ಬುಧವಾರ, ಫೆಬ್ರವರಿ 7, 2018

ದಿನೇಶ ಉಪ್ಪೂರ:

*ನನ್ನೊಳಗೆ -72*

ಕಷ್ಟ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ. ಕಷ್ಟ ಬಂದಾಗ ನಮ್ಮ ಬದುಕೇ ಮುಗಿಯಿತು ಎಂದು ಹತಾಶರಾಗಿ  ಕುಳಿತರೆ ಬದುಕು ಮುಗಿದೇ ಹೋಗುತ್ತದೆ. ಅದರ ಬದಲು ತೋಚಿದ ಮಾರ್ಗದಲ್ಲಿ ಮುನ್ನುಗ್ಗಿ ಹೋರಾಟಕ್ಕಿಳಿದರೆ ಒಂದಲ್ಲ ಒಂದು ಮಾರ್ಗ ಸಿಕ್ಕಿಯೇ ಸಿಗುತ್ತದೆ.

ಅದು 2003 ನೇ ಜನವರಿ ತಿಂಗಳು. ನಾನು ಮುಲ್ಕಿಯಿಂದ ಸಹಾಯಕ ಲೆಕ್ಕಾಧಿಕಾರಿಯಾಗಿ ಆಫೀಸರ್ ಎಂಬ ಹಣೆಪಟ್ಟಿಯೊಂದಿಗೆ ಪ್ರೊಮೋಶನ್ ಪಡೆದು, ಉಡುಪಿಗೆ ಬಂದು ವರದಿ ಮಾಡಿಕೊಂಡಿದ್ದೆ. ನನಗೆ ಬಹಳ ಕುಷಿಯಾಗಿತ್ತು. ನಾನು ಕೆಲಸಕ್ಕೆ ಹಾಜರಾದ ಸ್ಥಳಕ್ಕೇ ನಾನು ಮೇಲಧಿಕಾರಿಯಾಗಿ ಬಂದಿದ್ದೆ. ಅಲ್ಲಿಯ ಕಪಾಟು ತೆಗೆಯುವಾಗ ಒಂದು ರೀತಿಯ ಪುಳಕ. ನನ್ನ ಹಿಂದಿನ ಬಾಸ್ ಗಳ ಕೈಬರಹ ಇರುವ ಪೈಲ್ ಗಳು ರಿಜಿಸ್ಟರ್ ಗಳನ್ನು ಮುಟ್ಟಿ ಮುಟ್ಟಿ ನೋಡಿದೆ. ನನ್ನ ಮೇಲಧಿಕಾರಿಗಳು ನನ್ನಿಂದ ಕೆಲಸ ಮಾಡಿಸುತ್ತ, ನಾನು ಗೌರವದಿಂದ ಪಕ್ಕದಲ್ಲಿ ನಿಲ್ಲುತ್ತಿದ್ದ ಜಾಗದಲ್ಲಿ ನಾನೀಗ ವಿರಾಜಮಾನನಾಗಿದ್ದೇನೆ. ಮಾಹಾಮಹಾ ಬಾಸ್ ಗಳು ಅನ್ನಿಸಿಕೊಂಡ  ಮೆಲ್ವಿಲ್ ಪಿಂಟೋ, ಗೋಪಾಲಕೃಷ್ಣ, ಮನೋಹರ ಬೈಲೂರ್, ಮಾಧವ ರಾವ್ ವೆಂಕಟಗಿರಿ‌ ಮೊದಲಾದ ಘಟಾನುಘಟಿಗಳು ಕುಳಿತು, ಮೆರೆದ  ಸಿಂಹಾಸನ(ಕುರ್ಚಿ) ಅದು. ಈಗ ನಾನೇ ಅಲ್ಲಿಯ ಅಧಿಕಾರಿ. ಹಿಂದೆ ನಾನು ಗುಮಾಸ್ತನಾಗಿದ್ದಾಗ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ನಾಗಪ್ಪ, ಪ್ರಸನ್ನ, ಶಾರದಾ ಯಶೋದಮ್ಮ ಅಂತ ಹತ್ತಾರು ಮಂದಿ ಇನ್ನೂ ಅಲ್ಲಿಯೇ ಇದ್ದು, ಅದೇ ಕೆಲಸ ಮಾಡುತ್ತಾ ಇದ್ದಾರೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಅವರಿಗೆಲ್ಲ ಈಗ ನಾನೇ ಬಾಸ್ ಆಗಿದ್ದೆ. ಅದಕ್ಕಿಂತ ಸ್ವಾರಸ್ಯವಾದದ್ದೆಂದರೆ ಅಲ್ಲಿ ಹಿಂದೆ ನನ್ನ ಕೆಲಸದ ಮೇಲ್ವಿಚಾರಕರಾಗಿ ಅಕೌಂಟೆಂಟ್ ಆಗಿದ್ದ ಲಕ್ಷ್ಮ ನಾಯಕ್ ಎಂಬವರಿಗೂ ಈಗ ನಾನೇ ಬಾಸ್. ಮೊದಮೊದಲು ಸ್ವಲ್ಪ ಕಷ್ಟವಾಯಿತು. ಆಮೇಲೆ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡು ಅವರು ನನ್ನನ್ನೇ "ಸರ್ ಸರ್" ಅನ್ನತೊಡಗಿದರು. ನಾನೇ, "ನೀವು ನನಗೆ ಸರ್ ಅನ್ನಬೇಡಿ ಮಾರಾಯ್ರೆ. ನನಗೆ ಮುಜುಗರವಾಗುತ್ತದೆ.  ಹೆಸರು ಹಿಡಿದು ಕರೆಯಿರಿ ಅಡ್ಡಿಲ್ಲ" ಎನ್ನುತ್ತಿದ್ದೆ.

ಅದೊಂದು ದೊಡ್ಡ ಸೆಕ್ಷನ್, ಆಗ ಸುಮಾರು ನಲವತ್ತು ಐವತ್ತು ಸಿಬ್ಬಂದಿಗಳು ಒಟ್ಟಿಗೇ ಅಲ್ಲಿ ಕೆಲಸ ಮಾಡುತ್ತಿದ್ದರು. ಅದು ಇಡೀ ಉಡುಪಿ ಜಿಲ್ಲಾ ವ್ಯಾಪ್ತಿಯ ಆ ವಿಭಾಗಕ್ಕೇ ಹೆಚ್ಚು ರೆವೆನ್ಯೂ ತರುತ್ತಿದ್ದ ಹಾಗೂ ಹೆಚ್ಚು ಸಮಸ್ಯೆಯೂ ಇದ್ದ ಮತ್ತು ಪ್ರಭಾವೀ ವ್ಯಕ್ತಿಗಳು ಎಲ್ಲದಕ್ಕೂ ತಲೆತೂರಿಸುತ್ತಿದ್ದ ಆಫೀಸು. ದೊಡ್ಡ ಆಫೀಸಿನ ಹತ್ತಿರವೇ ಇರುವುದರಿಂದ ಎಲ್ಲ ಪರಿಶೀಲನಾ ಅಧಿಕಾರಿಗಳಿಗೆ ಹತ್ತಿರವಿದ್ದ ಸುಲಭದಲ್ಲಿ  ಬಂದು ಪರಿಶೀಲನೆಯ ಹೆಸರಲ್ಲಿ ಕಡತಗಳನ್ಬು ಜಾಲಾಡಲಿಕ್ಕೆ ಸಿಗುತ್ತಿದ್ದ ಸ್ಥಳವಾಗಿತ್ತು. ಹೇಳಿಕೇಳಿ  ಉಡುಪಿ ಕೃಷ್ಣನ ಪುಣ್ಯಕ್ಷೇತ್ರವಾದ್ದರಿಂದ  ಕೃಷ್ಣನನ್ನು ನೋಡಲು ಟೂರ್ ಹಾಕಿಸಿಕೊಂಡು ಬರುವ ಆಫೀಸರ್ ಗಳಿಗೂ ಕೊರತೆಯಿರಲಿಲ್ಲ. ಅವರನ್ನೂ ಉಪಚರಿಸಬೇಕಿತ್ತು. ನನ್ನ ಮೇಲಧಿಕಾರಿಗಳಾಗಿದ್ದ ಜಯಸೂರ್ಯ ಎನ್ನುವವರೂ ಒಬ್ಬ ಒಳ್ಳೆಯ ದಕ್ಷ ಅಧಿಕಾರಿಗಳಾಗಿದ್ದರು.

ನಾನು ಅಲ್ಲಿ ರಿಪೋರ್ಟ್ ಮಾಡಿಕೊಂಡ ಮರುದಿನವೋ ಅಥವ ಅದರ ಎರಡನೆಯ ದಿನವೋ, ಒಂದು ದುರ್ಘಟನೆ ನಡೆದು ಹೋಯಿತು. ನಮ್ಮ ಆಫೀಸಿನವರೇ ಆದ ಒಬ್ಬರ ಮದುವೆಗೆಂದು, ಬ್ರಹ್ಮಾವರಕ್ಕೆ ನಮ್ಮದೇ ಆಫೀಸು ಜೀಪಿನಲ್ಲಿ ಆರೇಳು ಮಂದಿ ಹೋಗುತ್ತಿದ್ದಾಗ, ನಮ್ಮ ಜೀಪ್ ಡ್ರೈವರ್ ನ ನಿರ್ಲಕ್ಷ್ಯದಿಂದ, ಮುಂದಿನಿಂದ ಬರುತ್ತಿದ್ದ ಲಾರಿಗೆ ಗುದ್ದಿ ಆಕ್ಸಿಡೆಂಟ್ ಆಯಿತು. ಆ ಡ್ರೈವರ್ ಕುಡಿದಿದ್ದ. ಸದಾನಂದ ಶೆಟ್ಟಿ ಎಂತ ಅವನ. ಹೆಸರಿರಬೇಕು. ಅವನಿಗೆ ಹೆಚ್ಚು ಪೆಟ್ಟಾಗಲಿಲ್ಲ. ಆದರೆ ನಮ್ಮ ಆಫೀಸಿನ ಶಾರದಾ ಎನ್ನುವ ಒಬ್ಬ ಮಹಿಳಾ ಸಿಬ್ಬಂದಿಯ ಬಲಕೈ ಮುರಿದು ನೇತಾಡತೊಡಗಿತು. ಕೈಯಿಯ ಮಾಂಸ ಮೂಳೆ ಎಲ್ಲ ಹೊರಗೆ ಬಂದಿತ್ತು, ಕೂಡಲೇ ಮಣಿಪಾಲ ಕ್ಕೆ ಕರೆದುಕೊಂಡು ಹೋಗಿ, ಸೇರಿಸಿದರು. ಆ ಬಲಕೈಯ ಮೂಳೆಯ ಒಂದು ಭಾಗ ಆಕ್ಸಿಡೆಂಟ್ ಆದ ಜಾಗದಲ್ಲಿಯೇ ಬಿದ್ದು ಹೋಗಿದ್ದು, ಅದು ಸಿಕ್ಕದೇ ಇರುವುದರಿಂದ ಅವರ ಬಲಕೈ ಊನವೇ ಆಯಿತು. ಪೋಲಿಸ್ ಕೇಸ್ ಆಯಿತು. ಆ ಡ್ರೈವರ್ ಗೆ ಶಿಕ್ಷೆಯಾಗಿ ವರ್ಗಾವಣೆಯೂ ಆಯಿತು.
ನಾಲ್ಕಾರು ತಿಂಗಳ ನಂತರ, ಆಪೀಸಿನಲ್ಲಿ ಗುಮಾಸ್ತೆಯಾಗಿದ್ದು ಬರೆಯುವ ಕೆಲಸವೇ ತನ್ನ ಜೀವನಾಧಾರವಾಗಿದ್ದ ಬಲ ಕೈಯನ್ನು ಕಳೆದುಕೊಂಡ ಶಾರದಾ, ಆಪೀಸಿಗೇ ಬರಲು ಒಪ್ಪಲಿಲ್ಲ. ಬನ್ನಿ ಅಂದರೆ, ನನಗೆ ಬರೆಯಲಿಕ್ಕೇ ಆಗುವುದಿಲ್ಲ ಸರ್ ಬಂದು ಏನು ಮಾಡಲಿ ಎಂದು ಕಣ್ಣೀರು ಹಾಕುವುದೊಂದೇ ಮಾಡುತ್ತಿದ್ದರು. ನಾನು ಅವರಿಗೆ  ಪೋನ್ ಮಾಡಿ, “ಸುಮ್ಮನೇ ರಜೆ ಮುಂದುವರಿಸಬೇಡಿ. ಆಫೀಸಿಗೆ ಬನ್ನಿ. ಏನಾದರೂ ಮಾಡುವ” ಎಂದು ಧೈರ್ಯ ಹೇಳಿದೆ.

ಹಿಂದೆ ಹೀಗೆಯೇ ನಾನು ಅದೇ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹಿರಿಯ ಅಕೌಂಟೆಂಟ್ ಆಗಿದ್ದ ಅವರು, ಅದೂ ಇದು ಕೆಲಸ ಮಾಡುತ್ತಾ ಕೆಲಸದ ಮೇಲ್ವಿಚಾರಣೆ ಮಾಡುತ್ತಾ ಇದ್ದರು. ಆಗಿನ ನಮ್ಮ ಬಾಸ್ ಒಬ್ಬರು ಅವರಿಗೆ  "ನಿಮಗೆ ಆಗುವುದಿಲ್ಲ ನೀವು ರಜೆಯ ಮೇಲೆ ಹೋಗಿ, ಸ್ವಯಂನಿವೃತ್ತಿಯನ್ನು ತೆಗೆದುಕೊಳ್ಳಿ. ಆಫೀಸಿಗೆ ಬರಬೇಡಿ" ಎಂದು ಬೆದರಿಸಿ ಬೆದರಿಸಿ ಬಲವಂತವಾಗಿ ಮನೆಗೆ ಕಳಿಸಿದ್ದರು. ಅದು ನನ್ನ ಮನಸ್ಸಿನಲ್ಲಿ ಉಳಿದಿತ್ತು. ಅವರು ಇಪ್ಪತ್ತು ಇಪ್ಪತೈದು ವರ್ಷ ತನ್ನನ್ನು ತೊಡಗಿಸಿಕೊಂಡು ಜೀವವನ್ನು ತೇದದಕ್ಕೆ ಅಷ್ಟು ನಿಷ್ಟುರವಾಗಿ ನಡೆದುಕೊಳ್ಳುರವುದು ಸರಿಯೇ? ಎಂಬ ವಿಚಾರ ಮನಸ್ಸನ್ನು ಕಾಡುತ್ತಿತ್ತು.

ನನ್ನ ಒತ್ತಾಯಕ್ಕೆ ಶಾರದಾ ರವರು ಕೆಲಸಕ್ಕೆ ಬರಲು ಶುರುಮಾಡಿದರು. ನಾನು ಕೆಲವುದಿನ ಅವರನ್ನು ಸುಮ್ಮನೇ ಕುಳ್ಳಿರಿಸಿದ್ದರೂ, ಸಣ್ಣಪುಟ್ಟ ಕೆಲಸ ಎಡಕೈಯಲ್ಲಿ ಮಾಡಬಹುದಾದ ಕೆಲಸವನ್ನು ಅವರು ಮಾಡಿದರು. "ಮನೆಯಲ್ಲಿ ಇದ್ದರೆ ನಿಮಗೆ ಹುಚ್ಚೇ ಹಿಡಿದೀತು. ಈ ಆಫೀಸ್ ನ ವಾತಾವರಣದಲ್ಲಿದ್ದರೆ ಬೇಡ ಎಂದರೂ ಸುಧಾರಿಸುತ್ತೀರಿ" ಎನ್ನುತ್ತಿದ್ದೆ. "ಆದರೆ ನೀವು ಸುಮ್ಮನೇ ಕುಳಿತುಕೊಳ್ಳಬಾರದು ನಿಮಗೆ ಪುರಸೊತ್ತಿರುವಾಗಲೆಲ್ಲ ಎಡಕೈಯಲ್ಲಿ ಅಆಇಈ ಎಬಿಸಿಡಿ ಇತ್ಯಾದಿ ಬರೆಯುತ್ತಾ ಇರಿ. ಅದನ್ನು ತಿದ್ದಿರಿ ಎನ್ನುತ್ತಿದ್ದೆ‌. ಅವರು ಮನೆಯಲ್ಲೂ ಅದನ್ನು ಮಾಡಿದರು.

ಆಗ, ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದ,ನನ್ನ ಅಣ್ಣ ರಮೇಶ ಎಂಬವನು, ಅವನ ಸುಮಾರು ನಲವತ್ತೈದು ವರ್ಷ ವಯಸ್ಸಿಗೇ ಅವನಿಗೆ ತನ್ನ ಬಲ ಹೆಬ್ಬೆರಳು ಮಡಚಲು ಆಗದ ಪರಿಸ್ಥಿತಿ ಬಂದು ಬರೆಯಲೇ ಆಗುತ್ತಿರಲಿಲ್ಲ.. ಆಗ ಬರೆಯುವುದೇ ಉದ್ಯೋಗವಾಗಿದ್ದ ಅವನಿಗೆ ಕೈಯಲ್ಲಿ ಬರೆಯಲು ಆಗದೇ ಇದ್ದು ಸಮಸ್ಯೆಯಾದರೂ ಅವನು ದೃತಿಗೆಡಲಿಲ್ಲ. ಎರಡೇ ಎರಡು ತಿಂಗಳಲ್ಲಿ ಎಡಕೈಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿ, ಬಲಕೈಯಲ್ಲಿ ಬರೆಯುತ್ತಿದ್ದಂತೆಯೇ ಬರೆಯಲು ಛಲತೊಟ್ಟು ಅಭ್ಯಾಸ ಮಾಡಿ ಯಶಸ್ಸನ್ನು ಪಡೆದ. ಆ ನನ್ನ ರಮೇಶಣ್ಣಯ್ಯನ ಉದಾಹರಣೆಯನ್ನು ಅವರಿಗೆ ಕೊಟ್ಟು ನೀವು ಮನಸ್ಸು ಮಾಡಿದರೆ ಮುಂಚಿನಂತೆ ಬರೆಯಲು ಆಗುತ್ತದೆ ಎಂದು ಹುರಿದುಂಬಿಸಿದೆ. ಅವರೂ ಉದಾಸೀನ ಮಾಡಲಿಲ್ಲ. ಹಠಹಿಡಿದು ಸ್ವಲ್ಪ ಸಮಯದಲ್ಲೇ ಎಡಕೈಯಲ್ಲಿಯೇ ಬರೆಯಲು ಕಲಿತರು.

ಆದರೆ ಆಗಲೇ ನಮ್ಮಲ್ಲಿ ಎಲ್ಲ ಕಂದಾಯ ಲೆಕ್ಕಗಳೂ ಕಂಪ್ಯೂಟರೈಶೇನ್ ಆಗುತ್ತಿದ್ದು, ಮತ್ತೊಂದು ಸಮಸ್ಯೆ ಶುರುವಾಯಿತು. ಆಗ ಎಲ್ಲರಿಗೂ ಹೊಸದಾಗಿದ್ದ ಕಂಪ್ಯೂಟರನ್ನೂ ಅವರು ಎಡಕೈಯಲ್ಲೇ ಕಲಿಯಬೇಕಾಯಿತು. ಟೈಪಿಂಗ್ ಬರುತ್ತಿರಲಿಲ್ಲವಾದ್ದರಿಂದ  ನಾವೆಲ್ಲ ಮಾಡುವಂತೆ ಯಾವುದಾದರೂ ಕೈಯ ಒಂದೇ ಬೆರಳಲ್ಲೇ ಕುಟ್ಟಿಕುಟ್ಟಿ ಟೈಪ್ ಮಾಡಿದರೆ ಸಾಕಾಗಿತ್ತು.  ಅದನ್ನು ಒಂದೇ ಬೆರಳಲ್ಲಿ ಕೀ ಬೋರ್ಡನ್ನು ಒತ್ತಿ ಒತ್ತಿ ಅವರೂ ಕಲಿತುಕೊಂಡರು.ಎಡಗೈಯಲ್ಲೇ ಮೌಸ್ ಹಿಡಿದರು.

 ಹೀಗೆ ಅವರು ಜೀವನವೇ ಮುಗಿದು ಹೋಯಿತು ಎಂದು ನಿರಾಶೆಯಿಂದ ದುಃಖಿಸಿ ಹಲುಬುತ್ತಿದ್ದ ಕಾಲಕ್ಕೆ, ನಾನು ತುಂಬಿದ ಧೈರ್ಯದಿಂದ ನನ್ನ ಸಹಕಾರದಿಂದ ಮತ್ತೆ ಅವರು ದುಡಿಯುವಂತಾಗಿದ್ದು ಅವರು ನನ್ನನ್ನು ಈಗಲೂ ನೆನಪಿಸಿಕೊಳ್ಳುತ್ತಾರೋ ಇಲ್ಲವೋ ನನಗಂತೂ ನಾನು ಸರಿಯಾದುದನ್ನೇ ಮಾಡಿದ್ದೇನೆ ಅಂತ ಭಾವಿಸುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ