗಿದು ತಿಂಗಳುಗಟ್ಟಲೆಯವರೆಗೂ ಕಲಾಭಿಮಾನಿಗಳ ಮಾತಿಗೆ ವಿಷಯವಾಗಿರುತ್ತಿತ್ತು.

ನಿನ್ನೆ ತೊಟ್ಟಂ ಎಂಬಲ್ಲಿ ಆದ ನೀಲಾವರ ಮತ್ತು ಸಿಗಂದೂರು ಮೇಳದ ಜೋಡಾಟಕ್ಕೆ ನಾನು ಎಸ್ ವಿ ಭಟ್ಟರ ಜೊತೆಗೆ ಹೋಗಿದ್ದೆ. ದಾರಿಯಲ್ಲಿ ಚರ್ಚಿಸಿದ ಸಂಗತಿಗಳನ್ನು ನನ್ನ ಅನುಭವದ ಜೊತೆಗೆ ಇಲ್ಲಿ ಅಳವಡಿಸಿಕೊಂಡಿದ್ದೇನೆ. ಇದನ್ನು ಓದಿದ ಭಟ್ಟರು ಬೆಳಿಗ್ಗಿನ ವೀಳ್ಯ ಹಿಡಿಯುವ ಸಂಗತಿಯನ್ನು ಇನ್ನೂ ವಿವರವಾಗಿ ತಿಳಿಸಿದರು. ಬೆಳಿಗ್ಗೆ ಆಟ ಮುಗಿದ ತಕ್ಷಣ ಮಂಗಳ ಪದ್ಯ ಹೇಳಿದ ಕೂಡಲೇ ರಂಗಸ್ಥಳದಲ್ಲಿ ಕುಣಿಯುತ್ತಿದ್ದ ಸ್ತ್ರೀ ವೇಷದವರು ಮುಕ್ತಾಯದ ಕೊನೆಯಲ್ಲಿ ಎರಡೂ ರಂಗಸ್ಥಳದ ಮಧ್ಯ ಇದ್ದು ಎರಡೂ ಕೈಯಲ್ಲಿ  ವೀಳ್ಯಹಿಡಿದು ಆದರೆ ಕೈಯನ್ನು ಆಚೆ ಈಚೆ ಮಾಡಿ ಕತ್ತರಿಯಂತೆ ಎಡಕೈಯನ್ನು ಬಲಬದಿಯಲ್ಲೂ ಬಲಕೈಯನ್ನು ಎಡಬದಿಗೂ ಹಿಡಿದು ನಿಂತ ಯಜಮಾನರತ್ತ ರಭಸದಿಂದ ಹಾರಿ ಹೋಗಿ ಅವರ ಬಲಕೈಯಲ್ಲಿ ಹಿಡಿದ ವೀಳ್ಯವನ್ನು ತೆಗೆದುಕೊಂಡು ಹೋದವರು ಗೆದ್ದಂತೆ ಎಂದು ತೀರ್ಮಾನ. ಅದಕ್ಕೆ ಅದನ್ನು ಕತ್ತರಿ ವೀಳ್ಯ ಹಿಡಿಯುವುದು ಎಂದು ಮತ್ತೂ ವಿವರವನ್ನು ತಿಳಿಸಿದ್ದಾರೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ